Homeಸಾಹಿತ್ಯ-ಸಂಸ್ಕೃತಿಕಥೆರಾಜಶೇಖರ ಹಳೆಮನೆ ಅವರ ಹೊಸ ಸಣ್ಣ ಕಥೆ 'ಸೂತಕ'

ರಾಜಶೇಖರ ಹಳೆಮನೆ ಅವರ ಹೊಸ ಸಣ್ಣ ಕಥೆ ‘ಸೂತಕ’

- Advertisement -
- Advertisement -

nಹೆಣಕ್ಕೆ ಹೊದಿಸಿದ ಬಿಳಿಬಟ್ಟೆಯಂತೆ ಬೆಳದಿಂಗಳು ಚೆಲ್ಲಿತ್ತು. ಗಿಡಗಳು ಕಪ್ಪಾಗಿ ಪ್ರೇತಗಳಂತೆ ನೆಲಕ್ಕೆ ಚಿತ್ತಾರ ಬರೆದಿದ್ದವು. ನರಿಗಳು ಕಿವಿ ತೂತಾಗುವಂತೆ ಊಳಿಡುತ್ತಿದ್ದವು. ಬಾವಲಿಗಳು ತಲೆ ಮೇಲೆ ಕಪ್ಪು ಬಟ್ಟೆ ಹೊದ್ದಂತೆ ಓಡಾಡುತ್ತಿದ್ದವು. ಗೂಬೆಗಳು ಗುಕ್… ಗುಕ್… ಎಂದು ನನ್ನನ್ನು ಕರೆಯುತ್ತಿದ್ದವು. ಅವುಗಳ ಹೊಳೆವ ಕಣ್ಣುಗುಡ್ಡೆಗಳು ನನ್ನನ್ನು ಇರಿಯುತ್ತಿದ್ದವು. ಕಣ್ಣು ಮುಳುಗುವರೆಗೆ ಬಯಲೋ ಬಯಲು. ಮೆಣಸಿನ ಗಿಡಗಳು, ಹತ್ತಿ ಗಿಡಗಳು, ತೊಗರಿ ಗಿಡಗಳು, ಕತ್ತರಿಸಿದ ಭತ್ತದ ಗದ್ದೆಗಳು ಬೆಳದಿಂಗಳಲ್ಲಿ ಬೋಳಾಗಿ ನಿಂತಿದ್ದವು. ಯಾವ ಬೆಳೆಯು ಇಲ್ಲದ್ದರಿಂದ ಹೊಲಗಳೆಲ್ಲಾ ರಕ್ತ ಹೀರಿದ ಅಸ್ತಿಪಂಜರದಂತೆ ಕಾಣುತ್ತಿದ್ದವು. ಮೈಯೆಲ್ಲಾ ಕಣ್ಣು ಮಾಡಿಕೊಂಡು ಸುತ್ತಮುತ್ತ ನೋಡುತ್ತಾ ನಡೆಯುತ್ತಿದ್ದೆ. ನಡೆದಂತೆ ನನ್ನ ನೆರಳು ನನ್ನನ್ನು ನುಂಗುತ್ತಿದೆ ಅನಿಸುತಿತ್ತು. ಅಷ್ಟು ತಂಪಾದ ಬೆಳದಿಂಗಳು ಉಕ್ಕಿ ಹರಿಯುತ್ತಿದ್ದರೂ ಮನಸ್ಸು ಬೆಂಕಿ ಹೊತ್ತಿದಂತೆ ಉರಿಯುತ್ತಿತ್ತು. ಪ್ರತಿ ಹೆಜ್ಜೆಯು ಬೆಟ್ಟದಷ್ಟೂ ಭಾರವಾಗುತಿತ್ತು. ಅಣ್ಣನನ್ನು ನೆನಪಿಸಿಕೊಂಡಂತೆ ಕೆಂಡದಲ್ಲಿ ಬಿದ್ದಷ್ಟೂ ಸಂಕಟವಾಗುತಿತ್ತು.

