ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತುಪಡಿಸಿಕೊಳ್ಳಬೇಕಾದರೆ ಕೇಂದ್ರ ಸರಕಾರ ತಂದಿರುವ ಜನವಿರೋಧಿ ನೀತಿಗಳಾದ ಭೂ ಸುಧಾರಣಾ, ಎಪಿಎಂಸಿ, ಜಾನುವಾರು ಹತ್ಯೆ ನಿಶೇಧ, ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸಿರುವ, ಮತಾಂತರ ನಿಷೇಧ ಕಾಯ್ದೆ, ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ರದ್ದುಪಡಿಸುವ ತಿದ್ದುಪಡಿ ಕಾಯ್ದೆ, ಕೇಂದ್ರದ ವಿದ್ಯುತ್ ಖಾಸಗೀಕರಣ ಮಸೂದೆ, ಲೋಕಸಭಾ ಕ್ಷೇತ್ರದ ಮರು ವಿಂಗಡಣೆ ನೀತಿಗಳನ್ನು ಸಾರಾ ಸಗಟಾಗಿ ತಿರಸ್ಕರಿಸಬೇಕು ಎಂದು ಸಂಯುಕ್ತ ಹೋರಾಟ ಸಮಿತಿ ಗುರುವಾರ ಆಗ್ರಹಿಸಿದೆ.
ಬೆಂಗಳೂರಿನ ಗಾಂಧಿಭವನದಲ್ಲಿ ಸಂಯುಕ್ತ ಹೋರಾಟದಿಂದ ಆಯೋಜಿಸಿದ್ದ ಜನ ಚಳವಳಿಗಳ ಬಜೆಟ್ ಅಧಿವೇಶನದಲ್ಲಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಂಡು, ಶಾಸಕ ಬಿ.ಆರ್.ಪಾಟೀಲ್ ಮುಖಾಂತರ ಮುಖ್ಯಮಂತ್ರಿಗೆ ಆಗ್ರಹ ಪತ್ರವನ್ನು ಕಳುಹಿಸಿಕೊಡಲಾಯಿತು. ನುಡಿದಂತೆ ನಡೆಯುವ ಸರ್ಕಾರ
ಹಿಂಪಡೆದಿದ್ದ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಬಾಗಿಲಿನಿಂದ ತರಲು ಕೇಂದ್ರ ಸರಕಾರ ಮುಂದಿಟ್ಟಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿ, ಕಾರ್ಮಿಕರ ಬದುಕಿಗೆ ಕಂಠಕವಾಗಿರುವ 4 ಕೋಡ್ಗಳನ್ನು ತಿರಸ್ಕರಿಸುವ ತೀರ್ಮಾನವನ್ನು ರಾಜ್ಯ ಸರಕಾರ ಈ ಸದನದಲ್ಲಿಯೇ ತೆಗೆದುಕೊಳ್ಳಬೇಕು. ವಿದ್ಯುತ್ ಕ್ಷೇತ್ರದಲ್ಲಿ ನಡೆಯುತ್ತಿರುವ ಖಾಸಗೀಕರಣದ ಪ್ರಕ್ರಿಯೆ ಕೈಬಿಡಬೇಕು. ರೈತರನ್ನು ಋಣಮುಕ್ತಗೊಳಿಸಲು ಮತ್ತು ರೈತರ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಖಚಿತ ಯೋಜನೆ ಮತ್ತು ಕಾಯ್ದೆ ರೂಪಿಸಬೇಕು ಎಂದು ಸಮಿತಿ ಒತ್ತಾಯಿಸಿತು.
