Homeಮುಖಪುಟಅರಸು ಯುಗದ ಆದರ್ಶದ ಕೊಂಡಿ ಬಿ ನಾರಾಯಣರಾವ್...

ಅರಸು ಯುಗದ ಆದರ್ಶದ ಕೊಂಡಿ ಬಿ ನಾರಾಯಣರಾವ್…

ಇಂದು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬಿಸಿಎಂ ವಿದ್ಯಾರ್ಥಿ ನಿಲಯಗಳು ನಾರಾಯಣರಾವ್ ಅವರ ಹೋರಾಟದ ಫಲ ಎಂದು ಅನೇಕರಿಗೆ ಗೊತ್ತಿರಲಾರದು.

- Advertisement -
- Advertisement -

ವ್ಯಕ್ತಿಯೊಬ್ಬನ ಸಾಧನೆಗಳು ಆತನ ಚೈತನ್ಯವನ್ನು ಮೂಲ ಸ್ಥಿತಿಯಿಂದ ಅನೇಕ ಎತ್ತರಗಳಿಗೆ ತೆಗೆದುಕೊಂಡು ಹೋಗುತ್ತವೆ. ಏರಿದ ಎತ್ತರದಲ್ಲೂ ಆತ ಮನುಷ್ಯನಾಗಿರಲು ಪ್ರಯತ್ನಿಸಿದರೆ ಲೌಕಿಕದ ಬದುಕಿಗೆ ಆತ ಹೊಸ ಭಾಷ್ಯವನ್ನೇ ಬರೆಯುತ್ತಾನೆ. ತಾನು ಬದುಕುವ ಈ ಜಗತ್ತು ಹೆಚ್ಚು ಮಾನವೀಯವಾಗಬೇಕು ಎಂದು ಬಯಸುವ ಪ್ರತಿ ವ್ಯಕ್ತಿ ಈ ಎತ್ತರಗಳಿಗೆ ತಲುಪುತ್ತಾನೆ. ಅದು ರೈತನಿರಲಿ, ರಾಜಕಾರಣಿಯಾಗಿರಲಿ, ಕಲಾವಿದನಾಗಿರಲಿ, ಲೇಖಕನೇ ಆಗಿರಲಿ, ಬದುಕಿನ ಧ್ಯಾನಕ್ಕೆ ಮನಸ್ಸೊಡ್ಡುವ ವ್ಯಕ್ತಿ ತನ್ನ ಸುತ್ತಲ ಜಗತ್ತನ್ನು ಬದಲಿಸಲು ಪ್ರಯತ್ನಿಸುತ್ತಾನೆ. ಹೀಗೆ ಸಾಧಾರಣ ಮನುಷ್ಯನೊಬ್ಬ ತನ್ನ ಇರುವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಾಗ ಅವನು ಸಮುದಾಯದ ಆಸ್ತಿಯಾಗುತ್ತಾನೆ.

ನಮ್ಮ ನಡುವಿನ ಸಾಮಾನ್ಯನೊಬ್ಬ ಮಾನವ ಸಹಜ ಕ್ಷುದ್ರತೆಯನ್ನು ಮೀರಿದಾಗೆಲ್ಲ ಈ ಬಗೆಯ ಆದರ್ಶದ ವಾತಾವರಣವೊಂದು ನಿರ್ಮಾಣವಾಗುತ್ತದೆ. ಇಂತಹ ಆದರ್ಶದ ನಿರ್ಮಾಣ ಪ್ರವಾದಿಗಳಿಗೆ ಮಾತ್ರ ಸಾಧ್ಯವೆಂದೇನೂ ಇಲ್ಲ. ಲಾಭ ಸಾಧ್ಯವೇ ಇಲ್ಲ ಎಂಬ ಅರಿವಿದ್ದೂ ಆಶೆಯಿಂದ ಮುಗಿಲ ಕಡೆ ನೋಡುತ್ತ ಉತ್ತಿ, ಬಿತ್ತಿ, ಬೆಳೆ ಬೆಳೆವ ರೈತನೂ ತನ್ನ ದುಡಿಮೆಯಲ್ಲಿ ಈ ಬಗೆಯ ಆಧ್ಯಾತ್ಮವನ್ನು ಬದುಕುತ್ತಾನೆ. ಬಸವಕಲ್ಯಾಣದ ಶಾಸಕರಾಗಿದ್ದ ಬಿ ನಾರಾಯಣರಾವ್ ಹೀಗೆಯೇ ಬದುಕಿದ್ದವರು. ನಾರಾಯಣರಾವ್ ಶೋಷಿತರ ಏಳ್ಗೆಯನ್ನು ಕನಸುತ್ತ, ಅದಕ್ಕಾಗಿ ನೂರಾರು ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಹಠ ಹಿಡಿದು ಸಕಾರಗೊಳಿಸುವಲ್ಲಿ ಸದಾ ಕ್ರಿಯಾಶೀಲರಾಗಿದ್ದವರು. ಹೀಗಿದ್ದ ನಾರಾಯಣರಾವ್ ಅವರನ್ನು ಮೊನ್ನೆ (ದಿ: 24.09.2020) ಸಾವು ಕರೆದೊಯ್ದಿದೆ.

