Homeಅಂಕಣಗಳುಶಾಸ್ತ್ರೀಯ - 2: ವೀರ ಗತಕಾಲದ ನೋವಿನ ಕಥನ ಸಾರುವ ವೀರಗಲ್ಲುಗಳು

ಶಾಸ್ತ್ರೀಯ – 2: ವೀರ ಗತಕಾಲದ ನೋವಿನ ಕಥನ ಸಾರುವ ವೀರಗಲ್ಲುಗಳು

- Advertisement -
- Advertisement -

ಭಾರತೀಯ ಚರಿತ್ರೆಯನ್ನು ಬರೆಯುವಾಗ ಶಾಸನಗಳೆಂತೆ ವೀರಗಲ್ಲುಗಳು ನೆರವಾಗಿವೆ. ಕರ್ನಾಟಕದ ಸಂದರ್ಭವನ್ನು ಗಮನಿಸುವುದಾದರೆ ನೂರಾರು ಹಳ್ಳಿಗಳಲ್ಲಿ ನೆಲದಲ್ಲಿ ಹೂತುಕೊಂಡ ಲಿಪಿರಹಿತ ಕಲ್ಲುಗಳಿವೆ. ಈ ವೀರಗಲ್ಲುಗಳ ಆತ್ಮಾಂತರಂಗದೊಳಗೆ ಅಡಗಿರುವ ನೋವಿನ ಧ್ವನಿಯನ್ನು ಮುಚ್ಚಿಟ್ಟು, ವೀರಪಟ್ಟ ಕಟ್ಟಿ ಅವರ ಆತ್ಮಬಲಿಯನ್ನು ಮಾಡಿ ಪುರೋಹಿತ ಧರ್ಮಶಾಹಿ, ಅಧಿಕಾರದ ಪ್ರಭುತ್ವಶಾಹಿಗಳು ತಮ್ಮ ನಿರಂಕುಶ ಅಧಿಕಾರವನ್ನು ಗಟ್ಟಿಗೊಳಿಸಿಕೊಂಡ ಗತಕಥನವನ್ನು ವರ್ತಮಾನ ಕಾಲದಲ್ಲಿ ‘ರೀವಿಜಿಟ್’ ಮಾಡುವ ತುರ್ತು ಇದೆ.

ಗ್ರಾಮೀಣ ಲೋಕದೃಷ್ಟಿಯಲ್ಲಿ ವೀರಗಲ್ಲುಗಳು ಪರಮಪೂಜ್ಯವಾಗಿವೆ. ಇನ್ನೂ ಕೆಲವೆಡೆ ‘ಕಳ್ಳಪ್ಪ’ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತವೆ. ವೀರಗಲ್ಲುಗಳನ್ನು ವೀರಭದ್ರನ ಅವತಾರವೆಂದು ಗ್ರಾಮೀಣ ಭಾಗದಲ್ಲಿ ಮಂದಿರ ಕಟ್ಟಿ ಪೂಜಿಸುವುದು ಉಂಟು. ಇಂತಹ ವೀರಗಲ್ಲುಗಳ ನಿಜಕಥನ ಬರೆಯಬೇಕಾಗಿದೆ. ಪ್ರಾಚೀನ ಕಾಲದ ಯುದ್ಧಕ್ಕೆ ಇಲ್ಲವೇ ಗ್ರಾಮ ರಕ್ಷಣೆಗೆ ಅಣಿಯಾಗುತ್ತಿದ್ದುದು ಶೂದ್ರ ಮತ್ತು ಅಸ್ಪೃಶ್ಯ ಸಮುದಾಯವೇ ಎಂಬುದನ್ನು ಈ ಆಕರಗಳು ನಿರೂಪಿಸುತ್ತವೆ. ಕನ್ನಡ ನಾಡಿನಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ದೊರೆಯುವ ವೀರಗಲ್ಲುಗಳು ಬಹುತೇಕ ಲಿಪಿರಹಿತವೇ. ಇವೆಲ್ಲಾ ಮೌಖಿಕ ಆಕರಗಳಂತೆ ನಿಂತಿವೆಯಷ್ಟೆ. ಇವುಗಳ ಹಿಂದಣ ಇರುವ ಜನಗಳು ಹೇಳುವ ಐತಿಹ್ಯದ ಸ್ವರೂಪವನ್ನು ಬಿಚ್ಚಿದರೆ ಮತ್ತೆ ಜನ ಇತಿಹಾಸ ಒಡಮೂಡುತ್ತದೆ. ಇಂತಹ ಅಧ್ಯಯನ ಆಗಬೇಕಿದೆ.

