Homeಅಂಕಣಗಳುಸ್ತ್ರೀಮತಿ- 2: ಲಾಕ್ - ಅನ್ ಲಾಕ್ ಗಳ ನಡುವೆ ಕಳೆದುಹೋದ ಕೀಲಿ

ಸ್ತ್ರೀಮತಿ- 2: ಲಾಕ್ – ಅನ್ ಲಾಕ್ ಗಳ ನಡುವೆ ಕಳೆದುಹೋದ ಕೀಲಿ

- Advertisement -
- Advertisement -

ನನಗೆ ಸಣ್ಣವಯಸ್ಸಿನಿಂದಲೂ ಏನಾದರೂ ಪೆಟ್ಟಾದಾಗ, ನೋವಾದಾಗ ಅಮ್ಮ ಹೇಳುತ್ತಿದ್ದರು, (ಬಹುಶಃ ಅವರಿಗೆ ಅವರಮ್ಮ ಹೇಳುತ್ತಿದ್ದಿರಬಹುದು)  ಮುಂದೆ ನೀನು ಹೆರಿಗೆಯಂತಹ ನೋವನ್ನೇ ಸಹಿಸಿಕೊಳ್ಳಬೇಕಾಗುತ್ತದೆ ಈಗ ಇಷ್ಟು ಸಣ್ಣ ನೋವಿಗೆ ಅಳುತ್ತಾ ಕೂತರೆ ಹೇಗೆ ಎಂದು, ನಂತರ ಹೆರಿಗೆಯಾದ ಮೇಲೆ ಏನಾದರೂ ನೋವಾದಾಗ ಅಂತಹ ದೊಡ್ಡ ನೋವನ್ನೇ ತಿಂದ ಮೇಲೆ ಇಷ್ಟು ಸಣ್ಣಪುಟ್ಟದಕ್ಕೆಲ್ಲಾ ಅಧೀರಳಾಗುವುದೇ ಎನ್ನುತ್ತಿದ್ದರು.  ಹೆಣ್ಣಿನ ಈ ‘ಸಹಿಸಿಕೊಳ್ಳುವ ಪರಂಪರೆ’ಗೆ ಬಹಳಷ್ಟು ಉಲ್ಲೇಖಗಳನ್ನು ನೀಡಬಹುದು.

ಇತ್ತೀಚಿಗೆ ಬಿಡುಗಡೆಯಾದ ‘ಬುಲ್‍ಬುಲ್‍’ ಎಂಬ ಹಿಂದಿ ಸಿನಿಮಾದಲ್ಲಿ  ಸಹಿಸಿಕೊಳ್ಳುವುದನ್ನು ಕಲಿಸುವ ಒಂದು ದೃಶ್ಯವಿದೆ. ಆ ಮನೆಗೆ ಸೊಸೆಯಾಗಿ ಮೊದಲು ಬಂದವಳು ತನ್ನ ನಂತರ ಬಂದವಳಿಗೆ ಹೇಳುವ ಮಾತುಗಳಿವು. ತಾನು ಮದುವೆಯಾಗಿ ಬಂದಾಗ ತನಗೆ ಹೇಳಲಾದ ಮಾತುಗಳನ್ನೇ ಈಗ ಬಂದವಳಿಗೆ ಹೇಳುತ್ತಿರುತ್ತಾಳೆ. –“ಇಷ್ಟು ದೊಡ್ಡಮನೆತನದ ಸೊಸೆಯಾಗಿ ಬಂದಿದ್ದೀಯ, ಹೀಗೆಲ್ಲ ಅಳುತ್ತಾರೆಯೇ. ಅವನು ಸ್ವಲ್ಪ ಹುಚ್ಚ ಆದರೆ ಮದುವೆಯಾದ ಮೇಲೆ ಸರಿಹೋಗುತ್ತಾನೆ, ಎಷ್ಟೇ ಆದರೂ ನಿನ್ನ ಗಂಡನಲ್ಲವೇ, ಹೊರಗೆಲ್ಲೂ ಈ ವಿಚಾರಗಳನ್ನು ಮಾತನಾಡಬೇಡ ಸುಮ್ಮನಿರು; ಅವನು ಸ್ವಲ್ಪ ಹುಚ್ಚುಹುಚ್ಚಾಗಿ ಆಡುತ್ತಾನೆ ನಿಜ, ಆದರೆ ನಿನಗೆ ಎಷ್ಟೆಲ್ಲಾ ಒಡವೆ, ವಸ್ತ್ರ, ಆಸ್ತಿ ಸಿಗುತ್ತಿದೆ, ಹೀಗಾಗಿ ಸ್ವಲ್ಪ ಸಹಿಸಿಕೋ; ಅವನು ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದಿದ್ದರೂ ಅವನ ಸೋದರ ನೋಡಿಕೊಳ್ಳುತ್ತಾನೆ. ದೊಡ್ಡಮನೆಗಳಲ್ಲಿ ದೊಡ್ಡದೊಡ್ಡ ಗುಟ್ಟುಗಳಿರುತ್ತವೆ ಮೌನವಾಗಿದ್ದುಬಿಡು.” ಭಾಮೈದ ತನ್ನ ನಾದಿನಿಯ ಮೇಲೆ ಅತ್ಯಾಚಾರ ಮಾಡಿದ ಸಂದರ್ಭದಲ್ಲಿ ಅವನ ಹೆಂಡತಿ  ಅತ್ಯಾಚಾರಕ್ಕೊಳಗಾದವಳಿಗೆ ಹೇಳುವ ಮಾತುಗಳಿವು.