ಗುಡಿಸಲು ಸಮೀಪಿಸಿದಂತೆ ಭಯ ಕಡಿಮೆಯಾಯಿತು. ಅಪ್ಪ ನೆಟ್ಟ ಐದಾರು ಮಾವಿನ ಮರಗಳು ಹಾಗೆ ಇದ್ದವು. ಅವು ಚಿಗುರೊಡೆದು ನಳನಳಿಸುತ್ತಿದ್ದವು. ಆ ತಂಗಾಳಿಯಲ್ಲಿ ಮಾವಿನ ಮರದಿಂದ ಬಂದ ಗಾಳಿ ಗಮ್ಮೆಂದು ಮೂಗಿಗೆ ಬಡಿದು ಸ್ವಲ್ಪ ಹಿತವೆನಿಸಿತು. ಬೆಳದಿಂಗಳು ಸುಳಿಸುಳಿಯಾಗಿ ಬೆಳ್ಳಗೆ ಕಣ್ಣು ಮುಂದೆ ನಿಂತಿತು. ‘ಯಾಕೋ ಊರಿಗೆ ಬಂದಿ. ಅಲ್ಲೇ ಅಮೆರಿಕಾದಲ್ಲಿ ಹಾಯಾಗಿ ಇರಬಾರದೆ. ಇಲ್ಲಿಯ ಗೋಳು ನಿನಗ್ಯಾಕೆ. ಇವರು ಹೇಗಾದರೂ ಇರಲಿ. ಅವರನ್ನು ನೋಡಿಯಾದರೂ ನೀನೇನು ಮಾಡುವಿ. ಅಲ್ಲಿ ವೀಕೆಂಡ್ ಪಾರ್ಟಿ ಮಾಡಿಕೊಂಡು ಕುಡಿದು ತಿಂದು ಭೋಗಿಸಿ ಮಜವಾಗಿ ಇರಬಾರದೆ. ಹೋಗು ಹೋಗು…..’ ಎಂದಂತಾಯಿತು. ಬೆಳದಿಂಗಳ ಮಾತು ಕೇಳಿ ಎದೆ ನಡುಗಿತು.

ಗುಡಿಸಲು ಮುಂದೆ ರಾಶಿರಾಶಿಯಾಗಿ ಈರುಳ್ಳಿ, ಟೊಮ್ಯಟೊ, ಆಲುಗಡ್ಡೆ ಬಿದ್ದಿದ್ದವು. ಎಷ್ಟು ದಿವಸ ಆಗಿತ್ತೋ ರಾಶಿ ಹಾಕಿ ಕೊಳೆತು ದುರ್ನಾತ ಬರುತ್ತಿತ್ತು. ಆ ದುರ್ನಾತಕ್ಕೆ ಹೊಟ್ಟೆ ತೊಳಿಸಿದಂತಾಗಿ ವಾಂತಿ ಒತ್ತಿಕೊಂಡು ಬಂದಿತು. ಹೊಟ್ಟೆಯಲ್ಲಿ ಏನು ಇಲ್ಲದ್ದರಿಂದ ಸಂಕಟವಾಯಿತು. ಟೊಮ್ಯಟೊ ಹಣ್ಣು ಕೆಂಪಗೆ ಹಸಿ ಮಾಂಸದ ತುಣುಕಿನಂತೆ ಕಾಣುತ್ತಿದ್ದವು. ಕೊಳೆತು ಹೊಟ್ಟೆ ಹೊಡೆದು ರಸ ರಕ್ತದಂತೆ ಹರಿಯುತ್ತಿತ್ತು. ನೋಡಲು ಹೇಸಿಕೆಯೆನಿಸಿತು. ಇವನ್ನು ಮನೆ ಮುಂದೆ ಹಾಕಿಕೊಂಡು ಹೇಗೆ ಜೀವಿಸುವರೋ ಅನಿಸಿತು. ಆಲುಗಡ್ಡೆ ಈರುಳ್ಳಿಗಳು ತಲೆ ಸೀಳಿ ಮೆದುಳು ಹೊರಬಂದಂತೆ ಕಾಣುತ್ತಿದ್ದವು.

ಅಪ್ಪ ತಮ್ಮ ಹೊರಗೆ ಮಲಗಿದ್ದರು. ಅಪ್ಪ ತಲೆ ಪಕ್ಕದಲ್ಲಿ ಬಸವಣ್ಣನ ವಚನಗಳ ಪುಸ್ತಕ ಇಟ್ಟುಕೊಂಡಿದ್ದ. ಆತನಿಗೆ ಆ ಪುಸ್ತಕ ತಲೆ ಪಕ್ಕ ಇದ್ದರೆ ನಿದ್ದೆ ಬರುತ್ತಿತ್ತು. ಬೆಳ್ಳಗೆ ಹೊಳೆಯುತ್ತಿದ್ದ ಅಪ್ಪನ ಮುಖ ಕಪ್ಪಿಟ್ಟಿತ್ತು. ಊರಲ್ಲಿ ಎಷ್ಟೊ ಜನರ ದುಃಖದುಮ್ಮಾನಗಳಿಗೆ ಕೊರಳಾಗಿದ್ದವ. ಇಂದು ತನ್ನ ದುಃಖಕ್ಕೆ ಯಾರಿಲ್ಲದೆ ಮುಖ ಸುಟ್ಟ ಕೊರಡಿನಂತಾಗಿತ್ತು. ಯಾವ ವಚನಗಳು ಆತನ ವ್ಯಥೆಯನ್ನು ಸಮಧಾನ ಮಾಡಿರಲಿಕ್ಕಿಲ್ಲ. ತಮ್ಮನ ಮುಖ ಬಾಡಿ ಕಣ್ಣೆಲ್ಲಾ ಬತ್ತಿ ಹೋಗಿದ್ದವು. ತೊಯ್ದ ಗುಬ್ಬಿ ಮರಿಯಂತೆ ಕೈಕಾಲು ಮುದುರಿಕೊಂಡು ಮಲಗಿದ್ದ. ಅಮ್ಮ ಕಾಣಲಿಲ್ಲ. ಎದೆ ಒಡೆದುಕೊಳ್ಳುತ್ತಿತ್ತು. ಇವರನ್ನು ಹಗಲೊತ್ತು ಎದುರಿಸುವದು ಆಗುವದಿಲ್ಲವೆಂದು ರಾತ್ರಿ ಬಂದಿದ್ದೆ.

