ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಕೆಲಸ ಮಾಡುವ 3000 ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರು ಕೋವಿಡ್ ಪರಿಹಾರ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಒಕ್ಕೂಟ (ಸಿಐಟಿಯು) ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಅರ್ಧ ದಿನಗಳ ಕಾಲ ಕೆಲಸ ಬಹಿಷ್ಕರಿಸಿದ್ದಾರೆ.
ದೇಶವು 5ನೇ ಹಂತದ ಲಾಕ್ಡೌನ್ಗೆ ತೆರಳುತ್ತಿದ್ದರೂ ಹಮಾಲಿ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳು ಲಭಿಸಿಲ್ಲ. ಅತಿ ದೊಡ್ಡ ಎಪಿಎಂಸಿಯಾದ ಯಶವಂತಪುರದಲ್ಲಿ 2000 ಮಹಿಳೆಯರು ಸೇರಿದಂತೆ 5000 ಕಾರ್ಮಿಕರು ತಮ್ಮ ಜೀವನ ನಿರ್ವಹಣೆಗಾಗಿ ಹೆಣಗಾಡುತ್ತಿದ್ದಾರೆ. ಮುಖ್ಯವಾಗಿ ಮಹಿಳಾ ಕಾರ್ಮಿಕರಿಗೆ ಕನಿಷ್ಟ ವೇತನ, ರಜೆಗಳು ಮತ್ತು ಇತರ ಸಾಮಾಜಿಕ ಭದ್ರತೆಯಂತಹ ಎಲ್ಲಾ ಕಾನೂನುಬದ್ಧ ಪ್ರಯೋಜನಗಳು ದೊರಕುತ್ತಿಲ್ಲ ಎಂದು ಒಕ್ಕೂಟದ ರಾಜ್ಯಧ್ಯಕ್ಷ ಕೆ. ಮಹಾಂತೇಶ್ ಆರೋಪಿಸಿದ್ದಾರೆ.
ನಾಗರಿಕ ಮತ್ತು ಆಹಾರ ಪೂರೈಕೆ ಸಚಿವ ಮತ್ತು ಮಹಾಲಕ್ಷ್ಮಿಪುರಂನ ಶಾಸಕ ಗೋಪಾಲಯ್ಯನವರ ವ್ಯಾಪ್ತಿಗೆ ಈ ಎಪಿಎಂಸಿ ಬರುತ್ತದೆ. ಅವರು ನಿನ್ನೆ ಅವರು ಯೂನಿಯನ್ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದರು. ಆದರೂ ಕಾರ್ಮಿಕರ ಸಮಸ್ಯೆಗಳು ಬಗೆಹರಿದ ಕಾರಣ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಮಹಾಂತೇಶ್ ತಿಳಿಸಿದ್ದಾರೆ.
Posted by Mahantesh Kariyappa on Saturday, May 30, 2020
ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು, ಅನ್ಯ ರಾಜ್ಯದಿಂದ ಬರುವವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕೆಂದು, ಹಮಾಲಿಗಳಿಗೆ ಸಮರ್ಪಕ ಕೂಲಿ ಸಿಗುವಂತೆ ವ್ಯವಸ್ಥೆ ಮಾಡಬೇಕೆಂಬ ಹಕ್ಕೊತ್ತಾಯಗಳನ್ನು ಇಲಾಖೆಯ ರಾಜ್ಯದ ಹೆಚ್ಚುವರಿ ನಿರ್ದೇಶಕ ಡಾ.ಅನಿಲಕುಮಾರ್ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದರು.
ತದನಂತರ ಸಚಿವ ಗೋಪಾಲಯ್ಯನವರು ಕಾರ್ಮಿಕರ ಕುಟುಂಬಕ್ಕೆ 2000 ಪಡಿತರ ಕಿಟ್ಗಳನ್ನು ವಿತರಿಸಲು ಒಪ್ಪಿಕೊಂಡಿದ್ದು, ಎಲ್ಲಾ ಸಮಸ್ಯೆಗಳ ಕುರಿತು ಕೂಲಂಕುಷವಾದ ಚರ್ಚೆಗಾಗಿ ಜೂನ್ 4ರಂದು ಸಭೆ ಕರೆಯಲು ಒಪ್ಪಿದರು. ಅವರ ಭರವಸೆಯ ನಂತರ ಕಾರ್ಮಿಕರು ದಿನವಿಡೀ ನಡೆಸಲು ತೀರ್ಮಾನಿಸಿದ್ದ ಆಂದೋಲನವನ್ನು ಅರ್ಧ ದಿನಕ್ಕೆ ಹಿಂಪಡೆದರು.
ಎಪಿಎಂಸಿ ಯಾರ್ಡ್ ಮಹಿಳಾ ಕಾರ್ಮಿಕರ ಸಂಘ, ಎಪಿಎಂಸಿ ಮಂಡಿ ಹಮಾಲಿ ಕಾರ್ಮಿಕರ ಸಂಘ, ಲೋಡಿಂಗ್ ಅನ್ಲೋಡಿಂಗ್ ಜನರಲ್ ವರ್ಕರ್ಸ್ ಯೂನಿಯನ್, ರೆಗ್ಯೂಲೇಟೆಡ್ ವರ್ಕರ್ಸ್ ಯೂನಿಯನ್ ಇತ್ಯಾದಿ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಭಾಗವಹಿಸಿದ್ದವು. ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾರ್ಮಿಕರ ಮೇಲೆ ಹಿಡಿತ : ಕೊರೊನಾ ಹೆಸರಲ್ಲಿ ಸರ್ವಾಧಿಕಾರಿಗಳು ಸೃಷ್ಟಿಯಾಗುತ್ತಿದ್ದಾರೆ.
Also Read: SC directs States: No Travel Fare for Migrants, Provide Food For Stranded Migrants


