ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್ಗಢ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾವೋವಾದಿಗಳು ಜನವರಿ 1, 2026 ರಂದು ಸಾಮೂಹಿಕವಾಗಿ ಶರಣಾಗಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ. ಎಂಎಂಸಿ ವಲಯದ ವಕ್ತಾರ ಅನಂತ್ ಹೆಸರಿನಲ್ಲಿ ಹೊರಡಿಸಲಾದ ಪತ್ರದಲ್ಲಿ, ನಮ್ಮ ಗುಂಪು ವೈಯಕ್ತಿಕ ಶರಣಾಗತಿಗಳ ಬದಲಿಗೆ ಸಮಾಜದೊಂದಿಗೆ ‘ಸಾಮೂಹಿಕ ಮತ್ತು ಗೌರವಾನ್ವಿತ ಬದುಕನ್ನು’ ಬಯಸುತ್ತದೆ ಎಂದು ಹೇಳಿದೆ.
ಹಿರಿಯ ನಾಯಕರಾದ ಮಲ್ಲೊಜುಲಾ, ಅಶಣ್ಣ ಶರಣಾದ ನಂತರ ಮತ್ತು ಉನ್ನತ ಕಮಾಂಡರ್ ಹಿಡ್ಮಾ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ನಂತರ ಮಾವೋವಾದಿ ಸಂಘಟನೆ ದುರ್ಬಲಗೊಂಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. “ಕೇಂದ್ರ ಸರ್ಕಾರವು ನಮಗೆ ಪದೇ ಪದೇ ಮನವಿ ಮಾಡಿದ ನಂತರ ಉಳಿದ ಕಾರ್ಯಕರ್ತರು ಶರಣಾಗಲು ನಿರ್ಧರಿಸಿದ್ದಾರೆ” ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಕಾರ್ಯಕರ್ತರು ತಮ್ಮ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿ ಸರ್ಕಾರದ ಪುನರ್ವಸತಿ ಕಾರ್ಯಕ್ರಮಕ್ಕೆ ಸೇರುತ್ತಾರೆ ಎಂದು ಸಹ ಉಲ್ಲೇಖಿಸಲಾಗಿದೆ.
ಮೂರು ರಾಜ್ಯಗಳು ಸ್ಪಷ್ಟ ಭದ್ರತಾ ಖಾತರಿ ಮತ್ತು ಪಾರದರ್ಶಕ ಪುನರ್ವಸತಿ ಪ್ರಕ್ರಿಯೆಯನ್ನು ನೀಡಿದರೆ ಮಾತ್ರ ನಮ್ಮ ಗುಂಪು ಮುಖ್ಯವಾಹಿನಿಗೆ ಮರಳುತ್ತದೆ ಎಂದು ಅನಂತ್ ಹೇಳಿದರು. ಹಿಂದಿನ ಪುನರ್ವಸತಿ ಪ್ರಯತ್ನಗಳು ಕಾಗದದಲ್ಲಿ ಮಾತ್ರ ಉಳಿದಿವೆ, ಶರಣಾದ ಸದಸ್ಯರು ಅಥವಾ ಅವರ ಕುಟುಂಬಗಳಿಗೆ ಸುರಕ್ಷತೆಯನ್ನು ಖಚಿತಪಡಿಸಲಿಲ್ಲ ಎಂದು ಅವರು ಬೇಸರ ಹೊರಹಾಕಿದ್ದಾರೆ.
ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಸರ್ಕಾರಗಳು ಜನವರಿ 1 ರವರೆಗೆ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಮಾವೋವಾದಿಗಳು ಒತ್ತಾಯಿಸಿದರು. ಪ್ರತಿಯಾಗಿ, ಕಾರ್ಯಕರ್ತರು ಎಲ್ಲಾ ಸಶಸ್ತ್ರ ಚಟುವಟಿಕೆಗಳನ್ನು ಸಹ ನಿಲ್ಲಿಸುತ್ತಾರೆ. ನಮ್ಮ ಏಕತೆ ಅಖಂಡವಾಗಿ ಉಳಿಯಲು ನಾವೆಲ್ಲರೂ ಒಂದೇ ದಿನ ಒಟ್ಟಾಗಿ ಚಲಿಸುತ್ತೇವೆ ಎಂದು ಅನಂತ್ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ನಿರ್ಧಾರವು ಸಾಮೂಹಿಕ ಪಕ್ಷದ ಕಾರ್ಯತಂತ್ರದ ಭಾಗವಾಗಿದೆ, ನಮ್ಮ ಹೋರಾಟಕ್ಕೆ ಮಾಡುತ್ತಿರುವ ದ್ರೋಹವಲ್ಲ ಎಂದು ಅವರು ವಿವರಿಸಿದರು.
ಗುಂಪಿನ ಗುರಿ ಕೇವಲ ಶರಣಾಗತಿಯಲ್ಲ, ಆದರೆ ಸಮಾಜದೊಂದಿಗೆ ಗೌರವಯುತ ಪುನರ್ಮಿಲನವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. “ನಮ್ಮ ಹೋರಾಟ ಯಾವಾಗಲೂ ಜನರಿಗಾಗಿ, ಅವರ ವಿರುದ್ಧವಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬದಲಾಗುತ್ತಿರುವ ರಾಷ್ಟ್ರೀಯ ಮತ್ತು ಜಾಗತಿಕ ಪರಿಸ್ಥಿತಿಗಳು ಸಂಘಟನೆಯ ಉಳಿವಿನ ಜೊತೆಗೆ ಸ್ಥಳೀಯ ಸಮುದಾಯಗಳ ಕಲ್ಯಾಣಕ್ಕಾಗಿ ನಾಯಕತ್ವವು ಈ ಹೆಜ್ಜೆ ಇಡಲು ಕಾರಣವಾಗಿದೆ ಎಂದು ಅದು ಹೇಳಿದೆ.
