Homeಅಂಕಣಗಳುನಾವು ಕೊಡಗಿನಿಂದ ಸಕಲೇಶಪುರಕ್ಕೆ ವಲಸೆ ಬಂದಿದ್ದು ಹೀಗೆ... : ಪ್ರಸಾದ್ ರಕ್ಷಿದಿ

ನಾವು ಕೊಡಗಿನಿಂದ ಸಕಲೇಶಪುರಕ್ಕೆ ವಲಸೆ ಬಂದಿದ್ದು ಹೀಗೆ… : ಪ್ರಸಾದ್ ರಕ್ಷಿದಿ

ಸಕಲೇಶಪುರಕ್ಕೆ ವಲಸೆ ಬಂದ ಅಪ್ಪನಿಗೆ ಪೂಣಚ್ಚನವರ ಪೂರ್ಣಿಮಾ ಎಸ್ಟೇಟ್ ಮತ್ತು ಜೊತೆಯಲ್ಲಿ ಇನ್ನೊಂದು ತೋಟದ ರೈಟರಾಗಿ ಉಸ್ತುವಾರಿ ಸಿಕ್ಕಿತು.

- Advertisement -
- Advertisement -

ಕಳೆದುಹೋದ ದಿನಗಳು -7

ಗಣಪಯ್ಯವನರ ಹಾರ್ಲೆ ಎಸ್ಟೇಟಿಗೆ ಹಾಗೂ ಅವರ ಬೆಂಬಲದಲ್ಲಿ ಅನೇಕ ಕುಟುಂಬಗಳು ಬರುವುದು ಮುಂದುವರಿದಿತ್ತು. 1962 ರಲ್ಲಿ ಈ ರೀತಿ ಕೊಡಗನ್ನು ಬಿಟ್ಟು ಸಕಲೇಶಪುರಕ್ಕೆ ಬರುವ ಸರದಿ ನನ್ನ ತಂದೆಯ ಕುಟುಂಬದ್ದಾಗಿತ್ತು.

ನನ್ನ ಹಿರಿಯರು ಕೂಡಾ ಕೊಡಗಿನ ವಿರಾಜಪೇಟೆಯ ಪಕ್ಕದ ನರಿಯಂದಡ ಗ್ರಾಮದವರೇ. (ಗಣಪಯ್ಯನವರದೂ ಅದೇ ಗ್ರಾಮ) ನನ್ನ ಅಜ್ಜ ಮಕ್ಕಿಮನೆ ಮಂಜಯ್ಯ. ಅವರನ್ನು ನಾನು ನೋಡಿದ್ದು ಎರಡೇ ಸಲ. ಅದೂ ಅರ್ಧ ದಿನದ ಮಟ್ಟಿಗೆ ಮಾತ್ರ. ಅಪ್ಪ ಅಜ್ಜನ ಬಗ್ಗೆ ಹೆಚ್ಚೇನೂ ಹೇಳುತ್ತಿರಲಿಲ್ಲ.

ಅಜ್ಜ ನೋಡಲು ಸುಮಾರು ಐದೂ ಕಾಲಡಿ ಎತ್ತರದ ಕುಳ್ಳಗಿನ ಆಳು. ಸುಂದರನೂ ಅಲ್ಲ. ಅಜ್ಜಿ ಚೆಂದದವಳು. ನಾನು ಅಜ್ಜಿಯನ್ನು ನೋಡುವಾಗ ಆಕೆಗೆ ಎಪ್ಪತ್ತು ಕಳೆದಿತ್ತು. ಆಗಲೂ ಸುಂದರವಾಗಿಯೇ ಇದ್ದಳು.

ನನ್ನಪ್ಪ ಶಾಲೆಗೆ ಹೋಗುವಾಗಲೇ ಅಜ್ಜ ಪಿತ್ರಾರ್ಜಿತ ಆಸ್ತಿಯನ್ನೆಲ್ಲ ಮಾರಾಟ ಮಾಡಿ ವಿರಾಜಪೇಟೆ ಊರು ಸೇರಿಯಾಗಿತ್ತು. ಹಾಗಾಗಿ ಅಪ್ಪನ ವಿದ್ಯಾಭ್ಯಾಸ ವಿರಾಜಪೇಟೆ ಮತ್ತು ಮಡಿಕೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯಿತು.

