Homeಕರ್ನಾಟಕಉತ್ತರ ಕನ್ನಡ ಡಿಸಿಸಿ ಅಧ್ಯಕ್ಷ ಪಟ್ಟವೇರಲು ಮಾಜಿ ಶಾಸಕ ಸೈಲ್ ಸರ್ಕಸ್!

ಉತ್ತರ ಕನ್ನಡ ಡಿಸಿಸಿ ಅಧ್ಯಕ್ಷ ಪಟ್ಟವೇರಲು ಮಾಜಿ ಶಾಸಕ ಸೈಲ್ ಸರ್ಕಸ್!

- Advertisement -
- Advertisement -

ಉತ್ತರ ಕನ್ನಡ ಬಿಜೆಪಿಯ ಆಯಕಟ್ಟಿನ ಸ್ಥಾನದಲ್ಲೆಲ್ಲ ಮೇಲ್ವರ್ಗದ ಮಹಾಮಹಿಮರೇ ತುಂಬಿಕೊಂಡು ಅಧಿಕಾರ ಸುಖ ಅನುಭವಿಸುತ್ತಿದ್ದಾರೆ. ಶೂದ್ರರನ್ನ ಬಿಜೆಪಿ ಸೂತ್ರಧಾರರು ಕೇವಲ ಕಾಲಾಳುಗಳಂತೆ ದುಡಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಹಿಂದುಳಿದ ಸಮುದಾಯದ ಮಾಜಿ ಶಾಸಕ ಸತೀಶ್ ಸೈಲ್ ಅವರಿಗೆ ಡಿಸಿಸಿ (ಜಿಲ್ಲಾ ಕಾಂಗ್ರೆಸ್ ಕಮಿಟಿ) ಅಧ್ಯಕ್ಷ ಪಟ್ಟಕಟ್ಟಲು ಪ್ರಯತ್ನ ತುಂಬಾ ನಾಜೂಕಾಗಿ ನಡೆಯುತ್ತಿದೆ. ಕಾಂಗ್ರೆಸ್ ಒಳರಾಜಕಾರಣದ ಸದ್ದಿನ ಹಿಂದಿನ ಈ ಸುದ್ದಿ ಜಿಲ್ಲೆಯಲ್ಲಿ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ತಮಾಷೆಯೆಂದರೆ ಬಿಜೆಪಿ ಸೇರಲು ಕಳೆದೆರಡು ವರ್ಷದಿಂದ ರಹಸ್ಯ ಕಾರ್ಯಾಚರಣೆ ನಡೆಸುತ್ತಲೇ ಬಂದ ಸೈಲ್‌ಗೆ ಸಲೀಸಾಗಿ ಜಿಲ್ಲಾ ಕಾಂಗ್ರೆಸ್‌ನ ಅತ್ಯುಚ್ ಪೀಠ ಪ್ರಾಪ್ತಿಯಾಗುತ್ತಿದೆ.

ಸರಿಸುಮಾರು ಹನ್ನೆರಡು ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಕುರ್ಚಿಯಲ್ಲಿ ಭದ್ರವಾಗಿ ಕೂತಿದ್ದ ಉದ್ಯಮಿ ಭೀಮಣ್ಣನಾಯ್ಕ್ ಅವರಿಂದ ಪಾರ್ಟಿಗೇನೂ ಪ್ರಯೋಜನವಾಗಿಲ್ಲ ಎಂಬ ಕೂಗು ಬಹಳ ದಿನದಿಂದ ಕೇಳಿಬರುತ್ತಲೇ ಇತ್ತು. ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಭಾಮೈದರಾದ ಭೀಮಣ್ಣ ತಮ್ಮ ವ್ಯವಹಾರ ಲಾಭದಿಂದ ಪಕ್ಷಕ್ಕಾಗಿ ಹಣ ಹರಿಸುತ್ತಿದ್ದರೇ ಹೊರತು ಸಂಘಟನೆ ಮಾಡುವ ಚಾಕಚಕ್ಯತೆ ಹೊಂದಿರಲಿಲ್ಲ ಎಂಬುದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಅಂಬೋಣ. ಜಿಲ್ಲೆಯ ಬಹುಸಂಖ್ಯಾತ ದೀವರ ಸಮುದಾಯದ ಭೀಮಣ್ಣ ರಾಜಕೀಯ ಅಸ್ತಿತ್ವವಿರುವುದೇ ಭಾವ ಬಂಗಾರಪ್ಪನವರ ನಾಮಬಲದಲ್ಲಿ.