ನಾರಾಯಣರಾವ್, ಅರಸು ಯುಗದ ಆದರ್ಶಗಳನ್ನು ಆಚರಣೆಗೆ ತರಲೆಂದೇ ಸಾರ್ವಜನಿಕ ಬದುಕನ್ನು ಆಯ್ಕೆ ಮಾಡಿಕೊಂಡವರು. ತಮ್ಮ ಸಾರ್ವಜನಿಕ ಬದುಕನ್ನು ಅದಕ್ಕಾಗಿಯೇ ಅಹರ್ನಿಶಿ ಮುಡುಪಾಗಿಟ್ಟರು. ಕರ್ನಾಟಕದ ಉತ್ತರದ ತುದಿಯಲ್ಲಿರುವ ಬಸವಕಲ್ಯಾಣದಿಂದ ಪ್ರಾರಂಭವಾಗುವ ಅವರ ರಾಜಕೀಯ ಜೀವನ ಸುಲಭದ್ದಾಗಿರಲಿಲ್ಲ. ಶಕ್ತಿರಾಜಕಾರಣದ ಯಾವ ಹಂತದಲ್ಲೂ ನಿರ್ಣಾಯಕರಲ್ಲದ ಶೋಷಿತ ಸಮುದಾಯಗಳನ್ನು 70ರ ದಶಕದಲ್ಲಿಯೇ ಸಂಘಟಿಸುವ ಮೂಲಕ ನಾರಾಯಣರಾವ್ ತಮ್ಮ ರಾಜಕೀಯ ಬದುಕನ್ನು ಆರಂಭಿಸುತ್ತಾರೆ. ದಿಕ್ಕಿಲ್ಲದವರ ದುಮ್ಮಾನಗಳನ್ನು ಸ್ವತಃ ಅನುಭವಿಸಿ ಅವುಗಳ ನಿವಾರಣೆಗೆಂದೇ ಸಕ್ರಿಯ ರಾಜಕಾರಣಕ್ಕೆ ಇಳಿಯುತ್ತಾರೆ. ಯಾವತ್ತೋ ಒಮ್ಮೆ ಜಿಲ್ಲಾ ಪಂಚಾಯ್ತಿಯ ಸದಸ್ಯರಾಗಿ ಆಯ್ಕೆಯಾದದ್ದನ್ನು ಹೊರತಾಗಿಸಿ ಅವರು ಚುನಾವಣೆಗಳಲ್ಲಿ ಸೋತಿದ್ದೇ ಹೆಚ್ಚು. ಸಕ್ರಿಯ ರಾಜಕಾರಣದಲ್ಲಿದ್ದೂ ಅವರು ಶಾಸಕರಾಗಿ ಆಯ್ಕೆಯಾದದ್ದು ಸರಿಸುಮಾರು ಮೂರವರೆ ದಶಕಗಳ ನಂತರ. (2018ರ ಚುನಾವಣೆಯಲ್ಲಿ ಅವರು ಬೀದರಿನ ಬಸವಕಲ್ಯಾಣದಿಂದ ಶಾಸಕರಾಗಿ ಆಯ್ಕೆಯಾಗುತ್ತಾರೆ.) ಇತ್ತೀಚೆಗೆ ರಾಜಕಾರಣಕ್ಕೆ ಯಾರೆಲ್ಲ ಧಾವಿಸುತ್ತಿದ್ದಾರೆ? ಯಾವ `ಆದರ್ಶಗಳ’ ಭಾಗವಾಗಿ ಅವರು ಪಾರ್ಲಿಮೆಂಟ್ ಮತ್ತು ವಿಧಾನಸಭೆಗಳನ್ನು ಪ್ರವೇಶಿಸುತ್ತಿದ್ದಾರೆ? ಎಂದು ಪ್ರಶ್ನಿಸಿಕೊಂಡಾಗೆಲ್ಲ ನಾರಾಯಣರಾವ್ ತರಹದವರು ಅಳಿವಿನಂಚಿನಲ್ಲಿರುವ ಜೀವಿಗಳಂತೆ ಗೋಚರಿಸಿಬಿಡುತ್ತಾರೆ.

