ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಹಿಳೆಯೊಬ್ಬರು, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ (ಜಿಎಚ್ಎಂಸಿ) ನಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತೆಲುಗು ಪತ್ರಿಕೆಯೊಂದು ವರದಿ ಮಾಡಿದ ನಂತರ, ಅವರನ್ನು ಜಿಎಚ್ಎಂಸಿಯಲ್ಲಿ ಸಹಾಯಕ ಕೀಟಶಾಸ್ತ್ರಜ್ಞರಾಗಿ ನೇಮಕ ಮಾಡಲಾಗಿದೆ.
ಪತ್ರಿಕೆಯು ಮಹಿಳೆಯ ಬಗ್ಗೆ ವಿಶೇಷ ವರದಿ ಮಾಡಿದ ನಂತರ ಅವರಿಗೆ ಈ ಅವಕಾಶ ಒದಗಿಬಂದಿದೆ. ತೆಲಂಗಾಣದ ಪೌರಾಡಳಿತ ಸಚಿವ ಕೆಟಿ ರಾಮರಾವ್ ಅವರು ಸೆಪ್ಟೆಂಬರ್ 20 ರ ಸೋಮವಾರದಂದು ಹೊರಗುತ್ತಿಗೆ ಆಧಾರದ ಮೇಲೆ ಮಹಿಳೆಯನ್ನು ಸಹಾಯಕ ಕೀಟಶಾಸ್ತ್ರಜ್ಞರಾಗಿ ನೇಮಕ ಮಾಡಿದ್ದಾರೆ.
ಇದನ್ನೂ ಓದಿ: ದಿನಕ್ಕೆ 3-4 ಡ್ರೆಸ್ ಹಾಕಿ ಚೆನ್ನಾಗಿ ಕಾಣುವುದೇ ಮೋದಿ ಸಾಧನೆ: ಕುಮಾರಸ್ವಾಮಿ
ಜೈವಿಕ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಹೊಂದಿರುವ ರಜನಿ, ಜಿಎಚ್ಎಂಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ವಾರಂಗಲ್ ಜಿಲ್ಲೆಯವರಾದ ರಜನಿ ಕೃಷಿಕೂಲಿ ಕುಟುಂಬದಲ್ಲಿ ಜನಿಸಿದ್ದರು. ಹಣಕಾಸಿನ ಸಮಸ್ಯೆಗಳ ಹೊರತಾಗಿಯೂ, ತನ್ನ ಹೆತ್ತವರ ಬೆಂಬಲದೊಂದಿಗೆ ರಜನಿ ತನ್ನ ಅಧ್ಯಯನವನ್ನು ಮುಂದುವರಿಸಿದ್ದರು.
ರಜನಿ, 2013 ರಲ್ಲಿ ಪ್ರಥಮ ದರ್ಜೆಯೊಂದಿಗೆ ಎಂಎಸ್ಸಿ ಸಾವಯವ ರಸಾಯನಶಾಸ್ತ್ರದಲ್ಲಿ ಉತ್ತೀರ್ಣರಾಗಿದ್ದರು. ಜೊತೆಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಿಎಚ್ಡಿಗೂ ಅರ್ಹರಾಗಿದ್ದರು, ಆದರೆ ಈ ಮಧ್ಯೆ ಅವರ ವಿವಾಹವಾಗಿದ್ದರಿಂದ, ಅವರು ಹೈದರಾಬಾದ್ಗೆ ಸ್ಥಳಾಂತರಗೊಂಡಿದ್ದರು. ಇಬ್ಬರು ಹೆಣ್ಣು ಮಕ್ಕಳ ತಾಯಿಯಾದ ನಂತರ ಕೂಡಾ ರಜನಿ ಅವರು ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದನ್ನು ಮುಂದುವರಿಸಿದ್ದರು.
ಈ ನಡುವೆ ಅವರ ಪತಿ ಹೃದಯ ಸಮಸ್ಯೆಯಿಂದ ಹಾಸಿಗೆ ಹಿಡಿದ ನಂತರ, ಕುಟುಂಬವು ಬಿಕ್ಕಟ್ಟಿಗೆ ಸಿಲುಕಿತ್ತು. ಆದರೆ, ಅತ್ತೆಯನ್ನು ಒಳಗೊಂಡಂತೆ ಐದು ಜನರ ಕುಟುಂಬವನ್ನು ನಡೆಸಲು ರಜನಿ ಅವರು ತರಕಾರಿ ಅಂಗಡಿಯೊಂದನ್ನು ಪ್ರಾರಂಭಿಸಿದ್ದರು. ಈ ಅಂಗಡಿ ಸಾಕಷ್ಟು ಲಾಭ ಗಳಿಸದ ಕಾರಣ, ನಂತರ ರಜನಿ ಅವರು ಜಿಎಚ್ಎಂಸಿಯಲ್ಲಿ 10 ಸಾವಿರಕ್ಕೆ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದಾರೆ.
ಇದನ್ನೂ ಓದಿ: ಸರಸ್ವತಿ ಪೂಜೆ ವಿರೋಧಿಸಿ ’ಜೀವಮಾನ ಸಾಧನೆ ಪ್ರಶಸ್ತಿ’ ತಿರಸ್ಕರಿಸಿದ ಮರಾಠಿ ಕವಿ ಯಶ್ವಂತ್ ಮನೋಹರ್
ರಜನಿ ಅವರ ಸಂಕಷ್ಟವನ್ನು ತೆಲುಗು ಭಾಷೆಯ ಪ್ರಮುಖ ದಿನಪತ್ರಿಕೆ ವರದಿ ಮಾಡಿತ್ತು. ಈ ವರದಿಯನ್ನು ಗಮನಿಸಿದ್ದ ಜಿಎಚ್ಎಂಸಿಯ ಅಧಿಕಾರಿಗಳು ಅವರನ್ನು ಪೌರಾಡಳಿತ ಸಚಿವ ಕೆಟಿ ರಾಮರಾವ್ ಅವರ ಬಳಿ ಕರೆದೊಯ್ದು ಅವರಿಗೆ ಉದ್ಯೋಗ ನೇಮಕಾತಿ ಆಗುವಂತೆ ಮಾಡಿದ್ದಾರೆ. ರಜನಿ ಅವರ ದಾಖಲೆಗಳನ್ನು ಪರಿಶೀಲಿಸಿದ ನಂತರ ಅವರನ್ನು ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೇಮಕಾತಿ ಮಾಡಲಾಗಿದೆ ಎಂದು ನಗರಾಭಿವೃದ್ದಿ ವಿಶೇಷ ಕಾರ್ಯದರ್ಶಿ ಅರವಿಂದ್ ಕುಮಾರ್ ಹೇಳಿದ್ದಾರೆ.
On hearing the plight of Rajni, who’s MSc (organic Chemistry), has 2 daughter & working as sweeper on daily wages, minister @KTRTRS met her today & offered to employ her as Assistant Entomologist on O/S basis in @GHMCOnline
Orders have been issued after verifying her credentials pic.twitter.com/inbOZKQQfG
— Arvind Kumar (@arvindkumar_ias) September 20, 2021
ರಜನಿ ಅವರನ್ನು ಜಿಎಚ್ಎಂಸಿಯ ಮುಖ್ಯ ಕೀಟಶಾಸ್ತ್ರಜ್ಞರ ಕಚೇರಿಗೆ ನಿಯೋಜಿಸಲಾಗಿದ್ದು, ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ ರಾಣಿ ರಾಂಪಾಲ್