Homeಅಂಕಣಗಳುಚೆನ್ನಣ್ಣನೆಂಬ ಬಂಡಾಯದ ಲಾವಣೀಕಾರ... ; ಬಂಡಾಯ ಸಾಹಿತ್ಯ ಸಂಘಟನೆಯ ಆರಂಭದ ದಿನಗಳ ನೆನೆಪು.

ಚೆನ್ನಣ್ಣನೆಂಬ ಬಂಡಾಯದ ಲಾವಣೀಕಾರ… ; ಬಂಡಾಯ ಸಾಹಿತ್ಯ ಸಂಘಟನೆಯ ಆರಂಭದ ದಿನಗಳ ನೆನೆಪು.

ಕಲೆಗಾಗಿ ಕಲೆ ಎಂಬ ಧೋರಣೆಯನ್ನು ವಿಮರ್ಶೆಗೆ ಒಳಪಡಿಸಿದ ಈ ಯುವ ಬರಹಗಾರರು, ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಎಂಬ ಹೊಸ ಧ್ಯೇಯದೊಂದಿಗೆ ಬರಹ ಲೋಕವನ್ನು ಪ್ರವೇಶಿಸಿದರು.

- Advertisement -
- Advertisement -

ಆಗ 1979 ರ ವರ್ಷ, ಕನ್ನಡ ಸಾಹಿತ್ಯ ಪರಿಷತ್ ತನ್ನ ಐವತ್ತೊಂದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧರ್ಮಸ್ಥಳದಲ್ಲಿ ನಡೆಸಲು ನಿರ್ಧರಿಸಿತ್ತು. ಮತ್ತು ಆ ಸಮ್ಮೇಳನಕ್ಕೆ ನವ್ಯ ಸಾಹಿತ್ಯ ಪಂಥದ ಆರಂಭಿಕರು ಎಂದು ಕರೆಯಲ್ಪಡುತ್ತಿದ್ದ ಗೋಪಾಲಕೃಷ್ಣ ಅಡಿಗರನ್ನು ಅಧ್ಯಕ್ಷರನ್ನಾಗಿ ಘೋಷಿಸಿತ್ತು. ಆಗ ಸಾಹಿತ್ಯವಂದರೆ ನವ್ಯರ ಸೃಷ್ಠಿಯೆಂದು ಭಾವಿಸಿದ ದಿನಗಳು. ಇಂತಹ ಸ್ಥಿತಿಯಲ್ಲಿ ರಾಯಚೂರಿನ ದಲಿತ ಸಂಘಟನೆಯ ಬೋಳಬಂಡೆಪ್ಪ, ಬರಹಗಾರರಾದ ಜಂಬಣ್ಣ ಅಮರಚಿಂತ ಮತ್ತು ಚೆನ್ನಣ್ಣ ವಾಲೀಕಾರರು, ಧರ್ಮಸ್ಥಳದಲ್ಲಿ ನಡೆಯಲಿದ್ದ ಸಮ್ಮೇಳನದಲ್ಲಿ ‘ದಲಿತ’ ವಿಷಯವಾಗಿ ಒಂದು ಪ್ರತ್ಯೇಕ ಗೋಷ್ಠಿ ನಡೆಸಲು ಅನುಮತಿ ಕೋರಿ ಪ್ರಜಾವಾಣಿ ‘ವಾಚಕರ ವಾಣಿ’ಗೆ ಪತ್ರ ಬರೆದರು. ಆ ಪತ್ರದ ಪೂರ್ಣ ಸಾರ ‘ಸಂಕ್ರಮಣ’ ಪತ್ರಿಕೆಯಲ್ಲೂ ಪ್ರಕಟವಾಯಿತು. ಆದರೆ, ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ ನಾಗರಾಜಯ್ಯ ‘ಕನ್ನಡದಲ್ಲಿ ಕಲಿತ, ಬಲಿತ ಮತ್ತು ದಲಿತ ಅನ್ನುವ ವಿಂಗಡನೆಗಳಿಲ್ಲ, ಅದೇನಿದ್ದರು ಒಳ್ಳೆಯ ಸಾಹಿತ್ಯ ಕೆಟ್ಟ ಸಾಹಿತ್ಯ, ನೀವು ಬಂದರೆ ಬರಬಹುದು ಇಲ್ಲ ಬಿಡಬಹುದು’ ಎಂದು ಬಿಟ್ಟರು. ಇದನ್ನು ಸವಾಲಿನಂತೆ ತೆಗೆದುಕೊಂಡ ಚೆನ್ನಣ್ಣ, ಜಂಬಣ್ಣ, ಬೋಳಬಂಡೆಪ್ಪ ಯಾರ ಮನವೋಲಿಕೆಗೆ ಜಗ್ಗಲಿಲ್ಲ. ಆದರೆ, ದಲಿತ ಗೋಷ್ಠಿಗೆ ಅವಕಾಶ ಕೊಡಬೇಕೆಂದು ಇತರೆ ಲೇಖಕರು ಒತ್ತಡ ಹೇರಿದ ಮೇಲೆ, ಅಧ್ಯಕ್ಷರು ಮಣಿದು ‘ದಲಿತ ಸಾಹಿತ್ಯ ಮತ್ತು ಇತರ ವಿಚಾರಗಳು’ ಎಂಬ ತಲೆಬರಹದಡಿ ಅನುಮತಿ ಕೊಟ್ಟರು. ಆದರೆ ಚೆನ್ನಣ್ಣ ವಾಲೀಕಾರರು ಇಡೀ ಪ್ರಕರಣವನ್ನು ವಿವರಿಸುವಂತೆ:

ಸರಿ ಸುಮಾರು 1979ರ ಜನವರಿಯಿಂದ ಶುರುವಾದ ಈ ವಾಗ್ವಾದ, ಮುಖ್ಯವಾಗಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ‘ದಲಿತ ಗೋಷ್ಠಿ’ ಇಡಬೇಕೆಂಬುದಾಗಿತ್ತು. ಆದರೆ, ದಲಿತರ ಸಮಸ್ಯೆಯ ಬಗ್ಗೆ ಅಷ್ಟು ಹಗುರವಾಗಿ, ಲೇವಡಿ ಮಾಡಿ ಮಾತನಾಡಿದ್ದು, ಬಾಬಾ ಸಾಹೇಬರಿಗೆ ಮಾಡಿದ ಅವಮಾನ ಎಂದೆ ಭಾವಿಸಿ, ಧಿಕ್ಕರಿಸುವ ನಮ್ಮ ನಿರ್ಣಯವನ್ನು ಬದಲಿಸಲಿಲ್ಲ. ಇದು ಪ್ರತಿಭಟನೆಯ ಮಹಾ ಸ್ಪೋಟದಂತೆ ಎಲ್ಲಾ ಪತ್ರಿಕೆಗಳಲ್ಲಿ ಇದರ ಬಗ್ಗೆ ಚರ್ಚೆಯಾಯಿತು. ಒಂಟಿ ಹೋರಾಟಕ್ಕೆ ಸೋಲಾಗುತ್ತದೆ, ಆದರೆ ಸಮೂಹ ಶಕ್ತಿಗೆ ಸೋಲಿಲ್ಲ ಎಂಬುದನ್ನು ಮನಗಂಡು ಇನ್ನಿತರೆ ಸಂಗಾತಿಗಳನ್ನು ಇದರಲ್ಲಿ ಸೇರಿಸಿಕೊಂಡೆವು.

ಹನ್ಮಂತರಾಯಪ್ಪ, ಸಚಿವರಾಗಿದ್ದ ಬಿ. ಹೆಚ್ ರಂಗನಾಥರು ನಮ್ಮ ಬೆಂಬಲಕ್ಕೆ ನಿಂತರು. ಕೊನೆಗೆ ನಮ್ಮ ಮನವೋಲಿಸಲು, ಎಲ್.ಜಿ ಹಾವನೂರರು ಕರೆ ಮಾಡಿ ‘ಹಂ.ಪ ನಾಗರಾಜಯ್ಯ ನಮ್ಮನಿ ಹೆಣ್ಮಗಳನ್ನ ಮಾಡಕೊಂಡಾನ, ಅವನಗುಟ ಏನ್ ಬಿಡ್ರಿ, ಬಿಟ್ ಬಿಡ್ರಿ’ ಅಂದರು. ಆಗ, ನಾವು ಅವರಿಗೆ ‘ನೋಡ್ರಿ ಸಾರ್, ಹೆಣ್ಮಕ್ಳು-ಪಣ್ಮಕ್ಲು ವಿಷಯ ಏನಿದ್ರು ಮನ್ಯಾಗ ರ‍್ಲಿ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ’ಅಂದು ಬಿಟ್ಟಿವಿ. ಅಲ್ಲಿಂದ, ಪ್ರೊ. ಬಿ.ಕೃಷ್ಣಪ್ಪ ಮಾತಾಡಿ, ‘ಏಯ್, ನಾನು ಅವರ ಶಿಷ್ಯ ಇದ್ದಿನೋ, ಯಾಕ ಇಷ್ಟು ಹಠ ಮಾಡ್ತಿದ್ದಿರಿ, ಬಿಟ್ಟು ಬಿಡ್ರೀ…’ಅಂದರು. ‘ನೀವು, ದ.ಸಂ.ಸ ಸಂಚಾಲಕರು ಇರಬಹುದು, ನೀವು ಹೋಗ್ರಿ ಬಿಡ್ರಿ ಸುಡಗಾಡು ಸರ‍್ರಿ, ಇದು ಸಿದ್ಧಾಂತದ ವಿಷಯ, ನಾವು ಯಾರ ಮಾತು ಕೇಳೋದಿಲ್ಲ. ಬಯ್ಕಟ್ ಮಾಡೋದು ಅಂದರೆ ಬಯ್ಕಟ್ ಮಾಡೋದು ಅಷ್ಟೆ’ ಅಂತ ಜವಾಬು ಕೊಟ್ಟಿವಿ. ಮುಂದ ಕೃಷ್ಣಪ್ಪ ದೇವನೂರು ಮಹಾದೇವಗೆ ಫೋನ್ ಮಾಡಿದರೆ, ಮಹಾದೇವ ‘ಏಯ್, ಆ ರಾಯಚೂರಿನವ್ರತ್ರ ಇಟ್ಟುಕೋ ಬೇಡಿ. ಅವ್ರು ಯಾರ ಮಾತು ಕೇಳೋದಿಲ್ಲ. ಅವರ ಹಿಂದೆ ಬೇರೆ ಶಕ್ತಿಯಿವೆ’ ಅಂದರಂತೆ.

