Homeಮುಖಪುಟನಿರಂಕುಶಾಧಿಕಾರ ಎಂಬ ತೋಳ ಮತ್ತು ಕುರಿಮರಿಗಳಂತಿರುವ ಸಾಮಾನ್ಯರು: ಎ ನಾರಾಯಣ

ನಿರಂಕುಶಾಧಿಕಾರ ಎಂಬ ತೋಳ ಮತ್ತು ಕುರಿಮರಿಗಳಂತಿರುವ ಸಾಮಾನ್ಯರು: ಎ ನಾರಾಯಣ

ಸಂವಿಧಾನ ಸೃಷ್ಟಿಸಿದ ಎಲ್ಲಾ ಸಂಸ್ಥೆಗಳು ತಮ್ಮ ಅಣತಿಯಂತೆ ನಡೆದುಕೊಳ್ಳುತ್ತಿರುವಾಗ, ಸಂವಿಧಾನವನ್ನು ಬಗಲಿಗೆ ಕಟ್ಟಿಕೊಂಡೇ ಮಾಡುವುದನ್ನೆಲ್ಲಾ ಮಾಡಬಹುದು ಎನ್ನುವುದು ಅಧಿಕಾರ ದುರ್ಬಳಕೆಯ ರೌದ್ರನಾಟಕದ ಹೊಸ ಅಧ್ಯಾಯ. ಕ್ರೌರ್ಯ ಮತ್ತು ನಯವಂಚನೆಯ ಭಯಾನಕ ಮಿಶ್ರಣ ಇದು.

- Advertisement -
- Advertisement -

ಆಳುವವರ ಅನ್ಯಾಯಗಳನ್ನು ಪ್ರಶ್ನಿಸಿದವರೆಲ್ಲಾ ಹೀಗೆ ಗೊತ್ತುಗುರಿ ಇಲ್ಲದೆ ಜೈಲು ಪಾಲಾಗುತ್ತಿರುವುದನ್ನು ನೋಡುತಿದ್ದರೆ ಸಣ್ಣ ತರಗತಿಯಲ್ಲಿ ಓದಿದ ಈಸೋಪನ ಕತೆಯೊಂದು ನೆನಪಾಗುತ್ತದೆ.

ಬಹುಮಂದಿಗೆ ಗೊತ್ತಿರಬಹುದಾದ ಈ ಕತೆಯಲ್ಲಿ ಹರಿಯುತ್ತಿರುವ ತೊರೆಯೊಂದರ ಬಳಿ ತೋಳವೊಂದು ಕುರಿಮರಿಯನ್ನು ಅಡ್ಡಗಟ್ಟಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತದೆ. ‘ನೀನು ನನಗೆ ದ್ರೋಹವೆಸಗಿದ್ದೀ ಅದಕ್ಕೆ ನಿನ್ನನ್ನು ಕೊಲ್ಲುತಿದ್ದೇನೆ’ ಎನ್ನುತ್ತದೆ ತೋಳ. ಆಗ ಕುರಿಮರಿಯು ‘ನಾನು ನಿನ್ನನ್ನು ನೋಡುತ್ತಿರುವುದು ಇದೇ ಮೊದಲು. ಹಾಗಿರುವಾಗ ನಿನಗೆ ದ್ರೋಹವೆಸಗುವ ಪ್ರಶ್ನೆ ಎಲ್ಲಿ ಬಂತು?’ ಎಂದು ಕೇಳುತ್ತದೆ. ‘ನಾನು ಈ ತೊರೆಯ ಬಳಿ ನೀರು ಕುಡಿಯಲು ಮುಂದಾದಾಗ ನೀನು ನೀರನ್ನು ಕದಡಿರುವೆ. ನಾನು ಕೊಳಕು ನೀರು ಕುಡಿಯುವ ಹಾಗೆ ಮಾಡಿರುವೆ’ ಅಂತ ತೋಳ ಆಪಾದಿಸುತ್ತದೆ. ಕುರಿ ಮರಿ ಹೇಳುತ್ತದೆ: ‘ನೀನು ತೊರೆಯ ಎತ್ತರದ ಭಾಗದಲ್ಲಿ ಇದ್ದಿ. ನಾನು ನಿನಗಿಂತ ಎಷ್ಟೋ ತಗ್ಗಿನ ಸ್ಥಳದಲ್ಲಿದ್ದೇನೆ. ನಾನು ನೀರು ಕದಡಿಸಿದ್ದೇ ಆದರೂ ಅದು ನಿನ್ನತ್ತ ಹೇಗೆ ಬರಲು ಸಾಧ್ಯ? ನೀರು ಕೆಳಗಿನಿಂದ ಮೇಲೆ ಹರಿಯುವುದಿಲ್ಲ ತಾನೇ?’. ಒಂದಿಷ್ಟೂ ವಿಚಲಿತನಾಗದ ತೋಳ, ‘ನನ್ನನ್ನೇ ಪ್ರಶ್ನಿಸಲು, ನನಗೇ ಬುದ್ಧಿ ಹೇಳಲು ನಿನಗೆಷ್ಟು ಪೊಗರು. ನೀನಲ್ಲದಿದ್ದರೆ, ನಿನ್ನ ಅಪ್ಪನೋ, ನಿನ್ನ ಅಜ್ಜನೋ ನಾನು ಕುಡಿಯುವ ನೀರನ್ನು ಮೇಲೆ ನಿಂತು
ಕದಡಿದ್ದಾರೆ. ಆದ ಕಾರಣ ನಿನಗೆ ಶಿಕ್ಷೆ ಆಗಲೇ ಬೇಕು’ ಅಂತ ವಿತಂಡ ವಾದ ಮಂಡಿಸಿ ಕುರಿಮರಿಯ ಮೇಲೆರಗಿ ಅದನ್ನು ಕೊಲ್ಲುತ್ತದೆ.

