Homeರಾಜಕೀಯಮಾಧ್ಯಮಗಳ ನಡವಳಿಕೆ : ಸಿದ್ದು ಥರಾ ಸುಮ್ಮನಿರಲ್ಲವೆಂಬ ಸಂದೇಶ ರವಾನಿಸಿದ ಕುಮಾರಸ್ವಾಮಿ

ಮಾಧ್ಯಮಗಳ ನಡವಳಿಕೆ : ಸಿದ್ದು ಥರಾ ಸುಮ್ಮನಿರಲ್ಲವೆಂಬ ಸಂದೇಶ ರವಾನಿಸಿದ ಕುಮಾರಸ್ವಾಮಿ

- Advertisement -
- Advertisement -

ಗಾಂಧಿಭವನದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ವೇದಿಕೆಯ ಮೇಲೂ ಧೀಮಂತ ಪತ್ರಿಕೋದ್ಯಮ ನಡೆಸಿದ ಮೂವರು ಹಿರಿಯರೂ ಕೂತಿದ್ದಾಗ, ಮುಖ್ಯಮಂತ್ರಿಯೋರ್ವರು ಮಾಧ್ಯಮಗಳಿಗೆ ಮನವಿಯ ರೂಪದಲ್ಲಿ ಎಚ್ಚರಿಕೆ ಸಂದೇಶ ರವಾನಿಸುತ್ತಾರೆ; ಇಡೀ ಸಭೆ ಅದನ್ನು ಚಪ್ಪಾಳೆಯ ಮೂಲಕ ಅನುಮೋದಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ನೆರೆದಿದ್ದ ಟಿವಿ ಕ್ಯಾಮೆರಾಗಳ ಹಿಂದೆ ನಿಂತಿರುವವರೂ ಹೌದೆನ್ನುವಂತೆ ಮುಗುಳ್ನಗುತ್ತಾರೆ. ಇದು ನಮ್ಮ ಮಾಧ್ಯಮಗಳು ಯಾವ ಮಟ್ಟಕ್ಕೆ ಇಳಿದಿವೆ ಎಂಬುದನ್ನು ತೋರಿಸುವ ಒಂದು ನಿದರ್ಶನವಾಗಿದೆ. ಇಲ್ಲದಿದ್ದರೆ, ಮುಖ್ಯಮಂತ್ರಿಯ ಮಾತನ್ನು ಸ್ಥಳದಲ್ಲೇ ಖಂಡಿಸಬಲ್ಲ ದಿಟ್ಟತೆ ಇದ್ದ ಸ್ವಾತಂತ್ರ್ಯ ಹೋರಾಟಗಾರರು ಅಲ್ಲಿದ್ದರು. ಅವರಿಗೂ ಮಾಧ್ಯಮಗಳ ಕುರಿತು ಅದೇ ಅಭಿಪ್ರಾಯ ಇತ್ತು ಎಂಬುದು ಆ ಸಭೆಯಲ್ಲಿ ಸ್ಪಷ್ಟವಾಗಿ ಎದ್ದು ಕಂಡಿತು. ಜೂನ್ 11ರಂದು ಗಾಂಧಿ ಸ್ಮಾರಕ ಸಂಸ್ಥೆಯು ಮುಖ್ಯಮಂತ್ರಿಯವರನ್ನು ಕರೆದು ಅಭಿನಂದಿಸುವ ಕಾರ್ಯಕ್ರಮ ನಡೆಸಿತು. ಅಲ್ಲಿ ಕುಮಾರಸ್ವಾಮಿಯವರು ಆಡಿದ ಮಾತುಗಳನ್ನು ಯಥಾವತ್ತಾಗಿ ಮುಂದಿಟ್ಟರೆ ವಿಚಾರ ಮತ್ತಷ್ಟು ಸ್ಪಷ್ಟವಾಗುತ್ತದೆ.
