ಹಳ್ಳಿಯ ಹುರುಪಿನ ಹುರಿಯಾಳುಗಳ ಜಟಾಪಟಿಯ ಕ್ಷೇತ್ರ ಗ್ರಾಮ ಪಂಚಾಯತ್ ಚುನಾವಣೆ. ಇಲ್ಲಿಯೂ ಕೂಡ ಹೆಣ್ಣಿನ ಸ್ಥಾನ ಕೇವಲ ಮೀಸಲಾತಿಯ ನೆಪದಲ್ಲಿ ಹೆಸರು ಮತ್ತೊಂದು ಫೋಟೋಗಷ್ಟೆ ಸೀಮಿತ.
ಈ ಚುನಾವಣೆಗಳು ಜನರನ್ನು ಭ್ರಷ್ಟರನ್ನಾಗಿ ಮಾಡುವುದಷ್ಟೆಯಲ್ಲದೆ ಪುರುಷಪ್ರಾಧಾನ್ಯತೆಯ ಝಂಡಾಗಳನ್ನು ನೆಟ್ಟು ನೀರೆರೆಯುವಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ.
1992ರ ಪಂಚಾಯತ್ ರಾಜ್ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಅನುಪಾತದಲ್ಲಿ ಸ್ಥಾನಗಳು ಮೀಸಲಾಗಿದ್ದವು. ಅಂದರೆ, ಮಹಿಳೆಯರ ಸಂಖ್ಯೆಯ ಅನುಪಾತದಲ್ಲಿ ಒಟ್ಟು 1/3 ಸೀಟುಗಳು ಮೀಸಲಿರಬೇಕು ಎಂದು. ರಾಜ್ಯದಲ್ಲಿ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮೀಸಲಾತಿ ನೀಡಲಾಯಿತು. ಆದರೆ ಇದಕ್ಕೊಪ್ಪದ ಮಹಿಳೆಯರ ದಶಕಗಳ ಹೋರಾಟದ ಫಲವಾಗಿ ಪಂಚಾಯಿತಿ ಚುನಾವಣೆಗಳಲ್ಲಿ ಶೇ 33ರಷ್ಟು ಇದ್ದ ಮಹಿಳಾ ಮೀಸಲಾತಿ ಇನ್ನೂ ಹೆಚ್ಚಾಯಿತು. ಭಾರತ ಸರ್ಕಾರದ ಕೇಂದ್ರ ಸಚಿವ ಸಂಪುಟ 27 ಆಗಸ್ಟ್ 2009ರಲ್ಲಿ ನೀಡಲಾದ ಅನುಮೋದನೆಯ ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಲು ಒಪ್ಪಿಗೆ ನೀಡಿತು. ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ, ಛತ್ತೀಸ್ಘಡ, ಜಾರ್ಖಂಡ್, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ತ್ರಿಪುರದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಅಳವಡಿಸಲಾಯಿತು.
ಮಹಾತ್ಮಗಾಂಧಿಯವರ ಕನಸು ಗ್ರಾಮ ಸ್ವರಾಜ್ ಅಂದರೆ ಹಳ್ಳಿಯ ಜನಗಳಿಗೆ ಅಧಿಕಾರ ವರ್ಗಾವಣೆ ಮಾಡುವುದು. ಅವರ ಪ್ರಕಾರ ಹಳ್ಳಿಗಳು ಸಾಕಷ್ಟು ಸ್ವಾಯತ್ತವಾಗಲು, ಪಂಚಾಯತ್ ವ್ಯವಸ್ಥೆ ಮೂಲಕ ಗ್ರಾಮಗಳು ತಮ್ಮ ಆಡಳಿತ ಮಾಡಬೇಕು ಎಂಬುದು ಅವರ ಆಶಯವಾಗಿತ್ತು.
ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ಸ್ಥಳೀಯ ಸ್ವಾಯತ್ತತೆಯನ್ನು ಸಮನ್ವಯಗೊಳಿಸುವ ದೃಷ್ಟಿಯಿಂದ ಭಾರತೀಯ ಸರ್ಕಾರಿ ಆಡಳಿತವು ಆಧುನಿಕ ವ್ಯವಸ್ಥೆ ತರಲು ನಿರ್ಧರಿಸಿತು. ಅತಿಯಾಗಿ ಕೇಂದ್ರೀಕೃತವಾದ ಆಡಳಿತವನ್ನು ವಿಕೇಂದ್ರೀಕೃತಗೊಳಿಸಿ ಕೆಳ ಹಂತದ ಸ್ಥಳೀಯ ವಿವಿಧ ಸಮಿತಿಗಳು ಆಡಳಿತ ನಡೆಸುವುದರ ಮೂಲಕ ಎಲ್ಲಾ ಸ್ತರದ ಜನರಿಗೆ ಅನುಕೂಲ ಮಾಡಲೆಂದೆ ತಂದದ್ದು ಈ ಪಂಚಾಯತ್ ವ್ಯವಸ್ಥೆ. ಇವೆಲ್ಲದರ ಭಾಗವಾಗಿ ಬಂದ ಮಹಿಳಾ ಮೀಸಲಾತಿಗಳು ಕೇವಲ ಪುಸ್ತಕದಲ್ಲಿವೆಯಷ್ಟೇ! ಇನ್ನುಳಿದಂತೆ ಆಡಳಿತವೆಲ್ಲ ಗಂಡ, ಮಗ ಅಥವಾ ಮನೆಯ ಇತರ ಪುರುಷರೆ ನಿಭಾಯಿಸುತ್ತಾರೆ ಎಂಬ ನಿಚ್ಚಳ ಸತ್ಯ. ಕೆಲವು ದಿನಗಳ ಮೊದಲು ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ನಾನೇ ಪ್ರತ್ಯಕ್ಷವಾಗಿ ಕಂಡಂತೆ, ನಾಮಿನೇಷನ್ ಸಲ್ಲಿಕೆಯ ಸಂದರ್ಭ ಜೊತೆಗೆ ಒಂದೆರಡು ದಿನ ಚುನಾವಣೆಯ ಪ್ರಚಾರದಲ್ಲಿ ಈ ಮಹಿಳೆಯರು ಕಾಣಿಸಿಕೊಂಡರೆ ಹೊರತು ಇನ್ನುಳಿದ ಯಾವ ಪ್ರಕ್ರಿಯೆಗಳಲ್ಲೂ ಅವರ ಪಾಲು ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ.
’ಹಳ್ಳಿ ರಾಜಕೀಯ ಕಲಿತರೆ ದೆಲ್ಲಿ ರಾಜಕೀಯ ಕಲಿತಂಗೆ’ ಎಂಬ ಆಡುಮಾತಿದೆ. ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆಯ ಎಲ್ಲಾ ಮಜಲುಗಳನ್ನು ತಿಳಿಯಲೇಬೇಕೆಂಬ ಕಾರಣಕ್ಕೆ ಮತ ಎಣಿಕೆಯ ಏಜೆಂಟ್ ಆಗಿಯ ನಮ್ಮ ತಾಲೂಕು ಕೇಂದ್ರದ ಮತ ಎಣಿಕೆ ನಡೆಯುತ್ತಿದ್ದ ಕಾಂಪೌಂಡಿನೊಳಗೆ ಕಾಲಿಟ್ಟರೆ ಸಾವಿರಾರು ಗಂಡಸರೆ ತುಂಬಿದ್ದ ಆ ಶಾಲಾ ಮೈದಾನದಲ್ಲಿ ಕಂಡದ್ದು ಕೇವಲ ಇಬ್ಬರು ಹೆಂಗಸರು ಮಾತ್ರ ಮತ್ತು ನಾನು ಮೂರನೆಯವಳು.