ನಾರಾಯಣರಾವ್ ಅವರು ತಾನೊಬ್ಬ ರಾಜಕೀಯ ನಾಯಕನಾಗಬೇಕೆಂದು ಸಾರ್ವಜನಿಕ ಬದುಕಿಗೆ ಕಾಲಿಟ್ಟವರಲ್ಲ. ತಾನು ಓದುತ್ತಿದ್ದ ಶಾಲೆ ಮತ್ತು ಹಾಸ್ಟೆಲ್‍ಗಳಲ್ಲಿ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನ್ಯಾಯ ಮತ್ತು ತಾರತಮ್ಯಗಳನ್ನು ಖಂಡಿಸುತ್ತಲೇ ವಿದ್ಯಾರ್ಥಿ ನಾಯಕರಾಗಿ ರೂಪುಗೊಂಡರು. 1975ರಲ್ಲಿ ದೇವರಾಜ ಅರಸು ಒಮ್ಮೆ ಬೀದರ್‍ನಲ್ಲಿ ಸಾರ್ವಜನಿಕ ಭಾಷಣ ಮಾಡಲು ಹೋಗಿರುತ್ತಾರೆ. ಅರಸು ಭಾಷಣ ಮಾಡುತ್ತಿದ್ದಾಗಲೆ, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ಗಳಲ್ಲಿ ಆಗುತ್ತಿದ್ದ ಅನ್ಯಾಯಗಳನ್ನು ಒಬ್ಬ ಸಭಿಕನಾಗಿ ವಿವರಿಸಲು ಪ್ರಯತ್ನಿಸುತ್ತಾರೆ. ಮುಖ್ಯಮಂತ್ರಿಯನ್ನು ಸಾರ್ವಜನಿಕ ಸಭೆಯಲ್ಲಿ ಪ್ರಶ್ನಿಸಿದ `ತಪ್ಪಿಗೆ’ ಪೋಲೀಸರು ಅವರನ್ನು ಠಾಣೆಗೆ ಎಳೆದೊಯ್ಯುತ್ತಾರೆ. ಸೂಕ್ಷ್ಮಸಂವೇದಿ ರಾಜಕಾರಣಿ ದೇವರಾಜ ಅರಸರು ತನ್ನನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದ ಆ ವಿದ್ಯಾರ್ಥಿ ನಾಯಕನನ್ನು ತಾವು ಉಳಿದಕೊಂಡಿದ್ದ ವಿಶ್ರಾಂತಿಗೃಹಕ್ಕೆ ಕರೆಯಿಸಿಕೊಂಡು ಸಮಸ್ಯೆಗಳನ್ನು ಆಲಿಸುತ್ತಾರೆ. ಜೊತೆಗೆ ತಾವು ಬೆಂಗಳೂರಿಗೆ ಹಿಂದಿರುಗಿದ ನಂತರ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‍ಗಳನ್ನು ತೆರೆಯುವ ಭರವಸೆ ನೀಡಿ ಹೊರಡುತ್ತಾರೆ.

