Homeಕಥೆಕೆಂಪು ಹಳದಿ ಟಿ-ಶರ್ಟ್ ಮತ್ತು ಟಿಷ್ಯೂ ಪೇಪರ್; ರಾಜಶೇಖರ್ ಅಕ್ಕಿ ಬರೆದ ಕಥೆ

ಕೆಂಪು ಹಳದಿ ಟಿ-ಶರ್ಟ್ ಮತ್ತು ಟಿಷ್ಯೂ ಪೇಪರ್; ರಾಜಶೇಖರ್ ಅಕ್ಕಿ ಬರೆದ ಕಥೆ

- Advertisement -
- Advertisement -

ಇವನ್ಯಾಕೆ ಇಷ್ಟು ನಗ್ತಿದಾನೆ ಎಂದು ಯೋಚಿಸಿದಳು ಆಕೆ. ಉತ್ತರ ಕಂಡುಹಿಡಿಯುವುದು ಅಷ್ಟು ಕಷ್ಟವಾಗಲಿಲ್ಲ. ಇಂತಹ ಸಂದರ್ಭಗಳಲ್ಲಿ ಮುಗುಳ್ನಗುವುದು, ಕೆಟ್ಟ ಕೆಟ್ಟ ಜೋಕ್‌ಗಳಿಗೂ ದೊಡ್ಡದಾಗಿ ನಗುವುದು ಅವನಿಗೆ ರೂಢಿಯಾಗಿತ್ತು. ಅದು ಅವನ ಟ್ರೇನಿಂಗ್. ಆದರೆ ಆ ತರಬೇತಿಯ ಬಗ್ಗೆ ಅವನಿಗೆ ಅರಿವಿದೆಯೋ ಅಥವಾ ತನಗೆ ಗೊತ್ತಿಲ್ಲದೇ ಈ ರೀತಿ ತರಬೇತಿಗೊಂಡಿದ್ದಾನೋ ಎಂಬ ಪ್ರಶ್ನೆಗೆ ಉತ್ತರ ಆಗ ಸಿಗಲಿಲ್ಲ. ಅಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಮಯವೂ ಅದಾಗಿರಲಿಲ್ಲ.

ಅದೊಂದು ಒಳ್ಳೇ ಕಲ್ಯಾಣಮಂಟಪ, ಸುಮಾರು ಒಂದೂವರೆ ಲಕ್ಷ ಬಾಡಿಗೆ. ಗಂಡಿನವರು ಮತ್ತು ಹೆಣ್ಣಿನವರಿಬ್ಬರೂ ಸೇರಿ ಮದುವೆಯ ಖರ್ಚು ನಿಭಾಯಿಸುತ್ತಿದ್ದರಿಂದ ಅಷ್ಟಾಗಿ ಹೊರೆಯಾಗಿರಲಿಲ್ಲ. ಜನಾನೋ ಜನ; ಇಷ್ಟೆಲ್ಲ ಜನಕ್ಕೆ ಹೇಗೆ ಬರಕ್ಕೆ ಸಾಧ್ಯವಾಗುತ್ತೆ, ಇವರ್‍ಯಾಕೆ ಇಷ್ಟು ಖುಷಿಯಲ್ಲಿದ್ದಾರೆ, ಎಲ್ಲರೂ ಹೈ ಸ್ಪಿರಿಟ್‌ನಲ್ಲಿ, ಎಲ್ಲರೂ ಕೆಟ್ಟ ಕೆಟ್ಟ ಹಳೆ ಜೋಕುಗಳನ್ನೇ ಹೊಡೆಯುವರು, ಅವುಗಳಿಗೆ ಸಿಗುತ್ತಿದ್ದ ನಗುವೂ ಆ ಜೋಕುಗಳಿಗೆ ತಕ್ಕಂತೆ. ಗಂಡಿನ ಕಡೆಯವರೆಲ್ಲರೂ ಒಂದೆರಡು ನಿಮಿಷ ಅವಳ ಕಡೆ ದಿಟ್ಟಿಸಿ ನೋಡುವರು. ಇರಲಿ, ನನ್ನನ್ನು ಚೆಕ್ ಮಾಡುತ್ತಿದ್ದಾರೆ, ಇಂತಹ ಒಳ್ಳೆ ಗಂಡಿಗೆ ತಕ್ಕ ಹೆಂಡತಿಯೋ ಅಲ್ಲವೋ ಎಂಬುದನ್ನು ಅಳೆಯುತ್ತಿದ್ದಾರೆ, ನೋಡಲಿ ಬಿಡು ಎಂದಳು.

