Homeಕರ್ನಾಟಕಕೊಪ್ಪಳ: ಬಾಲ್ದೋಟಾ ಕಾರ್ಖಾನೆ ವಿರೋಧಿ ಪ್ರತಿಭಟನೆ; 9 ಹೋರಾಟಗಾರರ ವಿರುದ್ಧ ಎಫ್‌ಐಆರ್ ದಾಖಲು

ಕೊಪ್ಪಳ: ಬಾಲ್ದೋಟಾ ಕಾರ್ಖಾನೆ ವಿರೋಧಿ ಪ್ರತಿಭಟನೆ; 9 ಹೋರಾಟಗಾರರ ವಿರುದ್ಧ ಎಫ್‌ಐಆರ್ ದಾಖಲು

- Advertisement -
- Advertisement -

ಕೊಪ್ಪಳ: ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಬಾಲ್ದೋಟಾ ಎಂಎಸ್‌ಪಿಎಲ್‌ ಕಂಪನಿಯ ಅತಿಕ್ರಮಣ ಮತ್ತು ಕೆರೆ ನೀರಿನ ಹಕ್ಕಿಗಾಗಿ ನಡೆಯುತ್ತಿದ್ದ ತೀವ್ರ ಪ್ರತಿಭಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕಳೆದ ಬುಧವಾರ (ಜುಲೈ 23, 2025) ಬಾಲ್ದೋಟಾ ಕಾರ್ಖಾನೆ ಎದುರು ಧರಣಿ ನಡೆಸಿದ್ದ ಒಂಬತ್ತು ಮಂದಿ ಹೋರಾಟಗಾರರ ವಿರುದ್ಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರತಿಭಟನೆಯು ಸುಮಾರು 4,000 ಕುರಿ ಮತ್ತು ದನಗಳೊಂದಿಗೆ ನಡೆದಿದ್ದು, ಜಿಲ್ಲಾಡಳಿತ ಭವನ ಮತ್ತು ಬಾಲ್ದೋಟಾ ಕಾರ್ಖಾನೆ ಎರಡೂ ಕಡೆ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಪ್ರಕರಣದ ಹಿನ್ನೆಲೆ

ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಜ್ವಲಂತ ಸಮಸ್ಯೆಯಾಗಿರುವ ಬಸಾಪುರ ಕೆರೆ ಅತಿಕ್ರಮಣವನ್ನು ಖಂಡಿಸಿ, ಬಲ್ಡೋಟಾ ಎಂಎಸ್‌ಪಿಎಲ್‌ ಕಂಪನಿ ವಿರುದ್ಧ ಬೃಹತ್ “ಜನ-ಜಾನುವಾರು ಪ್ರತಿಭಟನೆ” ಜುಲೈ 24 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯಿತು. ಬಸಾಪುರ ಕೆರೆ ಬಚಾವೋ ಮತ್ತು ಪರಿಸರ ಹಿತರಕ್ಷಣಾ ಸಮಿತಿಗಳು ಜಂಟಿಯಾಗಿ ಕರೆ ನೀಡಿದ ಈ ಪ್ರತಿಭಟನೆಯಲ್ಲಿ ಸುಮಾರು 4,000 ಕುರಿ ಮತ್ತು ದನಗಳೊಂದಿಗೆ ಸಹಸ್ರಾರು ರೈತರು ಕೊಪ್ಪಳ ಜಿಲ್ಲಾಡಳಿತದ ಕಚೇರಿ ಮುಂದೆ ಜಮಾಯಿಸಿ, ಉಚ್ಚ ನ್ಯಾಯಾಲಯದ ಆದೇಶದಂತೆ ಬಸಾಪುರ ಕೆರೆಯನ್ನು ತಕ್ಷಣವೇ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಆಗ್ರಹಿಸಿದ್ದರು.

ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಉದ್ದೇಶಿಸಿ, “ಸಿದ್ದರಾಮಯ್ಯನವರೇ ಇಲ್ಲಿ ನೋಡಿ, ಕುರಿಗಳಿಗೆ ಕುಡಿಯಲು ನೀರಿಲ್ಲ, ದನಗಳಿಗೆ ಕುಡಿಯಲು ನೀರಿಲ್ಲ!” ಎಂದು ಆಕ್ರೋಶದಿಂದ ಕೂಗಿದರು. ಕೊಪ್ಪಳ ಜಿಲ್ಲೆಯ ಬೃಹತ್ ಕಾರ್ಪೊರೇಟ್ ಸಂಸ್ಥೆಯಾದ ಬಲ್ಡೋಟಾ ಕಂಪನಿಗೆ ಬಸಾಪುರ ಕೆರೆಯನ್ನು ಬರೆದುಕೊಡಲಾಗಿದೆ ಎಂದು ಆರೋಪಿಸಿದ ರೈತರು, ಇದನ್ನು ವಿರೋಧಿಸಿ ಕಂಪನಿ ಮುಂದೆ ಈ ಜನ-ಜಾನುವಾರು ಪ್ರತಿಭಟನೆ ನಡೆಸಲಾಯಿತು ಎಂದು ತಿಳಿಸಿದರು. ನೂರಾರು ಪ್ರತಿಭಟನಾಕಾರರು, “ಬಸಾಪುರ ಕೆರೆಯನ್ನು ನಾವು ಬಿಡುವುದಿಲ್ಲ, ಬಿಡುವುದಿಲ್ಲ!” ಎಂದು ಜೋರು ಘೋಷಣೆಗಳನ್ನು ಕೂಗಿದರು. ಇಂತಹ ಕಂಪನಿಗಳಿಗೆ ಕಾರ್ಖಾನೆ ಮಾಡಲು ಕೇಳಿದಷ್ಟು ಜಾಗ ಕೊಟ್ಟಿರುವುದರ ಪರಿಣಾಮವೇ ಈ ನೀರಿನ ಅಭಾವ ಮತ್ತು ಜಾನುವಾರುಗಳ ಸಂಕಷ್ಟ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನಾನಿರತ ರೈತರು ನೀಡಿದ ಮಾಹಿತಿಯ ಪ್ರಕಾರ, ಬಲ್ಡೋಟಾ ಕಂಪನಿಯು ತನಗೆ ಮಂಜೂರಾಗಿದ್ದ ಭೂಮಿಯ ಜೊತೆಗೆ, ಬಸಾಪುರ ಗ್ರಾಮದ 44 ಎಕರೆ 35 ಗುಂಟೆ ಸಾರ್ವಜನಿಕರ ಕೆರೆಯನ್ನು ಅಕ್ರಮವಾಗಿ ತನ್ನೊಡಲೊಳಗೆ ಸೇರಿಸಿಕೊಂಡು, ಸುತ್ತಲೂ ಕಂಪೌಂಡ್ ಅನ್ನು ನಿರ್ಮಿಸಿದೆ. ಇಷ್ಟೇ ಅಲ್ಲದೆ, ಕೆರೆಯ ಮಧ್ಯಭಾಗದಲ್ಲಿ ರಸ್ತೆಯನ್ನೂ ಸಹ ನಿರ್ಮಿಸಿದ್ದು, ಇದು ಸಂಪೂರ್ಣವಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವನ್ನು ಕಡಿತಗೊಳಿಸಿದೆ. ಈ ಕಂಪನಿಯ ಸುತ್ತಮುತ್ತ ಇರುವ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಭೂಮಿ ಮತ್ತು ಕೆರೆಗಳನ್ನು ತನ್ನೊಡಲೊಳಗೆ ಸೇರಿಸಿಕೊಂಡಿದೆ. “ಕೆಲವರು ಈ ಕಂಪನಿ ಜೊತೆಗೆ ನಿಂತಿದ್ದಾರೆ. ಇದರಿಂದಾಗ ಸುತ್ತಮುತ್ತಲಿನ ಜನ, ಜಾನುವಾರುಗಳ ಸ್ಥಿತಿ ಅರಣ್ಯರೋದನವಾಗಿದೆ. ಇಂತಹ ಒಂದು ಪರಿಸ್ಥಿತಿ ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಉದ್ಭವಿಸಿದೆ,” ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉದ್ಭವಿಸಿರುವುದು ಮಾತ್ರವಲ್ಲದೆ, ಈ ಅತಿಕ್ರಮಣವನ್ನು ಪ್ರಶ್ನಿಸಲು ಹೋದರೆ ಕಾರ್ಖಾನೆಯವರು ಜನರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಮದ ರೈತರು, ಸುಮಾರು 4,000 ಕುರಿ-ದನಗಳೊಂದಿಗೆ ಕೊಪ್ಪಳ ಜಿಲ್ಲಾಡಳಿತದ ಮುಂದೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು.

