ಅಧ್ಯಾತ್ಮ ಎಂಬುದು ಆಂಗಿಕ ಅಭಿನಯವಲ್ಲ; ಯಾವುದರಿಂದಲೋ ಪಡೆದುಕೊಳ್ಳುವಂತಹದ್ದೂ ಅಲ್ಲ. ಅದು ನಾವೇ ಕಂಡುಕೊಳ್ಳಬೇಕಾದ ಅನುಭವ ಎಂದು ಜಾನಪದ ವಿದ್ವಾಂಸರಾದ ಡಾ.ಕೃಷ್ಣಮೂರ್ತಿ ಹನೂರು ಹೇಳಿದರು.
ಗೌರಿ ಮೀಡಿಯಾ ಟ್ರಸ್ಟ್ ವತಿಯಿಂದ ಮೈಸೂರಿನ ಸುರುಚಿ ರಂಗಮನೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆರ್.ಸಂತೋಷ್ ನಾಯಕ್ ಅನುವಾದಿಸಿರುವ ಮುಕುಂದ ರಾವ್ ಅವರ ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃತಿ ಲೋಕಾರ್ಪಣೆ ಮಾಡಿದ ಅವರು, ಅಧ್ಯಾತ್ಮ ಕ್ಷೇತ್ರದ ಆಳ ಅಗಲಗಳ ಕುರಿತು ವಿವರಿಸಿದರು. ವಚನ ಸಾಹಿತ್ಯ, ಜಾನಪದ ಸಾಹಿತ್ಯ, ಜಾನಪದ ಪರಂಪರೆಯಲ್ಲಿ ಅಡಗಿರುವ ಆಧ್ಯಾತ್ಮಿಕ ಸೆಲೆಗಳ ಕುರಿತು ಚರ್ಚಿಸಿದರು.
ವಚನಕಾರ್ತಿ ಅಕ್ಕ ಮಹಾದೇವಿ ‘ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕರೆಹಳ್ಳ ಬಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು. ಆತ್ಮ ಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನುಂಟು’ ಎಂದಿರುವುದನ್ನು ಉಲ್ಲೇಖಿಸಿದ ಅವರು, ಅಕ್ಕ ಮಹಾದೇವಿಯವರು ಇಹಲೋಕದ ಬಗ್ಗೆ ಮಾತನಾಡುತ್ತಿರುವುದನ್ನು ಸ್ಮರಿಸಿದರು.
ಶಿರವಷ್ಟೇ ಅಲ್ಲ, ಪಾದವೂ ಮುಖ್ಯ ಎಂದು ಜನಪದರು ಸಾರಿದ್ದಾರೆ. ಹೀಗಾಗಿ ‘ನಿನ್ನ ಪಾದಕ್ಕರುವಾಗಲಪ್ಪ’ ಎಂದು ಹಾಡಿದ್ದಾರೆ. ಆದಿ ಜ್ಯೋತಿ, ಬೀದಿ ಜ್ಯೋತಿ, ಎಲ್ಲೆಲ್ಲೂ ಜ್ಯೋತಿಯನ್ನು ಕಂಡ ಜನಪದರು, ತಿಪ್ಪೆಯ ಮೇಲೆ ಪರಂಜ್ಯೋತಿಯನ್ನು ಕಂಡಿದ್ದು ಬಹುದೊಡ್ಡ ಸಂದೇಶ ಎಂದು ಬಣ್ಣಿಸಿದರು.
