HomeಮುಖಪುಟExplainer: ಹಲಾಲ್ ಹಾಗೆಂದರೇನು?

Explainer: ಹಲಾಲ್ ಹಾಗೆಂದರೇನು?

ವಾಸ್ತವದಲ್ಲಿ ಪ್ರಾಣಿಯನ್ನು ಕೊಯ್ಯುವ ಇಸ್ಲಾಮೀ ವಿಧಾನದ ಹೆಸರು ದ್ಸಬಹ್ ಎಂದಾಗಿದೆ. ಹಾಗಾದರೆ ಹಲಾಲ್ ಎಂದರೇನು? ಇಲ್ಲಿ ಓದಿ

- Advertisement -
- Advertisement -

ಪ್ರಸ್ತುತ ಭಾರತದಲ್ಲಿ ಮುಸ್ಲಿಮರ ವಿರುದ್ಧದ ಅಸಹನೆಯ ಭಾಗವಾಗಿ ಮುಸ್ಲಿಮರು ಮಾಂಸಾಹಾರಕ್ಕಾಗಿ ಪ್ರಾಣಿಯನ್ನು ಕೊಯ್ಯುವಾಗ ಅನುಸರಿಸುವ ವಿಧಿವಿಧಾನವನ್ನೂ ಕಟುವಾಗಿ ವಿರೋಧಿಸುವ ಒಂದು ಟ್ರೆಂಡ್ ಚಲಾವಣೆಯಲ್ಲಿದೆ. ಭಾರತದಲ್ಲಿ ಕೇರಳ ರಾಜ್ಯವನ್ನು ಹೆಚ್ಚು ಶಿಕ್ಷಿತರ ನಾಡೆಂದು ಪರಿಗಣಿಸಲಾಗುತ್ತದೆ. ಅಲ್ಲಿ ಒಂದು ಮಟ್ಟಿಗೆ ನೆಲೆಸಿರುವ ಕೂಡು ಸಂಸ್ಕೃತಿಯ ಕಾರಣದಿಂದಲೂ, ಕೋಮುವಾದಿ ರಾಜಕೀಯದ ಬೆಳೆ ತೆಗೆಯಲು ಬಲಪಂಥೀಯ ಪ್ರತಿಗಾಮಿ ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ.

ಕೇರಳದಲ್ಲಿ ಇಂದಿಗೂ ಬ್ರಾಹ್ಮಣೇತರ ಹಿಂದೂಗಳಲ್ಲಿ ಬಹುತೇಕರು ದನದ ಮಾಂಸವನ್ನು ಸೇವಿಸುತ್ತಾರೆ. ಅಲ್ಲಿ ಅದನ್ನು ಕಡಿಮೆ ಬೆಲೆಗೆ ಲಭ್ಯವಿರುವ ಪೌಷ್ಟಿಕಾಂಶದ ಆಹಾರ ಎಂದಷ್ಟೇ ನೋಡಲಾಗುತ್ತದೆ. ಅಲ್ಲಿ ಈವರೆಗೂ ಗೋ ಪಾಲಿಟಿಕ್ಸ್‌ಗೆ ದೊಡ್ಡ ಮನ್ನಣೆ ಸಿಕ್ಕಿಲ್ಲ. ಅಂತಹ ಕೇರಳದಲ್ಲೂ ಇಂದು ಹಲಾಲ್ ಮಾಂಸದ ಹೋಟೆಲ್‌ಗಳನ್ನು ಬಹಿಷ್ಕರಿಸುವ ಹುನ್ನಾರಕ್ಕೆ ಬಲಪಂಥೀಯ ಶಕ್ತಿಗಳು ಕೈ ಹಾಕಿವೆ. ಹಲಾಲ್ ಮಾಂಸವನ್ನು ಬಹಿಷ್ಕರಿಸಬೇಕು ಎನ್ನುವ ಬಹುತೇಕರಿಗೆ ಹಲಾಲ್ ಎಂಬ ಶಬ್ದದ ಡೆಫಿನಿಶನ್ ಕೂಡಾ ಗೊತ್ತಿಲ್ಲ. ಇಲ್ಲಿ, ಹಲಾಲ್ ಎಂದರೇನು ಎಂದು ಸಂಕ್ಷಿಪ್ತವಾಗಿ ವಿವರಿಸುತ್ತೇನೆ.

