Homeಅಂಕಣಗಳುಪಿಕೆ ಟಾಕೀಸ್: ಬಹುತ್ವ ಮತ್ತು ಸಹಬಾಳ್ವೆಯೇ ನಮ್ಮ ಮುಂದಿರುವ ಏಕೈಕ ದಾರಿಯೆನ್ನುವ ಸಿತೋಸ್ ಸಿನಿಮಾಗಳು

ಪಿಕೆ ಟಾಕೀಸ್: ಬಹುತ್ವ ಮತ್ತು ಸಹಬಾಳ್ವೆಯೇ ನಮ್ಮ ಮುಂದಿರುವ ಏಕೈಕ ದಾರಿಯೆನ್ನುವ ಸಿತೋಸ್ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 06/ ಜಾಗತಿಕ ಸಿನಿಮಾ/ ಫಿಲಿಪ್ಪೊಸ್ ಸಿತೋಸ್

ಪ್ಲೇಟೊಸ್ ಆಕಾಡೆಮಿ(2009) : ನಲವತ್ತೈದು ವಯಸ್ಸು ದಾಟಿದ ನಾಲ್ಕು ಜನ ಗೆಳೆಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಏನನ್ನು ಮಾಡಲಾಗದೆ ಬದುಕಿದ್ದಾರೆ. ಅವರಿಗೆ ಉಳಿದ ಒಂದೇ ಒಂದು ಅಸ್ಮಿತೆ ಅಂದರೆ ಅವರು ಗ್ರೀಸಿಗರೆಂಬುದು ಮಾತ್ರ. ಅದರಲ್ಲೂ ಯಾರು ಅತಿ ಹೆಚ್ಚಿನ ಗ್ರೀಸಿಗರೆಂಬ ಹುಡುಕಾಟದಲ್ಲಿದ್ದಾರೆ- ಇದೇ ಸಿನಿಮಾ ಕಥಾನಕ.

ಸಿನಿಮಾದ ಮುಖ್ಯಪಾತ್ರಧಾರಿ, ಜ್ಞಾಪಕಶಕ್ತಿ ಕ್ಷೀಣಿಸಿದ ಇಳಿವಯಸ್ಸಿನ ತನ್ನ ತಾಯಿಯೊಂದಿಗೆ ಬದುಕುತ್ತಿದ್ದಾನೆ. ಯಾರು ಹೆಚ್ಚು ಸುಳಿಯದ ತನ್ನ ಅಂಗಡಿಯ ಮುಂದೆ ಕುರ್ಚಿಗಳನ್ನು ಹಾಕಿ, ಅಲ್ಲಿ ಅವನಂತೆಯೇ ಇರುವ ಗೆಳೆಯರು ಬಂದು ಸೇರಿ, ಹಾಯಾಗಿ ಕುಳಿತುಕೊಂಡು ಜ್ಯೂಸ್ ಕುಡಿಯುತ್ತಾ, ಹರಟುತ್ತಿರುತ್ತಾರೆ. ಬದುಕಿಗಾಗಿ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಅಲ್ಬೇನಿಯನ್ನರ ಮತ್ತು ಚೀನಿಯರ ಗುಂಪಿನತ್ತ ನೋಡಿ, “ಅವರು ಎಷ್ಟು ಜನವಿರಬಹುದು?” ಎಂದು ಒಬ್ಬ ಪ್ರಶ್ನಿಸಿದರೆ, ಮತ್ತೊಬ್ಬ ಹನ್ನೆರಡು ಜನರು ಅನ್ನುತ್ತಾನೆ. ಇನ್ನೊಬ್ಬ ಹದಿನಾಲ್ಕು ಜನವೆನ್ನಲು, ಮತ್ತೊಬ್ಬ ಹದಿನೈದು, ಕೊನೆಗೆ ಇವನೇ, “ನಿನ್ನೆಗಿಂತ ಇಂದು ಜಾಸ್ತಿ ಮಂದಿ ಕಾಣುತ್ತಿದ್ದಾರೆ” ಎಂದು ಹೇಳಿ, ಎಲ್ಲರೂ ಆತಂಕಗೊಳ್ಳುತ್ತಾರೆ.

