Homeಕ್ರೀಡೆಒಲಂಪಿಕ್ಟೋಕಿಯೋದಲ್ಲಿ ಭಾರತೀಯ ಹಾಕಿ; ಗತವೈಭವದ ಮರುಕಳಿಕೆಗೆ ನಾಂದಿ!

ಟೋಕಿಯೋದಲ್ಲಿ ಭಾರತೀಯ ಹಾಕಿ; ಗತವೈಭವದ ಮರುಕಳಿಕೆಗೆ ನಾಂದಿ!

- Advertisement -
- Advertisement -

ಆಗಸ್ಟ್ 6, 2021 ಭಾರತದ ಹಾಕಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥ ದಿನ. ಸುವರ್ಣಾಕ್ಷರ ಏಕೆ ಎಂದು ನೀವು ಕೇಳಬಹುದು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಪಡೆದ ಕಂಚಿಗೆ ಚಿನ್ನದಷ್ಟೇ ಬೆಲೆಯಿದೆ. ಇದಕ್ಕೆ ಮುಖ್ಯ ಕಾರಣ ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ಹಲವು ವರ್ಷಗಳಿಂದ ಆದ ಹಿನ್ನಡೆ. ಸುದೀರ್ಘ 41 ವರ್ಷಗಳ ನಂತರ ಈಗ ಭಾರತ ಹಾಕಿ ತಂಡ ಪದಕ ಪಡೆದುಕೊಂಡಿದೆ. ನಾಲ್ಕು ದಶಕಗಳ ನಿರಾಸೆ, ಹತಾಶೆ, ಕಣ್ಣೀರಿನ ನಂತರ ಕೋವಿಡ್ ಪಿಡುಗಿನ ಮಧ್ಯದಲ್ಲಿಯೇ, ಪ್ರೇಕ್ಷಕರಿಲ್ಲದ
ಟೋಕಿಯೋದ ಕ್ರೀಡಾಂಗಣದಲ್ಲಿ ಬಿಸಿಲಿನ ನಡುವೆಯೇ ಅತೀವ ಆರ್ದ್ರತೆಯಲ್ಲಿ ಬೆವರು ಸುರಿಸಿ, ಪಣತೊಟ್ಟು ನಂತರ ಆನಂದಬಾಷ್ಪ ಹೊರಸೂಸಿ ಇಡೀ ಭಾರತ ಮತ್ತೆ ಹಾಕಿಯತ್ತ ಗಮನಹರಿಸುವಂತೆ ಸದ್ಯದ ಹಾಕಿ ತಂಡ ಕಾರ್ಯನಿರ್ವಹಿಸಿದೆ.

ಎರಡು ವರ್ಷಗಳಿಂದ ಬೆಂಗಳೂರಿನ ’ಸಾಯಿ’ ತರಬೇತಿ ಶಿಬಿರದಲ್ಲಿ ಬಸವಳಿದು, ಬೆಂಡಾಗಿ ಕೋವಿಡ್ ನಡುವೆಯೂ ಶ್ರಮವಹಿಸಿ ಒಲಿಂಪಿಕ್ಸ್ ಪದಕ ಗಳಿಸುವ ಛಲದಿಂದ ತಮಗಿಂತ ಕೆಳಗಿನ ರ್‍ಯಾಂಕಿಂಗ್‌ನಲ್ಲಿರುವ ಯಾವುದೇ ತಂಡದ ವಿರುದ್ಧ ಸೋಲದೇ ಕಂಚಿಗಾಗಿ ನಡೆದ ತೀವ್ರ ಪೈಪೋಟಿಯಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಹಾಗೂ ರಿಯೋ 2016ರಲ್ಲಿ ಕಂಚಿನ ಪದಕ ಪಡೆದಿದ್ದ ಜರ್ಮನಿಯ ವಿರುದ್ಧ ಗಳಿಸಿದ ಅತ್ಯಂತ ರೋಚಕ ಜಯ ಎಲ್ಲ ಹಾಕಿ ಪ್ರೇಮಿಗಳು ಹುಚ್ಚೆದ್ದು ಕುಣಿಯುವ ಹಾಗೆ ಮಾಡಿತು. ಈ ಒಲಿಂಪಿಕ್ಸ್ ಪದಕದಿಂದ ಮತ್ತೆ ಭಾರತೀಯ ಹಾಕಿ ದಶಕಗಳ ನಂತರ ಮೈಕೊಡವಿ ಪುಟಿದೇಳುವಂತೆ ಮಾಡಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪೂಲ್ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಇತ್ತು. ಆ ಪಂದ್ಯದಲ್ಲಿ ಗಳಿಸಿದ ರೋಚಕ 3-2 ಅಂತರದ ಜಯ ಅತ್ಯಂತ ಮಹತ್ವಪೂರ್ಣವಾಗಿತ್ತು. ಎರಡು ಗುಂಪುಗಳಲ್ಲಿ ಇದ್ದ 8 ತಂಡಗಳಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ಅವಕಾಶವಿತ್ತು. ಸದ್ಯದ ಭಾರತೀಯ ತಂಡದಲ್ಲಿ ಅನುಭವಿ ಹಾಗೂ ಯುವಪ್ರತಿಭೆಗಳ ಮಿಶ್ರಣ ಅಪರೂಪವಾಗಿತ್ತು. 10 ಯುವಕರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡುತ್ತಿದ್ದರು. ಗೋಡೆಯಂತಿದ್ದು 15 ವರ್ಷಗಳಿಂದ ಭಾರತದ ಗೋಲ್ ಕಾಯುತ್ತಿರುವ ಶ್ರೀಜೇಶ್, ಡ್ರ್ಯಾಗ್ ಫ್ಲಿಕ್ ಪರಿಣಿತರಾದ ರುಪಿಂದರ್ ಪಾಲ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಸಿಂಗ್, ನಾಯಕ ಮನಪ್ರೀತ್ ಸಿಂಗ್ ಹಾಗೂ ಸುರಿಂದರ್ ಸಿಂಗ್ ಹೊಸ ಆಟಗಾರರಿಗೆ ತಮ್ಮ ಅನುಭವವನ್ನು ಧಾರೆಯೆರೆದರು.