ತಮಗೆ ಬಿದ್ದ ಮತಗಳ ಲೆಕ್ಕವನ್ನು ನೋಡಲು ಸಹ ಹೆಣ್ಣಿಗೆ ಅವಕಾಶವನ್ನು ನೀಡದಿರುವ ಈ ಪುರುಷ ಪ್ರಧಾನ ವ್ಯವಸ್ಥೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವೆಂದೆ ಕರೆಯಲ್ಪಡುವ ಪಂಚಾಯಿತಿ ಚುನಾವಣೆಗಳ ಮೂಲ ಆಶಯವಾದ ಸರ್ವರಿಗು ಸಮಾನ ಹಕ್ಕುಗಳನ್ನು ಮೊಟಕುಗೊಳಿಸಿ ಹಳ್ಳಿಯ ಮಟ್ಟದಲ್ಲೆ ಹೆಣ್ಣುಮಕ್ಕಳು ರಾಜಕೀಯ ಅಭಿಲಾಷೆಗಳನ್ನು ಚಿವುಟಿ ಹಾಕುತ್ತಿವೆ.
ಸ್ತ್ರೀ ಸಬಲೀಕರಣಕ್ಕಾಗಿ ಬಂದ ಈ ಮೀಸಲಾತಿ ಹೀಗೆ ದುರುಪಯೋಗವಾಗುತ್ತಿರುವಾಗ ಇದಕ್ಕೆ ಕಡಿವಾಣ ಹಾಕಲು ಹೊಸದೊಂದು ಕಾನೂನಿನ ಅಗತ್ಯಕ್ಕಿಂತ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ತಾವೆ ದುಡಿದು ಇಡೀ ಕುಟುಂಬ ನಿರ್ವಹಿಸುವ ಹೆಂಗಸರ ಬಳಿ ಮತಯಾಚನೆ ಮಾಡಲು ಹೋದಾಗ ಮುಲಾಜಿಲ್ಲದೆ “ನಮ್ಮ ಗಂಡ ಹೇಳಿದವರಿಗೆ ನಾನು ವೋಟ್ ಹಾಕೋದು” ಎನ್ನುವಾಗ ಪುಸ್ತಕದಲ್ಲಿ ಓದಿದ ಸ್ತ್ರೀ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾವಲಂಬನೆಯ ಎಲ್ಲಾ ಕಲ್ಪನೆಗಳು ಬುಡಮೇಲಾಗುತ್ತಿದ್ದವು.
ಎಷ್ಟೇ ಅರ್ಥ ಮಾಡಿಸಿದರೂ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವವರು 50 ಪ್ರತಿಶತ ಜನರಿಗಿಂತಲೂ ಕಡಿಮೆ. ನಂಬಲಿಕ್ಕೆ ಸಾಧ್ಯವಾದಷ್ಟು ಮೊಂಡು ಹಿಡಿಸಿಬಿಟ್ಟಿದೆ ಈ ಚುನಾವಣಾ ವ್ಯವಸ್ಥೆ.
ಸಾಮಾಜಿಕ ಕಾರ್ಯಕರ್ತೆಯಾಗಿ ರಾಜಕೀಯವನ್ನು ವಿಶ್ಲೇಷಿಸುವುದೆ ಬೇರೆ. ಸಕ್ರಿಯ ರಾಜಕಾರಣಿಯಾಗಿ ರಾಜಕೀಯದೊಳಗಿನ ರಾಜಕೀಯ ಮಾಡುವುದೆ ಬೇರೆ ಎಂಬುದನ್ನು ನನ್ನ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ದಿನದಿಂದ ಹಿಡಿದು ಮತ ಎಣಿಕೆಯ ಕೊನೆ ಘಳಿಗೆಯವರೆಗು ನಡೆದ ಬೆಳವಣಿಗೆಗಳು ಪಾಠ ಕಲಿಸಿದವು.