ಹಲಾಲ್ ಮತ್ತು ಹರಾಂ ಎನ್ನುವುದು ಇಸ್ಲಾಮೀ ಕರ್ಮಶಾಸ್ತ್ರದಲ್ಲಿ ಬಹಳ ಮಾನ್ಯತೆಯಿರುವ ಪದಗಳು. ಹಲಾಲ್ ಎಂದರೆ ಸಮ್ಮತ ಎಂದೂ, ಹರಾಂ ಎಂದರೆ ನಿಷಿದ್ಧವೆಂದೂ ಬಹಳ ಸರಳವಾದ ಅರ್ಥವಿದೆ. ಆದರೆ ಇಂದು ನಮ್ಮ ದೇಶದಲ್ಲಿ ಕೇವಲ ಮಾಂಸಕ್ಕಾಗಿ ಪ್ರಾಣಿಯನ್ನು ಕೊಯ್ಯುವ ವಿಧಾನವೊಂದನ್ನಷ್ಟೇ ಹಲಾಲ್ ಎಂದು ಬಹುತೇಕರು ಬಗೆದಿದ್ದಾರೆ. ವಾಸ್ತವದಲ್ಲಿ ಪ್ರಾಣಿಯನ್ನು ಕೊಯ್ಯುವ ಇಸ್ಲಾಮೀ ವಿಧಾನದ ಹೆಸರು ದ್ಸಬಹ್ ಎಂದಾಗಿದೆ. ಮುಸ್ಲಿಮರಿಗೆ ಹಲಾಲ್ ಮತ್ತು ಹರಾಂ ಆದ ನೂರಾರು ವಿಚಾರಗಳನ್ನು ಖುರ್‌ಆನ್ ಮತ್ತು ಪ್ರವಾದಿ ವಚನಗಳಲ್ಲಿ ಕಲಿಸಲಾಗಿದೆ.

ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸುತ್ತೇನೆ

ಇಸ್ಲಾಮಿನ ಹರಾಂ ಪದ್ಧತಿ ಎಷ್ಟು ಸರಳವೆಂದು ಅರ್ಥೈಸಲು ಬಸವಣ್ಣರ ಪ್ರಸಿದ್ಧ ವಚನವೊಂದನ್ನು ನಾವಿಲ್ಲಿ ನೋಡಬಹುದು. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ… ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ”. ಬಸವಣ್ಣ ಬೋಧಿಸಿದ ಇವೆಲ್ಲವೂ ಇಸ್ಲಾಮಿನಲ್ಲಿ ಅಕ್ಷರಶಃ ಹಾಗೆಯೇ ಇದೆ. ಆದರೆ ಇಸ್ಲಾಮಿನಲ್ಲಿ ಕದಿಯುವುದು, ಕೊಲ್ಲುವುದು, ಸುಳ್ಳು ಹೇಳುವುದು, ತನ್ನ ತಾನು ದೊಡ್ಡವನೆಂದು ಅಹಂಕಾರ ಮೆರೆಯುವುದು, ಪರರನ್ನು ನಿಂದಿಸುವುದು ಇವಿಷ್ಟು ಮಾತ್ರವಲ್ಲದೇ ಇನ್ನಷ್ಟು ಹರಾಂಗಳಿವೆ. ವ್ಯಭಿಚಾರ, ಮದ್ಯಪಾನ, ವಂಚನೆ, ಇತರರ ಸ್ವತ್ತನ್ನು ಲಪಟಾಯಿಸುವುದು, ಪರದೂಷಣೆಗೈಯುವುದು, ಬಡ್ಡಿ, ಸರಕುಗಳನ್ನು ಶೇಖರಿಸಿಟ್ಟು ಕೃತಕ ಅಭಾವ ಸೃಷ್ಟಿಸಿ ಹೆಚ್ಚುವರಿ ಲಾಭ ಪಡೆಯುವುದು, ತೂಕದಲ್ಲಿ ವಂಚನೆಗೈಯುವುದು, ದುಡಿದವನ ವೇತನ ನೀಡದೇ ಸತಾಯಿಸುವುದು, ಜನರ ಹಕ್ಕುಗಳನ್ನು ಕಸಿಯುವುದು, ಮನುಷ್ಯರಲ್ಲಿ ಮೇಲು ಕೀಳೆಂದು ತಾರತಮ್ಯ ಮಾಡುವುದು, ಸತ್ಯವನ್ನು ಅಡಗಿಸಿಡುವುದು ಇವೆಲ್ಲವೂ ಹರಾಂ ಅರ್ಥಾತ್ ನಿಷಿದ್ಧ ಕಾರ್ಯಗಳು ಮಾತ್ರವಲ್ಲದೇ ಶಿಕ್ಷಾರ್ಹ ಅಪರಾಧವೂ ಹೌದು.