“ವೀರಗಲ್ಲುಗಳು ನಮ್ಮ ನಾಡಿನ ಪರಂಪರೆಯ ಹೆಗ್ಗುರುತುಗಳು, ನಾಡಿನ ಸಾಕ್ಷಿ ಪ್ರಜ್ಞೆಗಳು” ಎಂಬ ಆಖ್ಯಾನಗಳನ್ನು ಪಂಡಿತಮಾನ್ಯ ಇತಿಹಾಸ ಬರಹಗಾರರು ಮಾಡಿದ್ದಾರೆ. ಇದು ಹುಸಿನುಸುಳು ಎಂಬುದು ಸೂಕ್ಷ್ಮ ಅಧ್ಯಯನದಿಂದ ತಿಳಿಯುತ್ತದೆ. ಕಲ್ಪಿತ ಚರಿತ್ರೆಯ ಬರಹದ ಗೋಡೆಯನ್ನು ಒಡೆದು ನಿಜ ಚರಿತ್ರೆಯನ್ನು ಬರೆದುಕೊಂಬ ಹೊಣೆಗಾರಿಕೆ ಒಂದು ದೊಡ್ಡ ಸವಾಲು. ನಾಡಿನ ಹೆಗ್ಗುರುತು ಆದ ತಳ ಸಮುದಾಯಗಳ ಈ ವೀರರ ಚರಿತ್ರೆಯನ್ನು ಅನಾವರಣ ಮಾಡದೇ ಇರುವ ಹಿಂದಿನ ಸತ್ಯಗಳು ಹಲವಿವೆ.

“ಜಿತೇನ ಲಭ್ಯತೇ ಲಕ್ಷ್ಮೀ  ಮೃತೇನಾಪಿ ಸುರಾಂಗನಾ

ಕ್ಷಣ ವಿಧ್ವಂಸಿನಿ ಕಾಯೇಕಾ ಚಿಂತಾಮರಣೇ ರಣೇ||”

(ಗೆದ್ದರೇ ವಿಜಯಲಕ್ಷ್ಮೀ, ಮರಣ ಹೊಂದಿದರೆ ದೇವತಾ ಕನ್ಯೆ ದೊರೆಯುತ್ತಾಳೆ. ಅಸ್ಥಿರವಾದ ದೇಹ, ಪ್ರಾಣದ ಮೋಹವೇಕೆ?) ಎಂಬ ಶ್ಲೋಕವನ್ನು ಪ್ರಭುತ್ವಶಾಹಿಯು ಸಾರ್ವಜನಿಕ ಸ್ಥಳಗಳಲ್ಲಿ ಕಲ್ಬರಹದ ಮೂಲಕ ಪ್ರದರ್ಶಿಸುತ್ತಿತ್ತು. ಈ ಶ್ಲೋಕದ ಆಳದಲ್ಲಿ ಧರ್ಮ ನಿಯಂತ್ರಣತ್ವದ ವಾಸನೆಯಿದೆ. ಸತ್ತರೇ ವೀರಮರಣ, ದೇವಾಂಗನೆಯರು ಸ್ವರ್ಗಕ್ಕೆ ಕರೆದೊಯ್ಯುತ್ತಾರೆ ಎಂಬ ಪ್ರಲೋಭನೆಯನ್ನು ಜನಸಾಮಾನ್ಯರ ಮೆದುಳಿಗೆ ತುಂಬಲಾಯಿತು. ಒಂದು ನಾಡಿನ ರಕ್ಷಣೆಗೆ ಸೈನ್ಯ, ದಂಡು ಅಗತ್ಯವೇ. ಆದರೆ ಈ ಪ್ರಲೋಭನೆಗೆ ಒಳಗಾದದ್ದು ಕೇವಲ ತಳಸಮುದಾಯಗಳು ಮಾತ್ರ. ಊರು, ಮಂಡಲ, ರಾಜ್ಯ ಎಲ್ಲವನ್ನೂ ಕಟ್ಟುವಿಕೆಯ ಹಿಂದೆ ಈ ವೀರರ ತೋಳ್ಬಲದ ಶ್ರಮವಿದೆ. ಇಂತಹ ಚರಿತ್ರೆಯನ್ನು ಮುಖ್ಯಧಾರೆಗೆ ತರದೇ ಇರುವುದರ ಹಿಂದಣ ಹತಾರಗಳನ್ನು ಅರಿಯಬೇಕು.

