Homeಮುಖಪುಟರೈತ ಹೋರಾಟಕ್ಕೆ ಒಂದು ವರ್ಷ; ಕವಿತಾ ಕುರುಗಂಟಿ ಸಂದರ್ಶನ

ರೈತ ಹೋರಾಟಕ್ಕೆ ಒಂದು ವರ್ಷ; ಕವಿತಾ ಕುರುಗಂಟಿ ಸಂದರ್ಶನ

- Advertisement -
- Advertisement -

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟಕ್ಕೆ ನವೆಂಬರ್ 26ಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯೆ, ರೈತ ನಾಯಕಿ ಕವಿತಾ ಕುರುಗಂಟಿ ಜೊತೆಗೆ ನ್ಯಾಯಪಥ-ನಾನುಗೌರಿ.ಕಂ ನಡೆಸಿದ ಸಂದರ್ಶನದ ಭಾಗ ಇದು.

(ಮೋದಿಯವರು ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ನವೆಂಬರ್ 19 ರಂದು ಘೋಷಿಸಿದರು. ಅದಕ್ಕೂ ಎರಡು ದಿನಗಳ ಮುಂಚೆ ನಡೆದ ಸಂದರ್ಶನ ಇದು.)

ಪ್ರ: ರೈತ ಹೋರಾಟದ ಈ ಒಂದು ವರ್ಷದಲ್ಲಿ ಹಲವು ಘಟನೆಗಳು ನಡೆದಿವೆ. ಈ ಒಂದು ವರ್ಷದಲ್ಲಿ ರೈತ ಹೋರಾಟದ ಪಯಣದ ಬಗ್ಗೆ ತಿಳಿಸಿ.

ಕವಿತಾ ಕುರುಗಂಟಿ: ದೆಹಲಿಯ ಗಡಿಗಳಲ್ಲಿನ ಪ್ರತಿಭಟನೆಗೆ ಇಂದು 355ನೇ ದಿನ. ಆದರೆ, ಪಂಜಾಬಿನಲ್ಲಿ 412ನೇ ದಿನ. ಅಲ್ಲಿ ನೂರಕ್ಕೂ ಹೆಚ್ಚು ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಇತಿಹಾಸದಲ್ಲಿ ಎಲ್ಲಿಯೂ ರೈತರು ಇಷ್ಟು ದೀರ್ಘವಾಗಿ ಪ್ರತಿಭಟನೆ ನಡೆಸಿಲ್ಲ. ಅದರಲ್ಲಿಯೂ ಲಕ್ಷಾಂತರ ರೈತರನ್ನು ಒಳಗೊಂಡಿರುವ ಹೋರಾಟ ಎಲ್ಲಿಯೂ ನಡೆದಿಲ್ಲ.

ಈ ಒಂದು ವರ್ಷದಿಂದ ರೈತರ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಜನವರಿ 22ರಿಂದ ಸರ್ಕಾರ ರೈತರೊಂದಿಗಿನ ಮಾತುಕತೆಯನ್ನು ನಿಲ್ಲಿಸಿದೆ. ಬೇಡಿಕೆಗಳು ಹಾಗೆಯೇ ಉಳಿದಿದೆ. ಕೆಲವು ಬೇಡಿಕೆಗಳಿಗೆ ಸರ್ಕಾರ ಒಪ್ಪಿಕೊಂಡಂತೆ ಕಾಣಿಸಿದರೂ ಮುಖ್ಯವಾದ ಬೇಡಿಕೆಗಳನ್ನು ಅದು ನಿರಾಕರಿಸಿದೆ. ಮೇಲ್ನೋಟಕ್ಕೆ ನೋಡುವುದಾದರೆ ಪ್ರತಿಭಟನೆ ನಡೆಯುತ್ತಲೇ ಇದೆ ಮತ್ತು ಇದು ಏನೂ ಗಳಿಸಿಕೊಂಡಿಲ್ಲ. ಕಾಯ್ದೆ ರದ್ದತಿ ಕುರಿತು ಯಾವುದೇ ಪಾಸಿಟಿವ್ ವಿಷಯಗಳು ಹೊರಹೊಮ್ಮಿಲ್ಲ ಎನ್ನಿಸಬಹುದು.

ಆದರೆ, ರೈತ ಹೋರಾಟದ ಒಳಹೊಕ್ಕರೆ ಈ 11 ತಿಂಗಳಿಗೂ ಮೀರಿದ ಹೋರಾಟ ಒಂದು ಕಡೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ನಿಜ ಬಣ್ಣವನ್ನು ತೋರಿಸಿದೆ. ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಈ ಸಂಘಟನೆಗಳು, ಬಿಜೆಪಿ ಪಕ್ಷದ ಹಿರಿಯ ನಾಯಕರು, ಅದರಲ್ಲೂ ಮುಖ್ಯಮಂತ್ರಿ ಹುದ್ದೆಯಲ್ಲಿರುವವರು ರೈತರ ವಿರುದ್ಧ ಹಿಂಸಾತ್ಮಕವಾಗಿ ನಡೆದುಕೊಂಡಿದ್ದಾರೆ. ರೈತರ ವಿರುದ್ಧ ಜನರನ್ನು ಎತ್ತಿಕಟ್ಟಿದ್ದಾರೆ.