‘ಇಲ್ಲಿ ಸೇರಿರುವ ಮಾಧ್ಯಮಗಳಿಗೂ ನಾನು ಒಂದು ಸಂದೇಶ ಕೊಡಬಯಸುತ್ತೇನೆ. ನಮ್ಮ ಸರ್ಕಾರ ತಪ್ಪು ಮಾಡಿದರೆ ಅದನ್ನು ಟೀಕೆ ಮಾಡಿ, ಕಟುವಾದ ಶಬ್ದಗಳಲ್ಲೇ ಅದನ್ನು ಹೇಳಿ ಪರವಾಗಿಲ್ಲ. ಆದರೆ, ನೀವು ಮಾಡುತ್ತಿರುವುದೇನು? ಅಸತ್ಯವನ್ನು ಹೇಳುತ್ತಿದ್ದೀರಿ. ಅದನ್ನು ಮಾಡಬೇಡಿ, ಜನರ ಪರವಾಗಿ ಕೆಲಸ ಮಾಡುವುದಕ್ಕೆ ಸಹಕಾರ ಕೊಡಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.
ಇತ್ತೀಚೆಗೆ ಮಂಗಳೂರಿನಲ್ಲಿ ವಿಪರೀತ ಮಳೆ ಬಂದ ಎರಡು ದಿನಗಳ ನಂತರ ಒಂದು ಕಡೆ ಶವ ಸಿಕ್ಕಿತು. ಆಗ ಕೆಲವು ಚಾನೆಲ್‍ಗಳು ಕೊಲೆ ಶಂಕೆ ಎಂದು ಸುದ್ದಿ ಮಾಡಿದವು. ಆ ವ್ಯಕ್ತಿಯ ಕುಟುಂಬದವರೇ, ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ; ಎರಡು ದಿನಗಳ ಕೆಳಗೆ ಮನೆಯಿಂದ ಕಣ್ಮರೆಯಾಗಿದ್ದ. ನಮಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿದ್ದಾರೆ. ಆದರೂ, ಅದನ್ನೊಂದು ಸೆನ್ಸೇಷನಲ್ ವಿಷಯ ಮಾಡೋಕೆ ನೀವು ಹೊರಟಿದ್ದೀರಿ. ಇದಕ್ಕೇ ಕಾಯುತ್ತಿರುವ ಹಿಂದೂ ಕಾರ್ಯಕರ್ತನ ಕೊಲೆ ಅಂತ ಬಿಜೆಪಿಯವರು ಕೂಗಾಡಲಿ ಅಂತ. ನಿಮ್ಮ ಉದ್ದೇಶ ಏನು? ನಿಮಗೆ ಟಿಆರ್‍ಪಿಯೇ ಮುಖ್ಯವಾ? ಬೆಂಕಿ ಬಿದ್ದರೂ ಪರವಾಗಿಲ್ವಾ? ಹಾಗಾಗಿಯೇ ನಾನು ಆ ಚಾನೆಲ್‍ನ ಮುಖ್ಯಸ್ಥರಿಗೆ ಮತ್ತು ವರದಿಗಾರನಿಗೆ ನೋಟೀಸ್ ಕೊಡಿ, ಕೊಲೆಯ ಕುರಿತು ಅವರಿಗೇನೋ ಮಾಹಿತಿ ಇರಬೇಕು ಅಂತ ಹೇಳಿದ್ದೇನೆ. ಈ ಥರ ನೀವು ನಡೆದುಕೋಬಾರದು ಎಂದು ನಾನು ಹೇಳಲು ಬಯಸ್ತೀನಿ.
ಇನ್ನೂ ಒಂದು ಸುದ್ದಿಯನ್ನು ನಾನು ಕೇಳಿದೆ. ದೇವೇಗೌಡರಿಗೆ ಸರ್ಕಾರದಲ್ಲಿ ಮೂಗು ತೂರಿಸಬೇಡಿ, ಮನೆಯಲ್ಲೇ ಕೂರಿ ಎಂದು ಕುಮಾರಸ್ವಾಮಿ ತಾಕೀತು ಅಂತ. ನೀವು ಏನು ತಿಳಿದುಕೊಂಡಿದ್ದೀರಿ? ದೇವೇಗೌಡರನ್ನು ಏನೆಂದುಕೊಂಡಿದ್ದೀರಿ? ಅವರು ಒಬ್ಬರು ನಾಡಿನ ಹಿರಿಯ ರಾಜಕಾರಣಿ. ನನ್ನ ತಂದೆ ಅಂತ ಮಾತ್ರ ಅಲ್ಲದೇ, ಅವರ ಅನುಭವದ ಅನುಕೂಲ ಪಡೆದುಕೊಳ್ಳಬೇಕು ಅಂತಾನಾದ್ರೂ ನನಗೆ ಇರಲ್ವಾ? ಈ ಥರಾ ಒಂದು ಸುದ್ದಿ ಮಾಡಬಹುದಾ?
