Homeಅಂಕಣಗಳುಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

ಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

- Advertisement -
- Advertisement -

2017ಅನ್ನಿಸತ್ತೆ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ’ಕಾನ್ಸ್ಟಿಟ್ಯೂಶನ್’ ಎಂಬ ಕ್ರೊಯೇಶಿಯನ್ ಸಿನಿಮಾದ ಪ್ರದರ್ಶನ ಇತ್ತು. ನಾಲ್ಕು ಮುಖ್ಯ ಪಾತ್ರಗಳು, ಅವುಗಳ ನಡುವಿನ ಪೂರ್ವಾಗ್ರಹಗಳು-ಭಿನ್ನಾಭಿಪ್ರಾಯಗಳು ಮತ್ತವುಗಳನ್ನು ಅವರೆಲ್ಲರೂ ಕಳಚಿಕೊಳ್ಳುವ ಅದ್ಭುತ ನಿರೂಪಣೆಯಿದ್ದ ಸಿನಿಮಾವದು.

ವೀಕೋ ಕ್ರೊಯೇಶಿಯನ್ ಪ್ರೊಫೆಸರ್ ಮತ್ತು ಹೋಮೋಸೆಕ್ಷುಯಲ್. ಗಂಡಸಿನ ಬಟ್ಟೆ ತೊಟ್ಟು ಕಾಲೇಜಿನಲ್ಲಿ ಪಾಠ ಮಾಡುವ ಪ್ರೊಫೆಸರ್ ಮನೆಯಲ್ಲಿ ಹೆಂಗಸಿನ ಬಟ್ಟೆ ಹಾಕಿ, ಮಡಿದಿರುವ ತನ್ನ ಪ್ರಿಯಕರನ ನೆನಪಿನಲ್ಲಿ ಪರಿತಪಿಸುತ್ತಿರುತ್ತಾನೆ. ತಂದೆ ಹಾಸಿಗೆ ಹಿಡಿದಿದ್ದಾರೆ. ಅವರು ಹಿಟ್ಲರ್‌ನ ನಾಜಿ ಸೇನೆಯ ಜೊತೆಯಾಗಿ ಹೋರಾಡಿದವರು. ಮಗನ ಸೆಕ್ಷುಯಾಲಿಟಿ ಬಗ್ಗೆ ತನ್ನ ಕೊನೆಯ ದಿನಗಳಲ್ಲೂ ಇನ್ನೂ ಕೋಪ ಇಳಿದಿಲ್ಲ. ಇದರ ಜೊತೆಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಕೆಲವರು ಪ್ರೊಫೆಸರ್ ಅವರ ಈ ನಡವಳಿಕೆಯ ವಿರುದ್ಧವಾಗಿದ್ದಾರೆ.

ಈ ಪ್ರೊಫೆಸರ್ ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿಯೇ ಕೆಳಗೆ ವಾಸಿಸುವ ಒಂದು ಜೋಡಿ. ಗಂಡ ಆಂಟೆ ಸರ್ಬಿಯಾ ಮೂಲದವನು. ಪೊಲೀಸ್ ಕೆಲಸ. ಹೆಂಡತಿ ಮಾಜಾ ಆಸ್ಪತ್ರೆಯಲ್ಲಿ ನರ್ಸ್. ಆಂಟೆ ತನ್ನ ಮುಂಬಡ್ತಿಗಾಗಿ ಸಂವಿಧಾನದ ಒಂದು ಪರೀಕ್ಷೆಯನ್ನು ಪಾಸು ಮಾಡಬೇಕಿರುತ್ತದೆ. ಆದರೆ ಅದು ಆತನಿಗೆ ಬಹಳ ತ್ರಾಸದಾಯಕವಾದದ್ದು.

