Homeಮುಖಪುಟಅಸ್ಸಾಂ: 1,400 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳು ನೆಲಸಮ

ಅಸ್ಸಾಂ: 1,400 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳು ನೆಲಸಮ

- Advertisement -
- Advertisement -

ಸೌರ ವಿದ್ಯುತ್ ಯೋಜನೆಗೆ ದಾರಿ ಮಾಡಿಕೊಡಲು ಅಸ್ಸಾಂ ಸರ್ಕಾರವು ಧುಬ್ರಿ ಜಿಲ್ಲೆಯಲ್ಲಿ ಸುಮಾರು 1,157 ಎಕರೆ ಸರ್ಕಾರಿ ಜಾಗದಲ್ಲಿದ್ದ ಬಂಗಾಳಿ ಮೂಲದ 1,400 ಮುಸ್ಲಿಂ ಕುಟುಂಬಗಳ ಮನೆಗಳನ್ನು ಕೆಡವಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ದಿಬಾಕರ್ ನಾಥ್ ಮಂಗಳವಾರ ತಿಳಿಸಿದ್ದಾಗಿ scroll.in ವರದಿ ಮಾಡಿದೆ.

ಯೋಜನೆಯ ನೇತೃತ್ವ ವಹಿಸಿರುವ ಅಸ್ಸಾಂ ವಿದ್ಯುತ್ ವಿತರಣಾ ಕಂಪನಿಗೆ ಈಗಾಗಲೇ ಭೂಮಿ ಹಂಚಿಕೆ ಮಾಡಲಾಗಿದೆ ಎಂದು ನಾಥ್ ಹೇಳಿದ್ದಾರೆ.

ಧುಬ್ರಿಯ ಚಾಪರ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಿರಕುಟ 1 ಮತ್ತು 2, ಚಾರುಬಖ್ರ ಜಂಗಲ್ ಬ್ಲಾಕ್ ಮತ್ತು ಸಂತೇಶಪುರ ಗ್ರಾಮಗಳಲ್ಲಿ ಕನಿಷ್ಠ ಮೂರ್ನಾಲ್ಕು ದಶಕಗಳಿಂದ ವಾಸಿಸುತ್ತಿದ್ದ ಸುಮಾರು 10,000 ಬಂಗಾಳಿ ಮೂಲದ ಮುಸ್ಲಿಮರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿ ವಿವರಿಸಿದೆ.

ಸ್ಥಳಾಂತರಗೊಂಡವರು ಬ್ರಹ್ಮಪುತ್ರ ನದಿಯಿಂದಾಗಿ ತಮ್ಮ ಪೂರ್ವಜರ ಮನೆಗಳನ್ನು ಕಳೆದುಕೊಂಡ ಜನರು ಎಂದು ಸ್ಥಳೀಯ ನಿವಾಸಿ ತೌಫೀಕ್ ಹುಸಿಯಾನ್ ತಿಳಿಸಿದ್ದಾರೆ.

ಏಪ್ರಿಲ್ 2ರಂದು ನಡೆದ ಜಿಲ್ಲಾ ಮಟ್ಟದ ಭೂ ಸಲಹಾ ಸಭೆಯ ಪ್ರಕಾರ, ಸರ್ಕಾರಿ ಗೋಮಾಳದ ಜಾಗವನ್ನು ಸೌರಶಕ್ತಿ ಯೋಜನೆಗಾಗಿ ಬಿಟ್ಟು ಕೊಡುವ ಪ್ರಸ್ತಾಪವನ್ನು ಮಾರ್ಚ್ 30ರಂದು ಜಿಲ್ಲಾಡಳಿತ ಸಲ್ಲಿಸಿದೆ.

ಅಸ್ಸಾಂ ವಿದ್ಯುತ್ ವಿತರಣಾ ಕಂಪನಿ ಸೌರ ವಿದ್ಯುತ್ ಸ್ಥಾವರಕ್ಕಾಗಿ ಸುಮಾರು 1,289 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಅದಾನಿ ಸಮೂಹ ಇಲ್ಲಿ ಸೌರ ವಿದ್ಯುತ್ ಯೋಜನೆ ಕಾರ್ಯಗತಗೊಳಿಸಲಿದೆ.

ಮನೆಗಳನ್ನು ಕೆಡವುವ ಮೊದಲು ನಿವಾಸಿಗಳಿಗೆ ನೋಟಿಸ್ ನೀಡಲಾಗಿದೆ. ಭಾನುವಾರಕ್ಕಿಂತ ಮೊದಲು ಮನೆಗಳನ್ನು ಖಾಲಿ ಮಾಡುವಂತೆ ಪ್ರತಿದಿನ ಸಾರ್ವಜನಿಕ ಪ್ರಕಟಣೆಗಳನ್ನು ನೀಡಲಾಗಿತ್ತು ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ.

ಸೋಮವಾರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಬುಲ್ಡೋಜರ್‌ಗಳ ಜೊತೆ ಆಗಮಿಸಿ ತೆರವು ಕಾರ್ಯಾಚರಣೆ ಆರಂಭಿಸಿದ್ದರು.

ಚಾಪರ್ ಕಂದಾಯ ವೃತ್ತದ ಅಧಿಕಾರಿ ನೀಡಿದ ತೆರವು ನೋಟಿಸ್ ಪ್ರಕಾರ, ಜಿಲ್ಲಾಡಳಿತ ಬೈಜರ್ ಅಲ್ಗಾ ಗ್ರಾಮದಲ್ಲಿ ನಿರಾಶ್ರಿತ ಜನರ ಪುನರ್ವಸತಿಗಾಗಿ 300 ಬಿಘಾ (ಸುಮಾರು 1 ಎಕರೆ) ಭೂಮಿಯನ್ನು ಮಂಜೂರು ಮಾಡಿದೆ. ಜನರು ತಮ್ಮ ವಸ್ತುಗಳನ್ನು ಸಾಗಿಸಲು ಒಂದು ಬಾರಿಯ ಪರಿಹಾರಕ್ಕಾಗಿ 50,000 ರೂ.ಗಳನ್ನು ಮೀಸಲಿಟ್ಟಿದೆ. ಕೆಲವು ನಿವಾಸಿಗಳು 50,000 ರೂ.ಗಳನ್ನು ಪಡೆದಿದ್ದಾರೆ. ಇನ್ನೂ ಕೆಲವರು ತಮಗೆ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ.

ಆದಾಗ್ಯೂ, ಪುನರ್ವಸತಿ ಸ್ಥಳವಾದ ಬೈಜರ್ ಅಲ್ಗಾ ಗ್ರಾಮವು ತಗ್ಗು ಪ್ರದೇಶದ ನದಿಪಾತ್ರದಲ್ಲಿದೆ ಎಂದು ನಿರಾಶ್ರಿತ ಜನರು ಹೇಳಿಕೊಂಡಿದ್ದಾರೆ. ಮಳೆಗಾಲದಲ್ಲಿ ಹೆಚ್ಚಿನ ಅವಧಿ ಇಲ್ಲಿ ಪ್ರವಾಹ ಪರಿಸ್ಥಿತಿ ಇರುತ್ತದೆ ಎಂದು ಸ್ಥಳಾಂತರಗೊಂಡ ನಿವಾಸಿ ನಜ್ರುಲ್ ಇಸ್ಲಾಂ ಹೇಳಿದ್ದಾರೆ. ರಸ್ತೆ ಅಥವಾ ಯಾವುದೇ ಇತರ ಸಂವಹನವಿಲ್ಲದೆ ಜನರು ಅಲ್ಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು scroll.in ಹೇಳಿದೆ.

ಅನೇಕ ನಿವಾಸಿಗಳು ಭಯದಿಂದ ತಮ್ಮ ವಸ್ತುಗಳನ್ನು ಈಗಾಗಲೇ ಸ್ಥಳಾಂತರಿಸಿದ್ದಾರೆ. ಪ್ರತಿದಿನ ಜನರು ಸ್ಥಳಾಂತರಗೊಳ್ಳುತ್ತಿದ್ದಾರೆ. ಮೊದಲು ಸ್ಥಳಾಂತರಗೊಳ್ಳದವರ ಮನೆಗಳನ್ನು ಮಂಗಳವಾರ ಕೆಡವಲಾಗಿದೆ ಎಂದು ಮನೆ ಕಳೆದುಕೊಂಡಿರುವ ಹುಸಿಯಾನ್ ತಿಳಿಸಿದ್ದಾರೆ.

ಕೆಲವು ನಿವಾಸಿಗಳು ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟಿಸಿದ್ದಾರೆ. ಬುಲ್ಡೋಜರ್‌ಗಳ ಮೇಲೆ ಕಲ್ಲೆಸೆದಿದ್ದಾರೆ. ಇದರಿಂದ ಮೂರು ಬುಲ್ಡೋಜರ್‌ಗಳು ಹಾನಿಗೊಳಗಾಗಿವೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.

ಸ್ವತಂತ್ರ ಶಾಸಕ ಮತ್ತು ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್ ಮಂಗಳವಾರ ತೆರವು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳಾಂತರಗೊಂಡವರಿಗೆ ಪುನರ್ವಸತಿಗಾಗಿ 165 ಎಕರೆ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ವಿನಂತಿಸುವುದಾಗಿ ಹೇಳಿದ್ದಾರೆ.

ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಗೊಗೊಯ್ ಅವರನ್ನು ಪೊಲೀಸರು ಕೆಲಕಾಲ ವಶಕ್ಕೆ ಪಡೆದಿದ್ದರು.

“ಈ ತೆರವು ಕಾರ್ಯಾಚರಣೆ ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ” ಎಂದು ಶಾಸಕ ಗೊಗೊಯ್ ಆರೋಪಿಸಿದ್ದು, “ಈ ಪ್ರಕರಣ ಗುವಾಹಟಿ ಹೈಕೋರ್ಟ್‌ನಲ್ಲಿ ಬಾಕಿ ಇದೆ. ಹಿಮಂತ ಬಿಸ್ವಾ ಶರ್ಮಾ ಸರ್ಕಾರವು ಕಾನೂನುಬಾಹಿರವಾಗಿ ಮನೆಗಳನ್ನು ಕೆಡವುತ್ತಿದೆ” ಎಂದಿದ್ದಾರೆ.

ಹಿಂದೂ ಮತಗಳನ್ನು ಸೆಳೆಯಲು ಮುಸ್ಲಿಮರ ವಿರುದ್ಧ ಇಂತಹ ಸ್ಥಳಾಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿದೆ. ಏಕೆಂದರೆ ಅವರು ‘ಮುಸ್ಲಿಮರು’ ಎಂದು ಗೊಗೊಯ್ ದೂರಿದ್ದಾರೆ.

ಈ ನಡುವೆ, ಗೋಲ್‌ಪಾರ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶವಾದ ಪೈಕರ್ ಪ್ರದೇಶದಲ್ಲಿ ಜುಲೈ 10ರಂದು ರಾಜ್ಯ ಸರ್ಕಾರವು ಮತ್ತೊಂದು ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ.

“ನಮ್ಮ ಗುರಿ ಅತಿಕ್ರಮಣಗೊಂಡ ಭೂಮಿಯನ್ನು ತೆರವುಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಬಳಸುವುದು. ನಾವು ಅಸ್ಸಾಂನ ಸ್ಥಳೀಯ ಜನರೊಂದಿಗೆ ಇದ್ದೇವೆ. ಆದರೆ, ಶಾಸಕ ಅಖಿಲ್ ಗೊಗೊಯ್ ನಿರ್ದಿಷ್ಟ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ನಮ್ಮ ರಾಜಕೀಯ ಸಿದ್ಧಾಂತದಂತೆ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ” ಎಂದು ಸಿಎಂ ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಯಿಂದ ಉಂಟಾದ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದ ಚಾರುಬಖ್ರ ಜಂಗಲ್ ಬ್ಲಾಕ್ ಗ್ರಾಮದ ಸುಮಾರು 400 ನಿವಾಸಿಗಳು ಏಪ್ರಿಲ್‌ನಲ್ಲಿ ತೆರವು ನೋಟಿಸ್‌ಗಳ ವಿರುದ್ಧ ಗುವಾಹಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಜಿಲ್ಲಾಡಳಿತದ ಕ್ರಮವು ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲಂಘಿಸುತ್ತದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಈ ಪ್ರಕರಣ ಇನ್ನೂ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳ ಆಸ್ತಿಗಳನ್ನು ಶಿಕ್ಷಾರ್ಹ ಕ್ರಮವಾಗಿ ಕೆಡವುವ ಪದ್ಧತಿಯನ್ನು ಕಾನೂನುಬಾಹಿರ ಎಂದು ಹೇಳಿತ್ತು. ತೆರವು ಕಾರ್ಯಾಚರಣೆಗೂ ಮುನ್ನ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿತ್ತು.