ಮತ್ತೊಂದು ಕಡೆ ತಮ್ಮದೆ ಮನೆ, ಕುಟುಂಬ, ಬ್ಯುಸಿನೆಸ್, ಹೊಲಗಳಿದ್ದರೂ ಕೂಡ ಈ ಸಿಂಘು, ಗಾಝಿಪುರ್, ಟಿಕ್ರಿ, ಪಲ್ವಲ್, ಶಹಜಹನ್ಪುರ್, ಹಲವು ಟೋಲ್ ಪ್ಲಾಜಾಗಳಲ್ಲಿ ರೈತರು ಅವೆಲ್ಲವನ್ನೂ ಬಿಟ್ಟು ಮನೆಯಿಲ್ಲದವರಂತೆ ಬದುಕಿದ್ದಾರೆ. ಇಲ್ಲಿ ರೈತರ ತಾಳ್ಮೆ, ಶಾಂತಿ, ನಂಬಿಕೆ, ಛಲ, ಜೀವನ ಪ್ರೀತಿ ಕಾಣಿಸಿದೆ. ತಮ್ಮ ಜೀವನವನ್ನು ಉಳಿಸಿಕೊಳ್ಳುವ ಜೊತೆಗೆ ತಮ್ಮ ಮುಂದಿನ ಪೀಳಿಗೆಯವರಿಗಾಗಿ ಹೋರಾಡುವ ಅವರ ನಿಜ ಕಾಳಜಿ ಕಾಣಿಸಿದೆ.

ಬಿಜೆಪಿ ಮತ್ತು ಬಿಜೆಪಿ ನಾಯಕರ ಹಿಂಸಾತ್ಮಕ ಕೃತ್ಯಗಳು, ಜನ ವಿರೋಧಿ, ಸಂವಿಧಾನ ವಿರೋಧಿ ಕೆಲಸಗಳು, ಇದರ ಹಿಂದಿರುವ ಆರ್‌ಎಸ್‌ಎಸ್; ಇವೆಲ್ಲವನ್ನೂ 11 ತಿಂಗಳ ರೈತರ ಪ್ರತಿಭಟನೆ ತೋರಿಸಿಕೊಟ್ಟಿದೆ.

ಇದರ ಜೊತೆಗೆ ರೈತರು ಗಳಿಸಿಕೊಂಡಿದ್ದು ಎಂದರೆ ಒಗ್ಗಟ್ಟು. ಈ ದೊಡ್ಡ ಹೋರಾಟಕ್ಕೆ ಒಗ್ಗಟ್ಟು ತುಂಬಾ ಮುಖ್ಯ ಎಂಬುದನ್ನು ತಿಳಿದುಕೊಂಡಿದ್ದಾರೆ. ಅಡೆತಡೆಗಳಾದ ಜಾತಿ, ಧರ್ಮ, ಲಿಂಗ ಮತ್ತು ವಯಸ್ಸಿನ ತಾರತಮ್ಯ ಬಿಟ್ಟು ಒಟ್ಟುಗೂಡಿದ್ದಾರೆ. ಬೆಳೆಗಳ ಮೇಲೆ ರೈತರನ್ನು ವಿಭಜನೆ ಮಾಡಿರುವ ಈ ದೇಶದಲ್ಲಿ ಹರಿಯಾಣ-ಪಂಜಾಬ್, ಝಾಟ್-ಮುಸ್ಲಿಂ, ವೃದ್ಧ-ಯುವಕ, ಗುಜ್ಜರ್-ಮೀನಾ, ಉತ್ತರ-ದಕ್ಷಿಣ, ಪುರುಷ- ಮಹಿಳೆಯರು ಹೀಗೆ ಎಲ್ಲಾ ತಾರತಮ್ಯ ಬಿಟ್ಟು ದಶಕಗಳ ಬಳಿಕ ಒಂದು ಹೋರಾಟದಲ್ಲಿ ಒಗ್ಗಟ್ಟು ಕಂಡು ಬಂದಿದೆ.