ಕೆಲವು ಹೋಮೋಫೋಬಿಕ್ ಯುವಕರು ರಸ್ತೆಯಲ್ಲಿ ವೀಕೋ ಮೇಲೆ ದಾಳಿ ನಡೆಸಿ ಆತನನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಮಾಜಾ ಆತನನ್ನು ಗುರುತಿಸಿ ಶುಶ್ರೂಷೆ ಮಾಡುತ್ತಾಳೆ. ಅದನ್ನು ಆತನ ಮನೆಯಲ್ಲಿಯೂ ಮುಂದುವರೆಸುತ್ತಾಳೆ. ಜೊತೆಗೆ ವೀಕೋನ ತಂದೆಯನ್ನು ನೋಡಿಕೊಳ್ಳುತ್ತಾಳೆ. ಇದಕ್ಕೆ ಬದಲಾಗಿ ಆಂಟೆಗೆ ಸಂವಿಧಾನದ ಪಾಠ ಹೇಳಿಕೊಡಲು ಪ್ರೊಫೆಸರ್ ವೀಕೋಗೆ ಕೇಳಿಕೊಳ್ಳುತ್ತಾಳೆ.

ಹೀಗೆ ಏರ್ಪಾಡಾದ ಸಂಬಂಧದಲ್ಲಿ, ಕ್ರೋಯೇಶಿಯನ್ ವೀಕೋ ತಾನೇ ಲೈಂಗಿಕ ಅಲ್ಪಸಂಖ್ಯಾತನಾದರೂ, ಅದಕ್ಕಾಗಿ ದೌರ್ಜನ್ಯವನ್ನು ಎದುರಿಸುತ್ತಿದ್ದರೂ, ಆತನಿಗೆ ಸರ್ಬಿಯನ್ ಅಲ್ಪಸಂಖ್ಯಾತರ ಮೇಲೆ ಪೂರ್ವಾಗ್ರಹಪೀಡಿತ ಅಸಹನೆ. ಆಂಟೆಗೆ ವೀಕೋನ ಲೈಂಗಿಕ ಧೋರಣೆಯ ಬಗ್ಗೆ ವ್ಯಂಗ್ಯದ ಪೂರ್ವಾಗ್ರಹ. ಹೀಗೆ ಅವರ ನಡುವೆ ಘರ್ಷಣೆಗಳು ಜರುಗುತ್ತಲೇ ಇರುತ್ತವೆ.

ಆದರೆ ಸಂವಿಧಾನದ ಪಾಠ ಮಾಡುವ-ಕೇಳುವ ಜೊತೆಜೊತೆಗೇ, ಮಾನವ ಸಂಬಂಧಗಳ ಒಡನಾಟದಿಂದ ಎಲ್ಲರಿಗೂ ತಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಳ್ಳಲು ಸಾಧ್ಯವಾಗುತ್ತದೆ. ಸಂವಿಧಾನ ಪುಸ್ತಕವನ್ನು ಚೆನ್ನಾಗಿ ಬಲ್ಲ ಪ್ರೊಫೆಸರ್‌ಗೆ ಅದರ ನೈತಿಕತೆ ದಕ್ಕಲು, ತಾವು ಶತ್ರುಗಳು ಎಂದುಕೊಂಡವರ ಪ್ರೀತಿಯ ಒಡನಾಟ ಬೇಕಿರುತ್ತದೆ! ಆಂಟೆಯಲ್ಲು ಬದಲಾವಣೆ ಸಾಧ್ಯವಾಗುತ್ತದೆ.

ಈ ಕಥೆಯನ್ನು ಭಾರತಕ್ಕೆ ಅನ್ವಯಿಸುವುದು ಕಷ್ಟವೇನಲ್ಲ. ಇಲ್ಲಿಯೂ ಲೈಂಗಿಕ ಅಲ್ಪಸಂಖ್ಯಾತರಾಗಿರುವ ಮೇಲ್ಜಾತಿಯ ಬರಹಗಾರರು ಮುಸ್ಲಿಂ ದ್ವೇಷವನ್ನು ತಮ್ಮ ಕಥೆ-ಕಾದಂಬರಿಗಳಲ್ಲಿ ಧಾರಾಳವಾಗಿ ಎಳೆದು ತರುತ್ತಾರೆ. ತಾವೇ ತಮ್ಮ ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದರೂ, ಬ್ರಾಹ್ಮಣ್ಯ ಹೋಗಲಾಡಿಸಬೇಕೆನ್ನುವ, ಸಮ ಸಮಾಜದ, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆನ್ನುವ, ಪ್ರಾತಿನಿಧ್ಯ ಸರಿಪಡಿಸಬೇಕೆನ್ನುವ ಸಾಂವಿಧಾನಿಕ ನೈತಿಕತೆಯ ವಿವೇಕ ಅವರಿಗೆ ಸುಲಭವಾಗಿ ಸಿಕ್ಕಿರುವುದಿಲ್ಲ. ತಮ್ಮ ಪ್ರಿವಿಲೆಜ್‌ಗಳನ್ನು ದಾಟಿಕೊಂಡು, ತಮ್ಮ ಹಕ್ಕುಗಳ ಜೊತೆಗೆ ಇತರ ದುರ್ಬಲ ಸಮುದಾಯಗಳ ಹಕ್ಕುಗಳನ್ನು ಗುರುತಿಸುವ, ಅವರ ಶೋಷಣೆಯನ್ನೂ ಪರಿಗಣಿಸಲು ತಮ್ಮ ಪೂರ್ವಾಗ್ರಹಗಳನ್ನು ಕಳೆದುಕೊಳ್ಳಬೇಕಿರುವ ಅಗತ್ಯವನ್ನು ಚಿತ್ರಿಸುವ ಕಾನ್ಸ್ಟಿಟ್ಯೂಶನ್ ಚಿತ್ರಕಥೆ ನೆನಪಿಗೆ ಬಂದದ್ದು ಲೈಂಗಿಕ ಅಲ್ಪಸಂಖ್ಯಾತ ಹೋರಾಟದ ಮುಂಚೂಣಿಯಲ್ಲಿರುವ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನದ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದಾಗ.

ಲೈಂಗಿಕತೆಯನ್ನು, ಲೈಂಗಿಕ ಕ್ರಿಯೆಯನ್ನು ತಪ್ಪಾಗಿ ಸಂಬೋಧಿಸಲಾಗಿದ್ದ, ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಕ್ರಿಮಿನಲೈಸ್ ಮಾಡಿದ್ದ ಸೆಕ್ಷನ್ 377ಅನ್ನು ರದ್ದುಗೊಳಿಸಲು ಚಳವಳಿ ರೂಪಿಸಿದ್ದವರಲ್ಲಿ ಒಬ್ಬರಾಗಿದ್ದವರು ಅಕ್ಕಯ್ ಪದ್ಮಶಾಲಿ. ಅದಕ್ಕಾಗಿ ಹೋರಾಡಿ ಶ್ರಮಿಸಿದ್ದವರು. 2009 ಜುಲೈ 2ರಂದು ದೆಹಲಿ ನ್ಯಾಯಾಲಯ ಈ ಚಳವಳಿಯನ್ನು ಪುರಸ್ಕರಿಸಿ ನೀಡಿದ ತೀರ್ಪು ಐತಿಹಾಸಿಕವಾದದ್ದು. ಇದರ ಬಗ್ಗೆ ತಮ್ಮ ಪುಸ್ತಕದಲ್ಲಿ ಅಕ್ಕಯ್ ಅವರು ಬರೆಯುತ್ತಾ “ಖಾಸಗಿಯಾಗಿ ವಯಸ್ಕರ ನಡುವೆ ಸಹಮತದ ಲೈಂಗಿಕತೆಯು ಶಿಕ್ಷಾರ್ಹವಲ್ಲ ಎಂದು ಅದು ಹೇಳಿತು. ತೀರ್ಪನ್ನು ಸಾಂವಿಧಾನಿಕ ನೈತಿಕತೆಯ ಹಿನ್ನೆಲೆಯಲ್ಲಿ ನೀಡಲಾಗಿತ್ತು. ನೀವು, ಸ್ವಂತ ನೈತಿಕತೆಯನ್ನು ಕ್ರಿಯಾಚರಣೆಯಲ್ಲಿ ತರಬಹುದು. ಅದು ಭಾರತಕ್ಕೆ ಸಂಬಂಧಿಸಿದಂತೆ ಅಲ್ಲ. ಸಾಂವಿಧಾನಿಕ ನೈತಿಕತೆಯು ಮುಖ್ಯ ನೈತಿಕತೆಯಾಗಿದ್ದು, ಪ್ರತಿಯೊಬ್ಬರೂ ಅದರ ಅಡಿಯಲ್ಲಿ ಬರುತ್ತಾರೆ” ಎನ್ನುತ್ತಾರೆ.

