ರಾಮಕ್ಕ ಕತೆ ಪ್ರಾರಂಭಿಸುವುದನ್ನೆ ಕಾದು ಕುಳಿತಿದ್ದ ಮುಮ್ಮೊಕ್ಕಳು ಆಕೆಯ ಕೋಣೆಯಲ್ಲಿ ಕಣ್ಣು ಮಿಟುಕಿಸದೆ ಕುಳಿತಿದ್ದರು. ರಾಮಕ್ಕ ಒಮ್ಮೆ ಸುತ್ತಲೂ ಕಣ್ಣು ಆಡಿಸಿದಳು. ಕೋಣೆಯಲ್ಲಿ ಯಾವಾಗಲೂ ತನ್ನ ಕತೆಗೆ ಮುಂದೆ ಇರುತ್ತಿದ್ದ ತನ್ನ ಹಿರಿಯ ಮೊಮ್ಮಗನ ಮಗ ಶ್ರೀನಿವಾಸನು ಅವಳ ಕಣ್ಣಿಗೆ ಕಾಣಲಿಲ್ಲ. ಇದನ್ನು ಕಂಡು ತನ್ನ ಮೂರನೇ ಮೊಮ್ಮಗಳ ಮಗಳು ಸೌಜನ್ಯಳಿಗೆ ’ನಮ್ ಸೀನ ಎಲ್ಲೋದ ನೋಡೆ’ ಎಂದಳು. ಅಷ್ಟರಲ್ಲಿ ತನ್ನ ಕಾಲಿಗೆ ಮೆತ್ತಿದ್ದ ಸಗಣಿಯನ್ನು ತೊಳೆದು ಓಡೋಡಿ ಬಂದ ಶ್ರೀನಿವಾಸನು ’ಅಜ್ಜಿ ಕತೆ ಇನ್ನೂ ಶುರು ಮಾಡಿಲ್ಲ ತಾನೆ’ ಎಂದು ಕೇಳಿದನು. ಅದಕ್ಕೆ ಸೌಜನ್ಯ ’ಆಗಲೇ ಶುರು ಆಗಿ ಅರ್ಧ ಮುಗಿದಿತ್ತೋ ಆದ್ರೆ ನೀನು ಬಂದಿದ್ದಕ್ಕೆ ನಿಲ್ಲಿಸಿಬಿಡ್ತು ಅಜ್ಜಿ’ ಎಂದು ಕಿಚಾಯಿಸಿದಳು. ’ಆಗಲಿ ಬಿಡು ಈಗ ಮತ್ತೆ ಮೊದಲಿಂದ ಶುರು ಮಾಡು ಅಜ್ಜಿ’ ಎಂದು ಅಜ್ಜಿಗೆ ಆಜ್ಞೆ ಮಾಡಿದ ಸೀನ. ಆಗ ಹಿರಿಯ ಮೊಮ್ಮಗಳ ಮಗ ಪ್ರಸನ್ನ ’ಕತೆ ಇನ್ನೂ ಶುರು ಮಾಡಿಲ್ಲ, ನೀನು ಮೊದಲು ಕುಳಿತಿಕೋ’ ಎಂದನು. ಕತೆ ಕೇಳಲು ಅಣಿಯಾಗಿದ್ದ ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯ ಮರಿ ಸೈನ್ಯವು ಈ ಎಲ್ಲಾ ಮಾತುಗಳಿಗೆ ಮುಸು ಮುಸು ನಗುತ್ತಿದ್ದರೆ ಶ್ರೀನಿವಾಸ ಮಾತ್ರ ’ನೋಡು ನನಗಾಗಿ ಅಜ್ಜಿ ಇನ್ನೂ ಕತೆ ಶುರು ಮಾಡಿಲ್ಲ’ ಎಂದು ಮನಸ್ಸಿನಲ್ಲೇ ಹೇಳಿಕೊಂಡು, ’ಸದ್ಯ ಕತೆ ಇನ್ನೂ ಶುರು ಆಗಿಲ್ಲ, ಈಗ ಕತೆ ಹೇಳಜ್ಜಿ’ ಎಂದು ನಸುನಗುತ್ತ ಕುಳಿತುಕೊಂಡನು.