ಅಣ್ಣನ ಹಾಸಿಗೆ ದಿಂಬು ಮೂಲೆಯಲ್ಲಿ ಕಳೆಬರದಂತೆ ಬಿದ್ದಿದ್ದವು. ಅವನ ಬಟ್ಟೆಗಳನ್ನು ಹುಣಸೆಮರಕ್ಕೆ ಒಣ ಹಾಕಿದ್ದರು. ಅವನ ಚೆಪ್ಪಲಿ ಅನಾಥವಾಗಿ ನನ್ನನ್ನು ನೋಡುತ್ತಿದ್ದವು. ನನಗಿಂತಲೂ ಅವನ ಕಾಲು ಮೂರು ಇಂಚು ದೊಡ್ಡವು. ಎಲ್ಲಿಯಾದರೂ ಇವು ಅಣ್ಣನ ಚೆಪ್ಪಲಿ ಎಂದು ಗುರುತು ಸಿಗುತ್ತಿದ್ದವು. ಅವನು ಮಲಗುತ್ತಿದ್ದ ಜಾಗದಿಂದ ಮೈ ವಾಸನೆ ನನ್ನನ್ನು ಅಪ್ಪಿಕೊಂಡಿತು. ‘ಅಯ್ಯೋ… ಅಣ್ಣಾ… ಹೀಗೇಕೆ ಮಾಡಿದೆ…’ ಎಂದು ಚೀರಬೇಕೆನಿಸಿತು. ಗಂಟಲು ಬಿಗಿಯಾಗಿ ಉಸಿರು ಹೊರಬರಲಿಲ್ಲ. ಅವನ ಇಡೀ ಆಕಾರ ಕಣ್ಣ ಮುಂದೆ ಬಂದು ಕಣ್ಣೀರು ಧಾರಾಕಾರವಾಗಿ ಹರಿದವು.

ಅಮ್ಮ ಒಳಗೆ ಮಲಗಿರಬೇಕೆಂದು ಬೇವಿನ ಮರದ ಹಾಗೆ ಕಟ್ಟಿಗೆ ಸುಮ್ಮನೆ ಕುಳಿತೆ. ಸುತ್ತಲು ನೋಡಿದೆ. ಎಲ್ಲೆಲ್ಲೂ ಬೆಳೆಗಳಿಗೆ ಔಷಧಿ ಹೊಡೆದು ಬಿಸಾಕಿದ ಡಬ್ಬಿಗಳು. ಪ್ರತಿ ಡಬ್ಬಿಯ ಮೇಲೆ ತಲೆಬುರುಡೆಯ ಚಿತ್ರ ಇತ್ತು. ಆ ಚಿತ್ರಗಳು ನನಗಾಗಿ ಕಾಯುತ್ತಿರುವಂತೆ ಎದ್ದು ಬಂದವು. ‘ಓ ನೀನು ಬಂದೆಯಾ ಹೊಸ ಜೀವ. ಬಾ ಬಾ… ನಮ್ಮನ್ನು ಕುಡಿ ನಮ್ಮಂತಾಗು. ಎಲ್ಲರನ್ನೂ ನಮ್ಮಂತೆ ಡಿಂಬಗಳನ್ನಾಗಿ ಮಾಡುವುದೇ ನಮ್ಮ ಗುರಿ.. ಆ….’ ಎಂದು ನನ್ನನ್ನು ನುಂಗಲು ಬರುತ್ತಿವೆ ಅನಿಸಿ ಅಲ್ಲಿಂದ ಎದ್ದು ಬಂದೆ.

