Homeಕರ್ನಾಟಕಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್ ರಾಷ್ಟ್ರಪತಿಗಳಿಗೆ ಬರೆದ ಮನ ಮುಟ್ಟುವ ಪತ್ರ

ಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್ ರಾಷ್ಟ್ರಪತಿಗಳಿಗೆ ಬರೆದ ಮನ ಮುಟ್ಟುವ ಪತ್ರ

- Advertisement -
- Advertisement -

ಕೇಂದ್ರ ಸರ್ಕಾರ ವಿಬಿಜಿ- ರಾಮ್ ಜಿ 2025 ಕಾನೂನನ್ನು ವಾಪಸ್ ಪಡೆಯಬೇಕು ಹಾಗೂ ನರೇಗಾ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್‌ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದೆ. 

2026 ಫೆಬ್ರವರಿ 2ನೇ ತಾರೀಖಿನಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಉಳಿಸಿ ಆಂದೋಲನದ ಭಾಗವಾಗಿ ನಡೆದ ಮನ್ರೇಗಾ ರಕ್ಷಣಾ ಒಕ್ಕೂಟ- ಕರ್ನಾಟಕ ವತಿಯಿಂದ ಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್ ನಲ್ಲಿ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. 

ಪತ್ರದ ಪೂರ್ಣ ಪಠ್ಯ

ಮಾನ್ಯ ರಾಷ್ಟ್ರಪತಿಗಳೇ,

ಬಹಳ ನೋವು ಮತ್ತು ಆತಂಕದ ಜೊತೆ ತಮಗೆ ನಾವು ಈ ಪತ್ರ ಬರೆಯುತ್ತಿದ್ದೇವೆ. 2026 ಫೆಬ್ರವರಿ 2ರ, ಈ ಸೋಮವಾರ, ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ 10 ಸಾವಿರಕ್ಕಿಂತ ಹೆಚ್ಚು ಗ್ರಾಮೀಣ ಕೃಷಿ ಕಾರ್ಮಿಕರು ಈ ಮಹಾ ಪಂಚಾಯತ್‌ ನಲ್ಲಿ ಸೇರಿದ್ದೇವೆ. ಇಲ್ಲಿಂದಲೇ ತಮಗೆ ಈ ಒತ್ತಾಯ ಪತ್ರವನ್ನು ಸಿದ್ಧಪಡಿಸಿ ಕಳುಹಿಸುತ್ತಿದ್ದೇವೆ. ನಮ್ಮ ಸಂಕಷ್ಟಕ್ಕೆ ನೀವು ಕೂಡಲೇ ಸ್ಪಂದಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. 