ಮೇಲಿನ ಶ್ಲೋಕಕ್ಕೆ ಇಂಬು ಕೊಡುವಂತೆ ವೀರಗಲ್ಲುಗಳಲ್ಲಿ ಶಿಲ್ಪ ಕೆತ್ತನೆಯನ್ನು ಮಾಡಲಾಯಿತು. ಕಲ್ಲಿನ ಮೊದಲ ಪಟ್ಟಿಕೆಯಲ್ಲಿ ವೀರ ಹೋರಾಡುವ ಚಿತ್ರ, ಎರಡನೇ ಪಟ್ಟಿಕೆಯಲ್ಲಿ ಸುರಾಂಗನೆಯರು ಕರೆದೊಯ್ಯುವ ಚಿತ್ರ, ಮೂರನೇ ಪಟ್ಟಿಕೆಯಲ್ಲಿ ಸ್ವರ್ಗಸ್ಥ ಮುಕ್ತಿ ಪಡೆದ ದೃಶ್ಯ ಕೆತ್ತಲಾಗಿದೆ. ಇದನ್ನು ನೋಡಿದ ಗ್ರಾಮೀಣ ತಳಸಮುದಾಯಗಳ ವೀರರು ರಾಜ್ಯದ ರಕ್ಷಣೆಗೆ ಸ್ವಯಂ ಪ್ರೇರಣೆಯಿಂದ ನಿಂತರು. ನಾಡಿನ ಅನೇಕ ಊರುಗಳಲ್ಲಿ ಅನಾಥವಾಗಿ ಬಿದ್ದ ಏಕಾಂಗಿ ವೀರರ ಚಿತ್ರಗಳು ಹೊಸ ಚರಿತ್ರೆಯನ್ನು ರಚಿಸಿಕೊಳ್ಳಲು ಹಾತೊರೆಯುತ್ತಿವೆ. ವೀರಗಲ್ಲುಗಳು ನಾಡಿನ ಸಾಕ್ಷಿಪ್ರಜ್ಞೆಗಳು ಎಂದವರು ರಾಜಪರಿವಾರದ, ಅಧಿಕಾರ ಪರಿವಾರದ ವೀರಗಲ್ಲುಗಳಿಗೆ ಮಾನ್ಯತೆ ಕೊಟ್ಟಿದ್ದಾರೆ. ಆದರೆ ಅದರಾಚೆ ಬಹುದೊಡ್ಡ ವೀರರ ಲೋಕ ಇದೆ. ಗಂಗಾವತಿ ತಾಲ್ಲೂಕಿನ ಆನೆಗೊಂದಿ, ಹೇರೂರುಗಳಲ್ಲಿ ಅಂಬಿಗರ ಸುಂದರವಾದ ವೀರಗಲ್ಲುಗಳಿವೆ. ತುಂಗಭದ್ರಾ ನದಿಯಲ್ಲಿ ಮುಳುಗುತ್ತಿದ್ದ ವಿಜಯನಗರದ ಪ್ರಭುತ್ವ ಪರಿವಾರವನ್ನು ತೆಪ್ಪದಿಂದ ಕಾಪಾಡಿ ವೀರಮರಣ ಹೊಂದಿದ ದ್ಯೋತಕವಿದು. ಇವರು ಜಲವೀರರು. ಈ ಬಗ್ಗೆ ಚರಿತ್ರೆ ಜಾಣಮೌನವಹಿಸಿದೆ. ಈ ನೆಲದ ಮಕ್ಕಳ ಇಂತಹ ಸಾವಿರಾರು ಹೆಗ್ಗುರುತುಗಳು ನಿಜವಾರಸುದಾರರ ಹೆಸರಲ್ಲಿವೆ. ಶಾಸನಗಳಲ್ಲಿ ಉಲ್ಲೇಖಗೊಂಡ ಅನೇಕ ತಳವಾರರು ತಮ್ಮ ಜೀವ ಪಣಕ್ಕಿಟ್ಟು ಊರುಗಳನ್ನು ರಕ್ಷಿಸಿದ್ದಾರೆ. ಆನೆಗೊಂದಿಯ ಪರಿಸರದಲ್ಲಿ ಜನಸಾಮಾನ್ಯರನ್ನು ಭಯಭೀತಗೊಳಿಸಿದ್ದ ಹುಲಿಯೊಂದನ್ನು ಕಡೇಬಾಗಿಲಿನ ಯುವಕನೊಬ್ಬ ಕೊಂದು ವೀರಮರಣ ಹೊಂದುತ್ತಾನೆ. ಅವನ ಹೆಸರಿನಲ್ಲಿ ಹಾಕಿಸಿದ ಸುಂದರ ಕಲ್ಲನ್ನು ತಿಪ್ಪೆಯಲ್ಲಿ ಇಡಲಾಗಿದೆ. ಇದಕ್ಕೆ ಕಾರಣ ಅವನೊಬ್ಬ ಅಸ್ಪೃಶ್ಯನೆಂಬ ಐತಿಹ್ಯ ಸ್ಥಳೀಯರಲ್ಲಿದೆ. ಗ್ರಾಮ ರಕ್ಷಕರಾಗಿದ್ದ ತಳವಾರರು, ಅನೇಕ ಗಿರಿಜನರು ಇಂತಹ ರಾಜ್ಯ ರಕ್ಷಿಸುವ ಮಹತ್ವದ ಕೆಲಸದಲ್ಲಿದ್ದರು. ಆದರೆ ಇವರ ಚರಿತ್ರೆಯನ್ನು ತೆರೆಮರೆಯಲ್ಲಿಡಲಾಗಿದೆ.