ಒಬ್ಬ ರೈತ ಮಾತನಾಡಿ, “ನಮ್ಮ ಕೊಪ್ಪಳ ಜಿಲ್ಲೆಯ ಅಸ್ತಿಯನ್ನೆಲ್ಲಾ ಖರೀದಿಮಾಡಿಕೊಂಡು, ಕೆರೆಯ ನೀರನ್ನು ಕುಡಿಯಲು ಹೋಗಲು ದಾರಿಯಿಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ಅದರ ಸಲುವಾಗಿ ಇಂದು ನಾವು ಜಾನುವಾರುಗಳೊಂದಿಗೆ ಪ್ರತಿಭಟನೆ ಮಾಡಲಿಕ್ಕೆ ಬಂದಿದ್ದೇವೆ,” ಎಂದು ಹೇಳಿದರು. ಈ ಸಮಸ್ಯೆಯನ್ನು ಬಗೆಹರಿಸಿದರೆ ಒಳ್ಳೆಯದಾಗುತ್ತದೆ. ಇದನ್ನು ಬಗೆಹರಿಸದೇ ಹೋದರೆ ಮುಂದಿನ ದಿನಗಳಲ್ಲಿ “ಇಂದು 4,000 ಜಾನುವಾರುಗಳೊಂದಿಗೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ 45,000 ದನ ಮತ್ತು 1 ಲಕ್ಷ ಕುರಿಗಳೊಂದಿಗೆ ಬರುತ್ತೇವೆ,” ಎಂದು ಅವರು ಜಿಲ್ಲಾಡಳಿತಕ್ಕೆ ತೀವ್ರ ಎಚ್ಚರಿಕೆ ನೀಡಿದ್ದರು.

“ಆಗ ನಾವು ಈ ಕುರಿ ಮತ್ತು ಜಾನುವಾರುಗಳೊಂದಿಗೆ ಪ್ರತಿಭಟಿಸುತ್ತೇವೆ. ನಮಗೆ ನ್ಯಾಯ ದೊರೆಯುವವರೆಗೂ ಇಲ್ಲಿಂದ ಕದಲುವುದಿಲ್ಲ” ಎಂದು ರೈತರು ದೃಢಸಂಕಲ್ಪ ವ್ಯಕ್ತಪಡಿಸಿದರು. “ಈ ಕಂಪನಿಯವರು 2007ರಿಂದಲೂ ನೀರನ್ನು ಬಳಕೆ ಮಾಡಲು ಬಿಟ್ಟಿಲ್ಲ. ಕೆರೆಯ ಸುತ್ತಲೂ ಕಂಪೌಂಡ್ ಹಾಕಿಬಿಟ್ಟಿದ್ದಾರೆ ಮತ್ತು ಗೇಟ್ ಮಾಡಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ, ಈ ಗೇಟಿಗೆ ಹತ್ತಾರು ಕಾವಲುಗಾರರನ್ನು ಇಟ್ಟಿದ್ದಾರೆ. ಹೀಗಿದ್ದಾಗ ನಾವು ನಮ್ಮ ಜಾನುವಾರುಗಳಿಗೆ ನೀರು ಕುಡಿಸುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು. ಬಸಾಪುರ ಕೆರೆಯ ಹತ್ತಿರ ಜನ ಅಥವಾ ಜಾನುವಾರು ಹೋದರೆ ಬಡಿದು ಕಳುಹಿಸುತ್ತಾರೆ. ಈ ರೀತಿಯ ದೌರ್ಜನ್ಯ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮುಂದುವರಿಯುತ್ತಿದೆ ಎಂದೂ ಪ್ರತಿಭಟಿಸಿದ ರೈತರು ಆರೋಪಿಸಿದ್ದರು.