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನು 2005 ಜಾರಿಯಾಗಿ ಇಂದಿಗೆ 20 ವರ್ಷಗಳಾದವು. ಕೆಲಸಕ್ಕಾಗಿ ಒದ್ದಾಡುತ್ತಿರುವ ಕೂಲಿಕಾರರಿಗೆ ತಮ್ಮ ತಮ್ಮ ಊರುಗಳಲ್ಲಿಯೇ ಕನಿಷ್ಟ ಕೂಲಿಯೊಂದಿಗೆ ಉದ್ಯೋಗ ಸಿಗಬೇಕೆಂಬ ಸರಳವಾದ ತತ್ವದ ಮೇಲೆ ಜಾರಿಗೊಂಡ ಕಾನೂನು ಇದು. ಈ ಕಾನೂನಿನ ಇನ್ನೊಂದು ಮುಖ್ಯ ಆಶಯವೇನೆಂದರೆ ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಪರಿಸರದ ರಕ್ಷಣೆಯಾಗಿ ಅವೇ ಮುಂದೆಯೂ ಕೂಡ ಸ್ಥಳೀಯ ಜನರಿಗೆ ಉದ್ಯೋಗವನ್ನು ಕೊಡುತ್ತಿರಬೇಕು ಎಂಬುದು. ಗ್ರಾಮಗಳಲ್ಲಿನ ಕೆರೆಗಳು, ಕಾಲುವೆ, ಹಳ್ಳಗಳ ಹೂಳು ತೆಗೆದು ಅವುಗಳಲ್ಲಿ ಹೆಚ್ಚುಕಾಲ ನೀರು ನಿಲ್ಲುವಂತೆ ಮಾಡುವುದು, ಮಣ್ಣಿನ ಸಂರಕ್ಷಣೆಯಾಗಿ ರೈತರ ಹೊಲಗಳಲ್ಲಿಯೂ ಕೂಡ ಹೆಚ್ಚೆಚ್ಚು ಕೆಲಸ ಸೃಷ್ಟಿಯಾಗಬೇಕು. ಸಂವಿಧಾನದ 73ನೇ ತಿದ್ದುಪಡಿಗೆ ರೆಕ್ಕೆ ಮೂಡಿಸಿದ ಈ ಕಾನೂನು ನಿಜ ಅರ್ಥದಲ್ಲಿ ಪಂಚಾಯತಿ ರಾಜ್‌ನ್ನು ಜಾರಿಯಲ್ಲಿ ತಂದಿತು. ಸ್ಥಳೀಯ ಕೆಲಸಗಳ ಕುರಿತು ಸ್ಥಳೀಯವಾಗಿಯೇ, ಸ್ಥಳೀಯ ಜನರ ಸಮ್ಮುಖದಲ್ಲಿಯೇ ಚರ್ಚೆಗಳಾಗಿ ಗ್ರಾಮಸಭೆಯಲ್ಲೇ ನಿರ್ಧಾರವಾಗುವುದು, ಒಟ್ಟಾರೆಯಾಗಿ ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್‌ದ ಕಲ್ಪನೆಯಿಂದ ಆಯ್ದ ಆಶಯಗಳಿವು. ಜಾತಿ, ಲಿಂಗ, ಅಧಿಕಾರಸ್ಥರ ನಿಯಂತ್ರಣ ಇವೆಲ್ಲವನ್ನೂ ಮೀರಿ ಉದ್ಯೋಗವನ್ನು ಜನರ ಹಕ್ಕಾಗಿಸಿ ಜಾರಿಗೊಂಡ ಕಾನೂನಿದು.

ಇಡೀ ದೇಶದಲ್ಲಿ ಇದುವರೆಗೆ 26 ಕೋಟಿ ಜನರು ಉದ್ಯೋಗ ಖಾತರಿಯಲ್ಲಿ ನೋಂದಣಿ ಮಾಡಿಕೊಂಡಿದ್ದು ಕರ್ನಾಟಕದಲ್ಲಿ ನೋಂದಾಯಿತರ ಸಂಖ್ಯೆ 1.79 ಕೋಟಿಯಾಗುತ್ತದೆ. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿಗೆ ಮಹಿಳೆಯರೇ ಕೆಲಸ ಮಾಡುತ್ತಾರೆ, 30% ಜನರು ದಲಿತರು ಮತ್ತು ಆದಿವಾಸಿಗಳಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಗ್ರಾಮೀಣ ಜನಕ್ಕೆ ಉದ್ಯೋಗ ಕೊಟ್ಟ ಕಾನೂನು ವರ್ಷದಿಂದ ವರ್ಷಕ್ಕೆ ಮತ್ತೂ ಗಟ್ಟಿಯಾಗುತ್ತ ಹೋಗಬೇಕಿತ್ತು. ಆದರೆ ಬಿಜೆಪಿ ಸರಕಾರವು 11 ವರ್ಷಗಳಿಂದಲೂ ಈ ಕಾನೂನನ್ನು ಸಡಿಲಗೊಳಿಸುತ್ತ, ಕೇಂದ್ರ ಸರಕಾರದ ನಿರ್ಬಂಧವನ್ನು ಹೆಚ್ಚೆಚ್ಚು ಹೇರುತ್ತ, ಅದಕ್ಕೆ ಹಣಕಾಸಿನ ಬೆಂಬಲ ನೀಡದೆ ಸಕಾಲದಲ್ಲಿ ಜನರಿಗೆ ಹಣ ದೊರೆಯದಂತೆ ಮಾಡುತ್ತ ಬಂದಿದೆ. ಹೆಚ್ಚಿದ ಡಿಜಿಟಲೀಕರಣದಿಂದಾಗಿ  ಕೆಲಸ ಮಾಡಿದವರಿಗೆ ಸಂಬಳ ಸಿಗದಂತಾಯಿತು, ಕೋಟಿಗಟ್ಟಲೆ ಜನರ ಉದ್ಯೋಗ ಚೀಟಿಗಳೇ ಇಲ್ಲವಾದವು. ಇಷ್ಟು ಸಮಸ್ಯೆ ಇದ್ದರೂ ಕೂಡ ಕರ್ನಾಟಕದಲ್ಲಿ ಲಕ್ಷಗಟ್ಟಲೆ ಕುಟುಂಬಗಳಿಗೆ ಉದ್ಯೋಗ ಖಾತರಿಯು ಜೀವನರೇಖೆಯಾಗಿಯೇ ಉಳಿದುಕೊಂಡಿದೆ.

