Homeಮುಖಪುಟಹೆದ್ದಾರಿಯಲ್ಲಿ ದ್ವೇಷ ಬರಹ : ಮುಸ್ಲಿಮರು ಭಾರತದಲ್ಲಿ 'ಬಾಡಿಗೆದಾರರು' ಅವರು ಹಾಗೆಯೇ ಬದುಕಬೇಕು ಎಂದ ಹಿಂದೂ...

ಹೆದ್ದಾರಿಯಲ್ಲಿ ದ್ವೇಷ ಬರಹ : ಮುಸ್ಲಿಮರು ಭಾರತದಲ್ಲಿ ‘ಬಾಡಿಗೆದಾರರು’ ಅವರು ಹಾಗೆಯೇ ಬದುಕಬೇಕು ಎಂದ ಹಿಂದೂ ರಕ್ಷಾ ದಳದ ಸದಸ್ಯರು

- Advertisement -
- Advertisement -

2026ರ ಫೆಬ್ರವರಿ 26 ಮತ್ತು 27ರ ನಡುವಿನ ಮಧ್ಯರಾತ್ರಿ ಉತ್ತರ ಪ್ರದೇಶದ ದೆಹಲಿ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯ ಮೇಲೆ ಹಿಂದೂ ರಕ್ಷಾ ದಳಕ್ಕೆ (ಹೆಚ್‌ಆರ್‌ಡಿ) ಸೇರಿದ ಮಹಿಳೆಯರು ಹಿಂದಿಯಲ್ಲಿ “मुसलमान के लिए रोड नहीं है” ಮತ್ತು ಇಂಗ್ಲಿಷ್‌ನಲ್ಲಿ “This Road Not Allow Muslim” (ಈ ರಸ್ತೆ ಮುಸ್ಲಿಮರಿಗಾಗಿ ಅಲ್ಲ ಅಥವಾ ಈ ರಸ್ತೆಯಲ್ಲಿ ಮುಸ್ಲಿಮರು ಓಡಾಡುವಂತಿಲ್ಲ) ಎಂದು ಸ್ಪ್ರೇ ಪೇಂಟ್ ಮೂಲಕ ಅಳಿಸಲಾಗದಂತೆ ಬರೆದಿದ್ದರು.

ಈ ಕುರಿತು ಆಲ್ಟ್ ನ್ಯೂಸ್ ಹಂಚಿಕೊಂಡ ವಿಡಿಯೋವನ್ನು ಕೆಳಗೆ ನೋಡಬಹುದು

ಕೋಮು ದ್ವೇಷದ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಆ ಮಹಿಳೆಯರು ಬಿಬಿಸಿ ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ. ಆ ಸಂದರ್ಶನದಲ್ಲಿ ಅವರು ತಮ್ಮ ಕೃತ್ಯವನ್ನು ಬಹಳ ಗಟ್ಟಿಯಾಗಿ ಸಮರ್ಥಿಸಿಕೊಂಡಿದ್ದಾರೆ.

“ಈ ದೇಶ ನಮ್ಮದು, ನಾವು ಏನು ಬೇಕಾದರೂ ಮಾಡಬಹುದು ಎಂದು ಆ ಮಹಿಳೆಯರು ಪ್ರತಿಪಾದಿಸಿದ್ದು, ಮುಸ್ಲಿಮರು ಭಾರತದಲ್ಲಿ ಬಾಡಿಗೆದಾರರು ಮತ್ತು ಅವರು ಹಾಗೆಯೇ ಬದುಕಬೇಕು” ಎಂದು ಹೇಳಿದ್ದಾರೆ.

ಮಹಿಳೆಯರು ದ್ವೇಷ ಬರಹ ಬರೆದಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋದಲ್ಲಿ, ಹಸಿರು ಬಣ್ಣದ ಬಟ್ಟೆ ಧರಿಸಿದ ಮತ್ತು ಕೇಸರಿ ಬಣ್ಣದ ಶಾಲು ಧರಿಸಿ ಇಬ್ಬರು ಮಹಿಳೆಯರು ಸ್ಪ್ರೇ-ಪೇಂಟಿಂಗ್ ಮಾಡುತ್ತಿರುವುದು ಕಂಡುಬಂದರೆ, ಬಿಳಿ ಬಣ್ಣದ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬರು ವಿಡಿಯೋದ ಕೊನೆಯಲ್ಲಿ ಸ್ವಲ್ಪ ಸಮಯ ಕಾಣಿಸಿಕೊಂಡಿದ್ದಾರೆ. ಉತ್ತರಾಖಂಡ ರಾಜ್ಯದ ನಂಬರ್ ಪ್ಲೇಟ್ ಹೊಂದಿರುವ ಕೆಂಪು ಸ್ವಿಫ್ಟ್ ಡಿಝೈರ್ ಕಾರು ಕೂಡ ವಿಡಿಯೋದಲ್ಲಿ ಗೋಚರಿಸಿದೆ. ಮಹಿಳೆಯೊಬ್ಬರು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೋಗಿರುವುವುದು ಕೇಳಿಸುತ್ತದೆ.