ಸಹಿಸಿಕೊಳ್ಳುವುದೇ ತನ್ನ ಹೆಚ್ಚುಗಾರಿಕೆ ಎಂಬ ಭಾವನೆ ಹೆಣ್ಣಿನಲ್ಲಿಯೂ ಇರುವಾಗ (ಮಾತೃದೇವತೆ, ಗೃಹಲಕ್ಷ್ಮಿ , ಸೌಭಾಗ್ಯದೇವತೆ-ಮುಂತಾಗಿ ಆರೋಪಿಸಲಾದ ವೈಭವೀಕೃತ ಪದವಿಗಳನ್ನು –ಹೆಣ್ಣಿನ ಮನಸ್ಸಿನಲ್ಲಿ ಕೂಡಾ ಭಂಜಿಸುವುದು ಅಷ್ಟು ಸುಲಭವೇನಲ್ಲ)  ಅವಳು ಹಿಂಸೆಯನ್ನಾಗಲಿ, ಕ್ರೌರ್ಯವನ್ನಾಗಲಿ ಒಂದು ಅಪರಾಧವನ್ನಾಗಿ ಪರಿಗಣಿಸುವುದಿಲ್ಲ, ಅವಳಿಗೆ ಅದನ್ನು ವಿರೋಧಿಸಬೇಕು ಎನಿಸುವುದಿಲ್ಲ ಅಥವಾ ದೂರು ನೀಡಬೇಕು ಎಂಬ ಭಾವ ಮೂಡುವುದಿಲ್ಲ. ಹೊಡೆಯುವುದು ಪತಿಧರ್ಮ ಸಹಿಸಿಕೊಳ್ಳುವುದು ಸತಿಧರ್ಮ ಎಂಬಷ್ಟು ಸಹಜ ವಿದ್ಯಮಾನವಾಗಿಬಿಟ್ಟಿದೆ. ಹೆಣ್ಣಿನ ದೇಹರಚೆನೆಯೇ ಕಾರಣವಾಗಿ ಪ್ರಕೃತಿ ಹೆಣ್ಣಿಗೆ ಸಹಿಷ್ಣುತೆಯನ್ನು ಕೊಟ್ಟಿರುವುದು ತನ್ನ ಗರ್ಭದಲ್ಲಿ ಮತ್ತೊಂದು ಜೀವವನ್ನು ಹೊರಲು, ಆದರೆ ಬೇರೆ ಜೀವಿಗಳು ಕೊಡುವ ಕ್ರೌರ್ಯವನ್ನು ಸಹಿಸಲು ಅಲ್ಲ, ಪೊರೆಯುವ ಗುಣ ಇರುವುದು ಈ ಸೃಷ್ಟಿಕ್ರಿಯೆಯ ಭಾಗವಾಗಿಯೇ ಹೊರತು ಬೇಜವಾಬ್ದಾರಿ, ಸೋಮಾರಿ ಗಂಡಂದಿರನ್ನು ಮಕ್ಕಳನ್ನು ಸಾಕಲೆಂದಲ್ಲ. ಈ ಸಹಿಸಿಕೊಳ್ಳುವ ಪರಂಪರೆಯ ವಾರಸುದಾರಿಕೆಯ ಹೊರೆ ಇನ್ನೆಷ್ಟು ಕಾಲ?