ರಾಮಕ್ಕ ಎಂದಿನಂತೆ ’ಇವೊತ್ತು ಯಾವ ಕತೆ ಹೇಳ್ಲಿ?’ ಎಂದು ಸಾಮಾನ್ಯವಾಗಿ ಕೇಳಿದಳು. ಅದಕ್ಕೆ ಅಲ್ಲಿದ್ದ ಒಬ್ಬೊಬ್ಬರೂ ಒಂದೊಂದು ಕತೆ ಹೇಳುವಂತೆ ಒತ್ತಾಯಿಸುತ್ತಿದ್ದರು. ಶ್ರೀನಿವಾಸ ಮತ್ತು ಸೌಜನ್ಯ ಇಬ್ಬರೂ ತಮ್ಮಕೈಯೇ ಮೇಲಾಗಬೇಕೆಂದು ಜೋರಾಗಿ ’ಕರಡಿ ಕತೆ ಅಜ್ಜಿ, ಕರಡಿಕತೆ’ ಎಂದು ಕೂಗಿದರು. ಕರಡಿ ಕತೆ ಕಟ್ಟುವಲ್ಲಿ ನಿಸ್ಸೀಮಳಾಗಿದ್ದ ರಾಮಕ್ಕ ಕರಡಿ ಕತೆಯನ್ನೇ ಹೇಳುವುದು ಎಂದು ನಿರ್ಧರಿಸಿ ಕತೆ ಆರಂಭಿಸಿದಳು. ’ಈಗ ಕರಡಿ ಸಿದ್ದಪ್ಪನ ಕತೆ ಹೇಳ್ತೀನಿ ಆಯ್ತಾ’ ಎಂದಳು ರಾಮಕ್ಕ. ಮಕ್ಕಳು ಸಮ್ಮತಿಸುತ್ತಾ ’ಹ್ಞೂಂ’ಗುಟ್ಟತೊಡಗಿದರು.
’ಒಂದು ದಿನ ಏನಾಯ್ತಪ್ಪ ಅಂದರೆ, ನಮ್ಮ ಊರಿನ ಬೆಟ್ಟದ ಆ ಕಡೆ ಇರೋ ಗೌಡನ ಮಗನಿಗೂ ಈ ಊರಿನ ಗೌಡನ ಮಗಳಿಗೂ ಮದುವೆ ಗೊತ್ತಾಗಿತ್ತು. ವಾಡಿಕೆ ಹಂಗೆ ಪಕ್ಕದ ಊರಿನ ಗೌಡನ ಮನೆಯ ಕೆಲಸಗಾರ ಸಿದ್ದಪ್ಪನಿಗೆ ಮದುವೆಯ ಗಂಡಿನ ದಿಬ್ಬಣ ನಾಳೆ ನಿಮ್ಮ ಊರಿಗೆ ಬರ್ತೈತೆ ಅಂತ ಹೇಳೋಕ್ಕೆ ಕಳ್ಸುದ್ರು. ಸಿದ್ದಪ್ಪನೋ ಮನೆಯ ಕೆಲಸವನ್ನೆಲ್ಲ ಸರಸರನೇ ಮುಗಿಸಿ ಟ್ರಂಕಿನಲ್ಲಿದ್ದ ತನ್ನ ಬಿಳಿ ಪಂಚೆ, ಶರಟನ್ನು ಧರಿಸಿ ತಾನೇ ಮದುವೆ ಗಂಡೋ ಎಂಬಂತೆ ಸಂಜೆಯ ಇಳಿ ಹೊತ್ತಿನಲ್ಲಿ ತನ್ನ ಊರು ಬಿಟ್ಟ. ಹುಣ್ಣಿಮೆಗೆ ಮೂರ್ನಾಲ್ಕು ದಿನ ಇದ್ದಿದರಿಂದ ಬೆಟ್ಟ ಹತ್ತಿ ಇಳಿಯುವುದು ಅವನಿಗೇನೂ ಕಷ್ಟ ಆಗಿರಲಿಲ್ಲ. ಹೀಗೆ ಬೆಟ್ಟ ಹತ್ಕೊಂಡು ಬರ್ತಾ ಬರ್ತಾ ಸಿದ್ದಪಂಗೆ ರಾತ್ರಿ ಆಯ್ತಿದ್ದಂಗೆಲ್ಲ ಹೊಟ್ಟೆ ಹಸಿವು ಹೆಚ್ಚಾಯ್ತಿತ್ತು.
