Homeಕರ್ನಾಟಕಸುಪ್ರೀಂ ತೀರ್ಪು: ಅನರ್ಹರಿಗೆ ನಿಟ್ಟುಸಿರು, ಬಿಜೆಪಿಗೆ ಇಕ್ಕಟ್ಟು!

ಸುಪ್ರೀಂ ತೀರ್ಪು: ಅನರ್ಹರಿಗೆ ನಿಟ್ಟುಸಿರು, ಬಿಜೆಪಿಗೆ ಇಕ್ಕಟ್ಟು!

- Advertisement -
- Advertisement -

ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಇರಾದೆಯಿಂದಲೇ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರ ಅನರ್ಹತೆಯ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪು ಬಿಜೆಪಿಯೊಳಗೆ ದೊಡ್ಡ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆಯೇ ಹೆಚ್ಚು. ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಈ ಎಲ್ಲಾ ಹದಿನೇಳು ಜನರನ್ನು ಅನರ್ಹಗೊಳಿಸಿದ್ದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆಯಾದರು, ಈ ವಿಧಾನಸಭೆ ಅವಧಿ ಮುಗಿಯುವವರೆಗೆ ಅವರು ಸ್ಪರ್ಧಿಸುವಂತಿಲ್ಲ ಎಂದು ನಿರ್ಬಂಧ ಹೇರಿದ್ದ ಅವರ ಕ್ರಮವನ್ನು ತೊಡೆದುಹಾಕಿದೆ. ಇದರಿಂದಾಗಿ ಅನರ್ಹ ಶಾಸಕರು ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ತೊಡಕೂ ಇಲ್ಲದಂತಾಗಿದೆ. ಅದೇ ಸಮಯದಲ್ಲಿ, ಮರು ಆಯ್ಕೆ ಆಗುವವರೆಗೆ ಅವರು ಸರ್ಕಾರದ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಹೊಂದುವಂತಿಲ್ಲ ಎಂಬ ಕಟ್ಟಾಜ್ಞೆಯನ್ನೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಅಂದರೆ, ಈಗ ಬಿಜೆಪಿ ಮುಂದೆ ಎರಡು ಹೊಣೆಗಳಿವೆ. ಮೊದಲನೆಯದ್ದು, ಎಲ್ಲಾ ಅನರ್ಹ ಶಾಸಕರಿಗೆ ಟಿಕೇಟು ಕೊಡಲೇಬೇಕು. ಈಗಾಗಲೇ ತೀರ್ಪು ಹೊರಬೀಳುತ್ತಿದ್ದಂತೆಯೇ ದಿಲ್ಲಿಯಲ್ಲಿ ಹಿಂದಿ ಸುದ್ದಿಗಾರರು ಕೇಳಿದ “ನೀವು ಯಾವ ಪಕ್ಷದಿಂದ ಸ್ಪರ್ಧಿಸುತ್ತೀರಿ?” ಎಂಬ ಪ್ರಶ್ನೆಗೆ ಮುಂಚೂಣಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯವರು “ನಿಸ್ಸಂದೇಹವಾಗಿ ಬಿಜೆಪಿಯಿಂದ” ಎಂಬ ಹೇಳಿಕೆಯನ್ನು ನೀಡಿಯಾಗಿದೆ. ಇನ್ನು ಬಿಜೆಪಿ ಪಾಲಿಗಿರುವ ಎರಡನೇ ಹೊಣೆಯೆಂದರೆ, ಕೇವಲ ಟಿಕೇಟು ಕೊಡುವುದು ಮಾತ್ರವಲ್ಲ ಅವರನ್ನು ಶತಾಯಗತಾಯ ಗೆಲ್ಲಿಸಿಕೊಳ್ಳಲೇಕಿದೆ. ಇದಕ್ಕೂ ಎರಡು ಕಾರಣಗಳುಂಟು.