ಇಷ್ಟೆಲ್ಲಾ ಆದ ಮೇಲೆ, ‘ದಲಿತ ಸಾಹಿತ್ಯ ಮತ್ತು ಇತರ ವಿಚಾರಗಳು’ ಅನ್ನೋ ವಿಷಯ ಕೊಟ್ಟು ಮಾತಾಡಾಕ ಕರೆದರು. ಆಗಲೂ ನಾವು “ಆ ದೇವ್ರು ಹೇಳಿದರು ಒಪ್ಪುವುದಿಲ್ಲ” ಅಂತ ಪಟ್ಟು ಹಿಡಿದೆವು. ಅಷ್ಟೊತ್ತಿಗೆ ಗೆಳೆಯರಾದ ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ, ಚಂಪಾ, ಕಾಳೇಗೌಡ, ಡಿ.ಆರ್ ನಾಗರಾಜ್, ದೇವನೂರು ಮಹಾದೇವ ಆ ಪ್ರತಿರೋಧಕ್ಕೆ ಒಂದು ತಾತ್ವಿಕ ಸ್ವರೂಪ ಕೊಡಬೇಕು ಅಂದುಕೊಂಡು ಆರಂಭಿಸಿದ ಸಂಘಟನೆಯೇ ಬಂಡಾಯ ಸಾಹಿತ್ಯ ಸಂಘಟನೆ. (ಚೆನ್ನಣ್ಣ ವಾಲೀಕಾರರ ಸಂದರ್ಶನ, ಜೂನ್ 14, 2017)

ಆದರೆ, ಅಷ್ಟೊತ್ತಿಗಾಗಲೆ ಹೊಟ್ಟೆ ತುಂಬ ಹಸಿವು, ರಟ್ಟೆ ತುಂಬ ಸಿಟ್ಟು ಮತ್ತು ಎದೆ ತುಂಬ ಗಾಢವಾದ ಮನುಷ್ಯ ಪ್ರೀತಿಯನ್ನು ಇಟ್ಟುಕೊಂಡು ನಡು ಬಗ್ಗಿಸಿ ದುಡಿಯುವವರ ನೋವು-ನಲಿವುಗಳು ತಮ್ಮವೆಂದುಕೊಂಡು ಮತ್ತವರ ಅಭಿವ್ಯಕ್ತಿಯೇ ಕಾವ್ಯ ಎಂದು ಅದಾಗಲೆ ತಮ್ಮೆದುರು ಕಟ್ಟಲ್ಪಟ್ಟಿದ್ದ ನವ್ಯದ ಗೋಡೆಯನ್ನು ಜಿಗಿದು ಮತ್ತದನ್ನು ‘ಸೋಗಲಾಡಿ’ ಮೇಲ್ಜಾತಿ ಬ್ರಾಹ್ಮಣರ ಸೃಷ್ಠಿಯೆಂದೇ ಬಗೆದು ಜನಪದ ಕಾವ್ಯದಿಂದ ಪ್ರೇರಿತಗೊಂಡ ಹೊಸ ಭಾಷೆ, ಲಯಗಾರಿಕೆಯೊಂದಿಗೆ ಜನರನ್ನೇ ಕಾವ್ಯದ ವಸ್ತುಗಳನ್ನಾಗಿಟ್ಟುಕೊಂಡು ಬರೆವ ಲೇಖಕರ ದೊಡ್ಡ ಸಂಖ್ಯೆಯೇ ಹುಟ್ಟಿಕೊಂಡಿತ್ತು. ಹಾಗಾಗಿ, ಪತ್ರದ ಮನವಿಗೆ ತಿರಸ್ಕಾರದ ಉತ್ತರ ಕೊಟ್ಟ ಸಂಗತಿಯೇ, ಈ ಎಲ್ಲಾ ಯುವ, ಪ್ರಗತಿಪರ ಲೇಖಕರನ್ನು ಧರ್ಮಸ್ಥಳದಲ್ಲಿ ಸಮ್ಮೇಳನದ ನಡೆವ ದಿನದಂದೇ ಬೆಂಗಳೂರಿನಲ್ಲಿ ಸೇರಿಸಲು ಮತ್ತು ‘ಬಂಡಾಯ ಸಾಹಿತ್ಯ ಸಂಘಟನೆ’ ಹುಟ್ಟು ಹಾಕಲು ಪ್ರೇರಣೆಯಾಯಿತು. ಬೆಂಗಳೂರಿನ ದೇವಾಂಗ ಛತ್ರದಲ್ಲಿ ನಡೆದ ಬಂಡಾಯ ಸಾಹಿತ್ಯ ಸಂಘಟನೆ ಉದ್ಘಾಟನೆಗೆ ಬಂದಿದ್ದ ತೆಲುಗಿನ ಶ್ರೀ ಶ್ರೀ, ಮರಾಠಿಯ ದಯಾ ಪವಾರ ಮತ್ತು ಕನ್ನಡದ ಬಹುತೇಕ ಪ್ರಗತಿಪರ ಲೇಖಕರ ದಂಡು ಅಲ್ಲಿತ್ತು. ಇದರಿಂದ ಪ್ರೇರಿತರಾದ ಯುವಕರು ಮರಳಿ ತಮ್ಮ ಊರುಗಳಿಗೆ ಹೋಗಿ ಬಂಡಾಯ ಜಿಲ್ಲಾ ಸಮಿತಿಗಳಲ್ಲಿ ತೊಡಗಿಕೊಂಡು, ಚಳವಳಿಯ ಜೊತೆ-ಜೊತೆಗೆ ಸಾಹಿತ್ಯ ರಚನೆಗೆ ತೊಡಗಿಕೊಂಡರು.