ಹಾಗೆಯೇ ಗೆಳೆಯನ ನಾಯಿಯಲ್ಲಿರುವ ದೇಶಭಕ್ತಿಯನ್ನು ಪರೀಕ್ಷಿಸುವುದು; ಅದಕ್ಕೆ ಅವನ ಗೆಳೆಯ, ತನ್ನ ನಾಯಿ ಎಂದೂ ಗ್ರೀಸಿಗನನ್ನು ನೋಡಿ ಬೊಗಳುವುದಿಲ್ಲವೆಂದು ಬಾಜಿ ಕಟ್ಟುವುದು, ಕಾಲ ಕಳೆಯಲು ರಸ್ತೆಯಲ್ಲಿಯೇ ಪುಟ್‌ಬಾಲ್ ಆಡುವುದು, ಸುತ್ತಮುತ್ತಲಿನ ವಸ್ತುಗಳು ಮುರಿಯುವಂತೆ ಎಚ್ಚರ ವಹಿಸಿ ಆಡುವುದು, ಅಡ್ಡಾಡುವುದೇ ಇವರ ದಿನಚರಿ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಹಲವಾರು ಅಸ್ಮಿತೆಗಳಿರುತ್ತವೆ. ವೈಯಕ್ತಿಕ ಬದುಕಿನಲ್ಲಿ ಗಂಡನೋ, ತಂದೆಯೋ ಅಥವಾ ತನ್ನ ವೃತ್ತಿಪರ ಬದುಕಿನಲ್ಲಿ ವ್ಯಾಪಾರಿಯಾಗಿಯೋ ತಾನು ಮಾಡುವ ಕೆಲಸವನ್ನು ಅಸ್ಮಿತೆಯನ್ನಾಗಿಸಿಕೊಂಡಿರುತ್ತಾನೆ. ಆದರೆ ಅದ್ಯಾವುದನ್ನು ಮಾಡಲಾಗದವನು, ಇಲ್ಲ ಮಾಡಿ ಸೋತವನು, ತನ್ನ ಹುಟ್ಟಿನಿಂದ ಬಂದ ರಾಷ್ಟ್ರೀಯತೆಯನ್ನು (ಗಡಿಯ ಅಥವಾ ಭಾಷಿಕ) ತನ್ನ ಮೊದಲ ಮತ್ತು ಕೊನೆಯ ಅಸ್ಮಿತೆಯಾಗಿಸಿಕೊಂಡರೆ, ಮತ್ತು ಅದರಿಂದ ಹುಸಿ ಶ್ರೇಷ್ಠತೆಯನ್ನು ಆರೋಪಿಸಿಕೊಂಡು, ಹೆಚ್ಚಿಸಿಕೊಂಡು, ಸುತ್ತಮುತ್ತ ಇರುವವರಲ್ಲಿ ಯಾರು ದೇಶಭಕ್ತರು ಎಂದು ಬಗೆದು ಮತ್ತು ತನ್ನ ಮಾತಿಗೆ ಎದುರಾಡಿದವರನ್ನು ದೇಶದ್ರೋಹಿಗಳೆಂದು ಘೋಷಿಸಿದರೆ, ಏನಾಗಬಹುದು? ಊಹಿಸುವ ಅಗತ್ಯವಿಲ್ಲ, ಮುಖ್ಯವಾಹಿನಿ ಟಿವಿ ಸುದ್ದಿಯಿಂದ ಹೊರಗೆ ಬಂದು ನೋಡಿ!

ಸಿನಿಮಾದಲ್ಲಿ ತಾನು ಗ್ರೀಸಿಗನೆಂಬ ಟೊಳ್ಳು ರಾಷ್ಟ್ರೀಯತೆಯನ್ನು ಹೊದ್ದು ಬದುಕುತ್ತಿರುವ ಮುಖ್ಯಪಾತ್ರಧಾರಿಯ ತಾಯಿಗೆ, ನಲವತ್ತರ ಅಲ್ಬೇನಿಯನ್ ವ್ಯಕ್ತಿಯೊಬ್ಬ ತನ್ನ ತಾಯಿಯ ಫೋಟೋವನ್ನು ತೋರಿಸಿದಾಗ, ಆ ಅಲ್ಬೇನಿಯನ್‌ನನ್ನೇ ಕಳೆದುಹೋದ ತನ್ನ ಮಗನೆಂದು ಗುರುತಿಸುತ್ತಾಳೆ. ಹಾಗೂ ಅಲ್ಬೇನಿಯನ್ ಭಾಷೆ ಮಾತನಾಡಿಕೊಂಡು ಮೊದಲಿಗಿಂತಲೂ ಲವಲವಿಕೆಯಿಂದ ಓಡಾಡುತ್ತಾಳೆ. ಈಗ ಮುಖ್ಯಪಾತ್ರಧಾರಿಗೆ ತಾನು ಗ್ರೀಸಿಗನಲ್ಲ, ಅಲ್ಬೇನಿಯನ್ ಇರಬಹುದೆಂಬ ಸಂದೇಹವೇ ಅಘಾತವನ್ನು ತರುತ್ತದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಅಲ್ಬೇನಿಯನ್‌ನನ್ನು ಮನೆಯಿಂದ ಹೊರಹಾಕುತ್ತಾನೆ. ಆದರೆ ತನ್ನ ವೃದ್ಧ ತಾಯಿ ಊಟ ತಿಂಡಿ ಬಿಟ್ಟು ಮೌನಕ್ಕೆ ಶರಣಾದಾಗ ವಿಧಿಯಿಲ್ಲದೆ ಮತ್ತೆ ಅಲ್ಬೇನಿಯನ್‌ನನ್ನು ಕರೆತರುತ್ತಾನೆ.

