ನಟಿ-ಸಂಸದೆ ಕಂಗನಾ ರನೌತ್ ಅವರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನ ಚರಿತ್ರೆ ಕುರಿತಾದ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಯ ದಿನವಾದ ಇಂದು (ಜ.17) ಈ ಹಿಂದಿನ ದಿನಕ್ಕಿಂತಲೂ ಇನ್ನೂ ಪ್ರಕ್ಷುಬ್ದ ವಾತಾವರಣವಿದೆ. ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ಜಿಪಿಸಿ) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ರಾಜ್ಯದಲ್ಲಿ ಅದರ ಪ್ರದರ್ಶನದ ಮೇಲೆ ನಿಷೇಧ ಹೇರುವಂತೆ ಒತ್ತಾಯಿಸಿದೆ. ಎಸ್ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಬಿಡುಗಡೆಯನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗೆ ಪತ್ರ ಕಳುಹಿಸಿದ್ದಾರೆ.
ಚಿತ್ರವು ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ. ಏತನ್ಮಧ್ಯೆ, ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಪತ್ರದ ಪ್ರತಿಯನ್ನು ಗುಂಪಿನ ಅಧಿಕೃತ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. “ಸಿಖ್ಖರ ಪವಿತ್ರ ದೇವಾಲಯ ಶ್ರೀ ಹರ್ಮಂದರ್ ಸಾಹಿಬ್, ಅತ್ಯುನ್ನತ ಧಾರ್ಮಿಕ ಸ್ಥಳ ಅಕಲ್ ತಖ್ತ್ ಸಾಹಿಬ್ ಮತ್ತು ಇತರ ಗುರುದ್ವಾರಗಳ ಮೇಲಿನ ದಾಳಿಗಳು ಮತ್ತು ಸಿಖ್ ನರಮೇಧ (1984 ರ)ಕ್ಕೆ ಸಂಬಂಧಿಸಿದ ಸಂಗತಿಗಳನ್ನು ಮರೆಮಾಚುವ ಮೂಲಕ, ಈ ಚಿತ್ರವು ಸಿಖ್ ವಿರೋಧಿ ಕಾರ್ಯಸೂಚಿಯಡಿಯಲ್ಲಿ ವಿಷವನ್ನು ಹರಡಲು ಕೆಲಸ ಮಾಡುತ್ತದೆ. ಆದ್ದರಿಂದ, ಪಂಜಾಬ್ನಲ್ಲಿ ಈ ಚಿತ್ರವನ್ನು ಪ್ರದರ್ಶಿಸುವುದನ್ನು ನಿಷೇಧಿಸಬೇಕೆಂದು ನಾವು ಮತ್ತೆ ಒತ್ತಾಯಿಸುತ್ತೇವೆ. ಬಿಡುಗಡೆಯಾದರೆ, ನಾವು ಅದನ್ನು ಬಲವಾಗಿ ಪ್ರತಿಭಟಿಸಬೇಕಾಗುತ್ತದೆ” ಎಂದಿದ್ದಾರೆ.
ಕೋಲಾಹಲದ ನಡುವೆ, ಅಮೃತಸರದ ಚಿತ್ರಮಂದಿರಗಳ ಹೊರಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು, ಎಸ್ಜಿಪಿಸಿ ಸದಸ್ಯರೊಬ್ಬರು ಈ ವಿಷಯದ ಕುರಿತು ಎಎನ್ಐ ಜೊತೆ ಮಾತನಾಡುತ್ತಾ, “ಕಂಗನಾ ರನೌತ್ ಅವರ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ನಮ್ಮ ಇಂದಿನ ಪ್ರತಿಭಟನೆ. ಈ ಚಿತ್ರದಲ್ಲಿ ಸಿಖ್ ಧರ್ಮದ ಇತಿಹಾಸ ಮತ್ತು 1984ರ ಇತಿಹಾಸವನ್ನು ವಿರೂಪಗೊಳಿಸಿದ ರೀತಿಯಲ್ಲಿ ಚಿತ್ರಿಸಲಾಗಿದೆ. ಇದರ ಟೀಸರ್ ಹೊರಬಂದಾಗಲೂ ನಾವು ಇದರ ವಿರುದ್ಧ ಮೊದಲೇ ಪ್ರತಿಭಟಿಸಿದ್ದೆವು, ಆದರೆ ಸರ್ಕಾರ ಅದರ ವಿರುದ್ಧ ಯಾವ ಕ್ರಮಕೈಗೊಂಡಿಲ್ಲ. ಸೆನ್ಸಾರ್ ಮಂಡಳಿ ಅದನ್ನು ನಿಷೇಧಿಸುವ ಬದಲು ಹಸಿರು ನಿಶಾನೆ ತೋರಿಸಿದೆ. ಚಿತ್ರದ ಪ್ರದರ್ಶನದ ವಿರುದ್ಧ ಪ್ರತಿಭಟಿಸಲು ನಾವು ನಿರ್ಧರಿಸಿದ್ದೇವೆ. ಇಂದು ಚಿತ್ರಮಂದಿರದ ಮಾಲೀಕರು ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ. ಆದರೆ ದಿನ ಕಳೆದಂತೆ ಈ ಕುರಿತು ಏನೂ ಮಾಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕು. ಇದು ಹೀಗೆಯೇ ಮುಂದುವರಿದರೆ, ಎಲ್ಲವೂ ಸರಿಯಾಗುತ್ತದೆ. ಇಲ್ಲದಿದ್ದರೆ ಚಿತ್ರ ಬಿಡುಗಡೆಯಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಪಂಜಾಬ್ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯ ಅಡಚಣೆಗೆ ಕಾರಣವಾಗಿರುತ್ತದೆ. ಏಕೆಂದರೆ ನಾವು ಮುಖ್ಯಮಂತ್ರಿಗೂ ಪತ್ರ ಬರೆದಿದ್ದೆವು, ಆದರೆ ಅವರಿಂದ ಯಾವುದೇ ಉತ್ತರ ಬಂದಿಲ್ಲ.” ಎಂದಿದ್ದಾರೆ.
1975ರಲ್ಲಿ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿಯ ಅವಧಿಯ ಜೊತೆಗೆ, ಚಿತ್ರವು ಆಗಿನ ಪ್ರಧಾನಿಯ ಹತ್ಯೆ ಮತ್ತು 80ರ ದಶಕದಲ್ಲಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ನೇತೃತ್ವದ ಖಲಿಸ್ತಾನ್ ಚಳುವಳಿಯನ್ನು ಸಹ ಚಿತ್ರಿಸುತ್ತದೆ. ಇದನ್ನು ಬಿಡುಗಡೆಯಾದ ಟ್ರೇಲರ್ನಲ್ಲಿ ಹೈಲೈಟ್ ಮಾಡಲಾಗಿದೆ.
ವಿವಿಧ ಸಿಖ್ ಸಮುದಾಯಗಳು ಚಿತ್ರದಲ್ಲಿ ನಿರ್ಮಾಪಕರು ಸತ್ಯಗಳನ್ನು ತಪ್ಪಾಗಿ ನಿರೂಪಿಸಿದ್ದಾರೆ ಮತ್ತು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿವೆ ಮತ್ತು ಇಂಟರ್ನೆಟ್ನಲ್ಲಿ ಈ ಹಿಂದೆ ಬಿಡುಗಡೆಯಾದ ಪ್ರೋಮೋವನ್ನು ವಿರೋಧಿಸಿವೆ.
ಗೋಧ್ರಾ ರೈಲು ದಹನ ದುರಂತ: ಫೆ.13ಕ್ಕೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ


