Homeಮುಖಪುಟಅಸ್ಸಾಂ: 1,400 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳು ನೆಲಸಮ

ಅಸ್ಸಾಂ: 1,400 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳು ನೆಲಸಮ

- Advertisement -
- Advertisement -

ಸೌರ ವಿದ್ಯುತ್ ಯೋಜನೆಗೆ ದಾರಿ ಮಾಡಿಕೊಡಲು ಅಸ್ಸಾಂ ಸರ್ಕಾರವು ಧುಬ್ರಿ ಜಿಲ್ಲೆಯಲ್ಲಿ ಸುಮಾರು 1,157 ಎಕರೆ ಸರ್ಕಾರಿ ಜಾಗದಲ್ಲಿದ್ದ ಬಂಗಾಳಿ ಮೂಲದ 1,400 ಮುಸ್ಲಿಂ ಕುಟುಂಬಗಳ ಮನೆಗಳನ್ನು ಕೆಡವಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ದಿಬಾಕರ್ ನಾಥ್ ಮಂಗಳವಾರ ತಿಳಿಸಿದ್ದಾಗಿ scroll.in ವರದಿ ಮಾಡಿದೆ.

ಯೋಜನೆಯ ನೇತೃತ್ವ ವಹಿಸಿರುವ ಅಸ್ಸಾಂ ವಿದ್ಯುತ್ ವಿತರಣಾ ಕಂಪನಿಗೆ ಈಗಾಗಲೇ ಭೂಮಿ ಹಂಚಿಕೆ ಮಾಡಲಾಗಿದೆ ಎಂದು ನಾಥ್ ಹೇಳಿದ್ದಾರೆ.

ಧುಬ್ರಿಯ ಚಾಪರ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಿರಕುಟ 1 ಮತ್ತು 2, ಚಾರುಬಖ್ರ ಜಂಗಲ್ ಬ್ಲಾಕ್ ಮತ್ತು ಸಂತೇಶಪುರ ಗ್ರಾಮಗಳಲ್ಲಿ ಕನಿಷ್ಠ ಮೂರ್ನಾಲ್ಕು ದಶಕಗಳಿಂದ ವಾಸಿಸುತ್ತಿದ್ದ ಸುಮಾರು 10,000 ಬಂಗಾಳಿ ಮೂಲದ ಮುಸ್ಲಿಮರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿ ವಿವರಿಸಿದೆ.

ಸ್ಥಳಾಂತರಗೊಂಡವರು ಬ್ರಹ್ಮಪುತ್ರ ನದಿಯಿಂದಾಗಿ ತಮ್ಮ ಪೂರ್ವಜರ ಮನೆಗಳನ್ನು ಕಳೆದುಕೊಂಡ ಜನರು ಎಂದು ಸ್ಥಳೀಯ ನಿವಾಸಿ ತೌಫೀಕ್ ಹುಸಿಯಾನ್ ತಿಳಿಸಿದ್ದಾರೆ.

ಏಪ್ರಿಲ್ 2ರಂದು ನಡೆದ ಜಿಲ್ಲಾ ಮಟ್ಟದ ಭೂ ಸಲಹಾ ಸಭೆಯ ಪ್ರಕಾರ, ಸರ್ಕಾರಿ ಗೋಮಾಳದ ಜಾಗವನ್ನು ಸೌರಶಕ್ತಿ ಯೋಜನೆಗಾಗಿ ಬಿಟ್ಟು ಕೊಡುವ ಪ್ರಸ್ತಾಪವನ್ನು ಮಾರ್ಚ್ 30ರಂದು ಜಿಲ್ಲಾಡಳಿತ ಸಲ್ಲಿಸಿದೆ.

ಅಸ್ಸಾಂ ವಿದ್ಯುತ್ ವಿತರಣಾ ಕಂಪನಿ ಸೌರ ವಿದ್ಯುತ್ ಸ್ಥಾವರಕ್ಕಾಗಿ ಸುಮಾರು 1,289 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಅದಾನಿ ಸಮೂಹ ಇಲ್ಲಿ ಸೌರ ವಿದ್ಯುತ್ ಯೋಜನೆ ಕಾರ್ಯಗತಗೊಳಿಸಲಿದೆ.