ಬಡತನದ ಹಿನ್ನೆಲೆಯಿಂದ ಬಂದ ಅನಾಮಧೇಯ ವಿದ್ಯಾರ್ಥಿಯನ್ನು ಮುಖ್ಯಮಂತ್ರಿಗಳು ಕರೆದು ಮಾತನಾಡಿಸಿದ್ದು ಸುದ್ದಿಯಾಗುತ್ತದೆ. ನಂತರ ನಾರಾಯಣರಾವ್ ಎಂಬ ವಿದ್ಯಾರ್ಥಿಯು ಮುಖ್ಯಮಂತ್ರಿಯ ಆ ಭೇಟಿಯಿಂದ ವಿದ್ಯಾರ್ಥಿಗಳ ನಾಯಕರಾಗಿಬಿಡುತ್ತಾರೆ. ಬೆಂಗಳೂರಿಗೆ ಹಿಂದಿರುಗಿದ ಅರಸುರವರು ನಾರಾಯಣರಾವ್ ಅವರಿಗೆ ಕೊಟ್ಟ ಭರವಸೆಯನ್ನು ಮರೆಯುತ್ತಾರೆ. ಆಗ ನಾರಾಯಣರಾವ್ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಬೆಂಗಳೂರಿಗೆ ತೆರಳಿ ವಿಧಾನಸೌಧದ ಮುಂದೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮುಂಜೂರು ಮಾಡಿಸಲು ಧರಣಿ ಕೂರುತ್ತಾರೆ. ಎಂಟು ಹತ್ತು ದಿನಗಳ ನಂತರ ಪೊಲೀಸರಿಂದ ವಿದ್ಯಾರ್ಥಿಗಳ ಧರಣಿಯ ಬಗ್ಗೆ ಮಾಹಿತಿ ಪಡೆದ ಅರಸುರವರು ಅಂದೇ ವಿದ್ಯಾರ್ಥಿಗಳನ್ನು ಕರೆದು ಮಾತನಾಡಿ, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸುತ್ತಾರೆ.

ರಾಜ್ಯಾದ್ಯಂತ 245 ವಿದ್ಯಾರ್ಥಿ ನಿಲಯಗಳು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರಾರಂಭವಾಗುತ್ತವೆ. ಇಂದು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬಿಸಿಎಂ ವಿದ್ಯಾರ್ಥಿ ನಿಲಯಗಳು ನಾರಾಯಣರಾವ್ ಅವರ ಹೋರಾಟದ ಫಲ ಎಂದು ಅನೇಕರಿಗೆ ಗೊತ್ತಿರಲಾರದು. ನಂತರ ನಾರಾಯಣರಾವ್ ಅವರು ಅರಸು ಅವರ ನೆಚ್ಚಿನ ಶಿಷ್ಯನಾಗಿಬಿಡುತ್ತಾರೆ. ಒಳ್ಳೆಯ ಉದ್ದೇಶ, ಸಾಮಾಜಿಕ ಬದ್ಧತೆ ಮತ್ತು ಪಟ್ಟುಹಿಡಿದು ಸಾಧಿಸುವ ಛಲಗಳಿದ್ದಲ್ಲಿ ವ್ಯಕ್ತಿಯೊಬ್ಬ ಪವಾಡಗಳನ್ನು ಮಾಡಿಬಿಡಬಲ್ಲ ಎಂಬುದಕ್ಕೆ ನಾರಾಯಣರಾವ್ ಉದಾಹರಣೆಯಾಗಿ ನಿಲ್ಲುತ್ತಾರೆ.