ರೈತರಿಗೆ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕನಿಷ್ಟ 10 ಸಾವಿರ ಕೋಟಿ ರೂ.ಗಳನ್ನು ಆವರ್ತ ನಿಧಿಗೆ ಒದಗಿಸಬೇಕು. ಮೈಕ್ರೋಫೈನಾನ್ಸ್ ಜಾಲದಿಂದ ಬಡಜನರನ್ನು, ವಿಶೇಷವಾಗಿ ಮಹಿಳೆಯರನ್ನು ಪಾರು ಮಾಡಲು ಸಾಂಸ್ಥಿಕ ಸಾಲವನ್ನು ಹೆಚ್ಚಿಸುವ ಹಾಗೂ ಸರಳ ವಿಧಾನದಲ್ಲಿ ಒದಗಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಕೃಷಿ ಕ್ಷೇತ್ರಕ್ಕೆ, ಗ್ರಾಮೀಣಭಿವೃದ್ದಿಗೆ ಹಾಗೂ ನೀರಾವರಿಗೆ ಅನುದಾನವನ್ನು ಗಮನಾರ್ಹವಾಗಿ ಹೆಚ್ಚಿಸಬೇಕು. ನರೇಗಾ ಯೋಜನೆಯನ್ನು ನಗರಕ್ಕೂ ವಿಸ್ತರಿಸಿ, ಬಲಪಡಿಸವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುವ ನಿರ್ಣಯವನ್ನು ವಿಧಾನ ಸಭೆಯಲ್ಲಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತು.
ಸಾರ್ವಜನಿಕ ಸ್ವತ್ತಾದ ಭೂಮಿ ಬಂಡವಾಳಿಗರ ಪಾಲಾಗದಂತೆ ತಡೆಯಬೇಕು. ಭೂಮಿಯನ್ನು ಸಾಮಾಜಿಕ ನ್ಯಾಯದ ಪ್ರಮುಖ ಆಯಾಮವಾಗಿ ಪರಿಗಣಿಸಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಿಸಬೇಕು. ಬಗರ್ ಹುಕುಂ ರೈತರಿಗೆ ತ್ವರಿತ ಭೂ ಹಂಚಿಕೆಯ ತೀರ್ಮಾನ ತೆಗೆದುಕೊಳ್ಳಬೇಕು. ಕಾನೂನು ತೊಡಕುಗಳನ್ನು ನಿವಾರಿಸಿ ಎಲ್ಲ ಬಡವರಿಗೆ ಬಗರ್ ಹುಕುಂ ರೈತರಿಗೂ ಸಾಮಾಜಿಕ ನ್ಯಾಯ ದಕ್ಕಿಸಿಕೊಡಬೇಕು. ಚನ್ನರಾಯಪಟ್ಟಣ ಭೂಸ್ವಾಧೀನ ತೀರ್ಮಾನವನ್ನು ಕೊಟ್ಟ ಮಾತಿನಂತೆ ಕೈಬಿಡಬೇಕು.
ಪರಿಶಿಷ್ಟ ಜಾತಿಗಳ ಮೀಸಲು ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಕ್ರಮವಹಿಸಬೇಕು. ಎಸ್ಸಿಪಿ ಟಿಎಸ್ಪಿ ಹಣದ ವಿತರಣೆ ವಿನಿಯೋಗ, ಸಾಧಕ-ಭಾದಕಗಳ ಚರ್ಚಿಸಲು ಎರಡೂವರೆ ವರ್ಷಕ್ಕೊಮ್ಮೆ “ಸಾಮಾಜಿಕ ನ್ಯಾಯಕ್ಕಾಗಿ ವಿಶೇಷ ಅಧಿವೇಶನ” ನಡೆಸಿ ಮೌಲ್ಯಮಾಪನ ಮಾಡಬೇಕು. ಖಾಸಗೀ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ಸೌಲಭ್ಯವನ್ನು ನಿಲ್ಲಿಸಿರುವ ತೀರ್ಮಾನವನ್ನು ಹಿಂತೆಗೆದುಕೊಳ್ಳಬೇಕು. ಖಾಯಂ ಸ್ವರೂಪದ ಕ್ಷೇತ್ರಗಳಲ್ಲಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಕಾಯ್ದೆ ರೂಪಿಸಬೇಕು. ಎಲ್ಲ ಬಗೆಯ ದುಡಿಯುವ ಜನರಿಗೆ ಕನಿಷ್ಟ ವೇತನ ದರ ಜಾರಿಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಲೇಬರ್ ಕಾನ್ಫರೆನ್ಸ್ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಬೇಕು. ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ದೌರ್ಜನ್ಯ, ಕೋಮು ಪ್ರಚೋದನೆ ಹಾಗೂ ಮಹಿಳೆಯರ ಅತ್ಯಾಚಾರ ಹಾಗೂ ಹತ್ಯೆಗಳನ್ನು ತಡೆಯಲು ಸಮಗ್ರ ಯೋಜನೆ ರೂಪಿಸಬೇಕು. ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ ನಡೆಸುವ, ಷಡ್ಯಂತರ ರೂಪಿಸುವ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ವಿಶೇಷ ಕಾಯ್ದೆಯನ್ನು ಜಾರಿಗೆ ತರಬೇಕು. ಶಿಕ್ಷಣ ನೀತಿಯಲ್ಲಿನ ದ್ವಂದ್ವ ನಡೆಯನ್ನು ಸರಕಾರ ಕೈಬಿಡಬೇಕು. ಎಸ್ ಇ ಪಿ ಯನ್ನು ಕಾಲಮಿತಿಯೊಳಗೆ ಜಾರಿಗೆ ತರಬೇಕು. ಸಾರ್ವಜನಿಕ ಶಿಕ್ಷಣಕ್ಕೆ ಮೀಸಲಿಟ್ಟಿರುವ ಹಣವನ್ನು ದುಪ್ಪಟ್ಟುಗೊಳಿಸಬೇಕು. ಉದ್ಯೋಗ ಸೃಷ್ಟಿಗೆ ಸಮಗ್ರ ಯೋಜನೆ ರೂಪಿಸಬೇಕು.
ಕ್ಯಾಬಿನೆಟ್ ಸಚಿವರು, ಸಂಬಂಧಿತ ಅಧಿಕಾರಿಗಳು ಹಾಗೂ ಜನಚಳವಳಿಗಳ ಪ್ರತಿನಿಧಿಗಳು ಜೊತೆಗೂಡಿ ಚರ್ಚಿಸಿ ಸರ್ವಸಮ್ಮತ ಆಧಾರದ ಮೇಲೆ ಕೆಲವಾದರೂ ಅತಿಮುಖ್ಯ ಜನರ ಸಮಸ್ಯೆಗಳಿಗೆ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುವಂತಾಗಬೇಕು. ಕೇಂದ್ರ ಸರಕಾರ ಹೊರಟಿರುವ ಕಾರ್ಪೋರೇಟ್ ಕೇಂದ್ರಿತ ಅಭಿವೃದ್ದಿಯ ಹಾದಿಯನ್ನು ತೊರೆದು ಜನ ಕೇಂದ್ರಿತ ಹೊಸ ಮಾದರಿಯನ್ನು ಕರ್ನಾಟಕ ಕಟ್ಟಿಕೊಡಲು ದಿಟ್ಟ ಹೆಜ್ಜೆಗಳನ್ನು ಮುಖ್ಯಮಂತ್ರಿ ಇಡಬೇಕು ಎಂದು ಅಧಿವೇಶನ ಆಗ್ರಹಿಸಿತು.
ಜನಚಳವಳಿಗಳ ಬಜೆಟ್_ಅಧಿವೇಶನದ ಸಂಪೂರ್ಣ ಅವಲೋಕನ ಮತ್ತು ಆಗ್ರಹ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ರಾಜ್ಯ ಬಜೆಟ್ನಲ್ಲಿ ಕೃಷಿಕರ ಸಮಸ್ಯೆಗಳಿಗೆ ಪರಿಹಾರವಿಲ್ಲ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ರಾಜ್ಯ ಬಜೆಟ್ನಲ್ಲಿ ಕೃಷಿಕರ ಸಮಸ್ಯೆಗಳಿಗೆ ಪರಿಹಾರವಿಲ್ಲ: ಶಾಸಕ ದರ್ಶನ್ ಪುಟ್ಟಣ್ಣಯ್ಯ