ನಿರಂಕುಶಾಧಿಕಾರ (tyranny) ಎನ್ನುವುದು ಯಾವತ್ತೂ ಹೀಗೇ ವರ್ತಿಸುವುದು. ಅದು ತನಗಾಗದವರರು ಎಷ್ಟೇ ನ್ಯಾಯಯುತವಾಗಿ ನಡೆದುಕೊಂಡರೂ ಇಲ್ಲ ಸಲ್ಲದ ಕಾರಣಗಳನ್ನು ನೀಡಿ ಅವರನ್ನು ಹಿಂಸಿಸುತ್ತದೆ. ಸುಳ್ಳು ಅಥವಾ ಆಯ್ದ ಅರೆ-ಸತ್ಯಗಳನ್ನು ಬಳಸಿಕೊಂಡು, ಕಾನೂನುಗಳನ್ನು ಯಾವತ್ತೂ ಬಳಸಿಕೊಂಡೇ ಅನ್ಯಾಯ ಮಾಡುತ್ತದೆ. ಅಧಿಕಾರದ ಕುರಿತಂತೆ ಇವೆಲ್ಲಾ ಸಾರ್ವಕಾಲಿಕ ಸತ್ಯಗಳು. ಆದುದರಿಂದಲೇ ಮೇಲಿನ ಕತೆಯು ಬೇರೆ ಬೇರೆ ರೂಪಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಒಳಗೊಂಡು ಪ್ರಪಂಚದ ಬಹುತೇಕ ದೇಶಗಳ ಲಿಖಿತ-ಅಲಿಖಿತ ಸಾಹಿತ್ಯ ಪರಂಪರೆಗಳಲ್ಲಿ ಕಂಡುಬರುತ್ತಿರುವುದು. ಅನಿಯಂತ್ರಿತ ಅಧಿಕಾರದ ಬಗೆಗಿನ ಕೆಲವು ಸತ್ಯಗಳು ಕಾಲ, ದೇಶ, ಸನ್ನಿವೇಶಗಳನ್ನು ನೋಡಿ ಬದಲಾಗುವುದಿಲ್ಲ. ಅಧಿಕಾರ ಅತಿಯಾದಾಗ ಅದು ವರ್ತಿಸುವ ರೀತಿ ಅನಾಗರಿಕ ಪ್ರಾಣಿ ಪ್ರಪಂಚದಲ್ಲೂ ಒಂದೇ, ಮುಕ್ಕೋಟಿ ದೇವಾನುದೇವತೆಗಳನ್ನೂ, ಅದಕ್ಕಿಂತ ನೂರ್ಮಡಿ ಹೆಚ್ಚು ಸಂಖ್ಯೆಯ ಧರ್ಮಗ್ರಂಥಗಳನ್ನೂ ಹೊಂದಿರುವ ಸನಾತನ ಭೂಮಿಯಲ್ಲೂ ಒಂದೇ.

