ಕೋವಿಡ್ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿದ್ದರೂ ಟೈಮ್ಸ್ ನೌ ಮಾತ್ರ ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಟೈಮ್ಸ್ ನೌ ಇಂಗ್ಲಿಷ್ ಚಾನೆಲ್ನ ಮಾಜಿ ಮತ್ತು ಹಾಲಿ ವರದಿಗಾರರು, ಉದ್ಯೋಗಿಗಳು ಸಂಪಾದಕ ಮಂಡಳಿಗೆ ಖಾರವಾದ ಪತ್ರವೊಂದನ್ನು ಬರೆದಿದ್ದಾರೆ. ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ಆಳುವ ಪಕ್ಷ ಮತ್ತು ಮೋದಿಯವರ ಹಿತ ಕಾಪಾಡಲು ಜನರ ಸಮಸ್ಯೆಗಳನ್ನು ಹೇಗೇ ಮರೆಯುತ್ತಿವೆ ಎಂಬುದಕ್ಕೆ ಈ ಪತ್ರ ಸಾಕ್ಷಿಯಾಗಿದೆ. ಅದರ ಕನ್ನಡ ಅನುವಾದ ಇಲ್ಲಿದೆ.
We are tired, dismayed, upset, angry and disillusioned looking at all that is unfolding around us and we have never felt so helpless. As journalists we were taught one thing: Always be on the side of the people. Always be on the side of humanity.
— Rohin Kumar (@rohinverma2410) April 24, 2021
ರಾಹುಲ್ ಶಿವಶಂಕರ್, ನವಿಕಾ ಕುಮಾರ್, ಪದ್ಮಜಾ ಜೋಶಿ ಇವರಿಗೆ,
ಗೌರವಾನ್ವಿತ ಸರ್ / ಮೇಡಂ
ಟೈಮ್ಸ್ ನೌನ ತೊಂದರೆಗೀಡಾದ ಮತ್ತು ಭ್ರಮನಿರಸನಗೊಂಡ ನೌಕರರು ಈ ಪತ್ರ ಬರೆಯುತ್ತಿದ್ದೇವೆ.
ಟೈಮ್ಸ್ ನೌ ನ ಹಿಂದಿನ ಮತ್ತು ಪ್ರಸ್ತುತ ಉದ್ಯೋಗಿಗಳಾದ ನಾವು ಪತ್ರಿಕೋದ್ಯಮದ ಮೂಲ ನೀತಿ ಮತ್ತು ಮೌಲ್ಯಗಳ ಬಗ್ಗೆ ಚಾನೆಲ್ನ ಸಂಪಾದಕರಿಗೆ ನೆನಪಿಸಲು ಮುಕ್ತ ಪತ್ರ ಬರೆಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ. ನಮ್ಮ ಸುತ್ತಲೂ ತೆರೆದುಕೊಳ್ಳುತ್ತಿರುವ ಎಲ್ಲವನ್ನೂ ನೋಡುತ್ತಾ ನಾವು ದಣಿದಿದ್ದೇವೆ, ಬೇಸರಗೊಂಡಿದ್ದೇವೆ, ಕೋಪಗೊಂಡಿದ್ದೇವೆ ಮತ್ತು ಭ್ರಮನಿರಸನಗೊಂಡಿದ್ದೇವೆ. ಈ ಹಿಂದೆ ನಾವೆಂದೂ ಈ ಪರಿ ಅಸಹಾಯಕರಾಗಿರಲಿಲ್ಲ. ಪತ್ರಕರ್ತರಾದ ನಮಗೆ ಒಂದು ವಿಷಯ ಕಲಿಸಲಾಯಿತು: ಯಾವಾಗಲೂ ಜನರ ಪರವಾಗಿರಿ. ಯಾವಾಗಲೂ ಮಾನವೀಯತೆಯ ಬದಿಯಲ್ಲಿರಿ. ತಪ್ಪುಗಳು ನಡೆದಾಗ ಅಧಿಕಾರದಲ್ಲಿರುವವರನ್ನು ಜವಾಬ್ದಾರರನ್ನಾಗಿ ಮಾಡಿ…
ಆದರೆ ಈ ದಿನಗಳಲ್ಲಿ “ಪತ್ರಿಕೋದ್ಯಮ”ದ ಹೆಸರಿನಲ್ಲಿ ಟೈಮ್ಸ್ ನೌ ಏನು ಮಾಡುತ್ತಿದೆ ಎಂದರೆ, ಪ್ರತಿ ಹಂತದಲ್ಲೂ ವಿಫಲವಾದ ಮತ್ತು ಈ ದೇಶದ ಜನರನ್ನು ನಿರಾಸೆಗೊಳಿಸಿದ ಸರ್ಕಾರಕ್ಕೆ ಪಿಆರ್ ಕೆಲಸ ಮಾಡುತ್ತಿದೆಯಷ್ಟೇ.
ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರದ ಅಸಮರ್ಥತೆಯಿಂದಾಗಿ ನಮ್ಮ ಕೆಲವು ಸಹೋದ್ಯೋಗಿಗಳು ಮತ್ತು ಅವರ ಕುಟುಂಬಗಳು ಬೆಲೆ ಪಾವತಿಸುತ್ತಿದ್ದಾರೆ.
ಪತ್ರಕರ್ತರಾಗಿ, ನಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಎಲ್ಲಾ ಮಾಹಿತಿಗಳಿವೆ. ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯಲು ಜನರು ಆಂಬುಲೆನ್ಸ್ಗಳಲ್ಲಿ ಅಥವಾ ಬೀದಿಗಳಲ್ಲಿ ಕಾಯುತ್ತಿದ್ದಾರೆ. ಗಂಭಿರ ರೋಗಿಗಳು ಆಕ್ಸಿಜನ್ಗಾಗಿ ಪರದಾಡುತ್ತ ಉಸಿರಾಡಲೂ ಆಗದೇ ಒದ್ದಾಡುತ್ತಿದ್ದಾರೆ. ಸಾವಿರಾರು ಜನರು ಈ ಕಾರಣಕ್ಕೇ ಸಾಯುತ್ತಿದ್ದಾರೆ. ಜೀವ ಉಳಿಸುವ ಔಷಧಗಳು ಲಭ್ಯವಿಲ್ಲ ಮತ್ತು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಕೆಲವು ಉದಾರವಾದಿ ಜನರು ಈ ಸೌಲಭ್ಯಗಳನ್ನು ಒದಗಿಸಲು ಸರ್ಕಾರಕ್ಕಿಂತ ಹೆಚ್ಚಿನದನ್ನು ಮಾಡುತ್ತಿದ್ದಾರೆಂದು ತೋರುತ್ತದೆ. ರಾಷ್ಟ್ರ ರಾಜಧಾನಿಯ ಪ್ರಮುಖ ಆಸ್ಪತ್ರೆಯೊಂದು ತನ್ನ ರೋಗಿಗಳನ್ನು ಜೀವಂತವಾಗಿಡಲು ಸರ್ಕಾರದಿಂದ ಆಮ್ಲಜನಕ ಸಿಲಿಂಡರ್ಗಳನ್ನು ಪಡೆಯಲು ಹೈಕೋರ್ಟ್ ಅನ್ನು ಸಂಪರ್ಕಿಸಬೇಕಾಯಿತು. ಆಸ್ಪತ್ರೆಗಳು ಆಮ್ಲಜನಕದ ಕೊರತೆಯನ್ನು ಕುರಿತು ಹೈಲೈಟ್ ಮಾಡಲು ಅಧಿಕಾರಿಗಳನ್ನು ಟ್ಯಾಗ್ ಮಾಡಬೇಕಾಗಿದೆ. ಆಮ್ಲಜನಕವನ್ನು “ಇದು ತಮ್ಮದು” ಎಂದು ಹೇಳಿಕೊಂಡು ರಾಜ್ಯಗಳು ಪರಸ್ಪರ ಜಗಳವಾಡುತ್ತಿವೆ. ಇದು ನಾವು ಇಂದು ಕಾಣುತ್ತಿರುವ ವಾಸ್ತವ.