ಅಜ್ಜ ಮಂಜಯ್ಯ ಹಲವು ಗುಣಗಳ ಸಂಗಮದಂತಿದ್ದವ. ಅದೊಂದು ದೊಡ್ಡ ಮಳೆಗಾಲದಲ್ಲಿ ಕೊಡಗಿನಲ್ಲಿ ಭೂಕುಸಿತವಾಗಿ ಅಜ್ಜನ ಪಾಲಿನ ಗದ್ದೆಗೆ ಮಣ್ಣು ತುಂಬಿ ನಂತರ ಕೃಷಿ ಸಾದ್ಯವಾಗದೆ  ಅಜ್ಜ ಗದ್ದೆಯನ್ನು ಮಾರಿದ ಎಂದು ಅಜ್ಜಿ ಹೇಳುತ್ತಿದ್ದಳು. ಅದು ಅರ್ಧ ಸತ್ಯ ಮತ್ತು ಗಂಡನ ಮುಖವುಳಿಸುವ ಬೆಂಬಲ ಎಂದು ನನ್ನ ಗುಮಾನಿ.

ಮಕ್ಕಿಮನೆ ಮಂಜಯ್ಯ

ನನ್ನ ಅತ್ತೆಯರು (ಅಪ್ಪನ ತಂಗಿಯರು) ಹೇಳಿದ ವಿಚಾರವೇ ಬೇರೆ. ಸುಂದರಿಯಾದ ಹೆಂಡತಿಯಿದ್ದರೂ ಅಜ್ಜ  ಇನ್ನಿಬ್ಬರು ಮಹಿಳೆಯರ ಜೊತೆ ಸಂಬಂಧವಿಟ್ಟುಕೊಂಡಿದ್ದನಂತೆ!. ಜೊತೆಗೆ ನಾಟಕದ ಹುಚ್ಚು ಬೇರೆ ಇತ್ತು. ಒಬ್ಬ “ಹಂದಿ ತಿನ್ನುವ ಕೊಡಗನ ಜೊತೆ ಸೇರಿ ನಾಟಕದ ಹುಚ್ಚಿನಲ್ಲಿ ಆತ ಮೈಸೂರಿನವರೆಗೂ ಹೋಗುತ್ತಿದ್ದ” ಎಂದು ನನ್ನ ಅಪ್ಪನ ತಂಗಿಯರು ಹೇಳಿದ್ದರು. ಈ ಹಂದಿ ತಿನ್ನುವ ಕೊಡಗ ಬೇರಾರೂ ಅಲ್ಲ ಕೊಡಗಿನ ಶೇಕ್ಸ್ ಪಿಯರ್ ಎಂದು ನಂತರ ಖ್ಯಾತರಾದ ಕವಿ ಹರದಾಸ ಅಪ್ಪಚ್ಚನವರು ಎಂದು ಇತ್ತೀಚೆಗೆ ನನಗೆ ಇಂದಿನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರಿಯಪ್ಪ ತಿಳಿಸಿದರು. ಹೀಗಿದ್ದರೂ ಅಜ್ಜ ಅಜ್ಜಿ ತುಂಬ ಅನ್ಯೋನ್ಯವಾಗಿ ಇದ್ದರಂತೆ. ಅಜ್ಜನಿಗೆ ಅಜ್ಜಿಯ ಮೇಲೆ ತುಂಬ ಪ್ರೀತಿ ಇತ್ತು ಎಂದೂ ಅತ್ತೆಯರು ಹೇಳುತ್ತಿದ್ದರು.