ಈ ವಿಷಯವನ್ನು ತನ್ನ ಗೆಳೆಯರಿಂದ ಮುಚ್ಚಿಡಲು ಪ್ರಯತ್ನಿಸಿದರೂ, ಅವರಿಗೆ ನಿಜ ತಿಳಿದು ಇವನಿಂದ ದೂರವಾಗಲು ಪ್ರಯತ್ನಿಸುತ್ತಾರೆ. ಕೊನೆಗೆ ತಾಯಿಯ ಸಾವಿನಿಂದ ಅವನ ಬದುಕಿನಲ್ಲಾಗುವ ಬದಲಾವಣೆಗಳೇ ಸಿನಿಮಾದ ಅಂತ್ಯ.

ಪ್ಲೇಟೊಸ್ ಅಕಾಡೆಮಿ ಎಂದರೆ, ಕ್ರಿಸ್ತಪೂರ್ವ 387ರಲ್ಲಿ ಅಥೆನ್ಸ್‌ನಲ್ಲಿ ಪ್ಲೇಟೊ ಮತ್ತು ಸಂಗಡಿಗರು ಗುಂಪಾಗಿ ತಮಗಿಷ್ಟವಾದ ವಿಷಯಗಳ ಕುರಿತು ಚರ್ಚಿಸಿ ಕಲಿಯುತ್ತಿದ್ದ ವ್ಯವಸ್ಥೆ. ಇದಕ್ಕೆ ವಿರುದ್ಧವಾಗಿ ಅಥವಾ ವ್ಯಂಗ್ಯವಾಗಿ ಗುಂಪೊಂದು ಕೆಲಸಕ್ಕೆ ಬಾರದ ವಿಷಯಗಳ ಕುರಿತು ಚರ್ಚಿಸುವುದನ್ನು ನಿರ್ದೇಶಕ ಈ ಸಿನಿಮಾದಲ್ಲಿ ಚಿತ್ರಿಸಿದ್ದಾನೆ.

ಅನ್ಫೇರ್ ವರ್ಡ್ಲ್ (2011): ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರ ದುರ್ಬಲರ ಮೇಲೆ ಅನುಕಂಪವಿರುವ ಮುಖ್ಯಪಾತ್ರಧಾರಿ ಪೋಲಿಸ್ ಅಧಿಕಾರಿಯ ಕೆಲಸದಲ್ಲಿರುತ್ತಾನೆ. ಬಂದ ದೂರುಗಳಲ್ಲಿ ನಿಜವಾದ ತಪ್ಪಿತಸ್ಥ ಯಾರಿರಬಹುದೆಂಬ ವಿಚಾರಿಸಿ, ಆರೋಪಿಗಳನ್ನು ಕೋರ್ಟಿಗೆ ಶಿಕ್ಷೆಗೆ ಕಳುಹಿಸುವ ವಿಭಾಗದಲ್ಲಿರುತ್ತಾನೆ. ಇವನ ಕರುಣಾ ಮನೋಭಾವದಿಂದ ಬಡವರೆನ್ನೆಲ್ಲ ಬಿಟ್ಟು ಕಳುಹಿಸುತ್ತಿರುತ್ತಾನೆ. ಇದೇ ವಿಷಯ ಇವನಿಗೆ ಮುಳುವಾದಾಗ ಮತ್ತು ಅದರಿಂದ ಹೊರಬರಲು ಮಾಡುವ ಪ್ರಯತ್ನಗಳೇ ಈ ಸಿನಿಮಾ.

