Homeಅಂಕಣಗಳುಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

ಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

- Advertisement -
- Advertisement -

2017ಅನ್ನಿಸತ್ತೆ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ’ಕಾನ್ಸ್ಟಿಟ್ಯೂಶನ್’ ಎಂಬ ಕ್ರೊಯೇಶಿಯನ್ ಸಿನಿಮಾದ ಪ್ರದರ್ಶನ ಇತ್ತು. ನಾಲ್ಕು ಮುಖ್ಯ ಪಾತ್ರಗಳು, ಅವುಗಳ ನಡುವಿನ ಪೂರ್ವಾಗ್ರಹಗಳು-ಭಿನ್ನಾಭಿಪ್ರಾಯಗಳು ಮತ್ತವುಗಳನ್ನು ಅವರೆಲ್ಲರೂ ಕಳಚಿಕೊಳ್ಳುವ ಅದ್ಭುತ ನಿರೂಪಣೆಯಿದ್ದ ಸಿನಿಮಾವದು.

ವೀಕೋ ಕ್ರೊಯೇಶಿಯನ್ ಪ್ರೊಫೆಸರ್ ಮತ್ತು ಹೋಮೋಸೆಕ್ಷುಯಲ್. ಗಂಡಸಿನ ಬಟ್ಟೆ ತೊಟ್ಟು ಕಾಲೇಜಿನಲ್ಲಿ ಪಾಠ ಮಾಡುವ ಪ್ರೊಫೆಸರ್ ಮನೆಯಲ್ಲಿ ಹೆಂಗಸಿನ ಬಟ್ಟೆ ಹಾಕಿ, ಮಡಿದಿರುವ ತನ್ನ ಪ್ರಿಯಕರನ ನೆನಪಿನಲ್ಲಿ ಪರಿತಪಿಸುತ್ತಿರುತ್ತಾನೆ. ತಂದೆ ಹಾಸಿಗೆ ಹಿಡಿದಿದ್ದಾರೆ. ಅವರು ಹಿಟ್ಲರ್‌ನ ನಾಜಿ ಸೇನೆಯ ಜೊತೆಯಾಗಿ ಹೋರಾಡಿದವರು. ಮಗನ ಸೆಕ್ಷುಯಾಲಿಟಿ ಬಗ್ಗೆ ತನ್ನ ಕೊನೆಯ ದಿನಗಳಲ್ಲೂ ಇನ್ನೂ ಕೋಪ ಇಳಿದಿಲ್ಲ. ಇದರ ಜೊತೆಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಕೆಲವರು ಪ್ರೊಫೆಸರ್ ಅವರ ಈ ನಡವಳಿಕೆಯ ವಿರುದ್ಧವಾಗಿದ್ದಾರೆ.

ಈ ಪ್ರೊಫೆಸರ್ ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿಯೇ ಕೆಳಗೆ ವಾಸಿಸುವ ಒಂದು ಜೋಡಿ. ಗಂಡ ಆಂಟೆ ಸರ್ಬಿಯಾ ಮೂಲದವನು. ಪೊಲೀಸ್ ಕೆಲಸ. ಹೆಂಡತಿ ಮಾಜಾ ಆಸ್ಪತ್ರೆಯಲ್ಲಿ ನರ್ಸ್. ಆಂಟೆ ತನ್ನ ಮುಂಬಡ್ತಿಗಾಗಿ ಸಂವಿಧಾನದ ಒಂದು ಪರೀಕ್ಷೆಯನ್ನು ಪಾಸು ಮಾಡಬೇಕಿರುತ್ತದೆ. ಆದರೆ ಅದು ಆತನಿಗೆ ಬಹಳ ತ್ರಾಸದಾಯಕವಾದದ್ದು.