ಮನೆಗಳನ್ನು ಕೆಡವುವ ಮೊದಲು ನಿವಾಸಿಗಳಿಗೆ ನೋಟಿಸ್ ನೀಡಲಾಗಿದೆ. ಭಾನುವಾರಕ್ಕಿಂತ ಮೊದಲು ಮನೆಗಳನ್ನು ಖಾಲಿ ಮಾಡುವಂತೆ ಪ್ರತಿದಿನ ಸಾರ್ವಜನಿಕ ಪ್ರಕಟಣೆಗಳನ್ನು ನೀಡಲಾಗಿತ್ತು ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ.

ಸೋಮವಾರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಬುಲ್ಡೋಜರ್‌ಗಳ ಜೊತೆ ಆಗಮಿಸಿ ತೆರವು ಕಾರ್ಯಾಚರಣೆ ಆರಂಭಿಸಿದ್ದರು.

ಚಾಪರ್ ಕಂದಾಯ ವೃತ್ತದ ಅಧಿಕಾರಿ ನೀಡಿದ ತೆರವು ನೋಟಿಸ್ ಪ್ರಕಾರ, ಜಿಲ್ಲಾಡಳಿತ ಬೈಜರ್ ಅಲ್ಗಾ ಗ್ರಾಮದಲ್ಲಿ ನಿರಾಶ್ರಿತ ಜನರ ಪುನರ್ವಸತಿಗಾಗಿ 300 ಬಿಘಾ (ಸುಮಾರು 1 ಎಕರೆ) ಭೂಮಿಯನ್ನು ಮಂಜೂರು ಮಾಡಿದೆ. ಜನರು ತಮ್ಮ ವಸ್ತುಗಳನ್ನು ಸಾಗಿಸಲು ಒಂದು ಬಾರಿಯ ಪರಿಹಾರಕ್ಕಾಗಿ 50,000 ರೂ.ಗಳನ್ನು ಮೀಸಲಿಟ್ಟಿದೆ. ಕೆಲವು ನಿವಾಸಿಗಳು 50,000 ರೂ.ಗಳನ್ನು ಪಡೆದಿದ್ದಾರೆ. ಇನ್ನೂ ಕೆಲವರು ತಮಗೆ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ.

ಆದಾಗ್ಯೂ, ಪುನರ್ವಸತಿ ಸ್ಥಳವಾದ ಬೈಜರ್ ಅಲ್ಗಾ ಗ್ರಾಮವು ತಗ್ಗು ಪ್ರದೇಶದ ನದಿಪಾತ್ರದಲ್ಲಿದೆ ಎಂದು ನಿರಾಶ್ರಿತ ಜನರು ಹೇಳಿಕೊಂಡಿದ್ದಾರೆ. ಮಳೆಗಾಲದಲ್ಲಿ ಹೆಚ್ಚಿನ ಅವಧಿ ಇಲ್ಲಿ ಪ್ರವಾಹ ಪರಿಸ್ಥಿತಿ ಇರುತ್ತದೆ ಎಂದು ಸ್ಥಳಾಂತರಗೊಂಡ ನಿವಾಸಿ ನಜ್ರುಲ್ ಇಸ್ಲಾಂ ಹೇಳಿದ್ದಾರೆ. ರಸ್ತೆ ಅಥವಾ ಯಾವುದೇ ಇತರ ಸಂವಹನವಿಲ್ಲದೆ ಜನರು ಅಲ್ಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು scroll.in ಹೇಳಿದೆ.

ಅನೇಕ ನಿವಾಸಿಗಳು ಭಯದಿಂದ ತಮ್ಮ ವಸ್ತುಗಳನ್ನು ಈಗಾಗಲೇ ಸ್ಥಳಾಂತರಿಸಿದ್ದಾರೆ. ಪ್ರತಿದಿನ ಜನರು ಸ್ಥಳಾಂತರಗೊಳ್ಳುತ್ತಿದ್ದಾರೆ. ಮೊದಲು ಸ್ಥಳಾಂತರಗೊಳ್ಳದವರ ಮನೆಗಳನ್ನು ಮಂಗಳವಾರ ಕೆಡವಲಾಗಿದೆ ಎಂದು ಮನೆ ಕಳೆದುಕೊಂಡಿರುವ ಹುಸಿಯಾನ್ ತಿಳಿಸಿದ್ದಾರೆ.