ಇಡೀ ವ್ಯವಸ್ಥೆ ಕುಸಿದಿದೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ. ಇದು ವೈದ್ಯಕೀಯ ತುರ್ತುಸ್ಥಿತಿಗಿಂತ ಹೆಚ್ಚಾಗಿ, ಇದು ನಮ್ಮ ಕಣ್ಣಮುಂದಿನ ಮಾನವೀಯ ಬಿಕ್ಕಟ್ಟು. ಟೈಮ್ಸ್ ನೌ ನಂತಹ ಪ್ರಬಲ ಬ್ರಾಂಡ್ನ ಪತ್ರಕರ್ತರಾಗಿ ನಾವು ಈ ದೇಶದ ಜನರಿಗೆ ಏನು ಮಾಡುತ್ತಿದ್ದೇವೆ?
ನಾವು ಇನ್ನೂ ಪ್ರತಿಪಕ್ಷಗಳನ್ನು ದೂಷಿಸುತ್ತೇವೆ. ನಾವು ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುತ್ತೇವೆ. ನಾವು ಬಹಿರಂಗವಾಗಿ ಹಿಂದೂ-ಮುಸ್ಲಿಂ ಕೋಮು ಕಥೆಗಳನ್ನು ಚರ್ಚಿಸುತ್ತೇವೆ. ಸರ್ಕಾರದ ಪರವಾಗಿರದ ಪ್ರತಿಯೊಂದು ಕಥೆಯನ್ನು ನಾವು ಪ್ರಸಾರ ಮಾಡುವುದಿಲ್ಲ ಅಥವಾ ತಿರುಚುತ್ತೇವೆ. ಅಸಮರ್ಥ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕಾದಾಗ ನಾವು ಸಂಪೂರ್ಣ ಮೌನವನ್ನು ಕಾಪಾಡಿಕೊಳ್ಳುತ್ತೇವೆ. ನರೇಂದ್ರ ಮೋದಿಯವರ ಹೆಸರನ್ನು ತೆಗೆದುಕೊಳ್ಳಲು ಮತ್ತು ನಾವು ಈಗಿರುವ ಅವ್ಯವಸ್ಥೆಗಾಗಿ ಅವರನ್ನು ಟೀಕಿಸಲು ನಮಗೆ ಧೈರ್ಯವಿಲ್ಲ. ಚುನಾವಣೆಯಲ್ಲಿ ದೊಡ್ಡ ರ್ಯಾಲಿಗಳನ್ನು ಆಯೋಜಿಸುವ ಮೂಲಕ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಇತರ ವಿರೋಧ ಪಕ್ಷಗಳ ದೃಶ್ಯಗಳನ್ನು ತೋರಿಸುವ ನಾವು ಅಮಿತ್ ಷಾ ಅವರ ಚಿತ್ರವನ್ನು ಕೂಡ ಸೇರಿಸಲು ಸಾಧ್ಯವಿಲ್ಲ. ನಾವು ಬೆನ್ನುಮೂಳೆ ಇಲ್ಲದವರಾಗಿ ಬಿಟ್ಟಿದ್ದೇವೆಯೇ?
ಯುಪಿಎ ಆಡಳಿತದ ಅವಧಿಯಲ್ಲಿ ನೀವೆಲ್ಲರೂ “ನೀತಿ ಅಸ್ವಸ್ಥತೆ” ಎಂದು ಹೇಗೆ ಅರಚುತ್ತಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ಈಗ ಇಡೀ ವ್ಯವಸ್ಥೆಯು ಅಸ್ತವ್ಯಸ್ತವಾಗಿದ್ದರೂ, ಕೇಂದ್ರ ಸರ್ಕಾರವನ್ನು ಅದರ ಅಸಮರ್ಥತೆಗಾಗಿ ನಾವು ಒಮ್ಮೆಯಾದರೂ ಟೀಕಿಸಲಿಲ್ಲ!