ಕೆಲವು ಹೋಮೋಫೋಬಿಕ್ ಯುವಕರು ರಸ್ತೆಯಲ್ಲಿ ವೀಕೋ ಮೇಲೆ ದಾಳಿ ನಡೆಸಿ ಆತನನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಮಾಜಾ ಆತನನ್ನು ಗುರುತಿಸಿ ಶುಶ್ರೂಷೆ ಮಾಡುತ್ತಾಳೆ. ಅದನ್ನು ಆತನ ಮನೆಯಲ್ಲಿಯೂ ಮುಂದುವರೆಸುತ್ತಾಳೆ. ಜೊತೆಗೆ ವೀಕೋನ ತಂದೆಯನ್ನು ನೋಡಿಕೊಳ್ಳುತ್ತಾಳೆ. ಇದಕ್ಕೆ ಬದಲಾಗಿ ಆಂಟೆಗೆ ಸಂವಿಧಾನದ ಪಾಠ ಹೇಳಿಕೊಡಲು ಪ್ರೊಫೆಸರ್ ವೀಕೋಗೆ ಕೇಳಿಕೊಳ್ಳುತ್ತಾಳೆ.

ಹೀಗೆ ಏರ್ಪಾಡಾದ ಸಂಬಂಧದಲ್ಲಿ, ಕ್ರೋಯೇಶಿಯನ್ ವೀಕೋ ತಾನೇ ಲೈಂಗಿಕ ಅಲ್ಪಸಂಖ್ಯಾತನಾದರೂ, ಅದಕ್ಕಾಗಿ ದೌರ್ಜನ್ಯವನ್ನು ಎದುರಿಸುತ್ತಿದ್ದರೂ, ಆತನಿಗೆ ಸರ್ಬಿಯನ್ ಅಲ್ಪಸಂಖ್ಯಾತರ ಮೇಲೆ ಪೂರ್ವಾಗ್ರಹಪೀಡಿತ ಅಸಹನೆ. ಆಂಟೆಗೆ ವೀಕೋನ ಲೈಂಗಿಕ ಧೋರಣೆಯ ಬಗ್ಗೆ ವ್ಯಂಗ್ಯದ ಪೂರ್ವಾಗ್ರಹ. ಹೀಗೆ ಅವರ ನಡುವೆ ಘರ್ಷಣೆಗಳು ಜರುಗುತ್ತಲೇ ಇರುತ್ತವೆ.

ಆದರೆ ಸಂವಿಧಾನದ ಪಾಠ ಮಾಡುವ-ಕೇಳುವ ಜೊತೆಜೊತೆಗೇ, ಮಾನವ ಸಂಬಂಧಗಳ ಒಡನಾಟದಿಂದ ಎಲ್ಲರಿಗೂ ತಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಳ್ಳಲು ಸಾಧ್ಯವಾಗುತ್ತದೆ. ಸಂವಿಧಾನ ಪುಸ್ತಕವನ್ನು ಚೆನ್ನಾಗಿ ಬಲ್ಲ ಪ್ರೊಫೆಸರ್‌ಗೆ ಅದರ ನೈತಿಕತೆ ದಕ್ಕಲು, ತಾವು ಶತ್ರುಗಳು ಎಂದುಕೊಂಡವರ ಪ್ರೀತಿಯ ಒಡನಾಟ ಬೇಕಿರುತ್ತದೆ! ಆಂಟೆಯಲ್ಲು ಬದಲಾವಣೆ ಸಾಧ್ಯವಾಗುತ್ತದೆ.