ನಾರಾಯಣರಾವ್ ಅವರು ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಬೀದರ್ ಜಿಲ್ಲೆಯ ಸಣ್ಣ ಹಳ್ಳಿ ಬಸಂತಪುರದ ಟೋಕ್ರಿಕೋಳಿ ಸಮುದಾಯದ ಒಂದು ಬಡಕುಟುಂಬದಲ್ಲಿ ಇವರು 1955ರಲ್ಲಿ ಜನಿಸಿದರು. ಕಾಲೇಜು ದಿನಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣದ ಆಶಯಗಳನ್ನು ಪ್ರಕಟಿಸುತ್ತ ನಾಯಕರಾಗಿ ಬೆಳೆದರು. ಅದರಲ್ಲೂ ಉಳುವವನೇ ಭೂಮಿಗೆ ಒಡೆಯ, ಜೀತ ಪದ್ಧತಿಯ ನಿಷೇಧಂತಹ ಕೆಳವರ್ಗಗಳ ಪರವಾದ ಸಮಾಜವಾದಿ ಸುಧಾರಣೆಗಳನ್ನು ತಂದ ಅರಸು ಅಂದಿನ ಪ್ರಗತಿಪರ ಯುವಕರು ಚಳುವಳಿ ರಾಜಕಾರಣಕ್ಕೆ ಬರಲು ಪ್ರೇರಣೆಯನ್ನು ನೀಡಿದ್ದರು. ನಾರಾಯಣರಾವ್ ಸಹಜವಾಗಿ ಈ ಸಮಾಜವಾದಿ ಸಿದ್ಧಾಂತಕ್ಕೆ ಮಾರುಹೋದರು. ವಿಶೇಷವಾಗಿ ಲೋಹಿಯಾ ಮತ್ತು ಅಂಬೇಡ್ಕರ್ ಅವರ ತೀವ್ರ ಪರಿವರ್ತನೆಯ ಥಿಯರಿಗಳನ್ನು ಅಭ್ಯಸಿಸಿದರು. ಒಂದು ರೀತಿಯಲ್ಲಿ ನಾರಾಯಣರಾವ್ ಲೋಹಿಯಾ ಅಂಬೇಡ್ಕರರನ್ನು ಸಿಂಥಸೈಜ್ ಮಾಡಿ ತಮ್ಮ ನೋಟಕ್ರಮವನ್ನು ರೂಪಿಸಿಕೊಂಡಿದ್ದರು.

ಇವರು, ಕೇವಲ ಹಿಂದುಳಿದ ವರ್ಗಗಳ ಟಿಪಿಕಲ್ ರಾಜಕಾರಣಿಯಾಗಿರಲಿಲ್ಲ. ಎಂಬತ್ತರ ದಶಕದಲ್ಲಿ ಉತ್ತರ ಕರ್ನಾಟಕದ ಅಲೆಮಾರಿ ಗೊಂಡ ಸಮುದಾಯದ ಸಮಸ್ಯೆಗಳನ್ನು ಮುಂಚೂಣಿಗೆ ತಂದರು. ಪ್ರಾಯಶಃ ಮೊದಲ ಬಾರಿಗೆ ಕರ್ನಾಟಕದಲ್ಲೂ ಅಲೆಮಾರಿಗಳಿದ್ದಾರೆ, ಅವರೂ ಸಹ `ಶೋಷಿತರಲ್ಲಿ ಶೋಷಿತರು’ ಎಂಬ ಅರಿವು ಬಂದದ್ದೇ ಎಂಬತ್ತರ ಆ ದಶಕದಲ್ಲಿ. ಹಾವನೂರು ವರದಿಯ ಶಿಫಾರಸುಗಳನ್ನು ಅರಸು ಜಾರಿಗೆ ತರುವ ಸಂದರ್ಭದಲ್ಲಿ ನಾರಾಯಣರಾವ್ ಅವರು ಅನೇಕ ದಿಕ್ಕಿಲ್ಲದ ಸಮುದಾಯಳಿಗೆ ಕನಿಷ್ಠ ಜಾತಿ ಪ್ರಮಾಣ ಪತ್ರ ದೊರೆಯುವಂತೆ ಮಾಡಿದರು. ಕೆಲವು ಅಲೆಮಾರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕೆಲ ಸಮುದಾಯಗಳು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುವಂತಾಯಿತು. ಮೇಲ್ನೋಟಕ್ಕೆ ಅಷ್ಟೇನು ಕ್ರಾಂತಿಕಾರಿಯಲ್ಲದ ಈ ಕೆಲಸವು ಅಲೆಮಾರಿ ಸಮುದಾಯಗಳಿಗೆ ಒಂದು ರಾಜಕೀಯ ಚಹರೆಯನ್ನು ಕಲ್ಪಿಸಿತ್ತು.