ರಸಾಯನಿಕ ಔಷಧಿ ಸಿಂಪಡಿಸುವ ಗನ್ ಟ್ಯಾಂಕುಗಳನ್ನು ಹುಣಸೆಗಿಡದ ಕೆಳಗೆ ಸಾಲಾಗಿ ಜೋಡಿಸಿದ್ದರು. ಅದರಿಂದ ವಿಷ ಉಕ್ಕಿ ಹರಿದು ಬಂದಂತೆ ಭಾಸವಾಯಿತು. ವಿಷದ ನೆರಳು ಮನದ ಮುಂದೆ ಕುಣಿದು ಕುಪ್ಪಳಿಸಿತು. ನೋಡುನೋಡುತ್ತಾ ಕಣ್ಣಿಗೆ ಕತ್ತಲು ಆವರಿಸಿತು. ಯಾರನ್ನಾದರು ಎಬ್ಬಿಸಬೇಕೆಂದು ಕಣ್ಣುತೆರೆದೆ.

ಮೋಡದಿಂದ ಇಳಿದ ಬೆಳದಿಂಗಳಂತೆ ಅಮ್ಮ ಗಿಡ-ಗಂಟೆಯನ್ನೆಲ್ಲಾ ಒಗ್ಗೂಡಿಸಿ ಆಕಾಶದೆತ್ತರ ತೊಟ್ಟಿಲು ಮಾಡಿ ನನ್ನನ್ನು ಅಪ್ಪಿಕೊಂಡು ಮಗನೇ… ಮಗನೆ… ಸುಖವಾಗಿರಲು ಎಲ್ಲೋಗಿದ್ದೋ…ಬಾರೋ ನಿನ್ನನ್ನು ತೂಗುತ್ತೇನೆ. ಹಾಡುತ್ತೇನೆ. ನಲಿಸುತ್ತೇನೆ. ಸುಖ ನಿದ್ರೆಗೆ ಒಯ್ಯುತ್ತೇನೆಂದು ಅನಾಮತ್ತಾಗಿ ಎತ್ತಿಕೊಂಡು ತೊಟ್ಟಿಲಲ್ಲಿ ಮಲಗಿಸಿದಳು. ಆಕಾಶದೆತ್ತರಕ್ಕೆ ತೂಗಿದಳು. ನೋಡೋ… ನಿಮ್ಮಣ್ಣನನ್ನೂ ಹೀಗೆ ತೂಗಲಿಲ್ಲ… ತೂಗಲಿಲ್ಲ… ಎಂದು ಅಳಲು ಆರಂಭಿಸಿದಳು. ಆಕೆಯ ಕಣ್ಣೀರು ಕಡಲಾಗಿ ಹರಿದು ತೊಟ್ಟಿಲು ಮುಳುಗಿ ತೇಲಿ ಹೋಗುತ್ತಿತ್ತು. ‘ಅಮ್ಮಾ… ನೀನು ಕಣ್ಣೀರುಗರೆಯಬೇಡಮ್ಮ ನಿಲ್ಲಿಸಮ್ಮ. ನಾನು ಕೊಚ್ಚಿಕೊಂಡು ಹೋಗ್ತೀನಿ…’ ಎಂದು ಚಿಟ್ಟನೆ ಚೀರಿದೆ.

