ಲಾಕ್ ಡೌನ್ ಪರಿಣಾಮ ಸೀಜನಲ್ ವಲಸಿಗರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗದೆ ಆರ್ಥಿಕ ಬೆಳವಣಿಗೆ ಕುಸಿತ ಕಾಣಲು ಕಾರಣವಾಗಿದೆ. ಹೀಗಾಗಿ ಶೇ. 92ರಷ್ಟು ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಸರ್ಕಾರೇತರ ಸಂಸ್ಥೆ ಜನ ಸಾಹಸ್ ಸರ್ವೇ ಹೇಳಿದೆ.
ಜನ ಸಾಹಸ್ ಸಂಸ್ಥೆ ಪ್ರಮುಖವಾಗಿ ಉತ್ತರ ಭಾರತ ಮತ್ತು ಮಧ್ಯಭಾರತದಲ್ಲಿ ದೂರವಾಣಿ ಮೂಲಕ ವಲಸೆ ಕಾರ್ಮಿಕರನ್ನು ಸಂಪರ್ಕಿಸಿ ಸರ್ವೆ ನಡೆಸಿ ಲಾಕ್ ಡೌನ್ ಸಮಯದಲ್ಲಿ ಶೇಕಡ 42ರಷ್ಟು ವಲಸೆ ಕಾರ್ಮಿಕರ ಬಳಿ ಆ ದಿನಕ್ಕೂ ಆಹಾರಧಾನ್ಯಗಳಿಲ್ಲ ಎಂದು ಸ್ಪಷ್ಟಪಡಿಸಿದೆ. 21 ದಿನಗಳ ಲಾಕ್ ಡೌನ್ ವೇಳೆಯಲ್ಲಿ ಶೇಕಡ 66 ರಷ್ಟು ಮಂದಿ ಕಾರ್ಮಿಕರಿಗೆ ಮನೆಯ ಖರ್ಚುವೆಚ್ಚ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಮಧ್ಯ ಮತ್ತು ಉತ್ತರ ಭಾರತದ ಮೂರನೇ ಒಂದರಷ್ಟು ವಲಸೆ ಕಾರ್ಮಿಕರು ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಲಾಕ್ ಡೌನ್ ನ ಆರಂಭದ ದಿನದಿಂದಲೂ ಆಹಾರ, ನೀರು ಮತ್ತು ಹಣ ಸಿಗದೆ ನಗರಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ನೀರು ಮತ್ತು ಆಹಾರ ಸಿಕ್ಕರೂ ಅದು ಕಡಿಮೆ ಪ್ರಮಾಣದಲ್ಲಿ ದೊರೆತಿದೆ ಎಂಬುದರ ಮೇಲೆ ಈ ಸರ್ವೇ ಬೆಳಕು ಚೆಲ್ಲಿದೆ.
ಲಾಕ್ ಡೌನ್ ನಡುವೆಯೇ ಅರ್ಧದಷ್ಟು ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಆದರೂ ಅವರು ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದು ಆಹಾರಧಾನ್ಯಗಳನ್ನು ಮತ್ತು ಯಾವುದೇ ಆದಾಯವನ್ನು ಹೊಂದಲು ಆಗಿಲ್ಲ. ಹೀಗಾಗಿ ಅವರ ಬದುಕು ದುಸ್ಥರವಾಗಿದೆ.
ಶೇಕಡ 31ರಷ್ಟು ಕಾರ್ಮಿಕರು ಸಾಲ ಪಡೆದಿದ್ದಾರೆ. ಆದರೆ ಉದ್ಯೋಗವಿಲ್ಲದೆ ಸಾಲ ಮರುಪಾವತಿ ಮಾಡುವುದು ಕಷ್ಟವಾಗುತ್ತಿದೆ. ಬಹುತೇಕ ಕಾರ್ಮಿಕರು ಈ ಸಾಲವನ್ನು ಖಾಸಗಿ ಲೇವಾದೇವಿದಾರರಿಂದ ಪಡೆದಿದ್ದಾರೆ. ಶೇಕಡ 79ರಷ್ಟು ವಲಸೆ ಕಾರ್ಮಿಕರು ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಹಿಂಸೆಗೆ ತುತ್ತಾಗಬಹುದು ಎನ್ನುವ ಆತಂಕದಲ್ಲಿದ್ದಾರೆ ಎಂದು ಸರ್ವೇ ತಿಳಿಸಿದೆ.