ಊರುಗಳ ರಕ್ಷಣೆಗಾಗಿ ಪ್ರಾಣ ಕಳೆದುಕೊಂಡವರ ಸ್ಮಾರಕಗಳಿವೆ. ಗೋವುಗಳನ್ನು ಕಾಪಾಡಿ ಗೋಗ್ರಹಣದಲ್ಲಿ ಮಡಿದವರು, ಊರನ್ನು ರಕ್ಷಿಸಿ ಊರಳಿವಿನಲ್ಲಿ ಮಡಿದವರು, ಹೆಣ್ಣುಗಳನ್ನು ಅಪಹರಿಸಿದಾಗ ಅವರನ್ನು ಕಾಪಾಡಿ ಮಡಿದ ಪೆಣ್ಬುಯ್ಯಲ್ ಸ್ಮಾರಕವಾದವರು, ರಾಜನ, ಮಂತ್ರಿಗಳ, ಅಧಿಕಾರಿಗಳ ಹುಚ್ಚು ಹವ್ಯಾಸಕ್ಕೆ ಭೇಟೆಗಾಗಿ ತೆರಳಿ ಅವರನ್ನು ಕಾಡು ಪ್ರಾಣಿಗಳು ಮುತ್ತಿದಾಗ ಗಿರಿಜನರು ಅವರನ್ನು ರಕ್ಷಿಸಿ, ಸುರಕ್ಷಿತವಾಗಿ ಕಳಿಸಿ ಮರಣ ಹೊಂದಿದ ನಿದರ್ಶನಗಳಿವೆ. ಇಂತಹ ವೀರ ಬೇಟೆಕಲ್ಲುಗಳ ಅಧ್ಯಯನ ಆಗಬೇಕಿದೆ.