ನೀವು ಸರ್ಕಾರ ನಡೆಸೋಕೆ ಸಹಕಾರ ಕೊಡದೇ ಇದ್ದರೆ, ನಾನೊಬ್ಬನೇ ಎಲ್ಲವನ್ನೂ ಮಾಡೋಕಾಗುತ್ತಾ? ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಪಲಾಯನವಾದಿಯಲ್ಲ. ಮಾಡಿಯೇ ಮಾಡ್ತೀನಿ. ಆದರೆ ಅದಕ್ಕೆ 15 ದಿನ ಸಮಯ ಕೊಡಿ ಎಂದಿದ್ದೀನಿ. ಇದನ್ನೇ ದೊಡ್ಡ ವಿಷಯ ಮಾಡ್ತೀರಲ್ವಾ? ಸುಮ್‍ಸುಮ್ನೆ 20 ಜನ ಶಾಸಕರ ಬಂಡಾಯ; ಅವರು ಹೊರಗೆ ಹೋಗ್ತಾರೆ ಅಂತ ಸುದ್ದಿ ಮಾಡ್ತೀರ. ಇಪ್ಪತ್ತೂ ಇಲ್ಲ, ಒಬ್ಬರೂ ಇಲ್ಲ. ಸಮ್ಮಿಶ್ರ ಸರ್ಕಾರ ನಡೆಸುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತೀವಿ. ಆದ್ರೆ ನಿಮ್ಮ ಉದ್ದೇಶವೇ ಅರ್ಥವಾಗ್ತಿಲ್ಲ. ನೀವ್ಯಾರೂ ಸತ್ಯ ಹರಿಶ್ಚಂದ್ರರಲ್ಲ, ಅದು ನನಗ್ಗೊತ್ತು.
ನೀವು ಎಂಥವರೆಂದ್ರೆ, ನೋಡೀ.. ನಾನಿನ್ನೂ ಜನತಾದರ್ಶನ ಅಧಿಕೃತವಾಗಿ ಶುರೂನೇ ಮಾಡಿಲ್ಲ. ಆದರೂ ಜನರು ಕುಮಾರಸ್ವಾಮಿ ಮನೆಗೆ ಹೋದ್ರೆ ಏನೋ ಕೆಲಸ ಆಗುತ್ತೆ ಅಂತ ಬರ್ತಾರೆ. ಅವತ್ತು ನಾವು ಬೆಂಗಳೂರಿನಲ್ಲಿ ಇರಲಿಲ್ಲ. ಜೆಪಿ ನಗರದ ಮನೆಗೆ ಪಾಪ ಕೆಲವರು ಹೋಗಿದ್ದಾರೆ. ಅಲ್ಲಿ ಸಿಎಂ ಇಲ್ಲಾ… ಕೃಷ್ಣಾಗೆ ಹೋಗಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ಕುಮಾರಸ್ವಾಮಿಯವರೇ ಎರಡನೇ ದಿನಕ್ಕೇ ಮುಗಿದು ಹೋಯ್ತಾ ಜನತಾದರ್ಶನಾ ಅಂತ ಸುದ್ದಿ. ಭಾಳ ದೂರದಿಂದ ಒಬ್ಬರು ಹೆಣ್ಣು ಮಗಳು ಬಂದಿದ್ದಾರೆ, ಅವರ ಹತ್ರ ಪಾಪ ಬಸ್‍ಚಾರ್ಜ್‍ಗೆ ದುಡ್ಡಿಲ್ಲ. ಇದಕ್ಕೇನು ಮಾಡ್ತೀರಾ ಅಂತ ಟೀವಿಯಲ್ಲಿ ಕೇಳ್ತಿದ್ದಾರೆ. ನಾನು ಹೇಳೋದು, ಸ್ವಲ್ಪ ಮಾನವೀಯತೆಯಿಂದ ವರ್ತಿಸಿ. ಆ ವರದಿಗಾರ ತನ್ನ ಜೇಬಿನಿಂದ 50 ರೂ. ಕೊಟ್ಟು ಆಕೆಗೆ ಕಳಿಸಿ, ಆ ಮೇಲೆ ಆಕೆ ಹತ್ರ ದುಡ್ಡಿರ್ಲಿಲ್ಲ ಕೊಟ್ಟಿದೀನಿ ಕೊಡಿ ಅಂದಿದ್ರೆ ಕೊಡ್ತಿದ್ದೆ. ಅದನ್ನು ಬಿಟ್ಟು ಈ ಥರಾ ಸ್ಟೋರಿ ಮಾಡಿ ಟೀಕೆ ಮಾಡಿದ್ರೆ ಏನು ಮಾಡೋಕಾಗುತ್ತೆ?
