Homeಮುಖಪುಟಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ಒಮ್ಮೆ ಕೊಕೋಕೋಲಾ ಕಂಪನಿಯ ಛೇರ್ಮನ್ ಹೀಗಂದಿದ್ದ: ’ನನ್ನ ಕಾರ್ಖಾನೆಗಳಿಗೆಲ್ಲಾ ಬೆಂಕಿಬಿದ್ದರೆ ನನಗೇನೂ ನಷ್ಟವಿಲ್ಲ. ಏಕೆಂದರೆ ಅವು ಯಾವುವೂ ನಮ್ಮದಲ್ಲ. ನಮ್ಮದು ಕೇವಲ ಬ್ರಾಂಡ್ ಮಾತ್ರ ಎಂದು.

- Advertisement -
- Advertisement -

ಗುಡ್ ಲೈಫ್ ಬಾಸುಮತಿ ಅಕ್ಕಿ ಬಳಸಿ, ಹೆಲ್ದಿ ಲೈಫ್ ತುಪ್ಪ, ಬೆಸ್ಟ್ ಫಾರ್ಮ್ಸ್ ಮಸಾಲಾ, ಡಿಲೈಟ್ ಮಾಂಸ ಹಾಕಿ ಬಿರಿಯಾನಿ ಮಾಡಿ ಊಟ ಮಾಡಿ, ಎನ್ಸೋಮಾಟಿಕ್ ಸೋಪಿನಲ್ಲಿ ಕೈತಟ್ಟೆ ತೊಳೆದುಕೊಂಡೆವು ಎಂದುಕೊಳ್ಳೋಣ. ಈ ಎಲ್ಲಾ ಆಹಾರ ಪದಾರ್ಥಗಳನ್ನೂ ಯಾವುದೋ ಗುಡಿ ಕೈಗಾರಿಕೆಯಲ್ಲೇ ತಯಾರಾಗಲ್ಪಟ್ಟದ್ದು ಎಂದರೂ ಮತ್ತು ಈ ದವಸ ಧಾನ್ಯಗಳನ್ನು ಯಾವುದೋ ಸಣ್ಣ ರೈತರ ಹೊಲದಲ್ಲೇ ಬೆಳೆದದ್ದಾದರೂ ರಿಲಾಯನ್ಸ್ ಕಂಪನಿಯ ಅಂಬಾನಿಗೆ ಸಂಬಂಧ ಹೆಣೆಯುವುದು ಹೇಗೆ ಎಂದು ಅಮಾಯಕ ಗ್ರಾಹಕನೊಬ್ಬ ಕೇಳಬಹುದು. ಮಾರುಕಟ್ಟೆಯ ಮರ್ಮ ಬಲ್ಲವರಿಗೆ ನಾವು ಬಳಸಿದ ದವಸಧಾನ್ಯಗಳೆಲ್ಲವೂ ರಿಲಾಯನ್ಸ್ ಕಂಪನಿಯ ಖಾಸಗೀ ಲೇಬಲ್‌ಗಳಾಗಿವೆ (ಪ್ರೈವೇಟ್ ಲೇಬಲ್) ಎಂಬುದು, ದೈತ್ಯ ರೀಟೇಲ್ ವ್ಯಾಪಾರವನ್ನು ಡೀಟೇಲಾಗಿ ಅಧ್ಯಯನ ಮಾಡಿದರೆ ತಿಳಿದುಬರುವ ವಿಷಯ.