ಅದೇನೂ ಅಂತಹ ಬೇಸಿಗೆಯ ದಿನವಲ್ಲ, ಆದರೂ ಅಷ್ಟು ಜನ ಸೇರಿದ್ದರಿಂದ ವಿಪರೀತ ಸೆಕೆ. ತನ್ನ ಗಂಡನಾಗಲಿರುವ ಅಥವಾ ಈಗಷ್ಟೇ ಗಂಡನಾದ ವ್ಯಕ್ತಿಯನ್ನು ನೋಡಲೇ ಅಥವಾ ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡ ಜನರನ್ನು ನೋಡಬೇಕೆ ಎನ್ನುವ ತೊಳಲಾಟದಲ್ಲಿದ್ದಾಗ ಅವನು ಮತ್ಯಾರನ್ನೋ ಪರಿಚಯಿಸುತ್ತಿದ್ದ. ಆಗ ಅವಳೂ ಅಷ್ಟೇ ಯಶಸ್ವಿಯಾಗಿ ಮುಗುಳ್ನಕ್ಕು, ಆಸಕ್ತಿ ತೋರಿಸಿ, ಅವರ ತೊಟ್ಟ ಬಟ್ಟೆ ಗಮನಿಸುತ್ತ ಅವರ್‍ಯಾವಾಗ ಮುಂದಕ್ಕೆ ಹೋಗುತ್ತಾರೋ ಎಂದು ಕಾಯುತ್ತಿದ್ದಳು. ಅವಳೆಷ್ಟೇ ಪ್ರಯತ್ನಪಟ್ಟರೂ ಮದುವೆಗೆ ಬಂದಿದ್ದ ಜನರ ಬಟ್ಟೆಗಳನ್ನು ಗಮನಿಸಿದೇ ಇರಲು ಆಗುತ್ತಿದ್ದಿಲ್ಲ ಆಕೆಗೆ.

ಯಾಕೆ ಎಲ್ಲರೂ ಇಷ್ಟೊಂದು ಕೆಟ್ಟ ಡ್ರೆಸ್ ಸೆನ್ಸ್ ಹೊಂದಿದ್ದಾರೆ ಎಂಬ ವಿಚಾರ ಬಂದಕೂಡಲೇ ತಾನು ಕ್ಲಾಸಿಸ್ಟ್ ಆಗುತ್ತಿದ್ದೇನೆ, ಹೀಗೆಲ್ಲ ಜನರನ್ನು ಅಳೆಯಬಾರದು ಎಂದುಕೊಳ್ಳುತ್ತಿದ್ದಳು. ಆದರೆ ಕೆಂಪು ಹಳದಿ ಬಣ್ಣದ ಟಿ-ಶರ್ಟ್ ಹಾಕಿ ಜೀನ್ಸಿನಲ್ಲಿ ಸಿಗಿಸಿ ಎದುರಿಗೆ ಬಂದು ಪರಿಚಯಿಸಿಕೊಂಡಾಗ ಆ ಪುರುಷನ ಜನ್ಮಜಾಲಾಡದೇ ಇರಲು ಸಾಧ್ಯವಾಗಲಿಲ್ಲ. ಎಲ್ಲೆಲ್ಲೋ ಹೋಗಿ ಬಂದಿದ್ದೀಯಾ, ಎಷ್ಟೆಲ್ಲ ದುಡ್ಡು ಗಳಿಸಿದ್ದೀಯಾ, ಸ್ವಲ್ಪವಾದರೂ ಜಗತ್ತು ನೋಡಬಹುದಿತ್ತಲ್ಲ, ಕಣ್ಣು ತೆರೆಯಬಹುದಿತ್ತಲ್ಲ, ಇಲ್ಲ ಅವನಿಗೆ ಅವಶ್ಯಕತೆಯ ಬೀಳಲಿಲ್ಲ, ಯಾರೂ ಕಪಾಳಕ್ಕೂ ಕೊಡಲಿಲ್ಲ, ಮತ್ಯಾಕೆ ಬಿಡ್ತಾನೆ ಈ ಟಿ-ಶರ್ಟನ್ನು. ಅಷ್ಟರಲ್ಲಿ ಅವಳ ಅಮ್ಮ ಬಂದು ಟಿಷ್ಯೂ ಪೇಪರ್ ಕೊಟ್ಟು ಮುಖ ಒರೆಸಿಕೊಳ್ಳುವಂತೆ ಹೇಳಿದಳು, ಹೌದು ಮುಖವೆಲ್ಲ ಬೆವರಾಗಿತ್ತು; ಒರೆಸಿಕೊಂಡಳು. ಗಂಡ ನೋಡಿ ಮುಗುಳ್ನಕ್ಕ. ಅವನ್ಯಾಕೆ ನಕ್ಕ ಎಂದು ಕೇಳಲಿಲ್ಲ, ತನ್ನಲ್ಲಿ ಆ ಪ್ರಶ್ನೆ ಮೂಡಿದ್ದನ್ನೂ ತೋರಿಸಿಕೊಳ್ಳದೆ ಅವಳು ಮುಗಳ್ನಕ್ಕಳು.