ಇಂದು ಜನ ಮತ್ತು ಜಾನುವಾರುಗಳೊಂದಿಗೆ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ದೊಡ್ಡ ಹೋರಾಟ ನಡೆಸಲಾಗುತ್ತಿದೆ ಎಂದು ಹೋರಾಟಗಾರರು ತಿಳಿಸಿದರು. ಇಂದಿನ ಹೋರಾಟದ ಪ್ರಮುಖ ಉದ್ದೇಶಗಳು ಎರಡು. “ಒಂದು, ಬಲ್ಡೋಟಾ ಕಂಪನಿಯ ವಿಸ್ತರಣೆಯನ್ನು ನಿಲ್ಲಿಸಬೇಕು. ಎರಡನೆಯದು, ಕಂಪನಿಗೆ ಬಸಾಪುರ ಕೆರೆಯನ್ನು ಜಿಲ್ಲಾಡಳಿತ ಮಾರಾಟ ಮಾಡಿದೆ. ಇದನ್ನು ನಾವು ಸರ್ವತ ಒಪ್ಪುವುದಿಲ್ಲ. ಹಾಗಾಗಿ ಬಸಾಪುರ ಕೆರೆಯನ್ನು ಜನ ಮತ್ತು ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ,” ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದರು.

ಕಾನೂನುಬದ್ಧತೆ ಏನೇ ಇರಲಿ, ಸರ್ಕಾರ ಕಂಪನಿಗೆ ಈ ಕೆರೆಯನ್ನು ಮಾರಾಟ ಮಾಡಿರುವುದೇ ತಪ್ಪು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು. “ಅದನ್ನು ಜನ ಜಾನುವಾರುಗಳಿಗೆ ಮುಕ್ತಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಹಾಗಾಗಿ ಈ ಕಂಪನಿಯಿಂದ ದೌರ್ಜನ್ಯಕ್ಕೊಳಗಾದ ಗ್ರಾಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಬೇಕು, ಇಲ್ಲಿಯ ಪರಿಸ್ಥಿತಿ ಅವಲೋಕಿಸಿ ಇಲ್ಲಿರುವ ಕಂಪನಿಯನ್ನು ಒಕ್ಕಲೆಬ್ಬಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು,” ಎಂದು ಅವರು ಆಗ್ರಹಿಸಿದ್ದರು.

ಇದನ್ನು ಬಿಟ್ಟು ಸರ್ಕಾರ ಮತ್ತು ಜಿಲ್ಲಾಡಳಿತ ಬೇರೆ ಏನೋ ನೆಪವೊಡ್ಡಿ ಬಲ್ಡೋಟಾ ವಿಸ್ತರಣೆಯನ್ನು ನಿಲ್ಲಿಸದಿದ್ದರೆ ಮತ್ತು ಕೆರೆಯನ್ನು ಮುಕ್ತಗೊಳಿಸದಿದ್ದರೆ, “ಮುಂದಿನ ದಿನಗಳಲ್ಲಿ 40,000 ಜಾನುವಾರುಗಳೊಂದಿಗೆ ಬಲ್ಡೋಟಾ ಕಂಪನಿಯ ಒಳಗೆ ನುಗ್ಗುವಂತಹ ಹೋರಾಟವನ್ನು ಮಾಡುತ್ತೇವೆ,” ಎಂದು ಹೋರಾಟಗಾರರು ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದರು.

