Homeಮುಖಪುಟಸುದ್ದಿ ವಾಹಿನಿಗಳಿಗೆ ನಿರ್ಬಂಧ : ಆಂಧ್ರದಲ್ಲಿ ಟಿಡಿಪಿ, ವೈಎಸ್‌ಆರ್‌ಸಿಪಿ ಮತ್ತು ಮಾಧ್ಯಮ ಸಮರ

ಸುದ್ದಿ ವಾಹಿನಿಗಳಿಗೆ ನಿರ್ಬಂಧ : ಆಂಧ್ರದಲ್ಲಿ ಟಿಡಿಪಿ, ವೈಎಸ್‌ಆರ್‌ಸಿಪಿ ಮತ್ತು ಮಾಧ್ಯಮ ಸಮರ

- Advertisement -
- Advertisement -

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಮೂರು ತೆಲುಗು ಸುದ್ದಿ ವಾಹಿನಿಗಳಾದ ‘ಎನ್‌ಟಿವಿ, ಟಿವಿ9 ಮತ್ತು ಸಾಕ್ಷಿ’ಯ ಪ್ರಸಾರ ಸ್ಥಗಿತಗೊಂಡಿತ್ತು. ಚುನಾವಣೆಯಲ್ಲಿ 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಗೆದ್ದಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ರಾಜ್ಯದ ಪ್ರಮುಖ ಮೂರು ಚಾನೆಲ್‌ಗಳ ಪ್ರಸಾರ ನಿರ್ಬಂಧಿಸಿದೆ ಎಂದು ಆರೋಪಿಸಲಾಗಿತ್ತು.

ಆದರೆ, ಟಿಡಿಪಿ ಚಾನೆಲ್ ನಿರ್ಬಂಧಿಸಿದ ಆರೋಪ ನಿರಾಕರಿಸಿತ್ತು. ಈ ಮೂರು ಚಾನೆಲ್‌ಗಳು ವೈಎಸ್‌ಆರ್‌ ಕಾಂಗ್ರೆಸ್ ಪರ ಇವೆ. ಹಾಗಾಗಿ, ಅವುಗಳ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಟೀಕಿಸಿತ್ತು.

‘ಸಾಕ್ಷಿ’ ಚಾನೆಲ್ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಒಡೆತನದಲ್ಲಿದೆ. ಪ್ರಸ್ತುತ ಜಗನ್ ಅವರ ಪತ್ನಿ ವೈಎಸ್ ಭಾರತಿ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಎನ್‌ಟಿವಿ ರಚನಾ ಟೆಲಿವಿಷನ್ ಪ್ರೈವೇಟ್ ಲಿಮಿಟೆಡ್ (ಆರ್‌ಟಿಪಿಎಲ್‌) ಒಡೆತನದಲ್ಲಿದೆ. ಇದು ನರೇಂದ್ರ ಚೌಧರಿ ಅವರಿಗೆ ಸೇರಿದ್ದು. ಆಳಂದ ಮೀಡಿಯಾವು ಟಿವಿ9 ತೆಲುಗಿನಲ್ಲಿ ಬಹುಪಾಲು ಪಾಲನ್ನು ಹೊಂದಿರುವ ಮೈ ಹೋಮ್ ಗ್ರೂಪ್‌ನ ಅಧ್ಯಕ್ಷ ಜೂಪಲ್ಲಿ ರಾಮೇಶ್ವರ ರಾವ್ ಅವರ ಒಡೆತನದಲ್ಲಿದೆ. ಈ ಮೂವರೂ ವೈಎಸ್‌ಆರ್‌ ಕಾಂಗ್ರೆಸ್‌ ಪರವಿದ್ದಾರೆ ಎಂಬ ಆರೋಪ ಟಿಡಿಪಿ ವಲಯದಲ್ಲಿದೆ.

ಎನ್‌ಟಿವಿ, ಟಿವಿ9 ತೆಲುಗು, 10ಟಿವಿ ಮತ್ತು ಸಾಕ್ಷಿ ಚಾನೆಲ್‌ಗಳನ್ನು ಜೂನ್ 6 ರಿಂದ ನಿರ್ಬಂಧಿಸಲಾಗಿತ್ತು. ದೆಹಲಿ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಿಂದಾಗಿ ಎಲ್ಲಾ ಚಾನೆಲ್‌ಗಳನ್ನು ಪುನಃ ಸ್ಥಾಪಿಸಲಾಗಿದೆ. ವಿವಾದ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.