ವೀರಗಲ್ಲುಗಳು ಅಧಿಕವಾಗಿ ದೊರೆಯುವ ಸ್ಥಳ ಚರಿತ್ರೆಯ ಹೆಗ್ಗುರುತು ಎಂಬುದಕ್ಕಿಂತ ಅದು ಸದಾ ಒಂದಿಲ್ಲೊಂದು ಪೀಡನೆಗೆ ಒಳಗಾದ ಸಂತ್ರಸ್ತರ ಭೂಮಿ ಆಗಿತ್ತು ಎಂಬುದನ್ನು ಗಮನಿಸಬೇಕು. ಅಲ್ಲಿ ಮಾನಭಂಗ, ಕಳ್ಳತನ, ಆಕ್ರಮಣ, ಹಿಂಸೆ, ದರೋಡೆಗಳು ನಡೆದಿವೆ. ಅಂತಹ ಸಂತ್ರಸ್ತ ನೆಲವನ್ನು ಸದಾ ಕಾಪಾಡಿದ ಕೀರ್ತಿ ತಳಸಮುದಾಯದ ವೀರರದು. ಈ ವೀರರು ಪ್ರಭುತ್ವ ನೇಮಿಸಿದವರಲ್ಲ. ಮತ್ತು ಯಾವುದೇ ಉಂಬಳಿ, ಸಂಬಳ ಪಡೆದವರಲ್ಲ. ಊರಿನ ಆತ್ಮಗೌರವವನ್ನು ಕಾಪಾಡಿ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಿದವರು. ವಾಸ್ತವವಾಗಿ ನಿರಂಕುಶ ಪ್ರಭುತ್ವದಲ್ಲಿ ದೇಶ ರಕ್ಷಣೆಯನ್ನು ಮಾಡುವ ಜವಬ್ದಾರಿ ಸರಕಾರದ್ದು. ಅದು ವಿಫಲವಾಗಿದೆ ಎಂದು ಹೇಳುವ ನಿದರ್ಶನಗಳು ವೀರಗಲ್ಲುಗಳು.

ಇಂತಹ ಕಥನವನ್ನು ನಾಡಿನ ಉದ್ದಕ್ಕೂ ತೋಂಡಿ ಪರಂಪರೆಯಲ್ಲಿ ಜನ ಕಥಿಸುತ್ತಾರೆ. ಧರ್ಮ ನಿಯಂತ್ರಣತ್ವದ ಪ್ರಲೋಭನೆಗೆ ಒಳಗಾದ ಕೆಲವರು ಈ ವೀರಗಲ್ಲುಗಳನ್ನು ಕಳ್ಳಪ್ಪನೆಂದು ಕರೆದದ್ದುಂಟು. ಜನರನ್ನು ಸಲುಹಲು ಪ್ರಭುತ್ವ ವಿಫಲವಾದಾಗ ಕೆಲ ವೀರರು ಸಂಪತ್ತನ್ನು ಎಲ್ಲೆಲ್ಲಿಂದಲೋ ತಂದು ಜನಸಮುದಾಯಕ್ಕೆ ಹಂಚಿ ಮಡಿದ ನಿದರ್ಶನಗಳಿವೆ. ಅವರ ಹೆಸರಿನ ಕಲ್ಲುಗಳಿಗೆ ಪ್ರಭುತ್ವ ವಿರೋಧಿ ಖಳನಾಯಕನೆಂದು ಬಿಂಬಿಸಲಾಗಿದೆ. ಈ ಹಣೆಪಟ್ಟಿ ಜನರ ಸರದಾರನಾಗಿರುವ ಗಂಡುಗಲಿ ಕುಮಾರರಾಮನಿಗೂ ಇರುವುದು ಚರಿತ್ರೆಯ ದುರಂತವೇ ಸರಿ. ಚರಿತ್ರೆಯಲ್ಲಿ ರಾಜ್ಯವನ್ನು ಕಾಪಾಡಲು ಧರ್ಮದ ವಾರಸುದಾರರಾದವರು ವೀರತ್ವವನ್ನು ಮೆರೆದು ರಾಜ್ಯ ಕಾಪಾಡಿದ ಯಾವೊಂದು ನಿದರ್ಶನವೂ ಇತಿಹಾಸದಲ್ಲಿಲ್ಲ. ಧರ್ಮಚಕ್ರದ ಪ್ರಲೋಭನೆಗೆ ಬಿದ್ದ ಬಹುಜನರ ಸಾಹಸ ಕಥನಗಳೇ ಈ ನೆಲದಲ್ಲಿ ಹೂತುಹೋಗಿವೆ.