ಬ್ರಾಂಡ್ ಅವರದ್ದೇ ಆದರೂ ಅದನ್ನು ಅವರು ತಯಾರು ಮಾಡುವುದಿಲ್ಲ ಅಥವಾ ಅದನ್ನು ಬೆಳೆಯುವುದಿಲ್ಲ. ಒಮ್ಮೆ ಕೊಕೋಕೋಲಾ ಕಂಪನಿಯ ಛೇರ್ಮನ್ ಹೀಗಂದಿದ್ದ: ’ನನ್ನ ಕಾರ್ಖಾನೆಗಳಿಗೆಲ್ಲಾ ಬೆಂಕಿಬಿದ್ದರೆ ನನಗೇನೂ ನಷ್ಟವಿಲ್ಲ. ಏಕೆಂದರೆ ಅವು ಯಾವುವೂ ನಮ್ಮದಲ್ಲ. ನಮ್ಮದು ಕೇವಲ ಬ್ರಾಂಡ್ ಮಾತ್ರ ಎಂದು. ರೈತರ ಹೊಲದಲ್ಲಿ ರೈತ ಕುಟುಂಬವನ್ನೇ ಕೂಲಿ ಕಾರ್ಮಿಕರಾಗಿ ದುಡಿಸಿಕೊಂಡು ನಮಗೆ ಬೇಕಾದ ಬೆಳೆಯನ್ನು ಬೆಳೆದು ಅವನಿಗೆ ಕೇಜಿಗೆ ಒಂದೋ ಎರಡೋ ರುಪಾಯಿ ಕೊಟ್ಟು ಪಡೆದುಕೊಳ್ಳುವುದಕ್ಕೆ ಈಗ ಹೊಸದಾಗಿ ಬಂದಿರುವ ಕಾಂಟ್ರಾಕ್ಟ್ ಕೃಷಿ ಸಂಪೂರ್ಣವಾಗಿ ಸಹಾಯಮಾಡುತ್ತದೆ.

ಹಾಗೆಯೇ ದೇಶದ 1.3 ಕೋಟಿ ಕಿರಾಣಿ ಅಂಗಡಿಗಳನ್ನು ದೈತ್ಯ ರೀಟೇಲ್ ಬ್ರಾಂಡ್‌ಗಳ ಅಡಿಯಲ್ಲಿ ದುಡಿಸಿಕೊಳ್ಳುವುದು ಮತ್ತು ಅವರ ಮೂಲಕ ರಿಲಾಯನ್ಸ್ ಅಂತ ಕಂಪನಿಗಳ ಬ್ರಾಂಡುಗಳನ್ನೇ ಮಾರಾಟ ಮಾಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಕಲ್ಪಿಸಿಕೊಡಲಾಗುತ್ತಿದೆ. ಫೇಸ್ಬುಕ್ ಮೂಲಕ ಆರ್ಡರ್ ಮಾಡಿ ವಾಟ್ಸಾಪ್ ಮೂಲಕ ಹಣ ಕೊಟ್ಟು, ಚಿಲ್ಲರೆ ವ್ಯಾಪಾರಿಗಳಿಗೆ ಮೊದಮೊದಲು ಸಾಲ ಕೊಟ್ಟು, ಹೆಚ್ಚು ಮಾರ್ಜಿನ್ ಹಣ ಬಿಟ್ಟುಕೊಟ್ಟು ತಮಗೆ ದುಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ಫೇಸ್ಬುಕ್, ವಾಟ್ಸಾಪ್, ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಟೆಕ್ ಕಂಪನಿಗಳು ಚಿಲ್ಲರೆ ವ್ಯಾಪಾರಕ್ಕಿಳಿದಿರುವ ರಿಲಾಯನ್ಸ್ ಕಂಪನಿಗೆ ಹಣ ಹೂಡಿರುವುದು. ಇದರ ಜೊತೆಗೆ ಖಾಸಗಿ ಕಂಪನಿಯವರು ಬ್ಯಾಂಕ್ ಕೂಡಾ ಮಾಡಬಹುದೆಂದು ಆರ್‌ಬಿಐ ವರದಿ ಹೇಳುತ್ತದೆ. ಹಿಂದೆ ಬರ್ಟೋಲ್ಟ್ ಬ್ರೆಕ್ಟ್ ಹೀಗೆಂದಿದ್ದ: ’ಬ್ಯಾಂಕಿಗೆ ಕನ್ನಾ ಹಾಕುವುದು ಬೇಡ, ಬ್ಯಾಂಕನ್ನೇ ಶುರು ಮಾಡುವುದು ಒಳ್ಳೆಯದು’ ಎಂದು. ಆಗ ಜನರೇ ಸಾಲಾಗಿ ನಿಂತು ಹಣಹಾಕಿ ಹೋಗುತ್ತಾರೆ. ಅದನ್ನು ನಮ್ಮ ವ್ಯಾಪಾರಕ್ಕೆ ತಕ್ಕಂತೆ ಬಳಸಿ ಏಕಸ್ವಾಮ್ಯತೆಯನ್ನು ಸ್ಥಾಪಿಸಬಹುದು.

