Homeಕ್ರೀಡೆಒಲಂಪಿಕ್ಟೋಕಿಯೋದಲ್ಲಿ ಭಾರತೀಯ ಹಾಕಿ; ಗತವೈಭವದ ಮರುಕಳಿಕೆಗೆ ನಾಂದಿ!

ಟೋಕಿಯೋದಲ್ಲಿ ಭಾರತೀಯ ಹಾಕಿ; ಗತವೈಭವದ ಮರುಕಳಿಕೆಗೆ ನಾಂದಿ!

- Advertisement -
- Advertisement -

ಆಗಸ್ಟ್ 6, 2021 ಭಾರತದ ಹಾಕಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥ ದಿನ. ಸುವರ್ಣಾಕ್ಷರ ಏಕೆ ಎಂದು ನೀವು ಕೇಳಬಹುದು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಪಡೆದ ಕಂಚಿಗೆ ಚಿನ್ನದಷ್ಟೇ ಬೆಲೆಯಿದೆ. ಇದಕ್ಕೆ ಮುಖ್ಯ ಕಾರಣ ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ಹಲವು ವರ್ಷಗಳಿಂದ ಆದ ಹಿನ್ನಡೆ. ಸುದೀರ್ಘ 41 ವರ್ಷಗಳ ನಂತರ ಈಗ ಭಾರತ ಹಾಕಿ ತಂಡ ಪದಕ ಪಡೆದುಕೊಂಡಿದೆ. ನಾಲ್ಕು ದಶಕಗಳ ನಿರಾಸೆ, ಹತಾಶೆ, ಕಣ್ಣೀರಿನ ನಂತರ ಕೋವಿಡ್ ಪಿಡುಗಿನ ಮಧ್ಯದಲ್ಲಿಯೇ, ಪ್ರೇಕ್ಷಕರಿಲ್ಲದ
ಟೋಕಿಯೋದ ಕ್ರೀಡಾಂಗಣದಲ್ಲಿ ಬಿಸಿಲಿನ ನಡುವೆಯೇ ಅತೀವ ಆರ್ದ್ರತೆಯಲ್ಲಿ ಬೆವರು ಸುರಿಸಿ, ಪಣತೊಟ್ಟು ನಂತರ ಆನಂದಬಾಷ್ಪ ಹೊರಸೂಸಿ ಇಡೀ ಭಾರತ ಮತ್ತೆ ಹಾಕಿಯತ್ತ ಗಮನಹರಿಸುವಂತೆ ಸದ್ಯದ ಹಾಕಿ ತಂಡ ಕಾರ್ಯನಿರ್ವಹಿಸಿದೆ.

ಎರಡು ವರ್ಷಗಳಿಂದ ಬೆಂಗಳೂರಿನ ’ಸಾಯಿ’ ತರಬೇತಿ ಶಿಬಿರದಲ್ಲಿ ಬಸವಳಿದು, ಬೆಂಡಾಗಿ ಕೋವಿಡ್ ನಡುವೆಯೂ ಶ್ರಮವಹಿಸಿ ಒಲಿಂಪಿಕ್ಸ್ ಪದಕ ಗಳಿಸುವ ಛಲದಿಂದ ತಮಗಿಂತ ಕೆಳಗಿನ ರ್‍ಯಾಂಕಿಂಗ್‌ನಲ್ಲಿರುವ ಯಾವುದೇ ತಂಡದ ವಿರುದ್ಧ ಸೋಲದೇ ಕಂಚಿಗಾಗಿ ನಡೆದ ತೀವ್ರ ಪೈಪೋಟಿಯಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಹಾಗೂ ರಿಯೋ 2016ರಲ್ಲಿ ಕಂಚಿನ ಪದಕ ಪಡೆದಿದ್ದ ಜರ್ಮನಿಯ ವಿರುದ್ಧ ಗಳಿಸಿದ ಅತ್ಯಂತ ರೋಚಕ ಜಯ ಎಲ್ಲ ಹಾಕಿ ಪ್ರೇಮಿಗಳು ಹುಚ್ಚೆದ್ದು ಕುಣಿಯುವ ಹಾಗೆ ಮಾಡಿತು. ಈ ಒಲಿಂಪಿಕ್ಸ್ ಪದಕದಿಂದ ಮತ್ತೆ ಭಾರತೀಯ ಹಾಕಿ ದಶಕಗಳ ನಂತರ ಮೈಕೊಡವಿ ಪುಟಿದೇಳುವಂತೆ ಮಾಡಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪೂಲ್ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಇತ್ತು. ಆ ಪಂದ್ಯದಲ್ಲಿ ಗಳಿಸಿದ ರೋಚಕ 3-2 ಅಂತರದ ಜಯ ಅತ್ಯಂತ ಮಹತ್ವಪೂರ್ಣವಾಗಿತ್ತು. ಎರಡು ಗುಂಪುಗಳಲ್ಲಿ ಇದ್ದ 8 ತಂಡಗಳಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ಅವಕಾಶವಿತ್ತು. ಸದ್ಯದ ಭಾರತೀಯ ತಂಡದಲ್ಲಿ ಅನುಭವಿ ಹಾಗೂ ಯುವಪ್ರತಿಭೆಗಳ ಮಿಶ್ರಣ ಅಪರೂಪವಾಗಿತ್ತು. 10 ಯುವಕರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡುತ್ತಿದ್ದರು. ಗೋಡೆಯಂತಿದ್ದು 15 ವರ್ಷಗಳಿಂದ ಭಾರತದ ಗೋಲ್ ಕಾಯುತ್ತಿರುವ ಶ್ರೀಜೇಶ್, ಡ್ರ್ಯಾಗ್ ಫ್ಲಿಕ್ ಪರಿಣಿತರಾದ ರುಪಿಂದರ್ ಪಾಲ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಸಿಂಗ್, ನಾಯಕ ಮನಪ್ರೀತ್ ಸಿಂಗ್ ಹಾಗೂ ಸುರಿಂದರ್ ಸಿಂಗ್ ಹೊಸ ಆಟಗಾರರಿಗೆ ತಮ್ಮ ಅನುಭವವನ್ನು ಧಾರೆಯೆರೆದರು.