ಅಪ್ಪ ತಮ್ಮ ‘ಯಾರದು ಯಾರದು’ ಎಂದು ಗಡಬಡಾಸಿ ಎದ್ದು ನನ್ನನ್ನು ನೋಡಿದರು. ನಾನು ಹೌದು ಅಲ್ಲೋ ಎಂದು ನಂಬದಾದರು. ಎಂಟು ವರ್ಷಗಳ ಮೇಲೆ ನೋಡಿದ್ದು. ‘ಏ ನಿನ್ನ, ಹೇಳಿ ಬರಬೇಕೋ ಬ್ಯಾಡ. ಒಮ್ಮೆಲೆ ಹೀಂಗ ಬಂದು ಕುಂತರಾ… ನಡಿ ನಡಿ ಮುಖ ತೊಳಕ ನಡಿ. ಅವನ ಹಣೆಬರಹದಲ್ಲಿ ಅಷ್ಟೇ ಬರದಿತ್ತು. ಏನು ಮಾಡೋದು’ ಎಂದು ಅಪ್ಪ ಮುಖಕ್ಕೆ ಅಂಗವಸ್ತ್ರ ಇಟ್ಟುಕೊಂಡು ಅಳಲು ಸುರುವು ಮಾಡಿದ. ಅಪ್ಪ ಹೀಗೆ ಅತ್ತದ್ದು ನಾನು ನೋಡಿದ್ದು ಮೊದಲು. ಹೆತ್ತ ಕರುಳು ಏನೂ ಮಾಡೀತೂ… ಹೇಗೆ ಸಮಾಧಾನಿಸುವುದು. ಸುಮ್ಮನೆ ಮೂಕನಂತೆ ಕುಳಿತೆ. ತಮ್ಮ ನನ್ನನ್ನು ತಬ್ಬಿಕೊಂಡು ‘ಅಣ್ಣಾ…..’ ಎಂದು ಕಣ್ಣೀರಿನಿಂದ ಎದೆ ತೋಯಿಸಿದ. ಗುಡಿಸಲು ಒಳಗಿದ್ದ ಅತ್ತಿಗೆ ಹೊರಗೆ ಬಂದು ನನ್ನನ್ನು ನೋಡುತ್ತಾ ಸುಮ್ಮನೆ ನಿಂತಳು. ಅತ್ತೂ ಅತ್ತೂ ಕಣ್ಣಲ್ಲಿ ನೀರುಬತ್ತಿ ಬಿಳಿಪೇರಿದ್ದವು. ಮುಖದಲ್ಲಿ ಬೆಳ್ಳಗೆ ಕಣ್ಣೊಂದೆ ಕಾಣುತ್ತಿದ್ದವು. ಕರ್ರಗೆ ಕಣ್ಣುಗುಡ್ಡೆಗಳು ನಿಸ್ತೇಜವಾಗಿ ನಿತ್ರಾಣಗೊಂಡಿದ್ದವು. ದುಃಖ ಒತ್ತಿ ಹಿಡಿದಿದ್ದರಿಂದ ಗಂಟಲ ನರಗಳು ಉಬ್ಬಿರುವುದು ಕಾಣುತಿತ್ತು. ಜೋರಾಗಿ ಅಳಬೇಕೆಂದರೂ ಧ್ವನಿ ಬರುತ್ತಿರಲಿಲ್ಲ. ಧ್ವನಿ ಉಸಿರನ್ನೇ ಕಳೆದುಕೊಂಡಿತ್ತು. ನಾನು ಕೈ ಮುಗಿದು ಸುಮ್ಮನೆ ತಲೆತಗ್ಗಿಸಿ ಕುಳತೆ.

ಅಮ್ಮ ಕಾಣುತ್ತಿರಲಿಲ್ಲ, ಎಲ್ಲಿಯಂತ ನೋಡುತ್ತಿದ್ದೆ. ‘ನಿಮ್ಮಮ್ಮ ಎಷ್ಟು ಹೇಳಿದರಾ ಕೇಳವಳ್ಳಲಪಾ… ಅಲ್ಲೇ ಸಮಾಧಿತಕ ಹೋಗಿ ಕುಂತುಬುಡ್ತಾಳ.’ ಎಂದು ಅಪ್ಪ ಸಮಾಧಿ ಕಡೆ ಕೈ ತೋರಿಸಿದ. ಗುಡಿಸಿಲಿಂದ ಸ್ವಲ್ಪ ದೂರದಲ್ಲಿ ಬಿಲ್ವಪತ್ರೆ ಗಿಡ ಇತ್ತು. ಅಲ್ಲಿ ಅಜ್ಜಿಯ ಸಮಾಧಿಯಿತ್ತು. ಅಲ್ಲೇ ಅಣ್ಣನನ್ನು ಸಮಾಧಿ ಮಾಡಿದ್ದರು. ನನಗೆ ಆ ಕಡೆ ನೋಡಲು ಭಯವಾಯಿತು.

‘ಹೋಗಪ್ಪಾ ಹೋಗು. ನಿಮ್ಮಮ್ಮನ ನೋಡು. ಎರಡು ದಿನದಿಂದ ಊಟಿಲ್ಲ ನಿದ್ದಿಲ್ಲ. ಎಷ್ಟೂ ಸಮಾಧಾನ ಮಾಡಿದರೂ ಸುಮ್ಮನಾಗವಲ್ಲಳು. ಅತ್ತೂ ಅತ್ತೂ ಕಣ್ಣೂ ಕತ್ತರಿಸಿ ಬೀಳಂಗ ಆಗ್ಯಾವ. ಬಂದದ್ದು ಅನುಭವಿಸಬೇಕು’ ಎಂದು ನನ್ನ ಕೈ ಹಿಡಕಂಡು ‘ಬೆಳದ ಮಗ ಕಣ್ಣೆದುರಿಗೆ ಹೀಂಗಾದನಲ್ಲಾ. ನೆನಿಸಿಗಂಡರ ಹೊಟ್ಟ್ಯಾಗಾ ಬೆಂಕಿ ಬಿದ್ದಾಂಗ ಆತದ. ಇದೆಲ್ಲಾ ನೋಡಾಕ ದೇವರು ನಮ್ಮನ್ನು ಉಳಿಸ್ಯಾನಪ್ಪಾ….’ ಎಂದು ಇನ್ನಷ್ಟೂ ಕೈಯನ್ನು ಒತ್ತಿಹಿಡಿದರು. ಅಪ್ಪನ ಕಣ್ಣೀರು ನನ್ನ ಅಂಗೈಯನ್ನು ತೋಯಿಸುತ್ತಿತ್ತು.