ನಮ್ಮಲ್ಲಿ ಸುಮಾರು 14 ಕೋಟಿ ರೈತ ಕುಟುಂಬ, ಸುಮಾರು 12 ಕೋಟಿ ಕೃಷಿ ಅವಲಂಬಿತ ಕೂಲಿಕಾರ್ಮಿಕರು, 6.3 ಕೋಟಿ ಗುಡಿ ಕೈಗಾರಿಕೆಗಳು, 1.3 ಕೋಟಿ ಚಿಲ್ಲರೆ ವ್ಯಾಪಾರಿಗಳು ಇದ್ದಾರೆ. ಈ ರೀತಿ ಈ ದೇಶದ ಶೇ. 90ರಷ್ಟು ಜನ ಬದುಕಿನ ದಾರಿ ಕಂಡುಕೊಂಡಿದ್ದಾರೆ. ಅಲ್ಲದೇ ತಮ್ಮದೇ ಆದ ರೀತಿಯಲ್ಲಿ ಸ್ವತಂತ್ರರೂ, ಸಾರ್ವಭೌಮರೂ ಆಗಿದ್ದಾರೆ. ಅವರಿಗೆ ಕಷ್ಟಗಳಿಲ್ಲವೆಂದಲ್ಲ. ಆದರೆ ತನ್ನ ಹೊಲದಲ್ಲಿ ತನಗೇನು ಬೆಳೆಯಬೇಕೆಂಬುದು ಗೊತ್ತು. ತನ್ನ ಆಹಾರ ಸಂಸ್ಕೃತಿಗೆ ತಕ್ಕಂತೆ ಬೆಳೆದು ತಮ್ಮ ಜೀವನಶೈಲಿಯಂತೆ ಕೃಷಿಮಾಡುವವರು ಬಹುಪಾಲು. ಅಲ್ಲಿ, ಕಂಪನಿಯ ಬೀಜ ಕೊಟ್ಟು, ಕಂಪನಿಯ ಗೊಬ್ಬರ, ಕೀಟನಾಶಕಗಳನ್ನು ಕೊಟ್ಟು, ತಮಗೆ ಬೇಕಾದುದನ್ನೇ ಬೆಳೆದುಕೊಳ್ಳಲು ದೈತ್ಯ ಕಂಪನಿಗೆಳಿಗೆ ಅವಕಾಶ ಕೊಟ್ಟಾಗ ಆಹಾರ ವೈವಿಧ್ಯತೆ ಉಳಿಸಿಕೊಳ್ಳಲು ಅಸಾಧ್ಯ. ಆಲೂಗಡ್ಡೆಯಲ್ಲಿ ಸಾವಿರಾರು ರೀತಿಯ, ಹಲವು ಬಣ್ಣದ, ಹಲವು ಗಾತ್ರದ ವಿನ್ಯಾಸದ ತಳಿಗಳಿವೆ. ಆದರೆ ಪೆಪ್ಸಿ ಕಂಪನಿಗೆ ಒಪ್ಪಂದ ಮಾಡಿಕೊಂಡಾಗ ಆ ಕಂಪನಿಯ ಚಿಪ್ಸಿಗೆ ಬೇಕಾದ ಒಂದೇ ಗಾತ್ರದ ಆಲೂಗಡ್ಡೆಯನ್ನು ಬೆಳೆಯುವಂತಾಗುತ್ತದೆ.

ಇತ್ತೀಚೆಗೆ ಬಂದ ಇನ್ನೆರಡು ಕೃಷಿ ಕಾನೂನುಗಳಲ್ಲಿ ಎಪಿಎಂಸಿ ಮಾರುಕಟ್ಟೆಯ ನಿಯಮಗಳನ್ನು ಮಾರ್ಪಾಟು ಮಾಡಿ ರೈತರು ಮುಕ್ತವಾಗಿ ತಮ್ಮ ಬೆಳೆಯನ್ನು ದೇಶದಲ್ಲಿ ಎಲ್ಲಿ ಯಾರಿಗೆ ಬೇಕಾದರೂ ಮಾರಬಹುದು ಎಂದು ಹೇಳಲಾಗುವ ಕಾನೂನು ಒಂದಾದರೆ, ಇನ್ನೊಂದು ವ್ಯಾಪಾರಿಗಳು ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಲು ಇತಿಮಿತಿ ತೆಗೆದುಹಾಕಿರುವುದಾಗಿದೆ.