ಮಾನವಕೋಟಿ ಪ್ರಜಾಸತ್ತೆ ಎನ್ನುವ ಒಂದು ವ್ಯವಸ್ಥೆಯನ್ನು ಆವಿಷ್ಕರಿಸಿಕೊಂಡದ್ದು ನಿರಂಕುಶಾಧಿಕಾರ ಎಂಬ ತೋಳದಿಂದ ಕುರಿಮರಿಗಳಂತಿರುವ ಸಾಮಾನ್ಯ ಪ್ರಜೆಗಳನ್ನು ರಕ್ಷಿಸುವುದಕ್ಕೋಸ್ಕರ. ಪ್ರಜಾಸತ್ತೆಯಲ್ಲಿ ಒಂದು ಸಂವಿಧಾನ, ಒಂದು ಶಾಸಕಾಂಗ, ಒಂದು ನ್ಯಾಯಾಂಗ, ಒಂದು ಮಾಧ್ಯಮಾಂಗ ಅಂತೆಲ್ಲಾ ಇರುವುದು ಅಧಿಕಾರಸ್ಥರ ತೋಳ-ನೀತಿ ಮತ್ತು ತೋಳ-ಪ್ರವೃತ್ತಿಗಳ ಮೇಲೆ ಒಂದು ನಿಗಾ ಇರಿಸುವುದಕ್ಕೋಸ್ಕರ. ಆದರೇನು ಮಾಡುವುದು, ಪ್ರಜಾಸತ್ತೆ ಇದ್ದರೂ ಕೆಲವು ದೇಶಗಳಲ್ಲಿ, ಕೆಲ ಕಾಲಘಟ್ಟಗಳಲ್ಲಿ ಈ ಶಾಸಕಾಂಗ, ನ್ಯಾಯಾಂಗ, ಮಾಧ್ಯಮಾಂಗಗಳೆಲ್ಲಾ ಅಧಿಕಾರವೆಂಬ ತೋಳದ ಹಲ್ಲುಗಳಾಗಿಯೋ, ಉಗುರುಗಳಾಗಿಯೋ, ಬಾಲಗಳಾಗಿಯೋ ಕೆಲಸ ಮಾಡುತ್ತವೆ. ಸಂವಿಧಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿ ಬರುತ್ತದೆ.

ಇದನ್ನೂ ಓದಿ: ಅಜೀವಪರ್ಯಂತ ಮಾನವಹಕ್ಕುಗಳ ಹೋರಾಟಗಾರ ರೋಣ ವಿಲ್ಸನ್

ಹಿಂದಿನ ಕಾಲದಲ್ಲಿ ಪ್ರಜಾತಂತ್ರ ವ್ಯವಸ್ಥೆಯೊಳಗೆ ಅಧಿಕಾರವನ್ನು ಬೇಕಾಬಿಟ್ಟಿ ಬಳಸಬೇಕು ಎಂದು ಅಧಿಕಾರಸ್ಥರಿಗೆ ತೋರಿದರೆ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟು ತುರ್ತುಪರಿಸ್ಥಿತಿ ಘೋಷಿಸುವ ಪದ್ಧತಿಯಾದರೂ ಇತ್ತು. ಈ ಕಾಲದ ನಿರಂಕುಶ ನಾಯಕತ್ವಕ್ಕೆ ಆ ಅಗತ್ಯವೂ ಕಾಣುತ್ತಿಲ್ಲ. ಸಂವಿಧಾನ ಸೃಷ್ಟಿಸಿದ ಎಲ್ಲಾ ಸಂಸ್ಥೆಗಳು ತಮ್ಮ ಅಣತಿಯಂತೆ ನಡೆದುಕೊಳ್ಳುತ್ತಿರುವಾಗ, ಸಂವಿಧಾನವನ್ನು ಬಗಲಿಗೆ ಕಟ್ಟಿಕೊಂಡೇ ಮಾಡುವುದನ್ನೆಲ್ಲಾ ಮಾಡಬಹುದು ಎನ್ನುವುದು ಅಧಿಕಾರ ದುರ್ಬಳಕೆಯ ರೌದ್ರನಾಟಕದ ಹೊಸ ಅಧ್ಯಾಯ. ಕ್ರೌರ್ಯ ಮತ್ತು ನಯವಂಚನೆಯ ಭಯಾನಕ ಮಿಶ್ರಣ ಇದು.