ಇದನ್ನೂ ಓದಿರಿ: ಬುದ್ಧನ ಹೆಜ್ಜೆ ಗುರುತುಗಳು; ತಿಚ್ ನ್ಹಾತ್ ಹಾನ್ ಬರಹದ ಅನುವಾದ
ತಮ್ಮ ಕ್ಷೇತ್ರ ಕಾರ್ಯವನ್ನು ಮೆಲುಕು ಹಾಕಿದ ಅವರು, “ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಾವೇರಿ ನದಿ ಪಕ್ಕದಲ್ಲಿ ಅಲ್ಲಮನ ಗದ್ದುಗೆ ಇದೆ ಎಂದು ಜನರು ತೋರಿಸಿದರು. ಅಲ್ಲಿ ಏನೂ ಇರಲಿಲ್ಲ. ಎರಡು ಪಾದ ಮಾತ್ರ ಇತ್ತು. ಮತ್ತೊಂದು ಕಡೆ ಕನಕದಾಸರು ಬಂದಿದ್ದ ಸ್ಥಳವೆಂದು ತೋರಿಸಿದ್ದರು. ಅಲ್ಲಿ ಖಾಲಿ ಕೋಣೆ ಮಾತ್ರ ಇತ್ತು. ಅಂದರೆ ಶೂನ್ಯ ಕೋಣೆ. ಅಧ್ಯಾತ್ಮದ ತುದಿ ಇದೆಯಲ್ಲ ಅದು ಘನ ನೀಲಿ. ನಮ್ಮಂಥ ನಿಮ್ಮಂಥವರಿಗೆ ಸಾಧ್ಯವಾಗದ ತುದಿಯದು. ಸಾಧ್ಯವಾದರೆ ಸಂತೋಷ” ಎಂದು ತಿಳಿಸಿದರು.

ಹಗಲು ನಮ್ಮ ಕಣ್ಣಿಗೆ ಕಾಣಿಸದೆ ಹೋಗಬಹುದು. ಆದರೆ ರಾತ್ರಿ ಇದೆಯಲ್ಲ, ಹೊಳೆಯುವ ಬೆಳಗನ್ನು ತೋರಿಸಬಹುದು. ಆದರೆ ನಾವು ಇದಕ್ಕೆ ವಿರುದ್ಧವಾಗಿ ತಿಳಿದುಕೊಂಡಿದ್ದೇವೆ. ಭ್ರಮೆ ಮತ್ತು ವಾಸ್ತವ ಕೃತಿಯಲ್ಲಿ ಇದ್ದದ್ದನ್ನು ಇದ್ದಂತೆ ಹೇಳಲಾಗಿದೆ. ಇಂಥದ್ದೇ ಅಧ್ಯಾತ್ಮ ಎಂದೂ ಬೊಟ್ಟು ಮಾಡುವುದಿಲ್ಲ ಎಂದು ವಿವರಿಸಿದರು.
ರಮಣ ಮಹರ್ಷಿಯವರು ಕ್ಯಾನ್ಸರ್ ಬಗ್ಗೆ ಮಾತನಾಡುತ್ತಾ, ಅದರ ಪಾಡಿಗೆ ಅದು ಬಂದರೆ ನಾವೇಕೆ ವಿಚಲಿತರಾಗಬೇಕು ಎಂದಿದ್ದರು. ಕಳ್ಳರು ಆಶ್ರಮಕ್ಕೆ ಬಂದಿದ್ದಾರೆ ಎಂದಾಗ ರಮಣ ಮಹರ್ಷಿಯವರು, ಅವರು ಬಂದಿದ್ದಾರೆ ತಮ್ಮ ಕೆಲಸ ಮುಗಿಸಿಕೊಂಡು ಹೋಗ್ತಾರೆ ಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದರು. ಬಹಳ ಒಳ್ಳೆಯ ಕಳ್ಳತನ, ಬಹಳ ಒಳ್ಳೆಯ ಭ್ರಷ್ಟಾಚಾರ ಇವೆಲ್ಲವೂ ಇದೆ. ಆ ರೀತಿಯಲ್ಲಿ ಮುಕುಂದ್ರಾವ್ ಮಾತನಾಡುತ್ತಾರೆ. ಅವರು ಅಧ್ಯಾತ್ಮದ ಪರ ವಹಿಸಿಯೂ ಅದನ್ನು ವಿರೋಧಿಸಿಯೂ ಮಾತನಾಡಲ್ಲ. ಈ ಕಾರಣಕ್ಕೆ ಈ ಕೃತಿ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂತರ ಅನುಯಾಯಿಗಳಿಗೆ ನಿಷ್ಠುರ ಪ್ರಜ್ಞೆ ಮುಖ್ಯ: ಡಾ.ರಂಗನಾಥ್
ವಿಮರ್ಶಕರಾದ ಡಾ.ರಂಗನಾಥ್ ಕಂತನಕುಂಟೆ ಮಾತನಾಡಿ, “ಈ ಕೃತಿಯು ಅಧ್ಯಾತ್ಮದ ಪ್ರವಾಸ ಕಥನದ ಹಾಗೆ ಇದೆ. ಅಧ್ಯಾತ್ಮದ ಅನುಭವದ ಹುಡುಕಾಟದಲ್ಲಿ ಆಸಕ್ತಿ ಇರುವವರ ನಿಜದ ವ್ಯಕ್ತಿತ್ವ ಯಾವ ರೀತಿ ಇರುತ್ತದೆ ಎಂಬುದು ಇಲ್ಲಿ ವ್ಯಕ್ತವಾಗಿದೆ” ಎಂದು ತಿಳಿಸಿದರು.