ಇತಿಮಿತಿ ಇಲ್ಲದೇ ಅತ್ಯಂತ ಹೆಚ್ಚು ಆಹಾರ ಧಾನ್ಯವನ್ನು ಗೋದಾಮಿನಲ್ಲಿಟ್ಟುಕೊಳ್ಳುವುದನ್ನು ಮಾಡುತ್ತಿರುವುದು ಭಾರತ ಸರ್ಕಾರವೇ ಆಗಿರುವುದು ವಿಪರ್ಯಾಸ. ಸುಮಾರು 50 ಮಿಲಿಯನ್ ಟನ್ ಆಹಾರ ಧಾನ್ಯವನ್ನು ಸರ್ಕಾರ ತಾನೇ ನಿಗದಿ ಮಾಡಿಕೊಂಡಿರುವ ನಿಯಮಾವಳಿಗಿಂತ ಹೆಚ್ಚು ಶೇಖರಿಸಿ, ಇಲಿ ಹೆಗ್ಗಣಗಳಿಗೆ ಉಣಬಡಿಸಿ ಸುಮಾರು ಒಂದು ಲಕ್ಷ ಕೋಟಿ ಹಣ ಪೋಲು ಮಾಡುತ್ತಿರುವುದು ಭಾರತ ಸರ್ಕಾರವೇ ಆಗಿದೆ. ಅಲ್ಲದೇ ಈ ಆಹಾರ ಧಾನ್ಯವನ್ನು ಏನು ಮಾಡಲೆಂದು ತೋಚದೇ ಸ್ಯಾನಿಟೈಸರ್ ಮಾಡೋಣ, ಸಾರಾಯಿ ಮಾಡಿ ಪೆಟ್ರೋಲಿಗೆ ಸೇರಿಸೋಣ ಎಂದೆಲ್ಲಾ ಆಲೋಚಿಸುತ್ತಿದೆ. ತಾವು ಮಾಡಿದ ತಪ್ಪನ್ನೇ ಖಾಸಗಿಯವರಿಗೂ ಅವಕಾಶ ಕೊಟ್ಟಾಗ ಸಮಾನತೆ ಉಂಟಾಗಬಹುದೆನ್ನುವ ಆಲೋಚನೆ ಇರಬಹುದು.

ಈ ಎರಡು ಕಾನೂನುಗಳ ನಡುವೆ ಸರ್ಕಾರ 23 ಬೆಳೆಗೆ ನಿಗದಿಪಡಿಸುವ ಕನಿಷ್ಟ ಬೆಲೆ ದಕ್ಕದಂತಾಗಬಹುದು ಎನ್ನುವುದು ರೈತಾಪಿ ವರ್ಗದ ಆತಂಕ.

ಹೌದು, ದೇಶದ ಸುಮಾರು 700 ಮಿಲಿಯನ್ ಟನ್ ಒಟ್ಟು ಆಹಾರ ಉತ್ಪಾದನೆಯಲ್ಲಿ ಶೇ. 10ಕ್ಕಿಂತ ಕಮ್ಮಿ ದವಸ ಧಾನ್ಯಗಳನ್ನು ಅದರಲ್ಲೂ ಅಕ್ಕಿ ಮತ್ತು ಗೋಧಿಯನ್ನು, ಪಂಜಾಬ್ ಮತ್ತು ಹರಿಯಾಣಗಳಿಂದ ತಾನು ಘೋಷಿಸಿದ ಕನಿಷ್ಟ ಬೆಲೆಯನ್ನು ಕೊಟ್ಟು ಸರ್ಕಾರ ಕೊಂಡುಕೊಳ್ಳುತ್ತದೆ.