ಇದೇ ಕಾರಿಯಪ್ಪನವರ ಸೃಷ್ಟಿ ಕೊಡವರಂಗ ನಾಟಕ ತಂಡ ನಮ್ಮ ಬೆಳ್ಳೇಕೆರೆಗೆ ಬಂದಾಗ (1990 ರಲ್ಲಿ) ಅದರಲ್ಲಿ ಹರದಾಸ ಅಪ್ಪಚ್ಚ ಕವಿಗಳ ಮೊಮ್ಮಗ ತ್ಯಾಗರಾಜ ಸಂಗೀತ ನಿರ್ವಹಣೆ ಮಾಡುತ್ತಿದ್ದರು. ಅವರು ನನ್ನ ತಂದೆಯೊಡನೆ ತುಂಬ ಹೊತ್ತು ಮಾತಾಡುತ್ತಿದ್ದರು. (ನಾನು ನಾಟಕೋತ್ಸವದ ಗಡಿಬಿಡಿಯ ಕೆಲಸಗಳಲ್ಲಿ ಇದ್ದುದರಿಂದ ಇವರ ಮಾತುಕತೆಯ ವಿವರಗಳು ತಿಳಿಯಲಿಲ್ಲ)

ಅಜ್ಜ ಮುಂಗೋಪಿಯೂ ಕೂಡಾ. ಸಿಟ್ಟು ಬಂದಾಗ ಒಟ್ಟಿಗೆ ಜೊತೆಯಾಗಿ ಹಿಡಿದು ಎರಡು ಬೀಡಿ ಸೇದುತ್ತಿದ್ದನಂತೆ. ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವವನಲ್ಲ.

ಒಮ್ಮೆ ವಿರಾಜಪೇಟೆಯ ಗಡಿಯಾರ ಕಂಬದ ಬಳಿ (ಅದು ಈಗಲೂ ಇದೆ) ಜನರನ್ನು ಗುಂಪು ಸೇರಿಸಿ ಪಂಚಾಂಗವನ್ನು ಕೈಯಲ್ಲಿ ಹಿಡಿದು ಇದೆಲ್ಲ ಸುಳ್ಳು ನಂಬಬೇಡಿ ಎಂದು ಹೇಳಿ ಸುಟ್ಟು ಹಾಕಿದನಂತೆ. ಆಗ ಜಾತಿ ಬಂಧುಗಳೆಲ್ಲ ಸೇರಿ ಇವನಿಗೆ ಬಹಿಷ್ಕಾರ ಹಾಕೋಣ ಎಂದು ಹೊರಟರಂತೆ. ಆದರೆ ಅಜ್ಜ ಯಾವುದಕ್ಕೂ ಜಗ್ಗಲಿಲ್ಲ.

ನನ್ನಪ್ಪನ ಹಿರಿಯ ತಂಗಿ ವಿಧವೆಯಾಗಿ ಸಣ್ಣ ವಯಸ್ಸಿನಲ್ಲೇ ತವರಿಗೆ ಬಂದಿದ್ದರು. ಗಂಡನ ಮನೆಯಲ್ಲಿ ಬಡತನ. ಇರಲೊಂದು ಗುಡಿಸಲೂ ಇರಲಿಲ್ಲ. ಆಕೆ ಮತ್ತು ಆಕೆ ನಾಲ್ಕು ಮಕ್ಕಳನ್ನೂ ಅಜ್ಜನೇ ಸಾಕಿದ. ಮಗಳ ಇಬ್ಬರು ಹೆಣ್ಣು ಮಕ್ಕಳನ್ನು, ಸಮಾಜವನ್ನೆದುರಿಸಿಕೊಂಡು ನಿಂತು ಬೇರೆ ಜಾತಿಯವರಿಗೆ ತಾನೇ ಧಾರೆಯೆರೆದು ಮದುವೆ ಮಾಡಿದ.

ಕೊನೆಗೆ ಊಟಕ್ಕೂ ಕಷ್ಟವಾದಾಗ ಅದೇ ವಿರಾಜಪೇಟೆಯ ಗಣಪತಿ ದೇವಸ್ಥಾನದಲ್ಲಿ ಪೂಜೆಗೆ ನಿಂತ!

ಅಜ್ಜ ಮಹಾ ಸ್ವಾಭಿಮಾನಿ ಕೂಡಾ. ಸಾಯುವ ಮೊದಲು ತಾನು ಮತ್ತು ತನ್ನ ಹೆಂಡತಿ ಇಬ್ಬರೂ ಸತ್ತಾಗ ಮಕ್ಕಳಿಗೆ ಹೊರೆಯಾಗಬಾರದು ಎಂದು ಖರ್ಚು ಮಾಡಲು ಒಂದಷ್ಟು ಹಣವನ್ನು ಬಟ್ಟೆಯಲ್ಲಿ ಪ್ರತ್ಯೇಕ ಗಂಟು ಕಟ್ಟಿ ಇಟ್ಟಿದ್ದ.!