ರಾತ್ರಿ ಎರಡು ಗಂಟೆಯಾಗಿರಬೇಕು, ಚಂದ್ರ ಕೆಳಗೆ ಇಳಿಯುತ್ತಿದ್ದ. ಪೂರ್ಣ ಬೆಳದಿಂಗಳು ಇದ್ದುದರಿಂದ ಬೆಳಕು ಇತ್ತು. ಅಮ್ಮನ ಮುಖವೂ ಬೆಳದಿಂಗಳಂತೆ ಪೂರ್ಣ ದುಂಡು ಮುಖ. ಹೊಳೆಯುವ ಕಣ್ಣುಗಳು. ಎಲ್ಲವನ್ನು ಸಂತೈಸುವ ಮುಖಭಾವ. ಏನು ಬಂದರೂ ನುಂಗಿಕೊಂಡು ಸಂಸಾರವನ್ನು ಸಂಭಾಳಿಸಿದ ಮಹಾಮಾತೆ. ಅಣ್ಣನು ಅಮ್ಮನಂತೆ. ಅಮ್ಮನಿಗೆ ತುಂಬಾ ಪ್ರೀತಿಯ ಮಗ. ನಮ್ಮನ್ನು ಎಷ್ಟೇ ಪ್ರೀತಿ ಮಾಡಿದರೂ ಮೊದಲ ಆದ್ಯತೆ ಅಣ್ಣನಿಗೆ. ಅಣ್ಣ ಸದಾ ಅಮ್ಮನ ಜೊತೆಗೆ ಇರಬೇಕು. ಅಮ್ಮನಿಗೆ ಅವನನ್ನು ಬಿಟ್ಟಿರಲು ಆಗುತ್ತಿರಲಿಲ್ಲ. ಈಗೆಷ್ಟೂ ತಾಪ ಪಡುವಳೋ ದೇವಾ…… ಹೇಗೆ ಸಂತೈಸುವದು, ಕಾಲು ಮೇಲೇಳುತ್ತಲೇ ಇಲ್ಲ. ಬಾಯಿ ಒಣಗಿ ನೀರು ಕುಡಿಯಬೇಕೆನಿಸಿತು. ಗುಡಿಸಲು ಒಳಗೋಗಿ ಗಡಗಿಯಲ್ಲಿದ್ದ ನೀರು ತುಂಬಿಕೊಂಡು ನೀರು ಬಾಯಿಗಿಟ್ಟೆ. ವಿಷ ತಗುಲಿದಂತಾಯಿತು. ಮೊದಲಿನ ರುಚಿ ನೀರಿಗೆ ಇರಲಿಲ್ಲ. ಎಂಟು ವರ್ಷದಲ್ಲಿ ನೀರಿನ ರುಚಿ ಬದಲಾಗಿತ್ತು. ಹೊರಗೆ ಬಂದೆ. ನಾನು ಮುಖ ಕಿವುಚಿಕಂಡದ್ದನ್ನು ನೋಡಿದ ಅಪ್ಪ ‘ಇಲ್ಲಪ್ಪಾ ಈಗ ಮೊದಲಿನಂಗ ನೀರಿಲ್ಲ. ಎಲ್ಲಾ ಕೆಟ್ಟು ಹೋಗ್ಯಾವ. ಕುಡುದರ ನಂಜು ಕುಡುದಂಗ ಆತದ. ಏನು ಮಾಡಬೇಕು. ನೀರೆ ಹೀಂಗಾದರ ಏನು ಕುಡಿಬೇಕಪ. ನಮಗಂತು ರೂಢಿ ಆಗ್ಯಾದ. ಅಮ್ಮನ ಮಾತಾಡಸು ನಡಿ’ ಎಂದ ಅಪ್ಪನ ಕಾಲುಗಳು ಸ್ವಲ್ಪ ಸೊಟ್ಟ ಆಗಿದ್ದವು. ಕಾಲು ಅಗಲಿಸಿ ನಡೆಯುತ್ತಿದ್ದ. ಹೆಜ್ಜೆ ಕಿತ್ತಿಡಲು ಕಷ್ಟ ಪಡುತ್ತಿದ್ದ. ಮುಖ ಮುಚ್ಚಿಕೊಂಡು ದುಃಖಿಸುತ್ತಿದ್ದ ಅತ್ತಿಗೆಯ ನೆರಳು ಕಾಣುತ್ತಿತ್ತು.