ಅವರು, ಪತ್ರಕರ್ತರು ಮತ್ತು ಸಾರ್ವಜನಿಕ ವ್ಯಕ್ತಿಗಳಿಗೆ ಶಾಂತಿಯುತ ಪರಿವರ್ತನೆಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ, ಅಪನಂಬಿಕೆಯನ್ನು ಸೃಷ್ಟಿಸುವುದನ್ನು ತಪ್ಪಿಸುವಂತೆ ಕೇಳಿಕೊಂಡಿದ್ದಾರೆ. ನಕ್ಸಲ್ ಕಾರ್ಯಕರ್ತರು ಮತ್ತು ಅವರ ಕುಟುಂಬಗಳು ಶಾಂತಿ ಮತ್ತು ಸಮಾಜಕ್ಕೆ ಗೌರವಯುತ ಮರಳುವಿಕೆಯನ್ನು ಬಯಸುತ್ತಾರೆ ಎಂದು ಅವರು ಹೇಳಿದರು.
ಮುಂದಿನ ತಿಂಗಳಿಗೆ ಎಂಎಂಸಿ ನಿಯೋಗಗಳನ್ನು ನಿರ್ದಿಷ್ಟ ರೇಡಿಯೋ ಆವರ್ತನದ ಮೂಲಕ ಸಂಪರ್ಕಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಛತ್ತೀಸ್ಗಢ ಸರ್ಕಾರದ “ಪೂನಾ ಮಾರ್ಗಮ್” ಪುನರ್ವಸತಿ ಕಾರ್ಯಕ್ರಮವನ್ನು ಸ್ವೀಕರಿಸಲು ಗುಂಪು ಸಿದ್ಧವಾಗಿದೆ ಎಂದು ಬಿಜಾಪುರದಲ್ಲಿ ಪ್ರತ್ಯೇಕ ಹೇಳಿಕೆ ತಿಳಿಸಿದೆ.
ಕಳೆದ ವಾರ, ಮಾವೋವಾದಿಗಳು ಮುಖ್ಯವಾಹಿನಿಯ ಜೀವನದಲ್ಲಿ ಮತ್ತೆ ಒಂದಾಗಲು ಸಮಯ ಬೇಕು ಎಂದು ಹೇಳುವ ಹಿಂದಿನ ಪತ್ರವನ್ನು ನೀಡಿದ್ದರು.
ಎಂಎಂಸಿ ಜೋನ್ ಎಂದರೇನು?
ಎಂಎಂಸಿ ಜೋನ್ (ಮಹಾರಾಷ್ಟ್ರ–ಮಧ್ಯ ಪ್ರದೇಶ–ಛತ್ತೀಸ್ಗಢ) ಎಂಬುದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋಯಿಸ್ಟ್)ದ ವಿಶೇಷ ವಲಯ ಕಮಿಟಿಯಾಗಿದೆ. ಮಹಾರಾಷ್ಟ್ರದ ಗಢ್ಚಿರೋಳಿ, ಮಧ್ಯಪ್ರದೇಶದ ಬಲಾಘಟ್ ಮತ್ತು ಛತ್ತೀಸ್ಗಢದ ರಾಜನಾಂದಗಾವ್–ಕಬೀರ್ಧಾಮ್ ಜಿಲ್ಲೆಗಳ ದಟ್ಟ ಕಾಡುಗಳ ‘ಟ್ರೈ-ಜಂಕ್ಷನ್’ (ಮೂರು ರಾಜ್ಯಗಳ ಸಂಧಿ) ಪ್ರದೇಶವನ್ನು ಒಳಗೊಂಡಿದೆ. ಇದು ಉತ್ತರ ಮತ್ತು ಪಶ್ಚಿಮ ಪ್ರದೇಶಗಳನ್ನು ದಂಡಕಾರಣ್ಯ ಪ್ರದೇಶಕ್ಕೆ ಸೇರಿಸುವ ಕಾರಿಡಾರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಜೋನ್ನಲ್ಲಿ ಮಾವೋವಾದಿಗಳು ಗೆರಿಲ್ಲಾ ಆಪರೇಷನ್ಗಳನ್ನು ನಡೆಸುತ್ತಾರೆ. ಸುಮಾರು 200ಕ್ಕೂ ಹೆಚ್ಚು ಸಶಸ್ತ್ರ ಕ್ಯಾಡರ್ಗಳು ಆಕ್ರಮಣದಲ್ಲಿರುತ್ತಾರೆಂದು ಅಂದಾಜಿಸಲಾಗಿದೆ. ಇದು ಭಾರತದ ನಕ್ಸಲ್ ಪರ್ವತಮಾನದಲ್ಲಿ ಪ್ರಮುಖ ಪ್ರದೇಶಗಳಲ್ಲಿ ಒಂದು.