ಅಜ್ಜ ಒಳ್ಳೆಯ ಬಡಗಿಯೂ ಹೌದು. ಅವರು ಮಾಡಿದ ಶಾಲಾ ಡೆಸ್ಕು, ಬೆಂಚು, ಮರದ ಇತರ ಸಾಮಗ್ರಿಗಳನ್ನು ನೋಡಿದ್ದೇನೆ. ಅಜ್ಜನ ಮರಗೆಲಸದ ಉಪಕರಣಗಳನ್ನು ಆ ನಂತರವೂ ಸಾಕಷ್ಟು ಕಾಲ ನನ್ನ ಹಿರಿಯ ಸೋದರತ್ತೆ ಕಾಪಾಡಿದ್ದರು. ನಂತರ ಏನಾದವು ತಿಳಿಯದು.

ಇಂತ ಅಜ್ಜನಿಗೆ ಸಿ.ಎಂ.ಪೂಣಚ್ಚನವರ ತಂದೆ ಮುತ್ತಣ್ಣನವರ ಒಡನಾಟವಿತ್ತಂತೆ. ಮುತ್ತಣ್ಣನವರು ಒಳ್ಳೆಯ ನಾಟಿ ಪಶುವೈದ್ಯರಂತೆ, ಅವರಲ್ಲಿ ಯಾವುದೇ ಸಮಾರಂಭವಾದರೂ ಮಂಜಯ್ಯನವರಿಗೆ ಕರೆ ಬರುತ್ತಿತ್ತಂತೆ. ವಾಪಸ್ ಬರುವಾಗ ಸಾಕಷ್ಟು ತಿಂಡಿಯೂ ಅಲ್ಲಿಂದ ಬರುತ್ತಿತ್ತಂತೆ. ಇವರಿಬ್ಬರ ಒಡನಾಟದ ಬಗ್ಗೆ ಪೂಣಚ್ಚನವರೂ ಒಮ್ಮೆ ನನ್ನಲ್ಲಿ ಹೇಳಿದ್ದರು. ಅಲ್ಲಿನ ಯಾವುದೋ ಶಾಲೆಗೆ ಅಜ್ಜ ಪೀಠೋಪಕರಣ ತಯಾರಿಸಿ ಕೊಟ್ಟಿದ್ದರಂತೆ.

ಇಂತ ಅಜ್ಜನ ಹಿರಿಯ ಮಗ ನನ್ನಪ್ಪ ನಾರಾಯಣ. ಆರಡಿ ಒಂದಿಂಚು ಎತ್ತರದ ಆಳು, ರೂಪದಲ್ಲಿ ಅಜ್ಜನ ಬದಲು ಅಜ್ಜಿಯ ಹೋಲಿಕೆ ಹೆಚ್ಚು. ಸ್ವಭಾವದಲ್ಲೂ ಅಜ್ಜನ ತದ್ವಿರುದ್ಧ. ಯಾರಿಗೂ ಗಟ್ಟಿಯಾಗಿ ಹೇಳಲಾರದ ಹಿಂಜರಿಕೆಯ ಗುಣ, ಮೃದು ಸ್ವಭಾವ. ತಂಗಿ ವಿಧವೆಯಾಗಿ ಬಂದಾಗ ಮನೆಯಲ್ಲಿ ಕಷ್ಟವಾಗಬಾರದೆಂದು ತಾನು ಮದುವೆಯಾಗದೆ, ತಮ್ಮನಿಗೆ ಮೊದಲು ಮದುವೆ ಮಾಡಿಸಿದರು. ನಂತರ ಅಜ್ಜ ಅಜ್ಜಿಯರ ಒತ್ತಾಯಕ್ಕೆ ತಡವಾಗಿ ಮದುವೆಯಾದರು.

