ಕೇಂದ್ರ ಸರ್ಕಾರವು ಹಿಂದಿ ಭಾಷೆಯ ಪ್ರಚಾರಕ್ಕಾಗಿ ಪ್ರತಿವರ್ಷ ಸೆಪ್ಟಂಬರ್ 14ರಂದು ಆಚರಿಸುವ ಹಿಂದಿ ಭಾಷಾ ದಿನಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತವು ಒಕ್ಕೂಟ ರಾಷ್ಟ್ರವಾಗಿದ್ದು ಇಲ್ಲಿ ಸಂವಿಧಾನ ಮಾನ್ಯತೆ ದೊರಕಿರುವ 22 ಭಾಷೆಗಳು ಸಹ ಭಾರತೀಯ ಭಾಷೆಗಳೆ. ಹಾಗಾಗಿ 22 ಭಾಷೆಗಳನ್ನು ಸೇರಿಸಿ ಭಾರತ ಭಾಷಾ ದಿವಸವನ್ನಾಗಿ ಆಚರಿಸಬೇಕೆಂದು ಕನ್ನಡಿಗರು ಆಗ್ರಹಿಸಿದ್ದಾರೆ.
ಈ ಕುರಿತು ಸೆಪ್ಟೆಂಬರ್ 5 ರಂದು ಟ್ವಿಟ್ಟರ್ ಅಭಿಯಾನಕ್ಕೆ ಕರೆ ನೀಡಿದ್ದು “ಒಕ್ಕೂಟ ರಾಷ್ಟ್ರದ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇಲ್ಲಿ ಹಿಂದಿ ಹೇರಿಕೆ ಸಹಿಸುವುದಿಲ್ಲ. ಹಾಗಾಗಿ ಟ್ವಿಟ್ಟರ್ ಮೂಲಕ ದೊಡ್ಡ ಮಟ್ಟದಲ್ಲಿ ವಿರೋಧ ದಾಖಲಿಸೋಣ” ಎಂದು ಹಲವು ಕನ್ನಡಪರ ಸಂಘಟನೆಗಳು ಮನವಿ ಮಾಡಿದ್ದಾರೆ.
ನಮ್ಮದು ಹಿಂದಿ ಒಕ್ಕೂಟ ರಾಷ್ಟ್ರವಲ್ಲ. ಎಲ್ಲಾ ಭಾಷೆಗಳಿಗೂ ತಮ್ಮದೇ ಆದ ಮಹತ್ವವಿದೆ. ಹಾಗಾಗಿ ನಮ್ಮೆಲ್ಲರ ತೆರಿಗೆ ಹಣದಿಂದ ಒಂದು ಭಾಷೆಯ ಪ್ರಚಾರ ಮತ್ತು ಹೇರಿಕೆ ಮಾಡುವುದನ್ನು ನಾವು ಒಪ್ಪುವುದಿಲ್ಲ ಎಂದಿರುವ ಕನ್ನಡಿಗರು, ಹಿಂದಿ ಬಿಟ್ಟು ಉಳಿದ ಭಾಷೆಗಳ ಪ್ರಚಾರಕ್ಕೆ ಕೇಂದ್ರ ಸರ್ಕಾರವೇಕೆ ಮುಂದಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಹಾಗಾಗಿ ಸರ್ಕಾರಕ್ಕೆ ಮುಂಚಿತವಾಗಿಯೇ ಎಚ್ಚರಿಸಲು ಸೆಪ್ಟಂಬರ್ 05 ರಂದು #wedontwanthindidivas #wewantBharataBhashadivasa ಹ್ಯಾಷ್ ಟ್ಯಾಗ್ ಬಳಸಿ ಟ್ರೆಂಡ್ ಮಾಡಬೇಕೆಂದು ಕರೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಕನ್ನಡಿಗರ ಹಕ್ಕೊತ್ತಾಯಕ್ಕೆ ಮಣಿಯದಿದ್ದಲ್ಲಿ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಂದಿ ಭಾಷಾ ದಿನವನ್ನು ಆಚರಿಸುತ್ತಿರುವುದು ಸರಿಯಾದ ಕ್ರಮ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ.