Homeರಾಜಕೀಯಮಾಧ್ಯಮಗಳ ನಡವಳಿಕೆ : ಸಿದ್ದು ಥರಾ ಸುಮ್ಮನಿರಲ್ಲವೆಂಬ ಸಂದೇಶ ರವಾನಿಸಿದ ಕುಮಾರಸ್ವಾಮಿ

ಮಾಧ್ಯಮಗಳ ನಡವಳಿಕೆ : ಸಿದ್ದು ಥರಾ ಸುಮ್ಮನಿರಲ್ಲವೆಂಬ ಸಂದೇಶ ರವಾನಿಸಿದ ಕುಮಾರಸ್ವಾಮಿ

- Advertisement -
- Advertisement -

ಗಾಂಧಿಭವನದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ವೇದಿಕೆಯ ಮೇಲೂ ಧೀಮಂತ ಪತ್ರಿಕೋದ್ಯಮ ನಡೆಸಿದ ಮೂವರು ಹಿರಿಯರೂ ಕೂತಿದ್ದಾಗ, ಮುಖ್ಯಮಂತ್ರಿಯೋರ್ವರು ಮಾಧ್ಯಮಗಳಿಗೆ ಮನವಿಯ ರೂಪದಲ್ಲಿ ಎಚ್ಚರಿಕೆ ಸಂದೇಶ ರವಾನಿಸುತ್ತಾರೆ; ಇಡೀ ಸಭೆ ಅದನ್ನು ಚಪ್ಪಾಳೆಯ ಮೂಲಕ ಅನುಮೋದಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ನೆರೆದಿದ್ದ ಟಿವಿ ಕ್ಯಾಮೆರಾಗಳ ಹಿಂದೆ ನಿಂತಿರುವವರೂ ಹೌದೆನ್ನುವಂತೆ ಮುಗುಳ್ನಗುತ್ತಾರೆ. ಇದು ನಮ್ಮ ಮಾಧ್ಯಮಗಳು ಯಾವ ಮಟ್ಟಕ್ಕೆ ಇಳಿದಿವೆ ಎಂಬುದನ್ನು ತೋರಿಸುವ ಒಂದು ನಿದರ್ಶನವಾಗಿದೆ. ಇಲ್ಲದಿದ್ದರೆ, ಮುಖ್ಯಮಂತ್ರಿಯ ಮಾತನ್ನು ಸ್ಥಳದಲ್ಲೇ ಖಂಡಿಸಬಲ್ಲ ದಿಟ್ಟತೆ ಇದ್ದ ಸ್ವಾತಂತ್ರ್ಯ ಹೋರಾಟಗಾರರು ಅಲ್ಲಿದ್ದರು. ಅವರಿಗೂ ಮಾಧ್ಯಮಗಳ ಕುರಿತು ಅದೇ ಅಭಿಪ್ರಾಯ ಇತ್ತು ಎಂಬುದು ಆ ಸಭೆಯಲ್ಲಿ ಸ್ಪಷ್ಟವಾಗಿ ಎದ್ದು ಕಂಡಿತು. ಜೂನ್ 11ರಂದು ಗಾಂಧಿ ಸ್ಮಾರಕ ಸಂಸ್ಥೆಯು ಮುಖ್ಯಮಂತ್ರಿಯವರನ್ನು ಕರೆದು ಅಭಿನಂದಿಸುವ ಕಾರ್ಯಕ್ರಮ ನಡೆಸಿತು. ಅಲ್ಲಿ ಕುಮಾರಸ್ವಾಮಿಯವರು ಆಡಿದ ಮಾತುಗಳನ್ನು ಯಥಾವತ್ತಾಗಿ ಮುಂದಿಟ್ಟರೆ ವಿಚಾರ ಮತ್ತಷ್ಟು ಸ್ಪಷ್ಟವಾಗುತ್ತದೆ.
‘ಇಲ್ಲಿ ಸೇರಿರುವ ಮಾಧ್ಯಮಗಳಿಗೂ ನಾನು ಒಂದು ಸಂದೇಶ ಕೊಡಬಯಸುತ್ತೇನೆ. ನಮ್ಮ ಸರ್ಕಾರ ತಪ್ಪು ಮಾಡಿದರೆ ಅದನ್ನು ಟೀಕೆ ಮಾಡಿ, ಕಟುವಾದ ಶಬ್ದಗಳಲ್ಲೇ ಅದನ್ನು ಹೇಳಿ ಪರವಾಗಿಲ್ಲ. ಆದರೆ, ನೀವು ಮಾಡುತ್ತಿರುವುದೇನು? ಅಸತ್ಯವನ್ನು ಹೇಳುತ್ತಿದ್ದೀರಿ. ಅದನ್ನು ಮಾಡಬೇಡಿ, ಜನರ ಪರವಾಗಿ ಕೆಲಸ ಮಾಡುವುದಕ್ಕೆ ಸಹಕಾರ ಕೊಡಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.
ಇತ್ತೀಚೆಗೆ ಮಂಗಳೂರಿನಲ್ಲಿ ವಿಪರೀತ ಮಳೆ ಬಂದ ಎರಡು ದಿನಗಳ ನಂತರ ಒಂದು ಕಡೆ ಶವ ಸಿಕ್ಕಿತು. ಆಗ ಕೆಲವು ಚಾನೆಲ್‍ಗಳು ಕೊಲೆ ಶಂಕೆ ಎಂದು ಸುದ್ದಿ ಮಾಡಿದವು. ಆ ವ್ಯಕ್ತಿಯ ಕುಟುಂಬದವರೇ, ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ; ಎರಡು ದಿನಗಳ ಕೆಳಗೆ ಮನೆಯಿಂದ ಕಣ್ಮರೆಯಾಗಿದ್ದ. ನಮಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿದ್ದಾರೆ. ಆದರೂ, ಅದನ್ನೊಂದು ಸೆನ್ಸೇಷನಲ್ ವಿಷಯ ಮಾಡೋಕೆ ನೀವು ಹೊರಟಿದ್ದೀರಿ. ಇದಕ್ಕೇ ಕಾಯುತ್ತಿರುವ ಹಿಂದೂ ಕಾರ್ಯಕರ್ತನ ಕೊಲೆ ಅಂತ ಬಿಜೆಪಿಯವರು ಕೂಗಾಡಲಿ ಅಂತ. ನಿಮ್ಮ ಉದ್ದೇಶ ಏನು? ನಿಮಗೆ ಟಿಆರ್‍ಪಿಯೇ ಮುಖ್ಯವಾ? ಬೆಂಕಿ ಬಿದ್ದರೂ ಪರವಾಗಿಲ್ವಾ? ಹಾಗಾಗಿಯೇ ನಾನು ಆ ಚಾನೆಲ್‍ನ ಮುಖ್ಯಸ್ಥರಿಗೆ ಮತ್ತು ವರದಿಗಾರನಿಗೆ ನೋಟೀಸ್ ಕೊಡಿ, ಕೊಲೆಯ ಕುರಿತು ಅವರಿಗೇನೋ ಮಾಹಿತಿ ಇರಬೇಕು ಅಂತ ಹೇಳಿದ್ದೇನೆ. ಈ ಥರ ನೀವು ನಡೆದುಕೋಬಾರದು ಎಂದು ನಾನು ಹೇಳಲು ಬಯಸ್ತೀನಿ.
ಇನ್ನೂ ಒಂದು ಸುದ್ದಿಯನ್ನು ನಾನು ಕೇಳಿದೆ. ದೇವೇಗೌಡರಿಗೆ ಸರ್ಕಾರದಲ್ಲಿ ಮೂಗು ತೂರಿಸಬೇಡಿ, ಮನೆಯಲ್ಲೇ ಕೂರಿ ಎಂದು ಕುಮಾರಸ್ವಾಮಿ ತಾಕೀತು ಅಂತ. ನೀವು ಏನು ತಿಳಿದುಕೊಂಡಿದ್ದೀರಿ? ದೇವೇಗೌಡರನ್ನು ಏನೆಂದುಕೊಂಡಿದ್ದೀರಿ? ಅವರು ಒಬ್ಬರು ನಾಡಿನ ಹಿರಿಯ ರಾಜಕಾರಣಿ. ನನ್ನ ತಂದೆ ಅಂತ ಮಾತ್ರ ಅಲ್ಲದೇ, ಅವರ ಅನುಭವದ ಅನುಕೂಲ ಪಡೆದುಕೊಳ್ಳಬೇಕು ಅಂತಾನಾದ್ರೂ ನನಗೆ ಇರಲ್ವಾ? ಈ ಥರಾ ಒಂದು ಸುದ್ದಿ ಮಾಡಬಹುದಾ?
ನೀವು ಸರ್ಕಾರ ನಡೆಸೋಕೆ ಸಹಕಾರ ಕೊಡದೇ ಇದ್ದರೆ, ನಾನೊಬ್ಬನೇ ಎಲ್ಲವನ್ನೂ ಮಾಡೋಕಾಗುತ್ತಾ? ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಪಲಾಯನವಾದಿಯಲ್ಲ. ಮಾಡಿಯೇ ಮಾಡ್ತೀನಿ. ಆದರೆ ಅದಕ್ಕೆ 15 ದಿನ ಸಮಯ ಕೊಡಿ ಎಂದಿದ್ದೀನಿ. ಇದನ್ನೇ ದೊಡ್ಡ ವಿಷಯ ಮಾಡ್ತೀರಲ್ವಾ? ಸುಮ್‍ಸುಮ್ನೆ 20 ಜನ ಶಾಸಕರ ಬಂಡಾಯ; ಅವರು ಹೊರಗೆ ಹೋಗ್ತಾರೆ ಅಂತ ಸುದ್ದಿ ಮಾಡ್ತೀರ. ಇಪ್ಪತ್ತೂ ಇಲ್ಲ, ಒಬ್ಬರೂ ಇಲ್ಲ. ಸಮ್ಮಿಶ್ರ ಸರ್ಕಾರ ನಡೆಸುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತೀವಿ. ಆದ್ರೆ ನಿಮ್ಮ ಉದ್ದೇಶವೇ ಅರ್ಥವಾಗ್ತಿಲ್ಲ. ನೀವ್ಯಾರೂ ಸತ್ಯ ಹರಿಶ್ಚಂದ್ರರಲ್ಲ, ಅದು ನನಗ್ಗೊತ್ತು.
ನೀವು ಎಂಥವರೆಂದ್ರೆ, ನೋಡೀ.. ನಾನಿನ್ನೂ ಜನತಾದರ್ಶನ ಅಧಿಕೃತವಾಗಿ ಶುರೂನೇ ಮಾಡಿಲ್ಲ. ಆದರೂ ಜನರು ಕುಮಾರಸ್ವಾಮಿ ಮನೆಗೆ ಹೋದ್ರೆ ಏನೋ ಕೆಲಸ ಆಗುತ್ತೆ ಅಂತ ಬರ್ತಾರೆ. ಅವತ್ತು ನಾವು ಬೆಂಗಳೂರಿನಲ್ಲಿ ಇರಲಿಲ್ಲ. ಜೆಪಿ ನಗರದ ಮನೆಗೆ ಪಾಪ ಕೆಲವರು ಹೋಗಿದ್ದಾರೆ. ಅಲ್ಲಿ ಸಿಎಂ ಇಲ್ಲಾ… ಕೃಷ್ಣಾಗೆ ಹೋಗಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ಕುಮಾರಸ್ವಾಮಿಯವರೇ ಎರಡನೇ ದಿನಕ್ಕೇ ಮುಗಿದು ಹೋಯ್ತಾ ಜನತಾದರ್ಶನಾ ಅಂತ ಸುದ್ದಿ. ಭಾಳ ದೂರದಿಂದ ಒಬ್ಬರು ಹೆಣ್ಣು ಮಗಳು ಬಂದಿದ್ದಾರೆ, ಅವರ ಹತ್ರ ಪಾಪ ಬಸ್‍ಚಾರ್ಜ್‍ಗೆ ದುಡ್ಡಿಲ್ಲ. ಇದಕ್ಕೇನು ಮಾಡ್ತೀರಾ ಅಂತ ಟೀವಿಯಲ್ಲಿ ಕೇಳ್ತಿದ್ದಾರೆ. ನಾನು ಹೇಳೋದು, ಸ್ವಲ್ಪ ಮಾನವೀಯತೆಯಿಂದ ವರ್ತಿಸಿ. ಆ ವರದಿಗಾರ ತನ್ನ ಜೇಬಿನಿಂದ 50 ರೂ. ಕೊಟ್ಟು ಆಕೆಗೆ ಕಳಿಸಿ, ಆ ಮೇಲೆ ಆಕೆ ಹತ್ರ ದುಡ್ಡಿರ್ಲಿಲ್ಲ ಕೊಟ್ಟಿದೀನಿ ಕೊಡಿ ಅಂದಿದ್ರೆ ಕೊಡ್ತಿದ್ದೆ. ಅದನ್ನು ಬಿಟ್ಟು ಈ ಥರಾ ಸ್ಟೋರಿ ಮಾಡಿ ಟೀಕೆ ಮಾಡಿದ್ರೆ ಏನು ಮಾಡೋಕಾಗುತ್ತೆ?
ಇನ್ನೂ ಒಂದು ಸಾರಿ ಕೇಳ್ತಿದ್ದೀನಿ. ಸಹಕಾರ ಕೊಡಿ, ಜನರ ಪರವಾಗಿ ಕೆಲಸ ಮಾಡ್ತೀವಿ.’
ಕುಮಾರಸ್ವಾಮಿಯವರು ಮನವಿಯನ್ನೇ ಮಾಡಿದರು. ಆದರೆ, ಅದರಲ್ಲಿ ಒಂದು ಸಂದೇಶವೂ ಇತ್ತು. ಅದು ಎಚ್ಚರಿಕೆ. ಇದಕ್ಕೆ ಮುಂಚೆಯೇ ಒಂದು ಸಾರಿ ಹೇಳಿದ್ದರು. ‘ನಾನು ವಾಸ್ತವಾಂಶ ಏನು ಹೇಳ್ತೀನಿ ಅದನ್ನು ರಿಪೋರ್ಟ್ ಮಾಡಿ, ಟ್ವಿಸ್ಟ್ ಮಾಡಿ ಸುದ್ದಿ ಮಾಡಬೇಡಿ. ನಾನು ಏನೋ ಒಂದು ಹೇಳಿರೋದನ್ನು ನೀವು ಯಾಕೆ ತಿರುಚುತ್ತೀರಿ? ನಿಮಗೆ ನಿಮ್ಮಿಷ್ಟ ಬಂದಂತೆಯೇ ಹೇಳಬೇಕೆಂದಾದರೆ, ನಿಮ್ಮ ಸ್ಟೋರಿ ಮಾಡಿಕೊಳ್ಳಿ. ನನ್ನ ಮಾತನ್ನು ತಿರುಚಿ, ಮಿಸ್‍ಯೂಸ್ ಮಾಡಬೇಡಿ. ದಿನಕ್ಕೆ ಹತ್ತತ್ತು ಸಾರಿ ನೀವು ಮೈಕ್ ಹಿಡಿದುಕೊಂಡು ಬಂದರೆ ಏನು ಹೇಳೋದಿರುತ್ತೆ? ಏನಾದ್ರೂ ಪಾಲಿಸಿ ಡಿಸಿಷನ್ ತಗೊಂಡರೆ ಆಗ ಮಾತಾಡಬಹುದು. ಅದನ್ನು ಬಿಟ್ಟು ನೀವೇ ಎಲ್ಲಾ ಮಾಡ್ತೀರಿ. ಮಂತ್ರಿಗಳ್ಯಾರು ಅಂತಲೂ ತೀರ್ಮಾನಿಸ್ತೀರಿ. ಖಾತೇನೂ ನೀವೇ ಹಂಚ್ತೀರಿ. ಇಂಥದನ್ನೆಲ್ಲಾ ನಿಲ್ಲಿಸಿ.’
ಅತ್ಯಂತ ಪಕ್ಷಪಾತದಿಂದ ಸುದ್ದಿ ಮಾಡುವ, ಖಚಿತವಾಗಿ ಬಿಜೆಪಿ ಪರವಾಗಿ ನಿಂತಿರುವ ಕೆಲವು ಚಾನೆಲ್‍ಗಳು ಮತ್ತು ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದು, ಕುಮಾರಸ್ವಾಮಿಯವರನ್ನು ದುರ್ಬಲಗೊಳಿಸಲು ಹೋದರೆ ಮತ್ತೂ ಕೆಳಗೆ ಕುಸಿಯುತ್ತವೆ. ನೇರವಾಗಿ ಮಾತನಾಡುವ, ಜನಸಾಮಾನ್ಯರ ಲಾಜಿಕ್‍ಅನ್ನು ಸಹಜವಾಗಿ ಬಳಸುವ ಕುಮಾರಸ್ವಾಮಿಯವರ ಮಾತೇ ಜನರಿಗೆ ಹೆಚ್ಚು ಸರಿ ಎನಿಸುವ ಸಾಧ್ಯತೆ ಇದೆ. ಈಗಲಾದರೂ ಸದರಿ ಮಾಧ್ಯಮಗಳು ತಿದ್ದಿಕೊಂಡರೆ, ಪಾತಾಳ ಮುಟ್ಟಿರುವ ಪತ್ರಿಕೋದ್ಯಮದ ಘನತೆ ಸ್ವಲ್ಪ ಮಟ್ಟಿಗಾದರೂ ಉಳಿದುಕೊಂಡೀತು.
ಇವೇ ಮಾಧ್ಯಮಗಳು ಸತತವಾಗಿ 5 ವರ್ಷಗಳ ಕಾಲ ಸಿದ್ದರಾಮಯ್ಯ ವಿರೋಧಿ ಪ್ರಚಾರವನ್ನು ನಡೆಸಿದವು. ಡಿ.ಕೆ.ರವಿ ಪ್ರಕರಣವೂ ಸೇರಿದಂತೆ ಹಲವು ಸಾರಿ ಸುಳ್ಳು ಎಂದು ಗೊತ್ತಿದ್ದರೂ, ಒಂದೇ ಸಮನೆ ಅಪಪ್ರಚಾರಕ್ಕಿಳಿದವು. ನಂತರ ಬಿಜೆಪಿ ಸರ್ಕಾರದ ಅಧೀನದಲ್ಲಿದ್ದ ಸಿಬಿಐ ನಡೆಸಿದ ತನಿಖೆಯೂ ಅದನ್ನು ಆತ್ಮಹತ್ಯೆ ಎಂದು ವರದಿ ನೀಡಿದಾಗ, ಅದಕ್ಕೆ ಪ್ರಚಾರ ನೀಡಲಿಲ್ಲ. ಈ ಪ್ರಮಾಣದ ಏಕಪಕ್ಷೀಯತೆ ಸಾಧ್ಯವಾಗಿರುವುದು ಬಿಜೆಪಿ ಪರಿವಾರದ ಮತೀಯತೆಯನ್ನು ಮೈಗೂಡಿಸಿಕೊಂಡ ವರ್ಗವೇ ಇಲ್ಲೆಲ್ಲಾ ಹಿಡಿತ ಸಾಧಿಸಿರುವುದರಿಂದ. ಆದರೆ ಸಿದ್ದರಾಮಯ್ಯನವರು ಒಮ್ಮೆಯೂ ಮಾಧ್ಯಮಗಳಿಗೆ ಎಚ್ಚರಿಕೆ ನೀಡುವ ಅಥವಾ ಟೀಕೆ ಮಾಡುವ ಸಾಹಸಕ್ಕೆ ಕೈ ಹಾಕಲಿಲ್ಲ. ಇದರಲ್ಲಿ ಒಟ್ಟಾರೆ ಮಾಧ್ಯಮ ಸ್ವಾತಂತ್ರ್ಯದ ಕುರಿತಂತೆ ಅವರ ನಿಲುವು ಒಂದು ಪಾತ್ರ ವಹಿಸಿದ್ದರೆ, ಜಾತಿಯೂ ಇನ್ನೊಂದು ಕಾರಣವಾಗಿದೆ. ಕುಮಾರಸ್ವಾಮಿಯವರ ಪರವಾಗಿ ಒಂದು ಬಲಾಢ್ಯವಾದ ಜಾತಿಯು ನಿಂತಿರುವುದರಿಂದ, ಮಾಧ್ಯಮಗಳನ್ನೂ ಎದುರಿಸಿ ನಿಲ್ಲಬಲ್ಲೆ ಎನ್ನುವ ಧೈರ್ಯ ಅವರಿಗಿದೆ. ಇದನ್ನು ನಮ್ಮ ಸಾಮಾಜಿಕ ವ್ಯವಸ್ಥೆಯ ದುರಂತ ಎನ್ನಬೇಕೋ, ಅದೇ ಜಾತಿಯ ಕಾರಣದಿಂದ ಮತಾಂಧ ಶಕ್ತಿಗಳ ಪರವಾಗಿ ನಿಂತಿರುವ ಮಾಧ್ಯಮಗಳಿಗೆ ಎಚ್ಚರಿಕೆ ಕೊಟ್ಟಿದ್ದಕ್ಕೆ ಸಂತಸ ಕೊಡಬೇಕೋ ತಿಳಿಯದ ವಿಪರ್ಯಾಸದ ಸ್ಥಿತಿಯಲ್ಲಿ ನಾವಿದ್ದೇವೆ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...