ಅಪ್ಪ ಶಾಲೆಗೆ ಹೋಗುವಾಗ ಮಡಿಕೇರಿಯಲ್ಲಿ ಸಂಬಂಧಿಗಳ ಮನೆಯಲ್ಲಿ ವಾಸ. ವಾರಕ್ಕೊಮ್ಮೆ ಮಡಿಕೇರಿಯಿಂದ ಮೂವತ್ತು ಕಿ.ಮೀ.ದೂರದ ವಿರಾಜಪೇಟೆಗೆ ನಡಿಗೆ. ಅಪ್ಪ ಒಳ್ಳೆಯ ಕ್ರೀಡಾ ಪಟು. ಈಜುವುದರಲ್ಲಿ ಎರಡು ಸಲ ಕೂರ್ಗ್ ಚಾಂಪಿಯನ್ ಆಗಿದ್ದರು. ಶಾಲೆಯಲ್ಲಿ ಪೂಣಚ್ಚನವರು ಅಪ್ಪನ ಹಿರಿಯ ಸಹಪಾಠಿ.

ಅಪ್ಪ ಒಂದಷ್ಟು ಸಂಗೀತ ಕಲಿತಿದ್ದರು. ಹಾರ್ಮೋನಿಯಂ ಮತ್ತು ಕೊಳಲು ನುಡಿಸುತ್ತಿದ್ದರು. ಒಂದು ಕತೆಯನ್ನೂ ಬರೆದಿದ್ದರಂತೆ. ಅವರ ಸಂಗೀತದ ಗುರುಗಳೇ ತಮ್ಮ ಈ ಶಿಷ್ಯನಿಗೆ ಅಂದಿನ ಕಾಲಕ್ಕೆ ಬಹುದೂರವೆನಿಸುವ ಸುಳ್ಯದಿಂದ ಹುಡುಗಿ ಹುಡುಕಿ ಕೊಟ್ಟರು.

ಅಪ್ಪ ಕೆಲಕಾಲ ಮಕ್ಕಳಿಗೆ ಪಾಠ ಹೇಳುತ್ತಿದ್ದರಂತೆ. ನಂತರ ಮುನ್ಸೀಫ್ ಕೋರ್ಟಿನಲ್ಲಿ ಸ್ಟೆನೊ ಆಗಿ ಕೆಲಸ ಮಾಡಿದರು. ಅಪ್ಪ ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಕಲಿತಿದ್ದರು.

ಅಪ್ಪ ಈಜುವುದರಲ್ಲಿ ಕೊಡಗಿಗೆ ಪ್ರಥಮ ಸ್ಥಾನ ಪಡೆದಾಗ ಸಿಕ್ಕಿದ ಬಹುಮಾನ

ನಂತರ ಸರ್ಕಾರಿ ಕೆಲಸ ಬೇಡವೆಂದು ಬಿಟ್ಟು ಲಿಪ್ಟನ್ ಟೀ ಕಂಪೆನಿ ಸೇರಿದರು.

ಸುಳ್ಯ ತಾಲ್ಲೂಕಿನಲ್ಲಿ ಬೆಳೆದ, ನನ್ನಮ್ಮ ಗೌರಮ್ಮ ಮದುವೆಯಾಗಿ ಬಂದ ನಂತರ ಅವಳಿಗೆ ಕೊಡಗಿನ ತಂಪು ಹವೆ ಹಿಡಿಸಲಿಲ್ಲ, ಆರೋಗ್ಯ ಕೆಟ್ಟಿತು. ಅಪ್ಪ ಬೇರೆಡೆಗೆ ಹೋಗಿದ್ದರೆ ಅಮ್ಮನ ಆರೋಗ್ಯ ಸುಧಾರಿಸುತ್ತಿತ್ತೋ ಏನೋ. ಅಪ್ಪ ಕೊಡಗನ್ನು ಬಿಟ್ಟು ಹೊರಡುವ ಮನಸ್ಸು ಮಾಡಲೇ ಇಲ್ಲ. ಹೀಗಾಗಿ ಅಮ್ಮ ಜೀವಮಾನದುದ್ದಕ್ಕೂ ಅನಾರೋಗ್ಯದಿಂದ ನರಳಿದಳು.