ಹದಿನೇಳು ಶಾಸಕರ ರಾಜೀನಾಮೆಯಿಂದ ವಿಧಾನಸಭೆಯಲ್ಲಿ ಈಗಿರುವುದು ಅಲ್ಪಮತದ ಸರ್ಕಾರ. ಕರ್ನಾಟಕ ಅಸೆಂಬ್ಲಿಯ ಮ್ಯಾಜಿಕ್ ನಂಬರ್ 113 ಅನ್ನು ದಾಟಬೇಕೆಂದರೆ ಬಿಜೆಪಿಗೆ ಈ ಉಪಚುನಾವಣೆಯಲ್ಲಿ ಕನಿಷ್ಠ ಎಂಟು ಎಂಎಲ್‌ಎಗಳನ್ನು ಗೆಲ್ಲಿಸಿಕೊಳ್ಳಲೇಬೇಕಿದೆ. ಇನ್ನು ಕೊಂಚ ಸರ್ಕಾರ ಸುಭದ್ರವಾಗಿ ಉಸಿರಾಡಬೇಕೆಂದರೆ ಸದ್ಯ ನಡೆಯುತ್ತಿರುವ ಎಲ್ಲಾ ಹದಿನೈದು (ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರ ಹೊರತುಪಡಿಸಿ) ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲೇಬೇಕಿದೆ. ಸರ್ಕಾರವನ್ನು ಉಳಿಸಿಕೊಳ್ಳಬೇಕೆಂದರೆ ಅನರ್ಹರನ್ನು ಗೆಲ್ಲಿಸಿಕೊಳ್ಳಲೇಬೇಕು. ಇದು ಒಂದು ಕಾರಣ. ಮತ್ತೊಂದು ಕಾರಣ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಉಲ್ಲೇಖದಲ್ಲಿದೆ. ಅದು, ಮರು ಆಯ್ಕೆ ಆಗುವವರೆಗೆ ಸಾಂವಿಧಾನಿಕ ಹುದ್ದೆ ಹೊಂದುವಂತಿಲ್ಲ ಎಂಬ ನಿಬಂಧನೆ!

ಹೌದು, ಅನರ್ಹ ಶಾಸಕರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ, ಮಿಕ್ಕ ಬಹುಪಾಲು ಜನ ತಮ್ಮ ಮಾತೃಪಕ್ಷಗಳಿಗೆ ದ್ರೋಹವೆಸಗಿ ಬಿಜೆಪಿಯತ್ತ ನಡೆದದ್ದೇ, ಮಂತ್ರಿಯಾಗಬೇಕೆಂಬ ಮಹಾದಾಸೆಯಿಂದ. ಬಿಜೆಪಿ ಕೂಡಾ ಅವರನ್ನು ತನ್ನ ಸರ್ಕಾರದಲ್ಲಿ ಮಂತ್ರಿ ಮಾಡುವ ಭರವಸೆ ಕೊಟ್ಟೇ ತನ್ನತ್ತ ಸೆಳೆದುಕೊಂಡಿತ್ತೆಂಬುದನ್ನು ಹಾದಿಬೀದಿಯಲ್ಲಿ ಜನರೇ ಮಾತಾಡಿಕೊಳ್ಳುತ್ತಿದ್ದಾರೆ. ಅನರ್ಹತೆಯ ಸಮಯದಲ್ಲಿ ಸ್ಪೀಕರ್ ಹಾಕಿದ್ದ ಈ ನಿಬಂಧನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯದೇ ಹೋಗಿದ್ದರೆ, ಅನರ್ಹರನ್ನು ಚುನಾವಣಾ ಸ್ಪರ್ಧೆಗಿಳಿಸದೆ ಎಂಎಲ್‌ಸಿ ಮಾಡಿ ಸಚಿವರನ್ನಾಗಿಸಿಯೊ ಅಥವಾ ಭರಪೂರ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿಸಿಯೊ ಅಥವಾ ಕ್ಯಾಬಿನೆಟ್ ದರ್ಜೆಯ ಪರ್ಯಾಯ ಹುದ್ದೆಗಳನ್ನು ಸೃಷ್ಟಿಸಿಯೋ ಅವರನ್ನು ಸಂತೈಸುವ ಅವಕಾಶವಿರುತ್ತಿತ್ತು. ಆದರೆ ಈಗ `ರಾಜೀನಾಮೆ ಕೊಟ್ಟರೆ ಮಂತ್ರಿ ಮಾಡುತ್ತೇವೆ’ ಎಂಬ ತನ್ನ ಮಾತನ್ನು ಈಡೇರಿಸಬೇಕೆಂದರೆ ಎಲೆಕ್ಷನ್‌ಗೆ ನಿಲ್ಲಿಸಿ, ಗೆಲ್ಲಿಸಲೇಬೇಕಿದೆ. ಇಲ್ಲವಾದರೆ ಸರ್ಕಾರ ಅಲ್ಪಮತಕ್ಕೆ ಕುಸಿಯೋದು ಮಾತ್ರವಲ್ಲ, ಅನರ್ಹರಿಗೆ ನಂಬಿಸಿ ರಾಜೀನಾಮೆ ಕೊಡಿಸಿ, ಬೇಕಂತಲೆ ಸೋಲಿಸಿ ನಂಬಿಕೆದ್ರೋಹ ಮಾಡಿದರು ಎಂಬ ಅಪಖ್ಯಾತಿಯೂ ಬಿಜೆಪಿಗೆ ತಟ್ಟಲಿದೆ.