ಕೋವಿಡ್ ಸಾಂಕ್ರಾಮಿಕ ರೋಗದ ದುರುಪಯೋಗಕ್ಕೆ ಟೈಮ್ಸ್ ನೌ ಸಂಪಾದಕರು ಬಿಜೆಪಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಿದ್ಧರಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ. ದೇಶಾದ್ಯಂತ ಸಾವಿರಾರು ಭಾರತೀಯರು ಸಾಯುತ್ತಿರುವಾಗ, ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳುವುದು ಮತ್ತು ಬೀದಿಯಲ್ಲಿನ ವಾಸ್ತವತೆಯನ್ನು ತೋರಿಸುವುದು ನಮ್ಮಿಂದ ಕನಿಷ್ಠ ನಿರೀಕ್ಷೆಯಾಗಿದೆ. ಬದಲಾಗಿ ನಾವು ಬಿಜೆಪಿಯೇತರ ಸರ್ಕಾರಗಳು ಮತ್ತು ನಾಯಕರನ್ನು ಟಾರ್ಗೆಟ್ ಮಾಡುತ್ತ ಬಿಜೆಪಿ ಐಟಿ ಸೆಲ್ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದೇವೆ.

ಜನರ ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಬಹುದಾದ ಅಮೂಲ್ಯವಾದ ಸಮಯವನ್ನು ಹೋರಾಟನಿರತ ರೈತರನ್ನು ದೂಷಿಸಲು ಬಳಸಲಾಗುತ್ತಿದೆ, ಇದು ಬಿಜೆಪಿ ಕಾರ್ಯಸೂಚಿಗೆ ಸ್ಪಷ್ಟವಾಗಿ ಹೊಂದಿಕೆಯಾಗಿದೆ. ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದಕ್ಕೆ ಇದು ಒಂದು ಉದಾಹರಣೆಯಷ್ಟೇ.
ಪ್ರಧಾನಿ ಮೋದಿಯವರ ಕಠೋರ ವರ್ತನೆ ಮತ್ತು ಅಧಿಕಾರ ದುರ್ಬಳಕೆಗಾಗಿ ಪ್ರಶ್ನೆಗಳನ್ನು ಕೇಳುವ ಬದಲು, ಸಂಪಾದಕರು ಅವರ ಇಮೇಜ್ ಅನ್ನು ಉಳಿಸಲು ಮತ್ತು ಅವರಿಗೆ ಕೆಟ್ಟ ಹೆಸರು ತಗುಲದಂತೆ ರಕ್ಷಣೆ ಮಾಡುತ್ತಾರೆ.
ಬಿಜೆಪಿ ಐಟಿ ಸೆಲ್ನ ಸದಸ್ಯರು ಕಳುಹಿಸಿದ ಸಂದೇಶಗಳನ್ನು ಚಾನೆಲ್ ಕಟ್ & ಪೇಸ್ಟ್ ಮಾಡಿ ಅದನ್ನೇ ಸುದ್ದಿ ಮಾಡುವುದು ಮತ್ತು ಅದು ಪ್ರೈಮ್ ಟೈಮ್ ಚರ್ಚೆ ಕೂಡ ಆಗುತ್ತದೆ.
ಟರ್ನ್ ಕೋಟ್, ಟ್ರೊಲ್ ಮತ್ತು ಸರ್ಕಾರಿ ಲಾಬಿವಾದಿ ಶೆಹಜಾದ್ ಪೂನವಾಲಾ ಅವರು ಪೋಸ್ಟ್ ಮಾಡಿದ ಸಂದೇಶಗಳು ಉನ್ನತ ಸ್ಟೋರಿಯಾಗುತ್ತವೆ ಮತ್ತು ಅವರು ಚಾನೆಲ್ನ ಸ್ವಂತ ವರದಿಗಾರರು ಮತ್ತು ಸಂಪಾದಕರಿಗಿಂತ ಹೆಚ್ಚಿನ ಸಮಯವನ್ನು ಪಡೆಯುತ್ತಾರೆ.
