ತನಗೆ ಮಂತ್ರಿ ಸ್ಥಾನ ಬೇಕು ಮತ್ತು ತಮ್ಮ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಅಥವಾ ವಿಧಾನ ಪರಿಷತ್ ಸ್ಥಾನವನ್ನಾದರೂ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದಲೇ ಹಿರಿಯ ಶಾಸಕ ಉಮೇಶ್ ಕತ್ತಿ ಬ್ಲಾಕ್ಮೇಲ್ ರಾಜಕಾರಣಕ್ಕೆ ಮುಂದಾದರಾ ಎಂಬ ಸಂಶಯ ಇದೀಗ ರಾಜ್ಯ ರಾಜಕೀಯದಲ್ಲಿ ಮನೆ ಮಾಡಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಉಮೇಶ್ ಕತ್ತಿ ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಲೇ ಇದ್ದಾರೆ. ಸತತ 8 ಬಾರಿ ಶಾಸಕರಾಗಿರುವ ಉಮೇಶ್ ಕತ್ತಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ, ಉತ್ತರ ಕರ್ನಾಟಕ ಮತ್ತು ಲಿಂಗಾಯತ ನಾಯಕರ ರಾಜಕೀಯ ಲೆಕ್ಕಾಚಾರದ ಕಾರಣದಿಂದಲೇ ಕತ್ತಿಗೆ ಸಚಿವ ಸ್ಥಾನ ಲಭ್ಯವಾಗಿಲ್ಲ ಎಂಬುದು ಇಂದು ಗುಟ್ಟಾಗೇನು ಉಳಿದಿಲ್ಲ. ಇದೇ ಕಾರಣಕ್ಕೆ ಉಮೇಶ್ ಕತ್ತಿ ಇದೀಗ ಬ್ಲಾಕ್ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ; ಬಿಎಸ್ವೈ ಸ್ಥಾನಕ್ಕೆ ’ಕತ್ತಿ’ಯಿಂದ ಕುತ್ತು?
ಲೋಕಸಭಾ ಚುನಾವಣಾ ಸಂದರ್ಭದಲ್ಲೇ ಉಮೇಶ್ ಕತ್ತಿ ತನ್ನ ಸಹೋದರ ರಮೇಶ್ ಕತ್ತಿಗೆ ಲೋಕಸಭಾ ಟಿಕೆಟ್ ಕೇಳಿದ್ದರು. ಆದರೆ, ಕಾರಣಾಂತರಗಳಿಂದ ಟಿಕೆಟ್ ಕೈತಪ್ಪಿದ್ದರಿಂದ ರಾಜ್ಯಸಭೆ ಅತವಾ ವಿಧಾನ ಪರಿಷತ್ ಟಿಕೆಟ್ ಆದರೂ ನೀಡುವಂತೆ ರಾಷ್ಟ್ರ ಮಟ್ಟದ ನಾಯರ ಎದುರು ದುಂಬಾಲು ಬಿದ್ದಿದ್ದರು.
ಇನ್ನೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ನಂತರ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಈವರೆಗೆ ಇವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ, ಸಹೋದರ ರಮೇಶ್ ಕತ್ತಿಗೂ ರಾಜ್ಯಸಭೆ ಅಥವಾ ವಿಧಾನ ಪರಿಷತ್ ಸ್ಥಾನ ಸಿಗುವುದು ಖಚಿತವಿಲ್ಲ.
ಇನ್ನೇನು ಜೂನ್ ತಿಂಗಳಲ್ಲಿ ರಾಜ್ಯಸಭೆಗೆ ಚುನಾವಣೆ ನಡೆಯಲಿದೆ, ಅಲ್ಲದೆ ರಾಜ್ಯದಲ್ಲೂ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಇದೇ ಕಾರಣಕ್ಕೆ ಮತ್ತೆ ಬ್ಲಾಕ್ಮೇಲ್ ತಂತ್ರಕ್ಕೆ ಮುಂದಾಗಿರುವ ಉಮೇಶ್ ಕತ್ತಿ ತನಗೆ ಹಲವು ಪ್ರಭಾವಿ ಶಾಸಕರ-ನಾಯಕರ ಬೆಂಬಲ ಇದೆ ಎಂದು ತೋರಿಸಿಕೊಳ್ಳುವ ಸಲುವಾಗಿ ಗುರುವಾರ ಅತೃಪ್ತ ಶಾಸಕರ ಸಭೆ ನಡೆಸಿದ್ದಾರೆ. ಲಿಂಗಾಯತ ಶಾಸಕರ ಜೊತೆ ಸೇರಿ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಒಗ್ಗೂಡಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಉಮೇಶ್ ಕತ್ತಿ ತಂತ್ರ ಫಲಿಸಿದರೆ, ಬಿಎಸ್ವೈ ಸ್ಥಾನಕ್ಕೆ ಕುತ್ತು ಬರುವುದು ಖಚಿತ. ಇದೇ ಕಾರಣಕ್ಕೆ ಬಿಎಸ್ವೈ ಸಹ ಇಂದು ಭಿನ್ನಮತೀಯರನ್ನು ಮಾತುಕತೆಗೆ ಕರೆದಿದ್ದು ಬಿಜೆಪಿಯಲ್ಲಿ ಭುಗಿಲೆದ್ದಿರುವ ಈ ಭಿನ್ನಮತ ಮುಂದಿನ ದಿನಗಳಲ್ಲಿ ಯಾವ ಮಹತ್ವದ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಯಡಿಯೂರಪ್ಪ ಮುಖ್ಯಮಂತ್ರಿ ಅಷ್ಟೇ – ಬಸನಗೌಡ ಪಾಟೀಲ್ ಯತ್ನಾಳ್