ಭಾರತದ ಸಂವಿಧಾನದ ವಿಚಾರದಲ್ಲಿ ಹೇಳುವುದಾದರೆ ವೈಯ್ಯಕ್ತಿಕ ಸ್ವಾತಂತ್ರ‍್ಯದ ಹಕ್ಕನ್ನು ಮತ್ತು ಬದುಕುವ ಹಕ್ಕನ್ನು ಖಾತರಿಗೊಳಿಸುವ ಅದರ 21ನೆಯ ಪರಿಚ್ಛೇದವು ಬೇರೆ ಬೇರೆ ಸಂದರ್ಭಗಳಲ್ಲಿ ನ್ಯಾಯಾಂಗದ ವ್ಯಾಖ್ಯಾನದ ಮೂಲಕ ವಿಸ್ತಾರವಾಗುತ್ತಾ ಅದೆಷ್ಟು ಉದಾರವಾದ ಆಯಾಮ ಪಡೆದಿದೆ ಎಂದರೆ ಅದನ್ನು ತತ್ವಶಃ ಅಳವಡಿಸಿದರೆ ತಪ್ಪು ಮಾಡದ ಯಾರೂ ತಮ್ಮ ವಿರುದ್ಧ ಯಾರೋ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದದ್ದೇ ಇಲ್ಲ.

1950ರ ದಶಕದ ಎ.ಕೆ. ಗೋಪಾಲನ್ ಪ್ರಕರಣದಲ್ಲಿ 21ನೆಯ ಪರಿಚ್ಛೇದವನ್ನು ಬಹಳ ಸೀಮಿತ ಅರ್ಥದಲ್ಲಿ ವ್ಯಾಖ್ಯಾನಿಸಿದ್ದ ನ್ಯಾಯಾಂಗ ಮುಂದಿನ ಹಲವಾರು ಪ್ರಕರಣಗಳಲ್ಲಿ ಅಧಿಕಾರ ದುರ್ಬಳಕೆಯ ವಿರುದ್ಧ ಸಾಮಾನ್ಯ ಜನರಿಗೆ ಬಹುದೊಡ್ಡ ರಕ್ಷಣೆ ಒದಗಿಸುವ ರೀತಿಯಲ್ಲಿ ಆ ಪರಿಚ್ಛೇದವನ್ನು ಸಿದ್ಧಗೊಳಿಸಿತ್ತು. ಆದರೇನು ಮಾಡುವುದು, 21ನೇ ಪರಿಚ್ಛೇದವನ್ನು ಹಿಗ್ಗಿಸುವಷ್ಟು ಹಿಗ್ಗಿಸಿ, ವಿಸ್ತರಿಸಬಹುದಾದಷ್ಟು ವಿಸ್ತರಿಸಿ ವ್ಯಕ್ತಿ ಸ್ವಾತಂತ್ರ‍್ಯ ಮತ್ತು ಬದುಕುವ ಹಕ್ಕನ್ನು ಅಧಿಕಾರಸ್ಥರ ಹದ್ದಿನ ಕಣ್ಣುಗಳಿಂದ ರಕ್ಷಿಸಿದ ಅದೇ ನ್ಯಾಯಾಂಗ ಬರಬರುತ್ತಾ ತನ್ನ ತೀರ್ಪುಗಳನ್ನು ತಾನೇ ಧಿಕ್ಕರಿಸುತ್ತಿದೆಯೋ ಎನ್ನುವ ರೀತಿಯಲ್ಲಿ ಈಗ ನಡೆದುಕೊಳ್ಳುತ್ತಿದೆ ಎನ್ನುವ ಸಂಶಯ ಮೂಡುತ್ತಿದೆ. ಆ ಸಂಶಯದಿಂದ ಜನ ಈಗ ಬಹಿರಂಗವಾಗಿ ಆಡಿಕೊಂಡು ನ್ಯಾಯಾಂಗ ನಿಂದನೆಯ ಆಪಾದನೆಯನ್ನು ಮೈಮೇಲೆ ಎಳೆದುಕೊಳ್ಳಬೇಕಾದಷ್ಟು ಪರಿಸ್ಥಿತಿ ಕೆಟ್ಟು ಹೋಗಿದೆ.

