Homeಕರ್ನಾಟಕಎ.ಕೆ ಸುಬ್ಬಯ್ಯನವರ ಹೋರಾಟದ ಹಾದಿ...

ಎ.ಕೆ ಸುಬ್ಬಯ್ಯನವರ ಹೋರಾಟದ ಹಾದಿ…

- Advertisement -
- Advertisement -

ಪತ್ರಿಕೆಯ ಹಿತೈಷಿಗಳೂ, ಗೌರಿ ಸ್ಮಾರಕ ಟ್ರಸ್ಟ್ ನ ಪೋಷಕರಲ್ಲೊಬ್ಬರಾಗಿದ್ದ ಎ.ಕೆ.ಸುಬ್ಬಯ್ಯನವರು ಕರ್ನಾಟಕದ ಅತ್ಯಂತ ವಿಶಿಷ್ಟ ಪ್ರಾಮಾಣಿಕ ರಾಜಕಾರಣಿಗಳಲ್ಲೊಬ್ಬರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ, ಸಾಮಾಜಿಕವಾಗಿ ಸಕ್ರಿಯರಾಗಿದ್ದರು. ಇಂದು ನಿಧನರಾದ ಅವರಿಗೆ ‘ಪತ್ರಿಕೆ’ಯು ತನ್ನ ಶ್ರದ್ಧಾಂಜಲಿ ಅರ್ಪಿಸಬಯಸುತ್ತದೆ. ಅವರ ದೀರ್ಘಕಾಲದ ಒಡನಾಡಿ ಮನುಶೆಣೈ ಅವರು ಎ.ಕೆ.ಸುಬ್ಬಯ್ಯನವರ ಕುರಿತು ಬರೆದಿದ್ದಾರೆ.

ಕರ್ನಾಟಕ ರಾಜ್ಯ ಕಂಡ ಶ್ರೇಷ್ಠ ಸಂಸದೀಯ ಪಟುಗಳಲ್ಲಿ ಒಬ್ಬರು ಎ.ಕೆ. ಸುಬ್ಬಯ್ಯ. ತನ್ನ ಜೀವಮಾನದುದ್ದಕ್ಕೂ ಹಲವಾರು ಜನಪರ ಹೋರಾಟಗಳನ್ನು ಸಂಘಟಿಸಿ, ಭಾಗವಹಿಸಿ ಯಶಸ್ಸನ್ನು ಕಂಡವರು. ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ಕಂಬದಕಡ ಹೋರಾಟ, ಬರಪೊಳೆ ಹೋರಾಟ, ಇವರ ಆರಂಭಿಕ ದಿನದ ಹೋರಾಟಗಳಾಗಿದ್ದವು. ಕೊಡಗಿನ ಜ್ವಲಂತ ಸಮಸ್ಯೆಯಾಗಿ ಇಂದಿಗೂ ಕಾಡುತ್ತಿರುವ ಬಾಣೆ ಜಮೀನಿಗೆ ಸಂಬಂಧಪಟ್ಟಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟವನ್ನು ನಡೆಸುವ ಮೂಲಕ ಕೊಡಗಿನ ಜನತೆಗೆ ಕಾಡುತ್ತಿದ್ದ ಜಮ್ಮಾ ಬಾಣೆ ಸಮಸ್ಯೆ ಒಂದು ಹಂತಕ್ಕೆ ನಿವಾರಿಸಿಕೊಟ್ಟಿದ್ದಾಗಿತ್ತು.

ಕೊಡಗು ಜಿಲ್ಲೆಯ ಹುದಿಕೇರಿಯ ಕೋಣಗೇರಿ ಗ್ರಾಮದಲ್ಲಿ 9-8-1934ರಲ್ಲಿ ಜನಿಸಿದ ಇವರು, ಸಣ್ಣ ಪ್ರಾಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಬೇರೊಂದು ವಿವಾಹ ಮಾಡಿಕೊಂಡಿದ್ದರಿಂದ ಹರಿಹರ ಗ್ರಾಮದ ತನ್ನ ಮಾವನ ಮನೆಯಲ್ಲಿ ಬೆಳೆದವರು ಎ.ಕೆ. ಸುಬ್ಬಯ್ಯ. ಅಲ್ಲಿ ದನ ಮೇಯಿಸಿಕೊಂಡು ಇದ್ದ ಬಾಲಕ ಸುಬ್ಬಯ್ಯರವರಿಗೆ ಯಾರೂ ಕೂಡ ಶಾಲೆಗೆ ಹೋಗಲು ಹೇಳಲಿಲ್ಲ. ತನ್ನ ಸ್ವಇಚ್ಛೆಯಿಂದ ಅವರು 1943ರ ವೇಳೆಯಲ್ಲಿ ಹರಿಹರ ಗ್ರಾಮದಲ್ಲಿ ಶಾಲೆಗೆ ಸೇರಿ, ಟಿ.ಶೆಟ್ಟಿಗೇರಿ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಹಾಗೂ ಆ ನಂತರ ಹುದಿಕೇರಿಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸಿದ್ದರು.