ಅರಸು ಸ್ವತಃ ಹಕ್ಕಿಪಿಕ್ಕಿ, ಡೊಂಬರು, ಗೊಂಡ, ಪಾರ್ದಿ, ಹರಿಣಿ ಶಿಕಾರಿಗಳಂತಹ ಸಮುದಾಯಗಳಿಗೆ ಸ್ವತಂತ್ರ ಗ್ರಾಮಗಳನ್ನು ರೂಪಿಸಿದ್ದಲ್ಲದೆ, ಅವರಿಗೂ ಕೃಷಿ ಭೂಮಿ ದೊರೆಯುವಂತೆ ಮಾಡಿದರು. ಉತ್ತರ ಕರ್ನಾಟಕದ ಭೂಮಾಲಿಕರು ಅಲೆಮಾರಿ ಕುರಿಗಾರ ಸಮುದಾಯಗಳಿಗೆ ಕಿರುಕುಳ ನೀಡುತ್ತಿದ್ದ ಸಂದರ್ಭದಲ್ಲಿ ಅವರ ಪರ ನಿಂತ ನಾರಾಯಣರಾವ್ ಆ ಮೂಕ ಸಮುದಾಯಗಳ ದನಿಯಾದರು. ಗೊಂಡ ಮತ್ತು ರಾಜಗೊಂಡ ಸಮುದಾಯಗಳನ್ನು ನೆಲೆನಿಲ್ಲಿಸಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ‘ಶ್ರೀ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆ’ಯನ್ನು ಬೀದರನಲ್ಲಿ ಸ್ಥಾಪಿಸಿದರು. ಅಲೆಮಾರಿ ಸಮುದಾಗಳ ಮಕ್ಕಳಿಗೆ ವಸತಿ ಶಾಲೆಗಳನ್ನು ತೆರದು ಅವರು ಶಿಕ್ಷಣ ಪಡೆಯಲು ಒತ್ತಾಸೆಯಾಗಿ ನಿಂತರು. ಬಳ್ಳಾರಿ ಬಳಿ ಅಲೆಮಾರಿಗಳಿಗೆ `ಗುಡಾರ ನಗರ’ ಮತ್ತು ಹರಿಹರದ ಬೆಳ್ಳೂಡಿ ಬಳಿ ಅಲೆಮಾರಿ ರಾಜಗೊಂಡ ಸಮುದಾಯಗಳಿಗೆ `ರಾಜಗೊಂಡ ಕಾಲೋನಿ’ಯನ್ನು ನಿರ್ಮಾಣ ಮಾಡುವುದರ ಹಿಂದೆ ನಾರಾಯಾಣರಾವ್ ಅವರ ಸತತ ಪರಿಶ್ರಮವಿದೆ. ಅಲೆಮಾರಿ ಸಮುದಾಯಗಳು ನೆಲೆನಿಲ್ಲುವುದರ ಜೊತೆಗೆ, ಅವರ ಮಕ್ಕಳು ವಿದ್ಯಾಭ್ಯಾಸ ಪಡೆದು ಮುಖ್ಯವಾಹಿನಿಯ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿರಬೇಕೆಂದು ನಾರಾಯಣರಾವ್ ಬಯಸುತ್ತಿದ್ದರು.

2019 ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ ಪಕ್ಷಾಂತರಿಗಳಿಂದ ಉರುಳಿ ಹೋಗುವ ಸಂದರ್ಭದಲ್ಲಿ ನಾರಾಯಣರಾವ್ ಪಕ್ಷಾಂತರ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಇದೇ ಸಂದರ್ಭದಲ್ಲಿ ವಿಧಾನ ಸಭೆಯಲ್ಲಿ ಅವರು ಮಾಡಿದ ಭಾಷಣ ಅದ್ಭುತವಾಗಿತ್ತು. ತೀವ್ರ ವಿಷಾದ ಮತ್ತು ದೀನ ಆಕ್ರೋಶದಲ್ಲಿ ನಾರಾಯಣರಾವ್ ಮಾತಾಡಿದರು. ಅಪ್ಪಟ ಉತ್ತರ ಕರ್ನಾಟಕದ ಶೈಲಿಯ ಅವರ ಮಾತುಗಳಲ್ಲಿದ್ದ ವ್ಯಂಗವನ್ನು ವಿಧಾನಸಭಾ ಸದಸ್ಯರು ಗುರುತಿಸದೇ ಹೋದದ್ದು ವಿಪರ್ಯಾಸ.