“ಏನ್ ಹೇಳ್ತಿರಾ ಮೇಡಮ್ ದುಡ್ಡಿಲ್ದೆ ರಾಜಕೀಯ ಮಾಡಕ್ಕಾಯ್ತದ” ಎನ್ನುತ್ತಲೆ ಮನೆ ಚಿನ್ನ ಅಡವಿಟ್ಟು ಸೈಟುಗಳನ್ನು ಮಾರಿಯಾದರು ಗೆಲ್ಲಲೆಬೇಕೆಂಬ ಜಿದ್ದಿಗೆ ಬಿದ್ದು ಜೀವನವನ್ನೆ ಹರಾಜಿಗಿಟ್ಟವರನ್ನು ಕಣ್ಣಾರೆ ಕಂಡೆ.
ಮತದಾರರನ್ನು ಅತ್ಯಂತ ನಿಕೃಷ್ಟ ಮಟ್ಟಕ್ಕೆ ಭ್ರಷ್ಟರನ್ನಾಗಿ ಮಾಡಿದ ಸಕಲ ಕೀರ್ತಿಗಳು ಈ ಹಳ್ಳಿ ರಾಜಕೀಯಕ್ಕೆ ಸಲ್ಲುತ್ತದೆ ಎಂಬುದು ’ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎನ್ನುವ ಗಾದೆಮಾತಿನ ತಿಳಿವಳಿಕೆಯಷ್ಟೇ ಸತ್ಯ. ಹಣ, ಹೆಂಡ, ಮೂಗುಬೊಟ್ಟುಗಳ ಸುತ್ತ ನಡೆಯುವ ರಾಜಕೀಯದ ಹೊಲಸಿನ ನಡುವೆ ವ್ಯಕ್ತಿಯ ದೂರದೃಷ್ಟಿಯ ಆಶಯಗಳು ಪೇಲವವಾಗಿಬಿಡುತ್ತವೆ.
ಇದರ ನಡುವೆಯು 50-50 ಎನ್ನುವಂತೆ ಇಂದಿನ ಯುವ ಸಮುದಾಯದ ವಿವೇಚನಾಯುತ ಹೆಜ್ಜೆಗಳು ಆಶಾದಾಯಕವೆನಿಸುತ್ತವೆ.
ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲು ಹಿಂದಿನ ಯಜಮಾನಿಕೆ ಪದ್ಧತಿಯಂತೆ ತನ್ನ ಮಾತು ಕೇಳುವವರನ್ನೆ ಅಭ್ಯರ್ಥಿಗಳನ್ನಾಗಿ ಸ್ಪರ್ಧೆಗಿಳಿಸಿ, ಗೆಲ್ಲಿಸಿ ವಂಶಪಾರಂಪರ್ಯದ ಯಜಮಾನಿಕೆ ಪದ್ಧತಿಯನ್ನು ನಡೆಸಿಕೊಂಡೆ ಬರುತ್ತಿದ್ದವರಿಗೆ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸಿ ಅವರನ್ನು ಅಧಿಕಾರ ವಂಚಿತರನ್ನಾಗಿ ಮಾಡಲು ಯುವಕರು ಶ್ರಮಿಸಿದ್ದಾರೆ.
ಒಂದೆಡೆ ನವ ಯುವ ರಾಜಕಾರಣದ ಅಲೆ ಸಮಾಧಾನ ತಂದರೂ ಕೂಡ ಹಣದ ಹೊಳೆ, ಮಹಿಳೆಯರನ್ನು ಚುನಾವಣಾ ದಾಳಗಳಾಗಿಯಷ್ಟೆ ಬಳಸಿಕೊಳ್ಳುತ್ತಿರುವ ವ್ಯವಸ್ಥೆಯ ಬಗ್ಗೆ ವಿದ್ರಾವಕ ಕೋಪವಂತೂ ಇದ್ದೆ ಇದೆ.