2025ರ ಡಿಸೆಂಬರಿನಲ್ಲಿ ಕೇಂದ್ರ ಸರಕಾರವು ಒಮ್ಮಿಂದೊಮ್ಮೆಗೇ, ಯಾರಿಗೂ ಸುಳಿವು ಕೊಡದೆಲೆ ಮನರೇಗಾವನ್ನು ಕಿತ್ತು ವಿಬಿ-ಗ್ರಾಮ್ಜಿ ಎಂಬ ಹೊಸ ಕಾನೂನನ್ನು ಸದನದಲ್ಲಿ ಮಂಡಿಸಿ ಕಣ್ಣೆವೆ ಮುಚ್ಚಿ ತೆರೆಯುವುದರೊಳಗಾಗಿ ಪಾಸ್‌ ಕೂಡ ಮಾಡಿಸಿಬಿಟ್ಟಿತು. ಈಗ ಬಂದಿರುವ ಹೊಸ ಕಾನೂನು ಮನರೇಗಾ ಸಂಬೋಧಿಸುತ್ತಿದ್ದ ಯಾವುದೇ ಸ್ಥಳೀಯ ಸಮಸ್ಯೆಯನ್ನೂ ಸಂಬೋಧಿಸುವುದಿಲ್ಲ. ಬದಲಿಗೆ ಭ್ರಷ್ಟಾಚಾರವನ್ನು ಇನ್ನಷ್ಟು ಹೆಚ್ಚಿಸುತ್ತದಷ್ಟೇ. ಎಲ್ಲಿ ಕೆಲಸ ಕೊಡಬೇಕು, ಯಾವ ಕೆಲಸ ಎಂಬುದನ್ನೆಲ್ಲ ಒಕ್ಕೂಟ ಸರಕಾರವೇ ನಿರ್ಧರಿಸುತ್ತದೆ. ಮನರೇಗಾದಲ್ಲಿ ರಾಜ್ಯ ಸರಕಾರವು ಕೇವಲ 10% ಹಣ ನಿಭಾಯಿಸಿದರೆ ಸಾಕಿತ್ತು. ಆದರೆ ಈ ಹೊಸ ಕಾನೂನಿನ ಪ್ರಕಾರ 40% ಹಣವನ್ನು ರಾಜ್ಯ ಸರಕಾರವೇ ಕೊಡಬೇಕಿದೆ. ಕರ್ನಾಟಕಕ್ಕೆ ಕೇಂದ್ರ ಸರಕಾರವು ಕೊಡಬೇಕಾಗಿರುವ ಮೊತ್ತವೇ ಈಗಾಗಲೇ ಸಾಕಷ್ಟು ದೊಡ್ಡದಿರುವಾಗ 40% ನ ಹೆಚ್ಚಿನ ಭಾರ ಈಗ ಮನರೇಗಾವು ರೈತರಿಗೆ ಅದೆಷ್ಟು ಪ್ರಯೋಜನಕಾರಿ ಆಗಿದೆಯೆಂದು ಹಳ್ಳಿಗರೆಲ್ಲ ಬಲ್ಲರು. ಸಣ್ಣ ರೈತರ ಭೂಮಿ ಸಮತಟ್ಟು ಮಾಡುವುದಿರಲಿ, ಕೆರೆಗಳ ಹೂಳು ತೆಗೆದಿದ್ದರಿಂದ ಹೆಚ್ಚು ನೀರು ಸಂಗ್ರಹವಾಗಿ ಕೃಷಿಗೆ ಪ್ರಯೋಜನವಾಗಿದ್ದಿರಲಿ, ಕೃಷಿಹೊಂಡಗಳು, ಇವೆಲ್ಲವೂ ರೈತರ ಬೆನ್ನೆಲುಬಾಗಿ ನಿಂತಿದ್ದ ಕಾರ್ಯಕ್ರಮಗಳಾಗಿದ್ದರೂ ಕೂಡ ಮನರೇಗಾದಿಂದ ರೈತರಿಗೆ ತೊಂದರೆ ಆಗುತ್ತಿತ್ತೇನೋ ಎಂಬಂತೆ ಹೊಸ ಕಾನೂನಿನಲ್ಲಿ ಬಿತ್ತನೆ ಮತ್ತು ಕೊಯ್ಲಿನ ಸಮಯದಲ್ಲಿ ಕಾರ್ಮಿಕರು ಕೆಲಸಕ್ಕೆ ಅರ್ಜಿ ಹಾಕುವಂತಿಲ್ಲ ಎಂದು 60 ದಿನಗಳ ನಿರ್ಬಂಧ ಹಾಕಲಾಗಿದೆ.