ಬಿಜೆಪಿಯ ಅಸಲೀ ಸಂಕಟ ಇರುವುದೇ ಇಲ್ಲಿ. ಯಾಕೆಂದರೆ ಅನರ್ಹ ಶಾಸಕರಿಗೆ ಟಿಕೇಟ್ ನೀಡುವುದಕ್ಕೆ ಪಕ್ಷದೊಳಗೇ ವಿಪರೀತ ವಿರೋಧವಿದೆ. ಯಡ್ಯೂರಪ್ಪನವರಿಗೆ ಹಿನ್ನಡೆ ಮಾಡಬೇಕೆಂದು ಇಂಥಾ ವಿರೋಧ ವ್ಯಕ್ತಪಡಿಸುತ್ತಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಚಿತಾವಣೆ ಒಂದು ಕಡೆಗಾದರೆ, ಆಯಾ ಕ್ಷೇತ್ರಗಳಲ್ಲಿ ಈ ಕಳೆದ ಎಲೆಕ್ಷನ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದವರು ಟಿಕೆಟ್‌ಗೆ ಪಟ್ಟು ಹಿಡಿದು ಬಂಡಾಯವೆದ್ದಿದ್ದಾರೆ.

ಹೊಸಕೋಟೆಯಲ್ಲಿ ಬಿ.ಎನ್.ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಬಹಿರಂಗ ಪ್ರಚಾರಕ್ಕಿಳಿದಿದ್ದರೆ, ಹಿರೇಕೆರೂರಿನಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಬಿಸಿ ಪಾಟೀಲ್‌ಗೆ ಬಿಜೆಪಿಯ ಮಾಜಿ ಶಾಸಕ ಯುಬಿ ಬಣಕಾರ್ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಇನ್ನು ಕಳೆದ ಎಲೆಕ್ಷನ್‌ನಲ್ಲಿ ಸೋತರೂ ಉಪಮುಖ್ಯಮಂತ್ರಿ `ಭಾಗ್ಯ’ ಪಡೆದಿರುವ ಲಕ್ಷ್ಮಣ್‌ ಸವದಿ ಅಥಣಿ ಕ್ಷೇತ್ರದ ಮೇಲೆ ಕಣ್ಣಿಟ್ಟೇ ‘ನಮಗೂ ಅನರ್ಹರಿಗೂ ಯಾವುದೇ ಸಂಬಂಧವಿಲ್ಲ. ಅವರು ಯಾವ ಪಕ್ಷದಿಂದ ಬೇಕಾದರು ಸ್ಪರ್ಧಿಸಿಕೊಳ್ಳಲಿ ಟಿಕೆಟ್ ಖಾತರಿಯಿಲ್ಲ’ ಎಂಬ ಮಾತನ್ನಾಡಿದ್ದರು. ಇದು ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಬಂಡಾಯದ ಮೆಸೇಜು ರವಾನಿಸಿದೆ.