987 ರಲ್ಲಿ ಬೋಳಬಂಡೆಪ್ಪನ ಮೊದಲ ವರ್ಷದ ಅಗಲಿಕೆಯ ನೆನಪಿಗಾಗಿ ಆತನ ಒಡನಾಡಿಗಳು ರಾಯಚೂರಿನಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ. ಚಿತ್ರದ ಬಲ ತುದಿಯಲ್ಲಿ ಚೆನ್ನಣ್ಣ ವಾಲೀಕಾರರನ್ನು ಕಾಣಬಹುದು.

ಹೀಗೆ ರಾಯಚೂರಿನಿಂದ ಬಂದ ಯುವಕರ ದಂಡು, ಸಮ್ಮೇಳನಕ್ಕೆ ಹೊರಟಾಗಿನಿಂದಲೂ ರೈಲಿನಲ್ಲಿ ತೆಲುಗಿನಿಂದ ಅನುವಾದಿಸಲ್ಪಟ್ಟಿದ್ದ ಶ್ರೀ.ಶ್ರೀ, ಚೆರಬಂಡರಾಜು ಮತ್ತು ಗದ್ದರ್ ಮತ್ತು ಪ್ರಜಾಕಳಾ ಮಂಡಲಿಯ ಹಾಡುಗಳನ್ನು ಹಾಡುತ್ತ ಹೊಸ ಚೈತನ್ಯ ಪಡೆಯಹತ್ತಿದ್ದರು. ಇನ್ನು ತಮ್ಮನ್ನು ಅಷ್ಟೊಂದು ಪ್ರಭಾವಿಸಿದ ಲೇಖಕರನ್ನು ಸಮ್ಮೇಳನದಲ್ಲಿ ಕಂಡು, ಅವರ ಮಾತು ಕೇಳಿದ ಮೇಲಂತು, ಅವರ ಬಂಡಾಯದ ಮನಸ್ಥಿತಿಗೆ ಸಾಣೆ ಹಿಡಿದಂತಾಯಿತು. ಆದರೆ, ಒಂದು ಸಾಹಿತ್ಯಿಕ ಸಂಘಟನೆ, ತನ್ನ ಸಾಮಾಜಿಕ ಜವಬ್ದಾರಿಯನ್ನು ಮತ್ತ ಮತ್ತೆ ನಿರೂಪಿಸುವ ಪ್ರಕ್ರಿಯೆಯಲ್ಲಿ ಎಷ್ಟೋ ಸಲ ಅದರ ಸದಸ್ಯರಿಂದ ರಚಿಸಲ್ಪಟ್ಟ ಘೋಷಣೆ-ಭರಿತ ಸಾಲುಗಳನ್ನೂ ಕಾವ್ಯವೆಂದು ಮನ್ನಣೆ ನೀಡುವ ದುರಂತಕ್ಕೆ ಈಡಾಯಿತು. ಹೀಗಾಗಿ ರಜಾ ದಿನಗಳಲ್ಲಿ ರಾಯಚೂರಿನ ಹರಿಜನವಾಡದ ಸಮುದಾಯ ಭವನದಲ್ಲಿ ಬೋಳಬಂಡೆಪ್ಪ, ಅಮರಚಿಂತರು ಮತ್ತು ಇತರೆ ತೆಲುಗು ಬಲ್ಲವರಿಂದ ಅನುವಾದಿಸಲ್ಪಡುತ್ತಿದ್ದ ತೆಲುಗಿನ ವಿ.ರ.ಸಂ ಕವಿಗಳ ರಚನೆಗಳಿಗಿದ್ದ ‘ಸಿದ್ಧಾಂತ ಪ್ರಧಾನ’ ಕಲ್ಲು ಮುಳ್ಳಿಗೆ ಹೇಳಲಾ, ನನಗೋಳು ನಾನೇ ಕಲ್ಲಾಗಿ ಹೋಗಲಾ… ಎಂಬ ಕ್ರಾಂತಿಕಾರಕ ರಚನೆಗಳಿಗೂ ಮತ್ತು ಕನ್ನಡದಲ್ಲಿ ಸಿದ್ಧಲಿಂಗಯ್ಯನವರ ‘ದಲಿತರು ಬಂದರು ದಾರಿಬಿಡಿ-ದಲಿತರ ಕೈಯಿಗೆ ರಾಜ್ಯಕೊಡಿ’ ಎಂಬ ‘ಭಾವ ಪ್ರಧಾನ’ ರಚನೆಗಳಿಗೂ ವ್ಯತ್ಯಾಸವಂತು ಇತ್ತು.