ಜನ ಬಂದು ತಮ್ಮ ಹಳದಿ ಹಲ್ಲುಗಳನ್ನು ತೋರಿಸುವುದರಿಂದ ಅವಳು ಅಷ್ಟೇನು ವಿಚಲಿತಲಾಗದಿದ್ದಿಲ್ಲ. ಅವಳಿಗೆ ಭಯ ಹುಟ್ಟಿಸಿದ್ದು ಅವನ ನಗುಮುಖ. ಅವನು ತನ್ನ ರೂಢಿಗೆ ಅನುಗುಣವಾಗಿ ನಗುತ್ತಿದ್ದಾನೋ ಅಥವಾ ಅವನು ನಿಜವಾಗಿಯೂ ಖುಷಿಯಾಗಿದ್ದಾನೋ ಎಂಬ ವಿಚಾರ ಅವಳಲ್ಲಿ ಆತಂಕ ಹುಟ್ಟಿಸಿತು. ಅವನು ನಿಜವಾಗಿಯೂ ಸಂತಸದಲ್ಲಿದ್ದರೆ?

ಮತ್ತೊಮ್ಮೆ ಅವನೆಡೆ ನೋಡಿದಳು. ಅವನು ಮತ್ತೊಮ್ಮೆ ಮುಗುಳ್ನಕ್ಕ. ಅತ್ಯಂತ ನಿಷ್ಕಲ್ಮಷವಾದ ನಗೆ ಅನಿಸಿತು. ಇವನು ನಿಜವಾಗಿಯೂ ಒಳ್ಳೆಯ ಮನುಷ್ಯನೇ? ಈ ಪ್ರಶ್ನೆಗಳು ಅವಳ ಆತಂಕವನ್ನು ಹೆಚ್ಚಿಸುತ್ತಲೇ ಹೋದವು. ಅಮ್ಮ ಮತ್ತೆ ಬಂದು ಡ್ರೆಸ್ ಸರಿ ಮಾಡಿದಳು. ಯಾರ್‍ಯಾರೋ ಬಂದು ಕೈಯಲ್ಲಿ ಉಡುಗೊರೆಗಳನ್ನು, ಎನವಲಪ್‌ಗಳನ್ನು ಕೊಟ್ಟು ಮುಂದೆ ಹೋಗುತ್ತಿದ್ದರು. ಮೊದಲು ನಾಲ್ಕೈದು ಅತಿಥಿಗಳಿಗೆ ’ಇದ್ಯಾಕೆ, ಬೇಡ’ ಎಂತೆಲ್ಲ ಪ್ರತಿಭಟಿಸಿದ್ದಳು. ಆದರೆ ಅದಕ್ಕೆ ತಗಲುವ ಎನರ್ಜಿ, ಅದನ್ನು ಇಸಿದುಕೊಂಡು ತೆಪ್ಪಗೆ ಇರಬೇಕಾಗುವುದಕ್ಕೆ ತಗಲುವ ಎನರ್ಜಿಗಿಂತ ತುಂಬಾ ಕಡಿಮೆಯಾದುದರಿಂದ ಏನೇನು ಕೊಡುತ್ತಾರೋ ಅದನ್ನೆಲ್ಲ ದೂಸರಾ ಮಾತಿಲ್ಲದೇ ಇಸಿದುಕೊಂಡು ಪಕ್ಕದಲ್ಲಿ ನಿಂತಿದ್ದ ತನ್ನನ್ನು ’ತಂಗಿ’ ಎಂದು ಕರೆದುಕೊಳ್ಳುತ್ತಿದ್ದವಳ ಕೈಗೆ ಹಸ್ತಾಂತರಿಸುತ್ತಿದ್ದಳು. ಅವಳನ್ನು ನಂಬಬಹುದು ಎಂದು ಅಮ್ಮ ಮುಂಚೆಯೇ ಹೇಳಿದ್ದಳು. ಅಪ್ಪ ಬಂದ ಗೆಸ್ಟ್‌ಗಳನ್ನು ಸರಿಯಾಗಿ ಬರಮಾಡಿಕೊಳ್ಳಬೇಕೆಂದು ಮಂಟಪದ ಗೇಟಿನಲ್ಲಿಯೇ ನಿಂತಿದ್ದ. ಆಗಾಗ ಬಂದು ನೋಡಿ ನಗುತ್ತಿದ್ದ, ಅಮ್ಮನೊಂದಿಗೆ ಮಾತನಾಡಿ ಒಂದಿಷ್ಟು ಬೈಸಿಕೊಂಡು ಮತ್ತೆ ಎಲ್ಲೋ ಹೋಗುತ್ತಿದ್ದ. ಅವನೂ ಖುಷಿಯಾಗಿದ್ದಾನೆ ಅನಿಸಿತು. ಒಟ್ಟಾರೆ ಎಲ್ಲರೂ, ಅಪ್ಪ, ಅಮ್ಮ, ಅಣ್ಣ, ಗಂಡ, ಸಂಬಂಧಿಕರು, ಅತಿಥಿಗಳು ಎಲ್ಲರೂ ಖುಷಿಯಾಗಿದ್ದರು.