ಮಾರ್ಚ್ 24ರ ನಂತರ ಕಾರ್ಮಿಕರಿಗೆ ಉದ್ಯೋವಿಲ್ಲ. ಹಾಗಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ನೇರ ಹಣ ವರ್ಗಾವಣೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಆದರೆ ಶೇಕಡ 94ರಷ್ಟು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಗುರುತಿನ ಚೀಟಿ ಇಲ್ಲ ಎಂಬುದರ ಮೇಲೆ ಈ ಸರ್ವೇ ಬೊಟ್ಟು ಮಾಡಿದೆ.
ಸರಾಸರಿ ನಾಲ್ವರು ಸದಸ್ಯರಿರುವ ಕುಟುಂಬದ ಜವಾಬ್ದಾರಿ ಹೊಂದಿರುವ ಕಾರ್ಮಿಕರಲ್ಲಿ ಶೇಕಡ 55ರಷ್ಟು ಕಾರ್ಮಿಕರು ದಿನವೊಂದಕ್ಕೆ 200-400 ರೂಪಾಯಿ ಕೂಲಿ ಪಡೆದರೆ, ಶೇಕಡ 39ರಷ್ಟು ಕಾರ್ಮಿಕರು 400-600 ರೂಪಾಯಿ ದಿನಕ್ಕೆ ಪಡೆಯುತ್ತಿದ್ದು, ಕನಿಷ್ಠ ದಿನಗೂಲಿ ಕಾಯಿದೆಯ ಅನುಗುಣವಾಗಿ ಪಡೆಯಬೇಕಾದ್ದಕಿಂತ ಕಡಿಮೆ ಆದಾಯ ಹೊಂದಿದ್ದಾರೆ. ಈ ಕಾಯಿದೆಯ ಪ್ರಕಾರ ದೆಹಲಿಯಲ್ಲಿ ಕೌಶಲ, ಅರೆಕೌಶಲ ಮತ್ತು ಕೌಶಲ್ಯವಿಲ್ಲದ ಕಾರ್ಮಿಕರಿಗೆ ಕ್ರಮವಾಗಿ 692, 629 ಮತ್ತು 571 ರೂ ಆದಾಯ ಪಡೆಯಬೇಕಿದೆ.
ನಿರ್ಮಾಣ ವಲಯವು ದೇಶದ ಜಿಡಿಪಿಗೆ ಶೇ.9ರಷ್ಟು ಕೊಡುಗೆ ನೀಡುತ್ತದೆ ಮತ್ತು ದೇಶದ ವಲಸೆ ಕಾರ್ಮಿಕರಿಗೆ ಅತಿಹೆಚ್ಚು ಉದ್ಯೋಗ ನೀಡುತ್ತದೆ. ಅಂದರೆ 5 ಕೋಟಿ ದಿನಗೂಲಿ ಕಾರ್ಮಿಕರಿಗೆ ಕೆಲಸ ಕೊಡುತ್ತದೆ. ಪ್ರತಿವರ್ಷ 90 ಲಕ್ಷ ಕಾರ್ಮಿಕರು ಗ್ರಾಮೀಣ ಪ್ರದೇಶದಿಂದ ನಗರಗಳತ್ತ ನಿರ್ಮಾಣ ಮತ್ತು ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಲು ಚಲಿಸುತ್ತಾರೆ ಎಂದು ಸರ್ವೆ ಹೇಳಿದ್ದನ್ನು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಈಗ ಈ ಕೋಟ್ಯಾಂತರ ಜನರು ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸಬೇಕಿದೆ. ಇವರೆಲ್ಲರ ಬವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಮತ್ತು ಕೇಂದ್ರ ಸರಕಾರಗಳು ತುರ್ತು ಕ್ರಮ ಕೈಗೊಳ್ಳಬೇಕಿದೆ.
ಕೃಪೆ: ಇಂಡಿಯನ್ ಎಕ್ಸ್ಪ್ರೆಸ್