ಒಂದು ಪ್ರವಾದಿ ವಚನ ಇಂತಿದೆ. “ಓರ್ವ ಮನುಷ್ಯ ಸೇವಿಸುವ ಆಹಾರದಲ್ಲಿ ಅತ್ಯಂತ ಶ್ರೇಷ್ಠ ಆಹಾರ ಸ್ವಯಂ ದುಡಿದ ಆಹಾರ..” ಎಂದು. ಇಷ್ಟಕ್ಕೇ ಮುಗಿಯುವುದಿಲ್ಲ. ಮನುಷ್ಯನೊಬ್ಬ ತಾನು ತಿನ್ನುವ ಆಹಾರ ನ್ಯಾಯಯುತವಾದ ಮಾರ್ಗದಲ್ಲಿ ಸಂಪಾದಿಸಿದ್ದರೆ ಅದು ಮಾತ್ರ ಆತನಿಗೆ ಹಲಾಲ್. ಇಸ್ಲಾಮ್ ಈ ವಿಚಾರದಲ್ಲಿ ಎಷ್ಟು ಕಠಿಣವಾಗಿದೆಯೆಂದರೆ ನೀವು ನಿಮ್ಮ ಮನೆಯ ಸಾಕುಪ್ರಾಣಿಗೆ ತಿನ್ನಿಸುವ ಆಹಾರವೂ ಕೂಡಾ ನ್ಯಾಯಯುತ ಸಂಪಾದನೆಯಿಂದ ಪಡೆದಿರಬೇಕು. (ಅವಾಗಿಯೇ ಸ್ವಯಂ ಮೇಯುವಾಗ ಇದು ಅನ್ವಯವಾಗುವುದಿಲ್ಲ).

ಇಸ್ಲಾಮ್ ಆರಂಭ ಕಾಲದಲ್ಲಿ ಭಾರತದಲ್ಲಿ ವೇಗವಾಗಿ ಪಸರಿಸಲು ಅತೀ ಮುಖ್ಯ ಕಾರಣ ಇಸ್ಲಾಮಿನ ನ್ಯಾಯ ಪದ್ಧತಿಯಾಗಿದೆ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಸಾವಿರದ ನಾಲ್ಕುನೂರು ವರ್ಷಗಳ ಹಿಂದೆ ಇಸ್ಲಾಮೀ ಧರ್ಮ ಪ್ರಚಾರಕರಾದ ಮಾಲಿಕ್ ಬಿನ್ ದೀನಾರ್ ಎಂಬವರು ಮೊಟ್ಟಮೊದಲು ಇಸ್ಲಾಮಿನ ಸಂದೇಶದೊಂದಿಗೆ ಕೇರಳದ ತ್ರಿಶ್ಯೂರ್ ಜಿಲ್ಲೆಯ ಕಡಲತೀರಕ್ಕೆ ಆಗಮಿಸಿದರು. ಆಗ ಅಸ್ಪೃಶ್ಯತೆ ಎಂಬುವುದು ಅತೀ ಸಾಮಾನ್ಯವಾಗಿತ್ತು. ಇಸ್ಲಾಮೀ ಧರ್ಮಪ್ರಚಾರಕರ ಸ್ವಭಾವವು ಶೋಷಿತ ಸಮುದಾಯಗಳನ್ನು ಬಹುವಾಗಿ ಸೆಳೆದಿತ್ತು. ಒಮ್ಮೆ ಮಾಲಿಕ್ ಬಿನ್ ದೀನಾರ್ ಮತ್ತು ಸಂಗಡಿಗರ ಬಳಿಗೆ ಶೋಷಿತ ಸಮುದಾಯದ ಕೂಲಿ ಕಾರ್ಮಿಕನೋರ್ವ ಒಂದು ಎಳನೀರಿನೊಂದಿಗೆ ಬಂದು “ಇದು ನಿಮಗೆ ಉಡುಗೊರೆಯಾಗಿ ನಾನು ತಂದಿರುವೆ. ಇದನ್ನು ನೀವು ಸ್ವೀಕರಿಸಬೇಕು” ಎನ್ನುತ್ತಾನೆ. ಆಗ ಮಾಲಿಕ್ ಬಿನ್ ದೀನಾರ್ ಆತನನ್ನು ವಿಚಾರಿಸುತ್ತಾರೆ “ಇದನ್ನು ನೀನು ಎಲ್ಲಿಂದ ತಂದಿರುವೆ..?”

“ನಾನು ದುಡಿಯುವ ತೋಟದಿಂದ..”

“ತೋಟದ ಮಾಲೀಕನ ಅನುಮತಿ ಪಡೆದಿರುವೆಯಾ..?”

“ಅನುಮತಿ ಯಾಕೆ..?”

“ಯಾರದೇ ಸ್ವತ್ತನ್ನು ಅವರ ಅನುಮತಿಯ ಹೊರತಾಗಿ ಪಡೆಯುವುದು ನಮಗೆ ನಿಷಿದ್ಧ (ಹರಾಂ)”.
ಆತ ಆ ಎಳನೀರನ್ನು ಹಿಡ್ಕೊಂಡು ಓಡೋಡಿ ಹೋಗಿ ತನ್ನ ತೋಟದ ಮಾಲೀಕನ ಅನುಮತಿ ಪಡಕೊಂಡು ಬಂದು “ಈಗಲಾದರೂ ಸ್ವೀಕರಿಸಿ” ಎನ್ನುತ್ತಾನೆ.

“ಸ್ವೀಕರಿಸುತ್ತೇವೆ.. ಆದರೆ ಇನ್ನೂ ಒಂದು ಷರತ್ತಿದೆ. ಇದನ್ನು ನಾವು ಒಡೆದು ಎಲ್ಲರೂ ಹಂಚಿ ಕುಡಿಯೋಣ. ಆದರೆ ಮೊದಲು ನೀನಿದನ್ನು ನಿನ್ನ ತುಟಿಗೆ ತಾಗಿಸಿ ಕುಡಿಯಬೇಕು. ಆ ಬಳಿಕ ನಾವೆಲ್ಲರೂ ತುಟಿಗೆ ತಾಗಿಸಿ ಕುಡಿಯುತ್ತೇವೆ”.

“ಅರೆ.. ನಾನು ತುಟಿ ತಾಗಿಸಿದ್ದನ್ನು ನೀವು ಕುಡಿಯುವುದೇ..?”

“ಹೌದು..”

“ನಾನು ಕೆಳಜಾತಿಯವನಲ್ಲವೇ..?”

“ಈ ಮೇಲುಕೀಳನ್ನು ತೊಲಗಿಸಲೆಂದೇ ನಾವು ಬಂದಿರುವುದು..”

ಕೊನೆಗೆ ಆತ ತುಟಿ ತಾಗಿಸಿ ಕುಡಿದ ಬಳಿಕ ಎಲ್ಲರೂ ತುಟಿ ತಾಗಿಸಿ ಸ್ವಲ್ಪ ಸ್ವಲ್ಪ ಕುಡಿಯುತ್ತಾರೆ. ಈ ಘಟನೆಯಿಂದ ಆನಂದತುಂದಿಲನಾದ ಆತ ಇಸ್ಲಾಮ್ ಧರ್ಮ ಸ್ವೀಕರಿಸುತ್ತಾನೆ.