ಜಗನ್ ಮೋಹನ್ ರೆಡ್ಡಿ ಒಡೆತನ ‘ಸಾಕ್ಷಿ ಚಾನೆಲ್‌’ ನೇರವಾಗಿ ಟಿಡಿಪಿ ವಿರುದ್ಧವಿದ್ದರೆ, ಟಿವಿ9 ತೆಲುಗು ಮತ್ತು ಎನ್‌ಟಿವಿಯಂತಹ ಚಾನೆಲ್‌ಗಳು ಇತರ ಪಕ್ಷಗಳಿಗಿಂತ ವೈಎಸ್‌ಆರ್‌ಸಿಪಿಗೆ ಹೆಚ್ಚಿನ ಪ್ರಚಾರ ನೀಡಿವೆ ಎಂದು ದಿ ನ್ಯೂಸ್‌ ಮಿನಿಟ್ ವರದಿ ಹೇಳಿದೆ.

ಚಾನೆಲ್‌ಗಳ ಪ್ರಸಾರ ನಿರ್ಬಂಧಿಸಲಾಗಿದೆ ಎಂಬ ಆರೋಪ ಆಂಧ್ರಕ್ಕೆ ಹೊಸತಲ್ಲ. ತೆಲುಗು ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳು ಪಕ್ಷದ ಆಧಾರದ ಮೇಲೆ ವಿಭಜನೆಗೊಂಡಿವೆ. ಎಬಿಎನ್ ಆಂಧ್ರ ಜ್ಯೋತಿ ಮತ್ತು ಈನಾಡು ಟಿಡಿಪಿ ಪರ ಒಲವು ಹೊಂದಿವೆ. ಜಗನ್ ಮೋಹನ್ ರೆಡ್ಡಿ 2019ರಲ್ಲಿ ಅಧಿಕಾರಕ್ಕೆ ಬಂದಾಗ ಟಿವಿ5 ಮತ್ತು ಎಬಿಎನ್ ಆಂಧ್ರ ಜ್ಯೋತಿ ಎಂಬ ಎರಡು ಚಾನೆಲ್‌ಗಳು ಕೇಬಲ್‌ನಲ್ಲಿ ಪ್ರಸಾರವಾಗಿರಲಿಲ್ಲ. ಜಗನ್ ಸರ್ಕಾರ ಕೇಬಲ್ ಆಪರೇಟರ್‌ಗಳ ಮೇಲೆ ಒತ್ತಡ ಹೇರಿ ಚಾನೆಲ್‌ ಪ್ರಸಾರ ಸ್ಥಗಿತಗೊಳಿಸಿದೆ ಎಂದು ಚಾನೆಲ್‌ಗಳು ಆರೋಪಿಸಿತ್ತು. ಆದರೆ, ರಾಜ್ಯ ಸರ್ಕಾರ ಚಾನೆಲ್‌ಗಳು ಕ್ಯಾರಿಯರ್ ಶುಲ್ಕ ಪಾವತಿಸಿಲ್ಲ ಎಂದು ವಾದಿಸಿತ್ತು.

ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸುವುದು ಎರಡು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಚಾನೆಲ್‌ನ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಧಿಕಾರದಲ್ಲಿರುವ ಪಕ್ಷದ ಕುರಿತು ಸುದ್ದಿ ಮಾಡುವುದನ್ನು ತಡೆಯುತ್ತದೆ. ವಿಶೇಷವಾಗಿ ಜೂನ್ 12 ರಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಚಾನೆಲ್‌ ನಿರ್ಬಂಧಿಸಿರುವುದು ಚಾನೆಲ್‌ನ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಟಿವಿ9 ತೆಲುಗು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.