ಕೋವಿಡ್‍-19 ಅನ್ನು ನಿಯಂತ್ರಿಸಲಾಗದ ಸಂದರ್ಭದಲ್ಲಿ ಅದರಿಂದಾಗಿ ಎದುರಿಸುತ್ತಿರುವ ಇತರ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸನ್ನಿವೇಶದಲ್ಲಿ ಅವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವಸಂಸ್ಥೆಯು ಲಿಂಗಾಧಾರಿತ ಹಿಂಸೆಯನ್ನು `ಶ್ಯಾಡೋ ಪ್ಯಾಂಡೆಮಿಕ್’ (Shadow Pandemic) ಎಂದು ಗುರುತಿಸಿದೆ. ಲೈಂಗಿಕ ಹಿಂಸೆಯನ್ನು ದೌರ್ಜನ್ಯವನ್ನು ನಿಗ್ರಹಿಸುವುದು ಕೋವಿಡ್‍-19ನ ಕ್ರಿಯಾ ಯೋಜನೆಯ ಭಾಗವಾಗಿರಬೇಕು ಎಂದು ವಿಶ್ವಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆ ಹೇಳಿದೆ.

ಲಾಕ್‌ಡೌನಿನ ಪರಿಣಾಮಗಳನ್ನು ಹೆಣ್ಣು, ಗಂಡುಗಳಿಬ್ಬರೂ ಎದುರಿಸುತ್ತಿದ್ದರೂ, ಅವುಗಳ ಸ್ವರೂಪ ಮತ್ತು ತೀವ್ರತೆಯಲ್ಲಿ ಅಂತರವಿದೆ. ಲಾಕ್‍ಡೌನ್‍ ಸಮಯದಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸಾಚಾರ ಹೆಚ್ಚಾಗಿದೆ, ಉದ್ಯೋಗಸ್ಥ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಭಿನ್ನ ಸ್ವರೂಪ ಪಡೆದುಕೊಂಡಿದೆ, ಗೃಹಿಣಿಯರು ಅನುಭವಿಸುತ್ತಿರುವ ಹಿಂಸೆಗಳನ್ನು ಹೇಳಿಕೊಳ್ಳಲಾರದೆ ಮಾನಸಿಕ ಅಸ್ವಸ್ಥತೆ ಹೆಚ್ಚಾಗಿದೆ.

‘ಸ್ಟೇ ಹೋಂ ಸ್ಟೇ ಸೇಫ್- ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ’ ಎಂಬ ಘೋಷವಾಕ್ಯ ಮಹಿಳೆಯರ ಪಾಲಿಗೆ ಅಕ್ಷರಶಃ ಹುಸಿಯಾಗಿದೆ. ಯುನೆಸ್ಕೋ,ಯುನಿಸೆಫ್ ಮತ್ತು ವಿಶ್ವಸಂಸ್ಥೆಯ ಸಹಕಾರದೊಂದಿಗೆ ನಂದಿತಾ ದಾಸ್ ಅವರ ರಚನೆ ಮತ್ತು ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಕಿರುಚಿತ್ರ ‘ಲಿಸನ್‍ ಟು ಹರ್’ ಏಕಕಾಲಕ್ಕೆ ಮೇಲ್ವರ್ಗದ ಸುಶಿಕ್ಷಿತ ಉದ್ಯೋಗಸ್ಥ ಮಹಿಳೆ ಮತ್ತು ಕೆಳವರ್ಗದ ಅಸಹಾಯಕ ಮಹಿಳೆ ಮನೆಯೊಳಗೇ ಅನುಭವಿಸುವಂತಹ ತಣ್ಣನೆಯ ಕ್ರೌರ್ಯವನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತದೆ.