ಹಿಂದೂ ರಕ್ಷಾ ದಳದ ಮುಖ್ಯಸ್ಥ ಪಿಂಕಿ ಚೌಧರಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಸಂದೇಶವು ‘ಜಿಹಾದಿಗಳನ್ನು’ ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಕೇವಲ ಹಿಂದೂಗಳು ಮಾತ್ರ ತೆರಿಗೆ ಪಾವತಿಸುತ್ತಾರೆ ಎಂದು ಯಾವುದೇ ಪುರಾವೆಗಳಿಲ್ಲದೆ ಅವರು ಪ್ರತಿಪಾದಿಸಿದ್ದಾರೆ. “ಹಿಂದೂ ರಕ್ಷಾ ದಳದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೆದಿರುವುದು ಸರಿಯಾಗಿದೆ, ಏಕೆಂದರೆ ರಸ್ತೆಗಳು ನಿರ್ಮಾಣವಾಗುವುದು ಕೇವಲ ಹಿಂದೂಗಳ ತೆರಿಗೆಯಿಂದ. ಈ ‘ಜಿಹಾದಿ’ ಜನರು ತೆರಿಗೆ ಕಟ್ಟುವುದಿಲ್ಲ, ಹಾಗಾಗಿ ಅವರಿಗೆ ರಾಷ್ಟ್ರೀಯ ಹೆದ್ದಾರಿಯನ್ನು ಬಳಸುವ ಹಕ್ಕಿಲ್ಲ. ಮುಸ್ಲಿಮರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಬಿಡುವುದಿಲ್ಲ,” ಎಂದು ಅವರು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪಿಂಕಿ ಚೌಧರಿ ಅವರು ತಮ್ಮ ಹಳೆಯ ವಾದವನ್ನೇ ಮುಂದುವರಿಸುತ್ತಾ, ಮತ್ತೊಂದು ವಿಡಿಯೋ ಹೇಳಿಕೆಯಲ್ಲಿ ಕೋಮು ಪ್ರಚೋದಕ ಮಾತುಗಳನ್ನು ಆಡಿದ್ದಾರೆ. ಅವರ ಮಾತುಗಳ ಸಾರಾಂಶ ಇಲ್ಲಿದೆ:

“ಭಾರತದಲ್ಲಿ ಎಷ್ಟು ಶೇಕಡ ಮುಸ್ಲಿಮರಿದ್ದಾರೆ ಮತ್ತು ಅವರು ಎಷ್ಟು ತೆರಿಗೆ ಕಟ್ಟುತ್ತಾರೆ ಎಂಬುವುದು ಜನರಿಗೆ ತಿಳಿಯಬೇಕು. ನಾವು ಕಟ್ಟುವ ತೆರಿಗೆಯ ಲಾಭವನ್ನು ಈ ‘ಜಿಹಾದಿಗಳು’ ಪಡೆಯುತ್ತಿರುವುದರ ಬಗ್ಗೆ ಸರ್ಕಾರಕ್ಕೆ ಚಿಂತೆಯಿರಬೇಕು. ದೇವಸ್ಥಾನಗಳ ಕಾಣಿಕೆ ಹಣ ಸರ್ಕಾರಕ್ಕೆ ಹೋಗುತ್ತದೆ, ಆದರೆ ಮಸೀದಿ ಮತ್ತು ಮದರಸಾಗಳಿಂದ ಎಷ್ಟು ಹಣ ಬರುತ್ತದೆ? ದೇವಸ್ಥಾನಗಳಿಂದ ಹಣ ಹರಿಯುತ್ತದೆ, ಆದರೆ ಅದರ ಸೌಲಭ್ಯಗಳನ್ನು ಇವರು ಪಡೆಯುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಮುಸ್ಲಿಮರಿಗೆ ಸರ್ಕಾರಿ ಸೌಲಭ್ಯಗಳನ್ನು ನಿರಾಕರಿಸಬೇಕು. ನಾವು ತೆರಿಗೆ ಕಟ್ಟುತ್ತೇವೆ ಮತ್ತು ಹಿಂದೂಗಳ ಮತಗಳಿಂದಲೇ ಸರ್ಕಾರಗಳು ರಚನೆಯಾಗುತ್ತವೆ, ಆದರೆ ಎಲ್ಲಾ ಲಾಭಗಳು ಮುಸ್ಲಿಮರಿಗೆ ಹೋಗುತ್ತಿವೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ವಿಡಿಯೋವನ್ನು ಕೆಳಗಡೆ ನೋಡಬಹುದು