ಆದರೆ ಎರಡನೆಯ ಪಂದ್ಯದಲ್ಲೇ ವಿಶ್ವಚಾಂಪಿಯನ್ ಆಸ್ಟೇಲಿಯಾ ವಿರುದ್ಧ 7-1ರ ಸೋಲು ಅನಿರೀಕ್ಷಿತವಾಗಿತ್ತು. ಈ ಭಾರಿ ಸೋಲಿನ ಆಘಾತದಿಂದ ಬೇಗನೇ ಚೇತರಿಸಿಕೊಂಡು, ಅಮೋಘ ಧೈರ್ಯದಿಂದ ಪುಟಿದೆದ್ದು ಬಂದ ಭಾರತ ಸ್ಪೇನ್, 2016ರ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಮತ್ತು ಜಪಾನ್ ತಂಡಗಳಿಗೆ ಸೋಲುಣಿಸಿ 2016ರಲ್ಲಿ ನಡೆದಂತೆಯೇ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಗ್ರೇಟ್ ಬ್ರಿಟನ್ ವಿರುದ್ಧ ಗಳಿಸಿದ ೩-೧ರ ಜಯ ಮನಮೋಹಕವಾಗಿತ್ತು.

ಆದರೆ ಸೆಮಿಫೈನಲ್ ಪ್ರವೇಶಿಸಿದರೆ ಪದಕದ ಒತ್ತಡ ಹೆಚ್ಚಾಗಿರುತ್ತದೆ ಅಲ್ಲದೆ ವಿಶ್ವಚಾಂಪಿಯನ್ ಬೆಲ್ಜಿಯಂ ಸೋಲು ಅತಿ ಕಠಿಣವೆಂಬ ಮಾತೂ ಪ್ರಚಲಿತದಲ್ಲಿತ್ತು. ಆದರೂ ಇಡೀ ಭಾರತ ಎಚ್ಚೆತ್ತು ನೋಡುವಂತೆ ಆಡಿ, 5-2ರ ಅಂತರದ ಸೋತರೂ ನಿಜವಾದ ಹೋರಾಟವನ್ನು ಭಾರತ ಹಾಕಿ ತಂಡ ಎತ್ತಿ ತೋರಿಸಿತ್ತು. ಭಾರತ ತಂಡ ಸೋತರೂ ಕಂಚಿನ ಆಸೆ ಇನ್ನೂ ಜೀವಂತವಾಗಿತ್ತು.

ಜರ್ಮನಿ ಒಲಿಂಪಿಕ್ಸ್‌ನಲ್ಲಿ ಒಂದು ಬಾರಿ ಚಿನ್ನ ಪಡೆದ ತಂಡ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ನೋಡುತ್ತಿದ್ದಂತೆ ಜರ್ಮನಿ 2-0 ಲೀಡ್ ಪಡೆದಾಗಲೂ ಭಾರತ ಹಾಕಿ ತಂಡ ಧೃತಿಗೆಡಲಿಲ್ಲ. ಮೂರನೇ ಕ್ವಾರ್ಟರ್ ಸಮಯಕ್ಕೆ ಸ್ಕೋರ್ 3-3 ರಲ್ಲಿ ಸಮವಾಗಿತ್ತು. ರುಪಿಂದರ್, ಗುರ್ಜಂತ್, ಸಿಮ್ರನ್‌ಜೀತ್ ಮತ್ತು ಹಾರ್ದಿಕ್ ಇವರುಗಳ ಪ್ರತಿಭೆಯ ಮೂಲಕ 5-3 ಲೀಡ್ ಪಡೆದಾಗ ಕೂಡ ಕಂಚಿನ ಪದಕ ನಿಶ್ಚಿತವಾಗಿರಲಿಲ್ಲ. ನಾಲ್ಕನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ಗೋಲ್ ಹೊಡೆದು ಸ್ಕೋರ್ 5-4 ಆದಾಗ ನಿಜವಾದ ಒತ್ತಡ ಭಾರತದ ಮೇಲಿತ್ತು. ಈ ಲೀಡ್ ಉಳಿಸಿಕೊಳ್ಳಲು ಭಾರತ ಪಟ್ಟಪಾಡು ನೋಡಲಿಕ್ಕಾಗಲಿಲ್ಲ. ಆ ಪಂದ್ಯದ ಕೊನೆಯ ಹತ್ತು ನಿಮಿಷಗಳು ಒಂದು ಯುಗದಂತೆ ಅನ್ನಿಸಿತ್ತು. ಇನ್ನೂ 6 ನಿಮಿಷ ಇದೆ ಎನ್ನುವಾಗ ಜರ್ಮನಿಗೆ ಪೆನಾಲ್ಟಿ ಕಾರ್ನರ್ ಸಿಕ್ಕಿ ಹೃದಯ ಬಾಯಿಗೆಬಂದಿತ್ತು. ತಮ್ಮ ಹಾಕಿ ಜೀವನದ ಅತ್ಯಂತ ಮಹೋನ್ನತ ಸೇವ್ ಮಾಡಿದ ಶ್ರೀಜೇಶ ಭಾರತಕ್ಕೆ ಕಂಚು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಎಲ್ಲ ಆಟಗಾರರು, ಸಹಾಯಕ ಸಿಬ್ಬಂದಿ, ಆಸ್ಟ್ರೇಲಿಯಾ ಮೂಲದ ಕೋಚ್ ಗ್ರಹಾಂ ರೀಡ್ ಅವರುಗಳ ಸಂಭ್ರಮ ಮುಗಿಲುಮುಟ್ಟಿತ್ತು. ಜೊತೆಗೆ ಇಡೀ ಭಾರತ ಸಂಭ್ರಮಿಸಿತು. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದ ಅಂಶವೆಂದರೆ ಭಾರತೀಯ ಆಟಗಾರರು ತೋರಿದ ಹೋರಾಟದ ಮನೋಭಾವ ಹಾಗೂ ಟೀಮ್ ವರ್ಕ್. ಪದಕ ವಿತರಣಾ ಸಮಯದಲ್ಲಿ ಕೋವಿಡ್ ನಿಯಮದಿಂದ ಆಟಗಾರರೇ ತಟ್ಟೆಯಿಂದ ಪದಕ ತೆಗೆದುಕೊಂಡು ಪಕ್ಕದಲ್ಲಿದ್ದ ಗೋಲ್‌ಕೀಪರ್ ಶ್ರೀಜೇಶ್ ಅವರ ಕೊರಳಿಗೆ ಹಾಕಿ ಗೌರವಿಸಿದರು. ಈ ದೃಶ್ಯ ಅತ್ಯಂತ ಅವಿಸ್ಮರಣೀಯವಾಗಿತ್ತು. ನಂತರ ಉಳಿದ ಎಲ್ಲ ತಂಡಗಳ ಆಟಗಾರರು ಅದನ್ನೇ ಅನುಸರಿಸಿದರು.