ಇಂಟರ್‍ಮೀಡಿಯೇಟ್‍ನ್ನು ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಮುಗಿಸಿದ ನಂತರ ಅವರು ಶಿಕ್ಷಕರಾಗಿ ಸೋಮವಾರಪೇಟೆ ತಾಲೂಕಿನ ಗೆಜ್ಜೆಹನಗೋಡಿನಲ್ಲಿ ಕೆಲವು ಸಮಯ ಕಾರ್ಯ ನಿರ್ವಹಿಸಿದ್ದರು. ಆ ನಂತರ ಮಡಿಕೇರಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಹುದ್ದೆಯಲ್ಲಿ ಸ್ವಲ್ಪ ಸಮಯ ಕಾರ್ಯ ನಿರ್ವಹಿಸಿದ್ದರು. ಆ ವೇಳೆಯಲ್ಲಿ ನಡೆದ ಒಂದು ಸಣ್ಣ ಘಟನೆ ಅವರ ಮನಸ್ಸಿಗೆ ನೋವು ತಂದಿತ್ತು. ಹಾಗಾಗಿ ಆ ನೌಕರಿಯನ್ನೂ ತ್ಯಜಿಸಿ, ಮಡಿಕೇರಿಯಲ್ಲಿ ಬಿ.ಎಸ್ಸಿಗೆ ಸೇರ್ಪಡೆಗೊಂಡರು. ಅಲ್ಲಿ ಹಾಸ್ಟೆಲ್‍ನ ಅವ್ಯವಸ್ಥೆಯ ಕುರಿತು ಹೋರಾಟಗಳನ್ನು ಅವರು ಸಂಘಟಿಸಿದ್ದರು. ಇದರ ಪರಿಣಾಮವಾಗಿ ಅವರಿಗೆ ಎರಡನೇ ವರ್ಷದ ಬಿ.ಎಸ್ಸಿಗೆ ಅವಕಾಶ ದೊರೆತಿರಲಿಲ್ಲ. ಇದರ ವಿರುದ್ಧ ಅವರು ಉಪಕುಲಪತಿಗಳನ್ನು ಭೇಟಿಯಾಗಿ ಮನವಿಯನ್ನು ನೀಡಿ, ಮತ್ತೆ ಅವಕಾಶವನ್ನು ಪಡೆದಿದ್ದರು. ಆದರೆ ಮುಂದೆ ಅವರು ಶಿಕ್ಷಣವನ್ನು ಶಾರದಾವಿಲಾಸ ಕಾಲೇಜು ಮೈಸೂರಿನಲ್ಲಿ ನಡೆಸಿದ್ದರು. ಅಲ್ಲಿಯೇ ಅವರು ಕಾನೂನು ಶಿಕ್ಷಣವನ್ನು ಕೂಡ ಪಡೆದು ವಕೀಲರಾದರು.

ವಿದ್ಯಾರ್ಥಿಯಾಗಿದ್ದ ವೇಳೆಯಲ್ಲಿಯೇ 1958ರಲ್ಲಿ ವಿಧಾನಸಭೆಗೆ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಎ.ಕೆ. ಸುಬ್ಬಯ್ಯ ಪಿ.ಎಸ್.ಪಿ. ಪಕ್ಷದ ಪ್ರಮುಖ ಪ್ರಚಾರಕರಾಗಿದ್ದರು. ಮತ್ತು ಪಿ.ಎಸ್.ಪಿ. ಅಭ್ಯರ್ಥಿ ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಆಯ್ಕೆಯಾಗಲು ಪ್ರಮುಖ ಕಾರಣಕರ್ತರಾಗಿದ್ದರು.

