ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಯಶಸ್ವಿ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದ ಬಿಜೆಪಿಯ ಕಣ್ಣು ಈಗ ರಾಜಸ್ಥಾನದ ಮೇಲೆ ನೆಟ್ಟಿದೆ. ತಮ್ಮ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷ ಬಿಜೆಪಿ ಪ್ರಯತ್ನಿಸುತ್ತಿದ್ದು, ಶಾಸಕರಿಗೆ ತಲಾ 15 ಕೋಟಿ ರೂಗಳ ಆಮಿಷವೊಡ್ಡಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹಲವು ಕಾಂಗ್ರೆಸ್ ಶಾಸಕರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿರುವುದು ಕಾಂಗ್ರೆಸ್ ತಲೆನೋವಿಗೆ ಕಾರಣವಾಗಿದೆ.
ನಿನ್ನೆ ತಾನೇ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಗೆಹ್ಲೋಟ್ “COVID-19 ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಜನರಿಗಾಗಿ ಕೆಲಸ ಮಾಡುತ್ತಿರುವಾಗ ಬಿಜೆಪಿಯು ಸರ್ಕಾರ ಉರುಳಿಸುವ ಕುತಂತ್ರ ಹೆಣೆದಿದೆ ಎಂದು ಕಿಡಿಕಾರಿದ್ದರು.
ಇಂದು ಈ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಮಾಹಿತಿ ಪಡೆದಿದ್ದಾರೆ. ಎಂತಹ ಬಿಕ್ಕಟ್ಟು ಇದ್ದರೂ ಸಹ ಅದನ್ನು ಆಂತರೀಕವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕೆಂದು ಸೋನಿಯಾ ಗಾಂಧಿ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
ಇಂದು ಹಲವು ಕಾಂಗ್ರೆಸ್ ಶಾಸಕರೊಂದಿಗೆ ದೆಹಲಿ ತಲುಪಿರುವ ಸಚಿನ್ ಪೈಲಟ್ ಯಾರ ಫೋನ್ ಕರೆಗೂ ಉತ್ತರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. “ಸಾಮಾನ್ಯವಾಗಿ ಸುಲಭಕ್ಕೆ ಸಿಗುತ್ತಿದ್ದ ಸಚಿನ್ ಪೈಲಟ್ ಕಳೆದ 24 ಗಂಟೆಗಳಿಂದ ನಮ್ಮ ಪೋನ್ ಕರೆಗಳಿಗೆ ಉತ್ತರಿಸುತ್ತಿಲ್ಲ. ಇದು ಸರ್ಕಾರ ಅಸ್ಥಿರದಲ್ಲಿರುವುದರ ಸಂಕೇತ” ಎಂದು ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.
ಸಚಿನ್ ಪೈಲಟ್ ಮಧ್ಯಪ್ರದೇಶ ಜ್ಯೋತಿರಾದಿತ್ಯ ಸಿಂಧಿಯಾ ಆಗಲು ಹೊರಟಿದ್ದಾರೆ ಎಂದು ಹಲವಾರು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಪಕ್ಷ ಬದಲಿಸಲು ಕಾಂಗ್ರೆಸ್ ಶಾಸಕರಿಗೆ 15 ಕೋಟಿ ರೂಗಳ ಆಮಿಷವೊಡ್ಡಿದ್ದಾರೆ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿವೆ. ಒಟ್ಟಾರೆ ನಿರಂತರವಾಗಿ ಬಿಜೆಪಿಯು ಸರ್ಕಾರ ಉರುಳಿಸಲು ಪ್ರಯತ್ನಿಸಿತ್ತಿದ್ದು, ಕೋವಿಡ್ ಸಮಯದಲ್ಲಿ ಅಸ್ಥಿರತೆ ಉಂಟು ಮಾಡಲು ಮುಂದಾಗಿದ್ದಾರೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
“2014 ರಲ್ಲಿ ಕೇಂದ್ರ ಬಿಜೆಪಿ ಅಧಿಕಾರ ಹಿಡಿದಾಗಿನಿಂದಲೂ ಅದರ ನಿಜ ಮುಖವನ್ನು ಬಹಿರಂಗಪಡಿಸಲಾಗಿದೆ. ಅವರು ಮೊದಲು ರಹಸ್ಯವಾಗಿ ಮಾಡಿದ್ದನ್ನು ಈಗ ಬಹಿರಂಗವಾಗಿ ಮಾಡುತ್ತಾರೆ. ಗೋವಾ, ಕರ್ನಾಟಕ, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ನೀವು ಇದನ್ನು ನೋಡಿದ್ದೀರಿ” ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರು ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲವು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ರಾಜಸ್ಥಾನ ಪೊಲೀಸರ ಎಸ್ಒಜಿ (ವಿಶೇಷ ಕಾರ್ಯಾಚರಣೆ ಗುಂಪು) ಮತ್ತು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಗೆ ದೂರು ಸಲ್ಲಿಸಿರುವ ಕಾಂಗ್ರೆಸ್ ನಾಯಕ ಮಹೇಶ್ ಜೋಶಿ, ಬಿಜೆಪಿ ಭಯಭೀತರಾಗಿದೆ ಎಂದು ಹೇಳಿದ್ದಾರೆ.
200 ಸದಸ್ಯರ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಸ್ಥಾನಗಳನ್ನು ಹೊಂದಿದ್ದು, 12 ಸ್ವತಂತ್ರ ಅಭ್ಯರ್ಥಿಗಳ ಬೆಂಬಲವನ್ನು ಹೊಂದಿದೆ. ಇದಲ್ಲದೆ ಇತರ ಪಕ್ಷಗಳ ಐದು ಶಾಸಕರು ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಸರ್ಕಾರ ಉರುಳಿಸಲು ಶಾಸಕರಿಗೆ ಬಿಜೆಪಿ 15 ಕೋಟಿ ನೀಡುತ್ತಿದೆ: ರಾಜಸ್ಥಾನ ಸಿಎಂ ಗೆಹ್ಲೋಟ್ ಆರೋಪ