ಮತ್ತೊಂದೆಡೆ ಭಾರತೀಯ ವನಿತೆಯರು ತೋರಿದ ಪ್ರದರ್ಶನ ಕೂಡ ಎಲ್ಲರ ಗಮನ ಸೆಳೆಯಿತು. 1980 ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಆಹ್ವಾನದ ಮೇರೆಗೆ ಆಡಿದ ಭಾರತೀಯ ಮಹಿಳೆಯರು ನಂತರ ಹಲವು ವರ್ಷಗಳ ಕಾಲ ಒಲಿಂಪಿಕ್ಸ್‌ಗೆ ಅರ್ಹತೆಯನ್ನೇ ಪಡೆಯಲಿಲ್ಲ. 2016ರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರೂ ಒಂದೂ ಪಂದ್ಯ ಗೆಲ್ಲದೇ 12ನೆಯವರಾಗಿ ಉಳಿದರು. ಆದರೆ ಈ ಬಾರಿ ಎಲ್ಲರನ್ನು ತಮ್ಮ ಹೋರಾಟದ ಮನೋಭಾವದಿಂದ ಚಕಿತಗೊಳಿಸಿ ಮನಸೂರೆಗೊಂಡರು. ಮೊದಲು ನೆದರ್‍ಲ್ಯಾಂಡ್, ಜರ್ಮನಿ, ಗ್ರೇಟ್ ಬ್ರಿಟನ್ ತಂಡಗಳ ವಿರುದ್ಧ ಸೋಲನ್ನು ಅನುಭವಿಸಬೇಕಾಯಿತು. ಆದರೆ ಬಸವಳಿಯದೇ ಗೆಲ್ಲಲಿವೆ ಎಂದು ನಿರೀಕ್ಷಿಸಿದ್ದ ವಿಶ್ವಚಾಂಪಿಯನ್ ಐರ್‍ಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮೇಲೆ ಮಿಂಚಿ ಮೊಟ್ಟ ಮೊದಲ ಬಾರಿಗೆ ನಾಕ್‌ಐಟ್ ಹಂತ ಪ್ರವೇಶ ಮಾಡಿದಾಗ ರಾಶಿ ರಾಶಿ ಅಭಿನಂದನೆಗಳ ಸುರಿಮಳೆಯೇ ಬಂದಿತು.

ನಂತರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆದ ಆಸ್ಟ್ರೇಲಿಯಾ ಮೇಲೆ ಸಾಧಿಸಿದ ಐತಿಹಾಸಿಕ ಜಯ ಅಂತಾರಾಷ್ಟ್ರೀಯ ಮಹಿಳಾ ಹಾಕಿಯಲ್ಲಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿತು. ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 2-1ರಿಂದ ಸೋತರೂ ಕಂಚಿನ ಹೋರಾಟದಲ್ಲಿ ಧೃತಿಗೆಡದೆ ಹೋರಾಡಿದರು. ಆದರೆ ಕಂಚಿನ ಹೋರಾಟದ ಪಂದ್ಯ ಕೈಹಿಡಿಯಲಿಲ್ಲ. ರೋಚಕ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ 4-3 ಅಂತರದಿಂದ ಗೆದ್ದಿತು. ಭಾರತೀಯ ಹಾಕಿ ತಂಡದ ವನಿತೆಯರ ಆಕ್ರಂದನ ದೆಹಲಿಗೆ ಕೇಳಿಸುವಂತಿತ್ತು. ಕಠಿಣ ಪರಿಶ್ರಮಪಟ್ಟ ಭಾರತೀಯ ಮಹಿಳೆಯರಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ ವಂದನಾ ಕಟಾರಿಯಾ, ತಡವಾಗಿ ಸ್ಥಾನ ಪಡೆದ ಗುರ್ಜಿತ್ ಕೌರ್, ನಾಯಕಿ ರಾಣಿ ರಾಂಪಾಲ್, ಸಲೀಮಾ ಟೇಟೆ, ದೀಪ್ ಗ್ರೇಸ್ ಎಕ್ಕಾ, ಗೋಲ್ ಕೀಪರ್ ಸವಿತಾ ಎಲ್ಲರ ಗಮನ ಸೆಳೆದರು.

ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ಏಕೆ ಪ್ರಾಮುಖ್ಯತೆ ಪಡೆದಿದೆಯೆಂದರೆ, 1928ರಿಂದ 1996ರವರೆಗೆ ಭಾರತ ಪಡೆದ 12 ಪದಕಗಳಲ್ಲಿ ಹಾಕಿ ತಂಡ ಗಳಿಸಿದ್ದು 11 ಪದಕಗಳು. ಅದರಲ್ಲಿ 8 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸೇರಿತ್ತು.
ಮತ್ತೆ ಈ ಗತಕಾಲದ ವೈಭವ ಮರುಕಳಿಸಲು ಕಠಿಣ ಪರಿಶ್ರಮದ ಅಗತ್ಯ ಇತ್ತು. ಅದು ಟೋಕಿಯೋ ಸಾಧನೆಯ ಮೂಲಕ ಸಾಕಾರಗೊಂಡಿದೆ. ಮಿಕ್ಕ ಯುರೋಪಿಯನ್ ದೇಶಗಳು ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಬದಲಾದ ನಿಯಮಗಳಿಗೆ ಮತ್ತು ಕೃತಕ ಹುಲ್ಲಿನ ಅಂಗಳಕ್ಕೆ ಬೇಗ ಒಗ್ಗಿಕೊಂಡರೆ ಭಾರತಕ್ಕೆ ನಾಲ್ಕು ದಶಕ ಬೇಕಾಯಿತು. 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಭಾರತೀಯ ಪುರುಷರ ತಂಡ ಅರ್ಹತೆ ಪಡೆಯದೇ ಇದ್ದಾಗ, ಆಗಲೇ ಎಲ್ಲರೂ ಭಾರತೀಯ ಹಾಕಿಯ ಶ್ರದ್ಧಾಂಜಲಿ ಬರೆದುಬಿಟ್ಟಿದ್ದರು. ಆದರೆ ನಂತರ ಭಾರತ ವಿದೇಶಿ ತರಬೇತುದಾರರು ಮತ್ತು ತಂತ್ರಜ್ಞಾನ ತಂಡಗಳ ನೆರವಿನಿಂದ ಬಹಳಷ್ಟು ಹೂಡಿಕೆ ಮಾಡಿ ಈಗ ಈ ಮಟ್ಟದ ಸುಧಾರಣೆ ತೋರಲಾಗಿದೆ.

ಕಳೆದ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, ಈಗ ಟೋಕಿಯೋದಲ್ಲಿ ಕಂಚು ಗಳಿಸಿಯಾಗಿದೆ. ಆದರೆ ಮುಂದೇನು? ಸತತ ಪ್ರಯತ್ನ ಮುಂದುವರೆಯಬೇಕು ಹಾಗೂ ಹಲವು ಬದಲಾವಣೆಗಳನ್ನು ಮಾಡಲೇಬೇಕು. ಮಂದಿನ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಈವರೆಗೆ ಭಾರತದ ಹಾಕಿಯನ್ನು ಭದ್ರವಾಗಿ ಕಾಪಾಡಿದ 35 ವರ್ಷದ ಶ್ರೀಜೇಶ್ ಹಾಗೂ 31 ವರ್ಷದ ಸವಿತಾ ಇರುವರೇ? ಟೋಕಿಯೋದಲ್ಲಿ ಪಡೆದ ಹುಮ್ಮಸ್ಸು ಮತ್ತು ಮೊಮೆಂಟಮ್ ಮುಂದುವರೆಯಬೇಕೆಂದರೆ ಶತಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ಪುರುಷರು, ಮಹಿಳೆಯರು ತೋರಿದ ಪ್ರದರ್ಶನದಿಂದ ಹೆಚ್ಚಿನ ಮಟ್ಟದ ನಿರೀಕ್ಷೆ ಮತ್ತು ಒತ್ತಡ ಸ್ವಾಭಾವಿಕವಾಗಿ ಇದ್ದೇ ಇರುತ್ತದೆ. ಇದನ್ನು ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಹೇಗೆ ನಿಭಾಯಿಸುತ್ತವೆ ಕಾದು ನೋಡಬೇಕು.

ಚಂದ್ರಮೌಳಿ ಕಣವಿ

ಚಂದ್ರಮೌಳಿ ಕಣವಿ
ಖ್ಯಾತ ಕವಿ ಚೆನ್ನವೀರ ಕಣವಿಯವರ ಮಗನಾದ ಚಂದ್ರಮೌಳಿ ಕಣವಿಯವರು ಸ್ವತಃ ಕ್ರೀಡಾಪಟು. ಬ್ಯಾಂಕ್ ವೃತ್ತಿಯಿಂದ ನಿವೃತ್ತರಾಗಿರುವ ಕಣವಿಯವರು ಪ್ರವೃತ್ತಿಯಲ್ಲಿ ಕ್ರೀಡಾ ಬರಹಗಾರರು ಮತ್ತು ವೀಕ್ಷಕವಿವರಣೆಗಾರರು.


ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಹಾಕಿ ತಂಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...