1964ರಲ್ಲಿ ಅವರು ವಿರಾಜಪೇಟೆಯಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಆಗಲೇ ಅವರು ಜನಸಂಘದತ್ತ ಆಕರ್ಷಿತರಾಗಿ, ಜನಸಂಘದ ಸಂಘಟನೆಗೆ ತೊಡಗಿದ್ದರು. ಅವರ ಸಂಘಟನಾ ಸಾಮಥ್ರ್ಯವನ್ನು ಕಂಡ ಜನಸಂಘದ ಹಾಗೂ ಸಂಘ ಪರಿವಾರದ ಪ್ರಮುಖರು ಅವರನ್ನು ಕರ್ನಾಟಕ ವಿಧಾನ ಪರಿಷತ್ತಿಗೆ 1968ರಲ್ಲಿ ಕೊಡಗು-ಮಂಗಳೂರು-ಮೈಸೂರು ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು, ಅವರು ಆಯ್ಕೆಯಾಗಿದ್ದರು. ಆ ನಂತರ ಅವರು 1974, 1980ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಆ ನಂತರ ಒಂದು ಅವಧಿಗೆ ಅವರನ್ನು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್‍ನಿಂದ ಕಳುಹಿಸಲಾಗಿತ್ತು.

1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಮೊದಲು ಬಂಧಿತರಾದ ರಾಜಕೀಯ ವ್ಯಕ್ತಿ ಎ.ಕೆ.ಸುಬ್ಬಯ್ಯ ಆಗಿದ್ದರು. ಅವರನ್ನು ರಾಜಕೀಯ ಕೈದಿ ಎಂದು ಪರಿಗಣಿಸಲಾಗಿತ್ತು. 1977ರಲ್ಲಿ ತುರ್ತು ಪರಿಸ್ಥಿತಿ ರದ್ದಾಗಿದ್ದರೂ, ಕೆಲವು ದಿನಗಳ ಕಾಲ ಜೈಲಿನಲ್ಲಿ ಇದ್ದರು. ಕೊನೆಯಲ್ಲಿ ಬಿಡುಗಡೆಗೊಂಡ ವ್ಯಕ್ತಿಯಾಗಿದ್ದರು. ಆ ನಂತರ ಅವರು ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರದ ಜನತಾ ಪಕ್ಷದಿಂದ ಮಹಾಮೈತ್ರಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸಣ್ಣ ಅಂತರದಲ್ಲಿ ಜನಾರ್ದನ ಪೂಜಾರಿಯವರ ವಿರುದ್ಧ ಸೋಲು ಅನುಭವಿಸಿದ್ದರು. 1979ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ ಸ್ಪರ್ಧಿಸಿ ಎಂ.ಸಿ.ನಾಣಯ್ಯನವರ ವಿರುದ್ಧ ಸೋಲನ್ನು ಅನುಭವಿಸಿದ್ದರು.

ಒಟ್ಟು ನಾಲ್ಕು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು, 1980ರ ವೇಳೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದ ಆ ಅವಧಿಯಲ್ಲಿ ಸುಬ್ಬಯ್ಯನವರು, ಅರಸುರವರಿಗೆ ಸಿಂಹಸ್ವಪ್ನವಾಗಿದ್ದರು. ಒಂದು ಹಂತದಲ್ಲಿ ವಿಧಾನ ಪರಿಷತ್ತನ್ನು ರದ್ದು ಮಾಡುವ ಆಲೋಚನೆಯೂ ಸರಕಾರಕ್ಕೆ ಬಂದಿತ್ತು. ಆ ವೇಳೆಗಾಗಲೇ ಸುದ್ಧಿ ಸುಬ್ಬಯ್ಯ ಎಂದು ಸುಬ್ಬಯ್ಯನವರು ತಮ್ಮ ಹರಿತ ನಾಲಿಗೆಯ ಮೂಲಕ ಚಿರಪರಿಚಿತರಾಗಿದ್ದರು.

