ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.7) 4 ಲಕ್ಷ ಕೋಟಿ ರೂಪಾಯಿ (409549) ಮೊತ್ತದ ರಾಜ್ಯ ಬಜೆಟ್ ಮಂಡಿಸಿದ್ದಾರೆ.
ಬಜೆಟ್ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಘೋಷಣೆಗಳನ್ನು ಮಾಡಲಾಗಿದೆ. ಈ ಪೈಕಿ ದೇವನಹಳ್ಳಿ ಕೈಗಾರಿಕಾ ಪ್ರದೇಶದ ‘ಫಾಕ್ಸ್ಕಾನ್’ (Foxconn) ಕಂಪನಿಯ ಮೊಬೈಲ್ ಫೋನ್ ಉತ್ಪಾದನಾ ಘಟಕಕ್ಕೆ ಇಎಸ್ಡಿಎಂನ ನೀತಿಯಡಿ 6,970 ಕೋಟಿ ರೂಪಾಯಿಗಳ ಪ್ರೋತ್ಸಾಹವನ್ನು ನೀಡುವುದು ಒಂದು.
“ಫಾಕ್ಸ್ಕಾನ್ ಕಂಪನಿಯ ಮೊಬೈಲ್ ಫೋನ್ಗಳ ಉತ್ಪಾದನಾ ಘಟಕವು 21,911 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಪ್ರಾರಂಭಗೊಂಡಿದೆ. ಇದರಿಂದ 50,000 ಉದ್ಯೋಗ ಸೃಜನೆಯನ್ನು ನಿರೀಕ್ಷಿಸಲಾಗಿದೆ” ಎಂದು ಸರ್ಕಾರ ಬಜೆಟ್ ಪ್ರತಿಯಲ್ಲಿ ಹೇಳಿದೆ.

ಸರ್ಕಾರ ಭಾರೀ ಮೊತ್ತದ ಪ್ರೋತ್ಸಾಹಕ ಘೋಷಣೆ ಮಾಡಿರುವ ಈ ಫಾಕ್ಸ್ಕಾನ್ ಕಂಪನಿ ಮೇಲೆ ಭಾರತ ಸೇರಿದಂತೆ ಜಾಗತಿಕವಾಗಿ ಹಲವು ಆರೋಪಗಳಿವೆ. ವಿಶೇಷವಾಗಿ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ ಆರೋಪಗಳು ಈ ಕಂಪನಿ ಮೇಲಿದೆ.
ಉದ್ಯೋಗಿಗಳ ಆತ್ಮಹತ್ಯೆ :
ಚೀನಾದಾದ್ಯಂತ ಕಂಪನಿಯ ಘಟಕಗಳಲ್ಲಿ ಕೆಲಸದ ಒತ್ತಡ, ಕಂಪನಿಯ ಕಿರುಕುಳ ಇತ್ಯಾದಿ ಕಾರಣಗಳಿಗೆ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ವಿವಿಧ ಮೂಲಗಳಿಂದ ನಮಗೆ ಲಭ್ಯವಾದ ಮಾಹಿತಿ ಪ್ರಕಾರ, 2010 ಮತ್ತು ಅದರ ನಂತರ ಫಾಕ್ಸ್ಕಾನ್ ಕಂಪನಿಯಲ್ಲಿ ಉದ್ಯೋಗಿಗಳ ಆತ್ಮಹತ್ಯೆ ಪ್ರಕರಣಗಳು ಉಲ್ಬಣಿಸಿವೆ.