ವರ್ಕ್‍ ಫ್ರಮ್‍ ಹೋಮ್‍ ಮಾಡುತ್ತಿರುವ ಮಹಿಳೆಯರಿಗೆ ಆನ್ಲೈನ್‍ ಮೀಟಿಂಗ್‍, ಚಾಟಿಂಗ್‍ಗಳಲ್ಲಿಯೇ ಶುರುವಾದ ಕಿರುಕುಳಗಳು, ಉದ್ಯೋಗಸ್ಥ ಮಹಿಳೆಯರು ಎದುರಿಸುವ ಲೈಂಗಿಕ ದೌರ್ಜನ್ಯಕ್ಕೆ ಹೊಸ ವ್ಯಾಖ್ಯಾನವನ್ನೇ ದಯಪಾಲಿಸಿವೆ.

ಹರಿಯಾಣದ ಪಂಚ್‍ಕುಲಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಕೋವಿಡ್‍-19 ಐಸೋಲೇಶನ್ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಮೇಲೆ ಅಲ್ಲಿನ ವೈದ್ಯ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ರೆಸ್ಟ್ ರೂಮಿನಲ್ಲಿ ತಾನು ವಿಶ್ರಮಿಸುತ್ತಿದ್ದಾಗ ವೈದ್ಯ ಈ ಕೃತ್ಯ ಎಸಗಿರುವುದಾಗಿ ನರ್ಸ್ ದೂರು ನೀಡಿದ್ದಾಳೆ.

ಕರ್ಣಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಂದೆಯಂದಿರೇ ತಮ್ಮ ಮಕ್ಕಳ ಮೇಲೆಯೇ ಅತ್ಯಾಚಾರ ಮಾಡಿರುವ ವರದಿಗಳು ಬಂದಿವೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಉಪಮೆಯನ್ನಿಲ್ಲಿ ಬಳಸುವುದಿಲ್ಲ. ಬೇಲಿ-ಹೊಲ, ರಕ್ಷಣೆ-ರಕ್ಷಕ ಮುಂತಾದವುಗಳಿಗಿಂತ ಮನುಷ್ಯನ ಸಂವೇದನೆ, ಯುಕ್ತಾಯುಕ್ತ ವಿವೇಚನೆಗಳ ಚಿಂತನೆ  ಅವಳೂ ತನ್ನಂತೆಯೇ ಮನುಷ್ಯಜೀವಿ ಎಂದು ಭಾವಿಸಲು ಏಕೆ ಸಾಧ್ಯವಾಗುವುದಿಲ್ಲ.