ನಾವು ನಮ್ಮನ್ನು ಯಾವ ಮಟ್ಟಕ್ಕೆ ಇಳಿಸಿಕೊಂಡಿದ್ದೇವೆ? ಧ್ವನಿರಹಿತ ಜನತೆಗಾಗಿ ಸತತವಾಗಿ ಮಾತನಾಡಿದ ಚಾನೆಲ್, ಈಗ ಸರ್ಕಾರದ ಪೂರ್ಣ ಪ್ರಚಾರ ಯಂತ್ರವಾಗಿ ಮಾರ್ಪಟ್ಟಿದೆ. ರಾಷ್ಟ್ರದಲ್ಲಿ ನಂಬರ್ 1 ಚಾನೆಲ್ ಎಂದು ಹೇಳಿಕೊಳ್ಳುವ ಟೈಮ್ಸ್ ನೌ ತನ್ನದೇ ಆದ ನಾಗರಿಕರ ಸಂಕಟಗಳನ್ನು ಮರೆತುಬಿಡುತ್ತದೆ.
ನೀವು ಯಾವಾಗ ಜನರಿಗಾಗಿ ಮಾತನಾಡುತ್ತೀರಿ? ನಿಮ್ಮ ಸಂಪೂರ್ಣ ಸಂಪಾದಕೀಯ ತಂಡವನ್ನು ಬಿಜೆಪಿಯ ಕಾರ್ಯಸೂಚಿಯಲ್ಲಿ ಕೆಲಸ ಮಾಡಲು ಒತ್ತಾಯಿಸುವುದನ್ನು ನೀವು ಯಾವಾಗ ನಿಲ್ಲಿಸುತ್ತೀರಿ? ಅದಕ್ಷತೆಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಮೊದಲು ನೀವು ಎಷ್ಟು ಮೃತ ದೇಹಗಳನ್ನು ನೋಡಲು ಬಯಸುತ್ತೀರಿ? ಅಸಹಾಯಕ ಜನರು ಹೇಗೆ ಬಳಲುತ್ತಿದ್ದಾರೆ ಎಂಬುದಕ್ಕೆ ನೀವು ಕುರುಡರಾಗಿದ್ದೀರಿ. ಹಾಗೆ ಮಾಡಿದರೆ ನಿಮ್ಮ ಸವಲತ್ತುಗಳಿಗೆ ಧಕ್ಕೆ ಬರುತ್ತದೆಯೇ? ನಿಮ್ಮ ಕೈಗಳಿಗೆ ಇನ್ನೂ ಎಷ್ಟು ರಕ್ತ ಅಂಟಬೇಕು?
ಗೌರವಾನ್ವಿತ ಸಂಪಾದಕರೇ, ನಿಮ್ಮ ಆಯ್ಕೆ ಸರಳವಾಗಿದೆ: ಮಾನವೀಯತೆಯ ಬದಿಯಲ್ಲಿರಿ ಅಥವಾ ಬಿಜೆಪಿಯ ಪರವಾಗಿರಿ. ನೀವು ಎರಡನೆಯದನ್ನು ಆರಿಸಿದರೆ, ನೀವು ಈ ವೃತ್ತಿಯನ್ನು ವಿಫಲಗೊಳಿಸುತ್ತಿದ್ದೀರಿ ಮಾತ್ರವಲ್ಲ, ಈ ದೇಶ ಮತ್ತು ಅದರ ಜನರನ್ನೂ ಸಹ.
ಇತರ ರಾಷ್ಟ್ರೀಯ ಚಾನೆಲ್ಗಳಲ್ಲಿನ ಸಹೋದ್ಯೋಗಿಗಳೇ ಎದ್ದುನಿಂತು ಮಾತನಾಡಿ. ನಾವು ಈಗ ಅದನ್ನು ಮಾಡದಿದ್ದರೆ, ಇತಿಹಾಸವು ಎಂದಿಗೂ ನಮ್ಮನ್ನು ಕ್ಷಮಿಸುವುದಿಲ್ಲ.
ಧನ್ಯವಾದಗಳು
– ಟೈಮ್ಸ್ ನೌನ ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳು
ಇದನ್ನೂ ಓದಿ: ಸಾಂಕ್ರಾಮಿಕ ದುರಂತದ ಸಮಯದಲ್ಲಿ ಐಪಿಎಲ್ ಕವರೇಜ್ ಮಾಡುವುದಿಲ್ಲವೆಂದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್!