ಚೀನಾನ ಶೆನ್ಝೆನ್ನಲ್ಲಿರುವ ಫಾಕ್ಸ್ಕಾನ್ ಸಿಟಿ ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ ಕಡಿಮೆ ವೇತನ, ಅತ್ಯಂತ ಕ್ರೂರ ಕೆಲಸದ ವಾತಾವರಣದಿಂದ ಮಾನಸಿ ಖಿನ್ನತೆ ಮತ್ತು ಅವಮಾನಕ್ಕೆ ಒಳಗಾಗಿ ಹೆಚ್ಚಿನ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೇವಲ ಶೆನ್ಝೆನ್ ಘಟಕ ಮಾತ್ರವಲ್ಲದೆ, ಚೀನಾದ ಇತರ ಫಾಕ್ಸ್ಕಾನ್ ಘಟಕಗಳಲ್ಲೂ ಉದ್ಯೋಗಿಗಳು ಸಾವಿಗೆ ಶರಣಾದ ವರದಿಗಳಿವೆ. ಈ ಕುರಿತು ಫಾಕ್ಸ್ಕಾನ್ ಕಂಪನಿಯ ಗ್ರಾಹಕರಾದ ಆಪಲ್ ಮತ್ತು ಹೆವ್ಲೆಟ್ ಪ್ಯಾಕರ್ಡ್ (ಹೆಚ್ಪಿ) ತನಿಖೆಯನ್ನೂ ಕೈಗೊಂಡಿವೆ.
2010ರ ಮುನ್ನ ಅಂದರೆ, 2007ರಲ್ಲಿ ಒಬ್ಬರು ಮತ್ತು 2009ರಲ್ಲಿ ಒಬ್ಬರು ಫಾಕ್ಸ್ಕಾನ್ ಉದ್ಯೋಗಿ ಚೀನಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2007ರಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವ ಕಂಪನಿಯ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
2009ರಲ್ಲಿ, ತನ್ನ ಬಳಿ ಇದ್ದ ಐಫೋನ್ ಮೂಲಮಾದರಿ ಕಳೆದುಹೋದ ನಂತರ ಅಪಾರ್ಟ್ಮೆಂಟ್ ಕಟ್ಟಡದಿಂದ ಜಿಗಿದು ಫಾಕ್ಸ್ಕಾನ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮೊದಲು, ಫಾಕ್ಸ್ಕಾನ್ ಉದ್ಯೋಗಿಗಳು ತನ್ನನ್ನು ಥಳಿಸಿ ಮನೆಯನ್ನು ಶೋಧಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದರು ಎಂದು ವರದಿಯಾಗಿದೆ.
2010ರಲ್ಲಿ ಸುಮಾರು 15 ಜನರು ಫಾಕ್ಸ್ಕಾನ್ ಉದ್ಯೋಗಿಗಳು ಕಟ್ಟಡಗಳಿಂದ ಹಾರಿದ್ದಾರೆ. ಈ ಪೈಕಿ ಒಬ್ಬರು ಸೊಂಟದ ಕೆಳಗಿನ ಪಾರ್ಶವಾಯುಗೆ ಒಳಗಾಗಿದ್ದಾರೆ. ಇನ್ನಿಬ್ಬರ ಬಗ್ಗೆ ಮಾಹಿತಿಯಿಲ್ಲ. ಉಳಿದವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
2011ರಲ್ಲಿ ಮೂವರು 2012ರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಉಲ್ಲೇಖವಿದೆ. ಹೆಚ್ಚುವರಿಯಾಗಿ, ಜನವರಿ 2, 2012 ರಂದು ಪ್ರತಿಭಟನೆಯಲ್ಲಿ 150 ಚೀನೀ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ.
ಇನ್ನು 2014, 2016 ಮತ್ತು 2018ರಲ್ಲಿ ತಲಾ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆಉಲ್ಲೇಖವಿದೆ.
ಜನಾಂಗೀಯ ತಾರತಮ್ಯ :
ಚೀನಾದಲ್ಲಿ ಫಾಕ್ಸ್ಕಾನ್ ತನ್ನ ನೇಮಕಾತಿ ಪದ್ಧತಿಗಳಲ್ಲಿ ಜನಾಂಗೀಯ ತಾರತಮ್ಯದ ಆರೋಪಗಳು ಕೇಳಿ ಬಂದಿವೆ. ಅಲ್ಲಿ ಉಯ್ಘರ್ಗಳು, ಟಿಬೆಟಿಯನ್ನರು, ಯು ಮತ್ತು ಹುಯಿ ಮುಂತಾದ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳನ್ನು ನೇಮಕಾತಿಯಿಂದ ಹೊರಗಿಡಲಾಗಿದೆ ಎಂದು ವರದಿಯಾಗಿದೆ.