ಈ ಕಥೆಯನ್ನು ಭಾರತಕ್ಕೆ ಅನ್ವಯಿಸುವುದು ಕಷ್ಟವೇನಲ್ಲ. ಇಲ್ಲಿಯೂ ಲೈಂಗಿಕ ಅಲ್ಪಸಂಖ್ಯಾತರಾಗಿರುವ ಮೇಲ್ಜಾತಿಯ ಬರಹಗಾರರು ಮುಸ್ಲಿಂ ದ್ವೇಷವನ್ನು ತಮ್ಮ ಕಥೆ-ಕಾದಂಬರಿಗಳಲ್ಲಿ ಧಾರಾಳವಾಗಿ ಎಳೆದು ತರುತ್ತಾರೆ. ತಾವೇ ತಮ್ಮ ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದರೂ, ಬ್ರಾಹ್ಮಣ್ಯ ಹೋಗಲಾಡಿಸಬೇಕೆನ್ನುವ, ಸಮ ಸಮಾಜದ, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆನ್ನುವ, ಪ್ರಾತಿನಿಧ್ಯ ಸರಿಪಡಿಸಬೇಕೆನ್ನುವ ಸಾಂವಿಧಾನಿಕ ನೈತಿಕತೆಯ ವಿವೇಕ ಅವರಿಗೆ ಸುಲಭವಾಗಿ ಸಿಕ್ಕಿರುವುದಿಲ್ಲ. ತಮ್ಮ ಪ್ರಿವಿಲೆಜ್‌ಗಳನ್ನು ದಾಟಿಕೊಂಡು, ತಮ್ಮ ಹಕ್ಕುಗಳ ಜೊತೆಗೆ ಇತರ ದುರ್ಬಲ ಸಮುದಾಯಗಳ ಹಕ್ಕುಗಳನ್ನು ಗುರುತಿಸುವ, ಅವರ ಶೋಷಣೆಯನ್ನೂ ಪರಿಗಣಿಸಲು ತಮ್ಮ ಪೂರ್ವಾಗ್ರಹಗಳನ್ನು ಕಳೆದುಕೊಳ್ಳಬೇಕಿರುವ ಅಗತ್ಯವನ್ನು ಚಿತ್ರಿಸುವ ಕಾನ್ಸ್ಟಿಟ್ಯೂಶನ್ ಚಿತ್ರಕಥೆ ನೆನಪಿಗೆ ಬಂದದ್ದು ಲೈಂಗಿಕ ಅಲ್ಪಸಂಖ್ಯಾತ ಹೋರಾಟದ ಮುಂಚೂಣಿಯಲ್ಲಿರುವ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನದ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದಾಗ.

ಲೈಂಗಿಕತೆಯನ್ನು, ಲೈಂಗಿಕ ಕ್ರಿಯೆಯನ್ನು ತಪ್ಪಾಗಿ ಸಂಬೋಧಿಸಲಾಗಿದ್ದ, ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಕ್ರಿಮಿನಲೈಸ್ ಮಾಡಿದ್ದ ಸೆಕ್ಷನ್ 377ಅನ್ನು ರದ್ದುಗೊಳಿಸಲು ಚಳವಳಿ ರೂಪಿಸಿದ್ದವರಲ್ಲಿ ಒಬ್ಬರಾಗಿದ್ದವರು ಅಕ್ಕಯ್ ಪದ್ಮಶಾಲಿ. ಅದಕ್ಕಾಗಿ ಹೋರಾಡಿ ಶ್ರಮಿಸಿದ್ದವರು. 2009 ಜುಲೈ 2ರಂದು ದೆಹಲಿ ನ್ಯಾಯಾಲಯ ಈ ಚಳವಳಿಯನ್ನು ಪುರಸ್ಕರಿಸಿ ನೀಡಿದ ತೀರ್ಪು ಐತಿಹಾಸಿಕವಾದದ್ದು. ಇದರ ಬಗ್ಗೆ ತಮ್ಮ ಪುಸ್ತಕದಲ್ಲಿ ಅಕ್ಕಯ್ ಅವರು ಬರೆಯುತ್ತಾ “ಖಾಸಗಿಯಾಗಿ ವಯಸ್ಕರ ನಡುವೆ ಸಹಮತದ ಲೈಂಗಿಕತೆಯು ಶಿಕ್ಷಾರ್ಹವಲ್ಲ ಎಂದು ಅದು ಹೇಳಿತು. ತೀರ್ಪನ್ನು ಸಾಂವಿಧಾನಿಕ ನೈತಿಕತೆಯ ಹಿನ್ನೆಲೆಯಲ್ಲಿ ನೀಡಲಾಗಿತ್ತು. ನೀವು, ಸ್ವಂತ ನೈತಿಕತೆಯನ್ನು ಕ್ರಿಯಾಚರಣೆಯಲ್ಲಿ ತರಬಹುದು. ಅದು ಭಾರತಕ್ಕೆ ಸಂಬಂಧಿಸಿದಂತೆ ಅಲ್ಲ. ಸಾಂವಿಧಾನಿಕ ನೈತಿಕತೆಯು ಮುಖ್ಯ ನೈತಿಕತೆಯಾಗಿದ್ದು, ಪ್ರತಿಯೊಬ್ಬರೂ ಅದರ ಅಡಿಯಲ್ಲಿ ಬರುತ್ತಾರೆ” ಎನ್ನುತ್ತಾರೆ.