“ಈ ಕೃತ್ಯದ ಕುರಿತು ವಿಚಾರಿಸಲು ನಾವು ಸಹರಾನ್‌ಪುರ (ಗ್ರಾಮಾಂತರ) ಎಸ್‌ಪಿ ಸಾಗರ್ ಜೈನ್ ಅವರೊಂದಿಗೆ ಮಾತನಾಡಿದ್ದು, ಅವರು ಫೆಬ್ರವರಿ 27ರ ಬೆಳಗ್ಗೆಯೇ ಈ ಬಗ್ಗೆ ಎಫ್‌ಐಆರ್ ದಾಖಲಾಗಿರುವುದನ್ನು ಖಚಿತಪಡಿಸಿದ್ದಾರೆ. “ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಹೆಚ್‌ಎಐ) ಅಧಿಕಾರಿಯೊಬ್ಬರಿಂದ ನಮಗೆ ದೂರು ಬಂದಿದ್ದು, ಅದರ ಆಧಾರದ ಮೇಲೆ ನಾವು ಹಿಂದೂ ರಕ್ಷಾ ದಳದ ಕೆಲವು ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಈ ಕೃತ್ಯ ಎಸಗಿದವರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಅವರು ಯಾರೆಂದು ಗುರುತಿಸಿದ ನಂತರ, ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂಬುವುದಾಗಿ ತಿಳಿಸಿದ್ದಾರೆ ಎಂದು ಆಲ್ಟ್ ನ್ಯೂಸ್ ಮಾ.2ರಂದು ವರದಿ ಮಾಡಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(2) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಇದು ಧಾರ್ಮಿಕ, ಜನಾಂಗೀಯ, ಭಾಷಾ, ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳ ನಡುವೆ ದ್ವೇಷ, ಅಥವಾ ಕೆಟ್ಟ ಇಚ್ಛೆಯನ್ನು ಪ್ರಚೋದಿಸುವ ಉದ್ದೇಶದಿಂದ ಸುಳ್ಳು ಮಾಹಿತಿ, ವದಂತಿಗಳು ಅಥವಾ ಆತಂಕಕಾರಿ ವಿಷಯಗಳ ಪ್ರಕಟಣೆ ಅಥವಾ ಪ್ರಸರಣವನ್ನು ಅಪರಾಧೀಕರಿಸುತ್ತದೆ. ಈ ಅಪರಾಧವು ಗುರುತಿಸಬಹುದಾದ ಮತ್ತು ಜಾಮೀನು ರಹಿತವಾಗಿದೆ ಎಂದು ಆಲ್ಟ್ ನ್ಯೂಸ್ ಉಲ್ಲೇಖಿಸಿದೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಎನ್‌ಹೆಚ್‌ಎಐ ಅಧಿಕಾರಿಯನ್ನು ಸುನಿಲ್ ಕುಮಾರ್ ಎಂದು ಗುರುತಿಸಿದೆ.

ಈ ಘಟನೆಯ ವಿಡಿಯೋ ವೈರಲ್ ಆದ ಮರುದಿನವೇ ಬಿಬಿಸಿ ಪತ್ರಕರ್ತ ದಿಲ್‌ನವಾಜ್ ಪಾಶಾ ದ್ವೇಷ ಬರಹ ಬರೆದಿದ್ದಾರೆ ಎನ್ನಲಾದ ಇಬ್ಬರು ಮಹಿಳೆಯರೊಂದಿಗೆ ಮಾತನಾಡಿದ್ದು, ಅವರಲ್ಲಿ ಒಬ್ಬರು ತಮ್ಮನ್ನು ಹಿಂದೂ ರಕ್ಷಾ ದಳದ ಜಿಲ್ಲಾ ಮುಖ್ಯಸ್ಥೆ ಶ್ರದ್ಧಾ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾರೆ. ಸಂದರ್ಶನದ ವೇಳೆ ಈ ಇಬ್ಬರೂ ಮಹಿಳೆಯರು ತಾವು ಮಾಡಿದ ಕೆಲಸದ ಬಗ್ಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ, ಬದಲಾಗಿ ತಾವು ಮಾಡಿದ್ದು ಸರಿ ಎಂಬಂತೆ ಉದ್ಧಟತನದ ಸಮರ್ಥನೆ ನೀಡಿದ್ದಾರೆ.

