Homeಮುಖಪುಟ'ಸಿಎಂ ಹುದ್ದೆಗೆ 500 ಕೋಟಿ' : ಚರ್ಚೆಗೆ ಕಾರಣವಾದ ನವಜೋತ್ ಕೌರ್ ಹೇಳಿಕೆ; ಕಾಂಗ್ರೆಸ್‌ ಮೇಲೆ...

‘ಸಿಎಂ ಹುದ್ದೆಗೆ 500 ಕೋಟಿ’ : ಚರ್ಚೆಗೆ ಕಾರಣವಾದ ನವಜೋತ್ ಕೌರ್ ಹೇಳಿಕೆ; ಕಾಂಗ್ರೆಸ್‌ ಮೇಲೆ ಮುಗಿಬಿದ್ದ ಎಎಪಿ, ಬಿಜೆಪಿ

- Advertisement -
- Advertisement -

“ಐನೂರು ಕೋಟಿ ರೂಪಾಯಿಯ ಸೂಟ್ ಕೇಸ್ ಕೊಡುವವರು ಸಿಎಂ ಆಗುತ್ತಾರೆ” ಎಂಬ ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಅವರ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ಪಂಜಾಬ್‌ನ ಎಎಪಿ ಮತ್ತು ಬಿಜೆಪಿ ಪಕ್ಷಗಳು ಕಾಂಗ್ರೆಸ್‌ ಅನ್ನು ಒತ್ತಾಯಿಸಿವೆ.

ಶನಿವಾರ (ಡಿಸೆಂಬರ್ 6) ಚಂಡೀಗಢದಲ್ಲಿ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನವಜೋತ್ ಕೌರ್, ಚರ್ಚೆ ಕಾರಣವಾದ ಹೇಳಿಕೆ ನೀಡಿದ್ದಾರೆ.

“ನನ್ನ ಪತಿ ಕಾಂಗ್ರೆಸ್ ಜೊತೆ ಬಲವಾಗಿ ನಿಂತಿದ್ದಾರೆ. ಪಕ್ಷ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ, ಅವರು ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ” ಎಂದು ಮಾಜಿ ಶಾಸಕಿಯೂ ಆದ ನವಜೋತ್ ಕೌರ್ ಮಾಧ್ಯಮಗಳ ಮುಂದೆ ಹೇಳಿದ್ದರು.

“ಆದರೂ, ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ನಿರೀಕ್ಷೆ ನನಗಿಲ್ಲ. ಏಕೆಂದರೆ, ಕಾಂಗ್ರೆಸ್‌ನಲ್ಲಿ ಈಗಾಗಲೇ ಐದು ಮಂದಿ ಸಿಎಂ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಅವರೆಲ್ಲ ಕಾಂಗ್ರೆಸ್ ಅನ್ನು ಸೋಲಿಸಲು ಪಣತೊಟ್ಟು ನಿಂತಿದ್ದಾರೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಅರ್ಥ ಮಾಡಿಕೊಂಡರೆ, ಅದು ಬೇರೆ ವಿಷಯ” ಎಂದಿದ್ದರು.

“ನಾವು ಯಾವಾಗಲೂ ಪಂಜಾಬ್ ಪರವಾಗಿ ಮಾತನಾಡುತ್ತೇವೆ. ಆದರೆ, ಮುಖ್ಯಮಂತ್ರಿ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ನಮ್ಮಲ್ಲಿ 500 ಕೋಟಿ ರೂಪಾಯಿ ಹಣವಿಲ್ಲ” ಎಂದು ಇದೇ ವೇಳೆ ನವಜೋತ್ ಕೌರ್ ಹೇಳಿದ್ದರು.