ಉಳಿದ ಶೇ. 90ರಷ್ಟು ಆಹಾರ ಬೆಳೆಗೆ ಘೋಷಿಸಿದ ಬೆಲೆ ಸಿಗುತ್ತಿಲ್ಲ. ಶೇ. 80ರಷ್ಟು ರೈತರಿಗೆ ಈ ಘೋಷಣೆ ಮಾಡಿದ 23 ಬೆಳೆಗಳಿಗೆ ಕನಿಷ್ಟ ಬೆಲೆ ಎಂಬುವುದೊಂದಿದೆ ಎನ್ನುವುದೇ ಗೊತ್ತಿಲ್ಲ.

ಸರ್ಕಾರದ ನಿಯಮಾವಳಿಗಳ ಪ್ರಕಾರ 80 ಚದರ ಕಿ.ಮೀ.ಗೊಂದು ಎಪಿಎಂಸಿ ಇರಬೇಕಾಗಿತ್ತು. ಆದರೆ 500 ಚದರ ಕಿ.ಮೀಗೊಂದು ಎಪಿಎಂಸಿ ಯಾರ್ಡ್ ಇರುವುದ ಈಗಿನ ವಾಸ್ತವ. ನಿಜವಾಗಿಯೂ ಮೊದಲು ಸರ್ಕಾರ ಮಾಡಬೇಕಾಗಿದ್ದುದು ರೈತ ನೂರಾರು ಕಿ.ಮೀವರೆಗೆ ತನ್ನ ಬೆಳೆಯನ್ನು ಸಾಗಿಸಿ ಮಾರಾಟ ಮಾಡುವ ದುರ್ವ್ಯವಸ್ಥೆಯನ್ನು ಮೊಟಕುಗೊಳಿಸಲು ತಾನೇ ಹಾಕಿದ ನಿಯಮಾವಳಿಯಂತೆ 5 ಕಿ.ಮೀ ಒಳಗೆ ಎಪಿಎಂಸಿ ಇದ್ದಲ್ಲಿ ಮತ್ತು ಕನಿಷ್ಟ ಬೆಲೆ ಪಾಲನೆಯಾದಲ್ಲಿ ರೈತರಿಗೆ ನಿಜವಾಗಿಯೂ ಸಹಾಯವಾಗುತ್ತದೆ. ಇದನ್ನು ಬಿಟ್ಟು ಇನ್ನೂ ಕಟ್ಟಬೇಕಾಗಿದ್ದ ವ್ಯವಸ್ಥೆಯನ್ನೇ ಅರ್ಧಕ್ಕೇ ಕೆಡವಿದರೆ ಹೇಗೆ?

ಅಲ್ಲದೇ, ಅದಾನಿ ಆಹಾರ ದಾಸ್ತಾನು ಮಾಡಿರುವ ಸೈಲೋಸ್‌ಗಳನ್ನೇ ವ್ಯಾಪಾರೀ ಸ್ಥಳವೆಂದು ಪರಿಗಣಿಸಿ ಖಾಸಗಿ ಮಂಡಿಗಳಿಗೆ ತೆರಿಗೆ ಇಲ್ಲ, ಆದರೆ ಸರ್ಕಾರಿ ಮಂಡಿಗಳಿಗೆ ತೆರಿಗೆಯುಂಟು ಎಂದು ನಿಯಮ ತಂದರೆ ತೆರಿಗೆ ಹಾಕುವ ಮಂಡಿಗಳಿಗೆ ಬರುವವರು ಉಂಟೇ? ಸರ್ಕಾರ ಘೋಷಿಸಿದ ಕನಿಷ್ಟ ಬೆಲೆಗೆ ಕೂಡಾ ಡಾ. ಎಂ. ಎಸ್. ಸ್ವಾಮಿನಾಥನ್ ಅವರು ಹೇಳಿದ ಸಿ2+50% ಆಧಾರವಾಗಿಸದೆ ಎ2+ಎಫ್‌ಎಲ್ ಎನ್ನುವ ಬೇರೆಯದ್ದೇ ಸೂತ್ರ ಬಳಸಿರುವುದು ರೈತರಿಗೆ ಮಾಡಿರುವ ಅನ್ಯಾಯವೇ. ಸ್ವಾಮಿನಾಥನ್ ಹೇಳಿದ್ದ ಸೂತ್ರಕ್ಕೂ ಇಂದು ಅಳವಡಿಸಿದ್ದ ಸೂತ್ರಕ್ಕೂ ಶೇ. 25ರಷ್ಟು ವ್ಯತ್ಯಾಸವಿದೆ.