“ಹೌದು, ನಾವೇ ಆ ಗೋಡೆ ಬರಹಗಳನ್ನು ಬರೆದಿದ್ದೇವೆ… ಮುಸ್ಲಿಮರು ತೆರಿಗೆ ಪಾವತಿಸುವುದಿಲ್ಲ” ಎಂದು ಶ್ರದ್ಧಾ ಸಿಂಗ್ ಹೇಳಿದ್ದಾರೆ. ಮುಸ್ಲಿಮರು ಕೂಡ ಜಿಎಸ್‌ಟಿ ಅಡಿಯಲ್ಲಿ ಪರೋಕ್ಷ ತೆರಿಗೆಗಳನ್ನು ಪಾವತಿಸುತ್ತಾರೆ ಎಂದು ಪತ್ರಕರ್ತರು ತಿಳಿಸಿದಾಗ, ಅದಕ್ಕೆ ಉತ್ತರಿಸಿದ ಸಿಂಗ್, “ಹಿಂದೂಗಳೂ ತೆರಿಗೆ ಕಟ್ಟುತ್ತಾರೆ. ಅವರು ಕಷ್ಟಪಟ್ಟು ಕೆಲಸ ಮಾಡಿ ತೆರಿಗೆ ಪಾವತಿಸುತ್ತಾರೆ… ಆದರೆ ಮುಸ್ಲಿಮರು ತೆರಿಗೆ ಕಟ್ಟುವುದಿಲ್ಲ” ಎಂದು ವಾದಿಸಿದ್ದಾರೆ. ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಕೆಡಿಸುವ ಬಗ್ಗೆ ತಮಗೆ ಯಾವುದೇ ಭಯವಿಲ್ಲ ಎಂದು ಪುನರುಚ್ಚರಿಸಿದ ಸಿಂಗ್, ಈ ದೇಶ ತಮ್ಮದಾಗಿರುವುದರಿಂದ ತಮಗೆ ಇಷ್ಟ ಬಂದಿದ್ದನ್ನು ಮಾಡಬಹುದು ಮತ್ತು ಯಾರಿಗೆ ಇದು ಇಷ್ಟವಿಲ್ಲವೋ ಅವರು ಪಾಕಿಸ್ತಾನಕ್ಕೆ ಹೋಗಬಹುದು” ಎಂದು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ.

“ಮುಸ್ಲಿಮರು ಈ ದೇಶದಲ್ಲಿ ಬಾಡಿಗೆದಾರರಿದ್ದಂತೆ; ಅವರು ಹಾಗೆಯೇ ಬದುಕಬೇಕು. ಅವರಿಗೆ ಏನನ್ನೂ ಮಾಡಲು ಅವಕಾಶ ನೀಡಬಾರದು” ಎಂದು ಮತ್ತೊಬ್ಬ ಮಹಿಳೆ ಹೇಳಿದ್ದಾರೆ. ತಮ್ಮ ಮೇಲೆ ಎಫ್‌ಐಆರ್ ದಾಖಲಾಗುವ ಬಗ್ಗೆ ತಮಗೆ ಯಾವುದೇ ಭಯವಿಲ್ಲ ಎಂದು ಹೇಳಿದ ಅವರು, ತಾವು ‘ಸರಿಯಾದ ಕೆಲಸ’ ಮಾಡುವುದನ್ನು ಮುಂದುವರಿಸುವುದಾಗಿ ಮತ್ತು ಹಿಂದೂ ರಕ್ಷಾ ದಳವು ತಮ್ಮ ಬೆನ್ನಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. “ಈ ದೇಶ ನಮ್ಮದು, ಇಲ್ಲಿ ನಮಗೆ ಇಷ್ಟ ಬಂದಿದ್ದನ್ನು ನಾವು ಮಾಡುತ್ತೇವೆ” ಎಂದು ಅವರು ಉದ್ಧಟತನದಿಂದ ಮಾತನಾಡಿದ್ದಾರೆ.

ಬಿಬಿಸಿ ಪತ್ರಕರ್ತ (ಮುಸ್ಲಿಂ ಸಮುದಾಯದವರು) ತಾನು ಮನೆಗೆ ಮರಳಲು ಅದೇ ಹೆದ್ದಾರಿಯನ್ನು ಬಳಸಬೇಕಾಗುತ್ತದೆ ಎಂದು ಹೇಳಿದಾಗ, ಆ ಮಹಿಳೆ ಹೀಗೆ ಉತ್ತರಿಸಿದ್ದಾರೆ: “ನೀವು ರಸ್ತೆಯ ಕೆಳಗಿನಿಂದ ಹೋಗಿ. ನಿಮಗಾಗಿ ಪ್ರತ್ಯೇಕವಾದ ರಸ್ತೆಯನ್ನು ನೀವೇ ಮಾಡಿಕೊಂಡು ಅದರ ಮೂಲಕ ಹೋಗಿ.”

ಮಹಿಳೆಯರೊಂದಿಗೆ ಪತ್ರಕರ್ತ ನಡೆಸಿದ ಮಾತುಕತೆಯ ವಿಡಿಯೋವನ್ನು ಕೆಳಗಡೆ ನೋಡಬಹುದು

View this post on Instagram

A post shared by Dilnawaz Pasha (@dilnawazpasha)

COURTESY : altnews.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...