ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ಕೊನೆಗೂ ಮುಗಿದಿದೆ. ಹಾಲಿ ಸಚಿವರಾಗಿದ್ದ 11 ಮಂದಿ ರಾಜೀನಾಮೆ ನೀಡಿದ್ದು, ಹೊಸದಾಗಿ ಒಟ್ಟು 43 ಜನರಿಗೆ ಸ್ಥಾನ ಕಲ್ಪಿಸಲಾಗಿದೆ. ಅದರಲ್ಲಿ ಕರ್ನಾಟಕದ ನಾಲ್ವರು ಸೇರಿದ್ದಾರೆ.
ಕರ್ನಾಟವನ್ನು ಪ್ರತಿನಿಧಿಸಿ ಈ ಮೊದಲು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದ ಡಿ.ವಿ ಸದಾನಂದ ಗೌಡರನ್ನು ಸಂಪುಟದಿಂದ ಕೈಬಿಡಲಾಗಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗದ ಎ.ನಾರಾಯಣಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕರ್ನಾಟಕದ ವತಿಯಿಂದ ಮೋದಿ ಸಂಪುಟ ಸೇರಿದವರಾಗಿದ್ದಾರೆ. ಇವರ ಸಣ್ಣ ಪರಿಚಯ ಹೀಗಿದೆ.
ಶೋಭಾ ಕರಂದ್ಲಾಜೆ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರು, ಕರ್ನಾಟಕ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾದ ಶೋಭಾ ಕರಂದ್ಲಾಜೆಯವರು ರಾಜ್ಯದಲ್ಲಿ ಬಿಜೆಪಿಯಿಂದ ಆಯ್ಕೆಯಾದ ಏಕೈಕ ಮಹಿಳಾ ಸಂಸದರು. ಎಬಿವಿಪಿ ಹಿನ್ನೆಲೆಯ ಇವರು ಯಡಿಯೂರಪ್ಪನವರ ಆಪ್ತರು. 2004ರಲ್ಲಿ ವಿಧಾನ ಪರಿಷತ್ ಸದಸ್ಯೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಇವರು 2008ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ, ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ರಾಜ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಕರಾವಳಿ ಕರ್ನಾಟಕ, ಒಕ್ಕಲಿಗ ಸಮುದಾಯ ಮತ್ತು ಮಹಿಳೆ ಈ ಎಲ್ಲಾ ಮಾನದಂಡಗಳಿಂದ ಇವರು ಸಚಿವ ಸಂಪುಟ ಸೇರಿದ್ದಾರೆ ಎನ್ನಲಾಗುತ್ತಿದೆ.
ಎ.ನಾರಾಯಣಸ್ವಾಮಿ
ಚಿತ್ರದುರ್ಗ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿದ್ದ ಎ.ನಾರಾಯಣಸ್ವಾಮಿಯವರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ. ಎಡಗೈ ದಲಿತ ಸಮುದಾಯವನ್ನು ಪ್ರತಿನಿಧಿಸುವ ಕಾರಣದಿಂದ ಇವರಿಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗುತ್ತಿದೆ.
ಎ ನಾರಾಯಣಸ್ವಾಮಿಯವರು ಬೆಂಗಳೂರಿನ ಆನೇಕಲ್ನಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಮಾಜ ಕಲ್ಯಾಣ ಸಚಿವರಾಗಿಯೂ ಕೆಲಸ ಮಾಡಿದ್ದರು. ಈಗ ಕೇಂದ್ರ ಸಚಿವರಾಗಿದ್ದಾರೆ.
ಭಗವಂತ ಖೂಬಾ
ಎರಡು ಬಾರಿ ಬೀದರ್ ಕ್ಷೇತ್ರದ ಸಂಸದರಾದ ಭಗವಂತ ಖೂಬಾರವರು ಲೋಕಸಭೆ ಸದಸ್ಯರಿಗೆ ಗಣಕ ವಿತರಿಸುವ ಸಮಿತಿ ಮತ್ತು ಸದಸ್ಯರಾಗಿದ್ದಾರೆ. ಈ ಬಾರಿ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜೀವ್ ಚಂದ್ರಶೇಖರ್
ಮೂಲತಃ ಗುಜರಾತ್ನವರಾದ ರಾಜೀವ್ ಚಂದ್ರಶೇಖರ್ 2006ರಿಂದ ಸ್ವತಂತ್ರ ರಾಜ್ಯಸಭಾ ಸದಸ್ಯರಾಗಿದ್ದು, 2018ರಲ್ಲಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇವರು ಬಿಜೆಪಿ ರಾಷ್ಟ್ರೀಯ ವಕ್ತಾರರು ಹೌದು.
ಏಷ್ಯಾ ನೆಟ್ ಮಾಧ್ಯಮ ಸಂಸ್ಥೆಯ ಮಾಲೀಕರದು ಇವರು ಇತ್ತೀಚೆಗೆ ಪುದುಚೇರಿಯಲ್ಲಿ ಎನ್ಡಿಎ ಗೆಲುವಿಗೆ ಕಾರ್ಯತಂತ್ರ ರೂಪಿಸಿದವರು ಎಂದು ಹೇಳಲಾಗುತ್ತಿದ್ದು, ಈ ಕಾರಣಕ್ಕೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಮೋದಿ ಸಂಪುಟ ಸೇರಿದ 43 ಜನರ ಪಟ್ಟಿ ಈ ಕೆಳಗಿನಂತಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಸಂಪುಟ ಪುನರ್ರಚನೆ: ಡಾ. ಹರ್ಷವರ್ಧನ್ ಸೇರಿ 9 ಸಚಿವರ ರಾಜೀನಾಮೆ