ಹೊಡೆದುಬಡಿದು ಮಾಡಿದರೆ ಮಾತ್ರ ಅದು ಹಿಂಸೆ, ಕ್ರೌರ್ಯ ಎನಿಸಿಕೊಳ್ಳುವುದಿಲ್ಲ. ಮಾನಸಿಕ ಕಿರಿಕಿರಿಯುಂಟು ಮಾಡುವುದು, ಅವಳ ವ್ಯಕ್ತಿತ್ವಕ್ಕೆ ಘನತೆಗೆ ಕುಂದು ಉಂಟುಮಾಡುವಂತಹ ಎಲ್ಲ ಕೃತ್ಯಗಳೂ ದೌರ್ಜನ್ಯವೇ. ಮಾಧ್ಯಮಗಳಲ್ಲಿ ಸುದ್ದಿಯಾಗದಂತಹ ವಿದ್ಯಮಾನಗಳೆಲ್ಲಾ ಗಂಭೀರವಲ್ಲ ಎಂದು ಪರಿಗಣಿಸಲಾಗುವುದಿಲ್ಲ. ಭೀಕರವಾದ ಪ್ರಕರಣಗಳು ಪ್ರತಿನಿತ್ಯ ಮನೆಯೊಳಗೆ ನಡೆಯುತ್ತಿದ್ದರೂ ಅವು ಎಲ್ಲೂ ದಾಖಲಾಗುವುದಿಲ್ಲ. ಮಾನಸಿಕ ಆರೋಗ್ಯ ಹಿಂದೆಂದಿಗಿಂತಲೂ ಇಂದು ಅತ್ಯಗತ್ಯವಾಗಿದೆ. ಆದರೆ ಎಷ್ಟರಮಟ್ಟಿಗೆ ಸಹಾಯವಾಣಿ ನಂಬರ್‌ಗಳು, ಎನ್‌ಜಿಓಗಳು, ಗೆಳೆಯರು ಪೂರ್ಣಪ್ರಮಾಣದ ಮನೋಚಿಕಿತ್ಸೆ ಕೊಡುವುದಕ್ಕೆ ಸಾಧ್ಯ. ಅದಕ್ಕಿಂತ ಹೆಚ್ಚಾಗಿ ಖಿನ್ನತೆಗೆ ಒಳಗಾದವರು ಇತರರೊಂದಿಗಿನ ಸಂವಾದವನ್ನು ಬಹಳ ಹಿಂದೆಯೇ ನಿಲ್ಲಿಸಬಿಟ್ಟಿರುತ್ತಾರೆ, ಅಂತಹವರನ್ನು ಮಾತಿಗೆಳೆಯುವುದು ಅಷ್ಟು ಸುಲಭವಲ್ಲ.

ಕೋವಿಡ್‌ಗೆ ಔಷಧ ಕಂಡುಹಿಡಿಯುವವರೆಗೆ ಮತ್ತೆ ಮತ್ತೆ ಬೇರೆ ಬೇರೆ ಸ್ವರೂಪದಲ್ಲಿ ಲಾಕ್‌ಡೌನ್ ಬರುವುದಿದೆ (ಸೆಲ್ಫ್ ಲಾಕ್‌ಡೌನ್, ಹೋಂ ಕ್ವಾರೈನ್‌ಟೇನ್, ಹೋಂ ಐಸೋಲೇಶನ್). ಲಾಕ್‌ಡೌನಿನ ಕರಾಳತೆ ಮಾಧ್ಯಮದವರು ಬಿಂಬಿಸುತ್ತಿರುವುದಕ್ಕಿಂತ ಭೀಕರವಾಗಿದೆ. ಒಂದೊಂದು ವರ್ಗದ ಮಹಿಳೆಯರು ವಿಭಿನ್ನವಾದ ಸವಾಲುಗಳನ್ನೆದುರಿಸುತ್ತಿದ್ದಾರೆ. ಕೊರೋನಾದ ದುಷ್ಪರಿಣಾಮ ಎಲ್ಲ ವರ್ಗದ ಹೆಣ್ಣುಮಕ್ಕಳ ಬದುಕನ್ನೂ ಅಲುಗಾಡಿಸಿದೆ. ಮನೆಕೆಲಸ, ಗಾರ್ಮೆಂಟ್ಸ್‌ನವರಿಂದ ಹಿಡಿದು.  ಆದರೆ ಬಹಳಷ್ಟು ಮಹಿಳೆಯರು ಅನುಭವಿಸುತ್ತಿರುವ ಸಂಕಟಗಳು ಈ ಅಂಕಿಸಂಖ್ಯೆಗೆ ನಿಲುಕದಂತಹವು ಏಕೆಂದರೆ ಅವು ನಾಲ್ಕು ಗೋಡೆಗಳಾಚೆಗೆ ಬರುವುದೇ ಇಲ್ಲ. `ಮೌನಂ ಸಮ್ಮತಿ ಲಕ್ಷಣಂ’ ಎಂಬ ತಪ್ಪು ಅಭಿಪ್ರಾಯವಿನ್ನೂ ಪ್ರಚಲಿತವಾಗಿದೆ. ಮಹಿಳೆ ಅದನ್ನು ಹೇಳಿಕೊಂಡರೆ, ವಿರೋಧಿಸಿದರೆ ಸಂಘರ್ಷವನ್ನು ಎದುರಿಸಬೇಕಾಗುತ್ತದೆ ಅಥವಾ ಇನ್ನೂ ಅಪಾಯ ಹೆಚ್ಚಾಗುತ್ತದೆ ಎಂದು ಸುಮ್ಮನಿರಬಹುದು. ಇನ್ನು ಉದ್ಯೋಗಸ್ಥ ಮಹಿಳೆಯರೂ ಇಷ್ಟು ದಿನ ಮನೆಯೊಳಗೂ ಮಾಡಿ ಕಛೇರಿಯಲ್ಲೂ ಮಾಡುತ್ತಿದ್ದವರು, ಈಗ ಮನೆಯಲ್ಲಿಯೇ ವರ್ಕ್‍ ಫ್ರಮ್‍ ಹೋಮ್‍ ಮತ್ತು ಮನೆಯ ಕೆಲಸ ಕೂಡ, ಇಂತಹ ವಿಚಾರಗಳೆಲ್ಲ ಗಂಡನಿಗೆ ಗೊತ್ತಾದರೆ ಮನಸ್ತಾಪವಾಗುವ ಆತಂಕ. ಇದರೊಂದಿಗೆ ಸಂಬಳದಲ್ಲಿ ಕಡಿತ, ಉದ್ಯೋಗ ಕಳೆದುಕೊಳ್ಳುವ ಭಯ. ಹೀಗಾಗಿ ಎಷ್ಟೋ ಪ್ರಕರಣಗಳು ದಾಖಲಾಗುವುದೇ ಇಲ್ಲ.

ಹೆಚ್ಚುತ್ತಿರುವ ಕೌಟುಂಬಿಕ ದೌರ್ಜನ್ಯದ ಮೂಲವನ್ನು ಕೆದಕಿದರೆ ಸಿಗುವುದು ಮತ್ತೊಂದು ತೆರನಾದ ‘ಲೈಫ್‍ಟೈಮ್‍ ಲಾಕ್‍’ ಆಗಿರುವ ವೆಡ್‍ಲಾಕ್ ಅಂದರೆ ವೈವಾಹಿಕ ಬಂಧನ.

ಲಾಕ್‍ಡೌನಿನ ಹೊಸ ವರ್ಷನ್‍ಗಳಿಗೆ ನಿಯಮಗಳನ್ನು ಪರಿಷ್ಕರಣೆ ಮಾಡುವಂತೆಯೇ, ಕಾಲಕಾಲಕ್ಕೆ ವಿವಾಹಬಂಧನದಲ್ಲಿಯೂ ಮಾರ್ಪಾಡು ಮಾಡಿಕೊಳ್ಳುವುದು ಅತ್ಯಗತ್ಯ. ವಿವಾಹ ಎಂಬ ವ್ಯವಸ್ಥೆಯನ್ನು ಹೊಸದಾಗಿ ನಿರ್ವಚಿಸಿಕೊಳ್ಳದೇ ಕೌಟುಂಬಿಕ ದೌರ್ಜನ್ಯಕ್ಕೆ ಅಂತ್ಯ ಹಾಡಲು ಸಾಧ್ಯವಿಲ್ಲ.

ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ಇರುವ ರಿಫ್ರೆಶ್/ರೀಬೂಟ್ ಬಟನ್ ಎಂದರೆ ಮುಕ್ತವಾದ ಮಾತುಕತೆ. ಆದರೆ ನಗರ ಪ್ರದೇಶಗಳಲ್ಲಿ, ಮೇಲ್ವರ್ಗದ ಅಥವಾ ಮೇಲ್ಮಧ್ಯಮ ವರ್ಗದ ಕೆಲವು ಕುಟುಂಬಗಳಲ್ಲಿ ಮಾತ್ರ ಚರ್ಚೆಗೆ ಅವಕಾಶವಿರುತ್ತದೆ. ಇನ್ನುಳಿದ ಸಂಬಂಧಗಳು ಸಾಂಪ್ರದಾಯಿಕ ನೆಲೆಗೇ ಕಟ್ಟುಬಿದ್ದಿರುತ್ತವೆ.

“ಗೃಹಿಣಿ ಗೃಹಮುಚ್ಯತೇ – ಗೃಹಿಣಿಯು ಗೃಹ ಎನ್ನಿಸಿಕೊಳ್ಳುತ್ತಾಳೆ” ಎಂಬ ಮಾತು ಕೇಳಿರುತ್ತೀರಿ. ಮನೆ ಅಂದ ತಕ್ಷಣ ಅದು ಅಮ್ಮ ಅಥವಾ ಹೆಂಡತಿಯ ಜವಾಬ್ದಾರಿಯಾಗಿಬಿಡುತ್ತದಲ್ಲ ಏಕೆ? ಗಂಡಸರು ಇದನ್ನು ಮಾಡಬಾರದು ಹೆಂಗಸರು ಅದನ್ನೇ ಮಾಡಬೇಕು ಎಂಬ ಇನ್ಸ್‍ಟ್ರಕ್ಷನ್‍ ಮ್ಯಾನುಯಲ್, ಗೈಡ್‍ಲೈನ್ಸ್‍, ಯಥೇಚ್ಛವಾಗಿವೆ. ಗಂಡುಹುಡುಗರಿಗೆ ತಟ್ಟೆಯಲ್ಲಿ ಕೈತೊಳೆದುಕೊಂಡು ಏಳು, ನೀನೇಕೆ ಎಂಜಲು ತಟ್ಟೆ ಎತ್ತುವೆ ಎಂದೇ ಹೇಳುತ್ತಾರೆ, ನೀನ್ಯಾಕೆ ಪೊರಕೆ ಮುಟ್ಟುತ್ತೀಯ ಬಿಡು ಎನ್ನುವವರನ್ನೂ ನೋಡಿರುತ್ತೇವೆ.

ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ ಎಂಬ ಹೇಳಿಕೆಯನ್ನು ಸರಿಯೆನ್ನುವಿರೋ ತಪ್ಪೆನ್ನುವಿರೋ. ಏಕೆಂದರೆ ಸೂರ್ಯ ಎಲ್ಲಿಯೂ ಹುಟ್ಟುವುದಿಲ್ಲ, ಮುಳುಗುವುದೂ ಇಲ್ಲ ಇದ್ದಲ್ಲಿಯೇ ಇರುತ್ತಾನೆ. ತಿರುಗುತ್ತಿರುವುದು ಭೂಮಿ. ಹೀಗೆಯೇ ಗಂಡು ಹೆಣ್ಣಿನ ಬಗ್ಗೆ ನಮ್ಮ ಪ್ರಜ್ಞೆಯ ಆಳದಲ್ಲಿ ನಮ್ಮ ಸಂಸ್ಕೃತಿ, ನಮ್ಮ ಸಮಾಜ ನೆಟ್ಟಿರುವ ತಪ್ಪು ಗ್ರಹಿಕೆಗಳನ್ನು ಬೇರುಸಹಿತ ಕಿತ್ತೆಸೆಯಬೇಕು.