ಹಲವು ಬಾರಿ ಜಿಲ್ಲೆಯಿಂದ ಎಂಪಿಗಿರಿಗೆ ಸ್ಪರ್ಧಿಸಿ ಒಮ್ಮೆ ಮಾತ್ರ ಗೆದ್ದಿದ್ದ ವಲಸೆಗಾರ್ತಿ ಮಾರ್ಗರೆಟ್ ಆಳ್ವ ವಿರೋಧಿ, ಜಿಲ್ಲೆಯ ಪುರಾತನ ರಾಜಕಾರಣಿ ಆರ್.ವಿ ದೇಶಪಾಂಡೆ ಬಣದಲ್ಲಿ ಗುರುತಿಸಿಕೊಂಡಿದ್ದ ಭೀಮಣ್ಣ ದೊಡ್ಡವರ ಕೃಪಾಶಿರ್ವಾದದಿಂದಲೇ ನಿರಂತರ ಒಂದೂ ಕಾಲು ದಶಕ ಡಿಸಿಸಿ ಅಧ್ಯಕ್ಷತೆ ಹಿಡಿದಿಟ್ಟುಕೊಂಡಿದ್ದರು. ಬಂಗಾರಪ್ಪ ಮತ್ತು ಮಾರ್ಗರೆಟ್ ಆಳ್ವ ನಡುವಿನ ವೈಮನಸ್ಸು ನಾಜೂಕಾಗಿ ಬಳಸಿಕೊಂಡ ದೇಶಪಾಂಡೆಯವರು, ಜಿಲ್ಲೆಯಲ್ಲಿ ಭೀಮಣ್ಣನವರನ್ನು ಮುಂದಿಟ್ಟುಕೊಂಡೇ ಎದುರಾಳಿಗಳ ಹೆಡೆಮುರಿ ಕಟ್ಟುತ್ತ ಸಾಗಿದ್ದರು. ಜನಸಾಮಾನ್ಯರೊಂದಿಗೆ ಅಷ್ಟೇ ಏಕೆ ಸ್ವಜಾತಿ ದೀವರ ನಡುವೆಯೂ ಸರಳವಾಗಿ ಬೆರೆಯಲಾಗದ ಭೀಮಣ್ಣ ಹಲವು ಬಾರಿ ಎಂಪಿ, ಎಮ್ಮೆಲ್ಲೆಗಿರಿಗೆ ಸ್ಪರ್ಧಿಸಿದರೂ ಗೆಲ್ಲಲಾಗಲಿಲ್ಲ. ಈ ದೌರ್ಬಲ್ಯದಿಂದಾಗಿ ಭೀಮಣ್ಣ ನಾಯಕನಾಗಲೇ ಇಲ್ಲವೆಂಬುದು ಅವರ ಹತ್ತಿರದವರ ಬೇಸರ.