ಚೀನಾದಲ್ಲಿ ಕೆಲಸದ ವಾತಾವರಣ
ಚೀನಾದ ಘಟಕಗಳಲ್ಲಿನ ಕೆಲಸದ ವಾತಾವರಣಕ್ಕೆ ಸಂಬಂಧಿಸಿದಂತೆ ಫಾಕ್ಸ್ಕಾನ್ ವಿರುದ್ದ ಹಲವು ಆರೋಪಗಳಿವೆ. ಕಂಪನಿ ಈ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಟೀಕೆಗೆ ಒಳಗಾಗಿದೆ. ವಿರಾಮ ನೀಡದೆ ಸುದೀರ್ಘ ಸಮಯ ಉದ್ಯೋಗಿಗಳನ್ನು ದುಡಿಸಿಕೊಳ್ಳಲಾಗುತ್ತಿದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಅವರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎನ್ನಲಾಗಿದೆ.
ಕಂಪನಿಯಲ್ಲಿ ದೊಡ್ಡ ಮಟ್ಟದ ಉತ್ಪಾದನಾ ಗುರಿಯನ್ನು ಉದ್ಯೋಗಿಗಳಿಗೆ ನೀಡಲಾಗುತ್ತಿದೆ. ಅದನ್ನು ಸಾಧಿಸಲು ವಿರಾಮವಿಲ್ಲದ ಕೆಲಸ ಮಾಡಿಸಲಾಗುತ್ತಿದೆ. ಕಂಪನಿ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸುತ್ತಿಲ್ಲ. ಕಂಪನಿಯ ಕೆಲಸದ ವಾತಾವರಣ ಒಂದು ರೀತಿಯಲ್ಲಿ ಉದ್ಯೋಗಿಗಳಿಗೆ ‘ನರಕದಂತಿದೆ’ ಎಂದು ಆರೋಪಿಸಲಾಗಿದೆ.
ವಿವಾಹಿತ ಮಹಿಳೆಯರ ನೇಮಕಕ್ಕೆ ನಿರಾಕರಣೆ :
ತಮಿಳುನಾಡಿನ ಚೆನ್ನೈ ಸಮೀಪದ ಶ್ರೀಪೆರಂಬದೂರ್ನಲ್ಲಿರುವ ಫಾಕ್ಸ್ಕಾನ್ ಘಟಕದಲ್ಲಿ ವಿವಾಹಿತರ ಮಹಿಳೆಯರ ನೇಮಕಕ್ಕೆ ನಿರಾಕರಿಸಲಾಗುತ್ತಿದೆ ಎಂದು 2024ರ ಜೂನ್ 25ರಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿಯೊಂದನ್ನು ಪ್ರಕಟಿಸಿತ್ತು.
ಅವಿವಾಹಿತ ಮಹಿಳೆಯರಿಗೆ ಹೋಲಿಸಿದರೆ ವಿವಾಹಿತರಿಗೆ ಹೆಚ್ಚು ಕೌಟುಂಬಿಕ ಜವಾಬ್ದಾರಿಗಳಿವೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ರಾಯಟರ್ಸ್ ತನಿಖಾ ವರದಿ ಹೇಳಿತ್ತು.
ಫಾಕ್ಸ್ಕಾನ್ ಕಂಪನಿಗೆ ಉದ್ಯೋಗ ಕೇಳಿ ಬರುವ ವಿವಾಹಿತ ಮಹಿಳೆಯರಿಗೆ ಸಂಸ್ಥೆಯ ಆವರಣದೊಳಕ್ಕೆ ಪ್ರವೇಶಿಸಲೂ ಅನುಮತಿ ನೀಡುತ್ತಿಲ್ಲ. ಕಂಪನಿಯ ಗೇಟ್ ಒಳಗೆ ಪ್ರವೇಶಿಸುವ ಮುನ್ನವೇ ಅಲ್ಲಿನ ಭದ್ರತಾ ಸಿಬ್ಬಂದಿ ವೈವಾಹಿಕ ಸ್ಥಿತಿಯ ಬಗ್ಗೆ ಕೇಳುತ್ತಾರೆ ಎಂದು ವರದಿ ತಿಳಿಸಿತ್ತು.