ಗಂಡಸರು ಇರುವುದೇ ಹಾಗೇ ನ್ಯಾಯಾಧೀಶರಾಗಲೀ ವೈದ್ಯರಾಗಲೀ ಅದರ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ ಎಂದೊಬ್ಬರು ಹೇಳುತ್ತಿದ್ದರು. ಕ್ರೌರ್ಯ, ಹಿಂಸೆ, ದೌರ್ಜನ್ಯ ಸರ್ವೇಸಾಮಾನ್ಯ ಎಂದೇಕೆ ಪರಿಗಣಿತವಾಗಬೇಕು, ಅದೇಕೆ ಅಬ್‍ನಾರ್ಮಲ್‍ ಎನಿಸಬಾರದು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ನ್ಯೂನಾರ್ಮಲ್ ಆದ ಹಾಗೆ ಹೆಣ್ಣನ್ನು ಅವಳ ಆತ್ಮಗೌರವಕ್ಕೆ ಕುಂದುಂಟಾಗದಂತೆ, ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗದಂತೆ  ಸಹಜೀವಿಯಂತೆ ನಡೆಸಿಕೊಳ್ಳುವುದೂ ನ್ಯೂನಾರ್ಮಲ್ ಆಗಬಾರದೇಕೆ.

ಸಣ್ಣವಯಸ್ಸಿನಿಂದಲೇ ಹೆಣ್ಣನ್ನು ಕುಟುಂಬವನ್ನು ಪೊರೆಯುವ ಜವಾಬ್ದಾರಿ ಹೊರುವಂತೆ ಬಗ್ಗಿಸಿ ಬೆಳೆಸಲಾಗುತ್ತದೆ, ಆದರೆ ಗಂಡನ್ನು ಕೇವಲ ಆರ್ಥಿಕ ಬೆಂಬಲ ನೀಡುತ್ತಾ ಆಳುವ ಅಧಿಕಾರ ಚಲಾಯಿಸುವ ಪುರುಷತ್ವದ ಮಾದರಿಯಲ್ಲಿ ಬೆಳೆಸಲಾಗುತ್ತದೆ. ದಬ್ಬಾಳಿಕೆ ನಡೆಸುವುದಕ್ಕಿಂತ ಗೆಳೆಯನಂತಹ, ಸಹಜೀವಿಯಂತಹ ಗಂಡಿನ ಮಾದರಿ ನಮ್ಮ ಸಮಾಜದೊಳಗೆ ಬರಬೇಕಿದೆ. ಅದಕ್ಕೆ ಸ್ವೀಕೃತಿಯ ಮುದ್ರೆಯನ್ನೊತ್ತಬೇಕಾಗಿರುವವರೂ ನಾವೇ!

ಲೇಖಕಿ ಬೆಟ್ಟಿ ಫ್ರೀಡನ್‍ ಹೇಳುತ್ತಾಳೆ “ಮೆನ್‍ ಆರ್ ನಾಟ್‍ ದಿ ಎನಿಮಿ ಬಟ್ ಫೆಲ್ಲೋ ವಿಕ್ಟಿಮ್ಸ್” (ಪುರುಷರು ಶತ್ರುಗಳಲ್ಲ, ಆದರೆ ನಮ್ಮಂತೆಯೇ ಬಲಿಪಶುಗಳು). ಇಲ್ಲಿ ಮುಖಾಮುಖಿಯಾಗಬೇಕಿರುವುದು ಪರಸ್ಪರ ಗಂಡುಹೆಣ್ಣಲ್ಲ ಬದಲಿಗೆ ಎದುರಾಗಬೇಕಿರುವುದು ಎದುರಿಸಬೇಕಾಗಿರುವುದು ಎಕ್ಸ್ಪೈರಿ ಡೇಟ್‍ ಆಗಿಹೋಗಿರುವ ಮೌಲ್ಯವ್ಯವಸ್ಥೆಯನ್ನು. ಹೀಗಾಗಿ ಗಂಡು ಹೆಣ್ಣು ಇಬ್ಬರೂ ಸೇರಿಯೇ ಕಂಡುಕೊಳ್ಳಬೇಕಾದ ಕಟ್ಟಿಕೊಳ್ಳಬೇಕಾದ ಬಿಡುಗಡೆಯ ದಾರಿಯಿದು.

– ಡಾ. ಕಾವ್ಯಶ್ರೀ ಎಚ್, ಲೇಖಕಿ- ಉಪನ್ಯಾಸಕಿ. (ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...