ಈ ವೇಳೆ ವರದಿಗಾರರು, “ನಿಮ್ಮಲ್ಲಿ ಯಾರಾದರೂ ಹಣ ಕೇಳಿದ್ದಾರೆಯೇ?” ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ನವಜೋತ್ ಕೌರ್, “ಇಲ್ಲ ಹಣ ಕೇಳಿಲ್ಲ, ಆದರೆ 500 ಕೋಟಿ ರೂಪಾಯಿಯ ಸೂಟ್ ಕೇಸ್ ಕೊಟ್ಟವನೇ ಮುಖ್ಯಮಂತ್ರಿಯಾಗುತ್ತಾನೆ” ಎಂದಿದ್ದರು.

2027ರಲ್ಲಿ ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಪ್ರಸ್ತುತ ಅಲ್ಲಿ ಎಎಪಿ ಪಕ್ಷದ ಆಡಳಿತವಿದೆ.

ನವಜೋತ್ ಕೌರ್ ಸಿಧು “ಸತ್ಯವನ್ನೇ ಹೇಳಿದ್ದಾರೆ” ಎಂದು ಆಮ್ ಆದ್ಮಿ ಪಕ್ಷದ ನಾಯಕ ಕುಲದೀಪ್ ಸಿಂಗ್ ಧಲಿವಾಲ್ ಹೇಳಿದ್ದಾರೆ. ಕೌರ್ ಅವರ ಹೇಳಿಕೆಗಳು ಕಾಂಗ್ರೆಸ್ ದೇಶದ “ಅತ್ಯಂತ ಭ್ರಷ್ಟ ಪಕ್ಷ” ಎಂಬುದನ್ನು ಸ್ಪಷ್ಟವಾಗಿ ತೋರಿಸಿವೆ ಎಂದಿದ್ದಾರೆ.

“ಗೆಲ್ಲುವುದು ಬಿಡ, ಕನಿಷ್ಠ ಅಭ್ಯರ್ಥಿಯಾಗಲು 500 ಕೋಟಿ ರೂಪಾಯಿ ಕೊಡಬೇಕು. ಹೀಗಿರುವಾಗ ಆ ಪಕ್ಷದ (ಕಾಂಗ್ರೆಸ್) ಪರಿಸ್ಥಿತಿ ಊಹಿಸಿ. ಪಂಜಾಬ್ ಕಾಂಗ್ರೆಸ್‌ನಲ್ಲಿ ಐವರು ಮುಖ್ಯಮಂತ್ರಿ ಅಭ್ಯರ್ಥಿಗಳು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ” ಎಂದು ಧಲಿವಾಲ್ ಟೀಕಿಸಿದ್ದಾರೆ.

“ರಾಜ್ಯದ ವಿರೋಧ ಪಕ್ಷ ಎಷ್ಟು ವಿಭಜಿತ ಮತ್ತು ದುರ್ಬಲವಾಗಿದೆ ಎಂಬುದನ್ನು ಇದು ತೋರಿಸಿದೆ. ಹಲವರು ಸಿಎಂ ಅಭ್ಯರ್ಥಿಗಳು ಎಂದು ಹೇಳಿಕೊಂಡು ಓಡಾಡುತ್ತಿರುವುದರಿಂದ ಕಾಂಗ್ರೆಸ್‌ಗೆ ದೊಡ್ಡ ಹಾನಿ ಉಂಟಾಗಿದೆ” ಎಂದು ಧಲಿವಾಲ್ ಹೇಳಿದ್ದಾರೆ.

“ಕಾಂಗ್ರೆಸ್ ಹೇಗೆ ಕಾರ್ಯನಿರ್ವಹಿಸುತ್ತದೆ, ನಾಯಕತ್ವವನ್ನು ಹೇಗೆ ನಿರ್ಧರಿಸಲಾಗುತ್ತದೆ ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳು ಮತ್ತು ಹಣಕಾಸಿನ ವ್ಯವಹಾರಗಳಿಗಾಗಿ ಪಂಜಾಬ್‌ನ ಹಿತಾಸಕ್ತಿಗಳನ್ನು ಹೇಗೆ ಬದಿಗಿಡಲಾಗುತ್ತದೆ ಎಂಬುದರ ಕೊಳಕು ಸತ್ಯವನ್ನು ನವಜೋತ್ ಕೌರ್ ಸಿಧು ಅವರ ಹೇಳಿಕೆ ಬಹಿರಂಗಪಡಿಸಿದೆ” ಎಂದು ಆಮ್ ಆದ್ಮಿ ಪಕ್ಷದ ಪಂಜಾಬ್ ಪ್ರಧಾನ ಕಾರ್ಯದರ್ಶಿ ಬಲ್ತೇಜ್ ಪನ್ನು ಬರೆದುಕೊಂಡಿದ್ದಾರೆ.

