ಪಿಡಿಒ ಹಾಗೂ ಬಿಲ್ ಕಲೆಕ್ಟರ್ ಒಬ್ಬರಿಗೆ ಕೊರೊನ ಸೋಂಕು ದೃಢಪಟ್ಟಿರುವುದರಿಂದ ತುಮಕೂರು ತಾಲೂಕು ಹೆಬ್ಬೂರು ಗ್ರಾಮ ಪಂಚಾಯ್ತಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಂಕಿತರೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಎಂಟು ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಗ್ರಾಮ ಪಂಚಾಯಿತಿ ಕಚೇರಿ ಸೀಲ್ ಡೌನ್ ಮಾಡಿದ್ದು ಜನರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಜನರು ಯಾವುದೇ ಕಾರಣಕ್ಕೂ ಭೀತಿಗೆ ಒಳಗಾಗಬಾರದು. ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಪಿ.ಎಸ್.ಐ. ಭೂಪೇಶ್ ತಿಳಿಸಿದ್ದಾರೆ.
ಈ ನಡುವೆ ತುಮಕೂರಿನಲ್ಲಿ ಪೌರಕಾರ್ಮಿಕರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅವರ ಸಂಪರ್ಕದಲ್ಲಿದ್ದ ಸುಮಾರು 15 ಮಂದಿ ಪೌರಕಾರ್ಮಿಕರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ಕೊರೊನಾ ವಾರಿಯರ್ಗಳಾಗಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಗಳು ಮತ್ತು ಸುರಕ್ಷಾ ಸಲಕರಣೆಗಳನ್ನು ಕೊಡಬೇಕು. ಸ್ಯಾನಿಟೈಜರ್ ನೀಡಬೇಕು ಎಂದು ಒತ್ತಡ ಹೇರಿದರೂ ಪಾಲಿಕೆ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಸಿಐಟಿಯು ಆರೋಪಿಸಿದೆ.
ಪ್ರತಿನಿತ್ಯ ಕೆಲಸ ಮಾಡವ ಪೌರಕಾರ್ಮಿಕರಿಗೆ ಅವರು ಕೆಲಸ ಮಾಡುವ ಸ್ಥಳದಲ್ಲೇ ಸ್ನಾನ ಮಾಡಿಕೊಂಡು ಹೋಗುವಂತಹ ವ್ಯವಸ್ಥೇ ಮಾಡಬೇಕು. ಕೊರೊನಾ ಸೋಂಕು ಸಮುದಾಯಕ್ಕೆ ಹರಡುವುದನ್ನು ತಡೆಯಬೇಕು ಎಂದು ಮನವಿ ಸಲ್ಲಿಸಿದ್ದರೂ ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಲಾಗಿದೆ.
ನಾನುಗೌರಿ.ಕಾಂ ಈ ಕುರಿತು ವರದಿ ಮಾಡಿದ್ದರೂ ಅದಕ್ಕೆ ಜಿಲ್ಲಾಡಳಿತವಾಗಲೀ ಮತ್ತು ಮಹಾನಗರ ಪಾಲಿಕೆಯಾಗಲೀ ಸ್ಪಂದಿಸಿಲ್ಲ.
ಕೆಲಸದ ಸ್ಥಳದಲ್ಲೇ ಸ್ನಾನ ಮಾಡಿಕೊಂಡು ಹೋಗುವುದರಿಂದ ಪೌರಕಾರ್ಮಿಕರ ಕುಟುಂಬಗಳಿಗೆ ಸೋಂಕು ಹರಡುವುದನ್ನು ತಡೆಯಬಹುದು ಎಂದು ಎನ್. ಕೆ. ಸುಬ್ರಮಣ್ಯ ತಿಳಿಸಿದರು.
ಓದಿ: ಭಾರತದ ಕೊರೊನಾ ಸಾವಿನ ಪ್ರಮಾಣ ವಿಶ್ವಕ್ಕಿಂತ ಕಡಿಮೆ; 8.8 ಲಕ್ಷ ಸೋಂಕಿತರು ಗುಣ