“ಅನುಭಾವ ಎಂಬುವುದು ಸಾಹಿತ್ಯದ ವಿದ್ಯಾರ್ಥಿಗಳಾದ ನಮಗೆ ಕಾಣಿಸುವ ಬಗೆ ಬೇರೆ. ಆದರೆ ಲೋಕರೂಢಿಯಾಗಿ, ಬಹಳ ಜನಪ್ರಿಯವಾಗಿ ಬೆಳೆದಿರುವ ಗುರುಗಳು, ಸದ್ಗುರುಗಳು ಅಧ್ಯಾತ್ಮವನ್ನು ಮಾರುಕಟ್ಟೆ ಮಾಡಿಕೊಂಡು ಬಹುರಾಷ್ಟ್ರೀಯ ಕಂಪನಿಗಳಂತೆ ಆಶ್ರಮಗಳನ್ನು, ಮಠಗಳನ್ನು ಬೆಳೆಸಿಕೊಂಡಿದ್ದಾರೆ” ಎಂದು ವಿಷಾದಿಸಿದರು.
ಇದನ್ನೂ ಓದಿರಿ: ಓಶೋ ಕಂಡಂತೆ ವಿವೇಕಾನಂದರು
ನಾವು ಸಾಗುತ್ತಿರುವ ಹಾದಿಯಲ್ಲಿ ಯಾರನ್ನು ನಾವು ಗುರುಗಳೆಂದು ಭಾವಿಸಿರುತ್ತೇವೋ ಅವರ ಅಂತರಂಗ ಬಹಿರಂಗಳನ್ನು ಅರಿತುಕೊಂಡು ಟೊಳ್ಳುತನವನ್ನು ಬಯಲು ಮಾಡುವುದು ಮುಖ್ಯ. ಇಂದು ಸಂತರೆಂದು ಬಿಂಬಿಸಿಕೊಳ್ಳುತ್ತಿರುವವರ ಅನುಯಾಯಿಗಳು ನಿಷ್ಠುರ ಪ್ರಜ್ಞೆಯನ್ನೂ ಉಳಿಸಿಕೊಳ್ಳದೆ ಸಂಪೂರ್ಣವಾಗಿ ಕುರುಡಾಗಿ ಕಾಲಿಗೆ ಬೀಳುತ್ತಿದ್ದಾರೆ. ಯಾಕೆಂದರೆ ಅವರಿಗೆ ಅಧಾತ್ಮದ ತಿಳಿವಳಿಕೆಯ ಕೊರತೆ ಇದೆ ಎಂದರು.
ಜಗದ್ಗುರುಗಳಿಗೆ ಬಲಿಯಾಗುತ್ತಿರುವವರು ಅನಕ್ಷರಸ್ಥರಲ್ಲ. ಅವರೆಲ್ಲರೂ ಪದವೀಧರರು, ಸಾಧಕರು, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸದಲ್ಲಿರುವವರು. ಜಗದ್ಗುರುಗಳ, ಸದ್ಗುರುಗಳ ಪಾದದಲ್ಲಿ ಬಿದ್ದು ಹೊರಳಾಡುವ ಗುಲಾಮಗಿರಿಯನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ. ನಿಷ್ಠುರವಾದ ಮಾತುಗಳನ್ನು ಅಧ್ಯಾತ್ಮಿಕ ಗುರುಗಳ ಕುರಿತು ಈ ಕೃತಿಯಲ್ಲಿ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಅನುವಾದದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಅನೇಕರು ಇಂಗ್ಲಿಷ್ ಅನುವಾದ ಮಾಡುವಾಗ ಕನ್ನಡದ ಜಾಯಮಾನಕ್ಕೆ ಹೊಂದದ ಪದಗಳನ್ನು ಬಳಸಿಬಿಡುತ್ತಾರೆ. ಅದು ಅನುವಾದ ಎನಿಸುವುದೇ ಇಲ್ಲ. ಆದರೆ ‘ಬಿಟ್ವಿನ್ ದ ಸಸ್ಟೆಂಟ್ ಅಂಡ್ ದ ರೋಪ್’ ಕೃತಿಯನ್ನು ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ಸಂತೋಷ್ ನಾಯಕ್ ಅನುವಾದ ಮಾಡಿದ್ದಾರೆ” ಎಂದರು.
ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಿ.ಶೋಭಾ ಮಾತನಾಡಿ, “ಭ್ರಮೆಗಳನ್ನು ತುಂಬಿಕೊಂಡಾಗ ನಾವು ವಾಸ್ತವದಲ್ಲಿ ಬದುಕಲು ಆಗಲ್ಲ. ಇಡೀ ಕೃತಿಯುದ್ದಕ್ಕೂ ಮುಕುಂದರಾವ್ ಅವರ ಆಧ್ಯಾತ್ಮಿಕ ಪಯಣ ಢಾಳಾಗಿ ಚಿತ್ರಿತವಾಗಿದೆ. ಬಾಲ್ಯದಿಂದಲೂ ಅವರು ಆಧ್ಯಾತ್ಮಿಕದ ಪಯಣ ಮಾಡಿರುವುದನ್ನು ಇಲ್ಲಿ ಕಾಣಬಹುದು” ಎಂದು ತಿಳಿಸಿದರು.
‘ವಿಜಯವಾಣಿ’ ದಿನಪತ್ರಿಕೆಯ ಹಿರಿಯ ಉಪಸಂಪಾದಕ ಮುಳ್ಳೂರು ರಾಜು ಮಾತನಾಡಿ, “ನಾವೆಲ್ಲರೂ ಭ್ರಮೆ ಹಾಗೂ ವಾಸ್ತವಗಳ ನಡುವೆ ಬದುಕುತ್ತಲೇ ಇದ್ದೇವೆ. ಭ್ರಮೆ ಹಾಗೂ ವಾಸ್ತವ ಯಾವುದು ಎಂದು ಈ ಕೃತಿಯಿಂದ ತಿಳಿಯುತ್ತದೆ. ಭ್ರಮೆಗಳ ಕುರಿತು ತಿಳಿಯದಿದ್ದರೆ ಮತ್ತೊಬ್ಬರು ನಮ್ಮಿಂದ ಲಾಭ ಮಾಡಿಕೊಳ್ಳುತ್ತಿರುತ್ತಾರೆ” ಎಂದು ಎಚ್ಚರಿಸಿದರು.
ಗೌರಿ ಮೀಡಿಯಾ ಟ್ರಸ್ಟ್ ಅಧ್ಯಕ್ಷರಾದ ನಗರಗೆರೆ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಕರ್ತೃ ಮುಕುಂದ ರಾವ್, ಅನುವಾದಕ ಆರ್.ಸಂತೋಷ್ ನಾಯಕ್, ಅರಿವು ಶಾಲೆ ಶಿಕ್ಷಕಿ ಜೆ.ರಜನಿ, ಪ್ರಗತಿಪರ ಹೋರಾಟಗಾರರಾದ ದೊಡ್ಡಿಪಾಳ್ಯ ನರಸಿಂಹಮೂರ್ತಿ, ‘ನ್ಯಾಯಪಥ’ ವಾರಪತ್ರಿಕೆಯ ಸಂಪಾದಕರಾದ ಡಿ.ಎನ್.ಗುರುಪ್ರಸಾದ್ ಹಾಜರಿದ್ದರು. ಅರಿವು ಶಾಲೆಯ ಮನೋಹರ್ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿರಿ: ವಿಪರೀತದ ಬೆಳಗು ಫುಲೆ ಮಾರ್ಗ