ಒಂದು ವರ್ಷಕ್ಕೆ 125 ದಿನಗಳ ಕೆಲಸ ದೊರೆಯುತ್ತದೆಂಬ ಭರ್ಜರಿ ಪ್ರಚಾರದೊಂದಿಗೆ ಹೊಸ ಕಾನೂನು ಬರುತ್ತಿದೆ. ಆದರೆ ನೂರು ದಿನಗಳ ಕೆಲಸದ ಅವಕಾಶವಿದ್ದಾಗಲೇ ಸರಾಸರಿ 45 ದಿನಗಳಷ್ಟು ಕೆಲಸ ಕೊಡುತ್ತಿದ್ದ ಸರಕಾರ ಅಲ್ಲಿಯೇ ನೂರು ದಿನ ಕೆಲಸ ಸಿಗುವಂತೆ ಮಾಡಬಹುದಿತ್ತು. ಅದಕ್ಕಾಗಿ ಒಂದು ಕಾನೂನನ್ನೇ ಮುರಿದು ಹಾಕುವ ಜರೂರತ್ತಿರಲಿಲ್ಲ. 125 ದಿನಗಳ ಉದ್ಯೋಗ ಸಿಗುತ್ತದೆಂಬುದೇ ಒಂದು ಮಿಥ್ಯೆ. ಹೇಗೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ. 

  • ಕೇಂದ್ರ ಸರ್ಕಾರವು ನರೇಗಾ ಕಾಯ್ದೆಯನ್ನು ರದ್ದು ಮಾಡಿ, ವಿಬಿ ಗ್ರಾಮ್‌ ಜಿ ಯೋಜನೆಯನ್ನು ಜಾರಿಗೆ ತಂದಿದೆ. ಇದು ಸಾರಾಂಶದಲ್ಲಿ ನಮ್ಮ ಬದುಕುವ ಹಕ್ಕನ್ನು ಕೇಂದ್ರದ ಮರ್ಜಿಯಾಗಿ ಪರಿವರ್ತನೆ ಮಾಡಿದೆ. ಹೇಗೆ ಎಂಬ ವಿಚಾರಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ. 
  • ಇಡೀ ದೇಶದ ಮನ್ರೇಗಾ ಕಾರ್ಮಿಕರು ಕೇಂದ್ರ ಸರ್ಕಾರದ ಮುಂದೆ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಮುಂದಿಡುತ್ತಾ ಬರುತ್ತಿದ್ದೆವು. 
  • ಮನ್ರೇಗಾ ಕೆಲಸ ʼಕುಟುಂಬಕ್ಕೆ ನೂರು ದಿನʼ ಎಂಬುದು ಸಾಲುವುದಿಲ್ಲ, ʼಪ್ರತಿ ವ್ಯಕ್ತಿಗೆ ನೂರು ದಿನದ ಕೆಲಸʼವಾಗಿ ಪರಿವರ್ತನೆ ಮಾಡಬೇಕು. ಅಂದರೆ ಪ್ರತಿ ಕುಟುಂಬಕ್ಕೆ ಸರಾಸರಿ 300 ದಿನಗಳ ಕೆಲಸವಾಗಿ ಪರಿವರ್ತಿಸಬೇಕು.
  • ಮನ್ರೇಗಾ ಕೆಲಸಕ್ಕೆ ನೀಡುತ್ತಿರುವ ಕೂಲಿಯನ್ನು ಕನಿಷ್ಟ 500 ರೂಗಳಿಗೆ ಹೆಚ್ಚಿಸಬೇಕು. 
  • ನಾವು ಕೂಡಿಟ್ಟ ಜನರಲ್ಲ, ದುಡಿದುಣ್ಣುವ ಜನ. ಹಾಗಾಗಿ ಮಾಡಿದ ಕೆಲಸದ ಕೂಲಿ ಆಯಾ ತಿಂಗಳಲ್ಲೇ ನೀಡಬೇಕು. 