ಧರಣಿ ನಡೆಸುತ್ತಿದ್ದಾಗ ಕಾರ್ಖಾನೆಯ ಸಿಬ್ಬಂದಿ ಮತ್ತು ಹೋರಾಟಗಾರರ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ಧರಣಿನಿರತರು ಬಿ.ಎಸ್.ಪಿ.ಎಲ್. ಬಾಲ್ದೋಟಾ ಕಂಪನಿಯ ಮುಖ್ಯ ದ್ವಾರದ ಹತ್ತಿರ ಕರ್ತವ್ಯದಲ್ಲಿದ್ದಾಗ, ಸುಮಾರು 4,000ಕ್ಕೂ ಹೆಚ್ಚು ದನಗಳನ್ನು ಮತ್ತು ಕುರಿಗಳನ್ನು ಕಾರ್ಖಾನೆಯ ಆವರಣದೊಳಗೆ ಒಡೆದುಕೊಂಡು ಬಂದು ಕಂಪನಿಯ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಂಪನಿಯ ಭದ್ರತಾ ವ್ಯವಸ್ಥಾಪಕರಾದ ಎಂ. ಮಹೇಶ್ ನೀಡಿದ ದೂರಿನಲ್ಲಿ, ಪ್ರತಿಭಟನಾಕಾರರು ತಮ್ಮನ್ನು ತಳ್ಳಿ ಬಲವಂತವಾಗಿ ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದರು.

ಈ ದೂರಿನ ಅನ್ವಯ, ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಅಲ್ಲಮ ಪ್ರಭು ಬೆಟದೂರು, ಹನುಮಂತಪ್ಪ ಕಲ್ಕೆರಿ, ಮಂಗಳೇಶ್ ರಾಥೋಡ್, ಮುದುಕಪ್ಪ ಹೊಸಮನಿ, ಕೆ.ಬಿ ಗೋನಾಳ್, ಯಮನೂರಪ್ಪ ಪೂಜಾರ, ಮಂಜುನಾಥ ಗೊಂಡಬಾಳ, ಭೀಮೇಶ ಕಲಕೇರಿ ಹಾಗೂ ಎ.ಗಫಾರ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದರು.

ಹೋರಾಟಗಾರ ಮಂಜುನಾಥ್ ಗೊಂಡ್ವಾಳ್ ಮಾತನಾಡಿ, “44 ಎಕರೆ ಕೆರೆ ಮತ್ತು ಸಾರ್ವಜನಿಕ 12 ಎಕರೆ ಭೂಮಿ ಅಂದರೆ ಸುಮಾರು 57 ಎಕರೆ ಮುಖ್ಯ ರಸ್ತೆ ಹೊಂದಿಕೊಂಡಿರುವ ಭೂಮಿಯನ್ನು ಕಬಳಿಸಿ ಅತ್ಯಂತ ಕಡಿಮೆ ಬೆಲೆಗೆ ಲೀಸ್ ಕಮ್ ಖರೀದಿ ಮಾಡಿಕೊಂಡಿದ್ದಾರೆ,” ಎಂದು ಆರೋಪಿಸಿದರು. ಈ ಕೆರೆಗೆ ಸಂಬಂಧಿಸಿದಂತೆ 2022ರ ಹೈಕೋರ್ಟ್ ಆದೇಶದಲ್ಲಿ ಈ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಸ್ಪಷ್ಟವಾಗಿ ಇದೆ. ಆದರೆ ಕಂಪನಿಯು ಈ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಗೊಂಡ್ವಾಳ್ ಆರೋಪಿಸಿದ್ದರು.