ಕೊಡಗಿನವರೇ ಆದ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅವರ ಸರಕಾರದ ಇಬ್ಬರು ಸಚಿವರುಗಳಾದ ರೇಣುಕಾ ರಾಜೇಂದ್ರನ್ ಹಾಗೂ ಕೆ.ಎಂ.ಇಬ್ರಾಹಿಂರವರ ರಾಜಿನಾಮೆಗೆ ಕಾರಣರಾಗಿದ್ದರು. ರೇಣುಕಾ ರಾಜೇಂದ್ರನ್‍ರವರು ಉದ್ಯೋಗವೊಂದನ್ನು ಕೊಡಿಸಲು 25 ಸಾವಿರ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಕೆ.ಎಂ.ಇಬ್ರಾಹಿಂರವರ ರೊಲೆಕ್ಸ್ ವಾಚ್ ಹಗರಣ ಅವರನ್ನು ಸಚಿವ ಸ್ಥಾನದಿಂದ ರಾಜಿನಾಮೆ ನೀಡುವಂತೆ ಮಾಡಿತ್ತು.

1983-84ರಲ್ಲಿ ಎ.ಕೆ.ಸುಬ್ಬಯ್ಯನವರು ಭಾರತೀಯ ಜನತಾಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದರು. ಕ್ರಾಂತಿ ರಂಗ ಸಾಕಷ್ಟು ಸ್ಥಾನವನ್ನು ಗಳಿಸಿತ್ತು. ಅಂದು ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಬಿಜೆಪಿಯ ಬಾಹ್ಯ ಬೆಂಬಲವನ್ನು ನೀಡಿದ್ದರು. ಸರಕಾರ ರಚನೆಗೆ ಬಿಜೆಪಿಯ ಶಾಸಕರ ಬೆಂಬಲ ಅಗತ್ಯವಾಗಿತ್ತು ಮತ್ತು ಆಗ ತಮ್ಮ ಪಕ್ಷ ವಿರೋಧ ಪಕ್ಷವಾಗಿಯೇ ಇರುತ್ತದೆ. ಸರಕಾರದಲ್ಲಿ ಪಾಲುದಾರ ಆಗುವುದಿಲ್ಲ. ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದ್ದರು. ಅಂದು ಅವರು ಬಯಸಿದ್ದರೆ ಉಪಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳೂ ಇತ್ತು.

ರಾಮಕೃಷ್ಣ ಹೆಗಡೆಯವರಿಗೆ ಎ.ಕೆ.ಸುಬ್ಬಯ್ಯ ನುಂಗಲಾರದ ತುತ್ತಾಗಿದ್ದರು. ಅವರ ಹಲವಾರು ಹಗರಣಗಳನ್ನು ಬಯಲಿಗೆಳೆದಿದ್ದರು. ಪ್ರಮುಖವಾಗಿ ಬಾಟ್ಲಿಂಗ್ ಹಗರಣ, ಭರತ್ ಹೆಗಡೆ ಪ್ರಕರಣ, ಫೋನ್ ಕದ್ದಾಲಿಕೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಬಯಲಿಗೆಳೆದದ್ದು ರಾಮಕೃಷ್ಣ ಹೆಗಡೆಯವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಅದೇ ಸಂದರ್ಭದಲ್ಲಿ ಎ.ಕೆ.ಸುಬ್ಬಯ್ಯನವರಿಗೂ, ಡಾ. ರಾಜ್‍ಕುಮಾರ್ ಅಭಿಮಾನಿಗಳಿಗೂ ಸಂಘರ್ಷ ಉಂಟಾಗಿ, ಎ.ಕೆ.ಸುಬ್ಬಯ್ಯನವರ ಮೇಲೆ ರಾಜ್‍ಕುಮಾರ್ ಅಭಿಮಾನಿಗಳು ಹಲ್ಲೆ ನಡೆಸುವ ಹಂತಕ್ಕೆ ತಲುಪಿದ್ದರು. ಇದನ್ನು ಯಶಸ್ವಿಯಾಗಿ ಸುಬ್ಬಯ್ಯನವರು ನಿಭಾಯಿಸಿದ್ದರು.
ಆರ್.ಎಸ್.ಎಸ್.ನ ಜೊತೆಯ ಸಂಘರ್ಷದಿಂದಾಗಿ ಸುಬ್ಬಯ್ಯನವರನ್ನು ಬಿಜೆಪಿಯಿಂದ ಹೊರ ಹಾಕಲಾಗಿತ್ತು. ಆರ್.ಎಸ್.ಎಸ್. ವಿರುದ್ಧ ಬಹಿರಂಗವಾಗಿ ಸಂಘರ್ಷವನ್ನು ಸುಬ್ಬಯ್ಯನವರು ಮಾಡುತ್ತಿದ್ದ ಕಾರಣ, ಆ ವೇಳೆಯಲ್ಲಿ ರಾಜ್‍ಕುಮಾರ್ ಅಭಿಮಾನಿಗಳು, ರಾಮಕೃಷ್ಣ ಹೆಗಡೆ ಸರಕಾರ ಹಾಗೂ ಆರ್.ಎಸ್.ಎಸ್. ಒಟ್ಟಾಗಿ ದಾಳಿ ನಡೆಸುತ್ತಿತ್ತು. ಇವೆಲ್ಲವನ್ನೂ ನಿಭಾಯಿಸಿಕೊಂಡು ಬಂದುದ್ದೇ ಅಲ್ಲದೆ, ಕನ್ನಡ ನಾಡು ಎಂಬ ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿದರು. ಆದರೆ ಆ ಪಕ್ಷ ಹೆಚ್ಚು ಕಾಲ ಬಾಳಲಿಲ್ಲ. ಆಗ ಸುಬ್ಬಯ್ಯನವರ ಜೊತೆಯಲ್ಲಿದ್ದವರು ಹಲವರು ಮತ್ತೆ ಬಿಜೆಪಿಗೆ ಸೇರಿಕೊಂಡರು.