ಆದರೆ ಎರಡನೆಯ ಪಂದ್ಯದಲ್ಲೇ ವಿಶ್ವಚಾಂಪಿಯನ್ ಆಸ್ಟೇಲಿಯಾ ವಿರುದ್ಧ 7-1ರ ಸೋಲು ಅನಿರೀಕ್ಷಿತವಾಗಿತ್ತು. ಈ ಭಾರಿ ಸೋಲಿನ ಆಘಾತದಿಂದ ಬೇಗನೇ ಚೇತರಿಸಿಕೊಂಡು, ಅಮೋಘ ಧೈರ್ಯದಿಂದ ಪುಟಿದೆದ್ದು ಬಂದ ಭಾರತ ಸ್ಪೇನ್, 2016ರ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಮತ್ತು ಜಪಾನ್ ತಂಡಗಳಿಗೆ ಸೋಲುಣಿಸಿ 2016ರಲ್ಲಿ ನಡೆದಂತೆಯೇ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಗ್ರೇಟ್ ಬ್ರಿಟನ್ ವಿರುದ್ಧ ಗಳಿಸಿದ ೩-೧ರ ಜಯ ಮನಮೋಹಕವಾಗಿತ್ತು.

ಆದರೆ ಸೆಮಿಫೈನಲ್ ಪ್ರವೇಶಿಸಿದರೆ ಪದಕದ ಒತ್ತಡ ಹೆಚ್ಚಾಗಿರುತ್ತದೆ ಅಲ್ಲದೆ ವಿಶ್ವಚಾಂಪಿಯನ್ ಬೆಲ್ಜಿಯಂ ಸೋಲು ಅತಿ ಕಠಿಣವೆಂಬ ಮಾತೂ ಪ್ರಚಲಿತದಲ್ಲಿತ್ತು. ಆದರೂ ಇಡೀ ಭಾರತ ಎಚ್ಚೆತ್ತು ನೋಡುವಂತೆ ಆಡಿ, 5-2ರ ಅಂತರದ ಸೋತರೂ ನಿಜವಾದ ಹೋರಾಟವನ್ನು ಭಾರತ ಹಾಕಿ ತಂಡ ಎತ್ತಿ ತೋರಿಸಿತ್ತು. ಭಾರತ ತಂಡ ಸೋತರೂ ಕಂಚಿನ ಆಸೆ ಇನ್ನೂ ಜೀವಂತವಾಗಿತ್ತು.