“ಹಾಗಾಗಿ ಜಾನುವಾರುಗಳಿಗೆ, ಕುರಿಗಳಿಗೆ, ಕರುಗಳಿಗೆ ನೀರು ಕುಡಿಯಲು ಮುಕ್ತಗೊಳಿಸಬೇಕು. ಇಲ್ಲಿ ಯಾವುದೇ ರೀತಿಯಾದ ಅಡತಡೆಯನ್ನು ಕಂಪನಿ ಮಾಡಬಾರದು ಎಂದು ಕೋರ್ಟ್ ಆದೇಶವಿದೆ. ಈ ಆದೇಶವನ್ನು ಸರ್ಕಾರ ಮತ್ತು ಜಿಲ್ಲಾಡಳಿತವು ಜಾರಿಮಾಡದೆ, ಕೆಲ ಜನರು ಕಂಪನಿ ಜೊತೆ ಸೇರಿಕೊಂಡಿದ್ದಾರೆ. ಹಾಗಾಗಿ ಕಂಪನಿ ನಿರ್ಮಿಸಿರುವ ಕಂಪೌಂಡ್ ಅನ್ನು ಈ ಕೂಡಲೇ ತೆರವುಗೊಳಿಸಬೇಕು. ಅಲ್ಲಿರುವ ಕಂಪನಿಯ ಭದ್ರತಾ ಸಿಬ್ಬಂದಿಯ ದೌರ್ಜನ್ಯದ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ. ಇಲ್ಲಿಯ ಜನ-ಜಾನುವಾರುಗಳೊಂದಿಗೆ ಅನಿರ್ದಿಷ್ಟಾವಧಿ ಧರಣಿಯನ್ನು ಮುಂದುವರೆಸುತ್ತೇವೆ,” ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಈ ಸಂಬಂಧ ಮುಖ್ಯಮಂತ್ರಿಯವರಿಗೂ ಮತ್ತು ಜಿಲ್ಲಾಧಿಕಾರಿಗೂ ಸಹ ಮನವಿ ಸಲ್ಲಿಸಿದ್ದರೂ, ತಮ್ಮ ಸಮಸ್ಯೆ ಕುರಿತು ಯಾರೂ ಗಮನಹರಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. “ನಮ್ಮ ಊರಿನ ಕೆರೆಗೆ ನಮ್ಮ ಹಕ್ಕು ಇದೆ. ಸರ್ಕಾರವೇ ನಮಗೆ ಮೋಸ ಮಾಡಿದರೆ ನಾವೆಲ್ಲ ಬೀದಿಪಾಲಾಗುತ್ತೇವೆ. ರೈತರಾದ ನಾವು ದುಡಿಯದೇ ಇದ್ದರೆ ಇವರೇನು ದುಡ್ಡನ್ನು ತಿಂದು ಬದುಕುತ್ತಾರೆಯೇ? ಸರ್ಕಾರಕ್ಕೆ ರೈತರ ಮೇಲೆ ಕರುಣೆ ಇಲ್ಲವೇ? ಸರ್ಕಾರ ನಡೆಸುವವರು ರೈತರ ಮಕ್ಕಳಲ್ಲವೇ? ಇವರಿಗೆ ಸರ್ಕಾರಿ ನೌಕರಿ ಬಂದ ಕೂಡಲೇ ದೊಡ್ಡ ಶ್ರೀಮಂತರಾಗಿಬಿಟ್ಟರೆಯೇ? ಇಂತಹ ಬಂಡರು ಹುಟ್ಟಿ ಹುಟ್ಟಿ ನಮ್ಮ ದೇಶ ಹಾಳಾಗಿ ಹೋಗಿದೆ,” ಎಂದು ರೈತರೊಬ್ಬರು ತಮ್ಮ ಆಕ್ರೋಶವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದರು.

ಇಂದಿನದು ಕೇವಲ ಸಾಂಕೇತಿಕ ಪ್ರತಿಭಟನೆ ಆಗಿದೆ. ಇದು ಮುಂದುವರಿಯುತ್ತದೆ. ನ್ಯಾಯ ಸಿಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ರೈತರು ದೃಢಪಡಿಸಿದ್ದರು.

ಕೊಪ್ಪಳ: 4000 ಜಾನುವಾರುಗಳೊಂದಿಗೆ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...