ಇನ್ನೂ ಒಂದು ಸಾರಿ ಕೇಳ್ತಿದ್ದೀನಿ. ಸಹಕಾರ ಕೊಡಿ, ಜನರ ಪರವಾಗಿ ಕೆಲಸ ಮಾಡ್ತೀವಿ.’
ಕುಮಾರಸ್ವಾಮಿಯವರು ಮನವಿಯನ್ನೇ ಮಾಡಿದರು. ಆದರೆ, ಅದರಲ್ಲಿ ಒಂದು ಸಂದೇಶವೂ ಇತ್ತು. ಅದು ಎಚ್ಚರಿಕೆ. ಇದಕ್ಕೆ ಮುಂಚೆಯೇ ಒಂದು ಸಾರಿ ಹೇಳಿದ್ದರು. ‘ನಾನು ವಾಸ್ತವಾಂಶ ಏನು ಹೇಳ್ತೀನಿ ಅದನ್ನು ರಿಪೋರ್ಟ್ ಮಾಡಿ, ಟ್ವಿಸ್ಟ್ ಮಾಡಿ ಸುದ್ದಿ ಮಾಡಬೇಡಿ. ನಾನು ಏನೋ ಒಂದು ಹೇಳಿರೋದನ್ನು ನೀವು ಯಾಕೆ ತಿರುಚುತ್ತೀರಿ? ನಿಮಗೆ ನಿಮ್ಮಿಷ್ಟ ಬಂದಂತೆಯೇ ಹೇಳಬೇಕೆಂದಾದರೆ, ನಿಮ್ಮ ಸ್ಟೋರಿ ಮಾಡಿಕೊಳ್ಳಿ. ನನ್ನ ಮಾತನ್ನು ತಿರುಚಿ, ಮಿಸ್‍ಯೂಸ್ ಮಾಡಬೇಡಿ. ದಿನಕ್ಕೆ ಹತ್ತತ್ತು ಸಾರಿ ನೀವು ಮೈಕ್ ಹಿಡಿದುಕೊಂಡು ಬಂದರೆ ಏನು ಹೇಳೋದಿರುತ್ತೆ? ಏನಾದ್ರೂ ಪಾಲಿಸಿ ಡಿಸಿಷನ್ ತಗೊಂಡರೆ ಆಗ ಮಾತಾಡಬಹುದು. ಅದನ್ನು ಬಿಟ್ಟು ನೀವೇ ಎಲ್ಲಾ ಮಾಡ್ತೀರಿ. ಮಂತ್ರಿಗಳ್ಯಾರು ಅಂತಲೂ ತೀರ್ಮಾನಿಸ್ತೀರಿ. ಖಾತೇನೂ ನೀವೇ ಹಂಚ್ತೀರಿ. ಇಂಥದನ್ನೆಲ್ಲಾ ನಿಲ್ಲಿಸಿ.’
ಅತ್ಯಂತ ಪಕ್ಷಪಾತದಿಂದ ಸುದ್ದಿ ಮಾಡುವ, ಖಚಿತವಾಗಿ ಬಿಜೆಪಿ ಪರವಾಗಿ ನಿಂತಿರುವ ಕೆಲವು ಚಾನೆಲ್‍ಗಳು ಮತ್ತು ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದು, ಕುಮಾರಸ್ವಾಮಿಯವರನ್ನು ದುರ್ಬಲಗೊಳಿಸಲು ಹೋದರೆ ಮತ್ತೂ ಕೆಳಗೆ ಕುಸಿಯುತ್ತವೆ. ನೇರವಾಗಿ ಮಾತನಾಡುವ, ಜನಸಾಮಾನ್ಯರ ಲಾಜಿಕ್‍ಅನ್ನು ಸಹಜವಾಗಿ ಬಳಸುವ ಕುಮಾರಸ್ವಾಮಿಯವರ ಮಾತೇ ಜನರಿಗೆ ಹೆಚ್ಚು ಸರಿ ಎನಿಸುವ ಸಾಧ್ಯತೆ ಇದೆ. ಈಗಲಾದರೂ ಸದರಿ ಮಾಧ್ಯಮಗಳು ತಿದ್ದಿಕೊಂಡರೆ, ಪಾತಾಳ ಮುಟ್ಟಿರುವ ಪತ್ರಿಕೋದ್ಯಮದ ಘನತೆ ಸ್ವಲ್ಪ ಮಟ್ಟಿಗಾದರೂ ಉಳಿದುಕೊಂಡೀತು.