ಕೆಲವು ನಿವಾಸಿಗಳು ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟಿಸಿದ್ದಾರೆ. ಬುಲ್ಡೋಜರ್‌ಗಳ ಮೇಲೆ ಕಲ್ಲೆಸೆದಿದ್ದಾರೆ. ಇದರಿಂದ ಮೂರು ಬುಲ್ಡೋಜರ್‌ಗಳು ಹಾನಿಗೊಳಗಾಗಿವೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.

ಸ್ವತಂತ್ರ ಶಾಸಕ ಮತ್ತು ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್ ಮಂಗಳವಾರ ತೆರವು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳಾಂತರಗೊಂಡವರಿಗೆ ಪುನರ್ವಸತಿಗಾಗಿ 165 ಎಕರೆ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ವಿನಂತಿಸುವುದಾಗಿ ಹೇಳಿದ್ದಾರೆ.

ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಗೊಗೊಯ್ ಅವರನ್ನು ಪೊಲೀಸರು ಕೆಲಕಾಲ ವಶಕ್ಕೆ ಪಡೆದಿದ್ದರು.

“ಈ ತೆರವು ಕಾರ್ಯಾಚರಣೆ ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ” ಎಂದು ಶಾಸಕ ಗೊಗೊಯ್ ಆರೋಪಿಸಿದ್ದು, “ಈ ಪ್ರಕರಣ ಗುವಾಹಟಿ ಹೈಕೋರ್ಟ್‌ನಲ್ಲಿ ಬಾಕಿ ಇದೆ. ಹಿಮಂತ ಬಿಸ್ವಾ ಶರ್ಮಾ ಸರ್ಕಾರವು ಕಾನೂನುಬಾಹಿರವಾಗಿ ಮನೆಗಳನ್ನು ಕೆಡವುತ್ತಿದೆ” ಎಂದಿದ್ದಾರೆ.

ಹಿಂದೂ ಮತಗಳನ್ನು ಸೆಳೆಯಲು ಮುಸ್ಲಿಮರ ವಿರುದ್ಧ ಇಂತಹ ಸ್ಥಳಾಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿದೆ. ಏಕೆಂದರೆ ಅವರು ‘ಮುಸ್ಲಿಮರು’ ಎಂದು ಗೊಗೊಯ್ ದೂರಿದ್ದಾರೆ.

ಈ ನಡುವೆ, ಗೋಲ್‌ಪಾರ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶವಾದ ಪೈಕರ್ ಪ್ರದೇಶದಲ್ಲಿ ಜುಲೈ 10ರಂದು ರಾಜ್ಯ ಸರ್ಕಾರವು ಮತ್ತೊಂದು ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ.

“ನಮ್ಮ ಗುರಿ ಅತಿಕ್ರಮಣಗೊಂಡ ಭೂಮಿಯನ್ನು ತೆರವುಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಬಳಸುವುದು. ನಾವು ಅಸ್ಸಾಂನ ಸ್ಥಳೀಯ ಜನರೊಂದಿಗೆ ಇದ್ದೇವೆ. ಆದರೆ, ಶಾಸಕ ಅಖಿಲ್ ಗೊಗೊಯ್ ನಿರ್ದಿಷ್ಟ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ನಮ್ಮ ರಾಜಕೀಯ ಸಿದ್ಧಾಂತದಂತೆ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ” ಎಂದು ಸಿಎಂ ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಯಿಂದ ಉಂಟಾದ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದ ಚಾರುಬಖ್ರ ಜಂಗಲ್ ಬ್ಲಾಕ್ ಗ್ರಾಮದ ಸುಮಾರು 400 ನಿವಾಸಿಗಳು ಏಪ್ರಿಲ್‌ನಲ್ಲಿ ತೆರವು ನೋಟಿಸ್‌ಗಳ ವಿರುದ್ಧ ಗುವಾಹಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಜಿಲ್ಲಾಡಳಿತದ ಕ್ರಮವು ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲಂಘಿಸುತ್ತದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಈ ಪ್ರಕರಣ ಇನ್ನೂ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳ ಆಸ್ತಿಗಳನ್ನು ಶಿಕ್ಷಾರ್ಹ ಕ್ರಮವಾಗಿ ಕೆಡವುವ ಪದ್ಧತಿಯನ್ನು ಕಾನೂನುಬಾಹಿರ ಎಂದು ಹೇಳಿತ್ತು. ತೆರವು ಕಾರ್ಯಾಚರಣೆಗೂ ಮುನ್ನ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿತ್ತು.