ಜರ್ಮನಿ ಒಲಿಂಪಿಕ್ಸ್‌ನಲ್ಲಿ ಒಂದು ಬಾರಿ ಚಿನ್ನ ಪಡೆದ ತಂಡ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ನೋಡುತ್ತಿದ್ದಂತೆ ಜರ್ಮನಿ 2-0 ಲೀಡ್ ಪಡೆದಾಗಲೂ ಭಾರತ ಹಾಕಿ ತಂಡ ಧೃತಿಗೆಡಲಿಲ್ಲ. ಮೂರನೇ ಕ್ವಾರ್ಟರ್ ಸಮಯಕ್ಕೆ ಸ್ಕೋರ್ 3-3 ರಲ್ಲಿ ಸಮವಾಗಿತ್ತು. ರುಪಿಂದರ್, ಗುರ್ಜಂತ್, ಸಿಮ್ರನ್‌ಜೀತ್ ಮತ್ತು ಹಾರ್ದಿಕ್ ಇವರುಗಳ ಪ್ರತಿಭೆಯ ಮೂಲಕ 5-3 ಲೀಡ್ ಪಡೆದಾಗ ಕೂಡ ಕಂಚಿನ ಪದಕ ನಿಶ್ಚಿತವಾಗಿರಲಿಲ್ಲ. ನಾಲ್ಕನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ಗೋಲ್ ಹೊಡೆದು ಸ್ಕೋರ್ 5-4 ಆದಾಗ ನಿಜವಾದ ಒತ್ತಡ ಭಾರತದ ಮೇಲಿತ್ತು. ಈ ಲೀಡ್ ಉಳಿಸಿಕೊಳ್ಳಲು ಭಾರತ ಪಟ್ಟಪಾಡು ನೋಡಲಿಕ್ಕಾಗಲಿಲ್ಲ. ಆ ಪಂದ್ಯದ ಕೊನೆಯ ಹತ್ತು ನಿಮಿಷಗಳು ಒಂದು ಯುಗದಂತೆ ಅನ್ನಿಸಿತ್ತು. ಇನ್ನೂ 6 ನಿಮಿಷ ಇದೆ ಎನ್ನುವಾಗ ಜರ್ಮನಿಗೆ ಪೆನಾಲ್ಟಿ ಕಾರ್ನರ್ ಸಿಕ್ಕಿ ಹೃದಯ ಬಾಯಿಗೆಬಂದಿತ್ತು. ತಮ್ಮ ಹಾಕಿ ಜೀವನದ ಅತ್ಯಂತ ಮಹೋನ್ನತ ಸೇವ್ ಮಾಡಿದ ಶ್ರೀಜೇಶ ಭಾರತಕ್ಕೆ ಕಂಚು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಎಲ್ಲ ಆಟಗಾರರು, ಸಹಾಯಕ ಸಿಬ್ಬಂದಿ, ಆಸ್ಟ್ರೇಲಿಯಾ ಮೂಲದ ಕೋಚ್ ಗ್ರಹಾಂ ರೀಡ್ ಅವರುಗಳ ಸಂಭ್ರಮ ಮುಗಿಲುಮುಟ್ಟಿತ್ತು. ಜೊತೆಗೆ ಇಡೀ ಭಾರತ ಸಂಭ್ರಮಿಸಿತು. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದ ಅಂಶವೆಂದರೆ ಭಾರತೀಯ ಆಟಗಾರರು ತೋರಿದ ಹೋರಾಟದ ಮನೋಭಾವ ಹಾಗೂ ಟೀಮ್ ವರ್ಕ್. ಪದಕ ವಿತರಣಾ ಸಮಯದಲ್ಲಿ ಕೋವಿಡ್ ನಿಯಮದಿಂದ ಆಟಗಾರರೇ ತಟ್ಟೆಯಿಂದ ಪದಕ ತೆಗೆದುಕೊಂಡು ಪಕ್ಕದಲ್ಲಿದ್ದ ಗೋಲ್‌ಕೀಪರ್ ಶ್ರೀಜೇಶ್ ಅವರ ಕೊರಳಿಗೆ ಹಾಕಿ ಗೌರವಿಸಿದರು. ಈ ದೃಶ್ಯ ಅತ್ಯಂತ ಅವಿಸ್ಮರಣೀಯವಾಗಿತ್ತು. ನಂತರ ಉಳಿದ ಎಲ್ಲ ತಂಡಗಳ ಆಟಗಾರರು ಅದನ್ನೇ ಅನುಸರಿಸಿದರು.

