ಡಿಸೆಂಬರ್ 17 ಮತ್ತು 19 ರ ನಡುವೆ ನಡೆದ ಹರಿದ್ವಾರ ಧರ್ಮ ಸಂಸದ್ನಲ್ಲಿ ಮುಸ್ಲಿಮರ ಹತ್ಯೆಗೆ ಕರೆ ನೀಡಿದ ವಿಡಿಯೋಗಳು ವೈರಲ್ ಆಗಿ ವ್ಯಾಪಕ ಖಂಡನೆಗೊಳಗಾಗಿದ್ದವು. ಈ ವಿಚಾರದಲ್ಲಿ ಕ್ರಿಮಿನಲ್ ಕ್ರಮಕ್ಕೆ ಒತ್ತಾಯಿಸಿ ದಾಖಲಾಗಿರುವ PIL ಅನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
ಹಿರಿಯ ವಕೀಲರಾದ ಕಪಿಲ್ ಸಿಬಲ್ರವರು ಈ ವಿಚಾರವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಬೇಕು ಎಂದು ಸಿಜೆಐರವರಿಗೆ ಮನವಿ ಮಾಡಿದರು. “ಸತ್ಯಮೇವ ಜಯತೆ ಎಂಬ ಘೋಷಣೆಯು ಶಾಸ್ತ್ರಮೇವ ಜಯತೆ ಎಂದು ಬದಲಾಗಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ” ಎಂದು ಸಿಬಲ್ ಉಲ್ಲೇಖಸಿದ್ದಾರೆ.
ನಾವು ಇದನ್ನು ಪರಿಗಣಿಸುತ್ತೇವೆ. ಈ ಕುರಿತು ತನಿಖೆ ನಡೆಯುತ್ತಿರುಬೇಕಲ್ಲವೇ ಎಂದು ಸಿಜೆಐ ಪ್ರಶ್ನಿಸಿದಾಗ, “ಎಫ್ಐಆರ್ ದಾಖಲಾಗಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ, ಇದು ಉತ್ತರಾಖಂಡ ರಾಜ್ಯವಾದ್ದರಿಂದ ನಿಮ್ಮ ಮಧ್ಯಪ್ರವೇಶವಿಲ್ಲದಿದ್ದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ಸಿಬಲ್ ಉತ್ತರಿಸಿದ್ದಾರೆ.
ಪಾಟ್ನಾ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾದ ಅಂಜನಾ ಪ್ರಕಾಶ್ ಹಾಗೂ ಪತ್ರಕರ್ತರಾದ ಕುರ್ಬಾನ್ ಅಲಿಯವರು ಹರಿದ್ವಾರ ಧರ್ಮ ಸಂಸದ್ನಲ್ಲಿ ಮುಸ್ಲಿಮರ ವಿರುದ್ಧದ ದ್ವೇಷ ಭಾಷಣ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪಿಐಎಲ್ ಸಲ್ಲಿಸಿದ್ದಾರೆ.
ಧರ್ಮ ಸಂಸದ್ ಪ್ರಮುಖ ಸಂಘಟಕರಲ್ಲಿ ಒಬ್ಬರಾದ ವಿವಾದಿತ ಉಗ್ರ ಹಿಂದುತ್ವ ನಾಯಕ ನರಸಿಂಗಾನಂದ ಗಿರಿ ಅವರು ಉದ್ರೇಕಕಾರಿ ಹೇಳಿಕೆಗಳನ್ನು ನೀಡಿದ್ದರು. ಭಯೋತ್ಪಾದಕ ಸಂಘಟನೆಯಾದ ಎಲ್ಟಿಟಿಇ ನಾಯಕ ಪ್ರಭಾಕರನ್ ತರ ಆಗುವಂತೆ ಹಿಂದೂ ಯುವಕರಿಗೆ ಕರೆ ನೀಡಿದ್ದು, ಅವರಿಗೆ 1 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಹಿಂದೂಗಳು ಶಸ್ತ್ರಗಳನ್ನು ಕೈಗಿತ್ತೆಗೊಂಡು ಮುಸ್ಲಿಮರ ವಿರುದ್ಧ ಯುದ್ದ ಮಾಡಬೇಕು ಎಂದು ಅವರು ಕರೆ ನೀಡಿದ್ದರು.
“ನಮ್ಮಲ್ಲಿ 100 ಜನರು 20 ಲಕ್ಷ ಜನರನ್ನು (ಮುಸ್ಲಿಮರು) ಕೊಲ್ಲಲು ಸಿದ್ಧರಿದ್ದರೆ, ನಾವು ಗೆದ್ದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ. ದೇಶದ ಮುಸ್ಲಿಮರನ್ನು “ಕೊಲ್ಲಲು ಮತ್ತು ಜೈಲಿಗೆ ಹೋಗಲು ಸಿದ್ಧರಾಗಿರಿ” ಎಂದು ಬಲಪಂಥೀಯ ಹಿಂದೂ ಕಾರ್ಯಕರ್ತರಿಗೆ ಹಿಂದೂ ಮಹಾಸಭಾದ ನಾಯಕಿ ಪೂಜಾ ಶಕುನ್ ಪಾಂಡೆ ಕರೆ ನೀಡಿದ್ದರು.
ಇದನ್ನೂ ಓದಿ: ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣ: ಭಾರತದ ಉನ್ನತ ರಾಜತಾಂತ್ರಿಕರಿಗೆ ಸಮನ್ಸ್ ನೀಡಿದ ಪಾಕಿಸ್ತಾನ