ಇನ್ನೊಂದು ಪ್ರಮುಖ ಬೆಳವಣಿಯೆಂದರೆ ನಾವು ರೈತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು. ಈ ಮೊದಲು ರೈತ ಎಂದು ಹೇಳಿಕೊಳ್ಳಲು ಸಂಕೋಚಪಡುತ್ತಿದ್ದ ಯುವಜನರು ಇಂದು ಹೆಮ್ಮೆಯಿಂದ ನಾನು ರೈತ ಎನ್ನುತ್ತಿದ್ದಾರೆ. ಕೃಷಿಯಲ್ಲಿ ತೊಡಗಿಕೊಳ್ಳದಿದ್ದರೂ ರೈತ ಕುಟುಂಬದಿಂದ ಬಂದಿರುವ ಎಲ್ಲಾ ಯುವಜನತೆ ನಾನು ರೈತ ಎಂದು ಹೇಳಿಕೊಳ್ಳುತ್ತಿದ್ದಾರೆ. ತಮ್ಮ ಬಟ್ಟೆ, ಕಾರು, ಬೈಕ್, ಬ್ಯಾನರ್‌ಗಳ ಮೇಲೆ ನಾನು ಅನ್ನದಾತ ಎಂಬ ಹೇಳಿಕೆಗಳನ್ನು ಕಾಣುತಿದ್ದೇವೆ. ನಗರ ಮತ್ತು ಹಳ್ಳಿಗಳ ನಡುವೆ ಇದ್ದ ತಾರತಮ್ಯವನ್ನು ಇಲ್ಲವಾಗಿಸುತ್ತಿದ್ದಾರೆ. ನಾವು ನಿಮಗೆ ಊಟ ನೀಡುವವರು ಎಂಬುದನ್ನು ಖುಷಿಯಿಂದ ಹೇಳುಕೊಳ್ಳುತ್ತಿದ್ದಾರೆ.

ಇನ್ನು ಈ 11 ತಿಂಗಳ ಕಾಲ ರೈತರ ಸಂಘಟನಾ ಕೌಶಲ್ಯವನ್ನು ಇಡೀ ದೇಶಕ್ಕೆ ಎತ್ತಿ ತೋರಿಸಿದೆ. ಅದರಲ್ಲೂ ಬಿಜೆಪಿ ನಾಯಕರು, ಪ್ರತಿಭಟನಾ ನಿರತರು ರೈತರಲ್ಲ, ಯಾವ ರೈತ ತಮ್ಮ ಹೊಲ ಬಿಟ್ಟು ದೆಹಲಿ ಗಡಿಯಲ್ಲಿ ಕುಳಿತುಕೊಳ್ಳುತ್ತಾರೆ ಎಂಬಂತಹ ಸುಳ್ಳಿನ ಹಂಗಿಸುವ ಮಾತುಗಳನ್ನು ಪದೇ ಪದೇ ಹೇಳುತ್ತಿದ್ದರೂ, ಇವುಗಳಿಗೆ ಕಿವಿಗೊಡದೆ ರೈತರು ತಾವು ಯೋಜಿಸಿದ್ದಂತೆ ಕೆಲಸ ಮಾಡುತ್ತಿದ್ದಾರೆ. ಅವರ ಪ್ಲಾನಿಂಗ್ ತುಂಬಾ ಚೆನ್ನಾಗಿತ್ತು. ಪ್ರತಿ ಹಳ್ಳಿಯಿಂದ ಪಾಳಿ ಮಾದರಿಯಲ್ಲಿ 20-30 ಜನರ ದಂಡು ಬಂದು 10-15 ದಿನ ಗಡಿಯಲ್ಲಿ ಕೆಲಸ ಮಾಡುವುದು, ನಂತರ ಊರಿಗೆ ಹೋಗುವುದು ನಡೆಯುತ್ತಿತ್ತು.

ಗಡಿಗಳಲ್ಲಿನ ಸ್ವಚ್ಛತೆ, ಕಸ ಬೇರ್ಪಡಿಸುವುದು, ಊಟ ಬಡಿಸುವುದು, ಲಂಗರ್‌ಗಳ ಮೂಲಕ ಊಟ ನೀಡುವುದು, ವೇದಿಕೆ ನಿರ್ವಹಣೆ, ಹಣಕಾಸಿನ ವಹಿವಾಟು ಮತ್ತು ಮುಖ್ಯವಾಗಿ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ರೈತರ ಸಂಘಟನಾ ಕೌಶಲ್ಯ ಬೆಳಕಿಗೆ ಬಂದಿದೆ. ಜೊತೆಗೆ ದೇಶದ ಭವಿಷ್ಯಕ್ಕೆ ಉತ್ತಮ ನಾಯಕರನ್ನು ಕೂಡ ಈ ಪ್ರತಿಭಟನೆ ನೀಡಿದೆ.