ಮೊದಲ ದೃಶ್ಯದಲ್ಲಿ ಹೆಂಗಸೊಬ್ಬಳು ಅಂಗಡಿಯೊಂದರಲ್ಲಿ ತಿಂಡಿಯನ್ನು ಕದ್ದು ಓಡುತ್ತಿದ್ದಾಗ, ಅವಳನ್ನು ಹಿಡಿಯಲು ಸೆಕ್ಯುರಿಟಿ ಗಾರ್ಡ್ ಓಡುತ್ತಿರಲು, ಅವನಿಗೆ ಕಥೆಯ ಮುಖ್ಯಪಾತ್ರಧಾರಿ ಕಾಲು ಅಡ್ಡಹಾಕಿ ಬೀಳಿಸುತ್ತಾನೆ. ಈ ದೃಶ್ಯದಲ್ಲಿಯೇ ಅವನ ವ್ಯಕ್ತಿತ್ವವನ್ನು ನಿರ್ದೇಶಕ ಕಟ್ಟಿಕೊಡುತ್ತಾನೆ. ಪೊಲೀಸ್ ಕೆಲಸದಲ್ಲಿ ತಪ್ಪಿತಸ್ಥರನ್ನು ಹಿಡಿಯುವುದು ಅವನ ಕೆಲಸವಾದರೂ, ಅದಕ್ಕೆ ವಿರುದ್ಧವಾಗಿ ಅವರು ತಪ್ಪಿಸಿಕೊಂಡು ಹೋಗಲು ಬಿಡುವುದು, ತೀವ್ರವಾದ ನೋವಿನಲ್ಲಿರುವವನಂತೆ ಅತಿಯಾಗಿ ಮದ್ಯಪಾನ ಮಾಡಿ, ಮನೆಯಿದ್ದರೂ ಪಾರ್ಕ್ ಬೆಂಚಿನ ಮೇಲೆ ಮಲಗಿಬಿಡುವುದು ಇವೆಲ್ಲಾ ಅವನ ವ್ಯಕ್ತಿತ್ವದ ಭಾಗವಾಗಿರುತ್ತದೆ.

ತಪ್ಪು ಮಾಡಿದ ಬಡವರನ್ನು ಬಿಟ್ಟು ಕಳುಹಿಸುವುದನ್ನು ಗಮನಿಸುವ ಮತ್ತೊಬ್ಬ ಅಧಿಕಾರಿ ಇವನಿಂದ ವಿವರಣೆ ಕೇಳಿದಾಗ, ಆ ಅಧಿಕಾರಿಯನ್ನು ಕೊಲೆ ಮಾಡಿಬಿಡುತ್ತಾನೆ. ತನ್ನ ಸಹೋದ್ಯೋಗಿಯ ಸಹಾಯದಿಂದ ಶವವನ್ನು ಕಚೇರಿಯಿಂದ ಬೇರೆಡೆಗೆ ಸಾಗಿಸುತ್ತಾನೆ. ಈ ಕೊಲೆಯ ಪ್ರಕರಣದ ವಿಚಾರಣೆಯಲ್ಲಿ, ಕೊಲೆಯಾದ ಸ್ಥಳವನ್ನು ಸ್ವಚ್ಛಗೊಳಿಸಿದ ಹೆಂಗಸನ್ನು ವಿಚಾರಿಸುತ್ತಾರೆ. ಈ ಹೆಂಗಸು ಮೊದಲ ದೃಶ್ಯದಲ್ಲಿ ಅಂಗಡಿಯಲ್ಲಿ ಕಳ್ಳತನ ಮಾಡವದವಳು.

ಮುಖ್ಯಪಾತ್ರಧಾರಿ ವಿಚಾರಣೆಯ ಭಯದಿಂದ ಸ್ವಚ್ಛ ಮಾಡುವ ಹೆಂಗಸಿನ ಹಿಂದೆ ಓಡಾಡುತ್ತಾ, ಅವಳನ್ನು ಪ್ರೀತಿಸುತ್ತಾನೆ. ಕೊಲೆಯ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳಬಾರದೆಂದು ಮಾಡುವ ಪ್ರಯತ್ನಗಳ ಹೊತ್ತಿನಲ್ಲೂ, ಪೊಲೀಸ್ ಠಾಣೆಯಲ್ಲಿ ಸಂಕೋಲೆಯಲ್ಲಿರುವ ಆರೋಪಿಯ ಬೇಡಿಯನ್ನು ಕಳಚಿಹಾಕಲು ಕೀಲಿಕೈ ನೀಡುವ ದೃಶ್ಯ, ಕಾನೂನು ಮತ್ತು ನ್ಯಾಯವ್ಯವಸ್ಥೆ ಮನುಷ್ಯತ್ವಕ್ಕೆ ಎಷ್ಟು ದೂರದಲ್ಲಿದೆಂಬುದನ್ನು ತೋರಿಸುತ್ತದೆ.