ನಮ್ಮ ಈ ಯಾವ ನ್ಯಾಯಬದ್ಧ ಬೇಡಿಕೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಬದಲಿಗೆ ಇದ್ದ ಹಕ್ಕನ್ನೂ ಕಿತ್ತುಕೊಳ್ಳುವ ಕೆಲಸಕ್ಕೆ ಕೈಹಾಕಿದೆ. ಹೇಗೆ ಎಂಬುದನ್ನೂ ತಮ್ಮ ಗಮನಕ್ಕೆ ತರುತ್ತೇವೆ.

  • ವಿಬಿ – ಗ್ರಾಮ್‌ ಜಿ ಯೋಜನೆಯ ಪ್ರಕಾರ. 
  • ‘ನಮ್ಮ ಬೇಡಿಕೆʼ ಇದ್ದಷ್ಟು ಕೆಲಸದ ಬದಲು ʼಅಗತ್ಯವಿದ್ದಷ್ಟುʼ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಅಂದರೆ ಇನ್ನು ಮೇಲೆ ಉದ್ಯೋಗ ಪಡೆಯುವುದು ನಮ್ಮ ಹಕ್ಕಾಗಿ ಉಳಿಯುವುದಿಲ್ಲ. ಕೇಂದ್ರದ ತೀರ್ಮಾನವಾಗಿ ಪರಿವರ್ತನೆಯಾಗುತ್ತದೆ. 
  • ಮನ್ರೇಗಾ ಕಾಯ್ದೆ ʼಸಾರ್ವತ್ರಿಕ ಉದ್ಯೋಗ ಖಾತ್ರಿʼ ನೀಡುತ್ತಿತ್ತು. ಅಂದರೆ ಎಲ್ಲಿ ನಾವು ಕೆಲಸ ಕೇಳಿದರೂ ಕೆಲಸ ನೀಡಬೇಕಿತ್ತು. ಈಗ ಹಾಗಲ್ಲ ಎಲ್ಲಿ ಈ ಯೋಜನೆ ನಡೆಯಬೇಕು, ಎಲ್ಲಿ ನಡೆಯಬಾರದು ಎಂಬುದನ್ನು ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. 
  • ಯಾವ ರೀತಿಯ ಕೆಲಸ ಮಾಡಿಸಬೇಕು ಎಂಬುದನ್ನು ಗ್ರಾಮ ಸಭೆಗಳಲ್ಲಿ ಚರ್ಚಿಸಿ ಗ್ರಾಮ ಪಂಚಾಯತಿಗಳು ತೀರ್ಮಾನಿಸಬಹುದಿತ್ತು. ಆದರೆ ಈಗ ಯಾವ ರೀತಿಯ ಕೆಲಸ ಮಾಡಿಸಬೇಕು, ಯಾವುದನ್ನು ಮಾಡಿಸಬಾರದು ಎಂಬುದನ್ನೂ ಕೇಂದ್ರ ಸರ್ಕಾರವೇ ತೀರ್ಮಾನಿಸುತ್ತದೆ. 
  • ಕೃಷಿ ಸೀಜನ್ನುಗಳಲ್ಲಿ ಎರಡು ತಿಂಗಳು ಈ ಕೆಲಸ ನಡೆಸಬಾರದು ಎಂಬ ಶರತ್ತನ್ನು ಗ್ರಾಮ್‌ ಜಿ ಯೋಜನೆ ಹಾಕಿದೆ. ಮನ್ರೇಗಾ ಯೋಜನೆಗೆ ಮೊದಲು ಗ್ರಾಮೀಣ ಭಾಗದಲ್ಲಿ ಅತ್ಯಂತ ಕಡಿಮೆ ಕೂಲಿ ರೂಢಿಯಲ್ಲಿತ್ತು. ಗ್ರಾಮೀಣ ಕೂಲಿಕಾರ್ಮಿಕರ ಬದುಕು