ಕಬ್ಬು ಬೆಲೆ ಹೆಚ್ಚಳ, ವಿದ್ಯುಚ್ಛಕ್ತಿ, ಭೂಕಬಳಿಕೆ, ರೈತರ ಮೇಲಿನ ಸುಳ್ಳು ಆರೋಪಗಳು ಇಂತಹ ಅನ್ಯಾಯಗಳ ವಿರುದ್ಧ ಧನಿ ಎತ್ತಲು ರೈತ ಹೋರಾಟ ಧೈರ್ಯ ನೀಡಿದೆ. ರೈತರು ಅತ್ಯುತ್ತಮ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೂ, ಇಷ್ಟು ದಿನಗಳ ಕಾಲ ಈ ಪ್ರತಿಭಟನೆ ನಡೆಯಬಾರದಿತ್ತು. ಇದು ಮೋದಿ ಸರ್ಕಾರದ ವೈಫಲ್ಯ.

ಪ್ರ: ನವೆಂಬರ್ 26ಕ್ಕೆ ರೈತ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿಗಳು ಮತ್ತು ದೇಶಾದ್ಯಂತ ಯಾವ ಕಾರ್ಯಕ್ರಮಗಳು ನಡೆಯಲಿವೆ?

ಉ: ನವೆಂಬರ್ 26ಕ್ಕೆ ಒಂದು ವರ್ಷದ ವಾರ್ಷಿಕೋತ್ಸವವಿದೆ. ಅಂದು ನವೆಂಬರ್ 26, 2020ರಂದು ಏನೇನು ನಡೆಯಿತು, ಅದನ್ನು ರಿಕ್ರಿಯೇಟ್ ಮಾಡಲಿದ್ದೇವೆ. ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ದೆಹಲಿ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದ ರೈತರು ಗಡಿಗಳಿಗೆ ಬರಲಿದ್ದಾರೆ. ಜನವರಿ 26ರ ಜನಸಂಖ್ಯೆಯನ್ನೆ ನಾವು ನಿರೀಕ್ಷಿಸುತ್ತದ್ದೇವೆ.

ಇನ್ನು ದೆಹಲಿಗೆ ದೂರದಲ್ಲಿರುವ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಪ್ರತಿಭಟನೆ ಆಯೋಜನೆಗೊಂಡಿವೆ. ಛತ್ತೀಸ್‌ಗಡ, ಜಾರ್ಖಂಡ್, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಟ್ರ್ಯಾಕ್ಟರ್ ಮಾರ್ಚ್ ಆಯೋಜನೆ ಮಾಡಲಾಗಿದ್ದು, ಅಂದು ರಾಜ್ಯ ರಾಜಧಾನಿಗೆ ಟ್ರ್ಯಾಕ್ಟರ್‌ಗಳ ಜೊತೆಗೆ ರೈತರು ಬರಲಿದ್ದಾರೆ.

ಕರ್ನಾಟಕದಲ್ಲಿ 26ರಂದು ಆಯ್ಕೆ ಮಾಡಲಾಗಿರುವ 10ರಿಂದ 12 ಸ್ಥಳಗಳಲ್ಲಿ ಮುಖ್ಯವಾದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಯುವ ಕಾರಣ ಟ್ರಾಫಿಕ್ ಜಾಮ್ ಉಂಟಾಗಲಿದೆ. ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ರಾಜಧಾನಿ ಮತ್ತು ಜಿಲ್ಲಾ ಹೆಡ್ ಕ್ವಾರ್ಟರ್ಸ್‌ಳಲ್ಲಿ ಪ್ರತಿಭಟನೆ ನಡೆಯಲಿದೆ.

ಇದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರತಿಭಟನೆ ನಡೆಯಲಿದೆ. ಜೊತೆಗೆ ಭಾರತದ ರಾಯಭಾರಿ ಕಚೇರಿ ಬಳಿ ಸ್ಲೀಪ್ ಔಟ್‌ಗಳನ್ನು ಆಯೋಜಿಸಲಾಗಿದೆ. ಬ್ರಿಟನ್, ಯೂರೋಪ್, ಅಮೆರಿಕಾ, ಇಟಲಿಯಲ್ಲೂ ಪ್ರತಿಭಟನೆ ನಡೆಯಲಿವೆ.

ಇನ್ನು ನವೆಂಬರ್ 29ಕ್ಕೆ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, 500 ಮಂದಿಯ ರೈತರ ತಂಡಗಳು ತಮ್ಮ ಟ್ರ್ಯಾಕ್ಟರ್‌ಗಳು, ಟ್ರಾಲಿಗಳ ಜೊತೆಗೆ ಪಾರ್ಲಿಮೆಂಟ್ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿವೆ.

ಪ್ರ: ಮುಂಬರುವ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಚುನಾವಣೆಗಳ ಮೇಲೆ ರೈತ ಹೋರಾಟದ ಪ್ರಭಾವಹೇಗಿರಬಹುದು?