ಹೀಗೆ ಉರಿಕೆಂಡದಂತೆ ಜನುಮ ತಾಳಿದ ಬಂಡಾಯ ಸಂಘಟನೆಯ ಜಿಲ್ಲಾ ಸಂಘಟನಾ ಜವಬ್ದಾರಿನ್ನು ಹೊರುವುದರ ಜೊತೆ-ಜೊತೆಗೆ, ಜಿಲ್ಲೆಯಲ್ಲಿ ದಲಿತ ಸಂಘಟನೆಯ ಅಗತ್ಯದ ಬಗ್ಗೆ ಅರಿವಿದ್ದ ಬೋಳಬಂಡೆಪ್ಪ, ಪ್ರೋ. ಬಿ. ಕೃಷ್ಣಪ್ಪ ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕವನ್ನು ನಗರದಲ್ಲಿ ಆರಂಭಿಸಿದರು. ಇದರ ಉದ್ಘಾಟನೆಗೆ ಬಂದಿದ್ದ ಕೃಷ್ಣಪ್ಪನವರು, ಸಾಹಿತ್ಯ ಲೋಕದ ರಾಜಕಾರಣವನ್ನು, ಜಾತಿ ವ್ಯವಸ್ಥೆಯ ಬೇರುಗಳು ಹೇಗೆ ಅಂತರ್-ಸಂಬಂಧಿಯಾಗಿವೆ ಎಂಬುದನ್ನು ವಿವರಿಸಿದರು. ಒಂದೆಡೆ ಬೋಳಬಂಡೆಪ್ಪ, ಅಮರಚಿಂತ ಮತ್ತು ವಾಲೀಕಾರರ ಒಡನಾಡಿಯಾಗಿದ್ದ ಮತ್ತು ರಾಯಚೂರಿನ ಜನ ಚಳವಳಿಗಳ ಮುಖಂಡರಾದ ಎಸ್.ಮಾರೆಪ್ಪನವರು ಅಭಿಪ್ರಾಯ ಪಡುವ ಹಾಗೆ:

“ಇಷ್ಟೋತ್ತಿಗಾಗಲೇ ಬೋಳಬಂಡೆಪ್ಪನವರಿಗೆ ಹಲವಾರು ದಲಿತ ನೌಕರರು ಬೆಂಬಲಕ್ಕೆ ನಿಂತರು. ದಿ. ಜೆ.ನಾಗಪ್ಪ, ಬಾಬು ಭಂಡಾರಿಗಲ್, ದಲಿತ ಕವಿ ದಿ.ಸೋಮಯ್ಯ ವಲ್ಲಭ, ಜೆ.ಎಂ.ತಾಯಪ್ಪ ಮತ್ತು ಚಂದ್ರಬಂಡ ತಿಮ್ಮಪ್ಪ ಇನ್ನೂ ಅನೇಕ ದಲಿತ ನೌಕರರು ಪಾಲ್ಗೊಳ್ಳುತ್ತಿದ್ದರು. ಕುರುಬದೊಡ್ಡಿ ಗ್ರಾಮದಲ್ಲಿ ಬತಕಪ್ಪ ಎಂಬ ದಲಿತ ರೈತ ಹೋಟೆಲ್ ಪ್ರವೇಶ ಮಾಡಿ ದಬ್ಬಾಳಿಕೆಗೆ ಒಳಗಾಗಿದ್ದರು. ರಾಜಲಬಂಡಾ ಗ್ರಾಮದಲ್ಲಿ ಹನುಮಂತಪ್ಪ ಎಂಬ ದಲಿತ ಯುವಕನನ್ನು ಹೊಡೆದು, ಸತ್ತಿದ್ದಾನೆಂದು ಬಿಸಾಡಿ ಹೋಗಿದ್ದು, ಯಾಪಲದಿನ್ನಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದಾಗ ಅವರಿಗೆ ಕೆರೆ ಭೂಮಿ ನೀಡುವಂತೆ ನಡೆದ ಹೋರಾಟದಂತಹ ಬಿಡಿ ಬಿಡಿ ಪ್ರಕರಣಗಳು ಇದ್ದರೂ, ಅಂತವರ ಬೆಂಬಲಕ್ಕೆ ನಿಂತ ನಮ್ಮ ನೌಕರ ವರ್ಗ ಎಸ್.ಪಿ. ಅವರಿಗೆ, ಪೊಲೀಸ್ ಸ್ಟೇಷನ್‌ಗೆ ಹೋಗಿ ಫಿರ್ಯಾದಿ ನೀಡಿ, ತಪ್ಪಿತಸ್ಥರನ್ನು ಬಂಧಿಸಬೇಕೆಂದು ಅರ್ಜಿ ಸಲಿಸುತ್ತಿದ್ದರು ಮತ್ತು ಆ ಹಳ್ಳಿಗೆ ಸೈಕಲ್, ಕಾಲ್ನಡಿಗೆ ಮೂಲಕ ತಲುಪಿ, ತೆಲುಗು ಹೋರಾಟದ ಹಾಡುಗಳನ್ನು ಹಾಡಿ, ದಲಿತರಿಗೆ ಧೈರ್ಯ ನೀಡುವುದು, ಅವರು ಊರು ಬಿಟ್ಟು ಹೋಗದಂತೆ ಸ್ಫೂರ್ತಿ ನೀಡಿವುದು ರೂಢಿಯಾಯಿತು. ಆಶ್ಚರ್ಯವೆಂಬಂತೆ ನಮ್ಮ ಜೊತೆ ದಲಿತರಲ್ಲದ ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೇಕರ್, ಲಕ್ಷ್ಮಣ ಇವರು ಜೊತೆಗೂಡಿದರು.

ನಗರದ ರಾಗಿಮಾನಗಡ್ಡದಲ್ಲಿದ್ದ ದಲಿತ ನೌಕರರಾದ ಪಾಂಡುರಂಗ, ಚಂದ್ರಕಾಂತ ಫೋಸ್ತೆ ಇವರೊಂದಿಗೆ ಜಯಣ್ಣನವರು ದಸಂಸ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಂಘಟನೆಯ ಹುರುಪಿನೊಂದಿಗೆ ಹೋರಾಟದ ಹಾಡುಗಳ ಪ್ರಾಕ್ಟೀಸು ದಿನನಿತ್ಯ ನಡೆಯುತ್ತಿತ್ತು. ಚೆನ್ನಣ್ಣ ವಾಲೀಕಾರ್ ಅವರು ಎಲ್‌ವಿಡಿ ಕಾಲೇಜು ಕನ್ನಡ ಪ್ರಾಧ್ಯಾಪಕರಾದ್ದರಿಂದ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಂಡಾಯ ಸಾಹಿತಿಗಳನ್ನು ಆಹ್ವಾನಿಸಿ ನಮ್ಮನ್ನು ಹೋರಾಟದ ಹಾಡುಗಳನ್ನು ಹಾಡಲು ಕರೆಯುತ್ತಿದ್ದರು. ನಾನು ಕರೆಯಪ್ಪ ಮಾಸ್ತರ, ರೆಡ್ಡಿ ತಿಮ್ಮಯ್ಯ ಹಾಡುಗಾರರಾಗಿದ್ದೇವು. ಬೋಳಬಂಡೆಪ್ಪನವರು ನಮ್ಮ ಕಾರ್ಯಕ್ರಮದ ಕೊನೆಯ ಹಾಡು ಅವರೇ ಹಾಡುತ್ತಿದ್ದರು. ಸಂಘದವರು ಬಂದಿದ್ದರು ಮಾವ, ನಮಗೆ ಸಂಗತಿಗಳು ಹೇಳವ್ಯಾರೇ ಮಾವ ಎಂಬ ತೆಲುಗು ಅನುವಾದಿತ ಹಾಡು ಅವರು ಹಾಡಿದರೆ ಮಾತ್ರ ಶೋಭೆ ಇರುತ್ತಿತ್ತು”.