ಈ ತೀರ್ಪನ್ನು ಮತ್ತೆ ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ಅದರ ವಿರುದ್ಧ ಮತ್ತೆ ಚಳವಳಿ, ಮತ್ತೆ ಸಿಕ್ಕ ಜಯ ಹೀಗೆ ಇವುಗಳ ಬಗ್ಗೆ ಪುಸ್ತಕ ಬಿಡುಗಡೆಯಲ್ಲಿಯೂ ಮಾತನಾಡಿದ ಅಕ್ಕಯ್, ಸಾಂವಿಧಾನಿಕ ನೈತಿಕತೆಯನ್ನು ಅಳವಡಿಸಿಕೊಳ್ಳುವುದರ ಅಗತ್ಯದ ಬಗ್ಗೆ ಮತ್ತು ತಮ್ಮ ಹಕ್ಕುಗಳಿಗಾಗಿ ಮಾಡುವ ಹೋರಾಟವನ್ನು ಪ್ರತ್ಯೇಕವಾಗಿ ನೋಡದೆ ಸಮಸ್ತವಾಗಿ ಎಲ್ಲ ದುರ್ಬಲ ಸಮುದಾಯಗಳ ಹೋರಾಟಗಳನ್ನು ಒಟ್ಟಿಗೆ ಕೊಂಡೊಯ್ಯುವ – ಅದು ದಲಿತ ಹೋರಾಟ ಆಗಿರಲಿ, ಅಲ್ಪಸಂಖ್ಯಾತ ಧರ್ಮೀಯರ ಹೋರಾಟವಿರಲಿ ಅಥವಾ ಮಹಿಳಾ ಹಕ್ಕುಗಳ ಹೋರಾಟವಿರಲಿ- ಎಷ್ಟು ಮುಖ್ಯ ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು.

ಅಕ್ಕಯ್ ತಮ್ಮ ಆತ್ಮಕತೆಗೆ ಮೊದಲು ’ಕರುಣೆಗೊಂದು ಸವಾಲು’ ಎಂದು ಹೆಸರಿಸಿದ್ದರಂತೆ. ಪ್ರಸಕ್ತ ಸಂಚಿಕೆಯಲ್ಲಿ ಸುಭಾಷ್ ಅವರಿಗೆ ನೀಡಿರುವ ಸಂದರ್ಶನದಲ್ಲೂ ಅವರು ಇದರ ಬಗ್ಗೆ ವಿವರಿಸಿದ್ದಾರೆ. ಕರುಣೆ ಸಾಕೆನ್ನುವ ಅವರು, ಮನುಷ್ಯರಿದ್ದಾರೆ, ಅದರಲ್ಲಿ ವೈವಿಧ್ಯತೆ ಇದೆ, ಅದನ್ನು ಒಪ್ಪಿಕೊಳ್ಳುವುದನ್ನು ಕಲಿಯಿರಿ ಎಂದು ಸಮಸ್ತ ಸಹನಾಗರಿಕರಿಗೆ ಕರೆ ನೀಡುತ್ತಿದ್ದಾರೆ.

LGBTQ ಸಮುದಾಯ ಜಗತ್ತಿನಾದ್ಯಂತ ಸಂಭ್ರಮಿಸುವ ದಿನ ಜೂನ್ 28. ಅದೇ ದಿನ ಅಕ್ಕಯ್ ಪುಸ್ತಕದ ಬಿಡುಗಡೆ ಇತ್ತು. ಜೂನ್ ಅನ್ನು ಪ್ರೈಡ್ ತಿಂಗಳು ಎಂದೇ ಕರೆಯಲಾಗುತ್ತದೆ. ವೈವಿಧ್ಯತೆಯ ಬಣ್ಣಗಳನ್ನು ಅರಿತು ಅದರಲ್ಲಿ ಮಿಂದು ಒಂದಾಗಬೇಕಿರುವ ಮತ್ತು ದೇಶದ ಬಹುತ್ವವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಬೇಕಿರುವುದಕ್ಕೆ ಹೋರಾಟದ ಬದುಕು ಸಾಗಿಸಿ, ಕರುಣೆಯ ನಿರೀಕ್ಷೆಯನ್ನು ಪಕ್ಕಕ್ಕಿಟ್ಟು, ತಮ್ಮ ನೋವುಗಳನ್ನು ಇತರ ಅಂಚಿನಲ್ಲಿರುವ ಸಮುದಾಯದ ಜನರ ನೋವುಗಳಿಗೆ ಸಮೀಕರಿಸಿಕೊಂಡು ಹೋರಾಡಿದ ಅಕ್ಕಯ್, ಮಾನವಿ ಬಂದೋಪಾಧ್ಯಾಯ, ರೇವತಿ ಇಂತಹ ಮುಂತಾದವರ ಬದುಕು ಬರಹ ನಮಗೆ ಮುಖ್ಯವಾಗುತ್ತದೆ.