ದೆಹಲಿ ಹೈಕೋರ್ಟ್ ಜೂನ್ 24 ರಂದು ಟಿವಿ9 ತೆಲುಗಿಗೆ ಮಧ್ಯಂತರ ಪರಿಹಾರ ನೀಡಿದೆ. ಚಾನೆಲ್‌ ಪ್ರಸಾರ ಅಡೆತಡೆಯಿಲ್ಲದೆ ಮುಂದುವರಿಯಲಿದೆ ಎಂದು ಆದೇಶಿಸಿದೆ. ನಂತರದ ದಿನಗಳಲ್ಲಿ ಎನ್‌ಟಿವಿ ಮತ್ತು ಸಾಕ್ಷಿ ಕೂಡ ಇದೇ ರೀತಿಯ ಅನುಕೂಲಕರ ಆದೇಶವನ್ನು ಪಡೆದಿವೆ. ಆದರೆ, ಇದು ತಾತ್ಕಾಲಿಕ ಪರಿಹಾರ ಮಾತ್ರ. ಜೂನ್‌ನಲ್ಲಿ ನ್ಯಾಯಮಂಡಳಿಯ ರಜೆ ಮುಗಿದ ನಂತರ ಚಾನೆಲ್‌ಗಳು ಟೆಲಿಕಾಂ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್‌ಎಟಿ)ಯ ಮೊರೆ ಹೋಗಬೇಕಿದೆ.

ತಮ್ಮ ಚಾನೆಲ್ ಅನ್ನು ನಿರ್ಬಂಧಿಸುವ ಮೊದಲು ತಮಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ ಎಂದು ಟಿವಿ9 ತೆಲುಗು ದೆಹಲಿ ಹೈಕೋರ್ಟ್‌ನಲ್ಲಿ ಹೇಳಿದೆ. ಇದೇ ವಿಷಯವನ್ನು ವೈಎಸ್‌ಆರ್‌ಸಿಪಿ ರಾಜ್ಯಸಭಾ ಸದಸ್ಯ ನಿರಂಜನ್ ರೆಡ್ಡಿ ಅವರು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಟ್ರಾಯ್‌ನ ನಿಯಮ 17 ರ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರಂಜನ್ ರೆಡ್ಡಿ ಪತ್ರದಲ್ಲಿ ಕೋರಿದ್ದಾರೆ. ಯಾವುದೇ ಸೇವಾ ಪೂರೈಕೆದಾರರು ಕನಿಷ್ಠ ಮೂರು ವಾರಗಳ ಕಾಲ ಸೂಚನೆ ನೀಡದೆ ದೂರದರ್ಶನ ಚಾನೆಲ್‌ಗಳ ಸಿಗ್ನಲ್‌ಗಳ ಸಂಪರ್ಕ ಕಡಿತಗೊಳಿಸಬಾರದು ಎಂದು ನಿಯಮ 17 ಹೇಳುತ್ತದೆ. ಉದ್ದೇಶಿತ ಸಂಪರ್ಕ ಕಡಿತಕ್ಕೆ ಕಾರಣಗಳನ್ನು ನೀಡಬೇಕು ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.

“ಜಾಹೀರಾತುಗಳಿಗೆ ಈಗಾಗಲೇ ಹಣ ಪಾವತಿಸಿರುವ ಜಾಹೀರಾತುದಾರರಿಂದ ಭಾರೀ ಒತ್ತಡ ಬರುತ್ತಿದೆ. ಚಾನೆಲ್ ಪ್ರಸಾರವಾಗದಿದ್ದರೆ ಜಾಹೀರಾತುದಾರರು ತಮ್ಮ ಪ್ರಚಾರವನ್ನು ಹಿಂತೆಗೆದುಕೊಳ್ಳಬಹುದು. ಇದು ಚಾನೆಲ್ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಬಹುದು” ಎಂದು ಸಾಕ್ಷಿ ಟಿವಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ದಿ ನ್ಯೂಸ್ ಮಿನಿಟ್ ಹೇಳಿದೆ.

ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಮತ್ತು ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ (ಐಎಫ್‌ಜೆ) ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಮೂರು ಚಾನೆಲ್‌ಗಳ ಮೇಲಿನ ನಿರ್ಬಂಧದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಜಗನ್ ಸರ್ಕಾರ ಮತ್ತು ಮಾಧ್ಯಮ ತಿಕ್ಕಾಟ

ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿಯು ರಾಮೋಜಿ ರಾವ್ ಮಾಲೀಕತ್ವದ ಈನಾಡು, ಆಂಧ್ರ ಜ್ಯೋತಿ ಮತ್ತು ಟಿವಿ5 ಮೇಲೆ ಮಾನನಷ್ಟ ಮೊಕದ್ದಮೆಗಳ ಬೆದರಿಕೆಯೊಡ್ಡುವ ಮೂಲಕ ದಾಳಿ ಮಾಡಿದೆ ಎಂದು ಟಿಡಿಪಿ ಈ ಹಿಂದೆ ಆರೋಪಿಸಿತ್ತು. ಇದಕ್ಕೆ ಪುಷ್ಠಿ ನೀಡುವಂತೆ 2019 ರ ಬಜೆಟ್ ಅಧಿವೇಶನದ ವೇಳೆ ಈ ಚಾನೆಲ್‌ಗಳು ವಿಧಾನಸಭೆಯಿಂದ ನೇರ ಪ್ರಸಾರ ಮಾಡದಂತೆ ಸರ್ಕಾರ ತಡೆಯೊಡ್ಡಿತ್ತು. ಇದು ಭಾರೀ ತಿಕ್ಕಾಟಕ್ಕೆ ಕಾರಣವಾಗಿತ್ತು. ನಂತರ ಜಗನ್ ಸರ್ಕಾರ ಈನಾಡು ಸಮೂಹದ ಒಡೆತನದ ಮತ್ತೊಂದು ಕಂಪನಿ ಮಾರ್ಗದರ್ಶಿ ಚಿಟ್‌ಫಂಡ್ ಮೇಲಿನ ಕ್ರಿಮಿನಲ್ ಮೊಕದ್ದಮೆಗಳ ತನಿಖೆ ಪ್ರಾರಂಭಿಸಿತ್ತು.

ಆಗಸ್ಟ್ 2023ರಲ್ಲಿ, ಆಂಧ್ರ ಪ್ರದೇಶ ಅಪರಾಧ ತನಿಖಾ ಇಲಾಖೆ (ಸಿಐಡಿ) ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಅಡಿಯಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ (ಎಂಸಿಎಫ್‌ಪಿಎಲ್‌) ವಿರುದ್ಧ 10 ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ದಾಖಲಿಸಿತ್ತು.

ವಂಚನೆ, ನಂಬಿಕೆ ದ್ರೋಹ ಸೇರಿದಂತೆ ಹಲವು ಆರೋಪಗಳನ್ನು ಮಾರ್ಗದರ್ಶಿ ಚಿಟ್ ಫಂಡ್‌ ವಿರುದ್ದ ಹೊರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ನಿಧನರಾದ ರಾಮೋಜಿ ರಾವ್, ಅವರ ಸೊಸೆ ಮತ್ತು ಎಂಸಿಎಫ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕಿ ಸಿ ಸೈಲಜಾ ಕಿರಣ್ ಅವರನ್ನು ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗಿದೆ.
ಕಾನೂನು ಹೋರಾಟಗಳ ಹೊರತಾಗಿ, ಜಗನ್ ಸರ್ಕಾರ ಮತ್ತು ಈನಾಡು ಸಮೂಹದ ನಡುವೆ ರಾಜಕೀಯ ತಿಕ್ಕಾಟವು ಬಹಿರಂಗವಾಗಿ ನಡೆಯುತ್ತಿದೆ. ಹಲವಾರು ರಾಜಕೀಯ ಭಾಷಣಗಳಲ್ಲಿ ಈನಾಡು ಸಮೂಹದ ವಾಹಿನಿಗಳ ವಿರುದ್ದ ವಾಗ್ದಾಳಿ ನಡೆಸಿರುವ ಜಗನ್ ಪಕ್ಷದ ನಾಯಕರು, ಈನಾಡು ಸಮೂಹದ ವಾಹಿನಿಗಳು ಪಕ್ಷಪಾತದಿಂದ ಕೂಡಿವೆ ಎಂದು ಆರೋಪಿಸಿದ್ದರು. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ರಾಮೋಜಿ ರಾವ್ ಜೊತೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಿದ್ದರು. ಸ್ವತಃ ಜಗನ್ ಮೋಹನ್ ರೆಡ್ಡಿ ಆಗಾಗ ಈನಾಡು ಮತ್ತು ಆಂಧ್ರ ಜ್ಯೋತಿಯನ್ನು “ಹಳದಿ ಮಾಧ್ಯಮ” ಎಂದು ಸಂಬೋಂಧಿಸಿದ್ದಿದೆ.