ಈ ತೀರ್ಪನ್ನು ಮತ್ತೆ ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ಅದರ ವಿರುದ್ಧ ಮತ್ತೆ ಚಳವಳಿ, ಮತ್ತೆ ಸಿಕ್ಕ ಜಯ ಹೀಗೆ ಇವುಗಳ ಬಗ್ಗೆ ಪುಸ್ತಕ ಬಿಡುಗಡೆಯಲ್ಲಿಯೂ ಮಾತನಾಡಿದ ಅಕ್ಕಯ್, ಸಾಂವಿಧಾನಿಕ ನೈತಿಕತೆಯನ್ನು ಅಳವಡಿಸಿಕೊಳ್ಳುವುದರ ಅಗತ್ಯದ ಬಗ್ಗೆ ಮತ್ತು ತಮ್ಮ ಹಕ್ಕುಗಳಿಗಾಗಿ ಮಾಡುವ ಹೋರಾಟವನ್ನು ಪ್ರತ್ಯೇಕವಾಗಿ ನೋಡದೆ ಸಮಸ್ತವಾಗಿ ಎಲ್ಲ ದುರ್ಬಲ ಸಮುದಾಯಗಳ ಹೋರಾಟಗಳನ್ನು ಒಟ್ಟಿಗೆ ಕೊಂಡೊಯ್ಯುವ – ಅದು ದಲಿತ ಹೋರಾಟ ಆಗಿರಲಿ, ಅಲ್ಪಸಂಖ್ಯಾತ ಧರ್ಮೀಯರ ಹೋರಾಟವಿರಲಿ ಅಥವಾ ಮಹಿಳಾ ಹಕ್ಕುಗಳ ಹೋರಾಟವಿರಲಿ- ಎಷ್ಟು ಮುಖ್ಯ ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು.

ಅಕ್ಕಯ್ ತಮ್ಮ ಆತ್ಮಕತೆಗೆ ಮೊದಲು ’ಕರುಣೆಗೊಂದು ಸವಾಲು’ ಎಂದು ಹೆಸರಿಸಿದ್ದರಂತೆ. ಪ್ರಸಕ್ತ ಸಂಚಿಕೆಯಲ್ಲಿ ಸುಭಾಷ್ ಅವರಿಗೆ ನೀಡಿರುವ ಸಂದರ್ಶನದಲ್ಲೂ ಅವರು ಇದರ ಬಗ್ಗೆ ವಿವರಿಸಿದ್ದಾರೆ. ಕರುಣೆ ಸಾಕೆನ್ನುವ ಅವರು, ಮನುಷ್ಯರಿದ್ದಾರೆ, ಅದರಲ್ಲಿ ವೈವಿಧ್ಯತೆ ಇದೆ, ಅದನ್ನು ಒಪ್ಪಿಕೊಳ್ಳುವುದನ್ನು ಕಲಿಯಿರಿ ಎಂದು ಸಮಸ್ತ ಸಹನಾಗರಿಕರಿಗೆ ಕರೆ ನೀಡುತ್ತಿದ್ದಾರೆ.

LGBTQ ಸಮುದಾಯ ಜಗತ್ತಿನಾದ್ಯಂತ ಸಂಭ್ರಮಿಸುವ ದಿನ ಜೂನ್ 28. ಅದೇ ದಿನ ಅಕ್ಕಯ್ ಪುಸ್ತಕದ ಬಿಡುಗಡೆ ಇತ್ತು. ಜೂನ್ ಅನ್ನು ಪ್ರೈಡ್ ತಿಂಗಳು ಎಂದೇ ಕರೆಯಲಾಗುತ್ತದೆ. ವೈವಿಧ್ಯತೆಯ ಬಣ್ಣಗಳನ್ನು ಅರಿತು ಅದರಲ್ಲಿ ಮಿಂದು ಒಂದಾಗಬೇಕಿರುವ ಮತ್ತು ದೇಶದ ಬಹುತ್ವವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಬೇಕಿರುವುದಕ್ಕೆ ಹೋರಾಟದ ಬದುಕು ಸಾಗಿಸಿ, ಕರುಣೆಯ ನಿರೀಕ್ಷೆಯನ್ನು ಪಕ್ಕಕ್ಕಿಟ್ಟು, ತಮ್ಮ ನೋವುಗಳನ್ನು ಇತರ ಅಂಚಿನಲ್ಲಿರುವ ಸಮುದಾಯದ ಜನರ ನೋವುಗಳಿಗೆ ಸಮೀಕರಿಸಿಕೊಂಡು ಹೋರಾಡಿದ ಅಕ್ಕಯ್, ಮಾನವಿ ಬಂದೋಪಾಧ್ಯಾಯ, ರೇವತಿ ಇಂತಹ ಮುಂತಾದವರ ಬದುಕು ಬರಹ ನಮಗೆ ಮುಖ್ಯವಾಗುತ್ತದೆ.