ನಗರ ಪ್ರದೇಶದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ಚಿತ್ರಿಸಿದ್ದರೂ, ಕಥೆಯಲ್ಲಿ ಬರುವ ಪಾತ್ರಗಳನ್ನು ಬಿಟ್ಟರೆ, ದಾರಿಯಲ್ಲಿ ಹಾದುಹೋಗುವವರು, ಅಂಗಡಿಯಲ್ಲಿ ವಸ್ತುಗಳನ್ನು ಕೊಳ್ಳಲುಬರುವ ನಟ-ನಟಿಯರ್‍ಯಾರೂ ಇಲ್ಲ. ಕಾನೂನು ಮತ್ತು ಕರುಣೆಯ ನಡುವೆ ಸಿಕ್ಕಿಕೊಂಡು ಒದ್ದಾಡುವ ಪೊಲೀಸ್ ಅಧಿಕಾರಿಯ ಕಥೆಯನ್ನು ಅರ್ಥಗರ್ಭಿತವಾಗಿ ನಿರ್ದೇಶಕ ಕಟ್ಟಿಕೊಟ್ಟಿದ್ದಾರೆ.

ಫಿಲಿಪ್ಪೊಸ್ ಸಿತೋಸ್: ಸಂದರ್ಶನವೊಂದರಲ್ಲಿ ಸಿತೋಸ್ ಅವರೇ ಹೇಳಿಕೊಳ್ಳುವಂತೆ, ತಮ್ಮ ಸಿನಿಮಾ ಶೈಲಿಯನ್ನು ಸರಳವಾಗಿಡಲು ಪ್ರಯತ್ನಿಸುತ್ತಾರೆ. ಕ್ಯಾಮರಾದ ಚಲನೆಯನ್ನು ಸೀಮಿತಗೊಳಿಸಿ, ಒಂದು ಸ್ಥಿರ ಫ್ರೇಮಿನಲ್ಲಿಯೇ ನಟ-ನಟಿಯರು ತಮ್ಮ ನಟನೆಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತಾರೆ.

ನಟ-ನಟಿಯರು ಯಾವುದೇ ತಯಾರಿಯಿಲ್ಲದೆ ನೇರವಾಗಿ ಸಿನಿಮಾ ಶೂಟಿಂಗ್‌ಗೆ ಮುಂದಾದಾಗ ಸಹಜವಾಗಿ ಪಾತ್ರಗಳು ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವುದನ್ನು ಕ್ಯಾಮರಾದಿಂದ ಸೆರೆ ಹಿಡಿಯುತ್ತಾರೆ. ಹೀಗೆ ಸಿನಿಮಾ ತಾನಾಗಿ ನಡೆಯುವ ಸಹಜಕ್ರಿಯೆಯಂತೆ ಹಿಡಿಯುವುದು ಈ ನಿರ್ದೇಶಕನ ವಿಶಿಷ್ಟತೆ.

ಫಿಲಿಪ್ಪೊಸ್ ಮಿನಿಮಲಿಸಂಅನ್ನು ಸಿನಿಮಾದ ಎಲ್ಲ ವಿಭಾಗಗಳಲ್ಲಿ ಪಾಲಿಸುತ್ತಾರೆ. ಹೊರಗಿನ ಯಾವುದೇ ಒತ್ತಡಗಳಿಲ್ಲದೆ, ಎಲ್ಲರೂ ಸಿನಿಮಾ ಕ್ರಿಯೆಗೆ ಹೊಂದಿಕೊಂಡಾಗ ಸಿನಿಮಾ ತನ್ನಸ್ಟೇ ತಾನೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ.

