Homeಕರ್ನಾಟಕ'ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾದ್ಲು, ದಯವಿಟ್ಟು ನ್ಯಾಯ ಕೊಡಿಸಿ': ಅನನ್ಯ ಭಟ್ ತಾಯಿ ಕಣ್ಣೀರು

‘ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾದ್ಲು, ದಯವಿಟ್ಟು ನ್ಯಾಯ ಕೊಡಿಸಿ’: ಅನನ್ಯ ಭಟ್ ತಾಯಿ ಕಣ್ಣೀರು

"ಬೆಳ್ತಂಗಡಿ ಠಾಣೆಗೆ ಹೋದಾಗ ದೂರು ಸ್ವೀಕರಿಸಿಲ್ಲ. ಧರ್ಮಸ್ಥಳದಲ್ಲಿ ಯಾರೋ ನನ್ನನ್ನು ಕೂಡಿ ಹಾಕಿ ಥಳಿಸಿದ್ರು. ಮಗಳ ಅಸ್ತಿ ಸಿಕ್ರೆ ಶ್ರಾದ್ಧ ಮಾಡಿ ಪ್ರಾಣ ಬಿಡ್ತೀನಿ"

- Advertisement -
- Advertisement -

ಧರ್ಮಸ್ಥಳದಲ್ಲಿ  2003ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ನಾಪತ್ತೆ ಸಂಬಂಧ ದೂರು ನೀಡಲು ತಾಯಿ ಸುಜಾತಾ ಭಟ್ ಮಂಗಳವಾರ (ಜು.15) ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ.ಅರುಣ್ ಕೆ ಅವರನ್ನು ಭೇಟಿಯಾಗಿದ್ದರು.

ಪ್ರಕರಣ ಈಗಿನ ಧರ್ಮಸ್ಥಳ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಅಲ್ಲಿಯೇ ದೂರು ನೀಡುವಂತೆ ಎಸ್ಪಿ ಸಲಹೆ ನೀಡಿದ್ದರು. ಅದರಂತೆ, ರಾತ್ರಿ 8 ಗಂಟೆಯ ಸುಮಾರಿಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಸಬ್‌ ಇನ್‌ಸ್ಪೆಕ್ಟರ್ ಸಮರ್ಥ್ ಆರ್.ಗಾಣಿಗೇರ ಅವರಿಗೆ ಸುಜಾತಾ ಭಟ್ ದೂರು ನೀಡಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದು, ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ ವಕೀಲ ಮಂಜುನಾಥ್  ಜೊತೆ ಎಸ್ಪಿಯನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಸುಜಾತಾ ಭಟ್, ” ನನ್ನ ಮಗಳು 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆಂದು ಹೋದಾಕೆ ಕಾಣೆಯಾಗಿದ್ದಳು. ಆಗ ನಾನು ಕೋಲ್ಕತ್ತಾದಲ್ಲಿ ಉದ್ಯೋಗದಲ್ಲಿದ್ದೆ. ಅಲ್ಲಿಂದ ಬರುವಾಗ ಎರಡು ದಿನ ಕಳೆದಿತ್ತು. ಬಂದು ಮಗಳನ್ನು ಹುಡುಕಿದೆ. ಆದರೆ, ಆಕೆ ಸಿಗಲಿಲ್ಲ. ಹಾಗಾಗಿ, ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದೆ. ಆಗ ಬೆಳ್ತಂಗಡಿ ಪೊಲೀಸರು “ನೀನೆ ಹುಡ್ಕೋ ಹೋಗಮ್ಮ, ನಿನ್ನ ಮಗಳು ಯಾವನ್ ಜೊತೆಗೋ ಹೋಗಿರಬಹುದು. ನೀನೇ ಹುಡ್ಕೋ, ನಾವು ಹುಡುಕಿ ಕೊಡಲು ನಮಗೇನ್ ಬೇರೆ ಕೆಲ್ಸಾ ಇಲ್ವಾ, ಅದೇ ಕೆಲ್ಸಾನಾ?” ಎಂದು ಗದರಿಸಿ ನನ್ನ ಕಳಿಸಿದರು” ಎಂದು ಹೇಳಿದರು.

ಮುಂದುವರಿದು, “ನಾನು ಬೇರೆ ದಾರಿ ತೋಚದೆ ಧರ್ಮಸ್ಥಳಕ್ಕೆ ಹೋದೆ. ಅಲ್ಲಿ ಮಗಳಿಗಾಗಿ ಹುಡುಕಾಡಿ ಒಂದು ಕಡೆ ಕುಳಿತಿದ್ದೆ. ಆಗ ಯಾರೋ ನಾಲ್ಕು ಜನರು ಬಂದು “ನಿಮ್ಮ ಮಗಳನ್ನು ನೋಡಿದ್ದೀವಿ, ಹುಡುಕಿ ಕೊಡ್ತೀವಿ” ಎಂದು ಕರೆದುಕೊಂಡು ಹೋಗಿ ಕೂಡಿ ಹಾಕಿದ್ರು. ನಂತರ ಮರುದಿನ ಬೆಳಿಗ್ಗೆ ಸುಮಾರು 5 ಗಂಟೆಯ ಹೊತ್ತಿಗೆ ನನ್ನನ್ನು ಹೊರಗಡೆ ಕರೆದುಕೊಂಡು ಬಂದು ಬಿಟ್ರು. ನನ್ನನ್ನು ಕೂಡಿ ಹಾಕಿದವರು ನನ್ನ ತಲೆಗೆ ಹೊಡೆದಿದ್ರು. ಅದರ ಮಾರ್ಕ್ ಈಗಲೂ ಇದೆ. ನನ್ನನ್ನು ಕಟ್ಟಿ ಹಾಕಿದ್ದ ಮಾರ್ಕ್‌ಗಳು ಕೈಯ್ಯಲ್ಲಿ ಇವೆ. ಎರಡೂ ಕೈಗಳಲ್ಲಿ ಮಾರ್ಕ್‌ಗಳು ಇವೆ, ಕೈ ಬೆಂಡಾಗಿವೆ” ಎಂದು ತಲೆ ಮತ್ತು ಕೈಗಳನ್ನು ಸುಜಾತಾ ಭಟ್ ಮಾಧ್ಯಮಗಳ ಮುಂದೆ ತೋರಿಸಿದರು.

“ಹೊಡೆದವರು ಯಾರು? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಭಟ್, “ಯಾರು ಅಂತ ನನಗೆ ಗೊತ್ತಿಲ್ಲ. ಅವರು ಹೊಡೆದಾಗ ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಆ ಬಳಿಕ ಯಾರೋ ವ್ಯಕ್ತಿ ಬಂದು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಅನಿಸುತ್ತೆ. ನಾನು ಕೋಮಾಗೆ ಹೋಗಿದ್ದೆ. ಎಚ್ಚರ ಬಂದಾಗ ಆಸ್ಪತ್ರೆಯಲ್ಲಿ ಇದ್ದೆ. ನನ್ನನ್ನು ಆವತ್ತು ಆಸ್ಪತ್ರೆಗೆ ಸೇರಿಸಿದ ಆ ಪುಣ್ಯಾತ್ಮನಿಗೆ ನಾನು ಚಿರಋಣಿ” ಎಂದರು.

ಮಗಳು ಯಾರ ಜೊತೆ ದೇವಸ್ಥಾನಕ್ಕೆ ಹೋಗಿದ್ದರು? ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, “ಆಕೆ ಗೆಳೆಯರೊಂದಿಗೆ ಹೋಗಿರಬಹುದು. ಆ ಬಳಿಕ ಕಾಣೆಯಾಗಿದ್ದಾಳೆ ” ಎಂದು ತಿಳಿಸಿದರು.

“ಮೊನ್ನೆ ಸಾಕ್ಷಿ ದೂರುದಾರ ಹೇಳಿದಂತೆ ಪೊಲೀಸರು ಹುಡುಕಿದಾಗ ತಲೆ ಬುರುಡೆ ಸಿಕ್ಕಿದೆ. ಅದನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಅದು ನನ್ನ ಮಗಳದ್ದಾಗಿರಬಹುದು ಅಥವಾ ನನ್ನ ಮಗಳದ್ದು ಅದೇ ರೀತಿ ಸಿಗಬಹುದು ಎಂಬ ಆಶಾ ಭಾವನೆಯೊಂದಿಗೆ ಎಸ್ಪಿಗೆ ದೂರು ಕೊಟ್ಟಿದ್ದೇನೆ. ನನ್ನ ಮಗಳ ಅಸ್ತಿ ಏನಾದರು ಸಿಕ್ಕಿದರೆ, ಸನಾತನ ಬ್ರಾಹ್ಮಣ ಹಿಂದೂ ಸಂಪ್ರದಾಯದಂತೆ ನಾನು ಅದರ ಅಂತ್ಯಕ್ರಿಯೆ ಮಾಡಬೇಕು. ಈ ಮೂಲಕ ಆಕೆಯ ಆತ್ಮಕ್ಕೆ ಶಾಂತಿ ಸಿಗಬೇಕು” ಎಂದು ಹೇಳಿದರು.

