ರಾಹುಲ್ ಗಾಂಧಿ ವಲಸೆ ಕಾರ್ಮಿಕರೊಂದಿಗೆ ನಡೆಸಿರುವ ಸಂವಾದದ ಡಾಕ್ಯುಮೆಂಟರಿಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದೆ.
ಕಳೆದ ವಾರ ನವದೆಹಲಿಯ ಆಗ್ನೇಯ ಭಾಗದಲ್ಲಿರುವ ಸುಖದೇವ್ ವಿಹಾರ್ ಫ್ಲೈಓವರ್ ಬಳಿ ಬೀಡುಬಿಟ್ಟಿದ್ದ ವಲಸೆ ಕಾರ್ಮಿಕರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿಸಿದ್ದರು. ಇದರ 17 ನಿಮಿಷಗಳ ವಿಡಿಯೊವನ್ನು ಕಾಂಗ್ರೆಸ್ ಪಕ್ಷ ಇಂದು ಬಿಡುಗಡೆ ಮಾಡಿದೆ.
ಈ ವಲಸೆ ಕಾರ್ಮಿಕರು ಹರಿಯಾಣದಿಂದ ಉತ್ತರ ಪ್ರದೇಶದ ಝಾನ್ಸಿಯ ಸಮೀಪದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಡಾಕ್ಯುಮೆಂಟರಿಯಲ್ಲಿ ರಾಹುಲ್ ಗಾಂಧಿ ವಲಸೆ ಕಾರ್ಮಿಕ ಬಳಿ ಹೋಗಿ ಅವರೊಂದಿಗೆ ಸಂವಾದ ನಡೆಸುತ್ತಾ, ಎಲ್ಲಿಂದ ಬಂದಿರಿ, ಎಷ್ಟು ದೂರ ನಡೆದಿರಿ, ಎಲ್ಲಿಗೆ ಹೋಗಬೇಕು ಮುಂತಾದ ಪ್ರಶ್ನೆಗಳನ್ನು ಕೇಳುತ್ತಾರೆ.
ನಾನು ನಿಮ್ಮವರಲ್ಲಿ ಒಬ್ಬ ಅನ್ನೋದನ್ನ ಕಾರ್ಮಿಕರಿಗೆ ಮನವರಿಕೆ ಮಾಡಿ ಕೊಡುತ್ತಿರುವ ದೃಶ್ಯ ಈ ಡಾಕ್ಯುಮೆಂಟರಿಯಲ್ಲಿದ್ದು, ಇದರ ಕೊನೆಯಲ್ಲಿ ರಾಹುಲ್ ಗಾಂಧಿ ಸರ್ಕಾರ ಕೂಡಲೇ 13 ಕೋಟಿ ಬಡ ಕಾರ್ಮಿಕರ ಕುಟುಂಬಕ್ಕೆ ನೇರವಾಗಿ 7500 ರೂ. ನೀಡಬೇಕು ಎಂದು ಕೇಂದ್ರ ಸರ್ಕಾರವನ್ನ ಆಗ್ರಹಿಸಿದ್ದಾರೆ.
17 ನಿಮಿಷದ ವೀಡಿಯೋದಲ್ಲಿ ಕಾರ್ಮಿಕರ ಕಷ್ಟದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ವಲಸೆ ಕಾರ್ಮಿಕರ ನೋವು ಹೇಳ ತೀರದಂತಾಗಿದೆ ಎಂದು ಹೇಳಿದ್ದಾರೆ.
ತನ್ನ ಟ್ವಿಟ್ಟರ್ ನಲ್ಲಿ ಈ ಡಾಕ್ಯುಮೆಂಟರಿಯನ್ನು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ “ಭಾರತದ ನಿಜವಾದ ರಾಷ್ಟ್ರ ನಿರ್ಮಾಣಕಾರರು, ನಮ್ಮ ವಲಸೆ ಸಹೋದರ ಸಹೋದರಿಯರೊಂದಿಗೆ ನಾನು ಮಾತನಾಡುವ ಈ ಕಿರುಚಿತ್ರವನ್ನು ನೋಡಿ” ಎಂದು ಹೇಳಿದ್ದಾರೆ.
Watch this short film in which I speak with India’s real nation builders, our migrant brothers & sisters. https://t.co/As99mjVvyt
— Rahul Gandhi (@RahulGandhi) May 23, 2020
ರಾಹುಲ್ ಗಾಂಧಿ ವಲಸಿಗರೊಂದಿಗೆ ಮಾತುಕತೆ ನಡೆಸಿದ ನಂತರ, ಉನ್ನತಾಧಿಕಾರಿಗಳ ಆದೇಶದ ಮೇರೆಗೆ ಕಾರ್ಮಿಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ವರದಿಗಳು ಬಂದಿದ್ದವಾದರೂ, ಅಂತಹ ವರದಿಗಳನ್ನು ಪೊಲೀಸರು ನಿರಾಕರಿಸಿದ್ದರು.
ಈ ಸಂವಾದದ ಬಗ್ಗೆ ಬಲಪಂಥೀಯ ಹಾಗೂ ಬಿಜೆಪಿಯ ಹಿನ್ನಲೆಯ ಹಲವಾರು ಜನರು ಇದು ರಾಹುಲ್ ಗಾಂಧಿ ನಡೆಸಿದ ನಾಟಕ ಎಂದು ವ್ಯಂಗ್ಯವಾಡಿದ್ದರು.
ಓದಿ: ವಲಸಿಗರೊಂದಿಗೆ ರಾಹುಲ್ ಸಂವಾದ ನಾಟಕವೇ? ನಂತರ ಕಾರ್ಮಿಕರೆಲ್ಲಾ ಕಾರಿನಲ್ಲಿ ಹೊರಟರೆ?; ಫ್ಯಾಕ್ಟ್ಚೆಕ್.