ರೇವತಿ ಅವರ ಬಗ್ಗೆ ಗೌರಿಯವರ ಒಂದು ಹಳೆಯ ಬರಹ, ಅಕ್ಕಯ್ ಅವರ ಸಂದರ್ಶನ ಮತ್ತು ಮಾನವಿ ಬಂದೋಪಾಧ್ಯಾಯ ಅವರ ಆತ್ಮಕತೆಯ ಕನ್ನಡಾನುವಾದದ ಒಂದು ಭಾಗವನ್ನು ಈ ಸಂಚಿಕೆಯಲ್ಲಿ ಪ್ರಕಟ ಮಾಡುವುದರೊಂದಿಗೆ ನಾವು ಪ್ರೈಡ್‌ನಲ್ಲಿ ಭಾಗಿಯಾಗುತ್ತಿದ್ದೇವೆ ಹಾಗೂ ಈ ಮೂರು ಜನ ತೋರಿಸಿಕೊಟ್ಟ ಭ್ರಾತೃತ್ವವನ್ನು ಅಪ್ಪಿಕೊಳ್ಳಲು ಮುಂದಾಗುತ್ತಿದ್ದೇವೆ.

ಭ್ರಾತೃತ್ವವೆನ್ನುವುದು (ಬಾಬಾಸಾಹೇಬರೂ ಪ್ರತಿಪಾದಿಸಿದಂತೆ) ರಾಷ್ಟ್ರವೊಂದನ್ನು ರೂಪಿಸುವ ಪ್ರಮುಖ ಮೌಲ್ಯಗಳಲ್ಲೊಂದು. ಅದೇ ದೇಶದ ಘೋಷಿತ ಗಡಿಗಳ ಒಳಗೆ ಬದುಕುವ ಸಹಜೀವಿಯನ್ನು ತನ್ನಂತೆ ಭಾವಿಸದಿದ್ದರೆ ಅದು ಹೇಗೆ ದೇಶವಾದೀತು? ಆ ದೃಷ್ಟಿಯಲ್ಲಿ ಮಹಿಳೆ, ಲೈಂಗಿಕ ಅಲ್ಪಸಂಖ್ಯಾತರು, ದಲಿತರು ಹಾಗೂ ಮುಸ್ಲಿಮರ ಜೊತೆಗಿನ ಬಾಂಧವ್ಯವನ್ನು ’ದೇಶವಾಸಿ’ಗಳು ನೋಡಬೇಕಿದೆ. ಅತ್ಯಂತ ಸಹಜವಾಗಿ. ಆಗ ನಿಜವಾದ ಅರ್ಥದಲ್ಲಿ ರಾಷ್ಟ್ರವು ಮೈದಾಳುತ್ತದೆ; ನಿಧಾನಕ್ಕೆ ಗಡಿಗಳನ್ನೂ ದಾಟಿದ ’ಮನುಷ್ಯ ಸಮಾಜ’ ರೂಪುಗೊಳ್ಳುತ್ತದೆ.


ಇದನ್ನೂ ಓದಿ: ನನ್ನ ತಪ್ಪಿನಿಂದ ರಾಹುಲ್ ಗಾಂಧಿ ಕೆಟ್ಟ ರೀತಿಯ ಟ್ರೋಲ್‌ಗೆ ಒಳಗಾದರು- ನಟಿ ರಮ್ಯಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...