ಅಪ್ಪ ಅಮ್ಮನ ಮೂರು ಮಕ್ಕಳಲ್ಲಿ ನಾನು ಕೊನೆಯವನು. ನಾನು ಹುಟ್ಟುವ ವೇಳೆಗೇ ನಾನಾ ಕಾರಣಗಳಿಂದ ಮನೆಯಲ್ಲಿ ದರಿದ್ರ ದೇವತೆ ನೆಲೆಸಿದ್ದಳು. ನಂತರ ಇದ್ದ ಒಬ್ಬ ಅಣ್ಣ ಮನೆಯ ಬಡತನವೇ ಕಾರಣವಾಗಿ ಮನೆಬಿಟ್ಟು ಹೋಗಿದ್ದ. ಈ ಎಲ್ಲ ಕಾರಣಗಳಿಂದ ಜರ್ಜರಿತರಾಗಿದ್ದ ಅಪ್ಪ ಸರಿಯಾಗಿ ಕೆಲಸವೂ ಮಾಡಲಾಗದೇ ಕೆಲಸ ಬಿಟ್ಟು ಮನೆಯಲ್ಲಿ ಕುಳಿತರು. ಸುಮಾರು ಒಂದು ವರ್ಷಕಾಲ ಅಪ್ಪ ನಿರುದ್ಯೋಗಿ.

ಆಗ ನೆರವಿಗೆ ಬಂದವರು ಅಪ್ಪನ ಗೆಳೆಯರೂ ಹಾಗೂ ಕೊಡಗಿನ ಅಂದಿನ ವಿದ್ಯಾಧಿಕಾರಿಗಳೂ ಆಗಿದ್ದ ರಾಮದಾಸ್ ಅವರು. ಅವರು ಗಣಪಯ್ಯನವರ ಕುಟುಂಬದವರೇ. ಅವರು ಗಣಪಯ್ಯನವರಿಗೆ ಪತ್ರ ಬರೆದು ಹೀಗೆ ಒಬ್ಬರಿಗೆ ಕೆಲಸ ಕೊಡಲು ಸಾಧ್ಯವೇ ಎಂದು ವಿಚಾರಿಸಿದರು.

ಆಗ ತಾನೇ ತೋಟದ ಕೃಷಿ ಪ್ರಾರಂಭಿಸಿದ ಸಿ.ಎಂ ಪೂಣಚ್ಚನವರ ಪೂರ್ಣಿಮಾ ಎಸ್ಟೇಟ್ ನೋಡಿಕೊಳ್ಳಲು ಯಾರೂ ಇರಲಿಲ್ಲ. ಕೂಡಲೇ ಗಣಪಯ್ಯನವರು ಅಪ್ಪನನ್ನು ಬರಲು ಹೇಳಿದರು. ಅಪ್ಪನಿಗೆ ಪೂಣಚ್ಚನವರ ತೋಟ ಎಂದಾಗ ಸ್ವಲ್ಪ ಹಿಂಜರಿಕೆಯಾಯಿತು. ಶಾಲಾ ಸಹಪಾಠಿ ಅವರು, ಅಲ್ಲಿ ಕೆಲಸಕ್ಕೆ ಸೇರಿದರೆ ಏನಾದರೂ ಹೇಳಲು ಅವರಿಗೂ ಕಷ್ಟ ಹೇಳಿಸಿಕೊಳ್ಳಲು ತನಗೂ ಕಷ್ಟ ಎಂದು ಯೋಚಿಸಿದರು. ಆಗ ಒತ್ತಾಯ ಮಾಡಿ ಗಟ್ಟಿಯಾಗಿ ನಿಂತು ಹೋಗೋಣ ಎಂದವಳು ಅಮ್ಮ.

ಮುಂದೆ ಅಂತ ಯಾವುದೇ ಭಾವನೆಗೆ ಅವಕಾಶವಿಲ್ಲವೆಂದು ಗಣಪಯ್ಯ ತೋರಿಸಿಕೊಟ್ಟರು. ಸಾಕಮ್ಮನವರ ತೋಟದಲ್ಲಿ ಗಣಪಯ್ಯನವರ ಸಹೋದ್ಯೋಗಿಯಾಗಿದ್ದ ಮುತ್ತಣ್ಣ ಎಂಬವರ ಮಗನಿಗೂ ಗಣಪಯ್ಯನವರು ಹಾರ್ಲೆಯಲ್ಲಿ ಉದ್ಯೋಗ ನೀಡಿದ್ದರು.