ಅತ್ತ ಯಲ್ಲಾಪುರದಲ್ಲಿ ಕಳೆದ ಸಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ವಿ.ಎಸ್. ಪಾಟೀಲರಿಗೆ ವಾಯುವ್ಯ ಸಾರಿಗೆ ಸಂಸ್ಥೆಯ ಚೇರ‍್ಮನ್ ಮಾಡಿ, ಶಿವರಾಂ ಹೆಬ್ಬಾರ್ ವಿರುದ್ಧ ಬಂಡಾಯ ಏಳದಂತೆ ಮುಂಜಾಗ್ರತೆ ವಹಿಸಲಾಗಿದೆ. ಆದರೆ `ಸುಪ್ರೀಂ ಕೋರ್ಟ್ ತೀರ್ಪು ಖಂಡಿತ ಅನರ್ಹರ ವಿರುದ್ಧ ಬರುತ್ತೆ, ಆಗ ನನಗೇ ಟಿಕೆಟ್ ಖಾಯಂ. ಒಂದೊಮ್ಮೆ ಅದು ಬಿಟ್ಟು ಹೆಬ್ಬಾರ್ ಹೆಂಡತಿ, ಮಗನಿಗೊ ಕೊಟ್ಟರೆ ಬಂಡಾಯ ಏಳೋದು ಗ್ಯಾರಂಟಿ’ ಎಂಬ ಭಿನ್ನರಾಗವನ್ನು ಚರ‍್ಮನ್‌ಗಿರಿ ಸಿಕ್ಕ ಮೇಲೂ ಪಾಟೀಲ್ ಹಾಡಿದ್ದುಂಟು. ಅಂದರೆ, ಕಳೆದ ಸಲ ಕೇವಲ 1400 ಮತಗಳ ಅಂತರದಿಂದ `ಜಸ್ಟ್ ಮಿಸ್’ ಸೋಲನಭಿಸಿದ್ದ ಪಾಟೀಲ್‌ಗೆ ಸ್ಪರ್ಧೆಗಿಳಿಯುವ ಇಂಗಿತ ಇರೋದು ಇದರಿಂದ ಖಾತ್ರಿಯಾಗುತ್ತೆ.

ಹೀಗೆ ಪ್ರತಿ ಕ್ಷೇತ್ರದಲ್ಲು ಬಿಜೆಪಿಗೆ ಬಂಡಾಯ ಎಡತಾಕುತ್ತಲೇ ಇದೆ. ಈಗಾಗಲೇ ತೀರ್ಪಿನ ಕುರಿತು ಪ್ರತಿಕ್ರಿಯಿಸುವ ಸಂದರ್ಭದಲ್ಲಿ ವರದಿಗಾರರೊಬ್ಬರು ಶರತ್ ಬಚ್ಚೇಗೌಡರ ಬಂಡಾಯದ ಕುರಿತು ಕೇಳಿದ ಪ್ರಶ್ನೆಗೆ ಕಿರಿಕಿರಿಗೊಂಡ ಯಡ್ಯೂರಪ್ಪನವರು `ಯಾರು ನಮ್ಮ ಜೊತೆ ಇದ್ದಾರೊ ಅವರ ಬಗ್ಗೆ ಮಾತ್ರ ನಾನು ಮಾತಾಡುತ್ತೇನೆ. ಬೇರೆಯವರ ಬಗ್ಗೆ ಪ್ರತಿಕ್ರಿಯಿಸಲು ಹೋಗಲ್ಲ’ ಎಂದು ಹೇಳಿದ್ದು ಬಿಜೆಪಿ ಅನುಭವಿಸುತ್ತಿರುವ ಬಂಡಾಯದ ಬೇಗುದಿಗೆ ಸಾಕ್ಷಿಯಿದ್ದಂತಿದೆ.