ಅಧಿಕಾರಸ್ಥರನ್ನು ಎದುರು ಹಾಕಿಕೊಂಡ ಪ್ರಜ್ಞಾವಂತರನ್ನು ಒಂದಲ್ಲ, ಎರಡಲ್ಲ, ಬಾರಿ ಬಾರಿ ಪೊಲೀಸ್ ವ್ಯವಸ್ಥೆ ವಿನಾ ಕಾರಣ ಬೇಟೆಯಾಡುತ್ತಿದೆ ಎನ್ನುವುದು ಕಾನೂನು ಓದದ ಪಾಮರನಿಗೂ ಸ್ಪಷ್ಟವಾಗಿ ಗೋಚರಿಸುತ್ತಿದ್ದರೆ, ನ್ಯಾಯಾಂಗದ ಕಡೆಯಿಂದ ಇತ್ತೀಚಿಗಿನ ದಿನಗಳಲ್ಲಿ ಒಂದೇ ಒಂದು ಭರವಸೆಯ ತೀರ್ಪು ಬಂದಿದ್ದರೆ ಹೇಳಿ. ಬೇಡ, ಒಂದು ಭರವಸೆಯ ಮಾತು ಕೇಳಿಸಿದ್ದರೆ ಹೇಳಿ. ಅಂತಹ ತುರ್ತುಪರಿಸ್ಥಿತಿಯ ಕಾಲದಲ್ಲೂ ಒಬ್ಬ ನ್ಯಾಯದೀಶ (ಹೆಚ್.ಆರ್. ಖನ್ನಾ) ತನ್ನ ವೃತ್ತಿ ಬದುಕನ್ನೇ ಪಣಕ್ಕಿಟ್ಟು ವ್ಯಕ್ತಿ ಸ್ವಾತಂತ್ರ‍್ಯವನ್ನು ಮತ್ತು ಬದುಕುವ ಹಕ್ಕನ್ನು ಅಧಿಕಾರಸ್ಥರು ಬೇಕಾಬಿಟ್ಟಿ ಕಿತ್ತುಕೊಳ್ಳುವ ಹಾಗಿಲ್ಲ ಅಂತ ತೀರ್ಪು ನೀಡಿದ್ದು ಇತಿಹಾಸ. ಆ ಕಾರಣಕ್ಕಾಗಿ ಮುಖ್ಯನ್ಯಾಯಾಧೀಶರಾಗುವ ಅವಕಾಶದಿಂದ ವಂಚಿತರಾಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಆ ನ್ಯಾಯಮೂರ್ತಿಯ ಕತೆ ಇದೇ ದೇಶದಲ್ಲಿ ನಡೆದದ್ದು ಎನ್ನುವುದು ಈಗಿನ ಸ್ಥಿತಿ ನೋಡಿದ ನಂತರ ಒಂದು ಮಹಾನ್ ಸೋಜಿಗವಾಗಿ ಕಾಣುತ್ತದೆ. ವಿಧಿವತ್ತಾಗಿ ಅರ್ಜಿ ಸಲ್ಲಿಸದೆ, ನಿಗದಿತವಾದ ಶುಲ್ಕ ತೆರದೆ ‘ಅನ್ಯಾಯವಾಗಿದೆ’ ಅಂತ ಸಾಮಾನ್ಯ ಮನುಷ್ಯ ಬರೆದ ನಾಲ್ಕು ಸಾಲು ಪತ್ರಗಳನ್ನೇ ಹಿಡಿದುಕೊಂಡು ಅಧಿಕಾರಸ್ಥರು ಬೆವರುವಂತಹ ತೀರ್ಪುಗಳನ್ನು ನೀಡುತಿದ್ದ ನ್ಯಾಯಾಂಗ ಈ ದೇಶದಲ್ಲೇ ಇತ್ತು ಎನ್ನುವುದು ಈಗ ಯಾವುದೋ ಅಸ್ಪಷ್ಟ ಕನಸಿನಂತೆ ಭಾಸವಾಗುತ್ತದೆ.