ತನ್ನ ಸಹೋದ್ಯೋಗಿಗಳು, ಗೆಳೆಯರೂ ಒಂದಿಷ್ಟು ಜನರು ಬಂದಿದ್ದರು. ಅವರನ್ನು ಇವನಿಗೆ ಪರಿಚಯಿಸಿದಾಗ ಅವನು ಅತಿ ಉತ್ಸಾಹದಿಂದ ಮಾತನಾಡಿದ್ದ. ಇವಳನ್ನು ನೋಡಿ ಗೆಳೆಯರು ಮುಗುಳ್ನಕ್ಕರು. ಆ ನಗೆಯ ಅರ್ಥ ಇವಳಿಗೆ ಗೊತ್ತಿತ್ತು. ಇವಳೂ ಮುಗುಳ್ನಕ್ಕಳು. ಗೆಳಯರು ಹೋಗಿ ಸ್ವಲ್ಪ ದೂರದಲ್ಲೇ ಕುಳಿತುಕೊಂಡರು. ಮೂವರು ಮಾತ್ರ ಮದುವೆಯ ಎಲ್ಲಾ ಶಾಸ್ತ್ರ ಮುಗಿದು, ಎಲ್ಲರೂ ಛತ್ರದಿಂದ ಹೊರಬೀಳುವ ತನಕ ಅಲ್ಲಿಯೇ ಇದ್ದರು, ಅವಳು ಅವರೆಡೆ ನೋಟ ಬೀರಿದಾಗೊಮ್ಮೆ ಮುಗುಳ್ನೆಗೆ ಬೀರುತ್ತ.