ಇದೇ ಟೈಂಗೆ ದೂರದಿಂದ ಗಾಳಿಯಲ್ಲಿ ಘಮ ಘಮ ವಾಸ್ನೆ ಬರ್ತಾಯಿತ್ತು. ಮೊದಲೇ ಹಸ್ಕೊಂಡಿದ್ದ ಸಿದ್ದಪಂಗೆ ವಾಸ್ನೆ ಕುಡ್ದು ಹಸಿವು ಇನ್ನೂ ಜಾಸ್ತಿ ಆಯ್ತು. ಪಾಪ ಇವ್ನು ತಾನೇ ಏನು ಮಾಡಾನು, ಹೊಟ್ಟೆ ಹಸಿವು ತಾಳಲಾರದೆ, ವಾಸ್ನೆ ಬಂದ ದಾರಿ ಹಿಡ್ಕೋಂಡು ಹೊಂಟ. ಹೋದ… ಹೋದ… ಹೋದ… ಹಂಗೇ ಹೋಗಿ ನೋಡ್ತಾನೆ ಅಲ್ಲೊಂದು ಬಂಡೆ. ಬಂಡೆ ಮ್ಯಾಲೆ ಹಲಸಿನ ಹಣ್ಣು, ಬ್ಯಾಲದ ಹಣ್ಣು, ಜೇನುತುಪ್ಪ, ಹಿಂಗೆ ಮೂರನ್ನು ಸೇರ್ಸಿ ಮೂರು ದಪ್ಪ ದಪ್ಪದ ಉಂಡೆಕಟ್ಟಿ ಯಾರೋ ಇಟ್ಟಂಗಿತ್ತು. ಮೊದಲೇ ಹಸಿದಿದ್ದ ಸಿದ್ದಪಂಗೆ ತಡ್ಕೊಳಕ್ಕೆ ಆಗ್ಲಿಲ್ಲ. ಹೋಗಿದ್ದೆ ತಡ, ಏನ್ ಮಾಡ್ದ ಅಂದರೆ, ಆ ಮೂರೂ ಉಂಡೆನೂ ಒಂದೇ ಉಸಿರಿಗೆ ಗಪಗಪ ಅಂತ ತಿಂದ್ಬಿಟ. ತಿಂದೋನೇ ಮ್ಯಾಲಕ್ಕೆ ಎದ್ದು ಆಕಾಸ ನೋಡ್ಕೊಂಡು ’ಯಾರ್ ಮಾಡಿಟಿದ್ರೋ ಶಿವ್ನೆ ಅವ್ರ ಹೊಟ್ಟೆ ತಣ್ಣಗಿರ್ಲಿ ಅಂತಿದಂಗೇಯ ಕಿವಿಗೆ ಗುರ್ಗುರ್ಅಂತ ಶಬ್ದ ಆದಂಗೆ ಆಯ್ತು. ಆ ಹಲಸಿನ ಹಣ್ಣು, ಬ್ಯಾಲದ ಹಣ್ಣು, ಜೇನು ತುಪ್ಪದರುಚಿಗೆ ಮೈ ಮರೆತಿದ್ದ ಸಿದ್ದಪ್ಪನ ಕಿವಿ ಈಗ ನೆಟ್ಟಗಾಯ್ತು. ನೋಡ್ತಾನೆ ದೂರದಲ್ಲಿ ಒಂದು ಕರಡಿ ಅದರ ಮೂರು ಮರಿಗಳನ್ನ ಹೊತ್ಕೊಂಡು ಬರ್ತಾಯ್ತೆ. ಸಿದ್ದಪಂಗೆ ಈಗ ಅರಿವಿಗ್ ಬಂತು. ಹೋ… ಹೋ… ಆ ಮೂರೂ ಉಂಡೆ ಕಟಿಕ್ಕಿದ್ದು ಕರಡಿ. ಅದು ಅದ್ರು ಮರಿಗಳ್ನ ಕರ್ಕೊಂಡ್ ಬರೋಕ್ ಹೋಗಿತ್ತು ಅನ್ನಿಸ್ತದೆ. ಅಂತ ಗೊತ್ತಾಗಿದ್ದೆ ಅವನಿಗೆ ಎಲ್ಲಿಲ್ಲದ ಪೀಕಲಾಟ ಶುರು ಆಯ್ತು.’ ಎಂದಳು ರಾಮಕ್ಕ.