ಒಂದೊಮ್ಮೆ, ಸುಪ್ರೀಂ ಕೋರ್ಟ್ ಏನಾದರು `ಸ್ಪೀಕರ್ ಹೇಳಿದಂತೆ ಈ ವಿಧಾನಸಭಾ ಅವಧಿ ಮುಗಿವವರೆಗೆ ಅನರ್ಹರು ಚುನಾವಣೆಗೆ ಸ್ಪರ್ಧಿಸುವಂತೆಯೇ ಇಲ್ಲ’ ಅನ್ನೋ ತೀರ್ಪನ್ನೇನ್ನಾದರು ಕೊಟ್ಟಿದ್ದರೆ, ಬಿಜೆಪಿಗೆ ಹಾದಿ ಸಲೀಸಾಗುತ್ತಿತ್ತು. ಅದನ್ನೇ ನೆಪ ಮಾಡಿಕೊಂಡು ಯಾವ ಬಂಡಾಯವೂ ಇಲ್ಲದೆ ಚುನಾವಣೆಗೆ ತಯಾರಿ ನಡೆಸಿ ಗೆಲ್ಲಬಹುದಿತ್ತು. ಆದರೀಗ ವಿರೋಧದ ನಡುವೆಯೇ ಅನರ್ಹರಿಗೆ ಟಿಕೇಟ್ ಕೊಟ್ಟು, ಬಂಡಾಯಗಾರರ ಬಿಸಿ ಮುಟ್ಟಿಸಿಕೊಂಡು ಏಗಬೇಕಾಗಿದೆ.

ಅಂದಹಾಗೆ, ಇತ್ತೀಚೆಗೆ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭಾ ಚುನಾವಣೆ ಜೊತೆಗೆ ಬೇರೆಬೇರೆ ಕಡೆ ನಡೆದ ಉಪಚುನಾವಣೆಗಳಲ್ಲಿ ಇದೇ ರೀತಿ ಪಕ್ಷಾಂತರ ಮಾಡಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಹಳಷ್ಟು ಮಂದಿಗೆ ಸೋಲಾಗಿದೆ. ಇದು ಕೂಡಾ, ಸುಪ್ರೀಂ ತೀರ್ಪಿನಿಂದಾಗಿ ಅನರ್ಹರನ್ನು ಕಣಕ್ಕಿಳಿಸಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಬಿಜೆಪಿಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕೊನೇ ಮಾತು: ಉಪಚುನಾವಣೆಗೆ ಕಾಂಗ್ರೆಸ್ ಅದಾಗಲೆ ಎಂಟು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅವೆಲ್ಲವೂ ಬಿಜೆಪಿ ಇದೀಗ ಬಂಡಾಯ ಎದುರಿಸುತ್ತಿರುವ ಕ್ಷೇತ್ರಗಳೇ ಆಗಿವೆ. ಒಂದೊಮ್ಮೆ ಕಾಂಗ್ರೆಸ್, ಬಂಡಾಯ ಬಿಜೆಪಿಗರನ್ನು ತನ್ನತ್ತ ಸೆಳೆದು ಅವರನ್ನು ಕಣಕ್ಕಿಳಿಸಿದ್ದರೂ ಬಿಜೆಪಿಗೆ ಇಷ್ಟೊಂದು ಕಷ್ಟವಿರುತ್ತಿರಲಿಲ್ಲ. ಯಾಕೆಂದರೆ ಬಿಜೆಪಿ ಮತಗಳು ಛಿದ್ರವಾಗುತ್ತಿರಲಿಲ್ಲ. ಆದರೀಗ ಬಿಜೆಪಿಯಿಂದ ಸ್ಪರ್ಧಿಸುವ ಅನರ್ಹರಿಗೆ ಬಂಡಾಯವಾಗಿ ಹಳೇ ಬಿಜೆಪಿಗರು ಕಣಕ್ಕಿಳಿದರೆ, ಅಥವಾ ರಿವರ್ಸ್ ಚುನಾವಣಾ ಪ್ರಚಾರಕ್ಕಿಳಿದರೆ ಬಿಜೆಪಿ ಮತಗಳು ಛಿದ್ರಗೊಂಡು ಬಿಜೆಪಿಗೆ ದುಬಾರಿಯಾಗಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...