2003ರಿಂದ ಏಕೆ ಸುಮ್ಮನ್ನಿದ್ದಿರಿ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, “ನಾನು ಭಯದಿಂದ ಸುಮ್ಮನಿದ್ದೆ. ನನಗೆ ಯಾರ ಬೆಂಬಲವೂ ಇಲ್ಲ. ಬಂದು ಇಲ್ಲ, ಬಳಗವೂ ಇಲ್ಲ. ಇದ್ದ ಒಬ್ಬಳು ಮಗಳನ್ನು ಕಳೆದುಕೊಂಡಿದ್ದೇನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ” ಎಂದು ಕಣ್ಣೀರು ಹಾಕಿದರು.

“ನನ್ನ ಮಗಳು ಮಣಿಪಾಲ್‌ ಕೆಎಂಸಿಯಲ್ಲಿ ಎಂಬಿಬಿಎಸ್‌ ಓದುತ್ತಿದ್ದಳು. ಆಕೆ ಕೋರ್ಸ್‌ಗೆ ಸೇರಿ ಕೇವಲ ಆರು ತಿಂಗಳು ಆಗಿತ್ತು. ಆಕೆ ತುಂಬಾ ಕಷ್ಟಪಟ್ಟು ಓದುತ್ತಿದ್ದಳು. ಇವತ್ತು ಅವಳು ನನ್ನ ಜೊತೆಗಿಲ್ಲ. ಅವಳ ಆತ್ಮ ನನ್ನನ್ನು ಕಾಡ್ತಿದೆ. ಹಾಗಾಗಿ, ಅವಳ ಅಸ್ತಿ ಸಿಕ್ಕಿದರೆ ಪುಣ್ಯ ಬರುತ್ತದೆ ಎಂದು ಎಸ್ಪಿಯವರಿಗೆ ಹೇಳಿದ್ದೇನೆ. ಆಯ್ತಮ್ಮ ಎಂದು ಎಸ್ಪಿ ಹೇಳಿದ್ದಾರೆ. ಅವರಿಗೂ ನಾನು ಚಿರಋಣಿಯಾಗಿರುತ್ತೇನೆ” ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಸುಜಾತಾ ಭಟ್ ಕೈ ಮುಗಿದರು.

2003ರಿಂದ ಏನು ಭಯ ಇತ್ತು ಮೇಡಂ? ಎಂಬ ಪ್ರಶ್ನೆಗೆ ಉತ್ತರಿಸಿ ಸುಜಾತಾ ಭಟ್, “ನನಗೆ ಯಾರ ಬೆಂಬಲವೂ ಇಲ್ಲ ಸರ್, ನಾನು ಒಂಟಿಯಾಗಿ ಹೋರಾಟ ಮಾಡಬೇಕಿದೆ ಸರ್ ಎಂದರು. ಮಣಿಪಾಲದ ಪರ್ಕಳದ ಹತ್ತಿರ ಪರಿಕ್ಕಾ ಅಂತ ಒಂದು ಊರಿದೆ. ಅಲ್ಲಿದ್ದ ನನ್ನ ಮನೆ ದೇವರು, ಆಸ್ತಿ ಎಲ್ಲವನ್ನೂ ಕಿತ್ತುಕೊಂಡಿದ್ದಾರೆ. ತಂದೆಯಿಂದ ಬಂದ ನನ್ನ ಪಿತ್ರಾರ್ಜಿತ ಆಸ್ತಿಯನ್ನು ನನ್ನ ಸಹಿಯೂ ಇಲ್ಲದೆ ಖರೀದಿ ಮಾಡಿದ್ದಾರೆ. ಆ ಆಸ್ತಿನೂ ನನ್ನ ಒಂದು ಭಾಗ ಆಗಿತ್ತು. ಈಗ ಅದೂ ಇಲ್ಲ. ನನಗೆ ಯಾರು ಇಲ್ಲ ಸರ್” ಎಂದು ಹೇಳಿದರು.