“ಕೌರ್ ಅವರ ಹೇಳಿಕೆ ತೀವ್ರ ಗೊಂದಲ ಸೃಷ್ಟಿಸುವಂತದ್ದು. ಈ ಬಗ್ಗೆ ಕಾಂಗ್ರೆಸ್‌ನಿಂದ ಉತ್ತರ ಪಡೆಯಲು ಪಂಜಾಬ್‌ನ ಜನರು ಅರ್ಹರು ಎಂದಿದ್ದಾರೆ.

“ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ 500 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಅದನ್ನು ಭರಿಸಲು ನನ್ನ ಪತಿ ನವಜೋತ್ ಸಿಂಗ್ ಸಿಧುಗೆ ಸಾಧ್ಯವಿಲ್ಲ” ಎಂದು ನವಜೋತ್ ಕೌರ್ ಸಿಧು ಸಾರ್ವಜನಿಕವಾಗಿ ಹೇಳುವ ಮೂಲಕ ಕಾಂಗ್ರೆಸ್‌ನಲ್ಲಿನ ‘ಹಣದ ಚೀಲ’ಗಳ ರಾಜಕೀಯವನ್ನು ಬಹಿರಂಗಪಡಿಸಿದ್ದಾರೆ ಎಂದು ಬಿಜೆಪಿ ನಾಯಕ ತರುಣ್ ಚುಗ್ ಹೇಳಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಪತ್ನಿಯೇ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಂದದ ಮೂಲಕ ‘ಖರೀದಿಸಬಹುದು ಎಂದು ಹೇಳಿರುವುದು, ಪಕ್ಷದಲ್ಲಿ ಸಂಪೂರ್ಣ ನೈತಿಕ ಕುಸಿತವನ್ನು ತೋರಿಸಿದೆ ಎಂದು ತರುಣ್ ಚುಗ್ ಟೀಕಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಆಂತರಿಕ ಕಾರ್ಯಚಟುವಟಿಕೆಯು ಪಂಜಾಬ್‌ನ ರಾಜಕೀಯವನ್ನು ಪ್ರಜಾಪ್ರಭುತ್ವ ನಾಯಕತ್ವ ಪ್ರಕ್ರಿಯೆಯ ಬದಲು ಹಣ-ಚಾಲಿತ ಹರಾಜು ವ್ಯವಸ್ಥೆಗೆ ಇಳಿಸಿದೆ ಎಂಬುವುದನ್ನು ಕೌರ್ ಅವರ ಹೇಳಿಕೆ ತೋರಿಸಿದೆ ಎಂದು ತರುಣ್ ಚುಗ್ ಹೇಳಿದ್ದಾರೆ.

ಸಿಧು ಕುಟುಂಬವು ಯಾವುದೋ ಉದ್ದೇಶಕ್ಕಾಗಿ ಪಕ್ಷಕ್ಕೆ ಸೇರಿದೆ ಎಂದು ತೋರುತ್ತಿದೆ. ಈಗ ಅವರು ತಮ್ಮ ಉದ್ದೇಶ ಪೂರ್ಣಗೊಂಡಿದೆ ಎಂದು ನಂಬಿದ್ದಾರೆ. ಪಂಜಾಬ್‌ನ ಜನರಿಗೆ ಸಿಧು ಕುಟುಂಬದ ಕ್ರಮಗಳು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ಸುಖಜಿಂದರ್ ಸಿಂಗ್ ರಾಂಧವ ತಿಳಿಸಿದ್ದಾರೆ.