ಹೀಗೆ, ಪ್ರತೀ ಜಿಲ್ಲೆಯಲ್ಲೂ ಬಂಡಾಯ ಸಂಘಟನೆಯ ಘಟಕಗಳು ಆರಂಭವಾಗಿ, ಆಯಾ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಮೇಲ್ಜಾತಿಗಳ ದಬ್ಬಾಳಿಕೆ, ಜಾತಿ ನಿಂದನೆ ಮತ್ತು ತಳ ಸಮುದಾಯದ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಪ್ರಕರಣಗಳ ವಿರುದ್ಧ ಹಲವು ಪ್ರತಿಭಟನೆಗಳು ನಡೆದವು. ಬಹುಶಃ ಇದೇ ಸಮಯದಲ್ಲಿಯೆ, ಕನ್ನಡ ಕಾವ್ಯ ಭಾಷೆ ಹೊಸ ಲಯವನ್ನು ಮತ್ತು ನುಡಿಗಟ್ಟನ್ನು ಪಡೆದುಕೊಂಡಿದ್ದಲ್ಲದೆ, ಸಾಹಿತ್ಯ ರಚನೆಯ ಉದ್ಧೇಶವನ್ನು ಮರು ಚರ್ಚೆಗೆ ಒಳಪಡಿಸಿತು. ಕಲೆಗಾಗಿ ಕಲೆ ಎಂಬ ಧೋರಣೆಯನ್ನು ವಿಮರ್ಶೆಗೆ ಒಳಪಡಿಸಿದ ಈ ಯುವ ಬರಹಗಾರರು, ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಎಂಬ ಹೊಸ ಧ್ಯೇಯದೊಂದಿಗೆ ಬರಹ ಲೋಕವನ್ನು ಪ್ರವೇಶಿಸಿದರು. ಧಾರವಾಡದಲ್ಲಿ ಸಂಘಟನೆಯನ್ನು ಬಲಪಡಿಸಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ, ಯುವಕರಲ್ಲಿ ಪ್ರಗತಿಪರ ಆಲೋಚನೆಗಳನ್ನು ಬಿತ್ತುತ್ತಿದ್ದ ಚಂದ್ರಶೇಖರ ಪಾಟೀಲರು ಮತ್ತು ಅವರ ತಮ್ಮ ವಿಜಯ ಪಾಟೀಲರು, ಸವದತ್ತಿ ಯಲ್ಲಮ್ಮನ ದೇವಸ್ಥಾನದ ಸುತ್ತಲೂ ನಡೆಯುತ್ತಿದ್ದ ದಲಿತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬೆತ್ತಲೆ ಸೇವೆಯ ನಿಲ್ಲಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಹೋರಾಟಗಳಲ್ಲಿ, ಪ್ರೋ.ಬಿ ಕೃಷ್ಣಪ್ಪನವರು ಮತ್ತು ಅವರ ಸಂಗಡಿಗರ ದೊಡ್ಡ ದಂಡು ಪಾಲ್ಗೊಂಡಿತ್ತು.

ಇನ್ನು ರಾಯಚೂರಿನಲ್ಲಿ ಸಂಘಟನೆಯಷ್ಟೇ ದೊಡ್ಡ ಸಂಖ್ಯೆಯಲ್ಲಿ ಲೇಖಕರ ಸಾಹಿತ್ಯ ರಚನೆಯಲ್ಲಿ ತೊಡಗಿದರು. ಮುಂದೆ ಚೆನ್ನಣ್ಣ ವಾಲಿಕಾರರಿಗೆ ‘ಕರಿತೆಲಿ ಮಾನವನ ಜೀಪದ’ ಸಂಕಲನಕ್ಕೆ ಸಾಹಿತ್ಯ ಪರಿಷತ್ತಿನ ಬಹುಮಾನ ಬಂದಾಗ, ಶಾಂತರಸರು ಅದು ಕಾವ್ಯವೇ ಅಲ್ಲ ಎಂದು ವಾಚಕರ ವಾಣಿಗೆ ಪತ್ರ ಬರೆದಿದ್ದರು. ಆದರೆ, ಅದನ್ನು ಸಮರ್ಥಿಸಿಕೊಂಡಿದ್ದ ಬೋಳಬಂಡೆಪ್ಪ ಮತ್ತು ಅಮರಚಿಂತರು, ಶಾಂತರಸರಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದರು. ಇದರ ಪರಿಣಾಮ ಹಲವು ವರ್ಷಗಳ ಕಾಲ ಜಂಬಣ್ಣ ಅಮರಚಿಂತ, ವಾಲೀಕಾರರು ತಮಗಿಂತ ಹಿರಿಯರಾದ ಶಾಂತರಸರೊAದಿಗೆ ಮುನಿಸು ಬೆಳೆಸಿಕೊಂಡು ವರ್ಷಗಳ ಕಾಲ ಮಾತು ಆಡಿರದ ಪ್ರಸಂಗವೂ ನಡೆಯಿತು. ಅಲ್ಲದೆ ಶಾಂತರಸರ ‘ಬಡೇಸಾಹೇಬು ಪುರಾಣ’ ಕ್ಕೆ ಬೋಳಬಂಡೆಪ್ಪ ಒಂದು ಪ್ರಖರ ವಿಮರ್ಶೆಯನ್ನು ಬರೆದಿದ್ದು ಕೂಡ ಇದಕ್ಕೆ ಕಾರಣವಾಗಿತ್ತು.