ಜನವರಿ 2024ರಲ್ಲಿ, ಟಿವಿ9 ತೆಲುಗು ವಾಹಿನಿಯ ಸಹಾಯಕ ಸಂಪಾದಕಿ ಹಸೀನಾ ಶೇಕ್ ಅವರು ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಕೊಡಲಿ ನಾನಿ ಅವರ ಸಂದರ್ಶನ ನಡೆಸಿದ್ದರು. ಆ ಬಳಿಕ ಹಸೀನಾ ಅವರು ಟಿಡಿಪಿಯ ಸಾಮಾಜಿಕ ಮಾಧ್ಯಮ ವಿಭಾಗದಿಂದ ಭಾರೀ ಕಿರುಕುಳಕ್ಕೊಳ ಅನುಭವಿಸಿದ್ದರು. “ಟಿವಿ9 ತೆಲುಗು ತಮ್ಮ ಪಕ್ಷಕ್ಕೆ ಸರಿಯಾದ ಅವಕಾಶ ನೀಡುತ್ತಿಲ್ಲ ಎಂಬ ಸಾಮಾನ್ಯ ಭಾವನೆ ಟಿಡಿಪಿ ಬೆಂಬಲಿಗರಲ್ಲಿದೆ. ಈ ಕಾರಣದಿಂದಾಗಿ ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ಹಸೀನಾ ಶೇಖ್ ಜನವರಿ 18, 2024 ರಂದು ತಿಳಿಸಿದ್ದಾಗಿ ದಿ ನ್ಯೂಸ್ ಮಿನಿಟ್ ತಿಳಿಸಿದೆ.

ಎರಡು ಬಾರಿ ಆಂಧ್ರ ಪ್ರದೇಶದ ಸಿಎಂ ಆಗಿದ್ದ ಪ್ರಮುಖ ಕಾಂಗ್ರೆಸ್ ನಾಯಕ ವೈಎಸ್ ರಾಜಶೇಖರ ರೆಡ್ಡಿ ಅವರು ಈನಾಡು ಮತ್ತು ಆಂಧ್ರಜ್ಯೋತಿಯೊಂದಿಗೆ ವಿವಾದಾತ್ಮಕ ಸಂಬಂಧ ಹೊಂದಿದ್ದರು. ಅವುಗಳನ್ನು “ಹಳದಿ ಮಾಧ್ಯಮಗಳು” ಎಂದು ಕರೆದಿದ್ದರು.

2007ರಲ್ಲಿ ವೈಎಸ್ ರಾಜಶೇಖರ ರೆಡ್ಡಿ ಅವರು ವಿಶೇಷ ಮಾಹಿತಿ ಆಯುಕ್ತರಿಗೆ ಸುಳ್ಳು, ಆಧಾರರಹಿತ, ಮಾನಹಾನಿಕರ ಸುದ್ದಿ ಪ್ರಕಟಿಸುವ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮೇಲೆ ಮೊಕದ್ದಮೆ ಹೂಡಲು ಅಧಿಕಾರ ನೀಡಿತ್ತು. ಅಕ್ಟೋಬರ್ 2019 ರಲ್ಲಿ, ಜಗನ್, ಸಿಎಂ ಆದಾಗ ಈ ಅಧಿಕಾರವನ್ನು ವಿಸ್ತರಿಸಿದರು. ಎಲ್ಲಾ ಇಲಾಖೆಗಳ ಮುಖ್ಯಸ್ಥರಾಗಿರುವ ಅಧಿಕಾರಿಗೆ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಅಧಿಕಾರವನ್ನು ನೀಡಿದರು.

ಕೃಪೆ : ದಿ ನ್ಯೂಸ್ ಮಿನಿಟ್ 

ಇದನ್ನೂ ಓದಿ : ಹೊಸ ಕ್ರಿಮಿನಲ್ ಕಾನೂನುಗಳಿಗೆ ರಾಜ್ಯ ಸರ್ಕಾರದಿಂದ ಆಕ್ಷೇಪ; ನಿಬಂಧನೆಗಳ ತಿದ್ದುಪಡಿಗೆ ಚಿಂತನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...