ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಅಡೋನಿ ನಗರದಲ್ಲಿ ಗುರುವಾರ ಸಂಜೆ 34 ವರ್ಷದ ದಲಿತ ಯುವಕನನ್ನು ಹತ್ಯೆ ಮಾಡಲಾಗಿದ್ದು, ಪ್ರಕರಣವನ್ನು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ. ಸಂತ್ರಸ್ತ ಯುವಕನು ಹಿಂದುಳಿದ ಸಮುದಾಯಕ್ಕೆ ಸೇರಿದ ಯುವತಿಯನ್ನು ಮದುವೆಯಾಗಿದ್ದೆ ಹತ್ಯೆಗೆ ಕಾರಣ ಎನ್ನಲಾಗಿದೆ.
ಹತ್ಯೆಗೀಡಾದ ಯುವಕನನ್ನು ಆಡಮ್ ಸ್ಮಿತ್ ಎಂದು ಗುರುತಿಸಲಾಗದೆ. ಹಲ್ಲೆಕೋರರು ಅವರ ಪತ್ನಿ ಮಹೇಶ್ವರಿಯ ತಂದೆ ಹಾಗೂ ಚಿಕ್ಕಪ್ಪ ಎಂದು ಶಂಕಿಸಲಾಗಿದೆ. ಅವರು ತಮ್ಮ ಖಾಸಗಿ ಚಿಕಿತ್ಸಾಲಯದಿಂದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕೆಲವು ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಹಲ್ಲೆ ನಡೆಸಿದ್ದಾರೆ ಎಂದು ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಕೇರಳದಲ್ಲಿ ನವ ವಿವಾಹಿತನ ಕೊಲೆ: ಮರ್ಯಾದೆಹೀನ ಹತ್ಯೆ ಶಂಕೆಯಲ್ಲಿ ವಧುವಿನ ತಂದೆ, ಚಿಕ್ಕಪ್ಪನ ಬಂಧನ
ಕಳೆದ ಎಂಟು ವರ್ಷಗಳಿಂದ ಆಡಮ್ ಸ್ಮಿತ್ ಮತ್ತು ಮಹೇಶ್ವರಿ ಪ್ರೀತಿಸುತ್ತಿದ್ದರು. ಮಹೇಶ್ವರಿಯ ಪೋಷಕರು ಅವರಿಗೆ ಬೇರೆ ವರನೊಂದಿಗೆ ನಿಶ್ಚಿತಾರ್ಥವನ್ನು ಮಾಡಿದ್ದರು. ಈ ಕಾರಣಕ್ಕೆ ಜೋಡಿಯು ನವೆಂಬರ್ನಲ್ಲಿ ಹೈದರಾಬಾದ್ಗೆ ಹೋಗಿ ಅಲ್ಲಿ ಆರ್ಯ ಸಮಾಜದಲ್ಲಿ ವಿವಾಹವಾಗಿದ್ದರು.
ವಿವಾಹದ ಬಗ್ಗೆ ಮಹೇಶ್ವರಿಯ ಪೋಷಕರಿಗೆ ತಿಳಿಯುತ್ತಿದ್ದಂತೆ, ಆಡಮ್ ಸ್ಮಿತ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆದರೆ, ದಂಪತಿಗಳು ಪೊಲೀಸ ಸಹಾಯ ಕೋರಿದ್ದಿಂದ ಅಲ್ಲಿ ಮಾತುಕತೆ ನಡೆದು ಪರಿಸ್ಥಿತಿ ತಣ್ಣಗಾಗಿತ್ತು. ಆದರೆ ಇತ್ತೀಚೆಗೆ ಅವರನ್ನು ಕೊಲ್ಲಲಾಗಿದೆ.
ತನ್ನ ಗಂಡನನ್ನು ತಂದೆ ಚಿನ್ನಾ ಈರಣ್ಣಾ ಮತ್ತು ಚಿಕ್ಕಪ್ಪ ಪೆದ್ದ ಈರಣ್ಣಾ ಸೇರಿಕೊಂಡು ಕೊಲೆ ಮಾಡಿದ್ದಾರೆಂದು ಆರೋಪಿಸಿರುವ ಮಹೇಶ್ವರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ಎಂಬುದು ಸಾವಿರ ಕೋಟಿ ದಂಧೆಯಾಗಿದೆ: ಭಾನು ಮುಷ್ತಾಕ್