ಇನ್ನು ಮುಸ್ಲಿಮರಿಗೆ ಹಲಾಲ್ ಮತ್ತು ಹರಾಂಗಳು ಕೆಲವು ಪ್ರತಿಕೂಲ ಸಂದರ್ಭಗಳಲ್ಲಿ ಬದಲಾಗುತ್ತವೆ. ಮುಸ್ಲಿಮರಿಗೆ ಹಂದಿ ಮಾಂಸ ಮತ್ತು ಮದ್ಯ ಹರಾಂ. ಆದರೆ ತಿನ್ನಲು ಹಂದಿ ಮಾಂಸ ಮತ್ತು ಕುಡಿಯಲು ಮದ್ಯದ ಹೊರತಾಗಿ ಏನೂ ಇಲ್ಲದೇ ಹಸಿವಿನಿಂದ ಪ್ರಾಣ ಹೋಗುವ ಸಂದರ್ಭವಿದ್ದರೆ ಹಂದಿ ಮಾಂಸ ಮತ್ತು ಮದ್ಯ ಕೂಡಾ ಹಲಾಲ್ ಆಗುತ್ತದೆ.

ಇಸ್ಲಾಮಿನ ಪೂರ್ವಿಕ ಮಹಾತ್ಮರು ಹಲಾಲ್ ಆದ ಆಹಾರದ ಬಗ್ಗೆ ಅದೆಷ್ಟು ಸೂಕ್ಷ್ಮತೆ ವಹಿಸುತ್ತಿದ್ದರೆಂದರೆ ಯಾವುದಾದರೂ ಊರಲ್ಲಿ ಮಾಂಸದ ಪ್ರಾಣಿಯೊಂದು ಕಳವಾಗಿದೆಯೆಂಬ ಸುದ್ದಿ ಸಿಕ್ಕರೆ ಮುಂದೆ ಅದು ಅದರ ಮಾಲೀಕನ ಕೈ ಸೇರಿದ್ದು ಖಚಿತವಾಗುವವರೆಗೆ ಅವರು ಯಾವುದೇ ಮಾಂಸವನ್ನು ಸೇವಿಸುತ್ತಿರಲಿಲ್ಲ. ಕೆಲವು ಮಹಾತ್ಮರಂತೂ ಅಂತಹ ಕಳವಿನ ಘಟನೆ ಸಂಭವಿಸಿದಂದಿನಿಂದ ಜೀವನಪೂರ್ತಿ ಮಾಂಸಾಹಾರ ತ್ಯಜಿಸಿದ ಧಾರಾಳ ಉದಾಹರಣೆಗಳನ್ನು ಇಸ್ಲಾಮೀ ಚರಿತ್ರೆಯ ಪುಟಗಳಲ್ಲಿ ಪಾಠವಾಗಿ ಬೋಧಿಸಲಾಗುತ್ತಿದೆ. ಇಂತಹ ಬೋಧನೆಗಳು ಮದ್ರಸಾಗಳಲ್ಲಿ ಪಠ್ಯವಾಗಿ ಇವೆ. ಇದರ ಉದ್ದೇಶ ಯಾರಿಂದಲೋ ಅನ್ಯಾಯವಾಗಿ ಪಡೆದ ಸ್ವತ್ತು ಅಪ್ಪಿತಪ್ಪಿಯೂ ನಮ್ಮ ಉದರ ಸೇರದಿರಲಿ ಎಂದಾಗಿದೆ.

ಆದರೆ ನಮ್ಮ ದೇಶದ ಬಲಪಂಥೀಯ ಪ್ರತಿಗಾಮಿ ಶಕ್ತಿಗಳು ತಮ್ಮ ಅಜ್ಞಾನದಿಂದ ಹಲಾಲ್ ಮತ್ತು ಹರಾಂನ ವ್ಯಾಖ್ಯೆಗಳನ್ನು ಸಂಕುಚಿತಗೊಳಿಸಿಬಿಟ್ಟಿದ್ದಾರೆ.

ಇಸ್ಲಾಮಿನಲ್ಲಿ ಮಾಂಸದ ಪ್ರಾಣಿಗಳನ್ನು ಕೊಯ್ಯುವ ವಿಧಾನಕ್ಕೆ ಹಲಾಲ್ ಎಂಬ ಪದ ಬಳಕೆಯೇ ಇಲ್ಲ. ದ್ಸಬಹ್ ಮಾಡುವ ವಿಧಾನ ಮಾಂಸದ ಪ್ರಾಣಿಯ ಕತ್ತಿನ ಮುಂಭಾಗಕ್ಕೆ ಹರಿತವಾದ ಚೂರಿ ಹಾಕಿ ಅತೀ ಮುಖ್ಯವಾದ ಮೂರು ನಾಳಗಳನ್ನು ಕತ್ತರಿಸುವುದು.