ಉ: ಈಗಾಗಲೇ ಸಂಯುಕ್ತ ಕಿಸಾನ್ ಮೋರ್ಚಾ ಮಿಷನ್ ಉತ್ತರ ಪ್ರದೇಶ್, ಮಿಷನ್ ಉತ್ತರಾಖಂಡ ಕಾರ್ಯಕ್ರಮ ಘೋಷಿಸಿದೆ. ದೊಡ್ಡ ಮತ್ತು ಸಣ್ಣ ಕಿಸಾನ್ ಮಹಾ ಪಂಚಾಯತ್‌ಗಳನ್ನು ನಡೆಸಲಾಗಿದೆ. ಎಸ್‌ಕೆಎಂ ಯೋಜನೆಗಳು ಜಾರಿಯಾಗುತ್ತಿದ್ದ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ರೈತರ ಹತ್ಯಾಕಾಂಡ ನಡೆಸಲಾಯಿತು. ನಾಚಿಕೆಯಿಲ್ಲದೆ ಆರೋಪಿಯ ತಂದೆಯನ್ನು ಮೋದಿ ಸರ್ಕಾರ ಇನ್ನೂ ತಮ್ಮ ಸಂಪುಟದಲ್ಲಿ ಉಳಿಸಿಕೊಂಡಿದೆ. ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೇ ಹೋರಾಟದ ಪ್ರಭಾವವನ್ನು ನೋಡುತ್ತಿದ್ದೇವೆ. ಚುನಾವಣಾ ಫಲಿತಾಂಶದಲ್ಲಿಯೂ ರೈತ ಹೋರಾಟ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಸಲಾಗಿದೆ.

ಪ್ರ: ಗಡಿಗಳಲ್ಲಿ 600ಕ್ಕೂ ಹೆಚ್ಚು ರೈತರು ಮೃತಪಟ್ಟದ್ದಾರೆ. ಅವರ ಕುಟುಂಬದ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರಗಳು ಮತ್ತು ಎಸ್‌ಕೆಎಂ ಕಡೆಯಿಂದ ಏನಾದರೂ ಪರಿಹಾರ ಸಿಕ್ಕಿದೆಯೇ?

ಉ: 670 ರೈತರು ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಇಷ್ಟು ರೈತರು ಮೃತಪಟ್ಟಿದ್ದರೂ ಅವರ ಕುಟುಂಬದವರು ಹೋರಾಟದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಪರಿಹಾರ ನೀಡುವುದಿರಲಿ, ಒಕ್ಕೂಟ ಸರ್ಕಾರ ಇಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದನ್ನೇ ಒಪ್ಪಿಕೊಳ್ಳುತ್ತಿಲ್ಲ. ಜೊತೆಗೆ ನಮ್ಮ ಬಳಿ ಡೇಟಾ ಇಲ್ಲ ಎಂಬ ನಾಚಿಕೆಯಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಪ್ರತಿಭಟನಾ ಬೆಂಬಲಿಗರ ಬ್ಲಾಗ್ ’ಹ್ಯೂಮನ್ ಕಾಸ್ಟ್ ಆಫ್ ಫಾರ್ಮಸ್ಸ್ ಮೂಮೆಂಟ್’ ಎಂಬುದರಲ್ಲಿ ಮೃತಪಟ್ಟ ರೈತರ ಪ್ರತಿ ಮಾಹಿತಿಯೂ ಇದೆ.

ಪಂಜಾಬ್ ಸರ್ಕಾರ ಒಂದೇ ಮೃತರಿಗೆ ಪರಿಹಾರ ನೀಡುತ್ತಿದೆ. ಇನ್ನು ಲಖಿಂಪುರ್ ಕೇರಿ ಹತ್ಯಾಕಾಂಡದಲ್ಲಿ ಮೃತಪಟ್ಟವರಿಗೆ 45 ಲಕ್ಷ ಪರಿಹಾರ ನೀಡುವುದಾಗಿ ಉತ್ತರಪ್ರದೇಶ ಸರ್ಕಾರ ಘೋಷಿಸಿದೆ. ಗಾಯಾಳುಗಳಿಗೆ ಪರಿಹಾರ ಘೋಷಿಸಿಲ್ಲ. ಆದರೆ ಈ ಹರಿಯಾಣ ಸರ್ಕಾರ ರೈತರ ಮೇಲೆ ಹಲ್ಲೆ ಮಾಡಲು ತಿಳಿಸುತ್ತಿದೆ, ಅಂತಹದರಲ್ಲಿ ಪರಿಹಾರವೆಲ್ಲಿ?

ಸಂಯುಕ್ತ ಕಿಸಾನ್ ಮೋರ್ಚಾ ಕಡೆಯಿಂದ ಮೃತಪಟ್ಟ ರೈತರಿಗೆ ಪರಿಹಾರ ನೀಡುವ ಕ್ರಮವಿಲ್ಲ. ಆದರೆ, ವೈಯಕ್ತಿಕವಾಗಿ ಆಯಾ ರೈತ ಸಂಘಟನೆಗಳು ತಮ್ಮ ಸದಸ್ಯರನ್ನು ಕಳೆದುಕೊಂಡಾಗ ಶಕ್ತಿ ಮೀರಿ ಪರಿಹಾರ ನೀಡುತ್ತಿವೆ.