ಇವೇ ಮಾಧ್ಯಮಗಳು ಸತತವಾಗಿ 5 ವರ್ಷಗಳ ಕಾಲ ಸಿದ್ದರಾಮಯ್ಯ ವಿರೋಧಿ ಪ್ರಚಾರವನ್ನು ನಡೆಸಿದವು. ಡಿ.ಕೆ.ರವಿ ಪ್ರಕರಣವೂ ಸೇರಿದಂತೆ ಹಲವು ಸಾರಿ ಸುಳ್ಳು ಎಂದು ಗೊತ್ತಿದ್ದರೂ, ಒಂದೇ ಸಮನೆ ಅಪಪ್ರಚಾರಕ್ಕಿಳಿದವು. ನಂತರ ಬಿಜೆಪಿ ಸರ್ಕಾರದ ಅಧೀನದಲ್ಲಿದ್ದ ಸಿಬಿಐ ನಡೆಸಿದ ತನಿಖೆಯೂ ಅದನ್ನು ಆತ್ಮಹತ್ಯೆ ಎಂದು ವರದಿ ನೀಡಿದಾಗ, ಅದಕ್ಕೆ ಪ್ರಚಾರ ನೀಡಲಿಲ್ಲ. ಈ ಪ್ರಮಾಣದ ಏಕಪಕ್ಷೀಯತೆ ಸಾಧ್ಯವಾಗಿರುವುದು ಬಿಜೆಪಿ ಪರಿವಾರದ ಮತೀಯತೆಯನ್ನು ಮೈಗೂಡಿಸಿಕೊಂಡ ವರ್ಗವೇ ಇಲ್ಲೆಲ್ಲಾ ಹಿಡಿತ ಸಾಧಿಸಿರುವುದರಿಂದ. ಆದರೆ ಸಿದ್ದರಾಮಯ್ಯನವರು ಒಮ್ಮೆಯೂ ಮಾಧ್ಯಮಗಳಿಗೆ ಎಚ್ಚರಿಕೆ ನೀಡುವ ಅಥವಾ ಟೀಕೆ ಮಾಡುವ ಸಾಹಸಕ್ಕೆ ಕೈ ಹಾಕಲಿಲ್ಲ. ಇದರಲ್ಲಿ ಒಟ್ಟಾರೆ ಮಾಧ್ಯಮ ಸ್ವಾತಂತ್ರ್ಯದ ಕುರಿತಂತೆ ಅವರ ನಿಲುವು ಒಂದು ಪಾತ್ರ ವಹಿಸಿದ್ದರೆ, ಜಾತಿಯೂ ಇನ್ನೊಂದು ಕಾರಣವಾಗಿದೆ. ಕುಮಾರಸ್ವಾಮಿಯವರ ಪರವಾಗಿ ಒಂದು ಬಲಾಢ್ಯವಾದ ಜಾತಿಯು ನಿಂತಿರುವುದರಿಂದ, ಮಾಧ್ಯಮಗಳನ್ನೂ ಎದುರಿಸಿ ನಿಲ್ಲಬಲ್ಲೆ ಎನ್ನುವ ಧೈರ್ಯ ಅವರಿಗಿದೆ. ಇದನ್ನು ನಮ್ಮ ಸಾಮಾಜಿಕ ವ್ಯವಸ್ಥೆಯ ದುರಂತ ಎನ್ನಬೇಕೋ, ಅದೇ ಜಾತಿಯ ಕಾರಣದಿಂದ ಮತಾಂಧ ಶಕ್ತಿಗಳ ಪರವಾಗಿ ನಿಂತಿರುವ ಮಾಧ್ಯಮಗಳಿಗೆ ಎಚ್ಚರಿಕೆ ಕೊಟ್ಟಿದ್ದಕ್ಕೆ ಸಂತಸ ಕೊಡಬೇಕೋ ತಿಳಿಯದ ವಿಪರ್ಯಾಸದ ಸ್ಥಿತಿಯಲ್ಲಿ ನಾವಿದ್ದೇವೆ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....