1. ಮುಖ್ಯ ರಕ್ತನಾಳ
2. ಶ್ವಾಸ ನಾಳ
3. ಅನ್ನ ನಾಳ

ಆದರೆ ಕುತ್ತಿಗೆಯಲ್ಲಿರುವ ಬೆನ್ನು ಹುರಿಯನ್ನು ದ್ಸಬಹ್ ಮಾಡುವಾಗ ಕತ್ತರಿಸಬಾರದು. ಯಾಕೆಂದರೆ ಬೆನ್ನು ಹುರಿಯನ್ನು ಕತ್ತರಿಸಿದ ಕೂಡಲೇ ಪ್ರಾಣಿ ನಿಶ್ಚಲವಾಗುತ್ತದೆ. ಪ್ರಾಣಿಯು ಕೂಡಲೇ ನಿಶ್ಚಲವಾದರೆ ಅದರ ದೇಹದಲ್ಲಿನ ರಕ್ತವು ರಭಸದಿಂದ ಹೊರಹರಿದು ಹೋಗಲು ಸಾಧ್ಯವಾಗುವುದಿಲ್ಲ. ದ್ಸಬಹ್ ಮಾಡುವಾಗ ಬಹಳ ಮುಖ್ಯವಾಗಿ ರಕ್ತನಾಳ ಮತ್ತು ಶ್ವಾಸನಾಳವನ್ನು ಸಂಪೂರ್ಣವಾಗಿ ಕತ್ತರಿಸಬೇಕು. ಹಾಗೆ ಮಾಡುವುದರಿಂದ ಪ್ರಾಣಿಯ ದೇಹದ ರಕ್ತವು ರಭಸವಾಗಿ ಹರಿದು ಹೋಗುತ್ತದೆ. ಯಾವುದೇ ಪ್ರಾಣಿಯು ತನ್ನ ಪ್ರಾಣ ಹೋಗುವ ಹೊತ್ತಿಗೆ ಇದ್ದ ಬದ್ದ ಶಕ್ತಿಯನ್ನೆಲ್ಲಾ ಬಳಸಿ ಬದುಕುಳಿಯುವ ಯತ್ನ ಮಾಡುತ್ತದೆ. ಆಗ ಅದು ತನ್ನ ಗರಿಷ್ಟ ಶಕ್ತಿಯನ್ನು ಬಳಸಿ ಕೊಸರಾಡುವಾಗ ದೇಹದ ರಕ್ತನಾಳಗಳಲ್ಲಿ ಸಂಚರಿಸುವ ರಕ್ತವೆಲ್ಲಾ ರಭಸವಾಗಿ ಕಡಿದು ಹೋದ ಕುತ್ತಿಗೆಯ ರಕ್ತನಾಳದತ್ತ ಚಲಿಸಿ ಹೊರ ಹರಿದು ಹೋಗುತ್ತದೆ. ಈಗೇನು ಕುರಿಯ ರಕ್ತದ ಫ್ರೈ ಎಂದು ಚರ್ಚೆ ನಡೆಯುತ್ತಿದೆಯೋ ವಾಸ್ತವದಲ್ಲಿ ಮುಸ್ಲಿಮರು ಯಾವುದೇ ಪ್ರಾಣಿಯ ರಕ್ತವನ್ನು ಸೇವಿಸುವಂತಿಲ್ಲ. ರಕ್ತವನ್ನು ಸಂಪೂರ್ಣವಾಗಿ ತೊಳೆದು ತೆಗೆದ ಬಳಿಕವೇ ಮಾಂಸವನ್ನು ಬಳಸತಕ್ಕದ್ದು. ಆಹಾರ ವೈವಿಧ್ಯತೆ ಮತ್ತು ನಿಷಿದ್ಧಗಳು ಹಲವು ಸಮುದಾಯಗಳಲ್ಲಿ ಇರುವಂತೆಯೇ ಮುಸ್ಲಿಂ ಸಮುದಾಯದಲ್ಲಿಯೂ ಇವೆ.