ಆ ನಂತರ ಸುಬ್ಬಯ್ಯನವರು 1987ರ ವೇಳೆಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ್ದರು. 1993ರ ವೇಳೆಯಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಒಡೆದ ಸಂದರ್ಭದಲ್ಲಿ ಸುಬ್ಬಯ್ಯನವರು ಸಮಾನ ಮನಸ್ಕರೊಂದಿಗೆ ರಾಜ್ಯದಾದ್ಯಂತ ಸೌಹಾರ್ದ ಪ್ರವಾಸವನ್ನು ಕೈಗೊಂಡಿದ್ದರು.

ಕೊಡಗು ಮತ್ತು ಕರ್ನಾಟಕದಲ್ಲಿ ಹಲವಾರು ಹೋರಾಟಗಳನ್ನು ತೀರಾ ಇತ್ತೀಚಿನವರೆಗೂ ಅವರು ನಡೆಸುತ್ತಾ ಬಂದಿದ್ದಾರೆ. ಕೊಡಗು ಜಿಲ್ಲೆಯ ದಿಡ್ಡಳ್ಳಿಯ ಭೂಮಿ ವಸತಿ ವಂಚಿತರ ಹೋರಾಟದ ಪ್ರಮುಖ ರೂವಾರಿ ಸುಬ್ಬಯ್ಯನವರಾಗಿದ್ದರು. ಸಂವಿಧಾನ ಉಳಿಸಿ ಹೋರಾಟದಲ್ಲಿಯೂ ಅವರು ಭಾಗಿಯಾಗಿದ್ದರು. ತಮ್ಮ ಆರೋಗ್ಯ ತೀರಾ ಹದಗೆಟ್ಟಿದ್ದರೂ, ಹೋರಾಟದ ತುಡಿತ ಅವರಲ್ಲಿ ಕಡಿಮೆಯಾಗಿರಲಿಲ್ಲ. ಕೋಮು ಸೌಹಾರ್ದ ವೇದಿಕೆಯಿಂದ ಮೊದಲ್ಗೊಂಡು, ಸಂವಿಧಾನ ಉಳಿಸಿ ಹೋರಾಟ, ರಾಜ್ಯದ ಹಲವು ಹೋರಾಟಗಳಲ್ಲಿ ಹೆಚ್.ಎಸ್ ದೊರೆಸ್ವಾಮಿಯವರ ಜೊತೆಯಲ್ಲಿ ಕೂಡಿಕೊಂಡು ಭಾಗಿಯಾಗಿದ್ದರು. ಹಲವಾರು ಹೋರಾಟಗಾರರಿಗೆ ಆಳುವ ಸರಕಾರ ಕಿರುಕುಳ ನೀಡಿದಾಗ ಅವರ ಪರವಾಗಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೋರಾಟಗಳನ್ನು ಕೂಡ ನಡೆಸಿದ್ದರು. ಒಬ್ಬ ವಿಶಿಷ್ಟ ರಾಜಕಾರಣಿ, ಹೋರಾಟಗಾರರನ್ನು ಕನ್ನಡ ನಾಡು ಕಳೆದುಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...