ಇವರ ಕಥಾವಸ್ತುಗಳು ಇಪ್ಪತ್ತೊಂದನೆ ಶತಮಾನದಲ್ಲಿನ ಟೊಳ್ಳು ರಾಷ್ಟ್ರೀಯತೆಯ ಅಪಾಯವನ್ನು ತೋರಿಸಿ ಬಹುತ್ವದ ಅನಿವಾರ್ಯತೆ ಮತ್ತು ಮಹತ್ವವನ್ನು ಕಟ್ಟಿಕೊಡುತ್ತವೆ. ಭಾಷೆಯ ಬಗ್ಗೆ ಅಂಧಾಭಿಮಾನ ಮತ್ತು ರಾಷ್ಟ್ರೀಯತೆಗಳಿಂದ ಎಚ್ಚರ ತಪ್ಪದೆ, ಹೊಂದಿಕೊಂಡು ಬದುಕಲೇಬೇಕಾದ ಪರಿಸ್ಥಿತಿಗಳನ್ನು ಕಥಾನಕದಲ್ಲಿ ಸೃಷ್ಟಿಸಿ ಪ್ರಸಕ್ತ ಜಾಗತಿಕ ವಿದ್ಯಮಾನಗಳಿಗೆ ಕನ್ನಡಿ ಹಿಡಿದಿದ್ದಾರೆ.

ಇವರ ಸಿನಿಮಾಗಳಲ್ಲಿ ಬಳಸುವ ಬಣ್ಣಗಳು ಯಾವುದೇ ರೀತಿಯ ಗಮನವನ್ನು ಸೆಳೆಯದೆ ಅಥವಾ ವಿಚಲಿಸದೆ ನಿರಾಯಾಸವಾಗಿ ದುಃಖವನ್ನು ಪ್ರತಿಫಲಿಸುವಂತೆ ಇರುತ್ತವೆ. ಪ್ರಪಂಚದಲ್ಲಿ ವಲಸಿಗರು ಮತ್ತು ಸ್ಥಳೀಯರ ನಡುವಿನ ಅರ್ಥಹೀನ ಘರ್ಷಣೆಯನ್ನು ತೋರಿಸುತ್ತಾ, ವಿವಿಧ ಭಾಷೆಗಳ, ವಿವಿಧ ಸಂಸ್ಕೃತಿಗಳ ಜನಗಳಿದ್ದರೂ ಬಹುತ್ವ ಮತ್ತು ಸಹಬಾಳ್ವೆಯೇ ನಮ್ಮ ಮುಂದಿರುವ ಏಕೈಕ ದಾರಿಯೆಂಬುದನ್ನು ವೀಕ್ಷಕರಿಗೆ ಮನದಟ್ಟು ಮಾಡುವಂತಿವೆ ಇವರ ಸಿನಿಮಾಗಳು.

ಫಿಲಿಪ್ಪೊಸ್‌ನ ಪರ್ಲೆಝ್ ಮೊಯ್ ಡಿಆಮೋರ್(1994) ಕಿರುಚಿತ್ರದಲ್ಲಿ ಇಬ್ಬರು ಜರ್ಮನ್ ವಲಸಿಗರು, ಒಬ್ಬ ರಷ್ಯಾದವ ಮತ್ತು ಸ್ಥಳೀಯ ಗ್ರೀಸ್‌ನವರು ಪರಸ್ಪರ ಭಾಷೆ ತಿಳಿಯದೆ ಇದ್ದರೂ, ಬಾರಿನಲ್ಲಿ ಕೂತು ಸಂಭಾಷಿಸಲು ಪ್ರಯತ್ನಿಸುವುದನ್ನು ಚಿತ್ರಿಸಿ, ಇಡೀ ಪ್ರಪಂಚದ ಪರಿಸ್ಥಿತಿಯನ್ನು ಕಾಣುವಂತೆ ಮಾಡಿದ್ದಾರೆ.

ಇವರು ಹಲವಾರು ಟಿ.ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತಮ್ಮ ಹಲವು ಸಿನಿಮಾಗಳಿಗೆ ತಾವೇ ಬರಹಗಾರನಾಗಿರುವುದಲ್ಲದೆ ತನ್ನೆಲ್ಲ ಕಿರುಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಮತ್ತು ಸಂಕಲನವನ್ನೂ ಮಾಡಿರುವುದು ವಿಶೇಷ.


ಇದನ್ನೂ ಓದಿ: ಪಿಕೆ ಟಾಕೀಸ್: ವ್ಯಕ್ತಿ ಮತ್ತು ಸಮಾಜದ ನಡುವಿನ ಅಮೂರ್ತ ಸಂಬಂಧಗಳ ಸಿನಿಯಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...