ಕಳೆದ 30 ದಿನಗಳಲ್ಲಿ ಅಸ್ಸಾಂನಲ್ಲಿ ನಡೆದ ನಾಲ್ಕನೇ ಪ್ರಮುಖ ತೆರವು ಕಾರ್ಯಾಚರಣೆ ಇದಾಗಿದೆ.

ಜೂನ್ 16 ರಂದು, ಗೋಲ್ಪಾರದಲ್ಲಿ ಅಧಿಕಾರಿಗಳು 690 ಕುಟುಂಬಗಳ ಮನೆಗಳನ್ನು ಕೆಡವಿದ್ದರು. ಅವರೆಲ್ಲವೂ ಬಂಗಾಳಿ ಮೂಲದ ಮುಸ್ಲಿಮರಿಗೆ ಸೇರಿದ್ದಾಗಿವೆ. ಹಸಿಲಾ ಬೀಲ್ ಎಂಬ ಜೌಗು ಪ್ರದೇಶದಲ್ಲಿ ಅತಿಕ್ರಮಣ ಮಾಡಲಾಗಿತ್ತು ಎಂದು ಹೇಳಲಾದ ಭೂಮಿಯಲ್ಲಿ ಅವರು ವಾಸಿಸುತ್ತಿದ್ದರು.

ಈ ಪ್ರದೇಶವನ್ನು ಜೌಗು ಪ್ರದೇಶವೆಂದು ಘೋಷಿಸುವ ಮೊದಲೇ ಅಲ್ಲಿ ವಾಸಿಸುತ್ತಿದ್ದೆವು ಎಂದು ಅನೇಕ ಕುಟುಂಬಗಳು ಹೇಳಿದ್ದಾಗಿ scroll.in ತಿಳಿಸಿದೆ.

ಜೂನ್ 30 ರಂದು ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ ಬರ್ಖೇತ್ರಿ ಕಂದಾಯ ವ್ಯಾಪ್ತಿಯ ಸುಮಾರು 150 ಎಕರೆ ಅತಿಕ್ರಮಣ ತೆರವು ಮಾಡಲಾಗಿತ್ತು. ಇಲ್ಲಿಯೂ ಬಂಗಾಳಿ ಮೂಲದ ಮುಸ್ಲಿಮರ ತೊಂಬತ್ತಮೂರು ಮನೆಗಳನ್ನು ಕೆಡವಲಾಗಿದೆ.

ಕಳೆದ ಗುರುವಾರ, ಅಪ್ಪರ್ ಅಸ್ಸಾಂನ ಲಖಿಂಪುರ ಜಿಲ್ಲೆಯಲ್ಲಿ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ 220 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ನಾಲ್ಕು ಸ್ಥಳಗಳ 77 ಎಕರೆ ಭೂಮಿಯಲ್ಲಿ ಈ ಕುಟುಂಬಗಳು ವಾಸಿಸುತ್ತಿದ್ದವು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

2016ರಲ್ಲಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 2016 ಮತ್ತು ಆಗಸ್ಟ್ 2024ರ ನಡುವೆ 10,620ಕ್ಕೂ ಹೆಚ್ಚು ಕುಟುಂಬಗಳನ್ನು (ಅವುಗಳಲ್ಲಿ ಹೆಚ್ಚಿನವು ಮುಸ್ಲಿಮರು) ಸರ್ಕಾರಿ ಭೂಮಿಯಿಂದ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಒದಗಿಸಿದ ಅಂಕಿಅಂಶಗಳು ತಿಳಿಸಿವೆ.

