ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿಯ ಆತೂರಿನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಟಾಟಾ ಏಸ್ ಗಾಡಿ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದ ಘಟನೆ ಜೂನ್ 29ಕ್ಕೆ ನಡೆದಿತ್ತು. ಪೊಲೀಸರ ಬೇಜವಾಬ್ದಾರಿಯಿಂದ ದುರ್ಘಟನೆ ನಡೆದಿದೆ ಎಂದು ಆರೋಪಿಸಿ, ಆಕ್ರೋಶಗೊಂಡ ಸ್ಥಳೀಯರು ಪೊಲೀಸ್ ಚೌಕಿಯನ್ನು ಧ್ವಂಸಗೊಳಿಸಿದ್ದರು.
ರಾಮಕುಂಜ ಕ್ರಾಸ್ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ ಪೊಲೀಸ್ ಚೌಕಿಯನ್ನು ಕೆಡವಿದ್ದ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದಾದ ಬಳಿಕ ಕಡಬ ಪೊಲೀಸರು 39 ಕ್ಕೂ ಅಧಿಕ ವ್ಯಕ್ತಿಗಳ ಮೇಲೆ ದೂರು ದಾಖಲಿಸಿಕೊಂಡು ಸುಲಿಗೆಗೆ ಇಳಿದಿದ್ದಾರೆ, ಅಮಾಯಕರ ಮನೆಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜೂನ್ 29 ರಂದು ಆತೂರು ಬೈಲು ನಿವಾಸಿ ಹಾರಿಸ್ (33), ತನ್ನ ತಾಯಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ನಲ್ಲಿ ಪೊಲೀಸರು ತಡೆದಿದ್ದರು. ದಾಖಲಾತಿ ತೆಗೆದುಕೊಂಡು ರಸ್ತೆ ದಾಟುವ ವೇಳೆ ಟಾಟಾ ಏಸ್ ಗೂಡ್ಸ್ ವಾಹನ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದರು. ಇದರಿಂದಾಗಿ ಮೃತನ ಸಂಬಂಧಿಕರು ಮತ್ತು ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೂಡ್ಸ್ ವಾಹನ ಹೀಗೆ ಏಕಾಏಕಿ ಬರಲು ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ದಿಕ್ಕಿನಲ್ಲಿ ಸನ್ನೆ ಮಾಡಿದ್ದು ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: ‘ಕಾಂಗ್ರೆಸ್ ಟೂಲ್ಕಿಟ್ ಎಕ್ಸ್ಪೋಸ್ಡ್’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!
ಘಟನೆ ಕುರಿತು, ಪೊಲೀಸ್ ಚೆಕ್ಪೋಸ್ಟ್ ಧ್ವಂಸ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಚಿನ್ನಪ್ಪ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಸ್ಥಳೀಯರ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಸ್ಥಳೀಯರೊಬ್ಬರು, “ಅದು ತಾತ್ಕಾಲಿಕ ಚೆಕ್ ಪೋಸ್ಟ್ ಆಗಿತ್ತು. ಪೊಲೀಸರು ಅಲ್ಲಿ ಕುಳಿತು ಕೆಲಸ ಕಾರ್ಯಗಳಿಗೆ ಹೋಗುವ ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದರು. ಹ್ಯಾರಿಸ್ ಘಟನೆಯಿಂದ ಜನರ ಕೋಪ ಹೆಚ್ಚಾಗಿ ಚೆಕ್ ಪೋಸ್ಟ್ ಧ್ವಂಸ ಮಾಡಿದ್ದಾರೆ. ಆದರೆ, ಇದನ್ನೇ ನೆಪವಾಗಿಸಿ ಪೊಲೀಸರು ಅನೇಕ ಹೋರಾಟಗಾರರು, ಸಂಘಟನೆಯ ಸದಸ್ಯರು, ಗ್ರಾಮಪಂಚಾಯಿತಿ ಸದಸ್ಯರು ಮತ್ತು ಅಮಾಯಕ ಯುವಕರನ್ನು ಗುರಿಯಾಗಿಸಿ 39 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಗಳಿಗೆ ನುಗ್ಗಿ ಯುವಕರನ್ನು ಎಳೆದೊಯ್ಯುತ್ತಿದ್ದಾರೆ. ಎಫ್ಐಆರ್ನಲ್ಲಿ ನಿನ್ನ ಹೆಸರಿದೆ ಎಂದು ಬೆದರಿಸಿ ಹಣ ನೀಡುವಂತೆ ಬೆದರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಕಡಬ ಪೋಲೀಸ್ ಠಾಣಾ ವ್ಯಾಪ್ತಿಯ ರಾಮಕುಂಜದಲ್ಲಿ ಅಮಾಯಕ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದು, ನಿನ್ನೆ ಮಧ್ಯರಾತ್ರಿ ಮನೆಗೆ ನುಗ್ಗಿ ದೌರ್ಜನ್ಯವೆಸಗಿದ ಘಟನೆ ನಡೆದಿದೆ. ಮನೆಗೆ ನುಗ್ಗಿದ 7 ರಿಂದ 9 ಮಂದಿ ಇದ್ದ ಪೋಲೀಸ್ ತಂಡ ಮನೆಯ ವಸ್ತುಗಳನ್ನು ನಾಶ ಪಡಿಸಿ, ಮಹಿಳೆಯರಿಗೆ ಗನ್ ತೋರಿಸಿ, ನಿಮ್ಮ ಮಾನ ಹರಾಜು ಮಾಡುತ್ತೇವೆ ಎಂದು ಬೆದರಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಜುಲೈ 6 ರಂದು ತಡರಾತ್ರಿ ಕಡಬ ಪೊಲೀಸರು ಮಾನಸಿಕ ಅಸ್ವಸ್ಥ ಇರುವ ಮನೆಗೂ ನುಗ್ಗಿ ತಪಾಸಣೆ ನಡೆಸುವ ಉದ್ದೇಶವಾದರೂ ಏನು..? ಕೋವಿಡ್ ಪರಿಸ್ಥಿತಿಯಲ್ಲೂ ಇಂತಹ ಕ್ರೌರ್ಯ ನಡೆಸಲು ಪೊಲೀಸರಿಗೆ ಮನಸ್ಸಾದರೂ ಹೇಗೆ ಬಂತು..? ಕಾನೂನು ನೀತಿ ನಿಯಮ ಎಂಬುದು ಜನಸಾಮಾನ್ಯರಿಗೆ ಮಾತ್ರವೇ..? ಇದು ಕಡಬ ಪೊಲೀಸರಿಗೆ ಅನ್ವಯ ಆಗುವುದಿಲ್ಲವೇ..? ಮಕ್ಕಳು, ವೃದ್ಧರು, ಮಹಿಳೆಯರು ಇರುವ ಮನೆಗೆ ಬಾಗಿಲು ಮುರಿದು ನುಗ್ಗುವಾಗ ಇವರಿಗೆ ತಮ್ಮ ತಮ್ಮ ಮನೆಯವರ ನೆನಪಾಗುವುದಿಲ್ಲವೇ? ಕೊರೊನಾವು ಜಗತ್ತಿಗೆ ಮನುಷ್ಯತ್ವದ ಪಾಠ ಕಲಿಸಿಬಿಟ್ಟಿದೆ. ಆದರೆ ಕಡಬ ಪೊಲೀಸರು ಇನ್ನೂ ಪಾಠ ಕಲಿತಿಲ್ಲ. ಮಹಿಳೆಯರ ಕಣ್ಣೀರಶಾಪ ಒಂದಲ್ಲ ಒಂದು ದಿನ ತಟ್ಟೇ ತಟ್ಟುತ್ತದೆ” ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸರ ಗೂಂಡಾ ವರ್ತನೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು, ಇದರ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಡಿಸಿಎಂ ಸವದಿ ಪುತ್ರನ ಕಾರು ಡಿಕ್ಕಿ, ರೈತ ಸಾವು: ಪ್ರತ್ಯಕ್ಷದರ್ಶಿ ಹೇಳಿದ್ದೇನು?