ಮಾಜಿ ಸಂಸದೆ ಮಾರ್ಗರೆಟ್ ಆಳ್ವ ಭೀಮಣ್ಣನವರನ್ನು ಡಿಸಿಸಿ ಅಧ್ಯಕ್ಷತೆಯಿಂದ ಇಳಿಸಲೇಬೇಕೆಂದು ಒಂದಲ್ಲ ಒಂದು ತಂತ್ರ ಮಾಡುತ್ತಲೇ ಇದ್ದರು. ಆದರೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದ ಅವರ ಹಿಡಿತದಿಂದ ಡಿಸಿಸಿ ಕುರ್ಚಿ ಕಸಿಯಲು ಆಳ್ವರಿಗೆ ಆಗಲಿಲ್ಲ. ಆಳ್ವರವರು ಹಲವು ಸಲ ಭೀಮಣ್ಣನವರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಅವರು ಅಸಮರ್ಥನೆಂದು ಬಿಂಬಿಸಿದ್ದರು. ಆಗೆಲ್ಲ ದೇಶಪಾಂಡೆ ಕತ್ತಿ ಝಳಪಿಸಿ ಶಿಷ್ಯನನ್ನು ಸಂರಕ್ಷಿಸಿದ್ದರು. ಆದರೆ ಈಗ ಅದ್ಯಾಕೋ ಭೀಮಣ್ಣನವರ ಪರ ವಹಿಸಲು ದೇಶಪಾಂಡೆಯವರಿಗೆ ಸಾಧ್ಯವಾಗುತ್ತಿಲ್ಲ. ಭೀಮಣ್ಣನವರ 12 ವರ್ಷದ ರಿಪೋರ್ಟ್ ಕಾರ್ಡ್ ಮುಂದಿಟ್ಟುಕೊಂಡು ಮಾತಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎದುರು ತನ್ನ ಹಿಂಬಾಲಕನ ತಾರೀಫು ಮಾಡಲಾಗುತ್ತಿಲ್ಲ ದೇಶಪಾಂಡೆ ಸಾಹೇಬರಿಗೆ!

ಡಿಸಿಸಿ ಅಧ್ಯಕ್ಷರ ಬದಲಾವಣೆ ಪಕ್ಕ ಎಂಬ ಸಂದೇಶ ಬರುತ್ತಿದ್ದಂತೆಯೇ ಮಾರ್ಗರೆಟ್ ಆಳ್ವ ಮತ್ತು ದೇಶಪಾಂಡೆ ತಮ್ಮ ಅನುಯಾಯಿಗಳಿಗೆ ಪೀಠ ಕೊಡಿಸಲು ಕರಾಮತ್ತು ಶುರು ಹಚ್ಚಿಕೊಂಡುಬಿಟ್ಟಿದ್ದರು. ಮಾಜಿ ಡಿವೈಸಿಸಿ ಅಧ್ಯಕ್ಷ ರವೀಂದ್ರನಾಥ ನಾಯ್ಕ್, ಮಾಜಿ ಶಾಸಕ ಹಾಲಕ್ಕಿ ಬುಡಕಟ್ಟಿನ ಕೆ.ಎಚ್.ಗೌಡ, ಆಳ್ವ ಅವರ ಮಗ ನಿವೇದಿತ್ ಆಳ್ವ ಹೀಗೆ ಹಲವು ಹೆಸರುಗಳು ತೇಲಾಡಿದವು. ಆದರೆ ಇದ್ದಕ್ಕಿದಂತೆ ಬಿಜೆಪಿಯತ್ತ ತೇಲುಗಣ್ಣು ಬಿಡುತ್ತಿದ್ದ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಹೆಸರು ಮುನ್ನಲೆಗೆ ಬಂದುಬಿಟ್ಟಿತು. ಅದಿರೋದ್ಯಮಿಯಾಗಿರುವ ಸೈಲ್ ಬಿಜೆಪಿಯಲ್ಲಿ ಪ್ರಭಾವಿಗಳಾಗಿರುವ ತನ್ನ ಉದ್ಯಮ ಮಿತ್ರರ ಸಹಕಾರದಿಂದ ಬಿಜೆಪಿ ಸೇರಲು ಸರ್ಕಸ್ ಮಾಡುತ್ತಿದ್ದರು. ಆದರೆ ಸಿಎಂ ಯಡಿಯೂರಪ್ಪರಿಗೆ ಆಪ್ತರಾಗಿರುವ ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ಅಡಿಗಡಿಗೆ ಸೈಲ್‌ಗೆ ಅಡ್ಡಿಪಡಿಸಿ ಯಶಸ್ವಿಯೂ ಆಗಿದ್ದರು.