‘ಲವ್ ಜಿಹಾದ್’ ಆರೋಪ: ಹರಿಯಾಣದಲ್ಲಿ ಮುಸ್ಲಿಂ ಕುಟುಂಬದ ಮನೆಗಳಿಗೆ ಬೆಂಕಿ – ಆಸ್ತಿಪಾಸ್ತಿ ನಷ್ಟ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...

ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ : ಕಳೆದ ಆರು ವರ್ಷಗಳಿಂದ ಕಾಗದದ ಮೇಲೆಯೇ ಕಾರ್ಯ ನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಮಧ್ಯ ಪ್ರದೇಶದ ಇಂದೋರ್‌ನ ಖಜರಾನಾದಲ್ಲಿ ಮಂಜೂರಾದ 100 ಹಾಸಿಗೆಗಳ ಸಿವಿಲ್ ಆಸ್ಪತ್ರೆಯು ಕಳೆದ 6 ವರ್ಷಗಳಿಂದ ಕೇವಲ ಕಾಗದದ ಮೇಲಷ್ಟೇ (ದಾಖಲೆಗಳಲ್ಲಿ) ಅಸ್ತಿತ್ವದಲ್ಲಿರುವುದು ವರದಿಯಾಗಿದೆ. ಈ ವಿಲಕ್ಷಣ ಮತ್ತು ಆಘಾತಕಾರಿ ಆಡಳಿತಾತ್ಮಕ ವೈಫಲ್ಯದ ಪ್ರಕರಣವು...

ವೋಟ್‌ಯಿಂದ ಹಿಡಿದು ಮಂದಿರದ ಚಂದಾದವರೆಗೆ ಬಿಜೆಪಿಯದ್ದು ಬರೀ ‘ಚೋರಿ’ ಎಂದ ಕಾಂಗ್ರೆಸ್

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಪಕ್ಷವು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಅವರದೇ ಆದ ಇಕೋ ಸಿಸ್ಟಮ್‌ನ ದೊಡ್ಡ "ಹಗರಣ"ವಾಗಿದ್ದು, ಈ...

ಮುಸ್ಲಿಮರನ್ನು ಮಾದಕ ದ್ರವ್ಯ, ಭಯೋತ್ಪಾದನೆಗೆ ಲಿಂಕ್ ಮಾಡಿ ಪೋಸ್ಟ್: ಕೇರಳ ಹಿಂದೂ ಐಕ್ಯ ವೇದಿಕೆ ಮುಖ್ಯಸ್ಥ ಆರ್‌ವಿ ಬಾಬು ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮುಸ್ಲಿಂ ಸಮುದಾಯ ಮತ್ತು ಅದರ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ವಿ. ಬಾಬು...

ಇರಾನ್ ಜನರು ಅವರನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ: ಖಮೇನಿ ಅಂತ್ಯಕ್ರಿಯೆಯ ಜನಸಾಗರ ನೋಡಿ ಶಾಕ್ ಆದ ಟ್ರಂಪ್

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ತೀವ್ರ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....

‘ನಿಮ್ಮ ಮೌನ ಯುವಜನರನ್ನು ಕೇವಲ ಕೀಟಗಳಂತೆ ನೋಡುತ್ತೀರಿ ಎಂಬುದಕ್ಕೆ ಒಪ್ಪಿಗೆಯಾಗಿದೆ’: ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ

"ಈ ದೇಶದ ಯುವಜನರನ್ನು ನೀವು ಕೇವಲ ನಿರ್ಲಕ್ಷಿಸಬೇಕಾದ ಕೀಟಗಳಂತೆ ನೋಡುತ್ತಿದ್ದೀರಾ?" ಎಂದು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ (ಜುಲೈ 4) ಬಹಿರಂಗ ಪತ್ರ ಬರೆದಿದೆ. ದೇಶದ...

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...