ಇಕ್ರಿಯಾರ್ ಸಂಸ್ಥೆಯ ಅಧ್ಯಯನದಂತೆ ಭಾರತದ ರೈತರೂ ಪ್ರತಿವರ್ಷ 3 ಲಕ್ಷ ಕೋಟಿ ತಮ್ಮ ಬೆವರಿಗೆ ದಕ್ಕಬೇಕಾದ ಹಣವನ್ನು ದಕ್ಕಿಸಿಕೊಳ್ಳುತ್ತಿಲ್ಲ ಎನ್ನುತ್ತದೆ. ಅಲ್ಲದೇ ನ್ಯಾಷನಲ್ ಸ್ಯಾಂಪಲ್ ಸರ್ವೆ ಪ್ರಕಾರ ತಿಂಗಳ ರೈತರ ಆದಾಯ ಸುಮಾರು 6000 ರುಪಾಯಿ ಎನ್ನುವುದು ಸರ್ಕಾರಿ ಗುಮಾಸ್ತನ ಸಂಬಳಕ್ಕಿಂತ ನಾಲಕ್ನೇ ಒಂದಕ್ಕಿಂತ ಕಮ್ಮಿ ಇರುವುದು ಕಂಡುಬರುತ್ತದೆ.

ಹೊರನೋಟಕ್ಕೆ ಈ ಕಾನೂನುಗಳು ರೈತಪರ ಎಂದು ಕಂಡುಬಂದರೂ ದೇಶದ ಒಟ್ಟು 1.2 ಹೆಕ್ಟೇರ್ ತಲಾವಾರು ಭೂಮಿ ಒಡೆತನದ 14 ಕೋಟಿ ರೈತಕುಟುಂಬ ಹಾಗೆಯೇ 1.3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು 6.3 ಕೋಟಿ ಗುಡಿಕೈಗಾರಿಕೆ ಅಲ್ಲದೇ ಸುಮಾರು 12 ಕೋಟಿ ಕೃಷಿ ಅವಲಂಭಿತ ಕೂಲಿ ಕಾರ್ಮಿಕರನ್ನು ಒಂದೋ ಎರಡೋ ದೈತ್ಯ ಕಂಪನಿಗೆ ಮಾರಿಬಿಡುವಂತೆ ಕಂಡುಬರುತ್ತದೆ. ಫ್ರಾನ್ಸ್ ಅನಟೋಲಿ ಒಂದು ಕಡೆ ಸರ್ಕಾರದ ಕಾನೂನನ್ನು ವ್ಯಂಗ್ಯವಾಗಿ ಹೀಗೆ ಉಲ್ಲೇಖಿಸುತ್ತಾನೆ: ’ಸರ್ಕಾರ ಕಾನೂನೊಂದನ್ನು ಮಾಡಿ, ಬಡವನಿರಬಹುದು ಬಲ್ಲಿದನಿರಬಹುದು, ಬೀದಿ ಬದಿಯಲ್ಲಿ ಯಾರೂ ಮಲಗಬಾರದು, ಭಿಕ್ಷೆ ಯಾರೂ ಬೇಡಬಾರದು ಎಂದರೆ ಅದು ನಿಷ್ಪಕ್ಷಪಾತವಾದ ಭೇದ-ಭಾವವಿಲ್ಲದ ಕಾನೂನೆಂದು ಹೊರನೋಟಕ್ಕೆ ಕಂಡುಬಂದರೂ ನಿಜವಾಗಿಯೂ ಅದರ ಪರಿಣಾಮ ನಿರ್ಗತಿಕರ ಮೇಲೆ ಬೀಳುವಂತದ್ದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ’.


  • ಕೆ.ಸಿ. ರಘು

ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು. ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ರೈತರ ಹಕ್ಕೊತ್ತಾಯ ಬಗೆಹರಿಸುವ ಸ್ವತಂತ್ರ ಸಮಿತಿಯಲ್ಲಿ ಪಿ.ಸಾಯಿನಾಥ್, ಬಿಕೆಯು ಪ್ರತಿನಿಧಿಗಳು ಇರಲಿ: ಸುಪ್ರೀಂ ಕೋರ್ಟ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...