ಪ್ರ: ನೀವು ’ಮಹಿಳಾ ರೈತರ ಹಕ್ಕುಗಳ ವೇದಿಕೆ’ – ಮಕಾಮ್‌ನ ಹೋರಾಟಗಾರ್ತಿ. ಹೀಗಾಗಿ ದೆಹಲಿಯ ಗಡಿಗಳಲ್ಲಿನ ರೈತ ಮಹಿಳೆಯರ ಪಾತ್ರ, ಸವಾಲುಗಳ ಬಗ್ಗೆ ತಿಳಿಸಿ.

ಉ: ಮಹಿಳೆಯರು ದೇಶದ ನಿಜವಾದ ಅನ್ನದಾತರು. ಅವರು ಹೊಲಗಳಲ್ಲಿ ಕೆಲಸ ಮಾಡುತ್ತಾ ಬೆಳೆ ಬೆಳೆದು ಅನ್ನ ನೀಡುವ ಜೊತೆಗೆ ಅಡುಗೆ ಮನೆಯಲ್ಲಿಯೂ ಕೆಲಸ ಮಾಡುತ್ತಾರೆ. ಅವರನ್ನು ಮನೆಯವರ ಊಟದ ಹೊಣೆಗಾರರನ್ನಾಗಿ ಮಾಡಲಾಗಿದೆ. ಅವರು ಅಡುಗೆ ಮಾಡಿ ನಮಗೆ ನೇರವಾಗಿ ಊಟ ನೀಡುವುದರಿಂದಲೂ ಅವರು ನಿಜವಾದ ಅನ್ನದಾತರು.

ದೇಶದ ರೈತರು, ಕೃಷಿ ಸಂಘಟನೆಗಳು ಮತ್ತು ಸರ್ಕಾರಗಳು ಕೂಡ ರೈತ ಮಹಿಳೆಯರನ್ನು ರೈತರು ಎಂದು ಗುರುತಿಸುವುದಿಲ್ಲ. ಲಿಂಗಾಧಾರಿತ ಅಸಮಾನತೆ ಇದಕ್ಕೆ ಕಾರಣವಾಗಿದೆ. ಮುಖ್ಯವಾಗಿ ರೈತ ಎಂದು ಗುರುತಿಸಲು ಜಮೀನು ಒಡೆಯನ ಹೆಸರಿನಲ್ಲಿರಬೇಕು. ಆದರೆ, ದೇಶದಲ್ಲಿ ಬಹುಪಾಲು ಜಮೀನು ಪುರುಷನ ಹೆಸರಿನಲ್ಲಿರುತ್ತದೆ. ಹೀಗಾಗಿ ಮಹಿಳಾ ರೈತರನ್ನು ಗುರುತಿಸುವುದು ಇಂದು ಮುಖ್ಯ ಅಗತ್ಯವಾಗಿದೆ.

ಈ ಪ್ರತಿಭಟನೆಯಲ್ಲಿ ಪಂಜಾಬ್‌ನ ಕೆಲವು ಸಂಘಟನೆಗಳು ಮಹಿಳೆಯರಿಗೆ ಕೇವಲ ಸದಸ್ಯತ್ವ ನೀಡಿಲ್ಲ. ಅವರನ್ನೇ ಮುಖ್ಯಸ್ಥರನ್ನಾಗಿಸಿದ್ದಾರೆ. ಆದರೆ, ಇದು ಕೆಲವೆಡೆ ಮಾತ್ರ. ದೇಶದ ಹಲವು ಸಂಘಟನೆಗಳಲ್ಲಿ ಮಹಿಳೆಯರಿಗೆ ಮುಖ್ಯಸ್ಥೆ ಮಾಡುವುದಿರಲಿ, ಸದಸ್ಯತ್ವವನ್ನು ಕೂಡ ನೀಡಿಲ್ಲ.

ಜನವರಿ 18ರಿಂದ ಸ್ಪೆಷಲ್ ವುಮೆನ್ ಫಾರ್ಮರ್ಸ್ ಡೇ ಮತ್ತು ಮಾರ್ಚ್ 8ರ ವಿಶ್ವ ಮಹಿಳಾ ದಿನಾಚರಣೆಯಂದು ನಾವು ಸಾವಿರಾರು ಮಹಿಳೆಯರನ್ನು ಕಂಡೆವು. ಅವರೇ ವೇದಿಕೆಗಳನ್ನು ನಿರ್ವಹಿಸಿದ್ದಾರೆ. ಅವರೇ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ಉಳಿದ ದಿನಗಳಲ್ಲಿಯೂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಅದು 50% ಇಲ್ಲ. ಪ್ರತಿಭಟನೆಯಲ್ಲಿ ಮಹಿಳೆಯರ ಪಾತ್ರ 15ರಿಂದ 20% ಇದೆ.