“ಅವರು [ಸಿಧು ಕುಟುಂಬ] ಮುಖ್ಯಮಂತ್ರಿಯ ಸ್ಥಾನಕ್ಕೆ ಸಮಾನವಾದ ಹುದ್ದೆಯಾದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಾಗ, ಯಾರಿಗೆ ಅವರು ಸೂಟ್‌ಕೇಸ್ ಹಸ್ತಾಂತರಿಸಿದ್ದರು ಮತ್ತು ಎಷ್ಟು ಬೆಲೆಗೆ?” ಎಂದು ರಾಂಧವ ಪ್ರಶ್ನಿಸಿದ್ದಾರೆ.

“ಯಾರಾದರೂ ಹಿಂತಿರುಗಿ ಹೋಗಿ ಈ ಕುಟುಂಬದ ಹಳೆಯ ಸಂದರ್ಶನಗಳು ಮತ್ತು ಪತ್ರಿಕೆಗಳ ಹೇಳಿಕೆಗಳನ್ನು ಓದಿದರೆ, ಅವರು ಕಾಂಗ್ರೆಸ್ ಅನ್ನು ಉಳಿಸಲು ಬಂದಿದ್ದಾರೋ ಅಥವಾ ಅದನ್ನು ಸಂಪೂರ್ಣವಾಗಿ ನಾಶಮಾಡಲು ಬಂದಿದ್ದಾರೋ ಎಂಬುದು ಸ್ಪಷ್ಟವಾಗುತ್ತದೆ ಎಂದು” ಎಂದು ರಾಂಧವ ಕಿಡಿಕಾರಿದ್ದಾರೆ.

“ಅವರು ಬೇರೆ ಪಕ್ಷದ ಶಾಖೆಯಲ್ಲಿ ಕುಳಿತುಕೊಂಡು ಇಂತಹ ಹೇಳಿಕೆಗಳನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಜನರು ನಾಟಕವನ್ನು ಇನ್ನಷ್ಟು ಆನಂದಿಸಬಹುದಿತ್ತು. ಆದರೆ ಈಗ, ಅವರು ಹೊರಡುವಾಗ ಪಕ್ಷದ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ” ಎಂದು ರಾಂಧವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನವಜೋತ್ ಸಿಂಗ್ ಸಿಧು ಸ್ವತಃ [ಬಿಜೆಪಿಗೆ] ಮನೆಗೆ ಮರಳುವ ಮುನ್ನ, ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಸಂತೋಷದಿಂದ ವಿದಾಯ ಹೇಳಿ ಆ ಕಡೆಯ ಬಾಗಿಲು ತೋರಿಸಬೇಕು” ಎಂದು ರಾಂಧವ ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು 2004ರಲ್ಲಿ ಬಿಜೆಪಿಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಆದರೆ 2016 ರಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದರು. ಒಂದು ವರ್ಷದ ನಂತರ ಅವರು ಕಾಂಗ್ರೆಸ್ ಸೇರಿದರು.

2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಎಪಿ ವಿರುದ್ಧ ಸೋತ ನಂತರ, ಸಿಧು ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ವೇಳೆ ಅವರು ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿಯ ಜೀವನ್ ಜ್ಯೋತ್ ಕೌರ್ ವಿರುದ್ಧ ಸೋತಿದ್ದರು.

ತನ್ನ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾದ ಬಳಿಕ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನವಜೋತ್ ಕೌರ್ ಸಿಧು “ನಮ್ಮ ಕಾಂಗ್ರೆಸ್ ಪಕ್ಷ ನಮ್ಮಿಂದ ಎಂದಿಗೂ ಏನನ್ನೂ ಕೇಳಿಲ್ಲ ಎಂಬ ನನ್ನ ಹೇಳಿಕೆಯನ್ನು ತಿರುಚಿದ್ದು ನೋಡಿ ನನಗೆ ಆಘಾತವಾಯಿತು” ಎಂದಿದ್ದಾರೆ.