ಕತೆಗೆ ’ಹ್ಞೂಂ’ಗುಟ್ಟುವುದು ಅಭ್ಯಾಸವಾಗಿತಾವು ಹ್ಞೂಂಗುಡುತ್ತಿದ್ದೇವೆ ಎಂಬುದನ್ನೇ ಮರೆತಿದ್ದ ಮಕ್ಕಳಿಗೆ ಕುತೂಹಲ ತಾಳಲಾರದೆ ಎಲ್ಲರೂ ಒಕ್ಕೊರಲಿನಿಂದ ’ಮುಂದುಕ್ಕ್ ಏನಾಯ್ತಜ್ಜಿ..! ಮುಂದುಕ್ಕ್ ಏನಾಯ್ತಜ್ಜಿ..!’ಎಂದು ಕೇಳಿದರು. ಮಕ್ಕಳೆಲ್ಲರೂ ನಿದ್ರೆ ಮಾಡದೇ ಕತೆ ಕೇಳುತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡ ರಾಮಕ್ಕ ಕತೆಯನ್ನು ಮುಂದುವರೆಸಿದಳು.
’ಆಮ್ಯಾಕೆ ಏನಾಯ್ತಪ್ಪ ಅಂದ್ರೆ! ಸಿದ್ದಪ್ಪಂಗೆ ಭಯ ಶುರುವಾಯ್ತು. ಅಲ್ಲಾ ಮರಿ ಕರಡಿಗಳು ಬೇರ ಅವೆ. ನಾನ್ ನೋಡಿದ್ರೆ ಅದರ ಊಟನೆಲ್ಲ ತಿಂದ್ಬಿಟ್ಟಿದ್ದೀನಿ. ಇನ್ನು ನನ್ನ ಇದು ಬಿಟ್ಟಾತ ಅಂತ ದಿಗ್ಲುಗೊಂಡು ಓಡೋಗಿದ್ದೆ ಸರಸರ ಅಂತ ಮರ ಹತ್ಬಿಟ್ಟ. ಹತ್ತಿದೋನು ಏನ್ಮಾಡ್ದಾ, ಆ ಕರಡಿ ಏನ್ಮಾಡ್ತದೆ ಅಂತ ಮ್ಯಾಲಿಂದನೇ ನೋಡ್ತಿದ್ದ. ಆ ಕರಡಿನೋ ಮೂರೂ ಮರಿಗಳ್ನ ಕರ್ಕೊಂಡು ತಾನು ಉಂಡೆ ಮಾಡಿಟ್ಟಿದ್ದ ಜಾಗಕ್ಕೆ ಬಂತು. ಬಂದು ನೋಡ್ತದೆ ಅದು ಕಟ್ಟಿಕ್ಕಿದ್ ಉಂಡೆಗಳೇ ಇಲ್ಲ!’ ಎಂದು ನಿಲ್ಲಿಸಿದಳು ರಾಮಕ್ಕ.
’ಆಮ್ಯಾಲೆ ಏನ್ ಮಾಡ್ತು ಆ ಕರಡಿ’ ಕುತೂಹಲದಿಂದ ಕೇಳಿದಳು ಸೌಜನ್ಯ.
’ಆಮ್ಯಾಕೆ ಆ ಕರಡಿ ಸುತ್ತಲೂ ನೋಡ್ತದೆ, ಆಕಾಸ ನೋಡ್ಕೊಂಡು ಊಳಿಡ್ತದೆ. ಸ್ವಲ್ಪವೊತ್ತು ಹೀಗೆ ಮಾಡಿ ಆ ಕರಡಿ ’ಹೋ… ಹೋ… ಯಾರೋ ನನ್ ಮರಿಗೆ ಮಾಡಿಕ್ಕಿದ್ ಊಟನ್ನೆಲ್ಲ ತಿಂದ್ಬಿಟೌರೆ’ ಅನ್ಕೊಂಡಿದ್ದೇ ಹುಡ್ಕೋಕ್ಕೆ ಶುರು ಮಾಡ್ತು. ಆಗ್ಲೆ ಅದಕ್ಕೆ ಗೊತ್ತಾಗಿದ್ದು ಇಲ್ಲಿ ಯಾರೋ ಮನುಷ್ಯ ಬಂದು ಹೋಗೋನೆ ಅಂತ. ಗೊತ್ತಾಗಿದ್ದೇ ತಡ ಸಿದ್ದಪ್ಪ ಹೋಗಿದ್ ವಾಸ್ನೆ ಹಿಡ್ಕೊಂಡು ಅವ್ನು ಹತ್ತಿದ್ ಮರದ ಹತ್ತಿರಾನೇ ಬಂದ್ಬಿಡ್ತು. ಬಂದಿದ್ದೇಯಾ ಆ ಕರಡಿ ಏನ್ಮಾಡ್ತು? ಮರದ ಮ್ಯಾಲ್ ನೋಡ್ತದೆ, ಮರದ ಸುತ್ತ ಒಂದೇ ಸಮ ಸುತ್ತ್ತದೆ.’