ಕಾರವಾರದ ಲೋಕಲ್ ರಾಜಕೀಯ ಮತ್ತು ಹಣ ಖರ್ಚು ಮಾಡುವ ಸೈಲ್ ಅವರ ತಾಕತ್ತು ಡಿಸಿಸಿ ಹೊಸ ಅಧ್ಯಕ್ಷರ ನೇಮಕಾತಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಮೊಟ್ಟಮೊದಲ ಆಪರೇಷನ್ ಕಮಲದ ಸ್ಯಾಂಪಲ್ ಎಂದೇ ಹೆಸರಾಗಿರುವ ಮಾಜಿ ಸಚಿವ ಆನಂದ ಅಸ್ನೋಟಿಕರ್ ಬಿಜೆಪಿಯಲ್ಲಿ ಮೂಲೆಗುಂಪಾಗಿ ಸೇರಿದರೂ ಭರ್ಕತ್ ಆಗದೇ ಅತಂತ್ರವಾಗಿ ತೊಳಲಾಡುತ್ತಿದ್ದಾರೆ. ಈಗ ಆನಂದ ಕಾಂಗ್ರೆಸ್ ಸೇರಲು ಶತಾಯಗತಾಯ ಹಾರಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಆಳ್ವ ಮತ್ತು ದೇಶಪಾಂಡೆ ಇಬ್ಬರನ್ನೂ ಎದುರು ಹಾಕಿಕೊಂಡಿರುವ ಅಸ್ನೋಟಿಕರ್ ಅವರಿಗೆ ಕಾಂಗ್ರೆಸ್ ಕದ ತೆರೆಯುತ್ತಲೇ ಇಲ್ಲ. ಈಗ ಮತ್ತೊಂದು ಸುತ್ತಿನ ಪ್ರಯತ್ನ ಶುರುಮಾಡಿರುವ ಅಸ್ನೋಟಿಕರ್ ಇತ್ತೀಚೆಗಷ್ಟೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಮಧು ಬಂಗಾರಪ್ಪರ ಬೆನ್ನಿಗೆ ಬಿದ್ದು ಕಾಂಗ್ರೆಸ್ ಸೇರಿಸುವಂತೆ ಗೋಳಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಆನಂದ್ ಅಸ್ನೋಟಿಕರ್ ಅವರ ಅಂಥದೊಂದು ಪ್ರಯತ್ನ ಕ್ಲಿಕ್ ಆಗಿಬಿಟ್ಟರೆ ತಾನು ಕಾಂಗ್ರೆಸ್‌ನಲ್ಲಿ ನೆಲೆ-ಬೆಲೆ ಕಳೆದುಕೊಳ್ಳಬೇಕಾಗುತ್ತದೆಂದು ಲೆಕ್ಕಾಹಾಕಿದ ಸತೀಶ್ ಸೈಲ್ ಡಿಸಿಸಿ ಅಧ್ಯಕ್ಷತೆ ಬೇಡಿಕೆ ಇಟ್ಟುಬಿಟ್ಟರು. ಬಿಜೆಪಿ ಸೇರುವುದು ಸಾಧ್ಯವಾಗದೆಂಬುದು ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸಲ್ಲೇ ಬೇರು ವಿಸ್ತರಿಸುವ ತಂತ್ರವನ್ನು ಸೈಲ್ ಹಾಕಿಕೊಂಡಿದ್ದರು. ಇದಕ್ಕವರಿಗೆ ಸುಪ್ರೀಮ್ ಕೋರ್ಟ್ ನ್ಯಾಯವಾದಿಯಾಗಿರುವ ಮತ್ತು ರಾಹುಲ್ ಗಾಂಧಿ ಜತೆ ಒಡನಾಟವೂ ಹೊಂದಿರುವ ಕಾರವಾರ ಮೂಲದ ದೇವದತ್ ಕಾಮತ್ ಅವರ ಸಹಕಾರವು ಸಿಕ್ಕಿದೆ. ಹಲವು ವರ್ಷದಿಂದ ಉತ್ತರ ಕನ್ನಡದ ಕಾಂಗ್ರೆಸ್ ಸಂಸದನಾಗುವ ಕನಸು ಕಾಣುತ್ತಿರುವ ಈ ವಕೀಲ ದಿಲ್ಲಿಯಲ್ಲಿ ಸೈಲ್ ಪರ ಲಾಬಿ ನಡೆಸಿದ್ದರು ಎನ್ನಲಾಗಿದೆ. ನೇರ ಹೈಕಮಾಂಡ್‌ನಿಂದಲೇ ಸೈಲ್ ಹೆಸರು ಶಿಫಾರಸ್ಸಾಗಿರುವುದರಿಂದ ಡಿಕೆಶಿ ಜಿಲ್ಲಾ ಕಾಂಗ್ರೆಸ್‌ನ ಎರಡೂ ಬಣಗಳಿಗೆ ಆತ ಸಖ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದುರ್ಬಲವಾಗಿರುವ ಜಿಲ್ಲಾ ಕಾಂಗ್ರೆಸ್ ಕಟ್ಟಲು ಬೇಕಾದ ಹಣಕಾಸು ಬಲ ಸೈಲ್ ಅವರಿಗೆ ಇರುವುದರಿಂದ ಎಲ್ಲರೂ ದುಸರಾ ಮಾತಾಡದೆ ಒಪ್ಪಿಕೊಂಡಿದ್ದಾರೆ!