ಗುಡಿಸಲು ಪಕ್ಕ ಇನ್ನೊಂದು ಸಣ್ಣ ಗುಡಿಸಲು ಕಟ್ಟಿದ್ದರು. ಮೊದಲು ಅಲ್ಲಿ ಸಣ್ಣ ಹೂವಿನ ತೋಟವಿತ್ತು. ಕನಕಾಂಬರಿ, ಮಲ್ಲಿಗೆ, ಚಂಡೆ, ದಾಸವಾಳ, ಕಣಗಲೆ ಹೂಗಳು ಅರಳಿರುತ್ತಿದ್ದವು. ಅಪ್ಪ ಅವೆ ಹೂಗಳಿಂದ ದೇವರಿಗೆ ಪೂಜೆ ಮಾಡುತ್ತಿದ್ದ. ಆ ಸಣ್ಣ ಗುಡಿಸಲು ಕಡೆ ನೋಡಿದೆ. ‘ಅದನ್ನೇನು ನೋಡುತ್ತೆಪಾ. ಅದ್ರಾಗ ಹೊಲಕ್ಕ ಹೊಡಿಯೋ ಔಷಧಿ ತುಂಬಿಟ್ಟಾರ. ಈ ಔಷಧಿ ಇಲ್ಲಿ ತುಂಬಿಡುಬ್ಯಾಡರೋ ಎಲ್ಲ್ಯಾರ ಸುಡುಗಾಡದಾಗ ಇಡರಿ. ಅದರ ವಾಸನಿ ನನಗ ಆಗದಿಲ್ಲಂದೆ. ಅಯ್ಯೋ ಅವು ಸಾವಿರಾರು ರುಪಾಯಿ ಬಾಳವು. ನಮ್ಮ ಕಣ್ಣು ಎದುರಿಗೆ ಇರಬೇಕು. ಯಾರನ ತಗಂಡ ಹೋತರಂದು, ಆ ಹೂವಿನ ತೋಟ ಕೆಡಿಸಿ ಈ ಗುಡಿಸಲು ಕಟ್ಟಿದರು. ಅದ್ರಾಗ ಹತ್ತಿ, ಮೆಣಸಿನಕಾಯಿ, ತೊಗರಿ, ತರಕಾರಿ ಎಲ್ಲಾ ಬೆಳೆಗಳಿಗೆ ಹೊಡಿಯೋ ಔಷಧಿ ತುಂಬಿಟ್ಟಾರ. ಅದೊಂದು ವಿಷದ ಕೊಠಡಿ ಆಗ್ಯಾದ. ಈ ಸುಡುಗಾಡು ವಿಷ ಹಾಕಲಾರದ ಯಾವ ಬೆಳೆನು ಬೆಳೋದಿಲ್ಲ. ಈ ವಿಷ ಕೊಂಡುಕೊಳ್ಳಾಕ ಸಾಲ ಮಾಡೀವಿ’ ನಿಧಾನಕ್ಕೆ ಹೆಜ್ಜೆ ಕಿತ್ತಿಟ್ಟು ಮುಂದಕ್ಕೆ ನಡೆದ. ನಾನು ಆತನ ನೆರಳಿನ ಮೇಲೆ ಹೆಜ್ಜೆ ಇಡುತ್ತಾ ಹೊರಟೆ.

ಅಮ್ಮ ಬಿಲ್ವಪತ್ರೆ ಮರದ ಕೆಳಗಿದ್ದ ಅಣ್ಣನ ಸಮಾಧಿ ಮೇಲೆ ಮಲಗಿದ್ದಳು. ಸುಟ್ಟ ಕಟ್ಟಿಗೆಯಂತಾಗಿದ್ದಳು. ಕಣ್ಣಲ್ಲಿ ಜೀವ ಹಿಡಿದಂತೆ ಇದ್ದಳು. ಕಣ್ಣಲ್ಲಿ ಪಿಚ್ಚು ತುಂಬಿತ್ತು. ಕೈಕಾಲು ಸೆಟೆದುಕೊಂಡಿದ್ದವು. ಒಣ ಬೋಕಿಯಂತೆ ಮಲಗಿದ್ದಳು. ಬೆಳದಿಂಗಳಂತ ಅಮ್ಮ ಎಂಟು ವರ್ಷಗಳಲ್ಲಿ ಬಿರುಕುಬಿಟ್ಟ ನೆಲದಂತಾಗಿದ್ದಳು. ನನ್ನಿಂದ ನೋಡಲಾಗಲಿಲ್ಲ. ಕರುಳು ಕಿತ್ತು ಬಂದಂತಾಯಿತು. ರಕ್ತ ಬತ್ತಿದ ದೇಹದಂತಾದೆ. ಒಮ್ಮಲೇ ದುಃಖ ಒತ್ತರಿಸಿಕೊಂಡು ಬಂತು. ‘ಅಮ್ಮಾ…’ ಎಂದು ಬಾಚಿ ತಬ್ಬಿಕೊಂಡೆ. ಮಾತಾಡಲು ಉಸಿರಿಲ್ಲದಂತಾಗಿದ್ದ ಅಮ್ಮ ಪಿಳಿಪಿಳಿ ಕಣ್ಣುಬಿಟ್ಟು ನೋಡಿದಳು. ನನ್ನ ನೋಡಿದ್ದೆ ಜೀವ ಸಂಚಾರವಾದಂತೆ ನನಗಾಗಿ ಕಾದು ಕುಳಿತವಳಂತೆ ‘ಅಯ್ಯೋ… ಮಗನೆ ಬಂದೆಪ್ಪಾ… ನೋಡೋ ನಿಮ್ಮಣ್ಣನ… ಕಣ್ಣು ಮುಂದನೆ ಹೆಣಾಗಿಬಿಟ್ಟನಪ್ಪೋ. ನೋಡೋ ಈ ವಿಷದ ಬಾಟಲಿ… ಇಷ್ಟು ಗಟಗಟ ನೀರು ಕುಡುದಂಗ ಕುಡುದು ಕಣ್ಣು ಮುಚ್ಚಿದನಪ್ಪೋ… ನಮ್ಮ ಬೆಳೆ ವಿಷವುಂಡಾವಂತೇಳಿ ಯಾರು ತಗವಲ್ಲರಂತಪ್ಪೋ… ಹಿಂಗಾದರ ಹೆಂಗಪ್ಪೋ…’ ಎಂದು ನಿತ್ರಾಣಾಗಿ ನೆಲಕ್ಕ ಬಿದ್ದಳು. ‘ಅಮ್ಮಾ ಅಳುಬ್ಯಾಡಮ್ಮೋ ನಾನು ಬಂದೀನಿ’ ಎಂದು ತೊಡೆ ಮೇಲೆ ಮಲಗಿಸಿಕೊಂಡೆ. ‘ಸ್ವಲ್ಪ ನೀರು ಕುಡೆಮ್ಮೋ’ ಎಂದು ಮುಖದ ಮೇಲೆ ನೀರು ಹಾಕಿದೆ. ನೀರು ಬಿದ್ದದಕ್ಕೆ ಸ್ವಲ್ಪ ಅರೆಗಣ್ಣು ಬಿಟ್ಟಳು. ನಾಲ್ಕು ಗುಟುಕು ನೀರು ಕುಡಿದಳು. ಅಪ್ಪ ಅಮ್ಮನ ಕಾಲುಗಳನ್ನು ತೊಡೆ ಮೇಲೆ ಇಟ್ಟುಕೊಂಡು ತಿಕ್ಕಿದ. ಊಟ ನೀರು ನಿದ್ದೆ ಇಲ್ಲದೆ ಹೊಟ್ಟೆ ಬೆನ್ನಿಗತ್ತಿತ್ತು. ‘ಅಯ್ಯೋ… ಮಗನೇ ಎಂತ ಗತಿ ಬಂತಪ್ಪಾ… ಇದೆಲ್ಲಾ ನೋಡಾಕ ನಾವು ಇರಬೇಕನಪಾ… ದೇವರೇ ನಮ್ಮ ಜೀವ ತೆಗಿಬಾರದೇ…’ ಎಂದು ಅಳುವ ಶಕ್ತಿ ಇಲ್ಲದೆ ಕೋತಿ ಮರಿಯಂತೆ ನನ್ನನ್ನು ಅಪ್ಪಿಕೊಂಡಳು.

ಹಳೆಮನೆ ರಾಜಶೇಖರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ


ಇದನ್ನೂ ಓದಿ: ಚಳ್ಳೆ ಹಣ್ಣಿನ ಮರದ ಮಹಿಮೆ: ಚಳ್ಳೆ ಹಣ್ಣಿನ ಉಪಯೋಗಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...