ಮುಸ್ಲಿಮೇತರರೂ ಪ್ರಾಣಿಯನ್ನು ಕೊಯ್ಯುತ್ತಾರಲ್ವಾ ಎಂಬ ಪ್ರಶ್ನೆ ಈಗ ಉದ್ಭವಿಸಬಹುದು. ಆದರೆ ಮುಸ್ಲಿಮೇತರರಿಗೆ ಕೊಯ್ಯಲು ಇಂತಹ ವಿಧಿ ವಿಧಾನಗಳೇನೂ ಇಲ್ಲ. ಅಂತೆಯೇ ರಕ್ತನಾಳಗಳ ಮೂಲಕ ಪರಿಚಲಿಸುವ ರಕ್ತವು ಸಂಪೂರ್ಣವಾಗಿ ಹರಿದು ಹೊರಹೋಗಬೇಕೆಂಬ ವಿಧಿಗಳೇನೂ ಮುಸ್ಲಿಮೇತರರು ಪ್ರಾಣಿಗಳನ್ನು ಕಡಿಯುವಾಗ ಪರಿಗಣನೆಗೆ ಬರುವುದಿಲ್ಲ. ಸಾಮಾನ್ಯವಾಗಿ ಮುಸ್ಲಿಮೇತರರು ಪ್ರಾಣಿಯ ಕುತ್ತಿಗೆಯ ಹಿಂಭಾಗದಿಂದ ಕಡಿಯುತ್ತಾರೆ. ಹಾಗೆ ಕಡಿಯುವುದರಿಂದ ಮೊದಲು ಕತ್ತರಿಸಲ್ಪಡುವುದು ಪ್ರಾಣಿಯ ಬೆನ್ನು ಹುರಿ. ಬೆನ್ನು ಹುರಿ ತುಂಡಾದ ಕೂಡಲೇ ಪ್ರಾಣಿ ನಿಶ್ಚಲವಾಗುತ್ತದೆ. ಹಾಗೆ ಕೂಡಲೇ ಪ್ರಾಣಿ ನಿಶ್ಚಲವಾದರೆ ಅದರ ದೇಹದ ರಕ್ತವು ರಭಸವಾಗಿ ಹೊರಹರಿದು ಹೋಗುವುದಿಲ್ಲ. ನಿಧಾನಕ್ಕೆ ಅಲ್ಪ ಸ್ವಲ್ಪ ರಕ್ತ ಹರಿದು ಹೋದರೆ ಕೆಲ ಹೊತ್ತಲ್ಲೇ ಪ್ರಾಣಿಯ ದೇಹದಲ್ಲಿ ಉಳಿದ ರಕ್ತವು ಹೆಪ್ಪುಗಟ್ಟುತ್ತದೆ. ಹಾಗಿರುವಾಗ ರಕ್ತವೂ ಆಹಾರದೊಂದಿಗೆ ನಮ್ಮ ಉದರ ಸೇರುತ್ತದೆ. ಇಸ್ಲಾಮೀ ಕರ್ಮಶಾಸ್ತ್ರದ ಪ್ರಕಾರ ರಕ್ತವನ್ನು ಸಂಪೂರ್ಣವಾಗಿ ತೊಳೆದು ತೆಗೆಯದೇ ಪ್ರಾಣಿಯ ಮಾಂಸವನ್ನು ಸೇವಿಸುವಂತಿಲ್ಲ. ಆದುದರಿಂದ ಮುಸ್ಲಿಮರು ಪ್ರಾಣಿಯ ಕತ್ತಿನ ಮುಂಭಾಗದಿಂದಲೇ ಕತ್ತರಿಸುತ್ತಾರೆ.