ಪೂಣಚ್ಚನವರು ಕೂಡಾ ಅಷ್ಟೇ ಕೊನೆಯವರೆಗೂ ಅಪ್ಪನನನ್ನು ನೌಕರನೆಂಬ ಭಾವನೆಗೆ ಅವಕಾಶವೇ ಇಲ್ಲದೆ ಗೆಳೆಯನಂತೆ ಕಂಡರು.

ಹೀಗೆ ಸಕಲೇಶಪುರಕ್ಕೆ ವಲಸೆ ಬಂದ ಅಪ್ಪನಿಗೆ ಪೂಣಚ್ಚನವರ ಪೂರ್ಣಿಮಾ ಎಸ್ಟೇಟ್ ಮತ್ತು ಜೊತೆಯಲ್ಲಿ ಇನ್ನೊಂದು ತೋಟದ ರೈಟರಾಗಿ ಉಸ್ತುವಾರಿ ಸಿಕ್ಕಿತು.

ಅಪ್ಪ ಬಾಲ್ಯವನ್ನು ತೋಟದಲ್ಲಿ ಕಳೆದಿದ್ದುದರಿಂದ ಕೃಷಿಯೇನೂ ಹೊಸತಾಗಿರಲಿಲ್ಲ. ಅದಲ್ಲದೆ ಮೊದಲೇ ಹಿಂಜರಿಕೆಯ ಸ್ವಭಾವದವನಾದ ಅಪ್ಪನಿಗೆ ಎಲ್ಲರಿಂದ ದೂರವಾಗಿ ಈ ರೀತಿ ಅಜ್ಞಾತ ವಾಸದಂತಿದ್ದ ಬದುಕು ಹಿಡಿಸಿರಬೇಕು. ಇಲ್ಲಿಗೆ ಬಂದ ನಂತರ ಒಂಬತ್ತು ವರ್ಷಗಳ ಕಾಲ ಒಂದು ದಿನವೂ ರಜೆ ಹಾಕದೆ ಕೆಲಸಮಾಡಿದರು. ಅಪ್ಪ ಪ್ರಥಮ ಬಾರಿಗೆ ರಜೆ ಹಾಕಿದ್ದು ಅಜ್ಜ ಸತ್ತಾಗ. ಈ ಒಂಭತ್ತು ವರ್ಷಗಳ ಕಾಲ ಅಪ್ಪ ತನ್ನಪ್ಪನನ್ನು ನೋಡಲು ಹೋಗಲೂ ಇಲ್ಲ. ಅಜ್ಜ ಅಜ್ಜಿ ಮಗನನ್ನು ನೋಡಲು ಬಂದದ್ದೂ ಇಲ್ಲ. ವರ್ಷಕ್ಕೆ ಒಂದೋ ಎರಡು ಪತ್ರ ವ್ಯವಹಾರ ಮಾಡಿದರೆ ಅದೇ ಹೆಚ್ಚು. ನನ್ನಕ್ಕ ಅಪ್ಪನಿಗೆ “ಸೈಲಾಸ್ ಮಾರ್ನರ್” ಎಂದು ಗುಟ್ಟಾಗಿ ಹೆಸರಿಟ್ಟಿದ್ದಳು.

ಹೀಗೆ ನನ್ನಪ್ಪನ ಕುಟುಂಬ ಹಾರ್ಲೆ ಸಮುದಾಯದಲ್ಲಿ ಗುರುತಿಸಿಕೊಂಡಿತು. ನಾನಾಗ ಮೂರನೆ ತರಗತಿಯಲ್ಲಿದ್ದೆ. ನನ್ನ ಅಕ್ಕ ವತ್ಸಲಾ ಪ್ರೌಢಶಾಲೆಯಲ್ಲಿದ್ದಳು. ನಾವು ಹಾನುಬಾಳಿನ ಸರ್ಕಾರಿ ಶಾಲೆಗಳಿಗೆ ಸೇರಿದೆವು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...