“ನವಜೋತ್ ಸಿಂಗ್ ಸಿಂಧು ಬೇರೆ ಯಾವುದೇ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಬಗ್ಗೆ ಕೇಳಿದಾಗ, ಮುಖ್ಯಮಂತ್ರಿ ಹುದ್ದೆಗೆ ನೀಡಲು ನಮ್ಮ ಬಳಿ ಹಣವಿಲ್ಲ ಎಂದು ನಾನು ಹೇಳಿದ್ದೆ. ಎಚ್ಚರಿಕೆಯಿಂದ ಆಲಿಸಿ” ಎಂದು ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಕೆಶಿ ಅವಕಾಶ ಕೇಳಿದ್ರು, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ: ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬ ವಿಶ್ವಾಸ ವೈಯಕ್ತಿಕವಾಗಿ ನನಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಡಿಕೆಶಿ ಅವಕಾಶ ಕೇಳಿದ್ದರು. ಆದರೆ, ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ ಎಂದು ಹೈಕಮಾಂಡ್...

ಇಂಡಿಗೋ ಬಿಕ್ಕಟ್ಟು : ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಇಂಡಿಗೋ ವಿಮಾನ ಬಿಕ್ಕಟ್ಟಿಗೆ ಸಂಬಂಧಿಸಿದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ (ಡಿಸೆಂಬರ್ 8) ನಿರಾಕರಿಸಿದೆ. ಈ ವಿಷಯದ ಬಗ್ಗೆ ಭಾರತ ಸರ್ಕಾರ ಈಗಾಗಲೇ ಗಮನ ಹರಿಸಿ ಕ್ರಮ ಕೈಗೊಂಡಿದೆ....

ಮಂಡ್ಯದಲ್ಲಿ ಭೀಕರ ಅಪಘಾತ: ಸೇತುವೆಯಿಂದ ಕೆಳಗೆ ಬಿದ್ದ ಕಾರು: ಒಂದೇ ಕುಟುಂಬದ ಮೂವರು ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಗೆ ಡಿಕ್ಕಿ ಹೊಡೆದು, ಬಳಿಕ ಹಳ್ಳಕ್ಕೆ ಬಿದ್ದಿದ್ದು, ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ನಾಗಮಂಗಲ ತಾಲ್ಲೂಕಿನ ತಿಟ್ಟನಹೊಸಹಳ್ಳಿ ಮತ್ತು ಎ.ನಾಗತಿಹಳ್ಳಿ...

ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆ ಅಸಿಂಧು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ವಿಧಾನಸಭಾ ಕ್ಷೇತ್ರದಿಂದ 2023ರಲ್ಲಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಮಲಯಾಳಂ ನಟ ದಿಲೀಪ್ ಖುಲಾಸೆ

ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ (2017ರ ಪ್ರಕರಣ) ಮಲಯಾಳಂನ ಪ್ರಮುಖ ನಟ ದಿಲೀಪ್ ಅವರನ್ನು ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ (ಡಿಸೆಂಬರ್ 8) ಖುಲಾಸೆಗೊಳಿಸಿದೆ. ನ್ಯಾಯಮೂರ್ತಿ ಹನಿ ಎಂ....

ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ

ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಯ ನಡುವೆ ಇಂದಿನಿಂದ (ಡಿಸೆಂಬರ್ 8) ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಪ್ರಾರಂಭಗೊಂಡಿದೆ. ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಸಂಕಷ್ಟ ಮತ್ತು ಬೆಲೆ ಏರಿಕೆಯ ವಿಷಯಗಳನ್ನು ಮುಂದಿಟ್ಟುಕೊಂಡು...

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...