“ನನ್ನ ಮಗಳು ಧರ್ಮಸ್ಥಳದಲ್ಲೇ ಕಾಣೆಯಾಗಿದ್ದು, ಈ ಬಗ್ಗೆ ನಾನು 2003ರಲ್ಲೇ ಬೆಳ್ತಂಗಡಿ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಆದರೆ, ಅವರು ತೆಗೆದುಕೊಂಡಿಲ್ಲ. ಈಗ ನಾನು ಎಸ್ಪಿ ಬಳಿ ದೂರು ಕೊಟ್ಟಿದ್ದೇನೆ. ಅವರು ಧರ್ಮಸ್ಥಳ ಠಾಣೆಗೆ ಹೋಗಲು ಹೇಳಿದ್ದಾರೆ” ಎಂದು ತಿಳಿಸಿದರು.

ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಮಾತನಾಡಿ, “ಸಾಕ್ಷಿ ದೂರುದಾರ ಮೊನ್ನೆ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ಕೊಟ್ಟ ಬಳಿಕ ಸುಜಾತಾ ಭಟ್ ನನ್ನನ್ನು ಸಂಪರ್ಕಿಸಿದರು. “ಧರ್ಮಸ್ಥಳದ ಪ್ರಕರಣ ನಡೆಯುತ್ತಿದೆಯಲ್ಲ, ನನ್ನ ಮಗಳದ್ದು ಆ ರೀತಿಯ ಪ್ರಕರಣ ನಡೆದಿದೆ” ಎಂದರು. ಆಗ ನಾನು ಕಾನೂನಿನ ಪ್ರಕಾರ ದೂರು ಕೊಡೋಣ ಎಂದೆ. ಈಗ ದೂರು ಕೊಟ್ಟಿದ್ದೇವೆ. ಇವರ (ಸುಜಾತಾ ಭಟ್) ಬೇಡಿಕೆ ಏನೆಂದರೆ, ಇವರು ಯಾರನ್ನೂ ಜೈಲಿಗೆ ಹಾಕಿ ಎಂದು ಹೇಳುತ್ತಿಲ್ಲ. ಇವರಿಗೆ ಯಾರೂ ಇಲ್ಲ. ಇಲ್ಲಿ ಹೂಳಲಾಗಿದೆ ಎನ್ನಲಾದ ಹೆಣಗಳ ಬಗ್ಗೆ ಹುಡುಕಾಟ ನಡೆಸುವಾಗ ನನ್ನ ಮಗಳ ಅಸ್ತಿ ಏನಾದರು ಸಿಕ್ಕಿ, ಅದು ಡಿಎನ್‌ಎ ಮೂಲಕ ಖಚಿತವಾದರೆ ನನಗೆ ಕೊಡಿ. ಅದಕ್ಕೆ ಶ್ರಾದ್ಧ ಮಾಡಿ, ತಾನೂ ಜೀವ ಬಿಡುತ್ತೇನೆ ಎಂಬ ಸ್ಥಿತಿಯಲ್ಲಿ ಇದ್ದಾರೆ” ಎಂದರು.

“ಎಸ್ಪಿಯವರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ. ಕಾನೂನಿನ ಪ್ರಕಾರ ಏನು ಮಾಡಬೇಕೋ ಅದು ಮಾಡುತ್ತೇವೆ ಎಂದಿದ್ದಾರೆ. ಎಸ್ಪಿ ಹೇಳಿದಂತೆ ನಾವು ಧರ್ಮಸ್ಥಳ ಠಾಣೆಗೆ ದೂರು ಕೊಡುತ್ತೇವೆ” ಎಂದರು.

ಸುಜಾತಾ ಭಟ್ ಅವರ ಆಸ್ತಿ ವಿಚಾರ ಪ್ರಸ್ತಾಪಿಸಿದಾಗ, “ಅದು ಸಿವಿಲ್ ವ್ಯಾಜ್ಯವಾಗಿದೆ. ಅದನ್ನು ಇಲ್ಲಿ ಪ್ರಸ್ತಾಪಿಸಲು ಆಗುವುದಿಲ್ಲ ಎಂದು ಹೇಳಿದರು.

ದೂರಿನ ಬಗ್ಗೆ ವಿಚಾರಣೆ ನಡೆಸಿ ಕ್ರಮ: ಎಸ್ಪಿ ಡಾ.ಅರುಣ್ 

2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಣ್ಮರೆಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಯುವತಿಯ ತಾಯಿ ಜುಲೈ 15ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಬೆಂಗಳೂರು| ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಇಬ್ಬರು ಉಪನ್ಯಾಸಕರು ಸೇರಿ ಮೂವರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...