ಈ ವಿಧಾನದಲ್ಲಿ ಕತ್ತರಿಸಿದ ಪ್ರಾಣಿಯ ಮಾಂಸ ಮಾತ್ರ ಮುಸ್ಲಿಮರಿಗೆ ತಿನ್ನಲು ಹಲಾಲ್ ಅರ್ಥಾತ್ ಸಮ್ಮತಾರ್ಹ. ಇನ್ನು ಮುಸ್ಲಿಮರು ಪ್ರಾಣಿಯನ್ನು ಕೊಯ್ಯುವಾಗ ಅಲ್ಲಾಹನ ನಾಮ ಉಚ್ಚರಿಸುತ್ತಾರೆನ್ನುವುದೂ ಹಲವರ ಅಸಹನೆಗೆ ಕಾರಣ. ವಾಸ್ತವದಲ್ಲಿ ಮುಸ್ಲಿಮರು ಬಿಸ್ಮಿಲ್ಲಾಹಿ ರ್ರ್‍ಅಹ್ಮಾನಿ ರ್ರ್‍ಅಹೀಂ ಎಂದು ಅಲ್ಲಾಹನ ನಾಮ ಉಚ್ಚರಿಸುವುದು ಕೇವಲ ಪ್ರಾಣಿಯನ್ನು ಕೊಯ್ಯುವಾಗ ಮಾತ್ರವಲ್ಲ. ಮುಸ್ಲಿಮರು ತಿನ್ನಲಾರಂಭಿಸುವಾಗ, ಕುಡಿಯಲಾರಂಭಿಸುವಾಗ, ಮನೆಯಿಂದ ಹೊರಗೆ ಕಾಲಿಡುವಾಗ, ಮನೆಯೊಳಕ್ಕೆ ಪ್ರವೇಶಿಸುವಾಗ, ವಾಹನವೇರುವಾಗ, ವ್ಯಾಪಾರ ಆರಂಭಿಸುವಾಗ, ಯಾರಿಗಾದರೂ ಏನನ್ನಾದರೂ ಕೊಡುವಾಗ, ದುಡಿಮೆ ಆರಂಭಿಸುವಾಗ ಹೀಗೆ ಎಲ್ಲಾ ಕಾರ್ಯಗಳ ಆರಂಭದಲ್ಲೂ ಅಲ್ಲಾಹನ ನಾಮ ಉಚ್ಚರಿಸುತ್ತಾರೆ. ಮುಸ್ಲಿಮರು ಅವರ ವಿಶ್ವಾಸ ಪ್ರಕಾರ ಅಲ್ಲಾಹನ ನಾಮ ಉಚ್ಚರಿಸುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಅವರು ಅವರ ಆರಾಧ್ಯನ ನಾಮ ಉಚ್ಚರಿಸುವುದರ ಬಗೆಗೆ ಯಾಕೆ ಇಷ್ಟು ತೀವ್ರ ವಿರೋಧ..? ಈ ಹಲಾಲ್ ಮಾಡಬಾರದು ಎನ್ನುವುದರ ಹಿಂದಿನ ಉದ್ದೇಶ ಅಸಹನೆಯೇ ಹೊರತು ಬೇರೇನಲ್ಲ.

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ ₹50 ₹100 ₹500 ₹1000 Others


ಇದನ್ನೂ ಓದಿ: ಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

  2. ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ, ಈಗಲಾದರೂ ಜನ ಅರ್ಥ ಮಾಡಿಕೋ ಬೇಕು .
    ಸಮಾಜದಲ್ಲಿ ಎಲ್ಲರೂ ಸಹ ಬಾಳ್ವೆ ಯಿಂದ ಓಬ್ಬರನ್ನೊಬ್ರು ಅರ್ಥಮಾಡಿಕೊಂಡು ಬದುಕುವುದನ್ನು ನಾವು ಕಲಿಯಬೇಕು .

  3. ಇಲ್ಲಿನ ಪ್ರತಿಯೊಬ್ಬರೂ ಅಣ್ಣತಮ್ಮಂದಿರೆ, ಒಂದೇ ತಾಯಿಯ ಮಕ್ಕಳು, ವಿನಾ ಕಾರಣ ವಿಷವನ್ನು ಬಿತ್ತಿ, ದ್ವೇಷವನ್ನು ಹರುಡುತ್ತಿರುವ ಸ್ವಾರ್ಥಿಗಳು ಸತ್ಯವನ್ನು ತಿಳಿಯಬೇಕು.

    ವಿಷಯ ಸ್ಪಷ್ಟವಾಗಿ ಮೂಡಿದೆ.
    ಮಾನವ ಧರ್ಮವೇ ಶ್ರೇಷ್ಠ.
    ಎಲ್ಲರಿಗೂ ಇದರ ಅರಿವಾಗಬೇಕು.

    ಜೈ ಭಾರತ್, ಜೈಭೀಮ್

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...