ಪ್ರತಿಭಟನೆ ಆರಂಭಕ್ಕೂ ಇಂದಿಗೂ ಹೋಲಿಸಿದರೇ ಇಂದು ರೈತ ನಾಯಕಿಯರು ಅದರಲ್ಲೂ ಯುವ ರೈತ ನಾಯಕಿಯರು ಬೆಳಕಿಗೆ ಬರುತ್ತಿದ್ದಾರೆ. ಪಂಜಾಬಿನ ಯುವ ನಾಯಕಿಯರ ಜೊತೆಗೆ ಅತಿ ಸಂಕೋಚ ಮತ್ತು ಖಾಪ್ ಪಂಚಾಯತ್‌ನಿಂದ ನಿಯಂತ್ರಿಸಲ್ಪಡುವ ಹರಿಯಾಣದ ಮಹಿಳೆಯರು ಕೂಡ ಮುಂಚೂಣಿಗೆ ಬರುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಕಾಣುವ ಮತ್ತೊಂದು ಬಹು ದೊಡ್ಡ ಬದಲಾವಣೆಯೆಂದರೆ, ಅಡುಗೆ ಮನೆಗಳಲ್ಲಿ ಕೆಲಸ ಮಾಡುವ ಪುರುಷರು. ಹೆಣ್ಣು ಮಕ್ಕಳು ಇಡೀ ದಿನ ಇಷ್ಟು ಕಷ್ಟ ಪಡುತ್ತಿದ್ದರಾ? ನಮಗೆ ಈಗ ಅವರ ಕಷ್ಟಗಳು ಅರ್ಥವಾಗುತ್ತಿದೆ ಎಂಬ ಮಾತುಗಳು ಪುರುಷರ ಬಾಯಲ್ಲಿ ಬರುತ್ತಿವೆ.

ಇನ್ನು ಈ ಕೃಷಿ ಕಾನೂನುಗಳು ಮಹಿಳಾ ರೈತರ ಮೇಲೆ ಏನು ಪರಿಣಾಮ ಉಂಟಾಗುತ್ತದೆ ಎಂಬ ಬಗ್ಗೆ ಚರ್ಚೆಗಳಾಗುತ್ತಿಲ್ಲ. ಬದಲಾವಣೆ ಕೊಂಚವಾಗಿದೆ. ಆದರೆ ಇನ್ನೂ ಆಗುವುದು ಸಾಕಷ್ಟು ಬಾಕಿ ಉಳಿದಿದೆ.

ಪ್ರ: ಒಂದು ವರ್ಷವಾದರೂ ರೈತರ ಹೋರಾಟಕ್ಕೆ ಸರ್ಕಾರ ಬಗ್ಗಿಲ್ಲ. ಹೀಗಿರುವ ನಿಮ್ಮ ಮುಂದಿನ ಯೋಜನೆಗಳೇನು?

ರೈತ ಹೋರಾಟಗಾರರು ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನಾ ಸ್ಥಳಗಳನ್ನು ಬಿಟ್ಟು ಹೋಗುವುದಿಲ್ಲ. 670 ಮಂದಿ ರೈತರು ಹುತಾತ್ಮರಾಗಿದ್ದಾರೆ. ಹೀಗಿರುವಾಗ ಖಾಲಿ ಕೈಗಳಲ್ಲಿ ರೈತರು ವಾಪಸ್ ಹೋಗುವುದಿಲ್ಲ. ಪ್ರತಿಭಟನೆ ಆರಂಭಕ್ಕೆ ಮುನ್ನ ರೈತರು ಯಾವ ಭಯ ಹೊಂದಿದ್ದರೋ ಅದೇ ಈಗ ಆಗಿದೆ. ಮಂಡಿಗಳನ್ನು ಮುಚ್ಚಲಾಗುತ್ತಿದೆ. ಬೆಲೆ ನಿರ್ಧಾರ ಹೊರಭಾಗದಲ್ಲಾಗುತ್ತಿದೆ. ಎಪಿಎಂಸಿಯಲ್ಲಿ ಬೆಲೆ ಕಡಿಮೆಯಾಗುವುದು, ರೈತರನ್ನು ಮೋಸಗೊಳಿಸುವುದು ಎಲ್ಲವೂ ನಡೆಯುತ್ತಿದೆ. ಹೀಗಾಗಿ ರೈತರು ತಮ್ಮ ಬೇಡಿಕೆ ಸರಿಯಾಗಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪಾಠ ಕಲಿಯದಿದ್ದರೂ, ಈ ಹೋರಾಟ ಮುಂದುವರೆಯುತ್ತದೆ. 2024ರ ಚುನಾವಣೆಯಲ್ಲಿ ಬಿಜೆಪಿ ಇದರ ಫಲ ಅನುಭವಿಸಲಿದೆ. ರೈತರು ಮಾತ್ರ ಗಡಿಗಳಿಂದ ವಾಪಸ್ ಹೋಗುವುದಿಲ್ಲ. ಮೋದಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಲು ಈ ಹೋರಾಟ ಹಲವರಿಗೆ ಮಾದರಿಯಾಗಿದೆ.