ದುಸ್ತರವಾಗಿತ್ತು. ಮನ್ರೇಗಾ ಕೆಲಸ ಇದ್ದುದರಿಂದ ಕೂಲಿಗೆ ಒಂದಷ್ಟು ಡಿಮ್ಯಾಂಡ್‌ ಬಂದು ಎಲ್ಲೆಲ್ಲಿ ಮನ್ರೇಗಾ ಕೂಲಿ ಕೆಲಸವಿರುತ್ತಾ ಅಲ್ಲೆಲ್ಲಾ ಕೃಷಿ ಕೂಲಿಯೂ ತಕ್ಕಮಟ್ಟಿಗೆ ಹೆಚ್ಚಳವಾಯಿತು. ಆದರೆ ಈಗ ಕೃಷಿ ಕೂಲಿ ಸಮಯದಲ್ಲಿ ಗ್ರಾಮ್‌ ಜಿ ಕೆಲಸ ನಿಲ್ಲುವುದರಿಂದ ಕೃಷಿ ಕಾರ್ಮಿಕರೆಲ್ಲರ ಕೂಲಿ ಕುಸಿಯಲಿದೆ. ನಮ್ಮ ದುಡಿಮೆಯ ಬೆಲೆ ಮತ್ತೆ ತಗ್ಗಲಿದೆ. 
  • ಈ ಹಿಂದೆ 100 ದಿನ ಕೆಲಸದ ಗ್ಯಾರಂಟಿ ಕೊಟ್ಟಾಗಲೇ ಅದಕ್ಕೆ ಬೇಕಾದ ಬಜೆಟ್‌ ಅನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿಲ್ಲ, ನೂರು ದಿನದ ಕೆಲಸ ನೀಡಲಿಲ್ಲ. ವಾಸ್ತವದಲ್ಲಿ ಇದುವರೆಗೆ  ನೀಡಿರುವುದು ಸರಾಸರಿ 45 ದಿನಗಳ ಕೆಲಸ ಮಾತ್ರ. ನೂರು ದಿನದ ಕೆಲಸವನ್ನೂ ಈ ಹಿಂದೆ ಎಂದೂ ನೀಡದ ಸರ್ಕಾರ ಈಗ 125 ದಿನಗಳ ಕೆಲಸ ನೀಡುತ್ತದೆ ಎಂದರೆ ನಂಬಲು ನಾವು ದಡ್ಡರಲ್ಲ. ಮತ್ತೊಂದು ಪುರಾವೆ ಎಂದರೆ 100 ದಿನಕ್ಕೆ ಬೇಕಾದ ಬಜೆಟ್‌ ಅನ್ನು ಕೇಂದ್ರ ಸರ್ಕಾರ ;ಎಂದೂ ಕೊಟ್ಟಿಲ್ಲ, ಬದಲಿಗೆ ವರ್ಷ ವರ್ಷಕ್ಕೆ ಕಡಿಮೆ ಮಾಡುತ್ತಾ ಬರುತ್ತಿದೆ. ಈ ಬಾರಿಯೂ ಅದನ್ನು ನೀಡಿಲ್ಲ. 125 ದಿನಗಳ ಕೆಲಸವನ್ನು ಗ್ಯಾರಂಟಿ ಮಾಡಬೇಕಾದರೆ [ರಾಜ್ಯದ ಪಾಲನ್ನು ತೆಗೆದರೂ] ಕೇಂದ್ರ ಸರ್ಕಾರ ಕನಿಷ್ಟ 2.3 ಲಕ್ಷ ಕೋಟಿಯನ್ನು ಈ ಯೋಜನೆಗೆ ಮೀಸಲಿಡಬೇಕಿತ್ತು. ಆದರೆ ಅದು ಈಗ ಮೀಸಲಿಟ್ಟಿರುವುದು 95 ಸಾವಿರ ಮಾತ್ರ. ಅಂದರೆ ಅರ್ಧಕ್ಕಿಂತ ಕಡಿಮೆ. 
