ಹಿರಿಯ ರಕ್ಷಣಾ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರ್ನಲ್ಲಿ ಪತನಗೊಂಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರಿದ್ದ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ತಮಿಳುನಾಡಿನ ಕೊನೂರ್ ಬಳಿ ಬುಧವಾರ ಪತನಗೊಂಡಿದೆ ಎಂದು ಐಎಎಫ್ ಖಚಿತಪಡಿಸಿದೆ. ರಾವತ್ ಜೊತೆಯಲ್ಲಿ ಅವರ ಪತ್ನಿ ಮಧುಲಿಕಾ ರಾವತ್, ಅವರ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು ಸೇರಿ ಒಟ್ಟು 14 ಮಂದಿ ಇದ್ದರು ಎನ್ನಲಾಗಿದೆ.
ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ಟ್ವಿಟರ್ನಲ್ಲಿ ತಿಳಿಸಿದೆ. IAFನ ಹೊಸ Mi-17 V5 ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಸದ್ಯಕ್ಕೆ ತೀವ್ರ ಸುಟ್ಟ ಗಾಯಗಳಾಗಿರುವ 5 ದೇಹಗಳು ಪತ್ತೆಯಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಪೂರ್ಣ ಮೂರು ವರ್ಷಗಳ ಅವಧಿಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ರಾವತ್ ಅವರು ಡಿಸೆಂಬರ್ 31, 2019 ರಂದು ಭಾರತದ ಮೊದಲ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡರು. ಫೆಬ್ರವರಿ 3, 2015 ರಂದು ನಾಗಾಲ್ಯಾಂಡ್ನ ದಿಮಾಪುರ್ನಲ್ಲಿ ಚೀತಾ ಅಪಘಾತದಲ್ಲಿ ರಾವತ್ ಅಪಾಯದಿಂದ ಪಾರಾಗಿದ್ದರು. ಆ ಸಮಯದಲ್ಲಿ ಅವರು ಲೆಫ್ಟಿನೆಂಟ್ ಜನರಲ್ ಆಗಿದ್ದರು.
ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್ವಾದಿ ನಿರ್ದೇಶಕ ಪ.ರಂಜಿತ್…!