ಮತ್ತೊಂದೆಡೆ ಭಾರತೀಯ ವನಿತೆಯರು ತೋರಿದ ಪ್ರದರ್ಶನ ಕೂಡ ಎಲ್ಲರ ಗಮನ ಸೆಳೆಯಿತು. 1980 ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಆಹ್ವಾನದ ಮೇರೆಗೆ ಆಡಿದ ಭಾರತೀಯ ಮಹಿಳೆಯರು ನಂತರ ಹಲವು ವರ್ಷಗಳ ಕಾಲ ಒಲಿಂಪಿಕ್ಸ್‌ಗೆ ಅರ್ಹತೆಯನ್ನೇ ಪಡೆಯಲಿಲ್ಲ. 2016ರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರೂ ಒಂದೂ ಪಂದ್ಯ ಗೆಲ್ಲದೇ 12ನೆಯವರಾಗಿ ಉಳಿದರು. ಆದರೆ ಈ ಬಾರಿ ಎಲ್ಲರನ್ನು ತಮ್ಮ ಹೋರಾಟದ ಮನೋಭಾವದಿಂದ ಚಕಿತಗೊಳಿಸಿ ಮನಸೂರೆಗೊಂಡರು. ಮೊದಲು ನೆದರ್‍ಲ್ಯಾಂಡ್, ಜರ್ಮನಿ, ಗ್ರೇಟ್ ಬ್ರಿಟನ್ ತಂಡಗಳ ವಿರುದ್ಧ ಸೋಲನ್ನು ಅನುಭವಿಸಬೇಕಾಯಿತು. ಆದರೆ ಬಸವಳಿಯದೇ ಗೆಲ್ಲಲಿವೆ ಎಂದು ನಿರೀಕ್ಷಿಸಿದ್ದ ವಿಶ್ವಚಾಂಪಿಯನ್ ಐರ್‍ಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮೇಲೆ ಮಿಂಚಿ ಮೊಟ್ಟ ಮೊದಲ ಬಾರಿಗೆ ನಾಕ್‌ಐಟ್ ಹಂತ ಪ್ರವೇಶ ಮಾಡಿದಾಗ ರಾಶಿ ರಾಶಿ ಅಭಿನಂದನೆಗಳ ಸುರಿಮಳೆಯೇ ಬಂದಿತು.

ನಂತರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆದ ಆಸ್ಟ್ರೇಲಿಯಾ ಮೇಲೆ ಸಾಧಿಸಿದ ಐತಿಹಾಸಿಕ ಜಯ ಅಂತಾರಾಷ್ಟ್ರೀಯ ಮಹಿಳಾ ಹಾಕಿಯಲ್ಲಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿತು. ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 2-1ರಿಂದ ಸೋತರೂ ಕಂಚಿನ ಹೋರಾಟದಲ್ಲಿ ಧೃತಿಗೆಡದೆ ಹೋರಾಡಿದರು. ಆದರೆ ಕಂಚಿನ ಹೋರಾಟದ ಪಂದ್ಯ ಕೈಹಿಡಿಯಲಿಲ್ಲ. ರೋಚಕ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ 4-3 ಅಂತರದಿಂದ ಗೆದ್ದಿತು. ಭಾರತೀಯ ಹಾಕಿ ತಂಡದ ವನಿತೆಯರ ಆಕ್ರಂದನ ದೆಹಲಿಗೆ ಕೇಳಿಸುವಂತಿತ್ತು. ಕಠಿಣ ಪರಿಶ್ರಮಪಟ್ಟ ಭಾರತೀಯ ಮಹಿಳೆಯರಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ ವಂದನಾ ಕಟಾರಿಯಾ, ತಡವಾಗಿ ಸ್ಥಾನ ಪಡೆದ ಗುರ್ಜಿತ್ ಕೌರ್, ನಾಯಕಿ ರಾಣಿ ರಾಂಪಾಲ್, ಸಲೀಮಾ ಟೇಟೆ, ದೀಪ್ ಗ್ರೇಸ್ ಎಕ್ಕಾ, ಗೋಲ್ ಕೀಪರ್ ಸವಿತಾ ಎಲ್ಲರ ಗಮನ ಸೆಳೆದರು.

ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ಏಕೆ ಪ್ರಾಮುಖ್ಯತೆ ಪಡೆದಿದೆಯೆಂದರೆ, 1928ರಿಂದ 1996ರವರೆಗೆ ಭಾರತ ಪಡೆದ 12 ಪದಕಗಳಲ್ಲಿ ಹಾಕಿ ತಂಡ ಗಳಿಸಿದ್ದು 11 ಪದಕಗಳು. ಅದರಲ್ಲಿ 8 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸೇರಿತ್ತು.
ಮತ್ತೆ ಈ ಗತಕಾಲದ ವೈಭವ ಮರುಕಳಿಸಲು ಕಠಿಣ ಪರಿಶ್ರಮದ ಅಗತ್ಯ ಇತ್ತು. ಅದು ಟೋಕಿಯೋ ಸಾಧನೆಯ ಮೂಲಕ ಸಾಕಾರಗೊಂಡಿದೆ. ಮಿಕ್ಕ ಯುರೋಪಿಯನ್ ದೇಶಗಳು ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಬದಲಾದ ನಿಯಮಗಳಿಗೆ ಮತ್ತು ಕೃತಕ ಹುಲ್ಲಿನ ಅಂಗಳಕ್ಕೆ ಬೇಗ ಒಗ್ಗಿಕೊಂಡರೆ ಭಾರತಕ್ಕೆ ನಾಲ್ಕು ದಶಕ ಬೇಕಾಯಿತು. 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಭಾರತೀಯ ಪುರುಷರ ತಂಡ ಅರ್ಹತೆ ಪಡೆಯದೇ ಇದ್ದಾಗ, ಆಗಲೇ ಎಲ್ಲರೂ ಭಾರತೀಯ ಹಾಕಿಯ ಶ್ರದ್ಧಾಂಜಲಿ ಬರೆದುಬಿಟ್ಟಿದ್ದರು. ಆದರೆ ನಂತರ ಭಾರತ ವಿದೇಶಿ ತರಬೇತುದಾರರು ಮತ್ತು ತಂತ್ರಜ್ಞಾನ ತಂಡಗಳ ನೆರವಿನಿಂದ ಬಹಳಷ್ಟು ಹೂಡಿಕೆ ಮಾಡಿ ಈಗ ಈ ಮಟ್ಟದ ಸುಧಾರಣೆ ತೋರಲಾಗಿದೆ.

ಕಳೆದ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, ಈಗ ಟೋಕಿಯೋದಲ್ಲಿ ಕಂಚು ಗಳಿಸಿಯಾಗಿದೆ. ಆದರೆ ಮುಂದೇನು? ಸತತ ಪ್ರಯತ್ನ ಮುಂದುವರೆಯಬೇಕು ಹಾಗೂ ಹಲವು ಬದಲಾವಣೆಗಳನ್ನು ಮಾಡಲೇಬೇಕು. ಮಂದಿನ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಈವರೆಗೆ ಭಾರತದ ಹಾಕಿಯನ್ನು ಭದ್ರವಾಗಿ ಕಾಪಾಡಿದ 35 ವರ್ಷದ ಶ್ರೀಜೇಶ್ ಹಾಗೂ 31 ವರ್ಷದ ಸವಿತಾ ಇರುವರೇ? ಟೋಕಿಯೋದಲ್ಲಿ ಪಡೆದ ಹುಮ್ಮಸ್ಸು ಮತ್ತು ಮೊಮೆಂಟಮ್ ಮುಂದುವರೆಯಬೇಕೆಂದರೆ ಶತಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ಪುರುಷರು, ಮಹಿಳೆಯರು ತೋರಿದ ಪ್ರದರ್ಶನದಿಂದ ಹೆಚ್ಚಿನ ಮಟ್ಟದ ನಿರೀಕ್ಷೆ ಮತ್ತು ಒತ್ತಡ ಸ್ವಾಭಾವಿಕವಾಗಿ ಇದ್ದೇ ಇರುತ್ತದೆ. ಇದನ್ನು ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಹೇಗೆ ನಿಭಾಯಿಸುತ್ತವೆ ಕಾದು ನೋಡಬೇಕು.

ಚಂದ್ರಮೌಳಿ ಕಣವಿ

ಚಂದ್ರಮೌಳಿ ಕಣವಿ
ಖ್ಯಾತ ಕವಿ ಚೆನ್ನವೀರ ಕಣವಿಯವರ ಮಗನಾದ ಚಂದ್ರಮೌಳಿ ಕಣವಿಯವರು ಸ್ವತಃ ಕ್ರೀಡಾಪಟು. ಬ್ಯಾಂಕ್ ವೃತ್ತಿಯಿಂದ ನಿವೃತ್ತರಾಗಿರುವ ಕಣವಿಯವರು ಪ್ರವೃತ್ತಿಯಲ್ಲಿ ಕ್ರೀಡಾ ಬರಹಗಾರರು ಮತ್ತು ವೀಕ್ಷಕವಿವರಣೆಗಾರರು.


ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಹಾಕಿ ತಂಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...