ಕಳೆದ 30 ದಿನಗಳಲ್ಲಿ ಅಸ್ಸಾಂನಲ್ಲಿ ನಡೆದ ನಾಲ್ಕನೇ ಪ್ರಮುಖ ತೆರವು ಕಾರ್ಯಾಚರಣೆ ಇದಾಗಿದೆ.

ಜೂನ್ 16 ರಂದು, ಗೋಲ್ಪಾರದಲ್ಲಿ ಅಧಿಕಾರಿಗಳು 690 ಕುಟುಂಬಗಳ ಮನೆಗಳನ್ನು ಕೆಡವಿದ್ದರು. ಅವರೆಲ್ಲವೂ ಬಂಗಾಳಿ ಮೂಲದ ಮುಸ್ಲಿಮರಿಗೆ ಸೇರಿದ್ದಾಗಿವೆ. ಹಸಿಲಾ ಬೀಲ್ ಎಂಬ ಜೌಗು ಪ್ರದೇಶದಲ್ಲಿ ಅತಿಕ್ರಮಣ ಮಾಡಲಾಗಿತ್ತು ಎಂದು ಹೇಳಲಾದ ಭೂಮಿಯಲ್ಲಿ ಅವರು ವಾಸಿಸುತ್ತಿದ್ದರು.

ಈ ಪ್ರದೇಶವನ್ನು ಜೌಗು ಪ್ರದೇಶವೆಂದು ಘೋಷಿಸುವ ಮೊದಲೇ ಅಲ್ಲಿ ವಾಸಿಸುತ್ತಿದ್ದೆವು ಎಂದು ಅನೇಕ ಕುಟುಂಬಗಳು ಹೇಳಿದ್ದಾಗಿ scroll.in ತಿಳಿಸಿದೆ.

ಜೂನ್ 30 ರಂದು ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ ಬರ್ಖೇತ್ರಿ ಕಂದಾಯ ವ್ಯಾಪ್ತಿಯ ಸುಮಾರು 150 ಎಕರೆ ಅತಿಕ್ರಮಣ ತೆರವು ಮಾಡಲಾಗಿತ್ತು. ಇಲ್ಲಿಯೂ ಬಂಗಾಳಿ ಮೂಲದ ಮುಸ್ಲಿಮರ ತೊಂಬತ್ತಮೂರು ಮನೆಗಳನ್ನು ಕೆಡವಲಾಗಿದೆ.

ಕಳೆದ ಗುರುವಾರ, ಅಪ್ಪರ್ ಅಸ್ಸಾಂನ ಲಖಿಂಪುರ ಜಿಲ್ಲೆಯಲ್ಲಿ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ 220 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ನಾಲ್ಕು ಸ್ಥಳಗಳ 77 ಎಕರೆ ಭೂಮಿಯಲ್ಲಿ ಈ ಕುಟುಂಬಗಳು ವಾಸಿಸುತ್ತಿದ್ದವು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

2016ರಲ್ಲಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 2016 ಮತ್ತು ಆಗಸ್ಟ್ 2024ರ ನಡುವೆ 10,620ಕ್ಕೂ ಹೆಚ್ಚು ಕುಟುಂಬಗಳನ್ನು (ಅವುಗಳಲ್ಲಿ ಹೆಚ್ಚಿನವು ಮುಸ್ಲಿಮರು) ಸರ್ಕಾರಿ ಭೂಮಿಯಿಂದ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಒದಗಿಸಿದ ಅಂಕಿಅಂಶಗಳು ತಿಳಿಸಿವೆ.

‘ಲವ್ ಜಿಹಾದ್’ ಆರೋಪ: ಹರಿಯಾಣದಲ್ಲಿ ಮುಸ್ಲಿಂ ಕುಟುಂಬದ ಮನೆಗಳಿಗೆ ಬೆಂಕಿ – ಆಸ್ತಿಪಾಸ್ತಿ ನಷ್ಟ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...