ಈಗಾಗಲೇ ಈ ಹೋರಾಟ ಮೋದಿ ಸರ್ಕಾರಕ್ಕೆ ಹೊಡೆತ ನೀಡಿದೆ ಎನ್ನುವುದಕ್ಕೆ ಅವರು ಒಂದೂವರೆ ವರ್ಷ, ಎರಡು ವರ್ಷ ಕಾನೂನುಗಳನ್ನು ಅಮಾನತ್ತಿನಲ್ಲಿ ಇಡುವ ಆಫರ್ ನೀಡಿರುವುದೇ ಸಾಕ್ಷಿಯಾಗಿದೆ.

ಒಂದು ಪ್ರತಿಭಟನೆ ನಡೆಸುವವರು ಉಳಿಯಲು ಆಹಾರ ಬೇಕು. ರೈತರು ತಮಗೆ ಬೇಕಾದ ಆಹಾರ ತಾವೇ ಬೆಳೆದುಕೊಳ್ಳುತ್ತಾರೆ. ಹೀಗಾಗಿ ಅವರು ಎಷ್ಟು ದಿನ ಬೇಕಾದರೂ ಪ್ರತಿಭಟನೆ ಮುಂದುವರಿಸಬಹುದು.

ಪ್ರ: ಕರ್ನಾಟಕದ ರೈತರ ಮೇಲೆ ಈ ಐತಿಹಾಸಿಕ ಹೋರಾಟದ ಪ್ರಭಾವ ಏನು?

ಉ: ದೆಹಲಿಯ ಗಡಿಗಳಲ್ಲಿ ಕಾಣಿಸುವಷ್ಟು ದಟ್ಟವಾಗಿ ದಕ್ಷಿಣ ಭಾರತದಲ್ಲಿ ಪ್ರತಿಭಟನೆ ಕಾಣಿಸದಿದ್ದರೂ, ಕರ್ನಾಟಕದ ರೈತ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ನಡೆಸಲು ಮುಂದೆಬಂದಿವೆ. ಉತ್ತಮ ಬದಲಾವಣೆ ಕಾಣಿಸುತ್ತಿದೆ. ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ನಿಧನದ ಬಳಿಕ ಬಿಡಿಬಿಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ, ತಮ್ಮ ಶಕ್ತಿ ಕಳೆದುಕೊಂಡಂತೆ ಕಾಣುತ್ತಿದ್ದ ರೈತ ಸಂಘಟನೆಗಳು ಇಂದು ಒಂದುಗೂಡಿ ತಮ್ಮ ಬೇಡಿಕೆಗಳಿಗಾಗಿ ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಿವೆ.

ಕವಿತಾ ಕುರಗಂಟಿ

ಆಂಧ್ರಪ್ರದೇಶದಲ್ಲಿ ಆಶಾ – ಸ್ವರಾಜ್ ಸಂಘಟನೆಯ ಮೂಲಕ ರೈತರನ್ನು ತಳಮಟ್ಟದಲ್ಲಿ ಸಂಘಟಿಸುವ ಕೆಲಸದಲ್ಲಿ ಕವಿತಾ ತೊಡಗಿಕೊಂಡಿದ್ದಾರೆ. ಅಖಿಲ‌ ಭಾರತ ರೈತ ಸಂಘರ್ಷ್ ಸಮನ್ವಯ ಸಮಿತಿ ಹಾಗೂ ಈಗಿನ ಸಂಯುಕ್ತ ಕಿಸಾನ್ ಮೋರ್ಚಾಗಳಲ್ಲೂ ಅವರದ್ದು ಪ್ರಮುಖ ಪಾತ್ರವಿದೆ

ಸಂದರ್ಶನ: ಮಮತ.ಎಂ ಮತ್ತು ಸ್ವಾತಿ ಶುಕ್ಲ
ನಿರೂಪಣೆ: ಮಮತ. ಎಂ


ಇದನ್ನೂ ಓದಿ: ರೈತ ಹೋರಾಟವನ್ನು ತಕ್ಷಣಕ್ಕೆ ಹಿಂಪಡೆಯುವುದಿಲ್ಲ: ರಾಕೇಶ್ ಟಿಕಾಯತ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...