ಅಮೆರಿಕದ ಅಧಿಕಾರಿಗಳು ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಲಂಚದ ಆರೋಪದ ಮೇಲೆ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸದನದಲ್ಲಿ ಪ್ರತಿಭಟನೆ ನಡೆಸಿದ್ದು, ಹಾಗಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವರ್ಷದ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರದ ಕಲಾಪವನ್ನು ಮುಂದೂಡಲಾಗಿದೆ. “ಈ ನೋಟಿಸ್ಗಳು ಪೀಠವು ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿಲ್ಲ” ಎಂದು ಧಂಖರ್ ನೋಟಿಸ್ಗಳನ್ನು ತಿರಸ್ಕರಿಸಿದ್ದಾರೆ. ಅದಾನಿ – ಮಣಿಪುರ
ಅದಾನಿ ಗ್ರೂಪ್ನ ಆಪಾದಿತ ಭ್ರಷ್ಟಾಚಾರ, ಲಂಚ ಮತ್ತು ಹಣಕಾಸು ಅಕ್ರಮಗಳ ಕುರಿತು ಚರ್ಚೆ ನಡೆಸುವಂತೆ ವಿರೋಧ ಪಕ್ಷದ ಸಂಸದರಿಂದ 13 ನೋಟಿಸ್ಗಳು ಬಂದಿವೆ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಹೇಳಿದ್ದಾರೆ. ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಇತ್ತೀಚೆಗೆ ನಿಧನರಾದ ಐವರು ಸಂಸದರ ಸಂತಾಪ ಸೂಚನೆಗಳನ್ನು ಓದಿದರು ಮತ್ತು ಸದನವು ಒಂದು ನಿಮಿಷ ಮೌನ ಆಚರಿಸಿತು. ಅದಾನಿ – ಮಣಿಪುರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಣಿಪುರ ಮತ್ತು ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಕುರಿತು ಚರ್ಚೆಗಳು ಮತ್ತು ಈ ವರ್ಷದ ಆರಂಭದಲ್ಲಿ ವಯನಾಡ್ ಭೂಕುಸಿತದ ಸಂತ್ರಸ್ತರಿಗೆ ನೆರವು ಕೋರಿ ವಿರೋಧ ಪಕ್ಷದ ಸಂಸದರು ನೋಟಿಸ್ಗಳನ್ನು ಸಲ್ಲಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅದಾನಿ ವಿವಾದದ ಬಗ್ಗೆ ಚರ್ಚೆಯೊಂದಿಗೆ ಸಂಸತ್ತಿನ ಅಧಿವೇಶನವನ್ನು ಪ್ರಾರಂಭಿಸಬೇಕು. ಈ ವಿವಾದವೂ ಭಾರತದ ಜಾಗತಿಕ ಚಿತ್ರಣಕ್ಕೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ. ಕೋಟಿಗಟ್ಟಲೆ ಚಿಲ್ಲರೆ ಹೂಡಿಕೆದಾರರ ಕಷ್ಟಪಟ್ಟು ಗಳಿಸಿದ ಹೂಡಿಕೆಗಳು ಅಪಾಯದಲ್ಲಿದೆ ಎಂದು ಇಂಡಿಯಾ ಒಕ್ಕೂಟದ ಪಕ್ಷಗಳು ಇಂದು ಬೇಡಿಕೆ ಇಟ್ಟಿವೆ ಎಂದು ಖರ್ಗೆ ಹೇಳಿದ್ದಾರೆ.
“ಈ ದೇಶವನ್ನು ನಡೆಸಲು ನಮಗೆ ಏಕಸ್ವಾಮ್ಯ ಮತ್ತು ಕಾರ್ಟೆಲ್ಗಳ ಅಗತ್ಯವಿಲ್ಲ. ನಮಗೆ ಖಾಸಗಿ ವಲಯದಲ್ಲಿ ಆರೋಗ್ಯಕರ ಮಾರುಕಟ್ಟೆ ಚಾಲಿತ ಸ್ಪರ್ಧೆಯ ಅಗತ್ಯವಿದೆ. ಹೀಗಿದ್ದಾಗ ಸಮಾನ ಅವಕಾಶಗಳು, ಉದ್ಯೋಗ ಮತ್ತು ಸಂಪತ್ತಿನ ಸಮಾನ ವಿತರಣೆಯನ್ನು ಸುಗಮಗೊಳಿಸುತ್ತದೆ. ಭಾರತದ ಅಂತರ್ಗತ ಉದ್ಯಮಶೀಲತಾ ಮನೋಭಾವವನ್ನು ಪೂರೈಸುತ್ತದೆ” ಎಂದು ಅವರು ಖರ್ಗೆ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷಗಳು ಅಮೆರಿಕದಲ್ಲಿ ಗೌತಮ್ ಅದಾನಿ ಅವರ ದೋಷಾರೋಪಣೆಯ ಕುರಿತು ಚರ್ಚೆಯನ್ನು ಕೋರಿದ್ದು, ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಬಿಜೆಪಿ ಸಂಸದೆ ಸಂಧ್ಯಾ ರೇ ಅವರ ಅಧ್ಯಕ್ಷತೆಯಲ್ಲಿ ಕಲಾಪ ಪುನರಾರಂಭಗೊಂಡಾಗ ಪ್ರತಿಪಕ್ಷಗಳು ಮತ್ತೆ ಗದ್ದಲ ಎಬ್ಬಿಸಿದ್ದರಿಂದ ಸದನವನ್ನು ಬುಧವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.
ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿನ ಸೋಲಿಗೆ ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷನದಲ್ಲಿ ಆರೋಪಿಸಿದ್ದಾರೆ. ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ತಮ್ಮ ಗುರಿಯನ್ನು ಸಾಧಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ. “ಹೊಸ ಆಲೋಚನೆಗಳು ಮತ್ತು ಉತ್ಸಾಹ ಹೊಂದಿರುವ ಸಂಸತ್ತಿನ ಹೊಸ ಮತ್ತು ಯುವ ಸದಸ್ಯರು ಮಾತನಾಡಲು ಸಾಧ್ಯವಾಗುವುದಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ.” ಎಂದು ಅವರು ಹೇಳಿದ್ದಾರೆ.
ನವೆಂಬರ್ 20 ರಂದು, ಅಮೆರಿಕದ ಅಧಿಕಾರಿಗಳು ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಹು-ಬಿಲಿಯನ್ ಡಾಲರ್ ಲಂಚ ಮತ್ತು ವಂಚನೆ ಯೋಜನೆಯಲ್ಲಿ ದೋಷಾರೋಪಣೆಯನ್ನು ಘೋಷಿಸಿದ್ದಾರೆ. ಅದಾನಿ ಗ್ರೂಪ್ನ ಸಂಸ್ಥಾಪಕ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿಗೆ ಕೂಡಾ ನ್ಯಾಯಾಧೀಶರು ಬಂಧನ ವಾರಂಟ್ಗಳನ್ನು ಹೊರಡಿಸಿದ್ದಾರೆ.
ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಸೇರಿದಂತೆ ಇತರ ಏಳು ಜನರು ಸುಮಾರು 20 ವರ್ಷಗಳಲ್ಲಿ 2 ಬಿಲಿಯನ್ ಡಾಲರ್ ಅಥವಾ 16,880 ಕೋಟಿ ರೂಗಳು ಲಾಭವಿರುವ ವ್ಯಾಪಾರಿ ಒಪ್ಪಂದವನ್ನು ಒಪ್ಪಿಕೊಳ್ಳಲು 2020 ಮತ್ತು 2024 ರ ನಡುವೆ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ ಅಥವಾ ಸುಮಾರು 2,236 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡುವ ಬಗ್ಗೆ ಒಪ್ಪಿಕೊಂಡಿದ್ದರು ಎಂದು ಅಮೆರಿಕಾದ ಅಟಾರ್ನಿ ಕಚೇರಿಯಿಂದ ಹೇಳಿಕೆಯಲ್ಲಿ ಆರೋಪಿಸಲಾಗಿದೆ.
ಈ ದೋಷಾರೋಪಣೆಯು ಭಾರತದಲ್ಲಿ ರಾಜಕೀಯವಾಗಿ ಕೋಲಾಹಲ ಉಂಟಾಗಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗೌತಮ್ ಅದಾನಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಅಧ್ಯಕ್ಷ ಕೂಡಾ ಮೋದಿಯನ್ನು ಕೇಳಿ ಎಲ್ಲವೂ ನಿರ್ಧರಿಸುತ್ತಾರೆ – ಬಿಜೆಪಿ ಶಾಸಕ ಹರೀಶ್ ಪೂಂಜಾ ಪ್ರತಿಪಾದನೆ
ಅಮೆರಿಕದ ಅಧ್ಯಕ್ಷ ಕೂಡಾ ಮೋದಿಯನ್ನು ಕೇಳಿ ಎಲ್ಲವೂ ನಿರ್ಧರಿಸುತ್ತಾರೆ – ಬಿಜೆಪಿ ಶಾಸಕ ಹರೀಶ್ ಪೂಂಜಾ ಪ್ರತಿಪಾದನೆ