ವಿವಾಹಿತ ಮಹಿಳೆಯರು ಕೌಟುಂಬಿಕ ಕರ್ತವ್ಯಗಳು, ಗರ್ಭಧಾರಣೆ ಮತ್ತು ಹೆಚ್ಚು ಗೈರಾಗುತ್ತಾರೆ ಎಂಬ ಕಾರಣಗಳನ್ನು ನೀಡಿ ಕಂಪನಿಯು ಉದ್ಯೋಗ ನೀಡುತ್ತಿಲ್ಲ ಎಂದು ಅಲ್ಲಿನ ಹಾಲಿ ಮತ್ತು ಮಾಜಿ ಉದ್ಯೋಗಿಗಳನ್ನು ಉಲ್ಲೇಖಿಸಿ ವರದಿ ರಾಯಿಟರ್ಸ್ ವರದಿ ಮಾಡಿತ್ತು.
ಈ ವರದಿ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿತ್ತು. ಕೇಂದ್ರ ಸರ್ಕಾರ, ಕೇಂದ್ರ ಮಾನವ ಹಕ್ಕುಗಳ ಆಯೋಗ ಈ ಕುರಿತು ಫಾಕ್ಸ್ಕಾನ್ ಕಂಪನಿಯಿಂದ ವರದಿ ಕೇಳಿತ್ತು.
ನುಡಿದಂತೆ ನಡೆಯದ ಸರ್ಕಾರ : ಎಸ್ ವರಲಕ್ಷ್ಮಿ
“ಸಿದ್ದರಾಮಯ್ಯ ಅವರು ಕಳೆದ ಬಾರಿ ಮಂಡಿಸಿದ ಬಜೆಟ್ನಲ್ಲಿ ಜಿಂದಾಲ್ ಸೇರಿದಂತೆ ಇತರ ಕಾರ್ಪೋರೇಟ್ ಕಂಪನಿಗಳಿಗೆ ಹಣ ಮೀಸಲಿಟ್ಟಿದ್ದರು. ಈ ಬಾರಿಯೂ ಕಾರ್ಪೋರೇಟ್ ಪರವಾದ ಬಜೆಟ್ ಮಂಡಿಸಿದ್ದಾರೆ. ಬಡಜನರ, ಶ್ರಮಿಕರ ಹಾಗು ರೈತರಿಗೆ ನಿರಾಶೆ ಮೂಡಿಸಿದ ಬಜೆಟ್ ಇದಾಗಿದೆ. ಉದ್ಯೋಗಿಗಳು, ಕಾರ್ಮಿಕರಿಗೆ ವೇತನ ಕೊಡಲು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ದುಡ್ಡಿಲ್ಲ ಎನ್ನುವ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಕೇಳದೆ ಕೊಡುತ್ತಿದೆ. ರೈತರು, ಕಾರ್ಮಿಕರು ಮುಂದಿಟ್ಟಿರುವ ಬೇಡಿಕಗಳನ್ನು ಸರ್ಕಾರ ಬಜೆಟ್ನಲ್ಲಿ ಈಡೇರಿಸಿಲ್ಲ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಅವಕಾಶ ರಾಜ್ಯ ಸರ್ಕಾರಕ್ಕೆ ಇಟ್ಟಿಲ್ಲ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿ ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಖಾತರಿ ಪಡಿಸುವ ಬಜೆಟ್ ಇದಾಗಿದೆ” ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಮಂಡಿಸಿದ್ದು ‘ಸಾಬ್ರ’ ಬಜೆಟ್? ಮಾಧ್ಯಮ, ಬಿಜೆಪಿ ಆರೋಪ ನಿಜವೆ?