ಛತ್ರದಲ್ಲಿ ಜನ ಕಡಿಮೆಯಾದರು. ಎಲ್ಲರೂ ಊಟ ಮಾಡಿ ಒಬ್ಬೊಬ್ಬರಾಗಿ ಒಲ್ಲದ ಮನಸ್ಸಿನಂತೆ ಹೊರಟಂತೆ ಭಾಸವಾಯಿತು. ಒಳ್ಳೆಯ ಪಿಚ್ಚರ್ ಬೇಗನೇ ಮುಗೀತಲ್ಲ ಎಂಬ ಬೇಸರದಲ್ಲಿ ಎದ್ದು ಹೊರಟರು ಎಂದೆನಿಸಿತು ಇವಳಿಗೆ. ಜನರು ಹೊರಟಂತೆ ಇವಳ, ಮನೆಯವರ ಟೆನ್ಷನ್‌ಗಳು ಬದಲಾಗತೊಡಗಿದ್ದವು. ಮದುವೆ ಎಂದರೆ ಕೆಲಸಗಳ ರಾಶಿ. ಹೇಗೋ ಆಗುತ್ತೆ ಎಂದು ಇವಳಿಗೆ ತಿಳಿದಿತ್ತು ಹಾಗಾಗಿ ಹೆಚ್ಚು ಟೆನ್ಷನ್ ತೆಗೆದುಕೊಳ್ಳಲಿಲ್ಲ. ಅದರೊಂದಿಗೆ ಇವಳೂ ಕೆಲಸ ಮಾಡಲು ಶುರು ಮಾಡಿ ಅನೇಕ ವರ್ಷಗಳೇ ಕಳೆದಿದ್ದರಿಂದ ಹಣಕಾಸಿನ ತೊಂದರೆ ಅಷ್ಟಾಗಿ ಇರಲಿಲ್ಲ. ಆದರೂ ಅಪ್ಪ ಎಲ್ಲಾ ಖರ್ಚನ್ನು ತಾನೇ ಮಾಡುತ್ತೇನೆಂದು ಪಟ್ಟು ಹಿಡಿದು, ಎಲ್ಲಕ್ಕೂ ತಾನೇ ದುಡ್ಡು ಕೊಟ್ಟಿದ್ದ. ಹೌದು, ಇದು ಅವರ ಜವಾಬ್ದಾರಿ, ಇದೆಲ್ಲಾ ಬೇಕಾಗಿದ್ದು ಅವರಿಗೆ ಎಂದು ಇವಳೂ ಅಷ್ಟಾಗಿ ಪ್ರತಿಭಟಿಸಿರಲಿಲ್ಲ.

ಆದರೆ ಇವನ ಮಗುಳ್ನಗೆಗೆ ಕೊನೆಯೇ ಕಾಣಲಿಲ್ಲ. ನಾನು ಕ್ರೂರಿ ಮನುಷ್ಯಳಾ ಎಂತಲೂ ಒಂದೆರಡು ಸಲ ಅನಿಸಿತು. ಎರಡೇ ತಿಂಗಳ ಹಿಂದೆ ಅವನನ್ನು ಭೇಟಿಯಾಗಿದ್ದು. ಈಗ ಆಗಲಿಲ್ಲ ಎಂದರೆ ತುಂಬಾ ಕಷ್ಟ ಎಂದು ಈ ಮದುವೆಯನ್ನು ಸಾಧ್ಯವಾಗಿಸಲು ಇವಳ ಮನೆಯವರು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದ್ದರು. ಆ ಕೆಲವು ತಿಂಗಳು ಪ್ರತಿಭಟಿಸುವುದನ್ನು ಬಿಟ್ಟಿದ್ದಳು. ತನ್ನ ಹೆತ್ತವರಿಗೆ ಸಂತೋಷ ನೀಡಿದ್ದಳು. ಆದರೆ ಅವನ ನಗೆಯ ಕಾರಣದಿಂದ ಶುರುವಾದ ಆತಂಕ ಹೆಚ್ಚುತ್ತಲೇ ತೊಡಗಿತು. ಮೂರ್ನಾಲ್ಕು ಸಲ ಮಾತ್ರ ಮಾತನಾಡಿದ್ದಳು, ಅದೂ ಕಾಟಾಚಾರಕ್ಕೆ.