ಸೈಲ್‌ರಿಂದ ಉತ್ತರಕನ್ನಡದಲ್ಲಿ ಕಾಂಗ್ರೆಸ್‌ಗೆ ಮರುಹುಟ್ಟು ಕೊಡಲು ಸಾಧ್ಯವೋ? ಇಲ್ಲವೋ? ಎಂಬುದು ದೇಶಪಾಂಡೆ, ಆಳ್ವಾ ಮತ್ತು ಸ್ವತಃ ಸೈಲ್ ಅವರಿಗೂ ಗೊತ್ತಿಲ್ಲ. ಆದರೆ ಸೈಲ್ ಅಧ್ಯಕ್ಷತೆ ವಹಿಸಿಕೊಂಡರೆ ಇವರೆಲ್ಲರ ವೈಯಕ್ತಿಕ ಅಜೆಂಡಾ ಈಡೇರಿಕೆಗೆ ಒಂದಿಷ್ಟು ಸಹಾಯವಾಗುತ್ತದೆ. ಮಗನನ್ನು ಶಿರಸಿಯಿಂದ ಶಾಸಕನಾಗಿಸುವ ಆಸೆ ಆಳ್ವಾ ಅವರದ್ದಾದರೆ, ಮುಂಬರುವ ಪಾರ್ಲಿಮೆಂಟ್ ಇಲೆಕ್ಷನ್‌ನಲ್ಲಿ ತಮ್ಮ ಮಗನನ್ನು ಸಂಸದನಾಗಿ ಮಾಡಬೇಕೆಂಬ ಯೋಜನೆಯಲ್ಲಿ ದೇಶಪಾಂಡೆಯಿದ್ದಾರೆ. ತಾನು ಡಿಸಿಸಿ ಅಧ್ಯಕ್ಷನಾದರೆ ಕಾರವಾರದಲ್ಲಿ ತನಗೆ ಎದುರಾಳಿಯಾಗಿರುವ ಅಸ್ನೋಟಿಕರ್ ಕಾಂಗ್ರೆಸ್ ಒಳಬರದಂತೆ ಶಾಶ್ವತವಾಗಿ ಕದ ಹಾಕಬಹುದೆಂಬ ಲೆಕ್ಕಾಚಾರ ಸೈಲ್‌ರದು. ಈ ಮೇಲಾಟದ ಮಧ್ಯದಲ್ಲಿ ನಿಂತ ನೀರಾಗಿರುವ ಜಿಲ್ಲಾ ಕಾಂಗ್ರೆಸ್ ರಾಜಕಾರಣ ಭೀಮಣ್ಣನಾಯ್ಕ್ ನಿರ್ಗಮನದಿಂದ ಹರಿಯಲು ಶುರುವಾಗಬಹುದೆಂಬ ಭಾವನೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರದಾಗಿದೆ.


ಇದನ್ನೂ ಓದಿ: ಉಪ್ಪಿನಂಗಡಿ: ಪೊಲೀಸರ ಬೇಜವಾಬ್ದಾರಿಯಿಂದ ಯುವಕ ಸಾವು , ನಿಲ್ಲದ ಪೊಲೀಸ್‌ ದೌರ್ಜನ್ಯ- ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...