ಇದನ್ನು ಕೇಳುತ್ತಿದ್ದ ಶ್ರೀನಿವಾಸನಿಗೆ ಅನುಮಾನ ಬಂದು ಅಜ್ಜಿಯ ಕತೆಯನ್ನು ನಿಲ್ಲಿಸಿ ಕೇಳಿದ. ’ಅಲ್ಲಾ ಅಜ್ಜಿ ಕರಡಿನೂ ಮರ ಹತ್ತ್ತದೆ ಅಂತ ನೀನೆ ಹೇಳಿದ್ದ ಅಲ್ವಾ. ಮತ್ತೆ ಆ ಕರಡಿ ಯಾಕೆ ಮರ ಹತ್ತ್ಲಿಲ್ಲ?’
ರಾಮಕ್ಕ ಒಮ್ಮೆ ನಕ್ಕು ’ಅಯ್ಯೋ ದಡ್ಡ ಮರಿ ಕರಡಿ ಮರಿಗಳು ಅದರ ಜೊತೆ ಇದ್ರೆ ಮರ ಹತ್ತಲ್ಲ ಕಣೋ’ ಎಂದಳು. ಅದಕ್ಕೆ ಶ್ರೀನಿವಾಸನು ’ಯಾಕ್ ಮರ ಹತ್ತಲ್ಲ’ ಎಂದು ಮರುಪ್ರಶ್ನೆ ಹಾಕಿದ. ಇಂತಹ ಪ್ರಶ್ನೆಗಳನ್ನು ಬಹಳಾ ಸಲ ಕೇಳಿದ್ದ ರಾಮಕ್ಕ ’ಯಾಕಂದ್ರೆ ಅಮ್ಮ ಕರಡಿ ಮರ ಹತ್ಬಿಟ್ರೆ ಮರಿಗಳ್ಗೆ ಯಾರಾದ್ರೂ ಏನಾದ್ರೂ ಮಾಡ್ಬಿಟ್ರೆ ಅಂತ ಭಯ ಅದಕ್ಕೆ’ ಅಂದಳು. ಕತೆಯ ರಸಭಂಗಕ್ಕೆ ಅಡ್ಡಿ ಮಾಡಿದ ಶ್ರೀನಿವಾಸನಿಗೆ, ಸೌಜನ್ಯ ’ಏಯ್ ನಿನ್ ಪ್ರಶ್ನೆನೆಲ್ಲ ಕತೆ ಮುಗಿದ್ ಮೇಲೆ ಕೇಳು’ ಎಂದು ಗದರಿಸಿ, ಅಜ್ಜಿಗೆ ’ಅಜ್ಜಿ ನೀನು ಕತೆ ಹೇಳಜ್ಜಿ’ ಎಂದು ಹೇಳಿದಳು. ಇವರನ್ನು ನೋಡಿ ಮುಗುಳು ನಗುತ್ತಾ ರಾಮಕ್ಕ ಕತೆಯನ್ನು ಮುಂದುವರೆಸಿದಳು.
’ಕರಡಿ ಮರ ಸುತ್ತುತೈತೆ, ಆಕಾಸಕ್ಕೆ ಮಕ ಮಾಡಿ ಊಳಿಡ್ತೈತೆ. ಇದನ್ನಕಂಡ ಸಿದ್ದಪ್ಪ ಮರದ ಮ್ಯಾಲೆನೆ ಒಂದು ಎರಡು ಎಲ್ಲಾ ಮಾಡ್ಕೊಂಡು ಅದು ಎಲ್ಲಿ ಕೆಳಗೆ ಬಿದ್ರೆ ನಾನು ಮ್ಯಾಲೆ ಇರೋದು ಅದಕ್ಕೆ ಗೊತ್ತಾಗ್ಬಿಡ್ತದೋ ಅಂತ ಅವ್ನ ಹೊಸ ಪಂಚೆನಾಗೆ ಅದನ್ನೆಲಾ ಹಿಡ್ಕೊಂಡು ದಿಗ್ಲು ಬಡ್ಕೊಂಡು ಕುಂತ್ಕೊಂಬಿಟ್ಟ. ಅಷ್ಟೊತ್ತಿಗೆ ಬೆಳಕು ಅರಿತು.’
’ಇತ್ತಕಡೆ ಗೌಡನ ಮನೆಯಲ್ಲಿ ಯಾಕೆ ಮದುವೆ ಶಾಸ್ತ್ರದ ಪ್ರಕಾರ ಗಂಡಿನ ಕಡೆ ಕೆಲಸಗಾರ ಇನ್ನು ಬಂದಿಲ್ವೆಲ್ಲಾ ಅಂತ ಯೋಚ್ನೆ ಮಾಡೋಕ್ಕೆ ಶುರು ಹಚ್ಕೊಂಡ್ರು. ಅತ್ಲಾಗೆ ಬೆಟ್ಟಕ್ಕೆ ದನಕುರಿ ಅಟ್ಕೊಂಡು ಹೋಗೊ ಹೈಕ್ಳುಗಳೆಲ್ಲ ಬೆಟ್ಟಕ್ಕೆ ಹೋಯ್ತಾ ಹೋಯ್ತಾ ಈ ಕರಡಿ ಮರ ಸುತ್ತೊದನ್ನ ನೋಡಿ, ಏನೋ ಆಗದೆ ಅನ್ಕೊಂಡು ಬಂದಿದೆಯಾ ಗೌಡನಿಗೆ ಸುದ್ದಿ ಮುಟ್ಸಿದ್ರು. ಊರ ಗೌಡನೂ ಎಲ್ಲಾರ್ಗೂ ದೊಣ್ಣೆಗಳ್ನ ತಗೊಳಕ್ಕೆ ಹೇಳಿ ಬೆಟ್ಟಕ್ಕೆ ಹೋದ. ಹೋದ್ರೆ ಕರಡಿ ಮರಿಗಳ ಜೊತೆ ಇನ್ನೂ ಮರ ಸುತ್ತುತಾನೆ ಅದೆ. ಆಗ ಊರ ಜನ ಎಲ್ಲಾ ಸೇರ್ಕೊಂಡು ಜೋರಾಗಿ ಶಬ್ದ ಮಾಡಿ ಕರಡಿನ ಓಡಿಸಿ ನೋಡ್ತಾರೆ ಸಿದ್ದಪ್ಪ ಮರದ ಮ್ಯಾಲೆ ಕುಂತೌನೆ. ಆಮ್ಯಾಲೆ ಅವ್ನ ಇಳ್ಸಿ ಊರಿಗೆ ಕರ್ಕೊಂಡು ಬಂದ್ರು ಎಂದು ರಾಮಕ್ಕ ಕತೆ ಮುಗಿಸಿದಳು.’
ಅಷ್ಟರಲ್ಲಿ ರಾಮಕ್ಕನ ಹಿರಿ ಮೊಮ್ಮೊಗನ ಹೆಂಡತಿ ಗೌರಮ್ಮ ಬಂದು ’ಎಯ್ ಈಗ ಕತೆ ಕೇಳಿದ್ದು ಸಾಕು. ಅಜ್ಜಿ ಊಟ ಮಾಡ್ಲಿ, ನೀವೆಲ್ಲ ಹೋಗಿ ಉಂಡು ಮಲ್ಕೊ ಹೋಗಿ’ ಎಂದು ಗದರಿಸಿದಳು. ಗೌರಮ್ಮನಿಗೆ ಎದುರು ಮಾತಾಡಲು ಭಯ ಪಡುತ್ತಿದ್ದ ಮಕ್ಕಳು ರಾಮಕ್ಕನಿಗೆ ’ಅಜ್ಜಿ ಊಟ ಮಾಡಿದ ಮೇಲೆ ಮತ್ತೊಂದ್ ಕತೆ ಹೇಳಜ್ಜಿ’ ಎಂದು ಒಬ್ಬೊಬ್ಬರೇ ಹೋಗತೊಡಗಿದರು.

ಪುನೀತ್ ಕುಮಾರ್
ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ, ರಂಗನಟ. ನಾಟಕಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಇವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ಪಾದ್ರಿ ಜೀವರತ್ನಯ್ಯ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.