ಮದುವೆಯಾಗಿ ಸರಿಯಾಗಿ ಒಂದು ವರ್ಷವಾಗಿತ್ತು. ಅಂದು ಅಧಿಕೃತವಾಗಿ ವಿಚ್ಛೇದಿತರಾಗುವವರಿದ್ದರು. ಇಬ್ಬರೂ ಕೋರ್ಟಿಗೆ ಬರಲೇಬೇಕಿತ್ತು. ಬಂದ. ಅಂದು ಅವನು ಮುಗುಳ್ನಗಲಿಲ್ಲ. ಈ ದಾಂಪತ್ಯ ಜೀವನ ಉಳಿಯಲಿ ಎಂದು ತನಗಾದಷ್ಟು ಪ್ರಯತ್ನ ಪಟ್ಟಿದ್ದ ಹಾಗಾಗಿ ಅವನು ಮುಗುಳ್ನಗದೇ ಇರಲು ಸೂಕ್ತ ಕಾರಣಗಳಿದ್ದವು. ಒಂದಿಷ್ಟು ಸಿಟ್ಟು ನೋವನ್ನೂ ಪ್ರದರ್ಶಿಸುತ್ತಿದ್ದ. ಪಾಪ ಅನಿಸಿತು ಇವಳಿಗೆ. ಆಟ ಆಡುವಾಗ ಯಾರೋ ಚೀಟಿಂಗ್ ಮಾಡಿ ಗೆದ್ದಾಗ ಸೋತ ಮಗು ಹೇಗೆ ವರ್ತಿಸುತ್ತೋ, ಅದೇರೀತಿ ಮಾಡುತ್ತಿದ್ದ ಅನಿಸಿತು ಇವಳಿಗೆ. ’ಅಯ್ಯೋ, ನೀನು ಗೆದ್ದಿದ್ದೀಯ ಕಣೋ, ನಿನ್ನ ಕಲ್ಪನೆಯಲ್ಲಿದ್ದ ಗೆಲುವು ಎಂದಿಗೂ ಸಾಧ್ಯವಾಗುವಂತಿದ್ದಿಲ್ಲ, ಇದೇ ನಿನ್ನ ಗೆಲುವು, ಅರ್ಥ ಮಾಡಿಕೋ’ ಎಂದು ಹೇಳಬೇಕು ಅನಿಸಿತು ಅವಳಿಗೆ. ಅವನು ಧರಿಸಿದ್ದ ಕೆಂಪು ಹಳದಿ ಟಿ-ಶರ್ಟನ್ನೇ ನೋಡುತ್ತ ನಿಂತಳು. ಕೋರ್ಟ್‌ನ ಕ್ಲರ್ಕ್ ಹೇಳಿದ ಕಡೆ ಸಹಿ ಮಾಡಿದಳು. ಅವನೂ ಸಹಿ ಮಾಡಿದ.

ಅವನೊಂದಿಗೆ ಅವನ ಕುಟುಂಬದವರು ಬಂದಿದ್ದರು. ಕೆಲವರು ಇವಳನ್ನು ದುಷ್ಟೆಯಂತೆ ನೋಡಿದರೆ, ಇನ್ನೂ ಕೆಲವರು ಪ್ರೀತಿಯಿಂದಲೇ ನೋಡಿದರು. ಇವಳು ಯಾರನ್ನೂ ಜೊತೆಗೆ ಕರೆತಂದಿದ್ದಿಲ್ಲ. ಆದರೂ ಆ ಮೂರು ಸ್ನೇಹಿತರು ಬಂದು ಕೋರ್ಟಿನ ಕೋಣೆಯ ಹೊರಗೆ ನಿಂತಿದ್ದರು. ನೋಡಿ ಮುಗುಳ್ನಕ್ಕರು. ಮನೆಗೆ ಲಿಫ್ಟ್ ಕೊಡುವುದಾಗಿ ಕರೆದರು. ’ಸ್ವಚ್ಛಂದ ಗಾಳಿಯಲ್ಲಿ ತೇಲುವುದು’ ಎಂದು ಬರೆಯುತ್ತಾರಲ್ಲ ಲೇಖಕರು ಅದು ಇದೇನಾ ಎನ್ನುತ್ತ ಕೊಚ್ಚೆ ನೀರನ್ನು ದಾಟುತ್ತ, ಮುಖದ ಮೇಲೆ ಬಿದ್ದಿದ್ದ ಧೂಳನ್ನು ಸ್ನೇಹಿತೆ ಕೊಟ್ಟ ಟಿಷ್ಯೂ ಪೇಪರಿನಿಂದ ಒರೆಸಿಕೊಳ್ಳುತ್ತ ಅವರ ಕಾರು ಹತ್ತಿದಳು.

ರಾಜಶೇಖರ್‌ ಅಕ್ಕಿ

ರಾಜಶೇಖರ ಅಕ್ಕಿ
ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಕಿ ಅಭಿನಯ, ಚಿತ್ರಕಥೆ ಬರಹ ಕಲಿಸಿಕೊಡುತ್ತಾರೆ.


ಇದನ್ನೂ ಓದಿ: ಪ್ರಬಂಧ; ನನಗೆ ದೆವ್ವ ಬಿಡಿಸಿದ ಕಥೆ: ಪ್ರತಾಪ್ ಹುಣಸೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...