ಪೊಲೀಸರನ್ನು ಛೂಬಿಟ್ಟು, ನ್ಯಾಯಾಂಗಕ್ಕೆ ಅದೇನೋ ಮಂಕುಬೂದಿ ಎರಚಿ, ಮಾಧ್ಯಮಗಳನ್ನು ಖರೀದಿಸಿ, ಬೆದರಿಸಿ ತಮಗಾಗದವರನ್ನು ಕಾನೂನು ಬಾಹಿರವಾಗಿ ಮಟ್ಟಹಾಕುತ್ತಿರುವ ಅಧಿಕಾರಸ್ಥರು ಕೇವಲ ಒಂದಷ್ಟು ವ್ಯಕ್ತಿಗಳನ್ನು ಮಾತ್ರ ಕಾಡುತಿದ್ದಾರೆ. ಅವರ ತಂಟೆಗೆ ಹೋಗದಿದ್ದರೆ ನಮಗೇನೂ ತಕರಾರಿಲ್ಲ ಅಂತ ಭಾವಿಸಿ ಕಣ್ಣು ಮುಚ್ಚಿಕೊಳ್ಳುವ ವಿದ್ಯಾವಂತ ಸಮೂಹ, ಮಧ್ಯಮ ವರ್ಗ ಮತ್ತು ಮಾಧ್ಯಮದ ಮಂದಿ ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯನ್ನು ವಿನಾ ಕಾರಣ, ಬಂಧಿಸಿ, ಹಿಂಸಿಸಿ, ಕಾರಾಗೃಹದಲ್ಲಿ ಕೊಳೆಯಿಸುವ ಇಡೀ ಪ್ರಕ್ರಿಯೆಯಲ್ಲಿ ಕೇವಲ ಕೆಲವೇ ಕೆಲವು ವ್ಯಕ್ತಿಗಳ ಬದುಕಷ್ಟೇ ಛಿದ್ರವಾಗುವುದಲ್ಲ, ಇಡೀ ಕಾನೂನಾತ್ಮಕ-ಆಡಳಿತ (Rule of Law) ವ್ಯವಸ್ಥೆಯೇ ನಲುಗುತ್ತದೆ.

ಯಾಕೆಂದರೆ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡುತ್ತಿರುವ ದುಷ್ಟಕೂಟವು ಯಾವತ್ತೂ ಪೊಲೀಸರನ್ನು, ಅಧಿಕಾರಿಗಳನ್ನು, ಅಭಿಯೋಜಕ (prosecution) ವ್ಯವಸ್ಥೆಯಲ್ಲಿರುವ ನ್ಯಾಯವಾದಿಗಳನ್ನು, ಹೀಗೆ ಯಾರ್ಯಾರು ಕಾನೂನು ರೀತಿ ಕೆಲಸ ಮಾಡಬೇಕೋ ಅವರಿಗೆಲ್ಲಾ ಕಾನೂನನ್ನು ಕಡೆಗಣಿಸಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ ಅಥವಾ ಬೆದರಿಕೆಯೊಡ್ಡುತ್ತದೆ. ಹೀಗೆಲ್ಲಾ ಆಗುವಾಗ ಆಡಳಿತ ವ್ಯವಸ್ಥೆ ಒಳಗೊಳಗೇ ಶಿಥಿಲವಾಗುತ್ತಲೂ, ಭ್ರಷ್ಟವಾಗುತ್ತಲೂ, ಕ್ರೂರವಾಗುತ್ತಲೂ ಸಾಗುತ್ತದೆ. ಕಾನೂನನ್ನು ಬಳಸಿಕೊಂಡೇ ಯಾರನ್ನಾದರೂ ಪಳಗಿಸಬಹುದು ಮತ್ತು ಹಾಗೆ ಮಾಡಿಯೂ ಬಚಾವಾಗಬಹುದು ಎನ್ನುವ ಧೈರ್ಯ ಒಮ್ಮೆ ಪೊಲೀಸ್ ವ್ಯವಸ್ಥೆಗೆ ಬಂದುಬಿಟ್ಟರೆ ಅದು ಮನುಷ್ಯರ ರಕ್ತದ ರುಚಿ ಹತ್ತಿದ ಹುಲಿಯಂತೆ. ಅಂತಹ ಪೊಲೀಸ್ ವ್ಯವಸ್ಥೆಯನ್ನು ಹೊಂದಿರುವ ನಾಡಿನಲ್ಲಿ ಯಾರ ಬದುಕೂ ಸುಭದ್ರವಲ್ಲ. ನೆನಪಿರಲಿ..

ಎ ನಾರಾಯಣ 
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ `ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು’ ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದಾರೆ


ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...