ಹೀಗೆ ವೀರಗಲ್ಲುಗಳ ಒಳಸುಳಿಗಳನ್ನು ಅನಾವರಣಗೊಳಿಸುತ್ತಾ ಹೋದರೆ ಒಂದು ಹೊಸ ಜಗತ್ತು ಕಾಣಬರುತ್ತದೆ. ಪ್ರಾಚೀನ ಕರ್ನಾಟಕದಲ್ಲಿ ಮುಖ್ಯವಾಗಿ ಎರಡು ವರ್ಗಗಳಿದ್ದವೆಂಬುದನ್ನು ವೀರಗಲ್ಲುಗಳು ಸೂಚಿಸುತ್ತವೆ. ಒಂದು ಮುನ್ನುಗ್ಗಿ ಶೌರ್ಯ ಮೆರೆಯಲೇಬೇಕೆಂಬ ನಿಷ್ಟಾವಂತ ದೇಶಭಕ್ತ ಸಮುದಾಯ. ಎರಡು ಉಪಭೋಗಿ ಸಮುದಾಯ. ಮೊದಲನೇ ವರ್ಗಕ್ಕೆ ಶೌರ್ಯ ಪ್ರದರ್ಶನ ಮಾಡುವ, ಆ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಪ್ರಜ್ಞೆ ಇರುತ್ತದೆ. ಇವರ ಕರ್ತವ್ಯಗಳನ್ನೆಲ್ಲಾ ಸೇವೆಯಾಗಿ ಸ್ವೀಕರಿಸಿ ಉಪಭೋಗಿಸಿದವರಿದ್ದಾರೆ. ಇದು ಕೇವಲ ಗತಕಾಲದ ಕಥನವಲ್ಲ. ವರ್ತಮಾನ ಭಾರತದ ರಾಜಕಾರಣದ ಸಂದರ್ಭದಲ್ಲಿಯೂ ಈ ಕವಚದಿಂದ ಹೊರಬಂದಿಲ್ಲ. ರಾಷ್ಟ್ರಭಕ್ತಿಯ ನೆಪದಲ್ಲಿ ಕೋಮು ಮತ್ತು ಜಾತಿಯ ವಿಷಬೀಜಗಳನ್ನು ಮುಗ್ಧರಿಗೆ ಬಿತ್ತುವ ಮುಖೇನ ಶೌರ್ಯ ಮೆರೆಯುವಂತೆ ಮಾಡಿ ಆ ಮೂಲಕ ತಳಸಮುದಾಯಗಳು ಪ್ರಾಚೀನ ಸಮಾಜದ “ವೀರಗಲ್ಲು”ಗಳಿಗೆ ಪರ್ಯಾಯವೆಂಬಂತೆ “ಕಾರ್ಯಕರ್ತ”, “ಸ್ವಯಂಸೇವಕ” ಹೆಸರಿನೊಳಗಡೆ ಬಲಿಯಾಗುತ್ತಿರುವ ಸಂದರ್ಭವನ್ನು ನೋಡಬಹುದು.

ಈ ನೆಲದ ರಕ್ಷಣೆಗಾಗಿ ಆಹುತಿಯಾದ ವೀರರ ಮೇಲೆ ರಾಜಪ್ರಭುತ್ವದ, ನಾಯಕತನದ ಅಹಂಕಾರ ಇತ್ತೇ ಹೊರತು ಅವರ ಮೇಲೆ ಒಂದು ಸಣ್ಣ ಕನಿಕರವೂ ಇರಲಿಲ್ಲ. ನಾಯಕತನಕ್ಕೆ ಕನಿಕರ ಬೆರೆತುಕೊಂಡರೇ ಆ ಪ್ರಭುತ್ವಕ್ಕೆ ಪ್ರಜಾಸುಖದ ಅರಿವಿರುತ್ತದೆ. ಹಾಗಾಗಿ ವೀರಗಲ್ಲುಗಳ ಆಳದಲ್ಲಿರುವ ಜನರಕ್ಷಣೆಯ ತಾಯಿತನವನ್ನು, ಸ್ವಯಂಘೋಷಿತ ಗ್ರಾಮ ರಕ್ಷಣೆಯ, ರಾಜ್ಯ ರಕ್ಷಣೆಯ ನೈತಿಕ ಹೊಣೆಗಾರಿಕೆ ನಿಭಾಯಿಸಿದ ಈ ನೆಲದ ಮಕ್ಕಳ ಕಥನವನ್ನು ಮರುನಿರ್ಮಾಣ ಮಾಡಬೇಕು.

– ಡಾ. ಜಾಜಿ ದೇವೇಂದ್ರಪ್ಪ, ಸಂಯೋಜಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....