ರೇವತಿ ಅವರ ಬಗ್ಗೆ ಗೌರಿಯವರ ಒಂದು ಹಳೆಯ ಬರಹ, ಅಕ್ಕಯ್ ಅವರ ಸಂದರ್ಶನ ಮತ್ತು ಮಾನವಿ ಬಂದೋಪಾಧ್ಯಾಯ ಅವರ ಆತ್ಮಕತೆಯ ಕನ್ನಡಾನುವಾದದ ಒಂದು ಭಾಗವನ್ನು ಈ ಸಂಚಿಕೆಯಲ್ಲಿ ಪ್ರಕಟ ಮಾಡುವುದರೊಂದಿಗೆ ನಾವು ಪ್ರೈಡ್‌ನಲ್ಲಿ ಭಾಗಿಯಾಗುತ್ತಿದ್ದೇವೆ ಹಾಗೂ ಈ ಮೂರು ಜನ ತೋರಿಸಿಕೊಟ್ಟ ಭ್ರಾತೃತ್ವವನ್ನು ಅಪ್ಪಿಕೊಳ್ಳಲು ಮುಂದಾಗುತ್ತಿದ್ದೇವೆ.

ಭ್ರಾತೃತ್ವವೆನ್ನುವುದು (ಬಾಬಾಸಾಹೇಬರೂ ಪ್ರತಿಪಾದಿಸಿದಂತೆ) ರಾಷ್ಟ್ರವೊಂದನ್ನು ರೂಪಿಸುವ ಪ್ರಮುಖ ಮೌಲ್ಯಗಳಲ್ಲೊಂದು. ಅದೇ ದೇಶದ ಘೋಷಿತ ಗಡಿಗಳ ಒಳಗೆ ಬದುಕುವ ಸಹಜೀವಿಯನ್ನು ತನ್ನಂತೆ ಭಾವಿಸದಿದ್ದರೆ ಅದು ಹೇಗೆ ದೇಶವಾದೀತು? ಆ ದೃಷ್ಟಿಯಲ್ಲಿ ಮಹಿಳೆ, ಲೈಂಗಿಕ ಅಲ್ಪಸಂಖ್ಯಾತರು, ದಲಿತರು ಹಾಗೂ ಮುಸ್ಲಿಮರ ಜೊತೆಗಿನ ಬಾಂಧವ್ಯವನ್ನು ’ದೇಶವಾಸಿ’ಗಳು ನೋಡಬೇಕಿದೆ. ಅತ್ಯಂತ ಸಹಜವಾಗಿ. ಆಗ ನಿಜವಾದ ಅರ್ಥದಲ್ಲಿ ರಾಷ್ಟ್ರವು ಮೈದಾಳುತ್ತದೆ; ನಿಧಾನಕ್ಕೆ ಗಡಿಗಳನ್ನೂ ದಾಟಿದ ’ಮನುಷ್ಯ ಸಮಾಜ’ ರೂಪುಗೊಳ್ಳುತ್ತದೆ.


ಇದನ್ನೂ ಓದಿ: ನನ್ನ ತಪ್ಪಿನಿಂದ ರಾಹುಲ್ ಗಾಂಧಿ ಕೆಟ್ಟ ರೀತಿಯ ಟ್ರೋಲ್‌ಗೆ ಒಳಗಾದರು- ನಟಿ ರಮ್ಯಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...