  • ಇನ್ನು ಈ ಯೋಜನೆಯ ಶೇ. 60 ಭಾಗವನ್ನು ಮಾತ್ರ ಕೇಂದ್ರ ಸರ್ಕಾರ ನೀಡುವುದಾಗಿಯೂ ಮಿಕ್ಕ ಶೇ. 40 ಭಾಗವನ್ನು ರಾಜ್ಯ ಸರ್ಕಾರಗಳು ನೀಡಬೇಕು ಎಂಬ ಶರತ್ತು ಸೇರಿಸಲಾಗಿದೆ. ಇದು ಕೇಂದ್ರ ತನ್ನ ಹೊಣೆಯಿಂದ ತಪ್ಪಿಸಿಕೊಳ್ಳುವ ಕೆಲಸವಾಗಿದೆ. GST ನಂತರ ಬಹುತೇಕ ತೆರಿಗೆಯನ್ನು ಕೇಂದ್ರ ಸರ್ಕಾರವೇ ಒಯ್ಯುತ್ತಿದ್ದು, ರಾಜ್ಯ ಸರ್ಕಾರಗಳು ಸರ್ಕಾರ ನಡೆಸುವುದೇ ಕಷ್ಟ ಎಂಬ ಸ್ಥಿತಿಗೆ ತಲುಪಿವೆ. ಈ ಸಂದರ್ಭದಲ್ಲಿ ರಾಜ್ಯಗಳು ಶೇ. 40 ಭಾಗ ಎಂದು ಹೇಳಿದರೆ ಅದು ಜಾರಿಯಾಗುವ ಯಾವ ಸಾಧ್ಯತೆಯೂ ಇಲ್ಲ. 
  • ಕರ್ನಾಟಕದ  ಉದಾಹರಣೆಯನ್ನೇ ತೆಗೆದುಕೊಂಡರೆ ಕಳೆದ ವರ್ಷ ರಾಜ್ಯ ಸರ್ಕಾರವು [ಶೇ 10 ರ ಕೊಡುಗೆಯ ಆಧಾರದಲ್ಲಿ] 572.72 ಕೋಟಿ ರೂಗಳನ್ನು ಬಿಡುಗಡೆ ಮಾಡಿತ್ತು. ಈಗ ಕಳೆದ ಬಾರಿ ಕೆಲಸ ಕೊಟ್ಟ ಕುಟುಂಬಗಳಿಗೇ ಈ ಬಾರಿ 125 ದಿನಗಳ ಕೆಲಸ ನೀಡಬೇಕೆಂದರೆ ಕರ್ನಾಟಕ ಸರ್ಕಾರ 7,573 ಕೋಟಿ ರೂಗಳನ್ನು ನೀಡಬೇಕಾಗುತ್ತದೆ. ಆರ್ಥಿಕ ಮುಗ್ಗಟ್ಟಿನಲ್ಲಿ ಬಳಲುತ್ತಿರುವ ರಾಜ್ಯ ಸರ್ಕಾರ ಈ ಹಣವನ್ನು ತೆಗೆದಿಡುವುದಾದರೂ ಉಂಟೆ, ನಮಗೆ ಕೆಲಸ ಸಿಗುವುದಾದರೂ ಉಂಟೆ?
  • ಕೊನೆಯದಾಗಿ ಮನ್ರೇಗಾ ಕಾಯ್ದೆಯಲ್ಲಿ ಮಧ್ಯವರ್ತಿಗಳು ಇರಲಿಲ್ಲ. ಗ್ರಾಮ ಪಂಚಾಯಿತಿಗಳು ನೇರವಾಗಿ ಕೃಷಿ ಕೂಲಿಗಳನ್ನು ಗುರುತಿಸಿ ಕೆಲಸ ನೀಡಬೇಕಿತ್ತು. ಅಂದರೆ ಗುತ್ತಿಗೆದಾರರಿಗೆ ಅವಕಾಶ ಇರಲಿಲ್ಲ. ಈಗ ಗುತ್ತಿಗೆದಾರರಿಗೆ ಅವಕಾಶ ನೀಡಲಾಗುತ್ತಿದೆ. ಇವರ್ಯಾರಾಗಿರುತ್ತಾರೆ. ಸ್ಥಳೀಯ ಬಲಾಢ್ಯರಾಗಿರುತ್ತಾರೆ. ಭ್ರಷ್ಟಾಚಾರ ಮುಗಿಲುಮುಟ್ಟುತ್ತದೆ. ಬಡವರ ಹಣವನ್ನು ಈ ಮಧ್ಯವರ್ತಿಗಳೇ ತಿಂದು ಮುಕ್ಕುತ್ತಾರೆ. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...