ಇದನ್ನೂ ಓದಿ: ಸದನದಲ್ಲಿ ಮಿಂಚಿದ ಬಸವ ಪ್ರಣೀತ ಶಾಸಕ ನಾರಾಯಣರಾವ್


‘ಅಲೆಮಾರಿ ಬಂಧು’ ಪತ್ರಿಕೆಗೆ ಕಳೆದ ತಿಂಗಳು ನಾರಾಯಣರಾವ್ ಒಂದು ಸಂದರ್ಶನ ನೀಡುತ್ತಾ ಕೊನೆಯಲ್ಲಿ ಹೀಗೆ ಮಾತಾಡಿದ್ದಾರೆ. ‘ಅರಸು ಅವರಿಗೆ ನಾನು ಶಾಸಕನಾಗಬೇಕೆಂಬ ಬಯಕೆ ಇತ್ತು. ಅವರಿದ್ದಾಗ ನಾನು ಶಾಸಕನಾಗಿ ಆಯ್ಕೆಯಾಗಲಿಲ್ಲ. ಈಗ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಆದರೆ ನೋಡಲು ಅವರೇ ಇಲ್ಲ. ನಾಳೆ ನಾನು ಅವರ ಹತ್ತಿರ, ಅಂದರೆ ಮೇಲೆ ಹೋಗುತ್ತೇನಲ್ಲ, ಆಗ ಅವರಿಗೆ ಹೇಳುತ್ತೇನೆ. ಶಾಸಕನಾಗಿಯೇ ಇಲ್ಲಿಗೆ ಬಂದಿದ್ದೇನೆ ಅಂತ’. ನಾರಾಯಣರಾವ್ ತಾವಂದುಕೊಂಡಂತೆಯೇ ಶಾಸಕನಾಗಿದ್ದಾಗಲೆ ಅರಸು ಅವರನ್ನು ಭೇಟಿ ಮಾಡಲು ಹೊರಟುಬಿಟ್ಟರು. ಅರಸು ತಂದ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಅವರ ಕನಸುಗಳನ್ನು ಭಗ್ನಗೊಳಿಸಿದ್ದನ್ನು ನೋಡಲಾರದೆ ನಾರಾಯಣರಾವ್ ಹೊರಟುಬಿಟ್ಟರೆ? ಗೊತ್ತಿಲ್ಲ. ಆದರೆ ಅರಸು ಯುಗದ ಕನಸುಗಳನ್ನು ಸಕಾರಗೊಳಿಸುವ ಸೇನಾನಿಯಂತಿದ್ದ ನಾರಾಯಣರಾವ್ ಅವರಂತಹ ಬದ್ಧತೆಯ ಸಾಮಾಜಿಕ ಕಾರ್ಯಕರ್ತನನ್ನು ಕಳೆದುಕೊಂಡ ಈ ನಾಡು ನಿಜಕ್ಕೂ ಬಡವಾಗಿದೆ.

  • ಎ ಎಸ್ ಪ್ರಭಾಕರ

(ಕನ್ನಡ ವಿವಿ ಬುಡಕಟ್ಟು ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಪ್ರಭಾಕರ್ ಕರ್ನಾಟಕದ ಜನಜೀವನ, ಸಾಮಾಜಿಕ ಬದುಕುಗಳ ಜೊತೆ ಸಾವಯವ ಸಂಬಂಶ ಹೊಂದಿರುವ ಚಿಂತಕರು.)


ಇದನ್ನೂ ಓದಿ: ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ ಸಂದರ್ಶನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...