1981-82 ರಲ್ಲಿ ರಾಯಚೂರಿನಲ್ಲಿ ನಡೆದ ಬಂಡಾಯ ಸಾಹಿತ್ಯ ಸಂಘಟನೆಯ ಎರಡನೆಯ ರಾಜ್ಯ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ ಬೋಳಬಂಡೆಪ್ಪ, ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೀಕಾರ, ಭಗತರಾಜ ನಿಜಾಮಕಾರ, ಬಾಬು ಭಂಡಾರಿಗಲ್, ಶಿವಾನಂದ ಸಾಸಿವೆಹಳ್ಳಿ, ಕರಿಯಪ್ಪ ಮಾಸ್ತರ್, ಬಿ.ಟಿ ಲಲಿತಾ ನಾಯಕ ಮತ್ತು ಎಂ. ಲಕ್ಷ್ಮಣ್ ಮುಂತಾದವರು, ಸಮ-ಸಮಾಜದ ನಿರ್ಮಾಣದಲ್ಲಿ ‘ಸಾಹಿತಿಯ ಪಾತ್ರ ಜನಪರ ಆಶಯಗಳ ಪರವಾಗಿರಬೇಕು. ಕಲೆ ಕಲೆಗಾಗಿ ಎನ್ನುವ ಪುರೋಹಿತ ಶಾಹಿ ಭೂರ್ಜ್ವಾವಾದವನ್ನು ಬುಡಮೇಲು ಮಾಡಿ, ಕಲೆ, ಸಾಹಿತ್ಯ ‘ಸೃಷ್ಟಿಕರ್ತ’ರಾದ ಜನಸಾಮಾನ್ಯರಿಗಾಗಿ ಎಂದು ದಲಿತರು, ಶೋಷಿತರೇ ಪ್ರತಿನಿಧಿಸುವ ಸಾಹಿತ್ಯ ಪ್ರಕ್ರಿಯೆಯನ್ನು ಸೃಷ್ಟಿಸಬೇಕು’ ಎಂಬ ನಂಬಿಕೆಯನ್ನು ಬಲಪಡಿಸುವತ್ತ ದುಡಿದಿದ್ದರು. ಹೀಗೆ ಕನ್ನಡ ಸಾಹಿತ್ಯದ ಒಂದು ಘಟ್ಟಕ್ಕೆ ರಾಯಚೂರಿನಿಂದ ದನಿ ಹೊರಡಿಸಿ, ಪರೋಕ್ಷವಾಗಿ ಅದಕ್ಕೆ ಕಾರಣೀಭೂತರಾದ ಬೋಳಬಂಡೆಪ್ಪ, ಜಂಬಣ್ಣ ಅಮರಚಿಂತ ಮತ್ತು ಚೆನ್ನಣ್ಣ ವಾಲೀಕಾರರು ಬಿತ್ತಿದ ಆರಂಭದ ಬಂಡಾಯದ ಕಿಡಿ ನಂತರದ ದಿನಗಳಲ್ಲಿ ನಾಡಿನ ಇತರೆಡೆ ಹಬ್ಬಿದ್ದು ಈಗ ಇತಿಹಾಸ.

ಕೃಪೆ: ‘ಬಂಡಾಯದ ಬೋಳಬಂಡೆಪ್ಪ; ಬದುಕು, ಬರಹ ಸಂಘಟನೆ’, ಪಲ್ಲವ ಪ್ರಕಾಶನ, 2018 ಪುಸ್ತಕದಿಂದ ಆಯ್ದ ಪುಟಗಳು.

ಚಿತ್ರಗಳು : ಮಧು ಬೋಳಬಂಡೆಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅತ್ಯುತ್ತಮ ಲೇಖನ. ಪ್ರಚುರವಿಲ್ಲದ ಆದರೆ ಬಹು ಮುಖ್ಯವಾದ ಮಾಹಿತಿಗಳನ್ನು ಒಳಗೊಂಡಿರುವ ಲೇಖನವಿದು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...